ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಜೂನ್ 2015 > ಮುಗಿಯದ ದುಷ್ಪ್ರಚಾರ

ಮುಗಿಯದ ದುಷ್ಪ್ರಚಾರ

ಎಷ್ಟೇ ಬದಲಾದಂತೆ ಕಂಡರೂ ವಾಸ್ತವವಾಗಿ ಯಾವುದರ ಸ್ವರೂಪವೂ ಬದಲಾಗುವುದಿಲ್ಲ – ಎಂಬುದು ಫ್ರೆಂಚ್ ಭಾಷೆಯ ಪ್ರಸಿದ್ಧ ನಾಣ್ಣುಡಿ. ಭಾರತವು ಹಾವಾಡಿಗರ ದೇಶ, ಅಲ್ಲಿ ಹುಟ್ಟಿದ ಹೆಣ್ಣುಮಕ್ಕಳನ್ನು ನದಿಯಲ್ಲಿ ಬಿಸಾಡುತ್ತಾರೆ – ಎಂದೆಲ್ಲ ಹದಿನೆಂಟು-ಹತ್ತೊಂಬತ್ತನೇ ಶತಮಾನಗಳಲ್ಲಿ ಬ್ರಿಟಿಷರು ಪ್ರಚಾರಮಾಡುತ್ತಿದ್ದರು. ಒಟ್ಟಿನ ಮೇಲೆ ಭಾರತವು ಅನಾಗರಿಕ ದೇಶವೆಂದೂ ಅದನ್ನು `ನಾಗರಿಕ’ಗೊಳಿಸುವ ಹೊಣೆಯನ್ನು ಭಗವಂತನು ತಮಗೆ ವಹಿಸಿದ್ದಾನೆಂದೂ (`ವ್ಹೈಟ್ ಮ್ಯಾನ್ಸ್ ಬರ್ಡನ್’) ಬ್ರಿಟಿಷರ ಅಭಿಮತವಿದ್ದಿತು. ಸಾಮ್ರಾಜ್ಯಾಧಿಕಾರದಿಂದ ಪೋಷಿತವಾದ ಈ ಕಥನವು ದಶಕಗಳುದ್ದಕ್ಕೂ ಎಷ್ಟು ಪ್ರಬಲವಾಗಿ ಪ್ರಚಾರಗೊಂಡಿತೆಂದರೆ ಭಾರತವು ನಾಗರಿಕತೆಯ ನಿಚ್ಚಣಿಗೆಯ ಅತಿ ಕೆಳ ಸ್ಥಾನದಲ್ಲಿದೆ ಎಂದು ಬ್ರಿಟಿಷರ ಆಧಿಪತ್ಯದಿಂದ ಪ್ರಭಾವಿತರಾದ ಭಾರತೀಯ `ಸಮಾಜೋನ್ನತ’ರೂ ನಂಬಿದ್ದರು. ಆ ವಿಕೃತಿಯ ಕಮಟು ವಾಸನೆ ಈಗಲೂ ಮರೆಯಾಗಿಲ್ಲ. ಅದರ ಇತ್ತೀಚಿನ ನಿದರ್ಶನವೆಂದರೆ ಲೆಸ್ಲೀ ಅಡ್ವಿನ್ ಎಂಬ ಆಂಗ್ಲ ಮಹಿಳೆಯು ಭಾರತವೆಂದರೆ ನಿರಂತರವಾಗಿ ಸ್ತ್ರೀಯರ ಮೇಲೆ ಅತ್ಯಾಚಾರ ನಡೆಯುವ ದೇಶ ಎಂದು ಪ್ರತಿಪಾದಿಸಿ ತಯಾರಿಸಿರುವ `ಇಂಡಿಯಾಸ್ ಡಾಟರ್’ ಎಂಬ ಸಾಕ್ಷ್ಯಚಿತ್ರ. ಅದರ ವಸ್ತು ೨೦೧೨ರ ಡಿಸೆಂಬರ್ ೧೬ರಂದು ನಡೆದಿದ್ದ ಒಂದು ಅತ್ಯಾಚಾರ ಪ್ರಕರಣ. ಆ ಅಪಕ್ವ ಚಿತ್ರವನ್ನು ಬಿ.ಬಿ.ಸಿ. ಪ್ರಸಾರಮಾಡಲು ಹವಣಿಸಿತ್ತು. ಈ ಚಿತ್ರದ ನಿರ್ಮಾಣವೇ ದುರುದ್ದೇಶಪ್ರೇರಿತ ವಾಗಿತ್ತೆಂಬುದನ್ನು ಹಲವಾರು ಸಂಗತಿಗಳು ಸ್ಪಷ್ಟಪಡಿಸಿವೆ. ಬಂಧನದಲ್ಲಿರುವ ಆರೋಪಿಯನ್ನು ಭೇಟಿಯಾಗುವುದು ಭಾರತೀಯ ವರದಿಗಾರರಿಗೇ ದುಸ್ತರವಿರುವಾಗ ಯು.ಪಿ.ಎ. ಸರ್ಕಾರ (ಬಹುಶಃ ಚಿತ್ರನಿರ್ಮಾಪಕಿ ಆಂಗ್ಲಳೆಂಬ ಕಾರಣದಿಂದ) ಭೇಟಿಗೆ ಅನುಮತಿ ನೀಡಿತ್ತು. ಇಷ್ಟಾಗಿ ಲೆಸ್ಲಿ ಅಡ್ವಿನ್ ಎಂಬಾಕೆ ಚಲನಚಿತ್ರೋದ್ಯಮದಲ್ಲಿ ಪ್ರತಿಷ್ಠಿತರಾದಾಕೆಯೇನಲ್ಲ. ಸಾಕ್ಷ್ಯಚಿತ್ರವನ್ನು ತಯಾರಿಸಿದುದು ಈ ಉದ್ದೇಶಕ್ಕಾಗಷ್ಟೇ ಹುಟ್ಟುಹಾಕಿದ್ದ ಅನಾಮಧೇಯ ಸಂಸ್ಥೆ. ತಯಾರಿಕೆಗೆ ಪರೋಕ್ಷವಾಗಿ ಹಣ ಒದಗಿದ್ದು ಅಮೆರಿಕದ ಫೋರ್ಡ್ ಫೌಂಡೇಶನ್ನಿನಿಂದ. ತಿಹಾರ್ ಜೈಲಿನಲ್ಲಿ ಬಂದಿಯಾಗಿರುವ ಆರೋಪಿ ಮುಕೇಶ್ ನಿರ್ಮಾಪಕರಿಗೆ ಅನುಕೂಲಕರ ರೀತಿಯಲ್ಲಿ ಹೇಳಿಕೆ ನೀಡುವುದಕ್ಕಾಗಿ ಅವನಿಗೆ ಯಥೇಷ್ಟ ಹಣ ನೀಡಿದ್ದರು. ಗಮನ ಸೆಳೆಯುವ ಸಂಗತಿಯೆಂದರೆ – ಲೈಂಗಿಕ ಅತ್ಯಾಚಾರ ಕುರಿತು ಅರಿವನ್ನು ಹರಡುವ ಆಶಯ ಇದ್ದಿದ್ದರೆ ಈ `ಸಾಧನೆ’ಯಲ್ಲಿ ಭಾರತಕ್ಕಿಂತ ಬಹುಪಾಲು ಮುಂದಿರುವ ಇಂಗ್ಲೆಂಡನ್ನೋ ಅಮೆರಿಕವನ್ನೋ ಆಫ್ರಿಕವನ್ನೋ ಆಯ್ದುಕೊಳ್ಳಬಹುದಿತ್ತಲ್ಲ? ಭಾರತದ ಪ್ರತಿಮೆಗೆ ಮಸಿ ಬಳಿಯುವುದೇ ಪ್ರಗತಿಪರತೆಯೆಂಬ ಮತ್ತು ಅಭಿಪ್ರಾಯ ಸ್ವಾತಂತ್ರ್ಯವೆಂಬ ಸ್ಥಿತಿ ಕೊನೆಗೊಳ್ಳುವುದು ಯಾವಾಗ?

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ