ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ನುಡಿಚಿತ್ರಗಳು > ಅನರ್ಘ್ಯ ರತ್ನಕ್ಕೆ ಭಾರತರತ್ನ

ಅನರ್ಘ್ಯ ರತ್ನಕ್ಕೆ ಭಾರತರತ್ನ

ಅಜಾತ ಶತ್ರು ಅತ್ಯುತ್ತಮ ವಾಗ್ಮಿ, ಶ್ರೇಷ್ಠ ಸಂಸದೀಯ ಪಟು, ಕವಿ ಹೃದಯದ ರಾಜಕಾರಣಿ. ಭಾರತೀಯ ರಾಜಕೀಯ ರಂಗದ ನಿಷ್ಕಳಂಕ ಚಾರಿತ್ರ್ಯದ ಮೇರು ವ್ಯಕ್ತಿತ್ವ. ಅರವತ್ತೈದು ವರ್ಷಕ್ಕೂ ಹೆಚ್ಚು ಕಾಲ ರಾಜಕೀಯದ ಏರಿಳಿತಗಳಲ್ಲಿ ಸ್ಥಿರವಾಗಿ ಪ್ರಬುದ್ಧವಾಗಿ ಕಾಲೂರಿ ಧ್ಯೇಯ – ಸಿದ್ಧಾಂತಗಳಿಗೆ ಕಟಿಬದ್ಧರಾಗಿ ಶ್ರಮಿಸಿದ ನಿಷ್ಠಾವಂತ, ವಿನೀತ ಕಾರ‍್ಯಕರ್ತ, ನಾಯಕ.

atal_bihari_vajpayee_20050228

ಇಂತಹ ಗುಣ ವಿಶೇಷಣಗಳಿರುವ ವ್ಯಕ್ತಿಯೊಬ್ಬ ಈ ದೇಶದಲ್ಲಿರುವುದಾದರೆ ಆತ ಅಟಲ್‌ಬಿಹಾರಿ ವಾಜಪೇಯಿ ಅವರಲ್ಲದೆ ಮತ್ತಾರೂ ಆಗಿರಲು ಸಾಧ್ಯವಿಲ್ಲ. ರಾಜಕೀಯ ರಂಗದ ಅತ್ಯುನ್ನತ ಪ್ರಧಾನಿ ಸ್ಥಾನಕ್ಕೇರಿದಾಗಲೂ ಅವರು ಹೇಳಿದ್ದು: ’ಮೈ ಸಪ್ನೋಂಕಾ ಸೌದಾಗರ್ ನಹೀ ಹೂಂ ಮೇರೇ ಪಾಂವ್ ಜಮೀನ್ ಪರ್ ಹೈ (ಜ. ೧೨, ೨೦೦೪). ಅವರು ಎರಡು ಬಾರಿ ಪ್ರಧಾನಿಯಾಗಿದ್ದರು. ಒಂದು ಬಾರಿ ಕೇವಲ ೧೩ ದಿನ ಮಾತ್ರ. ಆದರೆ ಎರಡನೇ ಬಾರಿ ಅವಧಿಪೂರ್ತಿ ಯಶಸ್ವಿಯಾಗಿ ಮುಗಿಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಹೆಮ್ಮೆಗೆ ಪಾತ್ರರಾದರು. ಪ್ರಧಾನಿಯಾಗಿದ್ದಾಗ ಏನಾದರೊಂದು ಆರೋಪ ಕಳಂಕ ಅಂಟಿಕೊಳ್ಳುವುದು ಸ್ವಾಭಾವಿಕ. ಆದರೆ ವಾಜಪೇಯಿ ಪ್ರಧಾನಿಯಾಗಿದ್ದಷ್ಟು ಕಾಲ ಅತ್ಯಂತ ಜನಪ್ರಿಯ ನಾಯಕರಾಗಿ ಮಿಂಚಿದರು. ಇಪ್ಪತ್ತೆರಡೋ, ಇಪ್ಪತ್ತಮೂರೋ ಪಕ್ಷಗಳನ್ನು ಜತೆಗೆ ಕಟ್ಟಿಕೊಂಡು ಪ್ರಧಾನಿಯಾಗಿ ಎಲ್ಲರನ್ನೂ ಸಂಭಾಳಿಸುವುದು ಖಂಡಿತ ಸುಲಭದ ಮಾತಲ್ಲ. ಆದರೆ ವಾಜಪೇಯಿ ಆ ಕೆಲಸವನ್ನು ಹೂವೆತ್ತಿದಷ್ಟು ಸಲೀಸಾಗಿ ಮಾಡಿದರು. ಕೆಲವೊಮ್ಮೆ ಮಾತನಾಡಿದರು. ಹಲವು ಬಾರಿ ಅವರು ಮಾತನಾಡಲೇ ಇಲ್ಲ, ಕೇವಲ ಮುಗುಳ್ನಕ್ಕರು, ಮೌನವಾಗಿದ್ದರು. ಈ ಮುಗುಳ್ನಗು, ಮೌನಗಳೇ ತೀರಾ ಗಂಭೀರ ಸ್ವರೂಪದ ಸಮಸ್ಯೆಗಳನ್ನೂ ಪರಿಹರಿಸಿದವೆಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಅದು ವಾಸ್ತವ. ವಾಜಪೇಯಿ ಅವರ ಒಂದು ಮುಗುಳ್ನಗು, ಒಂದು ಮೌನ, ಮಾತನಾಡುವಾಗ ಶಬ್ದಗಳ ನಡುವೆ ಅವರು ನೀಡುತ್ತಿದ್ದ ವಿರಾಮ (Pಚಿuse) ಅವರ sಣಡಿeಟಿgಣh ಆಗಿತ್ತು. ಹೊಂದಾಣಿಕೆ ರಾಜಕೀಯದ ಹರಿಕಾರನಾಗಿ ಭಾರತ ಕಂಡ ಅಪೂರ್ವ ಪ್ರಧಾನಿ ಅವರಾದರು. ಅವರು ಹುಟ್ಟುಹಾಕಿದ್ದು ಹೊಸದೊಂದು ರಾಜಕೀಯ ಧರ್ಮವನ್ನು. ವಿಭಿನ್ನ ಸಿದ್ಧಾಂತಗಳ ವ್ಯಕ್ತಿಗಳ ನಡುವೆಯೂ ಅವರು ಬೆಸೆದಿದ್ದು ಪ್ರೀತಿ, ವಿಶ್ವಾಸವನ್ನು. ದ್ವೇಷಕ್ಕೆ ಅಲ್ಲಿ ಎಡೆಯಿರಲಿಲ್ಲ. ಹಾಗೆಂದೇ ಅವರು ಅಜಾತ ಶತ್ರು.

ಮೊರಾರ್ಜಿದೇಸಾಯಿ ನೇತೃತ್ವದ ಜನತಾ ಸರಕಾರದಲ್ಲಿ ವಿದೇಶಾಂಗ ಮಂತ್ರಿಯಾಗಿ ವಾಜಪೇಯಿ ಸಲ್ಲಿಸಿದ ಸೇವೆ ಇತಿಹಾಸದಲ್ಲಿ ಸದಾ ಹಚ್ಚಹಸಿರು. ೩೦ ಬಾರಿ ಅವರು ಆಗ ವಿದೇಶಗಳ ಯಾತ್ರೆ ಮಾಡಿದರು. ಶತ್ರು ರಾಷ್ಟ್ರವಾದ ಪಾಕಿಸ್ತಾನ, ಚೀನಾ ಜೊತೆಗೂ ಉತ್ತಮ ಬಾಂಧವ್ಯಕ್ಕೆ ನಾಂದಿ ಹಾಡಿದರು. ಅಮೆರಿಕಾ, ರಷ್ಯಾ, ಭಾರತದತ್ತ ಗೌರವದಿಂದ ನೋಡುವಂತೆ ಮೋಡಿ ಮಾಡಿದರು. ವಿದೇಶಗಳಿಗೆ ಈ ಪರಿಯ ಹಾರಾಟ ನೋಡಿ ಆಗ ಮಾಧ್ಯಮಗಳು ವಾಜಪೇಯಿ ಅವರನ್ನು ಗಿoಥಿಚಿge Pಚಿಥಿee (ವಾಯೇಜ್ ಪೇಯಿ) ಎಂದು ಲೇವಡಿ ಮಾಡಿದ್ದೂ ಉಂಟು.

ವಾಜಪೇಯಿ ಪ್ರಧಾನಿ ಆಗುತ್ತಾರೆ ಎಂದು ಅವರು ೪೩ರ ಹರೆಯದಲ್ಲಿದ್ದಾಗಲೇ ಕಾರ್ಯಕರ್ತರು, ಮುಖಂಡರು, ಜನತೆ ಆಶಯ ವ್ಯಕ್ತಪಡಿಸಿದ್ದುಂಟು. ’ಅಗಲೀ ಬಾರಿ ಅಟಲ್ ಬಿಹಾರಿ’ ಎಂದು ಪ್ರತಿ ಚುನಾವಣೆಯಲ್ಲಿ ಘೋಷಣೆ ಮೊಳಗಿಸಿದ್ದುಂಟು. ಆದರೆ ಪ್ರಧಾನಿಯಾಗಲು ವಾಜಪೇಯಿ ದೀರ್ಘಕಾಲ ಕಾಯಬೇಕಾಯಿತೆನ್ನುವುದು ನಿಜ. ಅವರಿಗಿಂತ ಕಿರಿಯರಾಗಿದ್ದ ವಾಜಪೇಯಿಗೆ ಏನೇನೂ ಸಾಟಿಯಲ್ಲದ ವಿರೋಧ ಪಕ್ಷದ ಚಂದ್ರಶೇಖರ್, ವಿ.ಪಿ.ಸಿಂಗ್, ಚರಣಸಿಂಗ್ ಮೊದಲಾದವರು ವಾಜಪೇಯಿಯವರಿಗಿಂತ ಮೊದಲು ಪ್ರಧಾನಿಯಾದರು. ಅಷ್ಟೇ ಬೇಗ ಕೆಳಗಿಳಿದರು. ವಾಜಪೇಯಿ ಅವರಾದರೋ ಪ್ರಧಾನಿಯಾಗಿ ಭಾರತದ ಹೆಸರನ್ನು ಜಾಗತಿಕ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಟ್ಟರು. ವಾಜಪೇಯಿ ಅವರಿಗೆ ವಾಜಪೇಯಿಯವರೇ ಸಾಟಿ.

ವಾಜಪೇಯಿ ಕಟ್ಟಿ ಬೆಳೆಸಿದ ಬಿಜೆಪಿ ಈಗ ಂ ಠಿಚಿಡಿಣಥಿ ತಿiಣh ಚಿ ಜiಜಿಜಿeಡಿeಟಿಛಿe ಎಂಬ ಹೆಗ್ಗಳಿಕೆಯನ್ನು ಕಳಕೊಂಡಿರುವುದು ನಿಜ. ಆದರೆ ವಾಜಪೇಯಿ ಮಾತ್ರ ಈಗಲೂ ಂ ಟeಚಿಜeಡಿ ತಿiಣh ಚಿ ಜiಜಿಜಿeಡಿeಟಿಛಿe ಆಗಿಯೇ ಉಳಿದಿದ್ದಾರೆ. ಪಕ್ಷದೆತ್ತರಕ್ಕೆ, ಅಷ್ಟೇ ಅಲ್ಲ ಪಕ್ಷವನ್ನೂ ಮೀರಿ ಅವರು ಆಗಸದೆತ್ತರಕ್ಕೆ ಬೆಳೆದರು. ಎಲ್ಲರೊಂದಿಗೆ ಸಮಾಲೋಚಿಸುವ ಅವರ ವಿರಳ ಗುಣವೇ ಇದಕ್ಕೆ ಕಾರಣ. ಬಹುಶಃ ಅವರಲ್ಲಿದ್ದ ದೌರ್ಬಲ್ಯವೂ ಅದೇ ಆಗಿರಬಹುದು.

ಇಂತಹ ಅನುಪಮ ವ್ಯಕ್ತಿತ್ವದ ವಾಜಪೇಯಿಯವರಿಗೆ ಈಗ ೯೦ರ ಹುಟ್ಟುಹಬ್ಬದ ಸಂಭ್ರಮ. ಅದರ ಜೊತೆಗೇ ಈ ಬಾರಿ ಅವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿಯಾಗಿರುವ ಭಾರತರತ್ನದ ಕಿರೀಟ. ಆ ಪ್ರಶಸ್ತಿ ಅವರಿಗೆ ಎಂದೋ ಬರಬೇಕಿತ್ತು. ಈಗಲಾದರೂ ಬಂದಿದೆಯಲ್ಲ, ಅದೇ ಒಂದು ಸಮಾಧಾನದ ಸಂಗತಿ. ವಾಜಪೇಯಿಯವರಿಗೆ ಭಾರತರತ್ನ ಪುರಸ್ಕಾರ ನೀಡಿದ್ದರಿಂದ ಆ ಪ್ರಶಸ್ತಿಯ ಘನತೆ ಹೆಚ್ಚಿದೆ. ಏಕೆಂದರೆ ಸ್ವತಃ ವಾಜಪೇಯಿಯವರೇ ಭಾರತ ರಾಜಕೀಯ ರಂಗ ಕಂಡ ಒಂದು ಅನರ್ಘ್ಯ ರತ್ನ. ಇಂತಹ ಅನರ್ಘ್ಯ ರತ್ನಕ್ಕೆ ಈಗ ಭಾರತರತ್ನ ಪುರಸ್ಕಾರ ದೊರೆತಿರುವುದರಿಂದ ಅಭಿಮಾನಿಗಳಿಗೆಲ್ಲ ನಿಜಕ್ಕೂ ಸಂತಸವಾಗಿದೆ. ಆದರೆ ಕಳೆದೆರಡು ವರ್ಷಗಳಿಂದ ತಮ್ಮ ನೆನಪಿನ ಶಕ್ತಿಯನ್ನೇ ಕಳೆದುಕೊಂಡಿರುವ ವಾಜಪೇಯಿ ಅವರಿಗೆ ಸಂತಸ ಅಥವಾ ಇನ್ನಾವುದೇ ಭಾವನೆ ಬರಲು ಸಾಧ್ಯವೇ? ವಾಜಪೇಯಿ ಈಗ ಮೌನಿ. ಪ್ರಖರ ವಾಗ್ಮಿಯೊಬ್ಬ ಹೀಗೆ ಮೌನಿಯಾಗಿಬಿಟ್ಟರೆ, ಆ ಮೌನ ತರುವ ಸಂಕಟ ಬಣ್ಣಿಸಲಸದಳ. ಅನುಭವಿಸಿದವರಿಗಷ್ಟೇ ಅದು ಅರ್ಥವಾಗಬಲ್ಲದು.

ಇಂತಹ ಅಜಾತಶತ್ರು, ನಿಷ್ಕಳಂಕ ಚಾರಿತ್ರ್ಯದ ಮೇರು ವ್ಯಕ್ತಿತ್ವದ ಪ್ರಧಾನಿಯ ಅಮೃತಹಸ್ತದಿಂದ ೧೨ ವರ್ಷಗಳ ಹಿಂದೆ ಪ್ರಶಸ್ತಿಯೊಂದನ್ನು ಪಡೆಯುವ ಸೌಭಾಗ್ಯ ನನ್ನದಾಗಿತ್ತು ಎಂಬುದು ನನಗೆ ಅತೀವ ಸಂತಸದ ಸಂಗತಿ. ೧೯.೦೬.೨೦೦೨ ರಂದು ದೆಹಲಿಯ ಪ್ರಧಾನಿ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ನಿರ್ಭೀತ ಪತ್ರಿಕೋದ್ಯಮಕ್ಕಾಗಿ ’ಪಾಂಚಜನ್ಯ’ ಹಿಂದಿ ಸಾಪ್ತಾಹಿಕ ಪತ್ರಿಕೆಯ ಪಂ. ದೀನದಯಾಳ ಉಪಾಧ್ಯಾಯ ಸ್ಮೃತಿ ಸಮ್ಮಾನ್ ಪ್ರಶಸ್ತಿಯನ್ನು ಆಗ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ಹೊಸ ದಿಗಂತ ಕನ್ನಡ ದಿನಪತ್ರಿಕೆಯ ಪ್ರಧಾನ ಸಂಪಾದಕನಾಗಿದ್ದ ನನಗೆ ಪ್ರದಾನ ಮಾಡಿದ ಸವಿ ನೆನಪನ್ನು ಮರೆಯುವುದೆಂತು?

ವಾಜಪೇಯಿಯವರಂತಹ ವ್ಯಕ್ತಿಗಳ ಸಂತತಿ ಸಾವಿರವಾಗಲಿ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ