ಸರ್ವಾಃ ಸಂಪತ್ತಯಸ್ತಸ್ಯ
ಸಂತುಷ್ಟಂ ಯಸ್ಯ ಮಾನಸಂ |
ಉಪಾನದ್ಗೂಢಪಾದಸ್ಯ
ನನು ಚರ್ಮಾವೃತೇವ ಭೂಃ ||
– ಹಿತೋಪದೇಶ, ಮಿತ್ರಲಾಭ
“ಯಾರ ಮನಸ್ಸು ಸ್ವಯಂತೃಪ್ತವಾಗಿರುತ್ತದೋ ಅವನು ಎಲ್ಲ ಸಂಪತ್ತುಗಳನ್ನೂ ಪಡೆದಂತೆ ಆನಂದಮಯನಾಗಿರುತ್ತಾನೆ. ಕಾಲಿಗೆ ಪಾದರಕ್ಷೆಯನ್ನು ತೊಟ್ಟಿರುವವನ ಪಾಲಿಗೆ ನೆಲಕ್ಕಷ್ಟೂ ಚರ್ಮ ಹಾಸಿದಂತೆಯೇ ಅಲ್ಲವೆ!”
ಎಲ್ಲ ದೇಹಭಾವವನ್ನೂ ಮೀರಿ ಆತ್ಮರತನಾಗಿರುವವನನ್ನು ಯಾವ ಲೋಭ-ಮೋಹಗಳಾಗಲಿ ಇಷ್ಟಾನಿಷ್ಟಗಳಾಗಲಿ ಬಾಧಿಸಲಾರವು. ಅವನು ಸದಾ ಆನಂದಮಯ. ಅಂತಹವನ ಮನಶ್ಚರ್ಯೆಯೇ ಮೇಲಣ ಶ್ಲೋಕದಲ್ಲಿ ವಿವರಣೆಗೊಂಡಿರುವುದು. ಸಂತೃಪ್ತಭಾವವು ವ್ಯಾವಹಾರಿಕ ಜೀವನದಲ್ಲಿಯೂ ನೆಮ್ಮದಿ ತರುವಂತಹದೇ – ಎಂಬುದಂತೂ ಅನುಭವಸಿದ್ಧವಿದೆಯಷ್ಟೆ. ಈ ಆದರ್ಶವನ್ನು ಗ್ರಂಥಸ್ಥಮಾತ್ರವೆಂದು ಭಾವಿಸಬೇಕಾಗಿಲ್ಲ. ಈಗಿನ ಭೌತವಾದಪ್ರಧಾನ ಪರಿಸರದಲ್ಲಿಯೂ ವಿರಳವಾಗಿ ಇಂತಹ ಅವಧೂತಪ್ರಜ್ಞೆಯವರು ಇಲ್ಲದಿಲ್ಲ.
ಈಗ್ಗೆ ಹತ್ತು ವರ್ಷ ಹಿಂದೆ ಋಷಿಕೇಶದಲ್ಲಿ ತಮ್ಮ ೧೦೩ನೇ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದ ರಾಮಸುಖದಾಸರೆಂಬ ಸಂತರಿದ್ದರು. ಅವರು ಜನಿಸಿದ್ದು ಎಲ್ಲಿ, ಅವರ ಮನೆತನ ಎಲ್ಲಿಯದು – ಎಂಬ ಯಾವ ವಿವರಗಳೂ ಯಾರಿಗೂ ತಿಳಿದಿಲ್ಲ. ಹೇಗೋ ಅವರು ಗೋರಖಪುರ ‘ಗೀತಾ ಪ್ರೆಸ್’ ಪ್ರವರ್ತಕ ಹನುಮಾನ್ ಪ್ರಸಾದ್ ಪೋದ್ದಾರರ ಸಂಪರ್ಕಕ್ಕೆ ಬಂದರು. ‘ಗೀತಾ ಪ್ರೆಸ್’ ನಡೆಸುತ್ತಿದ್ದ ಸಂಸ್ಕಾರಕಾರಿ ಕಾರ್ಯಕ್ರಮಗಳಿಂದ ಆಕರ್ಷಿತರಾಗಿ ಅವುಗಳಲ್ಲಿ ತೊಡಗಿಕೊಂಡರು. ‘ಕಲ್ಯಾಣ’ ಪತ್ರಿಕೆಯ ಸಂಪಾದನದ ಹೊಣೆಯನ್ನೂ ತಾವಾಗಿ ವಹಿಸಿಕೊಂಡರು. ಕೆಲ ವರ್ಷಗಳ ತರುವಾಯ ಶ್ರದ್ಧಾವಂತ ಭಕ್ತರ ಆಗ್ರಹದಂತೆ ಊರೂರಿಗೆ ಹೋಗಿ ಭಗವದ್ಗೀತಾ ಪ್ರವಚನ ಮಾಡಿದರು; ಗೋವು, ಗಂಗಾ, ಗೀತಾ, ಗೋಪಾಲ, ಗಾಯತ್ರೀ – ಇವೇ ಹಿಂದೂಧರ್ಮದ ಜೀವಾಳವೆಂದು ಪ್ರಚಾರ ಮಾಡಿದರು. ಎಂದೂ ಯಾರಿಂದಲೂ ಒಂದು ದಮ್ಮಡಿಯನ್ನೂ ಸ್ವೀಕರಿಸುತ್ತಿರಲಿಲ್ಲ. ಎಂದೂ ತಮ್ಮದೊಂದು ಫೋಟೋ ತೆಗೆಯಲೂ ಯಾರಿಗೂ ಅವಕಾಶ ಕೊಡಲಿಲ್ಲ. ದೂರದರ್ಶನದ ಬೇಡಿಕೆಯಂತೆ ಪ್ರಸಾರವಾಗುತ್ತಿದ್ದ ಅವರ ಧಾರ್ಮಿಕ ಪ್ರವಚನಗಳಲ್ಲಿ ಅವರ ಧ್ವನಿ ಮಾತ್ರ ಇರುತ್ತಿತ್ತು. ಅವರದು ಎಷ್ಟು ಸರಳ ಜೀವನರೀತಿಯಾಗಿತ್ತೆಂದರೆ – ಕನಿಷ್ಠ ಸೌಕರ್ಯಗಳ ಮಾತಿರಲಿ, ತಮ್ಮ ವಸತಿಗಾಗಿ ಕೆಲವೇ ಅಡಿಗಳ ಕೋಣೆಯನ್ನೂ ಬೇಡವೆಂದು ನಿರಾಕರಿಸಿದ್ದರು. ತಮ್ಮ ಶಿಷ್ಯರೆನಿಸಿಕೊಳ್ಳಲೂ ಯಾರಿಗೂ ಆಸ್ಪದ ನೀಡಲಿಲ್ಲ. ತಮ್ಮ ಯಾವ ಸ್ಮೃತಿಶೇಷವೂ ಉಳಿಯಬಾರದೆಂದಿದ್ದ ಅವರ ನಿರ್ದೇಶನದಂತೆ ಅವರ ಅವಸಾನದ ನಂತರ ಒಂದು ಚಿತೆಯಲ್ಲಿ ಅವರ ಶರೀರವನ್ನೂ ಇನ್ನೊಂದರಲ್ಲಿ ಅವರು ಬಳಸುತ್ತಿದ್ದ ಜಪಮಾಲಾದಿಗಳನ್ನೂ ದಹನಮಾಡಲಾಯಿತು. ಆ ಜ್ವಾಲೆ ಶಾಂತವಾಗುತ್ತಿದ್ದಂತೆ ದೈವಿಕವೆಂಬಂತೆ ಗಂಗಾಪ್ರವಾಹ ಬಂದು ಆ ಎಲ್ಲ ಅವಶೇಷಗಳನ್ನು ಬಗಲಿಗೆ ಹಾಕಿಕೊಂಡು ಹೊರಟುಹೋಯಿತು.