ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಕವನಗಳು

ನಿಮಗೆ ನೀವೇ ರೂವಾರಿ

dvgಗ್ರಾಮ್ಯದಾವರಣವೇ ತಳಮೂಲ
ಮುಂದೆ ನೀವು ಬೆಳೆದು ಆದದ್ದು ವಿಶಾಲ ಆಲ!
ನಿಮ್ಮನರಿಯಲುಂಟೇ ನನ್ನ ಅಳವು?
ಮುಕ್ತ ಮನವಾಗಿ ನಿಮ್ಮಿರವು ತೆರವು
ಡಿವಿಜಿ ನನಗೆ ನೀವು ಸೋಜಿಗ
ಎಲ್ಲ ಅರಿತು ಅರ್ಥೈಸಿದಿರಿ ಈ ಜಗ!
***
ಬೆಳಕಿನೊಡನೆ ತಳುಕು ಹಾಕಿ
ಶಿಖರದತ್ತ ಹೆಜ್ಜೆ ಹಾಕಿ-
ಪ್ರತಿಘಟ್ಟದಲ್ಲೂ
ಅನುಭವದಟ್ಟದಲ್ಲೂ
ಹತ್ತಿ ಇಳಿದು ನಿಂತು ಕುಂತು ನಡೆದು ಮಿಡಿದು
ಸವಿದು ಅಳೆದು ಸುರಿದು ಬಿರಿದು ತೆರೆದು
ಹರಿಸಿದಿರಿ ಒಟ್ಟಾರೆ ಜ್ಞಾನಧಾರೆ….
ಮಂಕುತಿಮ್ಮನ ಕಗ್ಗದಲಿದೆ ನಿಮ್ಮ ಚಹರೆ!
***

doddarangegowda1  ಡಾ|| ದೊಡ್ಡರಂಗೇಗೌಡ 

ಲೇಖಕರು ಸುಪ್ರಸಿದ್ಧ ಕವಿಗಳು

[email protected]

ವೀರಯೋಧನಿಗೆ…

utthana - veera yodhanige 27 11 2015ಗಡಿನಾಡ ಅಂಚಿನಲಿ
ಗಡಗಡಿಪ ನಡುಕದಲಿ
ನೀನಿಂತೆ ತಡೆಗೋಡೆಯಂತೆ |
ನೆಮ್ಮದಿಯ ಜೀವನವ
ನೆಮ್ಮದಿಯ ಪ್ರತಿಕ್ಷಣವ
ನೀನಿತ್ತೆ ನಮಗೆ, ನಿಶ್ಚಿಂತೆ |
ಉರಿಬಿಸಿಲು, ಹಿಮಶೀತ
ಕಡುವೈರಿ ಎಣಿಸದಲೆ
ಪ್ರತಿಕ್ಷಣವು ನಮಗಾಗಿ ನಿಂತೆ |
ನಿನ್ನೊಲವ ಜೀವನ ತೊರೆದು
ಮಾತೆಯನು ರಕ್ಷಿಸಲು
ಅನುಗಾಲ ಪಣತೊಟ್ಟ ಘನತೆ |
ನಿನ್ನದೆಂಬ ಬದುಕು
ನಿನ್ನವರೆಂಬ ಜನರ
ಎಲ್ಲವನು ನಮಗಾಗಿ ತೊರೆದೆ |
ದುರ್ಗಾತಿದುರ್ಗಮದ
ಶೌರ್ಯಾತಿಶೌರ್ಯದ
ಹೋರಾಟದಿ ನಮಗಾಗಿ ಮಡಿದೆ |
ವೀರಗತಿ ನೀನಿಂದು ಪಡೆದಿರಲು
ನಿನ್ನ ಹೆತ್ತವರ ದುಃಖದೊಳು ಹೆಮ್ಮೆ ಕಂಡೆ
ಮಡದಿ ಮಕ್ಕಳ ಸ್ಥೈರ್ಯಕೆ ಶರಣೆಂದೆ |
ದೇಶರಕ್ಷಕನೆ ನಿನಗೆನ್ನ ಆಶ್ರುತರ್ಪಣವು
ನಿನ್ನ ಧೀರತೆಗೆ ಶರಣು
ನಿನ್ನ ಧೀಮಂತಿಕೆಗೆ ಶರಣು ಶರಣು ||

—-

Yashodha Bhatಯಶೋದಾ ಗಣಪತಿ ಭಟ್ಟ
ನೀರಗಾನು
ಲೇಖಕಿ ದುಬೈನಲ್ಲಿ ನೆಲೆಸಿರುವ ವಿಜ್ಞಾನ ಪದವೀಧರೆ

[email protected]

 

ನೀರ ಪಯಣ

Atula Neela Kadaligeಅತುಲ ನೀಲ ಕಡಲಿಗೆ ನೀರ ಪಯಣ ಸಾಗಿದೆ |

ಬಿಂದು ಸಿಂಧು ಸೇರಿದೆ, ಜೀವ ಸೂತ್ರ ಉಸುರಿದೆ ||

ರವಿಗೆ ಗಗನ ಏರುವಾಸೆ, ಭುವಿಯ ನೀರ ಹೀರುವಾಸೆ |

ಬಾಷ್ಪ-ಪುಷ್ಪ ಅರಳಿದೆ, ಮುಗಿಲ ರೂಪ ತಳೆದಿದೆ ||

ಮಳೆಗೆ ಇಳೆಯ ಸ್ನೇಹ ಬೆಸುಗೆ, ಇಳೆಗೆ ಮಳೆಯ ತೇವದೊದಿಕೆ |

ಜೀವ-ಭಾವ ತುಂಬಿದೆ, ಹಸಿರ ಹೊಸತು ತಂದಿದೆ ||

ಗಿರಿಯ ಮೇಲೆ ಹಿಮದ ಛಾಪ, ಕಣಿವೆ ಕೊರೆದು ನದಿ ಪ್ರಲಾಪ |

ಗುಡ್ಡ-ಬೆಟ್ಟ ಸುತ್ತಿದೆ, ಬಯಲು ಸೀಮೆಗಿಳಿದಿದೆ ||

ಭೂಮಿಯೊಳಗೆ ಇಳಿವ ತವಕ, ನೆಲದ ದಾಹ ತೀರೊತನಕ |

ಝರಿಯು ನೆಲದಿ ಚಿಮ್ಮಿದೆ, ಒಡಲು ತುಂಬಿ ತುಳುಕಿದೆ ||

ಹರಿವ ನೀರ ಹೆಜ್ಜೆ-ಗೆಜ್ಜೆ, ಥಳಕು-ಬಳಕು ಭಾವ ಲಜ್ಜೆ |

ನೀರು ತೆವಳಿ ದಣಿದಿದೆ, ಹಳ್ಳ-ಕೊಳ್ಳ ತುಂಬಿದೆ ||

ಹಲವು ರೂಪ ಧರಿಸಿಕೊಂಡು, ಮಣ್ಣ ಬಣ್ಣ ಮೆತ್ತಿಕೊಂಡು |

ಅಬ್ಬಿ ನೆಲದಿ ಕುಣಿದಿದೆ, ಸುಗ್ಗಿ ಕಾಲ ತಂದಿದೆ ||

ಬರಡು ಭುವಿಗೆ ಚಿಗುರುವಾಸೆ, ತೆನೆಯ ಬಿಚ್ಚಿನಲಿಯುವಾಸೆ |

ಧಾನ್ಯ ಕಣಜ ತುಂಬಿದೆ,  ದುಡಿಮೆ ಹಿರಿಮೆ ಗಳಿಸಿದೆ ||

—-

ನಾರಾಯಣ ಶೆಣೈ ಕೆ.Narayana Shenoy
ಲೇಖಕರು ಭೂವಿಜ್ಞಾನ ಪ್ರೊಫೆಸರ್ ಹಾಗೂ

ಪರಿಸರ ಚಳವಳಿ ಕಾರ್ಯಕರ್ತರು

[email protected]

Comments are closed.

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ