ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಕವನಗಳು

ನಾಲ್ಕು ಕವನಗಳು

೧. ಮತ್ತೆ ಮತ್ತೆ

ಮತ್ತೆ ಮತ್ತೆ ಸೋತು

ಹರಳುಗಟ್ಟಿದ ಸುಣ್ಣ ನಾನು;

ಸುಟ್ಟು ಬಿಡಿ ನನ್ನ

ನಿಮ್ಮ ಗೋಡೆಗಳ ಬೆಳಗುತ್ತೇನೆ!

ಮತ್ತೆ ಮತ್ತೆ ಎಲೆಗಳುದುರಿ

ಬೋಳಾದ ಮರ ನಾನು;

ಕಡಿದು ಬಿಡಿ ನನ್ನ

ನಿಮ್ಮ ಒಲೆಗೆ ಉರುವಲಾಗುತ್ತೇನೆ!

ಮತ್ತೆ ಮತ್ತೆ ಕರಗಿ

ಮಂಕಾದ ಬಿದಿಗೆ ಚಂದ್ರ ನಾನು;

ನೋಡಿ, ನಕ್ಕುಬಿಡಿ ನನ್ನ

ನಿಮ್ಮ ಮನವ ಹುಣ್ಣಿಮೆಯಾಗಿಸುತ್ತೇನೆ!

೨. ಪಾಡು

ಕೊರಿಯಾದಲ್ಲಿ

ಅಣ್ವಸ್ತ್ರದ

ಪರೀಕ್ಷೆ!

ಸಿರಿಯಾದಲ್ಲಿ

ಅನ್ನ ವಸ್ತ್ರದ

ಪ್ರತೀಕ್ಷೆ!

ಅವರಿಗೆ

ಬೇಕಂತೆ ರಕ್ಷೆ!

ಇವರಿಗಿಲ್ಲ ಭಿಕ್ಷೆ!

ಎರಡೂ ದಕ್ಕದ

ಮನುಕುಲಕ್ಕೆ…

ಇದೆಂಥ ಶಿಕ್ಷೆ!?

೩. ಇದು ಸಿರಿಯಾ?48

ಐಶಾರಾಮದ ಕೋಡು

ಮೂಡುತ್ತಲೇ

ಮನುಷ್ಯ ಭೂಮಿಯನ್ನು

ಬಗೆಬಗೆದು ತಿನ್ನತೊಡಗಿದ!

ಗಂಧ, ಗಾಳಿ ತೀರಿದಂತೆ

ತಿರೆಯೂ ಕೊರಡು!

ಬರಡು!

ಅದೋ ಸಿರಿಯಾ…!

ಇದು ಸಿರಿಯಾ?

೪. ಎಲ್ಲ ಮೀರಿದರುಂಟು…Untitled-003

ಹೆಸರು ಇಟ್ಟವರು

ಮರೆತು ಹೋದರು;

ಕತೆಯ ಕಟ್ಟಿದವರು

ಕಳೆದು ಹೋದರು!

ದಿನಾ ದೂರುವವರ

ಸಂತೈಸುವನೇ ನೇಸರ;

ದಿನಾ ಸಾಯುವವರಿಗೆ

ಅಳುವನೇ ದಿನಕರ?

ಹೆಸರೆಷ್ಟು ಉಳಿದವನ

ಬೆಳಕ ಬೆರಗಿನಲಿ;

ಕತೆಗಳೆಷ್ಟು ಉಳಿದವನ

ಕ್ಷಿತಿಜದ ಪಥದಲಿ?

ಗುಡಿಯ ಬೆಳಗುವ ದೀಪವ

ಹಿಡಿಯಬಹುದಲ್ಲದೆ

ಬಾನಬಯಲ ಬೆಳಗುವ

ಭಾಸ್ಕರನ ತಡವಬಹುದೆ?

ಹುಟ್ಟು-ಸಾವು, ನೋವು-ನಲಿವು, ಬಿರುದು-ಬಾವಲಿ

ಎಲ್ಲ ಮೀರಿದರುಂಟು ನಿನಗೂ ಜಾಗ ಬಾನಿನಲಿ!

12243282_1654086641513340_4951351707498739898_n ಚಂ.ಸು. ಪಾಟೀಲ

ಲೇಖಕರು ಪ್ರಕೃತಿಪರ ರೈತರು

www.facebook.com/chamsupatil

ಪ್ರಭುಸಮ್ಮಿತ

ಓಲಗದಲ್ಲಿ ವಿರಾಜಮಾನ

ರಾಜ

ಬಗೆ ಬಗೆಯ ಬಿರುದು ಬಾವಲಿಗಳ ಸಹಿತ

ಸಾಲುಗಟ್ಟಿದ್ದಾರೆ ಜನ

ಹೂ ಹಣ್ಣು ಅಹವಾಲುಗಳ ಜೊತೆಗೆ

ಅವನೋ ಅನಾ

ಮತ್ತಾಗಿ ಅವರು ತಂದ

ಅರೆಬಿರಿದ ಹೂಗಳ ಹಿಸುಕಿ

ಇದು ಗಂಧ

ಮಿಡಿ ಕಾಯಿ ದೋರುಗಾಯಿಗಳ ಹಿಂಡಿ

ಇದೇ ರಸವೆನುವ

ಮರುದಿನದಿಂದ ಅದೇ ಶಾಸನ

ಸಂಗೀತ ಸೇವಾ ಅವಧಾರಯ

ಎಂದಾಗ ಇದ್ದೆಲ್ಲ ಕವಿಗಳು

ಗಾಯಕರು ಸಿದ್ಧ

ನೀವೆಲ್ಲ ನನ್ನ ಶ್ರುತಿಗೇ ಬದ್ಧ

ರಾಗಿ ಎಂದಾಗ ಅವರು ಕಂಗಾಲು

ಕವಿಯೋ

ಸ್ವಚ್ಛಂದ ಛಂದ ವಿಹಾರಿ

ಗಾಯಕನೋ

ಮಿಡಿದಂತೆ ಏಕತಾರಿ

ಕುಕಿಲಿರಿವ ಕೋಗಿಲೆಯ  ಕುಣಿವ ನವಿಲಿನ

ಹರಿವ ನೀರಿನ ಶ್ರುತಿಯ ಹಿಡಿಯುವ

ಮಸಿಯು ಇಳಿಯದು ಎಂದ ಕವಿ

ಶ್ರುತಿಯು ಸೇರದು ಎಂದ ಗಾಯಕ

ಓಲಗದಲ್ಲೀಗ ಗದ್ದಲವೋ ಗದ್ದಲ

ನಾನೆ ಬರೆಯುವೆ ನಾನೆ ಹಾಡುವೆ

ಹೊಟ್ಟೆ ಹೊರೆಯಲೆಂದೇ ಇರುವ ನೀವುಗಳು

ನನ್ನ ಅನುಸರಿಸಿ ಎಂದ

ಈಗ

ರಾಜ್ಯದ ತುಂಬ ಅವನ ಶಾಸನವೇ ಕವಿತೆ

ಅದರದ್ದೇ ಪಾಡು.

PB Prasanna

ಪಿ ಬಿ. ಪ್ರಸನ್ನ

ಲೇಖಕರು ಕನ್ನಡ ಭಾಷಾ ಸಹ ಪ್ರಾಧ್ಯಾಪಕರು

[email protected]

 

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ