ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಆಗಸ್ಟ್ 2019 > ಪಕ್ಷಾಂತರ, ಗತ್ಯಂತರ

ಪಕ್ಷಾಂತರ, ಗತ್ಯಂತರ

ಕರ್ನಾಟಕದಲ್ಲಿ ಹದಿನಾಲ್ಕು ತಿಂಗಳ ಕಾಂಗ್ರೆಸ್-ಜೆ.ಡಿ.ಎಸ್. ಮೈತ್ರಿ ಸರ್ಕಾರ ಹದಿನೆಂಟು ದಿನಗಳ ತೀಕ್ಷ್ಣ ಸಮರದ ತರುವಾಯ ದಿನಾಂಕ ಜುಲೈ 23ರ ಸಂಜೆ ಧರಾಶಾಯಿಯಾಗಿದೆ (ಮೈತ್ರಿಕೂಟದ ಪರ ಮತಗಳು 99, ಭಾಜಪಾ ಪರ 105 ಮತಗಳು). ನಿರೀಕ್ಷಿತವೇ ಆಗಿದ್ದ ಈ ಫಲಿತದ ಸಂಪಾದನೆಗೆ ಇಷ್ಟು ಭಂಡತನದ ಜುಗುಪ್ಸಾಕರ ಜಗ್ಗಾಟದ ಆವಶ್ಯಕತೆ ಇತ್ತೆ? – ಎಂದು ಖೇದವಾಗುತ್ತದೆ. ಕರ್ನಾಟಕದ ಮರ್ಯಾದೆ ಹರಾಜಾಗುತ್ತಿದೆಯೆಂಬ ಪರಿವೆಯೂ ಇಲ್ಲದೆ ಮೈತ್ರಿಕೂಟದ ಬಣದವರು ಸಭಾಕಲಾಪಕ್ಕೆ ತಡೆಯೊಡ್ಡುತ್ತ ಸಭೆಯ ಸಮಯವನ್ನು ವ್ಯರ್ಥ ಮಾಡಿದರು.

ನಿಜಕ್ಕೂ ಮಹತ್ತ್ವದ್ದಾಗಿದ್ದ ಚಂದ್ರಯಾನದ ಯಶಸ್ಸನ್ನು ಹಿಂಬದಿಗೆ ಸರಿಸಿ ಕೆಲಸಕ್ಕೆ ಬಾರದ ಗಟಾರ ರಾಜಕೀಯವೇ ಇಡೀ ರಾಜ್ಯದ ಗಮನವನ್ನು ಸೆಳೆದುಕೊಂಡದ್ದು ದುರಂತ.

ಯಶಸ್ವೀ ಚಂದ್ರಯಾನದೊಡನೆ ರೆಸಾರ್ಟ್-ಸ್ಥಿತ ಅತೃಪ್ತ ಶಾಸಕರ ಮಧುಚಂದ್ರವೂ ಕೊನೆಗೊಂಡಿತು. ಮೈತ್ರಿಕೂಟವು ನಿರಾಧಾರ ವಾದಗಳನ್ನೂ ಸ್ಪಷ್ಟವಾಗಿಯೇ ನೆಪಮಾತ್ರದವಾದ ಕುತಂತ್ರಗಳನ್ನೂ ಬಳಸಿ ಹಲವಾರು ದಿನಗಳ ವಿಳಂಬಕ್ಕೆ ಕಾರಣವಾಯಿತು.

ಪ್ರತಿ ಬಾರಿ ಒಂದು ಅಸಹ್ಯ ಘಟಿಸಿದಾಗಲೂ “ಇನ್ನು ಇದಕ್ಕಿಂತ ಅವನತಿ ಸಾಧ್ಯವಾಗದೇನೋ” ಎಂದುಕೊಳ್ಳುತ್ತದೆ ಜನತೆ. ಆದರೆ ಆ ಮುಗ್ಧಭಾವನೆಯನ್ನು ಅನತಿಕಾಲದಲ್ಲಿ ರಾಜಕಾರಣಿಗಳು ಸುಳ್ಳೆನಿಸಿ ಅಧಃಪಾತದ ಹೊಸ ವಿಕ್ರಮ ಸಾಧಿಸುತ್ತಾರೆ. “ಪೃಥಿವೀ ಗತಯೌವನಾ” – ಲೋಕವೇ ತನ್ನ ತಾರುಣ್ಯವನ್ನು ನಷ್ಟಮಾಡಿಕೊಂಡಿದೆ, ಇನ್ನು ಮುಂದೆ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಅನಾಗರಿಕತೆಯನ್ನೇ ನೋಡುತ್ತಿರಬೇಕಾಗುತ್ತದೆ – ಎಂಬ ಋಷಿವಾಕ್ಯವನ್ನು ಈಗಿನ ಘಟನಾವಳಿ ಸಮರ್ಥಿಸುತ್ತಿದೆ.

ರಾಜಕಾರಣ ಇಷ್ಟು ಕೀಳುಮಟ್ಟಕ್ಕೆ ಹೋಗಬಹುದೆ? – ಎಂದು ಜನತೆ ಹೇಸಿಗೆಪಡುವಂತೆ ಆಗಿದೆ. ಗವುಸನ್ನು ಹೊದಿಸಿಡಲಾಗದ ಮಟ್ಟಕ್ಕೆ ಹೊಲಸು ಬೆಳೆದಿದೆ. ಕೇವಲ ದಾಖಲಾತಿಗಾಗಷ್ಟೆ ಈಗಿನ ನಾಟಕದ ಕೆಲವು ಮಜಲುಗಳನ್ನು ಕುರಿತು ಮೆಲುಕುಹಾಕಬೇಕಾಗಿದೆ.

ಸಾಮಾನ್ಯವಾಗಿ ಸರ್ಕಾರಗಳು ಬೀಳುವುದಕ್ಕೆ ಪ್ರತಿಪಕ್ಷಗಳ ಶಕ್ತಿವೃದ್ಧಿ, ಸ್ವಪಕ್ಷದಲ್ಲಿನ ಹಲವರ ಅಥವಾ ಅನ್ಯರ ಕ್ಷಿಪ್ರಕ್ರಾಂತಿ ಮೊದಲಾದ ಕಾರಣಗಳು ಇರುತ್ತವೆ. ಆದರೆ ಕರ್ನಾಟಕದಲ್ಲಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ದ್ವಿಪಕ್ಷ ‘ಮೈತ್ರಿಸರ್ಕಾರ’ ಗಾದಿಗೇರಿದ ದಿನದಿಂದ ತನ್ನ ಅಳಿವಿಗೆ ತಾನೇ ದಾರಿಮಾಡಿಕೊಂಡು ಅವಸಾನದೆಡೆಗೆ ಸಾಗಿತು. ವಿರೋಧಪಕ್ಷ ಒಡ್ಡಬಹುದಾಗಿದ್ದ ಸವಾಲುಗಳಿಗಿಂತ ಹೆಚ್ಚಿನ ಅಸಹಕಾರ ಮೊದಲ ದಿನದಿಂದಲೇ ಬಂದದ್ದು ‘ಮೈತ್ರಿ’(!)ಪಕ್ಷದ ಘಟಕವಾದ ಕಾಂಗ್ರೆಸಿನಿಂದಲೇ. ವಿಷಬೀಜ ಹೀಗಿರುವಾಗ ಆರೂಢಪಕ್ಷವು ವಿರೋಧಪಕ್ಷದ ಮೇಲೆ ಹೊರೆಸುವ ಆರೋಪಗಳಿಗೆ ಏನು ಕಿಮ್ಮತ್ತು ಇದ್ದೀತು? ಅಧಿಕಾರದ ಅವಕಾಶ ಕೊಟ್ಟರೂ ನಿಮ್ಮಿಬ್ಬರ ಕಿತ್ತಾಟಗಳಿಂದ ನೀವೇ ಆಡಳಿತವನ್ನು ಇದ್ದೂ ಇಲ್ಲದ ಸ್ಥಿತಿಗಿಳಿಸಿ ಅಪಕೀರ್ತಿಯನ್ನು ತಂದುಕೊಂಡಿರಿ – ಎಂದು ಜನತೆ ಸಕಾರಣವಾಗಿಯೇ ಆಡಿಕೊಳ್ಳುವಂತಾಯಿತು.

ಆರೂಢಪಕ್ಷಘಟಕಗಳು ತಮ್ಮೊಳಗಿನ ಹೊಂದಾಣಿಕೆಯ ಅಭಾವವೂ ಸ್ವಾರ್ಥಾಧಿಕ್ಯವೂ ನಿರ್ಮಿಸಿರುವ ದುಃಸ್ಥಿತಿಗೆ ಕಾರಣವನ್ನು ವಿರೋಧಪಕ್ಷನಡವಳಿಯಲ್ಲಿಯೊ ಬೇರೆಲ್ಲಿಯೊ ಅರಸುವುದು ಬಾಲಿಶವೆನಿಸದೆ? ಆರೂಢ ಸರ್ಕಾರ ಹತಪ್ರಭವಾದಾಗ ವಿರೋಧಪಕ್ಷವು ಅಧಿಕಾರಕ್ಕೇರಬಯಸುವುದಕ್ಕೆ ಹೇಗೆ ಆಕ್ಷೇಪಿಸಲಾದೀತು?

ಆಡಳಿತ ಪಕ್ಷವು ಏನೇನೊ ತಾಂತ್ರಿಕತೆಗಳನ್ನು ಬಳಸಿ ಎಂಟು ದಿನಗಳ ಕಾಲ ವಿಶ್ವಾಸಮತ ಪರೀಕ್ಷಣೆಗೆ ಆಸ್ಪದ ಕೊಡದೆ ವಿಳಂಬಧೋರಣೆ ತಳೆದದ್ದು ತನ್ನ ಕುದುರೆಯಾಟದ ಮುಂದುವರಿಕೆಗಾಗಿಯೆ ಹೊರತು ಬೇರಾವ ಕಾರಣಕ್ಕಾಗಿಯೂ ಅಲ್ಲ ಎಂಬುದು ಸಾರ್ವಜನಿಕರಿಗೆ ಹಗಲಿನಷ್ಟು ಸ್ಪಷ್ಟವಿದೆ. ರಾಜೀನಾಮೆಗಳ ಸ್ವೀಕಾರ/ನಿರಾಕರಣೆ, ನ್ಯಾಯಾಲಯದ ಪಾತ್ರ, ರಾಜ್ಯಪಾಲರ ಮತ್ತು ಸಭಾಧ್ಯಕ್ಷರ ಅಧಿಕಾರಪರಿಧಿ – ಇವುಗಳೆಲ್ಲ ಆಗಂತುಕವಾಗಿ ಉದ್ಭವಿಸಿದ ಅಂಶಗಳಷ್ಟೆ. ಅಂತೆಯೆ ಸದಸ್ಯರಿಗೆ ಸಚೇತಕರು ನೀಡುವ ಸೂಚನೆ ಪಕ್ಷದ ಆಂತರಿಕ ವಿಚಾರವೇ ಆಗಿದ್ದರೂ ಅದರ ಊರ್ಜಿತತೆ ಕುರಿತೂ ಸರ್ವೋಚ್ಚ ನ್ಯಾಯಾಲಯದ ಬಾಗಿಲು ತಟ್ಟುವ ಪ್ರಸ್ತಾವ ಕೂಡಾ.

ಇಷ್ಟಾಗಿ ದಿನಾಂಕ 19ರಂದು ನಿಗದಿತ ಸಮಯದಾಚೆಗೂ ಮುಂದುವರಿದ ಮೈತ್ರಿಪಕ್ಷಗಳ ಅರಚಾಟ ಅಪಲಾಪಗಳಲ್ಲಿ ಹೊಸದೇನು ತಾನೆ ಇತ್ತು? ಅವೇ ಆರೋಪಗಳು, ಅದೇ ಕಾಲಹರಣ; ವಿಶ್ವಾಸಮತವನ್ನು ಮತ್ತೂ ಮುಂದೂಡಬೇಕೆಂಬ ಆಗ್ರಹ. ಈಗಿನ ಸಂಕೀರ್ಣತೆಯನ್ನು ಅನುಲಕ್ಷಿಸಿ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟವಾಗಿಯೆ ನೀಡಿರುವ ನಿರ್ದೇಶನದಲ್ಲಿ ಸ್ಪಷ್ಟತೆಯ ಕೊರತೆ ಇದೆಯೆಂದು ಸಿದ್ದರಾಮಯ್ಯನವರ ಅಂಬೋಣವಾದರೆ, ಬರ, ಸಾಲಮನ್ನಾ ಚರ್ಚಿಸಲು ಇದೇ ಸುಮುಹೂರ್ತವೆಂದು ಎಚ್.ಡಿ.ಕೆ.ಯವರಿಗೆ ಪ್ರೇರಣೆಯಾಯಿತು. ರಾಜ್ಯಪಾಲರ ಆದೇಶವನ್ನೂ ಧಿಕ್ಕರಿಸಲು ಸಿದ್ಧವೆಂದು ಮೈತ್ರಿಕೂಟದ ವಕ್ತಾರರ ಮುಕ್ತಕ.

ನೀವು ಅಧಿಕಾರಕ್ಕೆ ಬಂದರೆ ಎಷ್ಟು ದಿನ ಇರುತ್ತೀರೋ ನೋಡುತ್ತೇನೆ – ಎಂದು ವಿರೋಧಪಕ್ಷವನ್ನು ಕುಟುಕಿದ ಎಚ್.ಡಿ.ಕೆ. ತಾವೇ ಈಗಿನ ಬೀಸುವ ದೊಣ್ಣೆ ತಪ್ಪಿಸಿಕೊಳ್ಳುವುದು ಸಾಧ್ಯವಾದರೆ ಕಾಂಗ್ರೆಸ್ ‘ಸಹಕಾರ’ದಿಂದ ಎಷ್ಟು ಸಮಯ ಮುಂದುವರಿದೇವೆಂದು ಏಕೆ ಪ್ರಶ್ನಿಸಿಕೊಳ್ಳಬಾರದಿತ್ತು?

 ಹೀಗೆ ಸಭ್ಯ ನಡೆಯ ಎಲ್ಲ ಮಾನದಂಡಗಳನ್ನೂ ಗಾಳಿಗೆ ತೂರಿದ್ದು ಆಯಿತು.

ಬಹುಪಕ್ಷವ್ಯವಸ್ಥೆ ಇರುವುದೇ ‘ಅಡ್ಜಸ್ಟ್‍ಮೆಂಟಿಗಾಗಿ’ – ಎಂದು ಸಿನಿಕರು ಹೇಳಬಹುದು.

ಒಂದು ವಿರೋಧಾಭಾಸ ಎದ್ದುಕಾಣುತ್ತದೆ. ಹೊಂದಾಣಿಕೆ ಸಂಧಾನಗಳೆಲ್ಲ ವಿಫಲವಾದ ಮೇಲೆ ಉಳಿಯುವ ಅಂತಿಮ ಕ್ರಮವೆಂದರೆ ಅವಿಶ್ವಾಸನಿರ್ಣಯ ಮಂಡನೆ. ಆ ಹಂತ ತಲಪಿದ ಮೇಲೆ ವಿಶ್ವಾಸಮತಯಾಚನೆಯೇ ಏಕೈಕ ಪರಿಹಾರ ಮತ್ತು ಅಂತಿಮ ಪರಿಹಾರ. ಈ ಹಂತದಲ್ಲಿ ವಸ್ತುಸ್ಥಿತಿಯನ್ನು ಗ್ರಹಿಸಿ ಸರ್ಕಾರ ತಡಮಾಡದೆ ರಾಜೀನಾಮೆ ನೀಡುವುದು ಒಂದು ಸಭ್ಯ ಪರ್ಯಾಯ. ಆಗ ಇರುವ ಅಲ್ಪ ಮರ್ಯಾದೆಯಾದರೂ ಉಳಿದೀತು.

ಆದರೆ ಸ್ವಾರ್ಥದ ವಿಜೃಂಭಣೆಯದೇ ಮೇಲುಗೈಯಾಯಿತು. ಕಾಲಹರಣವೇ ಪ್ರಮುಖ ಉದ್ದೇಶವಾಯಿತು. ಹೇಗಾದರೂ ಅತೃಪ್ತರನ್ನು ಒಲಿಸಿಕೊಳ್ಳುವ ಪ್ರಯಾಸಗಳನ್ನೇ ಮೈತ್ರಿಕೂಟ ಮುಂದುವರಿಸಿತು.

ಮುಂಬಯಿಯಲ್ಲಿ ಠಿಕಾಣಿ ಹೂಡಿದ್ದ ಅತೃಪ್ತರೊಂದಿಗೆ ಸಂಪರ್ಕ ಸಾಧ್ಯವಾಗದಿದ್ದಾಗ ಮುಂಬಯಿ ಕಾಂಗ್ರೆಸ್ ಮುಖಂಡರನ್ನು ಮುಂದಿಟ್ಟುಕೊಂಡೂ ಯತ್ನಿಸಲಾಯಿತು. ಅತೃಪ್ತ ಶಾಸಕರ ಕುಟುಂಬಗಳ ಮಾಧ್ಯಸ್ಥ್ಯವನ್ನು ಬಳಸಿಕೊಳ್ಳಲೂ ಪ್ರಯತ್ನ ನಡೆಯಿತು. ಹೀಗೆ ಎಲ್ಲ ಹತಾಶ ಪ್ರಯತ್ನಗಳನ್ನೂ ಮೈತ್ರಿಕೂಟ ಮಾಡಿತು. ಏನಾದರೇನು! ಮನೆ ಹೊತ್ತಿ ಉರಿಯತೊಡಗಿರುವಾಗ ಬಾವಿ ತೋಡಲು ಹಾರೆ-ಪಿಕಾಸಿ ಕೈಗೆತ್ತಿಕೊಂಡಂತಾಯಿತು.

ಅತೃಪ್ತರು ಪದೇ ಪದೇ ವ್ಯಕ್ತಪಡಿಸಿದ ದೃಢ ನಿಲವಿನ ಹಿನ್ನೆಲೆಯಲ್ಲಿ ಪಕ್ಷಬಲಾಬಲಸ್ಥಿತಿಯಲ್ಲಿ ವ್ಯತ್ಯಾಸವಾಗುವ ಸಂಭವ ಕ್ಷೀಣಿಸಿದ್ದರೂ ದೋಸ್ತಿ ಸರ್ಕಾರ ಮತ್ತೆಮತ್ತೆ ವಿಶ್ವಾಸಮತ ಯಾಚನೆಯ ಮುಂದೂಡಿಕೆಗಾಗಿ ಆಗ್ರಹಿಸುತ್ತಲೇ ಹೋಯಿತು. ಗುರುವಾರ 19ರಂದೇ ನಡೆಯಬೇಕಾಗಿದ್ದ ವಿಶ್ವಾಸಮತದಾನಕ್ಕೆ ದೋಸ್ತಿಬಣ 22ರಂದೂ ಆಸ್ಪದ ಕೊಡದೆ ಅರಚಾಟ ಮುಂದುವರಿಸಿತು. ಕಲಾಪವನ್ನು ನಲ್ಲಿಕಟ್ಟೆ ಜಗಳದ ಮಟ್ಟಕ್ಕೆ ಇಳಿಸಿದ್ದೇ ‘ಸಾಧನೆ’ಯಾಯಿತು. ಮತಯಾಚನೆಯನ್ನು ಮತ್ತೆ ಮತ್ತೆ ಮುಂದೂಡುತ್ತಿರುವುದಕ್ಕಾಗಿ ರೆಸಾರ್ಟ್-ಸ್ಥಿತ ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದರು. ದೋಸ್ತಿ ಬಣ ‘ಚರ್ಚೆಗೆ ಅವಕಾಶ ಬೇಕು’ ಎಂಬ ಪಲ್ಲವಿಯನ್ನೇ ಹಾಡುತ್ತ ಹೋದರು. ‘ನಾಳೆ ಸರ್ವೋಚ್ಚ ನ್ಯಾಯಾಲಯದ ತೀರ್ಪು ಬರಲಿ’ ಎಂದು ನೆವವೊಡ್ಡಿದ ಎಚ್.ಡಿ.ಕೆ. ನಿಲವು ಹಾಸ್ಯಾಸ್ಪದವೆನಿಸಿತು. ಆಗಾಗಲೇ ನಾಲ್ಕು ದಿನಗಳ ದುವ್ರ್ಯಯವಾಗಿತ್ತು. ಇನ್ನು ಒಂದು ದಿನದಲ್ಲಿ ಅದಾವ ಪವಾಡ ನಡೆದೀತೆಂದು ನಿರೀಕ್ಷಿಸಿದರೊ! ಸರ್ವೋಚ್ಚ ನ್ಯಾಯಾಲಯದ ಹೆಸರನ್ನು ಮೇಲಿಂದ ಮೇಲೆ ದುರುಪಯೋಗ ಮಾಡಿಕೊಳ್ಳುವಷ್ಟು ನೀಚಮಟ್ಟಕ್ಕೆ ಮೈತ್ರಿಕೂಟ ಇಳಿಯಿತು.  ಹಲವು ದಿನಗಳಿಂದ ‘ಇಂದು ಕೊನೆಯ ಆಟ’, ‘ಕೌಂಟ್ ಡೌನ್’ ಎಂದು ಪ್ರತಿದಿನ ಬ್ಯಾನರ್-ಶೀರ್ಷಿಕೆ ಬರೆಯುತ್ತಿದ್ದ

ಪತ್ರಿಕೆಗಳ ನಿರೀಕ್ಷೆಯನ್ನು ಮೈತ್ರಿಕೂಟ ಸುಳ್ಳು ಮಾಡುತ್ತಲೇ ಹೋಯಿತು.

ಅಧಿಕಾರದ ಸೆಳೆತ ಇಷ್ಟು ಬಲವಾಗಿರುತ್ತದೆಯೆ? – ಎಂದು ಜನ ಸೋಜಿಗಪಡುವಂತಾಯಿತು.

ಮಕ್ಕಳಿಗೆ ಚಾಕೊಲೇಟ್ ಆಸೆ ತೋರಿಸುವಂತೆ ಎಚ್.ಡಿ.ಕೆ. “ನಿಮ್ಮ ಸಮಸ್ಯೆಗಳನ್ನೆಲ್ಲ ಪರಿಹರಿಸೋಣ, ಹಿಂಜರಿಕೆ ಬಿಟ್ಟು ಬನ್ನಿ” ಎಂದು ಕೊನೆಘಳಿಗೆಯಲ್ಲೂ (ಜುಲೈ 21) ಅತೃಪ್ತರಲ್ಲಿ ಗೋಗರೆಯುತ್ತಿದ್ದುದು ನಗೆಪಾಟಲಾಗಿತ್ತು. “ಸಿ.ಎಂ. ಹುದ್ದೆಯನ್ನೂ ನಿಮಗೆ ಬಿಟ್ಟುಕೊಡುತ್ತೇವೆ, ಬನ್ನಿ” ಎಂಬ ಇನ್‍ಸೆಂಟಿವ್ ಕೂಡಾ ಕೆಲಸ ಮಾಡಲಿಲ್ಲ.

“ಅತೃಪ್ತರದ್ದು ಹೊಲಸು ರಾಜಕಾರಣ” ಎಂದು ಶಾಸಕಾಂಗ ಕಾಂಗ್ರೆಸ್ ಸಭೆಯಲ್ಲಿ (ಜುಲೈ 21) ಹೇಳಿದ ಸಿದ್ದರಾಮಯ್ಯನವರು ತಾವೇ ವರ್ಷದುದ್ದಕ್ಕೂ ಮಾಡಿದ್ದುದು ಏನನ್ನು?

ಬೆಂಗಳೂರು ಶಾಸಕರು – ಮುನಿರತ್ನ, ಭೈರತಿ ಬಸವರಾಜು, ಎಸ್.ಟಿ. ಸೋಮಶೇಖರ್, ಗೋಪಾಲಯ್ಯ – ನಿನ್ನೆ ಮೊನ್ನೆಯವರೆಗೆ ಸಿದ್ದರಾಮಯ್ಯನವರ ನಿಕಟಬಳಗದವರೆಂದು ಗುರುತಿಸಿಕೊಂಡಿದ್ದವರು. ಅವರೂ ರಾಜೀನಾಮೆ ನೀಡಿ, ಅವರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಶುಷ್ಕ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿ ಕೈಚೆಲ್ಲಿದರು.

ತಾನೇ ‘ಆಪರೇಷನ್’ ನಡೆಸಿದ್ದ ಮೈತ್ರಿಕೂಟಕ್ಕೆ ಅನ್ಯರು ಆಪರೇಷನ್ನಿನಲ್ಲಿ ತೊಡಗಿದ್ದಾರೆಂದು ದೂರಲು ನೈತಿಕಹಕ್ಕು ಎಲ್ಲಿಂದ ಬಂದಿತು?

“ಒಂದು ವೇಳೆ ಬುದ್ಧ ಬದುಕಿದ್ದಿದ್ದರೆ ಕಿಸಾಗೌತಮಿಗೆ ‘ಪಕ್ಷಾಂತರ ನಡೆಸದಿರುವ ರಾಜಕೀಯ ಪಕ್ಷದಿಂದ ಸಾಸಿವೆಕಾಳು ತೆಗೆದುಕೊಂಡು ಬಾ’ ಎಂದು ಹೇಳುತ್ತಿದ್ದನೇನೋ!” ಎಂದು ಅಂಕಣಕಾರರೊಬ್ಬರು ಬರೆದರು. ರೆಸಾರ್ಟ್ ರಾಜಕೀಯವನ್ನು ತಮ್ಮ ಅಂತಿಮ ಭಾಷಣದಲ್ಲಿ (ಜುಲೈ 23) ಸಿದ್ದರಾಮಯ್ಯ ಟೀಕಿಸಿದರು; ಪ್ರಜಾಪ್ರಭುತ್ವಕ್ಕೆ ಅದು ಕಲಂಕ – ಎಂದರು. ಆದರೆ ರೆಸಾರ್ಟ್ ರಾಜಕೀಯಕ್ಕೂ 37 ವರ್ಷಗಳ ‘ಭವ್ಯ’ ಪರಂಪರೆ ಇದೆಯಲ್ಲ! (‘ತಾಉ ದೇವಿಲಾಲ್’ ವಗೈರೆ ನೆನಪು ಮಾಡಿಕೊಳ್ಳಿ.)

ಶಾಸಕರನ್ನು ಬಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ ಸಿದ್ದರಾಮಯ್ಯನವರ ಕನಕಪುರ ಯುವಕಾಂಗ್ರೆಸ್ ಅನುಯಾಯಿಗಳೇ ಜುಲೈ 23ರ ಸಂಜೆ ರೇಸ್‍ಕೋರ್ಸ್ ರೋಡಿನ ನಿತೇಶ್ ಅಪಾರ್ಟ್‍ಮೆಂಟ್ಸ್ ಎದುರಿಗೆ ನಡೆಸಿದ ದಾಂಧಲೆ ಪ್ರಜಾಪ್ರಭುತ್ವಕ್ಕೆ ಕೀರ್ತಿ ತರುವಂತೆ ಇತ್ತೆ?

ವರ್ಷಪೂರ್ತಿ ತಾವೇ ಶಕುನಿಸಾರಥ್ಯ ನಡೆಸಿದ ಸಿದ್ದರಾಮಯ್ಯನವರಿಗೆ ಈಗ ಪ್ರಜಾಪ್ರಭುತ್ವ ಮೌಲ್ಯಗಳು ನೆನಪಾದವೆ?

ಅತೃಪ್ತರನ್ನು ಹಿಡಿದಿಟ್ಟುಕೊಳ್ಳುವ ರೆಸಾರ್ಟ್ ರಾಜಕೀಯವನ್ನು ಎಲ್ಲ ಪಕ್ಷಗಳೂ ಮಾಡುತ್ತಿರುವಾಗ ಯಾರ ಆರೋಪಗಳಿಗೆ ತೂಕ ಬಂದೀತು? ಅತೃಪ್ತರನ್ನು ಅಧಿಕಾರಾಮಿಷದಿಂದಲೊ ಹಣದಿಂದಲೊ ಒಲಿಸಿಕೊಳ್ಳುವ ಪ್ರಯತ್ನಗಳು ‘ರಾಜಮಾರ್ಗ’ವೆಂದೇ ಎನಿಸಿರುವಾಗ ಅಸಮಾಧಾನಪಡುವುದಾದರೂ ಯಾರು, ಹೇಗೆ? ಪಕ್ಷಾಂತರ, ರಾಜೀನಾಮೆ ಮೊದಲಾದವು ಸದಸ್ಯರಮಟ್ಟಿಗೆ ‘ಬಾರ್ಗೈನಿಂಗ್ ಪಾಯಿಂಟ್ಸ್’ ಆಗಿ ಪರಿಣಮಿಸಿರುವುದು ಸಹಜ.

ಆದರೆ ಏನು ಮಾಡೋಣ! ನಾವು ಸಾಕಷ್ಟು ಸಂಖ್ಯೆಯ ಅತೃಪ್ತರ ಮನವೊಲಿಸುವವರೆಗೆ ವಿಶ್ವಾಸಮತ ಬೇಡ – ಎಂಬ ಮನ:ಸ್ಥಿತಿಯು ತುದಿಗಾಲಲ್ಲಿ ನಿಂತ ಶಾಸನಸಭೆಯಲ್ಲಿ ಎಷ್ಟು ಕಾಲ ಕೆಲಸಮಾಡೀತು?

ಸಭಾಸದಸ್ಯರು ಒಣಚರ್ಚೆಯನ್ನು ಅನಿರ್ದಿಷ್ಟ ಕಾಲ ಮುಂದುವರಿಸುತ್ತಿರುವಾಗ, ಸಭಾಧ್ಯಕ್ಷರ ಮನವಿಗಳನ್ನೂ ದೋಸ್ತಿಬಣ ಧಿಕ್ಕರಿಸುತ್ತಿರುವಾಗ ರಾಜ್ಯಪಾಲರು ಮುಂದಾಗಲೇಬೇಕಾಯಿತು. ಜುಲೈ 22 ಸೋಮವಾರ ರಾತ್ರಿ 9 ಗಂಟೆಯೊಳಗೆ ಸದನದಲ್ಲಿ ನಿರ್ಧಾರ ಆಗದಿದ್ದರೆ ತಾವು ಸಾಂವಿಧಾನಿಕ ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲರ ಕಚೇರಿಯಿಂದ ಜುಲೈ 21 ರಾತ್ರಿ 8 ಗಂಟೆಯ ವೇಳೆಗೆ ಸಂದೇಶ ಬಂದಿತು. ಆದರೆ ಸೋಮವಾರವೂ ದೋಸ್ತಿಕೂಟ ತನ್ನ ಅಸಭ್ಯತೆಯನ್ನು ಮುಂದುವರಿಸಿತು. ಮಂಗಳವಾರವಿಡೀ ಅದರದೇ ಪುನರಾವರ್ತನೆಯಾಯಿತು – ಸಂಜೆ ಏಳೂವರೆಯವರೆಗೆ.

ತಮ್ಮ ಬಗೆಗೆ ಕೆಟ್ಟ ಇಮೇಜ್ ಹರಡಿರುವುದಕ್ಕೆ ಸೋಷಲ್ ಮೀಡಿಯಾ ಕಾರಣ – ಎಂದು ಎಚ್.ಡಿ.ಕೆ. ತಮ್ಮ ಚರಮಭಾಷಣದಲ್ಲಿ ವ್ಯಾಖ್ಯಾನ ಮಾಡಿದರು. ಆದರೆ ಸರಿಯಾದ ಸರಕು, ಕೆಟ್ಟ ಗೊಬ್ಬರ – ಎಲ್ಲವನ್ನೂ ಸೋಷಲ್ ಮೀಡಿಯಾ ಸಮಾನವಾಗಿಯೆ ನಿಷ್ಪಕ್ಷಪಾತವಾಗಿ ಎಲ್ಲೆಡೆ ರಾಶಿ ಹಾಕುತ್ತದಲ್ಲವೆ!

ಅಂತೂ ವಿಶ್ವಾಸಮತ ಪ್ರಸಂಗ ಮುಗಿದು ಜುಲೈ 23 ರಾತ್ರಿ 7-40ಕ್ಕೆ ರಾಷ್ಟ್ರಗೀತೆಯೊಡನೆ ಸದನಕಲಾಪ ಬರ್ಖಾಸ್ತ್ ಆದಾಗ ಟಿ.ವಿ. ವೀಕ್ಷಕರು ‘ಸದ್ಯ ಈಗ ಬೇರೆ ಕೆಲಸಕ್ಕೆ ಹೋಗಬಹುದು’ ಎಂದು ನಿಟ್ಟುಸಿರು ಬಿಡುವಂತಾಯಿತು.

ಸರ್ಕಾರ ಬದಲಾದರೆ ಸ್ವರ್ಗವು ಭೂಮಿಗೆ ಇಳಿದುಬರುತ್ತದೆ ಎಂದು ಯಾವ ಅಮಾಯಕರೂ ಭ್ರಮಿಸಿಲ್ಲ. ಆದರೆ ಆಳುವ ನೈತಿಕಾಧಿಕಾರವನ್ನು ಕಳೆದುಕೊಂಡಿದ್ದ ಒಂದು ಪಕ್ಷರಚನೆಯನ್ನು ಹೊರದೂಡಲೇಬೇಕಾದ ಸ್ಥಿತಿ ಇತ್ತು. ಅದು ಲಭ್ಯವಿರುವ ಶಾಸಕೀಯ ವಿಧಾನದಲ್ಲಿ ನಡೆದಿದೆ, ಅಷ್ಟೆ. ಹೀಗೆ ಹಿಂದೆಯೂ ಎಷ್ಟೋ ಬಾರಿ ಆಗಿದೆ.

ಆದರೆ ಈ ಪ್ರಕ್ರಿಯೆಯನ್ನು ಅನಾವಶ್ಯಕವಾಗಿ ಒಂದು ಆಬ್‍ಸ್ಟೆಕಲ್ ರೇಸನ್ನಾಗಿಸಿ ದೋಸ್ತಿಕೂಟ ಅಸಭ್ಯತೆಯ ಹೊಸ ದಾಖಲೆ ನಿರ್ಮಿಸಿ ಸಾರ್ವಜನಿಕರಿಗೆ ಜುಗುಪ್ಸೆ ತಂದು ರಾಜಕಾರಣಿಗಳ ಬಗೆಗೇ ಹೇವರಿಕೆಯನ್ನುಂಟುಮಾಡಿತು.

ಈ ದುರಂತಪ್ರಹಸನವನ್ನು ಗಮನಿಸಿದ ಪ್ರಮುಖ ಚ್ಯಾನೆಲ್‍ಗಳು “ಉoveಡಿಟಿಚಿಟಿಛಿe ಆeಜಿiಛಿiಣ iಟಿ ಏಚಿಡಿಟಿಚಿಣಚಿಞಚಿ: ಔಟಿಟಥಿ ‘ಓಚಿಣಚಿಞಚಿ’ iಟಿ ಏಚಿಡಿಟಿಚಿಣಚಿಞಚಿ”, “ಊಚಿs ಆemoಛಿಡಿಚಿಛಿಥಿ ಃeeಟಿ Shಚಿmeಜ iಟಿ ಏಚಿಡಿಟಿಚಿಣಚಿಞಚಿ?” (ಅಓಓ)  ಎಂದೆಲ್ಲ ವ್ಯಾಖ್ಯಾನ ಮಾಡಿದುದರಲ್ಲಿ ಅಚ್ಚರಿಯೇನಿದೆ? ಕರ್ನಾಟಕದ ಮರ್ಯಾದೆಯನ್ನು ಈ ಲಜ್ಜಾಸ್ಪದ ದಶೆಗೆ ದೂಡಿರುವ ‘ಕೀರ್ತಿ’ಗೆ ಭಾಜನವಾಗಿದೆ ತಥೋಕ್ತ ‘ಮೈತ್ರಿಸರ್ಕಾರ’.

– ಎಸ್.ಆರ್.ಆರ್.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ