ಮಾಧ್ಯಮಗಳ ಮೂಲಕ ಹೊಮ್ಮುವುದೆಲ್ಲ ಯಥಾರ್ಥವೆಂದು ಜನರು ಸ್ವೀಕರಿಸುವ ಪ್ರವೃತ್ತಿಗೆ ಹಿಂದಿನ ವರ್ಷಗಳಲ್ಲಿದ್ದಷ್ಟು ದಾಢ್ರ್ಯ ಈಗ ಉಳಿದಿಲ್ಲ. ಎಲೆಕ್ಟ್ರಾನಿಕ್ ಮಾಧ್ಯಮಗಳು ಪಡೆದುಕೊಂಡಿರುವ ವ್ಯಾಪ್ತಿಯಿಂದಾಗಿ ಈಗ ಜನರಿಗೆ ಲಭ್ಯವಿರುವ ಆಯ್ಕೆಗಳು ಹೆಚ್ಚಾಗಿವೆ. ಇದು ಒಳ್ಳೆಯ ಬೆಳವಣಿಗೆ. ಹೆಚ್ಚು ಜನರಲ್ಲಿ ಜಾಗೃತಿಯೂ ವಿಮರ್ಶನಪ್ರಜ್ಞೆಯೂ ಬೆಳೆದಲ್ಲಿ ಎಷ್ಟೊ ಆಭಾಸಗಳು ತಪ್ಪಿಯಾವು. ಅನ್ಯೋದ್ದೇಶಜನಿತ ಪ್ರತಿರೋಧಗಳಿಂದಾಗಿ ಯೋಜನೆಗಳ ವೆಚ್ಚ ಹೆಚ್ಚುವುದರಿಂದಲೂ ಅವುಗಳಿಂದ ಲಭಿಸಬಹುದಾದ ಆನುಕೂಲ್ಯಗಳು ವಿಳಂಬಗೊಳ್ಳುವುದರಿಂದಲೂ ನಷ್ಟವಾಗುವುದು ಜನರಿಗೇ ತಾನೆ.
ಯಾವುದೇ ದೇಶದ ಅಭ್ಯುದಯಾಭಿಮುಖ ಪಯಣ ದೃಢವಾಗಿ ಸಾಗಬೇಕಾದರೆ ಅತ್ಯವಶ್ಯವಾಗುವ ಒಂದು ಭೂಮಿಕೆಯೆಂದರೆ ಆಧಾರಭೂತ ದೀರ್ಘಕಾಲಿಕ ಯೋಜನೆಗಳು ನಿರಭ್ಯಂತರವಾಗಿ ಕಾರ್ಯಗತವಾಗುವುದು. ಹಾಗೆಂದು ವಿಮರ್ಶನೆಯೇ ಬೇಡವೆಂದೇನಲ್ಲ. ಆದರೆ ಪೂರ್ವಪರಿಶೀಲನಾನಂತರ ಒಂದು ಒಟ್ಟಾರೆ ಅನುಕೂಲ ಅಭಿಮತ ಮೂಡಿತೆಂದರೆ ಅಲ್ಲಿಂದಾಚೆಗೆ ಅದರ ಬಗೆಗೆ ನಿಷ್ಕಾರಣ ಅಥವಾ ಕ್ಷುಲ್ಲಕ ದೋಷೋದ್ಘಾಟನೆಯ ಪ್ರವೃತ್ತಿ ಆರೋಗ್ಯಕರವಲ್ಲ. ಯಾವುದೇ ಸರ್ಕಾರ ಪದಾಧಿಷ್ಠಿತವಾದರೂ ಅಭಿವೃದ್ಧಿಪರ ಕ್ರಮಗಳಿಗೆ ಭಂಗ ಬರಬಾರದು.
ಇದೇ ವಿಷಯಕ್ಕೆ ಹೆಚ್ಚು ಜನರ ಗ್ರಹಿಕೆಗೆ ಬಾರದ ಇನ್ನು ಕೆಲವು ಆಯಾಮಗಳೂ ಉಂಟು. ಅನ್ಯಾನ್ಯ ಕಾರಣಗಳಿಂದ ಭಾರತದ ಉಚ್ಛ್ರಾಯವನ್ನು ಸಹಿಸದ ವಿದೇಶೀ ಶಕ್ತಿಗಳಿಗೂ ಕೊರತೆಯಿಲ್ಲ. ಆ ವಲಯಗಳ ಪ್ರತಿಷ್ಠೆಯನ್ನು ತಮ್ಮ ಬಂಡವಾಳವಾಗಿಸಿಕೊಂಡು ಎಷ್ಟೊ ವೇಳೆ ಅವುಗಳಿಂದ ನೇರ ಪೋಷಣೆಯನ್ನೂ ಪಡೆದ ದೇಶೀಯ ಸಂಘಟನೆಗಳು ಎಲ್ಲ ಸರ್ಕಾರೀ ಯೋಜನೆಗಳನ್ನೂ ಮಾನವಹಕ್ಕುಗಳ ಹೆಸರಿನಲ್ಲಿಯೊ ಪರಿಸರಸ್ವಾಸ್ಥ್ಯದ ಹೆಸರಿನಲ್ಲಿಯೊ ವಿರೋಧಿಸಿ ಸಾರ್ವಜನಿಕರ ದಾರಿ ತಪ್ಪಿಸುವುದೂ ಉಂಟು.
ಈ ಜಟಿಲತೆಗಳಿಂದಾಗಿ ಅನೇಕ ಜನೋಪಯೋಗಿ ಯೋಜನೆಗಳಿಗೆ ಒಂದಷ್ಟು ಹಿನ್ನಡೆಯಾಗಿ ಅವು ಕುಂಟುತ್ತ ಸಾಗುತ್ತವೆ. ತಾವು ಜನಪರವೆಂದು ಬಿಂಬಿಸುವ ಸಂಘಟನೆಗಳು ನಡೆಸುವ ಪ್ರಚಾರಾಭಿಯಾನಗಳಿಗೆ ಮಾದ್ಯಮಗಳ ಬೆಂಬಲವೂ ಸುಲಭವಾಗಿ ದೊರೆಯುತ್ತದೆ. ಅಂತಹ ವಿರೋಧಗಳು ಸತರ್ಕವಲ್ಲವೆಂಬ ತಥ್ಯ ಹಲವೊಮ್ಮೆ ಬಹುಕಾಲಾನಂತರ ಬೆಳಕಿಗೆ ಬರುವುದುಂಟು. ಸಾಮಾನ್ಯಜನತೆಯ ಮುಗ್ಧತೆಯ ಅಥವಾ ಅಮಾಯಕತೆಯ ದುರ್ಲಾಭವನ್ನು ದೇಶೀಯ ಸಂಘಟನೆಗಳೂ ವಿದೇಶೀ ಶಕ್ತಿಗಳೂ ಪಡೆದುಕೊಂಡ ನಿದರ್ಶನಗಳು ಹಲವಾರು. ಇಂತಹ ಸಮತೋಲಹೀನ ವರ್ತನೆಗಳಿಂದಾಗಿಯೆ ಇಡೀ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳ ಕ್ಷೇತ್ರಕ್ಕೇ ಕಲಂಕ ಮೆತ್ತಿಕೊಂಡಿದ್ದು. ವಿದೇಶೀಮೂಲ ಹಣದ ದುರುಪಯೋಗ ಮೊದಲಾದ ಕಾರಣಗಳಿಗಾಗಿ ನೂರಾರು ಸಂಸ್ಥೆಗಳು ಈಗ ನೋಂದಣಿಯನ್ನೇ ಕಳೆದುಕೊಂಡಿವೆ.
ಪ್ರತಿಭಟನೆ-ಅಡಚಣೆಗಳ ಕಾರಣದಿಂದ ವಿಳಂಬಗೊಳ್ಳುವುದರಿಂದಾಗಿ ಯೋಜನೆಗಳ ವೆಚ್ಚ ಏರುತ್ತಹೋಗುತ್ತದೆಂಬ ವಾಸ್ತವವನ್ನೂ ಮರೆಯಬಾರದು.
ಮಾಧ್ಯಮಗಳ ಮೂಲಕ ಹೊಮ್ಮುವುದೆಲ್ಲ ಯಥಾರ್ಥವೆಂದು ಜನರು ಸ್ವೀಕರಿಸುವ ಪ್ರವೃತ್ತಿಗೆ ಹಿಂದಿನ ವರ್ಷಗಳಲ್ಲಿದ್ದಷ್ಟು ದಾಢ್ರ್ಯ ಈಗ ಉಳಿದಿಲ್ಲ. ಎಲೆಕ್ಟ್ರಾನಿಕ್ ಮಾಧ್ಯಮಗಳು ಪಡೆದುಕೊಂಡಿರುವ ವ್ಯಾಪ್ತಿಯಿಂದಾಗಿ ಈಗ ಜನರಿಗೆ ಲಭ್ಯವಿರುವ ಆಯ್ಕೆಗಳು ಹೆಚ್ಚಾಗಿವೆ. ಇದು ಒಳ್ಳೆಯ ಬೆಳವಣಿಗೆ. ಹೆಚ್ಚು ಜನರಲ್ಲಿ ಜಾಗೃತಿಯೂ ವಿಮರ್ಶನಪ್ರಜ್ಞೆಯೂ ಬೆಳೆದಲ್ಲಿ ಎಷ್ಟೊ ಆಭಾಸಗಳು ತಪ್ಪಿಯಾವು. ಅನ್ಯೋದ್ದೇಶಜನಿತ ಪ್ರತಿರೋಧಗಳಿಂದಾಗಿ ಯೋಜನೆಗಳ ವೆಚ್ಚ ಹೆಚ್ಚುವುದರಿಂದಲೂ ಅವುಗಳಿಂದ ಲಭಿಸಬಹುದಾದ ಆನುಕೂಲ್ಯಗಳು ವಿಳಂಬಗೊಳ್ಳುವುದರಿಂದಲೂ ನಷ್ಟವಾಗುವುದು ಜನರಿಗೇ ತಾನೆ.
ಕೆಲವು ಪ್ರಕರಣಗಳನ್ನು ಸ್ಮರಿಸೋಣ.
ಕೇರಳ ತೀರದಲ್ಲಿ ವಿಜಿಂಗಂ ಎಂಬಲ್ಲಿ ದೊಡ್ಡ ಪ್ರಮಾಣದ ನೌಕಾನೆಲೆ-ಬಂದರಿನ ನಿರ್ಮಾಣ ಕಳೆದ ಇಪ್ಪತ್ತೈದು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಇಂತಹ ಸೌಕರ್ಯದ ಅಲಭ್ಯತೆಯಿಂದಾಗಿ ಅಂತರರಾಷ್ಟ್ರೀಯ ವಾಣಿಜ್ಯ ನೌಕೆಗಳು ಶ್ರೀಲಂಕಾದ ಕೊಲಂಬೊ ಬಂದರನ್ನು ಬಳಸಬೇಕಾದ ಅನಿವಾರ್ಯತೆ ಏರ್ಪಟ್ಟಿತ್ತು. ಭಾರತಕ್ಕೆ ವಿಜಿಂಗಂನಂತಹ ನೌಕಾಶ್ರಯ ನಿರ್ಮಾಣ ಅತ್ಯಂತ ಲಾಭಕರವೆಂದು ಮನಗಂಡ ಕೇರಳದ ವಾಮವಾದಿ ಸರ್ಕಾರವೂ ಈಗ್ಗೆ ನಾಲ್ಕು ವರ್ಷ ಹಿಂದೆ (2019) ಅದಕ್ಕೆ ಹಸಿರು ನಿಶಾನೆ ತೋರಿತ್ತು.
ಎಲ್ಲ ಬೃಹದ್ ಯೋಜನೆಗಳಲ್ಲಾದಂತೆ ವಿಜಿಂಗಂ ಯೋಜನೆಗೂ ಪರಿಸರಸ್ವಾಸ್ಥ್ಯಾದಿ ನೆಪಗಳನ್ನು ಮುಂದೊಡ್ಡಿ ಪ್ರತಿಭಟನೆಗಳು ನಡೆದವು. ಆ ಶಂಕೆಗಳು ಬುಡವಿಲ್ಲದವೆಂದು ಈಗ ಸ್ಥಿರಪಟ್ಟಿದೆ. ಪ್ರತಿಭಟನೆಗಳನ್ನು ಸಂಘಟಿಸುತ್ತ ಬಂದಿರುವವು ಚರ್ಚ್ ವಲಯಗಳು – ವಿದೇಶೀ ಕ್ರೈಸ್ತ ಮೂಲ ಸಂಸ್ಥೆಗಳ ಪೋಷಣೆಯಿಂದ. ಈಗಿನ ಕೇಂದ್ರ ಪ್ರಭುತ್ವಕ್ಕೆ ಕೇರಳಸರ್ಕಾರ ಸೈದ್ಧಾಂತಿಕವಾಗಿ ವ್ಯತಿರಿಕ್ತವಾಗಿದ್ದರೂ ಅದು ವಿಜಿಂಗಂ ಸಮರ್ಥನೆಗೆ ಅಡ್ಡಿಯಾಗಿಲ್ಲ.
ತಮಿಳುನಾಡಿನ ಕೂದಂಕುಲಂ ಅಣುವಿದ್ಯುದುತ್ಪಾದನ ಯೋಜನೆಯೂ ಕಳೆದ ಮೂರೂವರೆ ದಶಕಗಳಿಂದ ಸಮಸ್ಯೆಗಳನ್ನೆದುರಿಸಿ ವಿಳಂಬಗೊಂಡಿತು. ಈ ಪ್ರತಿಭಟನೆಗಳ ಮುಂಚೂಣಿಯಲ್ಲಿದ್ದವು ಅಮೆರಿಕ ಪೋಷಿತ ಸಂಘಟನೆಗಳು. ಏನೇನೊ ಬುಡವಿಲ್ಲದ ಆಕ್ಷೇಪಗಳನ್ನು ಮುಂದೊಡ್ಡಲಾಗಿತ್ತು. ಆದರೆ ನಿಜವಾದ ಕಾರಣವೆಂದರೆ ಈ ಯೋಜನೆ ರಷ್ಯಾದ ನೆರವಿನಿಂದ ನಡೆಯುತ್ತಿದ್ದುದರ ಬಗೆಗೆ ಅಮೆರಿಕದ ಜನ್ಮಜಾತ ಅಸಹನೆ.
ಸ್ವೋಪಜ್ಞ ಚಿಂತಕರಲ್ಲಿ ಹೆಚ್ಚಿನವರಿಗೆ ಈ ವಿದ್ಯಮಾನಗಳು ಸುಲಭಗ್ರಾಹ್ಯವೇ ಆಗಿದ್ದರೂ ಈ ಸೂಕ್ಷ್ಮತೆಗಳು ಜನಸಾಮಾನ್ಯರ ಸ್ತರದಲ್ಲಿ ಪ್ರಸಾರ ಪಡೆಯಬೇಕಾಗಿದೆ. ಮುದ್ರಿತವಾದ್ದೆಲ್ಲ ಸತ್ಯವೆಂಬ ಭ್ರಮೆಯನ್ನು ಸಾಮಾನ್ಯಜನರು ನೀಗಿಕೊಳ್ಳಬೇಕಾಗಿದೆ.
ಬೃಹದ್ ಯೋಜನೆಗಳನ್ನೆಲ್ಲ ವಿರೋಧಿಸಬೇಕೆಂಬ ಪ್ರವೃತ್ತಿ ಬೆಳೆದಿದೆ. ಕೆಲವು ಸಂದರ್ಭಗಳಲ್ಲಿ ವಿರೋಧ ಸಕಾರಣವೂ ಆಗಿರಬಹುದು. ಆದರೆ ನಿರ್ಣಾಯಕವಾಗಬೇಕಾದದ್ದು ವಸ್ತುಸ್ಥಿತ್ಯಾಧಾರಿತ ಮತ್ತು ತರ್ಕಾಧಾರಿತ ವೈಜ್ಞಾನಿಕ ಪರಾಮರ್ಶೆ. ಇದರ ಕೊರತೆಯಿದ್ದಲ್ಲಿ ಹೇಗೆ ಜನಹಿತಕ್ಕೆ ಧಕ್ಕೆಯಾಗಬಹುದೆಂಬುದನ್ನು ನಿದರ್ಶನಪಡಿಸುವ ಪ್ರಕರಣವೊಂದನ್ನು ನೋಡೋಣ.
ಇದೀಗ ಮಧ್ಯಭಾರತದಿಂದ ಹಿಡಿದು ಗುಜರಾತ್ವರೆಗಿನ ಮತ್ತು ರಾಜಸ್ಥಾನದ ಹಲವು ಭಾಗಗಳನ್ನೊಳಗೊಂಡ ವಿಶಾಲ ಭಾಗಕ್ಕೆ ವರದಾನವೆನಿಸಿರುವ ನರ್ಮದಾ ಯೋಜನೆ ವರ್ಷಗಳುದ್ದಕ್ಕೂ ಎದುರಿಸಿದ ವಿರೋಧವನ್ನು ಜನ ಮರೆತಿರಲಾರರು. ನರ್ಮದಾ ಯೋಜನೆಯ ಭಾಗವಾದ ಅಣೆಕಟ್ಟುಗಳ ನಿರ್ಮಾಣವು ಅಸಂಖ್ಯ ಗಿರಿಜನಸಮುದಾಯಗಳನ್ನು ನಿರ್ವಾಸಿತಗೊಳಿಸುತ್ತದೆ ಎಂದು ಪ್ರಚಾರ ಮಾಡಲು ಮೇಧಾ ಪಾಟ್ಕರ್ ವಿವಿಧ ಮೂಲಗಳಿಂದ ಯಥೇಷ್ಟ ಹಣ ಸಂಗ್ರಹಿಸಿದ್ದರು. ಸಮಾಜಗಣ್ಯರನೇಕರ ಬೆಂಬಲವೂ ಆಕೆಗೆ ದೊರೆತಿತ್ತು. ಪ್ರಚಾರದ ಬಲ ಒಂದಿದ್ದರೆ ಸಾಕು ಎಂಬುದು ಈಚಿನ ಕಾಲದ ಯುಗಧರ್ಮವಷ್ಟೆ.
ಆದರೆ ವಾಸ್ತವವೇನೆಂಬುದು ಈಗ ತ್ರಯಸ್ಥ ವೈಜ್ಞಾನಿಕ ಅಧ್ಯಯನಗಳಿಂದ ಹೊರಬಿದ್ದು ಹಿಂದೆ ವಿರೋಧದ ಪರವಾದ ನಿಲವು ತಳೆದಿದ್ದ ಅನೇಕರು ತಮ್ಮಿಂದ ತಪ್ಪಾಗಿದೆಯೆಂದು ಘೋಷಿಸಬೇಕಾಗಿ ಬಂದಿದೆ. ಹಲವರಂತೆ ತಾವೂ ವಿರೋಧಾಭಿಯಾನದೊಡನೆ ಕೈಜೋಡಿಸಿದ್ದ ಪ್ರಸಿದ್ಧ ಅಂಕಣಕಾರ ಸ್ವಾಮಿನಾಥನ್ ಎಸ್. ಆಂಕ್ಲಸರಿಯಾ ಅಯ್ಯರ್ ಪುನರ್ವಿಮರ್ಶೆಯ ತರುವಾಯ ಹೀಗೆಂದಿದ್ದಾರೆ:
“ಮೇಧಾ ಅವರ ಮಾತನ್ನು ಕೇಳಿ ನಾವು ನಂಬಿದ ಸಂಗತಿಗಳು ಸತ್ಯದೂರವೆಂದೂ ಅರ್ಧಸತ್ಯಗಳೆಂದೂ ಈಗ ಸಿದ್ಧಪಟ್ಟಿದೆ.”
ಅವರ ಈ ವಿಶ್ಲೇಷಣೆಯಾದರೋ ಹಾರಿಕೆಯದಲ್ಲ; ಗಟ್ಟಿ ಆಧಾರವನ್ನು ಅವಲಂಬಿಸಿರುವುದು. ದೊಡ್ಡ ಪ್ರಮಾಣದ ಹಣದ ದುರುಪಯೋಗಕ್ಕಾಗಿ ಮೊಕದ್ದಮೆಗಳನ್ನೂ ಮಧ್ಯಪ್ರದೇಶದಲ್ಲಿ ಈಗ ಮೇಧಾ ಎದುರಿಸುತ್ತಿದ್ದಾರೆ.
ಮೇಧಾ ಪಾಟ್ಕರ್ ಮಾಡಿದ ಪ್ರಚಾರಕ್ಕೆ ವಿರುದ್ಧವಾಗಿ ನರ್ಮದಾ ಯೋಜನೆಯಿಂದ ಗಿರಿಜನಸಮದಾಯಗಳಿಗೆ ಅತಿಶಯ ಲಾಭವಾಗಿದೆಯೆಂದು ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಮತ್ತು ಕೊಲಂಬಿಯ ವಿಶ್ವವಿದ್ಯಾಲಯ ಸಂಯುಕ್ತವಾಗಿ ನಡೆಸಿದ ವೈಜ್ಞಾನಿಕ ಅಧ್ಯಯನ ಸಿದ್ಧಪಡಿಸಿದೆ. ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬ ಪ್ರಾಥಮಿಕ ವಾಸ್ತವವನ್ನು ಉಪೇಕ್ಷಿಸುವುದು ಆತ್ಮಘಾತಕವಾಗಬಹುದು.