ಭಾರತದಲ್ಲಿ ಸ್ವಾತಂತ್ರ್ಯಸಿದ್ಧಿಯಾಗಿ ಸಂಸದೀಯ ಪ್ರಜಾಪ್ರಭುತ್ವ ಜಾರಿಗೆ ಬಂದು ಇಪ್ಪತ್ತೇಳು ವರ್ಷಗಳಷ್ಟೆ ದಾಟಿದ್ದಾಗ (ಜೂನ್ 1975) ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಂವಿಧಾನವನ್ನೇ ಧೂಳೀಪಟ ಮಾಡಿ ‘ತುರ್ತುಪರಿಸ್ಥಿತಿ’ಯನ್ನು ದೇಶಾದ್ಯಂತ ಜಾರಿಗೊಳಿಸಿತು. ಪ್ರಜೆಗಳ ಎಲ್ಲ ಮೂಲಭೂತ ಹಕ್ಕುಗಳನ್ನೂ ಅಪಹರಣ ಮಾಡಿ ಕಾಂಗ್ರೆಸ್ಸೇತರ ರಾಷ್ಟ್ರನಾಯಕರನ್ನೂ ಪ್ರಜಾಪ್ರಭುತ್ವಪರ ಸಾಮಾಜಿಕ ಕಾರ್ಯಕರ್ತರನ್ನೂ ಜೈಲಿಗೆ ತಳ್ಳಿ ಅಪರಿಮಿತ ಹಿಂಸೆಯೊಡಗೂಡಿದ ಅಮಾನುಷ ಪೊಲೀಸ್ ರಾಜ್ಯವನ್ನು ಜಾರಿಗೊಳಿಸಿತು. ಇಪ್ಪತ್ತು ತಿಂಗಳ ಆ ಅತಿಘೋರ ದಮನಶಾಹಿಯಿಂದ ದೇಶವನ್ನು ಮುಕ್ತಗೊಳಿಸಲು ಸಾವಿರ ಸಾವಿರ ಮಂದಿ ತ್ಯಾಗಮಯ ದೇಶಪ್ರೇಮಿಗಳು ಬೆವರು-ರಕ್ತಗಳನ್ನು ನೀರಿನಂತೆ ಹರಿಸಬೇಕಾಯಿತು. […]









