ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

  • ಸಮಾಜಸುಧಾರಕರಾಗಿ ಅತ್ಯುನ್ನತ ಧ್ಯೇಯವನ್ನು ಇಟ್ಟುಕೊಂಡಿದ್ದ ಗೋಪಾಲಾಚಾರ್ಲು ಅವರು ಬರೀ ದೇವಸ್ಥಾನವಷ್ಟರಿಂದ ತೃಪ್ತಿ ಹೊಂದದೆ ಅನಾಥ ಮಕ್ಕಳಿಗಾಗಿ ಅನಾಥಾಲಯವನ್ನು ಪ್ರಾರಂಭಿಸಲು ಸಂಕಲ್ಪಿಸಿದರು. ಇದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಗೋಪಾಲಾಚಾರ್ಲು ೧೮೮೮ರ ಪ್ರಾರಂಭದಲ್ಲಿ ದೇಶಾದ್ಯಂತ ಸಂಚರಿಸಿ ರಾಜಮಹಾರಾಜರುಗಳನ್ನೂ ಹಾಗೂ ಶ್ರೀಮಂತರನ್ನೂ ಕಂಡು ಹಣವನ್ನು ಶೇಖರಿಸಿಕೊಂಡು ಅದೇ ವರ್ಷದ ಕೊನೆಯಲ್ಲಿ ವಾಪಸ್ಸಾದರು. ಸಮಯದಲ್ಲಿ ಅವರ ಪತ್ನಿ ಮತ್ತು ತಂದೆ ಬಹು ಕಾಳಜಿಯಿಂದ ದೇವಾಲಯದಲ್ಲಿ ಅರ್ಚನಾದಿಗಳನ್ನು ನಡೆಸುತ್ತಿದ್ದರು. ಶೇಖರಿಸಿದ ಹಣದಿಂದ ಶ್ರೀನಿವಾಸ ದೇವಾಲಯದಲ್ಲೇ ಎಲ್ಲ ಜಾತಿಯ ಮಕ್ಕಳಿಗೆ ಅವಕಾಶ ನೀಡಿ ಅನಾಥಾಲಯವನ್ನು ನಡೆಸತೊಡಗಿದರು. ಮಕ್ಕಳ ಪೂರ್ಣ ಜವಾಬ್ದಾರಿ ಹೊತ್ತು ಅವರ ಆರೋಗ್ಯ, ವಿದ್ಯಾಭ್ಯಾಸ ಹಾಗೂ ಶಿಸ್ತಿನ ಬೆಳವಣಿಗೆಗಾಗಿ ಒಬ್ಬ ಉಪಾಧ್ಯಾಯರನ್ನು ನೇಮಿಸಿದರು.

    ಲೋಕದಲ್ಲಿ ಮಾನವಜನ್ಮ  ಅತಿಶ್ರೇಷ್ಠವಾದುದೆಂದು ಪರಿಗಣಿಸಿ ಅನೇಕಾನೇಕ ಮಹನೀಯರು ತಮ್ಮ ಇಡೀ ಜೀವನವನ್ನು ಸಮಾಜಸೇವೆಗಾಗಿಯೆ ಸಾರ್ಥಕಗೊಳಿಸಿರುವ ಅನೇಕ ದೃಷ್ಟಾಂತಗಳನ್ನು ನಾವು ಇತಿಹಾಸದಲ್ಲಿ ಕಾಣುತ್ತ ಬಂದಿದ್ದೇವೆ. ಇದೇ ರೀತಿಯ ಮಹತ್ತರ ತ್ಯಾಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಲೌಕಿಕ ಆಶೋತ್ತರಗಳನ್ನು ದೂರೀಕರಿಸಿ ಬದುಕಿ-ಬಾಳಿದವರು ಎ. ಗೋಪಾಲಾಚಾರ್ಲು ಮತ್ತು ದೀನಬಂಧು ಎ. ಸಿಂಗಮ್ಮ ದಂಪತಿಗಳು. ಈಗ್ಗೆ ಹದಿಮೂರು ದಶಕಗಳಿಗೂ ಹಿಂದೆ, ಎಂದರೆ ಹತ್ತೊಂಬತ್ತನೇ ಶತಮಾನದ ಅಂತ್ಯಭಾಗದಲ್ಲಿ ಬೆಂಗಳೂರಿನಲ್ಲಿ ‘ಶ್ರೀನಿವಾಸ ಮಂದಿರಂ’ ಹೆಸರಿನ ಸೇವಾಸಂಸ್ಥೆಯನ್ನು ನಡೆಸಿ ಯಶಃಕಾಯರಾದವರು.

    ಅಟ್ಕೊಂಡವಲ್ಲಿ ಗೋಪಾಲಾಚಾರ್ಲು ಅವರು ತೆಂಕಲ ಪಂಗಡಕ್ಕೆ ಸೇರಿದ ವೈಷ್ಣವರಾದ ಶ್ರೀರಂಗದ ಶನಿವಾರಂ ಶೇಷಾಚಾರ್ಯ ಎಂಬ ಗೌರವನೀಯ ಸನಾತನ ಧರ್ಮಾವಲಂಬಿಗಳ ಮೊಮ್ಮಗ (ಜನನ ೩೧-೮-೧೮೫೫). ತಂದೆ ಶ್ರೀನಿವಾಸಯ್ಯಂಗಾರ್. ಇವರು ಮೈಸೂರು ಸರ್ಕಾರದ ಆಧೀನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು ಹಾಗೂ ಮೈಸೂರಿನ ಮಹಾರಾಜರಾಗಿದ್ದ ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರಿಗೆ ಕೆಲವು ಕಾಲ ಇಂಗ್ಲಿಷ್ ಪಾಠ ಹೇಳಿಕೊಡುತ್ತಿದ್ದು ‘ಅಂಗ್ರೇಜೀ ಅಯ್ಯಂಗಾರ್’ ಎಂದೇ ಅರಮನೆಯಲ್ಲಿ ಪರಿಚಿತರಾಗಿದ್ದರು. ಗೋಪಾಲಾಚಾರ್ಲು ಅವರ ಕಿರಿಯ ಸಹೋದರ ಆಟ್ಕೊಂಡವಲ್ಲಿ ಗೋವಿಂದಾಚಾರ್ಯರು (ಜನನ ೧೮೫೬) ಶ್ರೀರಾಮಾನುಜಾಚಾರ್ಯರ ವಿಶಿಷ್ಟಾದ್ವೈತ ಸಿದ್ಧಾಂತದಿಂದ ಪ್ರಭಾವಿತರಾಗಿ ಇಂಗ್ಲಿಷಿನಲ್ಲಿ ಕೆಲವು ಗ್ರಂಥಗಳನ್ನು ರಚಿಸಿದವರು, ಮತ್ತು ಮೈಸೂರು ಜಿಲ್ಲೆಯಲ್ಲಿ ಹರಿಜನೋದ್ಧಾರಕ್ಕಾಗಿ ಸಕ್ರಿಯವಾಗಿ ಶ್ರಮಿಸಿದವರು.

    ಗೋಪಾಲಾಚಾರ್ಲು ಅವರು ಬಾಲ್ಯದಲ್ಲಿ ದೈವಭಕ್ತಿ ವೃಂದದಲ್ಲಿ ಬೆಳೆದು ತಕ್ಕಮಟ್ಟಿಗೆ ವಿದ್ಯಾಭ್ಯಾಸದ ನಂತರ ಚಿಕ್ಕಬಳ್ಳಾಪುರದ ನ್ಯಾಯಾಲಯ ಕಚೇರಿಯಲ್ಲಿ ಉದ್ಯೋಗದಲ್ಲಿದ್ದರು. ಬಡತನದಲ್ಲಿಯೇ ಹುಟ್ಟಿ ಬೆಳೆದ ಇವರು ಆಗಿನ ರೂಢಿಯಂತೆ ಬಹುಬೇಗ ವಿವಾಹವಾದರು. ಆದರೆ ಆ ಪತ್ನಿ ಅಲ್ಪಕಾಲದಲ್ಲಿ ತೀರಿಕೊಂಡರು. ಮೈಸೂರು ಸಂಸ್ಥಾನದಲ್ಲಿ ೧೮೭೫ರಿಂದ ೭೭ರಲ್ಲಿ ಎರಡೂವರೆ ವರ್ಷ ಮಳೆ ಬಾರದೆ ಘೋರ ಕ್ಷಾಮ ತಲೆದೋರಿತು. ಸಾವಿರಾರು ಜನರು ಅನ್ನ ನೀರಿಲ್ಲದೆ ಮರಣ ಹೊಂದಿದರು. ಜಾನುವಾರುಗಳಂತೂ ಎಲ್ಲೆಂದರಲ್ಲಿ ಧಾರುಣವಾಗಿ ಸತ್ತು ಬಿದ್ದಿರುತ್ತಿದ್ದ ದೃಶ್ಯವನ್ನು ಕಾಣಬಹುದಿತ್ತು.

    ಆಗ ಸರ್ಕಾದವರು ಗೋಪಾಲಾಚಾರ್ಲು ಅವರನ್ನು ಚಿಕ್ಕಬಳ್ಳಾಪುರದಲ್ಲಿ ಕ್ಷಾಮ ನಿವಾರಣಾಧಿಕಾರಿಯಾಗಿ ನೇಮಿಸಿದರು. ಆ ಸಂದರ್ಭದಲ್ಲಿ ತಾನು ಬಡ ಜನರ ಹಾಗೂ ಅನಾಥರ ಸಹಜ ಸ್ಥಿತಿಗತಿಗಳು, ಕಷ್ಟಕಾರ್ಪಣ್ಯಗಳ ಪರಿಸ್ಥಿತಿಯನ್ನು ಕಂಡ ೨೧ ವರ್ಷ ವಯಸ್ಸಿನ ಗೋಪಾಲಾಚಾರ್ಲು ಅವರ ಮನಸ್ಸು ಕರಗಿತು. ೧೮೮೦ರಲ್ಲಿ ಪೆರಂಬೂರಿನವರಾದ ಎ.ಸಿಂಗಮ್ಮನವರನ್ನು ಎರಡನೆ ಲಗ್ನವಾದರು. ಸಿಂಗಮ್ಮನವರಿಗೆ ಆಗ ಕೇವಲ ಹತ್ತು ವರ್ಷ ವಯಸ್ಸು. ಪತಿಗೆ ತಕ್ಕ ಸತಿಯಾದ ಈ ದಂಪತಿಗಳು ಬಡತನದಲ್ಲಿದ್ದು ಸಂಸಾರವನ್ನು ಸಾಗಿಸುತ್ತಿದ್ದರು.

    ಬಳೇಪೇಟೆ ವಾಸ್ತವ್ಯ

    ಗೋಪಾಲಾಚಾರ್ಲು ಅವರು ೧೮೮೨ರಲ್ಲಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಪತ್ನಿ ಸಿಂಗಮ್ಮನವರ ಜೊತೆ ಚಿಕ್ಕಬಳ್ಳಾಪುರದಿಂದ ಬೆಂಗಳೂರು ಪೇಟೆಗೆ ಆಗಮಿಸಿ ಬಳೇಪೇಟೆಯಲ್ಲಿ ವಾಸಿಸತೊಡಗಿದರು. ತಮ್ಮ ಲೌಕಿಕ ಆಶೋತ್ತರಗಳನ್ನು ತ್ಯಜಿಸಿದ ಈ ಆದರ್ಶ ದಂಪತಿಗಳು ಅವರಲ್ಲಿದ್ದ ಅಲ್ಪ ಸ್ವಲ್ಪ ಆಸ್ತಿಯನ್ನು ಆಧಾರವಾಗಿಟ್ಟುಕೊಂಡು ಬಳೇಪೇಟೆಯಲ್ಲಿ ಶಿಥಿಲಗೊಂಡಿದ್ದ ಶ್ರೀನಿವಾಸ ದೇವರ (ಬೇಟೆರಾಯನ ಗುಡಿ) ದೇವಾಲಯದ ಸ್ಥಿತಿಯನ್ನು ಕಂಡು ೧೮೮೩ರಲ್ಲಿ ಆ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಕೈ ಹಾಕಿದರು. ಸಮಾಜಸೇವೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟ ಅವರು ಕಾವಿ ವಸ್ತçವನ್ನು ಧರಿಸಿ ಅನಂತರದಲ್ಲಿ ವಿರಕ್ತರಂತೆ ಇದ್ದು ಭಕ್ತಾದಿಗಳನ್ನೂ, ದೀನದಲಿತರನ್ನೂ ವಿಶೇಷ ರೀತಿಯಲ್ಲಿ ಆಕರ್ಷಿಸಿದರು.

    ಹತ್ತನೇ ಚಾಮರಾಜೇಂದ್ರ ಒಡೆಯರ್ ಹಾಗೂ ಬೆಂಗಳೂರಿನ ಅನೇಕ ಭಕ್ತಾದಿಗಳ ನೆರವಿನೊಂದಿಗೆ ೧೮೮೬ರಲ್ಲಿ ಶ್ರೀನಿವಾಸ ದೇವರ ಸಂಪ್ರೋಕ್ಷಣಾ ಮಹೋತ್ಸವವನ್ನು ನಡೆಸಿ ನಿತ್ಯಸೇವೆಗಳಿಗೂ ವ್ಯವಸ್ಥೆ ಮಾಡಿದರು; ಮತ್ತು ಭಗವದ್ರಾಮಾನುಜರ ಸನ್ನಿಧಿಯಲ್ಲಿ ಶಾಸ್ತ್ರೋಕ್ತವಾಗಿ ಕೈಂರ‍್ಯಗಳು ಶಾಶ್ವತವಾಗಿ ನಡೆಯುವಂತೆ ಏರ್ಪಾಟು ಮಾಡಿದರು. ಕ್ರಮೇಣ ಅಭಿವೃದ್ಧಿಗೊಂಡ ಈ ದೇವಾಲಯವು ಕ್ರಮೇಣ ‘ಶ್ರೀನಿವಾಸ ಮಂದಿರಂ’ ಎಂದು ಪ್ರಸಿದ್ಧಿ ಪಡೆಯಿತು. ಬಳೇಪೇಟೆಯ ಮುಖ್ಯರಸ್ತೆ ಎಂದು ಹೆಸರಿದ್ದ ರಸ್ತೆಯಲ್ಲಿ ಶ್ರೀನಿವಾಸ ಮಂದಿರಂ ಇದ್ದುದರಿಂದ ರಸ್ತೆಯೂ ಸಹ ‘ಶ್ರೀನಿವಾಸ ಮಂದಿರಂ ರಸ್ತೆ’ ಎಂದೇ ಹೆಸರು ಗಳಿಸಿತು.

     ಸುಪ್ರಸಿದ್ಧ ರಂಗಭೂಮಿ ನಟರಾಗಿದ್ದ ಎ.ವಿ. ವರದಾಚಾರ್ಯರು (೧೮೬೯-೧೯೨೬) ಚಿತ್ರದುರ್ಗದಲ್ಲಿ ಜನಿಸಿ ಅಲ್ಲಿಯೇ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಮುಂದಿನ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಆಗಮಿಸಿ, ಅವರ ಬಂಧುಗಳಾಗಿದ್ದ ಗೋಪಾಲಾಚಾರ್ಲು ಅವರ ಮನೆಯಲ್ಲೇ ಎರಡು ವರ್ಷ ಇದ್ದು, ಎಫ್.ಎ. ವ್ಯಾಸಂಗ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರೆಸಿಡೆನ್ಸಿಯಲ್ಲಿ ಕಾರಕೂನರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಮಾಸ್ತಿ ವೆಂಕಟೇಶ ಅಯ್ಯಂಗರ‍್ಯರು ‘ಜೀವನ’ ಪತ್ರಿಕೆಯಲ್ಲಿ ದಾಖಲಿಸಿದ್ದಾರೆ.

    ಅನಾಥಾಲಯ, ಸತ್ತ್ರ, ವಾಚನಾಲಯ

    ಸಮಾಜಸುಧಾರಕರಾಗಿ ಅತ್ಯುನ್ನತ ಧ್ಯೇಯವನ್ನು ಇಟ್ಟುಕೊಂಡಿದ್ದ ಗೋಪಾಲಾಚಾರ್ಲು ಅವರು ಬರೀ ದೇವಸ್ಥಾನವಷ್ಟರಿಂದ ತೃಪ್ತಿ ಹೊಂದದೆ ಅನಾಥ ಮಕ್ಕಳಿಗಾಗಿ ಅನಾಥಾಲಯವನ್ನು ಪ್ರಾರಂಭಿಸಲು ಸಂಕಲ್ಪಿಸಿದರು. ಇದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಗೋಪಾಲಾಚಾರ್ಲು ೧೮೮೮ರ ಪ್ರಾರಂಭದಲ್ಲಿ ದೇಶಾದ್ಯಂತ ಸಂಚರಿಸಿ ರಾಜ-ಮಹಾರಾಜರುಗಳನ್ನೂ ಹಾಗೂ ಶ್ರೀಮಂತರನ್ನೂ ಕಂಡು ಹಣವನ್ನು ಶೇಖರಿಸಿಕೊಂಡು ಅದೇ ವರ್ಷದ ಕೊನೆಯಲ್ಲಿ ವಾಪಸ್ಸಾದರು. ಆ ಸಮಯದಲ್ಲಿ ಅವರ ಪತ್ನಿ ಮತ್ತು ತಂದೆ ಬಹು ಕಾಳಜಿಯಿಂದ ದೇವಾಲಯದಲ್ಲಿ ಅರ್ಚನಾದಿಗಳನ್ನು ನಡೆಸುತ್ತಿದ್ದರು. ಶೇಖರಿಸಿದ ಹಣದಿಂದ ಶ್ರೀನಿವಾಸ ದೇವಾಲಯದಲ್ಲೇ ಎಲ್ಲ ಜಾತಿಯ ಮಕ್ಕಳಿಗೆ ಅವಕಾಶ ನೀಡಿ ಅನಾಥಾಲಯವನ್ನು ನಡೆಸತೊಡಗಿದರು. ಆ ಮಕ್ಕಳ ಪೂರ್ಣ ಜವಾಬ್ದಾರಿ ಹೊತ್ತು ಅವರ ಆರೋಗ್ಯ, ವಿದ್ಯಾಭ್ಯಾಸ ಹಾಗೂ ಶಿಸ್ತಿನ ಬೆಳವಣಿಗೆಗಾಗಿ ಒಬ್ಬ ಉಪಾಧ್ಯಾಯರನ್ನು ನೇಮಿಸಿದರು. ಪ್ರತಿ ವರ್ಷವೂ ಅವರ ಒಳ್ಳೆಯ ನಡತೆ ಮತ್ತು ಪಾಠ ಪ್ರವಚನಗಳಿಗನುಸಾರವಾಗಿ ಬಹುಮಾನಗಳನ್ನು ಕೊಟ್ಟು ಪ್ರೋತ್ಸಾಹಿಸಿದರು. ಅದೇ ರೀತಿ ಸಾರ್ವಜನಿಕರ ಅನುಕೂಲಕ್ಕಾಗಿ ಉಚಿತ ವಾಚನಾಲಯ ಮತ್ತು ಪುಸ್ತಕಭಂಡಾರವನ್ನು ೧೮೮೯ರಲ್ಲಿ ಪ್ರಾರಂಭಿಸಿದರು. ಇಷ್ಟೇ ಅಲ್ಲದೆ ಅತ್ಯವಶ್ಯವಿರುವ ಕಡುಬಡವರಿಗಾಗಿಯೂ, ಪ್ರತಿನಿತ್ಯ ಬೆಂಗಳೂರಿಗೆ ಬಂದು ಹೋಗುವ ಯಾತ್ರಿಕರಿಗಾಗಿಯೂ ಮತ್ತು ಸಂನ್ಯಾಸಿಗಳಿಗಾಗಿಯೂ ಊಟ ವಸತಿ ಏರ್ಪಾಟನ್ನು ಮಾಡಿದರು. ಮಿತಭಾಷಿಗಳಾಗಿದ್ದ ಗೋಪಾಲಾಚಾರ್ಲು ಅವರಿಗೆ ಪಾಶ್ಚಾತ್ಯ ಭಾಷೆಗಳಲ್ಲಿಯೂ ಒಳ್ಳೆಯ ಪಾಂಡಿತ್ಯವಿತ್ತು.

    ೩-೧೧-೧೮೯೨ರಂದು ಶ್ರೀನಿವಾಸ ಮಂದಿರಂನ ಏಳ್ಗೆಗಾಗಿ ಒಂದು ಬೃಹತ್ ಸಭೆ ನಡೆಸಿದರು. ಅಂದು ಮುಖ್ಯ ನ್ಯಾಯಾಧೀಶರಾಗಿದ್ದ ಟಿ.ಆರ್.ಎ. ತಂಬುಚೆಟ್ಟಿ, ತುಮಕೂರಿನ ಡಿ.ಸಿ. ಆಗಿದ್ದ ಬಿ.ಕೆ. ವೆಂಕಟವರದಯ್ಯಂಗಾರ್, ಜಿಲ್ಲಾ ನ್ಯಾಯಾಧೀಶರಾದ ಕೃಷ್ಣರಾವ್, ಅಂಡರ್ ಸೆಕ್ರೆಟರಿ ನಾರಾಯಣರಾವ್, ಅಸಿಸ್ಟೆಂಟ್ ಕಮಿಷನರ್ ರಾಮರಾವ್, ಪರಮಶಿವ ಅಯ್ಯರ್ ಮುಂತಾದವರು ಭಾಗವಹಿಸಿದ್ದರು.

    ಬೆಂಗಳೂರಿನಲ್ಲಿ ‘ಮೈಸೂರು ವೃತ್ತಾಂತ ಬೋಧಿನೀ’ ಕನ್ನಡ ವಾರಪತ್ರಿಕೆ ೧೮೫೯ರಿಂದ ಪ್ರಕಟವಾಗುತ್ತಿತ್ತು. ಈ ಪತ್ರಿಕೆ ಹಲವಾರು ಕಾರಣಗಳಿಂದ ಸುಮಾರು ೧೮೯೦ರಲ್ಲಿ ತೊಂದರೆಗೊಳಗಾಯಿತು. ಆಗ ವರ್ತಮಾನ ಪತ್ರಿಕೆಯ ಗಂಧವೇ ಇಲ್ಲದಿದ್ದ ಗೋಪಾಲಾಚಾರ್ಲು ಅವರು ಆ ಪತ್ರಿಕೆಯ ಉಪಸಂಪಾದಕರಾಗಿ ಕೆಲ ವರ್ಷ ಬಹು ಶ್ರಮಪಟ್ಟು ಪತ್ರಿಕೆಯ ಕಾರ್ಯ ನಿರ್ವಹಿಸಿದರು.

    ಕೃಷ್ಣರಾಜ ಒಡೆಯರ್ ಅವರ ಭೇಟಿ

    ಇವರ ಕಾರ್ಯಕಲಾಪಗಳನ್ನು ಕಾಣಲು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಪರಿವಾರಸಮೇತ ೩೧-೧೨-೧೯೦೪ರಂದು ಶ್ರೀನಿವಾಸ ಮಂದಿರಕ್ಕೆ ಭೇಟಿಯಿತ್ತು ಗೋಪಾಲಾಚಾರ್ಲು ಅವರ ಕಾರ್ಯಗಳನ್ನು ಹೊಗಳಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

    ಮಂದಿರದಲ್ಲಿನ ಅನಾಥ ಬಾಲಕರ ವಾಸಸ್ಥಳವು ಮೊದಲು ದೇವಾಲಯದಲ್ಲಿದ್ದು ಅನಂತರ ಮಂದಿರAನ ಎದುರುಗಡೆಯ ಹಳೇ ಕಟ್ಟಡದಲ್ಲಿತ್ತು. ಗೋಪಾಲಾಚಾರ್ಲು ಸೇವಾಕಾರ್ಯಗಳನ್ನು ಮೆಚ್ಚಿದ ಕೃಷ್ಣರಾಜ ಒಡೆಯರ್ ಅವರು ದೇವಾಲಯದ ಹತ್ತಿರ ಇದ್ದ ಖಾಲಿ ನಿವೇಶನವನ್ನು ದೊರಕಿಸಿಕೊಟ್ಟರು.

    ಹೀಗೆ ನಡೆದಿದ್ದ ಶ್ರೀನಿವಾಸ ದೇವಾಲಯ, ಪುಸ್ತಕ ಭಂಡಾರ, ವಾಚನಾಲಯ, ಅನಾಥಾಲಯ ೧೯೦೫ರ ವೇಳೆಗೆ ಬೆಂಗಳೂರು ಪೇಟೆಯಲ್ಲಿ ಬಹು ಪ್ರಸಿದ್ಧಿ ಹೊಂದಿ ಎಲ್ಲರ ಮನೆಮಾತಾಗಿತ್ತು.

    ಮಾತೃ ಮಂದಿರ

    ತಮ್ಮ ಚಟುವಟಿಕೆಗಳ ವಿಸ್ತರಣೆಯ ಮುಂದಿನ ಅಂಗವಾಗಿ ಪತ್ನಿ ಸಿಂಗಮ್ಮನವರ ಸಹಕಾರದೊಂದಿಗೆ ‘ಸ್ತ್ರೀಶಾಖೆ’ಯನ್ನು ಮಹಿಳೆಯರಿಗೋಸ್ಕರ ಪ್ರತ್ಯೇಕವಾಗಿ ಶ್ರೀನಿವಾಸ ಮಂದಿರಂನಲ್ಲೇ ೧೯೦೭ರಲ್ಲಿ ಪ್ರಾರಂಭಿಸಿ ‘ಮಾತೃಮಂದಿರ’ ಎಂದು ಹೆಸರಿಟ್ಟರು. ಬಾಲಕಿಯರಿಗೆ ಸಂಗೀತ, ಕಲೆ, ಹೊಲಿಗೆ, ಕುಶಲ ವಿದ್ಯೆ, ವೃತ್ತಿ ಶಿಕ್ಷಣ, ಬೆತ್ತದ ಕೆಲಸ ಮುಂತಾದವುಗಳಿಗೆ ತರಬೇತಿ ವ್ಯವಸ್ಥೆಮಾಡಿದರು. ಜನಸಮುದಾಯದ ಏಳಿಗೆಗೆ ಸಿಂಗಮ್ಮನವರೂ ವಿಶೇಷವಾಗಿ ಗಮನಹರಿಸುತ್ತಿದ್ದರು. ದಿವಾನ್ ಟಿ. ಆನಂದರಾವ್ ಅವರ ಪತ್ನಿಯಾದ ಸುಂದರಾಬಾಯಿ ಹಾಗೂ ನಗರದ ಅನೇಕ ಗಣ್ಯವ್ಯಕ್ತಿಗಳ ಪತ್ನಿಯರು ಮಾತೃಮಂದಿರದಲ್ಲಿ ಸೇವೆ ಸಲ್ಲಿಸಲು ಮುಂದಾದರು. ಈ ರೀತಿಯ ಮಾತೃಮಂದಿರ ಪ್ರಾರಂಭವಾಗಿದ್ದು ಮೈಸೂರು ಸಂಸ್ಥಾನದಲ್ಲಿ ಇದೇ ಮೊದಲನೆಯದು.

    ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರತವಾಗಿದ್ದ ‘ಶ್ರೀನಿವಾಸ ಮಂದಿರಂ’ ಸಂಸ್ಥೆಯು ಬೆಂಗಳೂರು ನಗರದಲ್ಲಷ್ಟೇ ಅಲ್ಲದೆ ಇಡೀ ಮೈಸೂರು ಸಂಸ್ಥಾನದಲ್ಲಿಯೆ ಮೊಟ್ಟಮೊದಲ ಸೇವಾಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿತ್ತು.

    ಈ ಮಂದಿರದ ಕಾರ್ಯಕರ್ತರು ಶನಿವಾರ-ಭಾನುವಾರಗಳಂದು ಕೈಯಿಂದ ತಳ್ಳುವ ಪೆಟ್ಟಿಗೆ ಗಾಡಿಯೊಂದಿಗೆ ಚಾಮರಾಜಪೇಟೆ, ಬಸವನಗುಡಿ ಮತ್ತು ಮಲ್ಲೇಶ್ವರಂ ಭಾಗದಲ್ಲಿದ್ದ ಅಭಿಮಾನಿಗಳ ಮನೆಗಳಿಗೆ ಹೋಗಿ ದವಸ ಧಾನ್ಯಗಳನ್ನು ಸಂಗ್ರಹಿಸುವುದರ ಜೊತೆಗೆ ಸಂಸ್ಥೆಯ ಖರ್ಚು ವೆಚ್ಚಕ್ಕೆ ಹಾಗೂ ಸಿಬ್ಬಂದಿ ವೇತನಕ್ಕಾಗಿ ಕಾಣಿಕೆಗಳನ್ನು ಸ್ವೀಕರಿಸಿ ತರುತ್ತಿದ್ದರು.

    ಶಾಲಾ ಕಾಲೇಜುಗಳ ಮುಖ್ಯೋಪಾಧ್ಯಾಯರು ಮತ್ತು ಪ್ರಾಂಶುಪಾಲರನ್ನು ಇಲ್ಲಿಗೆ ಆಹ್ವಾನಿಸಿ ಹಿಂದೂಧರ್ಮದ ಅನೇಕ ತತ್ತ್ವಗಳನ್ನು ಇಲ್ಲಿನ ವಿದ್ಯಾರ್ಥಿಗಳಿಗೆ ಬೋಧಿಸುವಂತೆ ಏರ್ಪಾಟು ಮಾಡಿದರು. ಜೊತೆಯಲ್ಲಿ ಸಂಸ್ಕೃತ, ಕನ್ನಡ ಮತ್ತು ಇಂಗ್ಲಿ಼ಷನ್ನು ಗೋಪಾಲಾಚಾರ್ಲು ಅವರು ಬೋಧಿಸುತ್ತಿದ್ದರು.

    ಅನಾಥಾಲಯದ ಪ್ರವೇಶೋತ್ಸವ

    ಅನಾಥಾಲಯಕ್ಕಾಗಿ ನಾಲ್ವಡಿಯವರು ೧೯೦೪ರಲ್ಲಿ ನೀಡಿದ್ದ ಖಾಲಿ ನಿವೇಶನದಲ್ಲಿ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಅವರಿಂದ ದಿನಾಂಕ ೨೭-೧-೧೯೧೩ರಂದು ಬುನಾದಿ ಹಾಕಲ್ಪಟ್ಟು ಕಟ್ಟಡ ಪೂರ್ಣ ಮುಗಿದ ನಂತರ ಅವರ ಅಧ್ಯಕ್ಷತೆಯಲ್ಲಿಯೇ ನೂತನ ಕಟ್ಟಡದ ಪ್ರವೇಶೋತ್ಸವವು ದಿನಾಂಕ ೫-೨-೧೯೧೪ರಂದು ವೈಭವದಿಂದ ನಡೆಯಿತು. ಅಂದು ಯುವರಾಜರು ಮಾತನಾಡುತ್ತ “ನಾಸ್ತಿಕತನ ಹರಡುತ್ತಿರುವ ಈ ಕಾಲದಲ್ಲಿ ಸಮಾಜ ಸೇವೆ ಸೇರಿದಂತೆ ದೇವಸ್ಥಾನ, ಅನಾಥಾಲಯಗಳನ್ನು ಒಳಗೊಂಡ ಇಂಥ ಧರ್ಮ ಕಾರ್ಯವು ಹಿಂದೂ ಸಂಸ್ಕೃತಿಯ ಪ್ರತೀಕ” ಎಂದು ಪ್ರಶಂಸೆ ಮಾಡಿದರು.

    ಶ್ರೀನಿವಾಸ ಮಂದಿರಂನ ೨೯ನೇ ವಾರ್ಷಿಕೋತ್ಸವ ಹಾಗೂ ಶ್ರೀ ರಾಮಾನುಜಾರ್ಯರ ಜನ್ಮ ದಿನೋತ್ಸವವನ್ನು ೨೩-೪-೧೯೧೨ರಂದು ಜನೋಪಕಾರಿ ದೊಡ್ಡಣ್ಣ ಶೆಟ್ಟರ ಹಾಲ್‌ನಲ್ಲಿ ವಿಜೃಂಭಣೆಯಿಂದ ನಡೆಸಲಾಯಿತು. ಅಂದು ಮದರಾಸಿನ ಅಡಿಯಾರ್ ಲೈಬ್ರರಿ ಉಪನಿರ್ದೇಶಕರಾಗಿದ್ದ ಜೋಹನ್ ವಾನ್ ಮೆನನ್ ಅವರು ಮುಖ್ಯಅಥಿತಿಯಾಗಿ ಆಗಮಿಸಿದ್ದು, ಎಫ್.ಜೆ. ರಿಚರ್ಡ್ ಅಧ್ಯಕ್ಷತೆ ವಹಿಸಿದ್ದರು. ಅಂದಿನ ಸಭೆಗೆ ನಗರದ ಅನೇಕ ಗಣ್ಯರು ಆಗಮಿಸಿದ್ದರು. ಚಕ್ರವರ್ತಿ, ಬಿ.ಜೆ. ಕುಮಾರಸ್ವಾಮಿ ನಾಯಕ್, ಚಂಗಯ್ಯಶೆಟ್ಟಿ, ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್, ಎಂ.ಬಿ. ವರದರಾಜ ಅಯ್ಯಂಗಾರ್, ಕಾರಾಪುರ್ ಶ್ರೀನಿವಾಸರಾವ್, ಸಿ.ಬಿ. ಶೇಷಗಿರಿರಾವ್, ಕೆ. ರಾಮಚಂದ್ರರಾವ್, ಎಸ್. ನಾರಾಯಣರಾವ್, ಕೆ.ಎಚ್. ರಾಮಯ್ಯ, ಬಿ. ಸುಬ್ಬಣ್ಣ, ಹಿರಿಯಣ್ಣಯ್ಯ, ಬಿ. ಉಸ್ಮಾನ್‌ಖಾನ್, ಹನುಮಂತಪ್ಪ ಮುಂತಾದವರು ಹಾಜರಿದ್ದರು.

    ಕಸ್ತೂರಿಬಾ ಅವರಿಗೆ ಸನ್ಮಾನ

    ಪ್ರಥಮ ಬಾರಿಗೆ ಗಾಂಧಿಯವರು ಕಸ್ತೂರಿಬಾ ಅವರೊಡನೆ ರೈಲಿನಲ್ಲಿ ದಿನಾಂಕ ೮-೫-೧೯೧೫ ಶನಿವಾರದಂದು ಬೆಂಗಳೂರು ನಗರ ರೈಲ್ವೆ ನಿಲ್ದಾಣದಲ್ಲಿ ಬಂದು ಇಳಿದಾಗ ಗಾಂಧಿಯವರನ್ನು ನಗರದ ಗಣ್ಯವ್ಯಕ್ತಿಗಳು ಸ್ವಾಗತಿಸಿದರೆ, ಶ್ರೀನಿವಾಸಮಂದಿರದ ಮಾತೃಮಂದಿರದ ಸ್ತ್ರೀಯರು ಕಸ್ತೂರಿಬಾ ಅವರಿಗೆ ಹೂಮಾಲೆಗಳನ್ನು ಹಾಕಿ ಸ್ವಾಗತಿಸಿದರು. ಅಂದು ಮಧ್ಯಾಹ್ನ ಕಸ್ತೂರಿಬಾ ಅವರನ್ನು ಶ್ರೀನಿವಾಸ ಮಂದಿರಕ್ಕೆ ಕರೆದುಕೊಂಡು ಹೋಗಿ ಬೆಂಗಳೂರು ಸ್ತ್ರಿÃಯರ ಪರವಾಗಿ ಸಿಂಗಮ್ಮನವರೂ ಸುಂದರಾಬಾಯಿ ಟಿ. ಆನಂದರಾವ್ ಮತ್ತಿತರರೂ ಸನ್ಮಾನಿಸಿದರು.

    ಗೋಪಾಲಾಚಾರ್ಲು ಅವರ ಸಾರ್ವಜನಿಕ ಸುಧಾರಣಾ ಕಾರ್ಯಗಳಿಗೆ ಮೆಚ್ಚಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇವರಿಗೆ ಮೈಸೂರು ಅರಮನೆಯಲ್ಲಿ ನವರಾತ್ರಿ ವೇಳೆಯಲ್ಲಿ ನಡೆದ ದರ್ಬಾರಿನಲ್ಲಿ ದಿನಾಂಕ ೨೦-೧೦-೧೯೧೫ ಬುಧವಾರ ಸಂಜೆ ‘ಜನೋಪಕಾರಿ’ ಎಂಬ ಬಿರುದನ್ನು ನೀಡಿ ಗೌರವಿಸಿದರು.

    ೧೯೧೫ರ ನಂತರ ಪ್ರಾರಂಭವಾದ ಪ್ರಥಮ ಮಹಾಯುದ್ದದ ಸಮಯದಲ್ಲಿ ಮಂದಿರದಲ್ಲಿ ಒಂದು ವಿನೋದಾವಳಿ ಪ್ರದರ್ಶನ ಏರ್ಪಡಿಸಿ, ಇದರಿಂದ ಗಳಿಸಿದ ಹಣವನ್ನು ಯುದ್ಧ ನಿಧಿಗೆ ಅರ್ಪಿಸಿದರು.

    * * *

    ತಮ್ಮ ಜೀವನವನ್ನೇ ಸಮಾಜಕಾರ್ಯಗಳಿಗೆ ಧಾರೆಯೆರೆದ ಗೋಪಾಲಾಚಾರ್ಲುರವರಿಗೆ ಕೊನೆಯ ಒಂದು ವರ್ಷ ಆರೋಗ್ಯವು ಅಷ್ಟು ತೃಪ್ತಿಕರವಾಗಿರಲಿಲ್ಲ. ಆದರೂ ಅನೇಕ ತಿಂಗಳುಗಳ ಕಾಲ ಮಧ್ಯರಾತ್ರಿವರೆಗೂ ಮಂದಿರದ ಕಾರ್ಯಚಟುವಟಿಕೆ ಮತ್ತು ಅಭಿವೃದ್ಧಿ ಚಿಂತನೆಯಲ್ಲಿ ಮುಳುಗಿ ಪತ್ರ-ವ್ಯವಹಾರಾದಿಗಳನ್ನು ನಡೆಸುತ್ತಿದ್ದರು. ತಮ್ಮ ೬೧ನೇ ವಯಸ್ಸಿನಲ್ಲಿ ದಿನಾಂಕ ೨೦-೮-೧೯೧೬ ಭಾನುವಾರದಂದು ದೈವಾಧೀನರಾದರು. ದಿವಾನರೂ ಅಧಿಕಾರಿಗಳೂ, ನಾಟಕ ಶಿರೋಮಣಿ ವರದಾಚಾರ್, ಜನೋಪಕಾರಿ ದೊಡ್ಡಣ್ಣಶೆಟ್ಟಿಯವರು, ಕಲಾಮಂದಿರದ ಅ.ನ. ಸುಬ್ಬರಾವ್, ಪಾರ್ವತಮ್ಮ ಚಂದ್ರಶೇಖರ ಅಯ್ಯರ್ ಮುಂತಾದವರೂ ಈ ಸಂಸ್ಥೆಯನ್ನು ಪೋಷಿಸಿದ ಗಣ್ಯರು ಹಾಗೂ ಅಭಿಮಾನಿಗಳೂ ಶೋಕದಲ್ಲಿ ಮುಳುಗಿದರು.

    ದೀನಬಂಧು ಸಿಂಗಮ್ಮನವರು

    ಪತಿ ಗೋಪಾಲಾಚಾರ್ಲು ಅವರ ಅಗಲಿಕೆಯಿಂದಾಗಿ ಧೃತಿಗೆಡದೆ ಸಿಂಗಮ್ಮನವರು ಪತಿಯ ಹೆಜ್ಜೆಯಲ್ಲೇ ಹೆಜ್ಜೆಯನ್ನಿಟ್ಟು, ಹಿಂದಿನಿಂದ ನಡೆದುಕೊಂಡು ಬಂದಿದ್ದ ಎಲ್ಲ ಕಾರ್ಯಗಳಲ್ಲಿ ಸದಾ ನಿರತರಾದರು. ಪತಿ ಆರಂಭಿಸಿದ್ದ ಕಾರ್ಯಗಳನ್ನು ಅಷ್ಟೇ ಹುರುಪಿನಿಂದ ಇವರ ಪತ್ನಿಯಾದ ಸಿಂಗಮ್ಮನವರು ನಡೆಸಿಕೊಂಡು ಬಂದರು. ಕೆಲಸವೂ ಮೊದಲಿಗಿಂತ ಹೆಚ್ಚಾಯಿತು. ಹುಡುಗರೂ ಹೆಚ್ಚುತ್ತ ಬಂದರು. ಅನಾಥಾಲಯದ ಮಕ್ಕಳಿಗೆ ಮಾತೆಯೋಪಾದಿಯಲ್ಲಿದ್ದು, ಅವರ ಅಭಿವೃದ್ಧಿಗಾಗಿ ಯಜಮಾನರಂತೆ ತಮ್ಮ ಜೀವನವನ್ನು ಸಾಗಿಸುತ್ತ, ಈ ಧರ್ಮಸಂಸ್ಥೆಯ ಆಡಳಿತವನ್ನು ಮುಂದುವರಿಸಿದರು. ಮಂದಿರಂನ ವಿದ್ಯಾರ್ಥಿಗಳನ್ನು ೧೯೧೭ರಲ್ಲಿ ಗೋಪಾಲಾಚಾರ್ಲು ಅವರ ಸಮಕಾಲೀನರು ಹಾಗೂ ಮಹಾದಾನಿಗಳಾಗಿದ್ದ ದೊಡ್ಡಣ್ಣ ಶೆಟ್ಟರು ಸಿಟಿ ಮಾರುಕಟ್ಟೆ ಮುಂಭಾಗದಲ್ಲಿ ಪ್ರಾರಂಭಿಸಿದ್ದ (ಎಸ್.ಎಲ್.ಎನ್. ಧಾರ್ಮಿಕ ಸಂಸ್ಥೆ) ಉಚಿತ ಶೈಕ್ಷಣಿಕ ಮತ್ತು ಕೈಗಾರಿಕಾ ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಿದರು.

    ಅನಾಥಾಲಯದ ಬಾಲಕ, ಬಾಲಕಿಯರ ಶರೀರ ಪೋಷಣೆ, ವಿದ್ಯಾರ್ಜನೆ, ಶುಚಿತ್ವ ಹಾಗೂ ನೈರ್ಮಲ್ಯಗಳಿಗೆ ಹೆಚ್ಚಿನ ಗಮನ ಕೊಡುತ್ತಿದ್ದರು. ಇವರು ತಮ್ಮ ಸ್ವಂತ ದುಡಿಮೆಯಿಂದ ಅತ್ಯಂತ ಅಮೂಲ್ಯವಾದ ಗಿಡಮೂಲಿಕೆಗಳಿಂದ ಹಾಗೂ ಹಸಿರೆಲೆಗಳಿಂದ ತಯಾರಿಸಿದ ‘ವಸಂತ ಮಾಲಿನಿ’ ಎಂಬ ತೈಲವನ್ನು ಅನೇಕ ಜನ ಉಪಯೋಗಿಸಿದರು. ಪತಿಯ ಹಾಗೆ ವಿರಾಗಿಗಳಂತೆ ಕಾವಿವಸ್ತ್ರವನ್ನು ಧರಿಸಿ ಕರದಲ್ಲಿ ಖಾದಿ ಚೀಲವನ್ನೂ, ಚೌಕವೊಂದನ್ನೂ ಹಿಡಿದುಕೊಂಡು ರ‍್ವದಾ ಹಸನ್ಮುಖಿಯಾಗಿ ಶ್ರೀನಿವಾಸ ಮಂದಿರಕ್ಕೆ ಸೇವೆ ಸಲ್ಲಿಸುತ್ತಿದ್ದರು. ಈಕೆ ಹೋಗದ ಮನೆಯಾಗಲಿ, ಸಂಭಾಷಣೆಯನ್ನು ಮಾಡದ ಜನರಾಗಲಿ, ಉಪನ್ಯಾಸವನ್ನು ಮಾಡದ ಸಭೆಯಾಗಲಿ ನಗರದಲ್ಲಿ ಇರಲಿಲ್ಲ ಎಂದೇ ಹೇಳಬಹುದು.

    ಸಿಂಗಮ್ಮನವರು ತಮ್ಮ ವಯಸ್ಸು ಇಳಿಮುಖವಾಗುತ್ತಿರುವುದವನ್ನು ಹಾಗೂ ತಾವು ಸ್ಥಾಪಿಸಿದ ಧರ್ಮಕಾರ್ಯ ಕಲಾಪಗಳು ಹಾಗೂ ಸಂಬಂಧಪಟ್ಟ ಸ್ವತ್ತುಗಳ ಆದಾಯವನ್ನು ಭದ್ರಪಡಿಸುವ ಉದ್ದೇಶದಿಂದ ದಿನಾಂಕ ೨೬-೧-೧೯೨೯ರಲ್ಲಿ ಒಂದು ‘ವಿಲ್’ (ಮರಣ ಶಾಸನ) ಪತ್ರ ಬರೆಯಿಸಿದರು. ಇದಕ್ಕೆ ಬಿ.ವಿ. ಸುಬ್ಬರಾವ್, ವಿ.ಟಿ. ಸೆಟ್ಲೂರ್, ಎಂ. ಚಂಗಯ್ಯಶೆಟ್ಟಿ. ಬೇಲೂರು ಶ್ರೀನಿವಾಸಯ್ಯಂಗಾರ್‌ರವರುಗಳ ಸಹಿ ಇರುತ್ತದೆ. ಹಾಗೆಯೆ ಇದರಲ್ಲಿ ಮುಂದುವರೆದು “ಶ್ರೀನಿವಾಸ ಮಂದಿರದ ಅನಾಥಾಲಯದಲ್ಲಿ ಬೆಳೆದ ಹುಡುಗರು ವಿದ್ಯಾವಂತರಾಗಿ ಭಾರತದಲ್ಲಿ ಹಾಗೂ ಹೊರದೇಶಗಳಲ್ಲಿ ಇದ್ದು, ಈಗ ಹಾಲಿ ಬೆಂಗಳೂರಿನಲ್ಲಿರುವ ಹಳೇ ಹುಡುಗರ ಒಂದು ಸಲಹಾಸಮಿತಿ ಮಾಡಿಕೊಂಡು ಅವರನ್ನು ಸದಸ್ಯರನ್ನಾಗಿ ಮಾಡಿ ಈ ಧರ್ಮನಿರ್ವಾಹಕರ ಕೆಲಸಗಳಲ್ಲಿ ಅವರ ಸಲಹೆ, ಸೂಚನೆಗಳನ್ನು ಕಮಿಟಿಯವರು ತೆಗೆದುಕೊಳ್ಳತಕ್ಕದ್ದು” ಎಂದು ವಿಲ್‌ನಲ್ಲಿ ನಮೂದಿಸಿದ್ದರು.

    ಸಿಂಗಮ್ಮನವರು ತಮ್ಮ ೬೨ನೇ ವಯಸ್ಸಿನಲ್ಲಿ ೧೭-೧-೧೯೩೨ರಂದು ದೈವಾಧೀನರಾದರು.

    ಸಿಂಗಮ್ಮನವರ ಶ್ರಮದಿಂದ ಈ ಸಂಸ್ಥೆಗೆ ೨೫.೦೦೦ ರೂಪಾಯಿಗಳಿಗೂ ಮೇಲ್ಪಟ್ಟು ಪುದುವಟ್ಟು ನಿಧಿ ಕೂಡ ಇತ್ತು. ಅಲ್ಲದೆ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಹಲವು ಎಕರೆ ಖುಷ್ಕಿ ಜಮೀನು ಸಹ ಇತ್ತು ಎಂದು ತಿಳಿದು ಬರುತ್ತದೆ. ಪ್ರಾರಂಭದಿಂದಲೂ ಬೆಂಗಳೂರು ನಗರ ಮುನಿಸಿಪಾಲಿಟಿಯಿಂದ ಅನುದಾನ ಹಾಗೂ ಕುಡಿಯುವ ನೀರು ಸೌಲಭ್ಯ ಪಡೆಯುತ್ತಿತ್ತು. ಇದೇ ರೀತಿ ಮೈಸೂರು ಸರ್ಕಾರದ ಮುಜರಾಯಿ ಇಲಾಖೆಯಿಂದ ಪ್ರಾರಂಭದಿಂದಲೂ ಅನುದಾನ ಪಡೆಯುತ್ತಿತ್ತು. ಅನಂತರ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿತು.

    ನೂತನ ಭವನ

    ತಾವೇ ಸಂಗ್ರಹಿಸಿದ್ದ ಚಂದಾ ಹಣದಿಂದ ಸ್ತ್ರೀಶಾಖೆಯನ್ನು ನಡೆಸಲು ಒಂದು ದಿವ್ಯವಾದ ಭವನವನ್ನು ದೇವಾಲಯದ ಎದುರಿಗೆ ಸಿಂಗಮ್ಮನವರು ಕಟ್ಟಿಸಿದರು. ಹೊಸ ಕಟ್ಟಡದಲ್ಲಿ ಇಂಗ್ಲಿಷ್ ತರಗತಿಗಳನ್ನು ಪ್ರಾರಂಭಿಸಬೇಕೆಂದು ಏರ್ಪಾಟುಗಳನ್ನೆಲ್ಲಾ ಮಾಡಿದ್ದರು. ಇದರ ಉದ್ಘಾಟನೆ ದಿನಾಂಕ ೫-೪-೧೯೩೩ರಂದು ಶ್ರೀಮದ್ಯುವರಾಣಿಯವರಿಂದ ನಡೆಯಿತು.

    ೧೯೩೫ರಲ್ಲಿ ಸರ್ಕಾರದವರು ನೇಮಿಸಿದ ಕಾರ್ಯನಿರ್ವಾಹಕ ಮಂಡಲಿಯ ಮೊದಲನೆಯ ಅಧ್ಯಕ್ಷರು ಬೇಲೂರು ಶ್ರೀನಿವಾಸ ಅಯ್ಯಂಗಾರ್‌ರವರು. ಇವರು ಸುಮಾರು ೧೫ ವರ್ಷಗಳ ಕಾಲ ಅಧ್ಯಕ್ಷರಾಗಿದ್ದು ಈ ಧರ್ಮ ಸಂಸ್ಥೆಯ ಆಡಳಿತವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದರು.

    ಸ್ಮರಣೋತ್ಸವಗಳು

    ೨೫-೧೧-೧೯೩೫ರಲ್ಲಿ ದಿವಾನ್ ಮಿರ್ಜಾ ಇಸ್ಮಾಯಿಲ್‌ರವರು ಸ್ಥಾಪಕರ ಸ್ಮಾರಕೋತ್ಸವದ ಅಧ್ಯಕ್ಷತೆ ವಹಿಸಿದ್ದರು.

    ೧೯೮೮ರಲ್ಲಿ ನೂರಾರು ಹಳೆಯ ವಿದ್ಯಾರ್ಥಿಗಳ ನೆರವಿನೊಂದಿಗೆ ಶತಮಾನೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

    ಈಗ್ಗೆ ೧೪೦ ವರ್ಷಗಳ ಹಿಂದೆಯೇ ಸಮಗ್ರ ಸಮಾಜದ ಉದ್ಧಾರಕ್ಕೋಸ್ಕರ ನಿಃಸ್ವಾರ್ಥ ಸೇವೆ ಹಾಗೂ ಮಹಾತ್ಯಾಗದಿಂದ ಜೀವನಪೂರ್ತ ಶ್ರಮಿಸಿದ ಈ ಸಾರ್ಥಕ ಜೀವಿಗಳು ನಡೆಸಿದ ಶ್ರೀನಿವಾಸ ಮಂದಿರಂ ಧರ್ಮಸಂಸ್ಥೆಯು ಇದುವರೆವಿಗೂ ಸಾವಿರಾರು ಮಂದಿ ಅನಾಥ ಬಾಲಕ ಬಾಲಕಿಯರಿಗೆ ಆಶ್ರಯವಿತ್ತು ಅವರುಗಳನ್ನು ದೇಶದ ಸತ್ಪ್ರಜೆಗಳನ್ನಾಗಿ ಮಾಡಿ ಕೀರ್ತಿ ಪಡೆದಿದೆ.

    ಈಗ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಇಲ್ಲಿನ ಹಳೆಯ ಕಟ್ಟಡಗಳು ಈಗ ವಾಣಿಜ್ಯ ಸಂಕೀರ್ಣವಾಗಿ ಮಾರ್ಪಟ್ಟಿದೆ, ಅನಾಥಾಲಯ, ವಿದ್ಯಾಮಂದಿರ, ವಾಚನಾಲಯ ಗ್ರಂಥಭಂಡಾರ ಯಾವುದೂ ಈಗ ಇರುವುದಿಲ್ಲ. ಗ್ರಂಥಭಂಡಾರದಲ್ಲಿದ್ದ ಅಳಿದುಳಿದ ಗ್ರಂಥಗಳನ್ನು ಕೆಲ ವರ್ಷಗಳ ಹಿಂದೆ ಮೈಸೂರು ಬ್ಯಾಂಕ್ ಸರ್ಕಲ್ಲಿನಲ್ಲಿರುವ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್‌ಗೆ (ICHR) ದಾನ ಮಾಡಲಾಯಿತು.

    ಇಪ್ಪತ್ತನೇ ಶತಮಾನದ ಪ್ರಾರಂಭದ ದಶಕಗಳಲ್ಲಿ ನಗರದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಬಹು ಮುಖ್ಯ ಪಾತ್ರವಹಿಸಿದ್ದ ಶ್ರೀನಿವಾಸ ಮಂದಿರಂ ಸೇವಾ ಸಂಸ್ಥೆ ಬೆಂಗಳೂರು ನಗರದ ಇತಿಹಾಸದಲ್ಲಿ ಚಿರಸ್ಮರಣೀಯವಾಗಿದೆ.

    ಆಕರಗಳು:

    ೧. ‘ಬೆಂಗಳೂರು ದರ್ಶನ’, ಸಂಪುಟ-೨ ಉದಯಭಾನು ಕಲಾ ಸಂಘ. ಮುದ್ರಣ ೨೦೧೬. ಪುಟ-೨೮೭.

    ೨. ಇತಿಹಾಸ ದರ್ಶನ’, ಸಂಪುಟ-೯ ಕರ್ನಾಟಕ ಇತಿಹಾಸ ಅಕಾಡೆಮಿ (ರಿ.), ಬೆಂಗಳೂರು-೧೮, ೧೯೯೪, ಪುಟ ೨೩೩ ರಿಂದ ೨೩೫.

    ೩. ‘ಇತಿಹಾಸ ದರ್ಶನ’, ಸಂಪುಟ-೨೬, ಕರ್ನಾಟಕ ಇತಿಹಾಸ ಅಕಾಡೆಮಿ (ರಿ.) ಬೆಂಗಳೂರು-೧೮, ೨೦೧೧, ಪುಟ ೪೫೮ ರಿಂದ ೪೬೨.

    ೪. ‘ಶ್ರೀ ಶ್ರೀನಿವಾಸ ಮಂದಿರಂ ಧರ್ಮಸಂಸ್ಥೆ’, ಶತಮಾನೋತ್ಸವ ಸಂಚಿಕೆ, ಸಂ: ಕೆ.ವಿ. ವೆಂಕಟನರಸಿಂಹಯ್ಯ, ಬೆಂಗಳೂರು-೦೩, ೧೯೮೮.

    ೫. ‘ತಿರುಮಲೆ ತಾತಾಚರ‍್ಯ ಶರ್ಮರ ಮೈಸೂರು ಸಂಸ್ಥಾನದ ವೃತ್ತ ಪತ್ರಿಕಾ ಇತಿಹಾಸ’, ೨೦೦೬, ಪುಟ-೧೯.

    ೬. ‘A Guide to Bangalore and Mysore Director’, 1905, By J.W. Morris, Page No-93 to 94

    ೭. ‘Karnataka State Gazetteer’, Bangalore District, Chief Editor: Suryanath U. Kamath, 1990, Page No-860

    ೮. ‘ಕಲಾ’ ಮಾಸಪತ್ರಿಕೆ, ಫೆಬ್ರುವರಿ ೧೯೩೨, ಪುಟ-೨೭೦ರಿಂದ ೨೭೨

    ೯. ‘ಜೀವನ’ ಮಾಸಪತ್ರಿಕೆ, ಸಂಪುಟ-೧೧, ಸಂಚಿಕೆ-೧, ಮೇ ೧೯೫೦

    ೧೦. ‘ವಿಶ್ವ ಕರ್ಣಾಟಕ’, ವಾರಪತ್ರಿಕೆ, ಸಂ: ತಿ.ತಾ. ಶರ್ಮ, ೧೯೩೦

    ೧೧. ‘ವೃತ್ತಾಂತ ಪತ್ರಿಕೆ’, ವಾರಪತ್ರಿಕೆ, ೧೯೧೫ ರಿಂದ ೧೯೨೯

    ಸಂಸ್ಥೆಗೆ ಭೇಟಿ ಕೊಟ್ಟ ಕೆಲವು ಮಹನೀಯರ ಅಭಿಪ್ರಾಯಗಳು

    His Highness the Maharaja visited this institution on the 31st December 1904. He was favourably impressed with the general arrangements of the Mandiram. He considers that the objects which the founder has in view and the manner in which he has worked to attain them, most praiseworthy.

    5 January 1905

    Pvt.Sec. to H. H. Maharaja of Mysore

    One cannot fail to notice the broadmindedness evidenced in the choice of books and papers, and one would imagine that such an institution would axcel a healthy educational influence on the people of the neighbourhood.

    24 August 1907

    A.R.Fuller

    Principal, Wesleyan High School, Bangalore city.

    Lady Daly yesterday visited the Srinivasa Mandiram in order to attend the meeting at which the Electric installations, presented by Mrs. Ananda Rao was used for the first time. Lady Daly has always been greatly interested in the admirable work which is so unostentatiously done by Mr and Mrs.Gopalacharlu.

    2 August 1914

    H.Daly

    It gave me much pleasure to visit the institution and to learn about its work. It is carrying out useful work in several directions.

    1941

    K.Changalaraya Reddy

    Chief Minister

    Many institutions in india are neglected after the founder passes away. It is difficult to find a successor who would enter into the spirt of the founder and carry it in the same spirit. What strikes me most in connection with this institution is the devotion with which the present lady superintendent helped her husband founder in his noble work and the greater devotion and enthusiasm with which she is continuing that work after him. This is unique.

    19 April 1921

    D. K. Karve

    Organiser, India
    Women’s University

    It gave me much pleasure to visit the institution and to learn about its work. It is carrying out useful work in several directions.

    1941

    K.Changalaraya Reddy

    Chief Minister

    I am extreamely happy to pay visit to the institution run by the Srinivasa Mandiram Charities. They all bear witness to the nobility of that great benefactor janopakari A. Gopalacharlu of revered memory who toiled hard to serve the people and the country. This institution have all been doing excellent work.

    25 April 1949

    D.H.Chandrashekariya

    Minister for Education

    ಬೆಂಗಳೂರು ನಗರದ ಪ್ರಪ್ರಥಮ ಸೇವಾ ಸಂಸ್ಥೆ  ‘ಶ್ರೀನಿವಾಸ ಮಂದಿರಂ’

  • ಹಳ್ಳಿಯೊಂದರಲ್ಲಿ ಜನಿಸಿ ಅಲ್ಲಿಯೇ ಶಿಕ್ಷಣ ಪಡೆದಿದ್ದ ಲೇಖರಾಮ್, ಆಂಗ್ಲ ಶಿಕ್ಷಣದಿಂದ ವಂಚಿತರಾಗಿದ್ದರಲ್ಲದೆ ಲಾಹೋರ್ನಂತಹ ಸಾಮಾಜಿಕ ಕ್ರಾಂತಿಯ ತವರೂರನ್ನು ಕಂಡಿರಲಿಲ್ಲ. ಆದರೆ ಪರ್ಶಿಯನ್ ಮತ್ತು ಅರಬ್ಬೀ ಭಾಷೆಗಳಲ್ಲಿ ತಮಗಿದ್ದ ಪಾಂಡಿತ್ಯವನ್ನು ಮುಂದಿನ ದಿನಗಳಲ್ಲಿ ಬಹಳ ಪರಿಣಾಮಕಾರಿಯಾಗಿ ಪ್ರಯೋಗಿಸುವಲ್ಲಿ ಸಫಲರಾಗುತ್ತಾರೆ. ೧೮೮೦ರಲ್ಲಿ ಅಜ್ಮೇರದಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರನ್ನು ಭೇಟಿ ಮಾಡುವ ಲೇಖರಾಮ್ ಆನಂತರದಲ್ಲಿ ಆರ್ಯಸಮಾಜದ ಒಬ್ಬ ನಿಷ್ಠಾವಂತ ಕಟ್ಟಾಳಾಗಿ ಪರಿವರ್ತಿತರಾಗುತ್ತಾರೆ. ದಯಾನಂದ ಸರಸ್ವತಿ ಮತ್ತು ಗುರುದತ್ ಮೊದಲಾದವರ ಗುರಿ ಸಾಂಪ್ರದಾಯಿಕ ಹಿಂದು ಮತ್ತು ಕ್ರಿಸ್ತ ಪಾದ್ರಿಗಳಾದರೆ ಪಂಡಿತ ಲೇಖರಾಮ್ ಮಾತ್ರ ತಮ್ಮ ದಾಳಿಗೆ ಇಸ್ಲಾಂ ಅನ್ನು ಗುರಿ ಮಾಡುತ್ತಾರೆ. ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶದಲ್ಲಿ ಹುಟ್ಟಿ ಬೆಳೆದು, ಮುಸ್ಲಿಂ ಅಧಿಕಾರಿಗಳ ಕೆಳಗೆ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದ ಲೇಖರಾಮ್, ಪ್ರತ್ಯಕ್ಷ/ಅಪ್ರತ್ಯಕ್ಷವಾಗಿ ಮುಸ್ಲಿಂ ವಿರೋಧಿಯಾಗಿ ರೂಪಗೊಳ್ಳುತ್ತಾರೆ. ಆರ್ಯಸಮಾಜವನ್ನು ಸೇರಿದ ಪಂಡಿತ ಲೇಖರಾಮ್ರವರು ಗೋಸಂರಕ್ಷಣೆ, ಸರಕಾರೀ ಶಾಲೆಗಳಲ್ಲಿ ಹಿಂದು ಮಾಧ್ಯಮಕ್ಕೆ ಒತ್ತು ನೀಡುವುದು ಮತ್ತು ಅಹ್ಮದೀಯ ಪಂತ ವಿರೋಧಿ ಪ್ರಚಾರಕ್ಕೆ ಆದ್ಯತೆ ನೀಡುತ್ತಾರೆ.

    ಹಿಂದು-ಮುಸಲ್ಮಾನ ಸಮುದಾಯಗಳ ನಡುವೆ ಆಗಿಂದಾಗ್ಗೆ ನಡೆಯುತ್ತಿದ್ದ ಸಂಘರ್ಷಗಳು ಪಂಜಾಬಿನ ಪ್ರಮುಖ ಲಕ್ಷಣಗಳಲ್ಲೊಂದಾಗಿತ್ತು. ಈದ್ ಹಬ್ಬದ ದಿನ ಮುಸ್ಲಿಮರು ಬಲಿಕೊಡುತ್ತಿದ್ದ ಹಸು, ಹಿಂದು ಅಥವಾ ಸಿಖ್ ಸಮುದಾಯದವರು ವಾಸಿಸುತ್ತಿದ್ದ ಪ್ರದೇಶಗಳಲ್ಲಿ ಗೋಮಾಂಸವನ್ನು ಸಾಗಿಸುವುದು, ಹೋಲಿ-ರಂಜಾನ್ ನಂತಹ ಹಬ್ಬದ ದಿನಗಳಲ್ಲಿ ಪರಸ್ಪರರ ಆಚರಣೆಗಳು, ಮುಸ್ಲಿಮರ ಮಸೀದಿಯ ಮುಂದೆ ವಾದ್ಯಗಳೊಂದಿಗೆ ಹೋಗುವ ಹಿಂದುಗಳ ಧಾರ್ಮಿಕ ಮೆರವಣಿಗೆಗಳು, ಅಥವಾ ಮೊಹರಂ ದಿನ ಅವರ ‘ತಾಜಿಯ’ಗಳನ್ನು ಸಾಗಿಸುವಾಗ ತಡೆಯುವ ಅರಳಿಮರದ ಕೊಂಬೆಗಳು, ಮುಸ್ಲಿಮರ ಮೆರವಣಿಗೆಯಲ್ಲಿ ನುಗ್ಗುವ ಬ್ರಾಹ್ಮಣರ ಗೂಳಿ…. ಹೀಗೆ ಪ್ರತಿಯೊಂದು ಚಿಕ್ಕಪುಟ್ಟ ಘಟನೆಯೂ ಕೋಮುಗಲಭೆಗಳಿಗೆ ಸುಲಭವಾದ ಕಿಡಿಯಾಗುತ್ತಿತ್ತು.

    ಇಂತಹ ವಾತಾವರಣದಲ್ಲಿ ೧೮೩೯ರಲ್ಲಿ ಪಂಜಾಬ್‌ನ ಲೂಧಿಯಾನದಲ್ಲಿ ಪಾದಾರ್ಪಣೆ ಮಾಡಿದ ಕ್ರಿಸ್ತ ಮತಪ್ರಚಾರಕರು ಮುಂದಿನ ಹತ್ತು ವರ್ಷಗಳಲ್ಲಿ ಲೂಧಿಯಾನದಿಂದ ಲಾಹೋರ್‌ವರೆಗೆ ಹಬ್ಬುತ್ತಾರೆ. ೧೮೮೦ರ ವೇಳೆಗೆ ಇವರ ಜಾಲ ದೆಹಲಿಯಿಂದ ಉತ್ತರಕ್ಕೆ ಸಿಮ್ಲಾದವರೆಗೆ, ಪಶ್ಚಿಮದಲ್ಲಿ ಅಂಬಾಲಾದಿಂದ ಪೇಶಾವರ್ ವರೆಗೆ, ಲಾಹೋರ್‌ನಿಂದ ಮುಲ್ತಾನ್‌ನ ದಕ್ಷಿಣದವರೆಗೆ, ಪೇಶಾವರದಿಂದ ಡೇರಾ ಘಾಜಿಖಾನ್‌ವರೆಗೆ ಪಸರಿಸುತ್ತದೆ.

    ೧೮೮೧ರಲ್ಲಿ ಕ್ರಿಸ್ತಮತಕ್ಕೆ ಮತಾಂತರಗೊಂಡವರ ಸಂಖ್ಯೆ ೩೯೧೨ ಆಗಿದ್ದರೆ ಮುಂದಿನ ದಶಕದಲ್ಲಿ ೧೯,೦೦೦ ದಾಟುವ ಅದು ೧೯೦೧ರ ವೇಳೆಗೆ ೩೮,೦೦೦ ತಲಪುತ್ತದೆ. ಮತಾಂತರಗೊಂಡವರ ಸಂಖ್ಯೆಯ ದೃಷ್ಟಿಯಿಂದ ಇದನ್ನೇನೂ ಮಹತ್ತ್ವದ ಬೆಳವಣಿಗೆ ಎನ್ನಲಾಗುವುದಿಲ್ಲ. ಆದರೆ ಇದಕ್ಕೆ ಹಿಂದು ಸಮುದಾಯದ ಅಸ್ಪೃಶ್ಯರು ಮತ್ತು ಕ್ರಿಸ್ತ ಶಾಲೆಗಳಲ್ಲಿ ಓದುತ್ತಿದ್ದ ಮೇಲ್ಜಾತಿಯ ವಿದ್ಯಾರ್ಥಿಗಳು ಗುರಿಯಾಗುತ್ತಿದ್ದುದು ಹಿಂದುಗಳಿಗೆ ಕಳವಳವನ್ನುಂಟು ಮಾಡುವ ಸಂಗತಿಯಾಗುತ್ತದೆ.

    ಅಸ್ಪೃಶ್ಯರಲ್ಲಿ ಅನೇಕರು ಈಗಾಗಲೆ ಇಸ್ಲಾಂ ಮತ್ತು ಸಿಖ್ ಮತಕ್ಕೆ ಮತಾಂತರಗೊಂಡಿದ್ದರು. ಆದರೆ ಮೇಲ್ಜಾತಿಯ ಹಿಂದು ಶಿಕ್ಷಿತ ಯುವಕರು ಕ್ರಿಸ್ತ ಮತವನ್ನಪ್ಪುತ್ತಿರುವುದು ಸಮಾಜದ ಪ್ರಾಜ್ಞವರ್ಗಕ್ಕೆ ಆತಂಕಕಾರಿಯಾಗಿ ಪರಿಣಮಿಸುತ್ತದೆ. ಆರ್ಥಿಕ ವಿಕಾಸಕ್ಕೆ ಅತ್ಯಗತ್ಯವೆನಿಸುತ್ತಿದ್ದ ಆಂಗ್ಲರ ಉನ್ನತಶಿಕ್ಷಣದ ಬೆನ್ನೇರಿ ಬಂದ ಮತಾಂತರದ ಪಿಡುಗು ಅವರಿಗೆ ನುಂಗಲಾರದ ತುತ್ತಿನಂತಾಗಿತ್ತು. ಕ್ರಿಸ್ತ ಪಾದ್ರಿಗಳು ತಮ್ಮ ಆಕ್ರಮಣಕಾರಿ ಮತಾಂತರದ ಯುದ್ಧದೊಂದಿಗೆ ಮುದ್ರಣಯಂತ್ರದಂತಹ ಆವಿಷ್ಕಾರಗಳನ್ನು ಭಾರತದಲ್ಲಿ ಪರಿಚಯಿಸಿ ಅವುಗಳನ್ನು ತಮ್ಮ ಮತ ಪ್ರಚಾರಕ ಸಾಹಿತ್ಯ ಮುದ್ರಣಕ್ಕೆ ಬಳಸಿದಾಗ ಅದು ಕ್ರಾಂತಿಕಾರಕ ಬೆಳವಣಿಗೆಗೆ ಹಾದಿಯಾಯಿತು.

    ಪೇಟೆಯ ಹಾದಿಬೀದಿಗಳಲ್ಲಿ ನಿಂತು ಕ್ರಿಸ್ತ ಮತವನ್ನು ಪ್ರಚಾರ ಮಾಡುತ್ತಿದ್ದ ಪಾದ್ರಿಗಳು ಭಾರತದಲ್ಲಿ ಪ್ರಚಲಿತವಿದ್ದ ಧಾರ್ಮಿಕ ಶಾಸ್ತ್ರಾರ್ಥದಲ್ಲಿ ಪಾಲ್ಗೊಳ್ಳತೊಡಗಿದರು. ಶಾಲೆಗಳು, ಆಸ್ಪತ್ರೆ-ದವಾಖಾನೆಗಳು, ಅನಾಥಾಲಯ ಮೊದಲಾದವನ್ನು ಪ್ರಾರಂಭಿಸುವ ಮೂಲಕ ತಮ್ಮ ಬಲೆಯನ್ನು ದೃಢಗೊಳಿಸಿಕೊಂಡರಲ್ಲದೆ ಮನೆಯಿಂದ ಹೊರಬರದ ಮಹಿಳೆಯರನ್ನು ತಲಪಲು ‘ಜನಾನಾ ಸೇವೆ’ಯನ್ನು ಪ್ರಾರಂಭಿಸುತ್ತಾರೆ. ಸರಕಾರಿ ಕೃಪಾಪೋಷಿತ ಕ್ರಿಸ್ತ ಮಿಷನರಿಗಳು ಹಿಂದುಧರ್ಮೀಯರಿಗೆ ಆತಂಕವನ್ನುಂಟು ಮಾಡುವುದರ ಮೂಲಕ ಪಂಜಾಬ್‌ನಲ್ಲಿ ಧಾರ್ಮಿಕ ಪುನರುಜ್ಜೀವನದ ಅಗತ್ಯ ಹೆಚ್ಚಾಗುತ್ತದೆ. ಅವರ ಆತಂಕಕ್ಕೆ ಉತ್ತರಸ್ವರೂಪವಾಗಿ ಆರ್ಯಸಮಾಜ ಕಾಣಿಸಿಕೊಳ್ಳುತ್ತದೆ.

    ೧೮೭೭ರಲ್ಲಿ ಲಾಹೋರ್‌ನಲ್ಲಿ ಪಾದಾರ್ಪಣೆ ಮಾಡಿದ ಮಹರ್ಷಿ ದಯಾನಂದ ಸರಸ್ವತಿಯವರು ಮುಂದಿನ ಹದಿನೈದು ತಿಂಗಳುಗಳಲ್ಲಿ ಪಂಜಾಬ್‌ನಲ್ಲಿ ಆರ್ಯಸಮಾಜದ ಅನೇಕ ಶಾಖೆಗಳನ್ನು ತೆರೆದರಲ್ಲದೆ ಸಾಂಪ್ರದಾಯಿಕ ಹಿಂದುಗಳು ಮತ್ತು ಕ್ರಿಸ್ತ ಮತಪ್ರಚಾರಕರೊಂದಿಗೆ ಅನೇಕ ಬಾರಿ ಶಾಸ್ತ್ರಾರ್ಥಕ್ಕೆ ತೊಡಗುತ್ತಾರೆ. ೧೮೮೩ರಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರು ನಿಧನರಾಗುವ ವೇಳೆಗೆ ಪಂಜಾಬ್‌ನಲ್ಲಿ ಅವರ ಆರ್ಯಸಮಾಜ ಪ್ರಾರಂಭಿಕ ಹಂತದಲ್ಲಿದ್ದ ಆಂದೋಲನವಾಗಿ ಬೆಳೆದುನಿಂತಿತ್ತು.

    ದಯಾನಂದ ಸರಸ್ವತಿಯವರ ನಿಧನದ ಬಳಿಕ ಆರ್ಯ ಸಮಾಜದಲ್ಲಿ ಎರಡು ಮಹತ್ತರ ಬದಲಾವಣೆಗಳಾಗುತ್ತವೆ. ಮೊದಲನೆಯದಾಗಿ ಆರ್ಯಸಮಾಜವನ್ನು ಮುನ್ನಡೆಸುವ ಹೊಣೆ ಅವರ ಮೂವರು ಅನುಯಾಯಿಗಳಾದ ಪಂಡಿತ ಗುರುದತ್, ಪಂಡಿತ ಲೇಖರಾಮ್ ಮತ್ತು ಲಾಲಾ ಮುಂಶಿರಾಮ್ (ಅನಂತರದಲ್ಲಿ ಸ್ವಾಮಿ ಶ್ರದ್ಧಾನಂದ ಆದವರು) ಅವರ ಮೇಲೆ ಬೀಳುತ್ತದೆ. ಲಾಹೋರ್ ಕಾಲೇಜಿನಲ್ಲಿ ಎಂ.ಎ. ಪದವಿಗಾಗಿ ವ್ಯಾಸಂಗ ಮಾಡುತ್ತಿದ್ದ ಪಂಡಿತ ಗುರುದತ್‌ರವರ ಸುತ್ತ ದಯಾನಂದ ಸರಸ್ವತಿಯವರ ಧಾರ್ಮಿಕ-ಸಾಮಾಜಿಕ ಬೋಧನೆಯನ್ನು ಅರಿತುಕೊಳ್ಳಲು ಬಯಸುತ್ತಿದ್ದ ಆರ್ಯಸಮಾಜದ ದೊಡ್ಡದೊಂದು ಗುಂಪು ಸುತ್ತುವರಿದಿರುತ್ತದೆ. ಈ ಗುಂಪಿನಲ್ಲಿ ಆರ್ಯಸಮಾಜ ಮತ್ತು ರಾಜಕೀಯದಲ್ಲಿ ಭಾವೀ ನಾಯಕರಾದ ಲಾಲಾ ಲಜಪತ್‌ರಾಯ್ ಮತ್ತು ಲಾಲಾ ಹಂಸರಾಜ್‌ರವರು ಸೇರಿರುತ್ತಾರೆ. ಪಂಡಿತ ಗುರುದತ್‌ರವರು ತಮ್ಮ ತೀಕ್ಷ್ಣ ಬುದ್ಧಿಮತ್ತೆಯಿಂದ ೧೮೮೫ರಿಂದ ಪ್ರಾರಂಭಿಸಿ ೧೮೯೦ರಲ್ಲಿ ಸಾವನ್ನಪ್ಪುವವರೆಗೆ ಆರ್ಯಸಮಾಜ ಮತ್ತು ದಯಾನಂದ ಸರಸ್ವತಿಯವರ ಚಿಂತನೆಗೆ ಹೊಸತೊಂದು ರೂಪ ಕೊಡಲು ಶ್ರಮಿಸುತ್ತಾರೆ.

    ೧೮೫೬ರಲ್ಲಿ ಜನಿಸಿ ೧೮೮೨ರಲ್ಲಿ ಕಾನೂನು ವ್ಯಾಸಂಗಕ್ಕಾಗಿ ಲಾಹೋರ್ ಸೇರುವ ಮುಂಶಿರಾಮ್ ಪಂಡಿತ ಗುರುದತ್‌ರವರ ನೇತೃತ್ವವನ್ನು ಒಪ್ಪಿಕೊಂಡು ೧೮೮೫ರಲ್ಲಿ ಆರ್ಯಸಮಾಜದ ಸದಸ್ಯರಾಗುತ್ತಾರೆ. ಮುಂದಿನ ಎರಡು ದಶಕಗಳಲ್ಲಿ ಅನೇಕ ಕ್ರಾಂತಿಕಾರಿ ಸಾಮಾಜಿಕ ಆಂದೋಲನಗಳಿಗೆ ನಾಂದಿಹಾಡುವ ಮುಂಶಿರಾಮ್ ತಮ್ಮ ‘ತೀ‍ಕ್ಷ್ಣವಾದ’ದ ಮೂಲಕ ಆರ್ಯಸಮಾಜದ ಪ್ರಚಾರದಲ್ಲಿ ತೊಡಗುತ್ತಾರೆ. ದಸರಾ ಹಬ್ಬದ ಸಮಯದಲ್ಲಿ ಜಲಂಧರದ ಸುತ್ತಮುತ್ತಲ ಹಳ್ಳಿಗಳಲ್ಲಿ ಮತ ಪ್ರಚಾರಕ್ಕೆ ತೊಡಗುವ ಮುಂಶಿರಾಮ್ ಕ್ರಿಸ್ತ ಮತಾಂತರಿಗಳಿಗೆ ಬಹಿರಂಗ ಪಂಥಾಹ್ವಾನವನ್ನು ಎಸೆದು ಶಾಸ್ತ್ರಾರ್ಥಗಳಲ್ಲಿ ಭಾಗವಹಿಸುತ್ತಾರೆ. ೧೮೮೮-೮೯ರಲ್ಲಿ ಅವರು “ಸತ್ ಧರಮ್ ಪ್ರಚಾರಕ್” ಎಂಬ ಉರ್ದು ಪತ್ರಿಕೆ ಮತ್ತು “ದೋಆಬ್ ಉಪದೇಶಕ್ ಮಂಡಲ್” ಎಂಬ ಸಂಸ್ಥೆಯನ್ನು ಪ್ರಾರಂಭಿಸುತ್ತಾರೆ. ಇಸ್ಲಾಂ ಮತ್ತು ಕ್ರಿಸ್ತ ಅನುಯಾಯಿಗಳನ್ನು ಆರ್ಯಸಮಾಜಕ್ಕೆ ಸೇರಿಸಿಕೊಳ್ಳಲು ‘ಶುದ್ಧಿ ಆಂದೋಲನ’ವನ್ನು ಚಾಲನೆ ಮಾಡುತ್ತಾರೆ. ಪಂಡಿತ ಗುರುದತ್ ಮತ್ತು ಮುಂಶಿರಾಮ್‌ರವರ ಇಂತಹ ತೀಕ್ಷ್ಣವಾದದ ಚಟುವಟಿಕೆಗಳು ಆರ್ಯಸಮಾಜದ ಇತರ ಮಂದವಾದಿಗಳ ಅಸಮಾಧಾನಕ್ಕೆ ಎಡೆಮಾಡಿಕೊಡುತ್ತದೆ. ಮಂದವಾದಿಗಳು ಕೇವಲ ಶೈಕ್ಷಣಿಕ ಚಟುವಟಿಕೆಗಳಿಗೆ ಸೀಮಿತಗೊಂಡವರು. ಇವರ ಪರಿಶ್ರಮದಿಂದ ಲಾಹೋರ್‌ನಲ್ಲಿ ತಲೆಯೆತ್ತಿದ ದಯಾನಂದ ಆಂಗ್ಲೋ-ವೇದಿಕ್ ಶೈಕ್ಷಣಿಕ ಸಂಸ್ಥೆ ಮುಂದಿನ ದಶಕಗಳಲ್ಲಿ ಭಾರಿ ಶೈಕ್ಷಣಿಕ ಪ್ರಗತಿಗೆ ಕಾರಣವಾಗುತ್ತದೆ. ಕ್ರಮೇಣ ಲಾಲಾ ಹಂಸರಾಜ್ ಮತ್ತು ಲಜಪತ್‌ರಾಯ್‌ರವರು ಈ ಸಂಸ್ಥೆಯ ಮೇಲೆ ನಿಯಂತ್ರಣ ಸಾಧಿಸಿ ತೀವ್ರವಾದಿಗಳನ್ನು ದೂರ ಮಾಡುವುದರಲ್ಲಿ ಸಫಲರಾಗುತ್ತಾರೆ.

    ಈ ಸಮಯದ ಮೂರನೆಯ ನಾಯಕರಾದ ಪಂಡಿತ ಲೇಖರಾಮ್‌ರವರ ಹಿನ್ನೆಲೆ ಇವರಿಬ್ಬರಿಗಿಂತಲೂ ಭಿನ್ನವಾಗಿದೆ. ಹಳ್ಳಿಯೊಂದರಲ್ಲಿ ಜನಿಸಿ ಅಲ್ಲಿಯೇ ಶಿಕ್ಷಣ ಪಡೆದಿದ್ದ ಲೇಖರಾಮ್, ಆಂಗ್ಲ ಶಿಕ್ಷಣದಿಂದ ವಂಚಿತರಾಗಿದ್ದರಲ್ಲದೆ ಲಾಹೋರ್‌ನಂತಹ ಸಾಮಾಜಿಕ ಕ್ರಾಂತಿಯ ತವರೂರನ್ನು ಕಂಡಿರಲಿಲ್ಲ. ಆದರೆ ಪರ್ಶಿಯನ್ ಮತ್ತು ಅರಬ್ಬೀ ಭಾಷೆಗಳಲ್ಲಿ ತಮಗಿದ್ದ ಪಾಂಡಿತ್ಯವನ್ನು ಮುಂದಿನ ದಿನಗಳಲ್ಲಿ ಬಹಳ ಪರಿಣಾಮಕಾರಿಯಾಗಿ ಪ್ರಯೋಗಿಸುವಲ್ಲಿ ಸಫಲರಾಗುತ್ತಾರೆ. ೧೮೮೦ರಲ್ಲಿ ಅಜ್ಮೇರಾದಲ್ಲಿ ಸ್ವಾಮಿ ದಯಾನಂದ ಸರಸ್ವತಿಯವರನ್ನು ಭೇಟಿ ಮಾಡುವ ಲೇಖರಾಮ್ ಆನಂತರದಲ್ಲಿ ಆರ್ಯಸಮಾಜದ ಒಬ್ಬ ನಿಷ್ಠಾವಂತ ಕಟ್ಟಾಳಾಗಿ ಪರಿವರ್ತಿತರಾಗುತ್ತಾರೆ. ದಯಾನಂದ ಸರಸ್ವತಿ ಮತ್ತು ಗುರುದತ್ ಮೊದಲಾದವರ ಗುರಿ ಸಾಂಪ್ರದಾಯಿಕ ಹಿಂದು ಮತ್ತು ಕ್ರಿಸ್ತ ಪಾದ್ರಿಗಳಾದರೆ ಪಂಡಿತ ಲೇಖರಾಮ್ ಮಾತ್ರ ತಮ್ಮ ದಾಳಿಗೆ ಇಸ್ಲಾಂ ಅನ್ನು ಗುರಿ ಮಾಡುತ್ತಾರೆ. ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶದಲ್ಲಿ ಹುಟ್ಟಿ ಬೆಳೆದು, ಮುಸ್ಲಿಂ ಅಧಿಕಾರಿಗಳ ಕೆಳಗೆ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದ ಲೇಖರಾಮ್, ಪ್ರತ್ಯಕ್ಷ/ಅಪ್ರತ್ಯಕ್ಷವಾಗಿ ಮುಸ್ಲಿಂ ವಿರೋಧಿಯಾಗಿ ರೂಪಗೊಳ್ಳುತ್ತಾರೆ. ಆರ್ಯಸಮಾಜವನ್ನು ಸೇರಿದ ಪಂಡಿತ ಲೇಖರಾಮ್‌ರವರು ಗೋ-ಸಂರಕ್ಷಣೆ, ಸರಕಾರೀ ಶಾಲೆಗಳಲ್ಲಿ ಹಿಂದಿ ಮಾಧ್ಯಮಕ್ಕೆ ಒತ್ತು ನೀಡುವುದು ಮತ್ತು ಅಹ್ಮದೀಯ ಪಂತ ವಿರೋಧಿ ಪ್ರಚಾರಕ್ಕೆ ಆದ್ಯತೆ ನೀಡುತ್ತಾರೆ.

    ೧೮೮೧ರ ಸುಮಾರಿಗೆ ಪಂಡಿತ ಲೇಖರಾಮ್ ಪೇಶಾವರದ ಆರ್ಯಸಮಾಜದ ಒಬ್ಬ ಪ್ರಮುಖ ನಾಯಕರಾಗಿದ್ದರು. ಪೊಲೀಸ್ ಸೇವೆಯಲ್ಲಿದ್ದ ಅವರು ೧೮೮೪ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಆರ್ಯಸಮಾಜದ ಮುಖವಾಣಿಯಾಗಿದ್ದ ‘ಆರ್ಯ ಗೆಜೆಟ್’ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಲು ಮುಂದಾಗುತ್ತಾರೆ. ಲೇಖರಾಮ್‌ರವರು ‘ಆರ್ಯ ಗೆಜೆಟ್’ ಪತ್ರಿಕೆಯನ್ನು ಇಸ್ಲಾಂ ಮತ ಹಾಗೂ ಪ್ರವಾದಿ ಮಹಮ್ಮದರನ್ನು ಟೀಕಿಸಲು ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದರು ಎಂದು ಆಪಾದಿಸಲಾಗುತ್ತದೆ. ೧೮೫೭ರ ಕ್ರಾಂತಿಯ ಬಳಿಕ ಮುಘಲ್ ದೊರೆ ಬಹಾದುರ್ ಶಾರವರ ಪದಚ್ಯುತಿ, ಮುಘಲ್ ಸಾಮ್ರಾಜ್ಯದ ಅಂತ್ಯದಿಂದ ದಿಕ್ಕೆಟ್ಟುಹೋಗಿದ್ದ ಮುಸ್ಲಿಂ ಸಮುದಾಯ ಆರ್ಯಸಮಾಜ ನಡೆಸುತ್ತಿದ್ದ ಮತೀಯ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿರಲಿಲ್ಲ. ಇಸ್ಲಾಂ ಅನ್ನು ತಮ್ಮ ಸ್ವಂತ ಆಸ್ತಿ ಎಂದು ಭಾವಿಸುತ್ತಿದ್ದ ಮುಲ್ಲಾಗಳು ಚಿಕ್ಕದೊಂದು ಪ್ರತಿಭಟನೆಯನ್ನೂ ಮಾಡಲಾಗದೆ ಕೈಚೆಲ್ಲಿ ಕುಳಿತಿದ್ದ ಕಾಲವದು. ಇದರಿಂದ ಉತ್ತೇಜಿತಗೊಂಡ ಲೇಖರಾಮ್ ಪ್ರವಾದಿ ಮತ್ತು ಕುರಾನಿನ ವಿರುದ್ಧ ಬಿಡಿಬೀಸಾಗಿ ತಮ್ಮ ಪ್ರಚಾರವನ್ನು ಮುಂದುವರಿಸುತ್ತಾರೆ. ಇಲ್ಲಿಂದ ಪಂಡಿತ ಲೇಖರಾಮ್ ಮತ್ತು ಮಿರ್ಜಾ ಅಹ್ಮದ್‌ರವರ ನಡುವಿನ ವೈಯಕ್ತಿಕ ಹಗೆತನ ಪ್ರಾರಂಭಗೊಳ್ಳುತ್ತದೆ.

    ಕಾದಿಯಾಂನ ಹಜ್ರತ್ ಮಿರ್ಜಾ ಗುಲಾಂ ಅಹ್ಮದ್ ಎಂಬಾತ ಅಹ್ಮದೀಯ ಮುಸ್ಲಿಂ ಸಮುದಾಯದ ಸಂಸ್ಥಾಪಕರಾಗಿದ್ದಾರೆ. ಮೊಹಮ್ಮದ್ ಪೈಗಂಬರರ ನಂತರ ತಾನೇ ಅಲ್ಲಾನ ಪ್ರವಾದಿ ಎಂದು ಕರೆದುಕೊಳ್ಳುವ ಹಜ್ರತ್ ಮಿರ್ಜಾ ಗುಲಾಂ ಅಹ್ಮದ್ ಭಗವಂತನ ಅನುಗ್ರಹಕ್ಕೆ ಒಳಗಾಗುತ್ತಿದ್ದು ಅದನ್ನು ಅವರು ಬಯಸಿ ಬರುವ ಭಕ್ತರಿಗೆ ತೋರಿಸುವವರಾಗಿದ್ದರು. ಇವರ ಇಂತಹ ಭಗವದ್ ಪ್ರೇರಣೆಯಿಂದ ಪ್ರಭಾವಿತರಾಗಿದ್ದ ಮುಸಲ್ಮಾನರು ಮಾತ್ರವಲ್ಲದೆ ಹಿಂದು ಮತ್ತು ಕ್ರಿಸ್ತ ಸಮುದಾಯದವರೂ ಹಜ್ರತ್‌ರನ್ನು ಪರಸ್ಪರ ಅಂತಿಮಗತಿಶಾಸ್ತ್ರ (eschatology) ಗ್ರಂಥಗಳಲ್ಲಿ ಉಲ್ಲೇಖಿಸಿರುವ ಅವತಾರಗಳಲ್ಲಿ ಕಾಣಲು ತವಕದಿಂದಿರುತ್ತಾರೆ. ಅಂದಿನ ದಿನಗಳಲ್ಲಿ ಬೀದಿಗಳಲ್ಲಿ ಮತಪ್ರಚಾರ ಬಹಳ ವ್ಯಾಪಕವಾಗಿ ಪ್ರಚಲಿತವಾಗಿದ್ದು ಇಬ್ಬರು ಭಿನ್ನಮತೀಯರು ಬೀದಿಗಳಲ್ಲಿ ವಾದ-ವಾಗ್ವಾದದ ಶಾಸ್ತ್ರಾರ್ಥದಲ್ಲಿ ತೊಡಗಿ ಅಂತ್ಯದಲ್ಲಿ ತಾವೇ ಗೆದ್ದುದಾಗಿ ತೀರ್ಮಾನಿಸಿಕೊಳ್ಳುತ್ತಿದ್ದ ಕಾಲವದು. ಇಂತಹ ವಾದ-ವಾಗ್ವಾದಗಳು ಸಹಜವಾಗಿ ಬಹುತೇಕ ಪರಸ್ಪರ ಅಪಮಾನಜನಕ, ಅವಹೇಳನಕಾರಿ ಜಗಳಗಳಲ್ಲಿ ಪರ್ಯವಸಾನವಾಗುತ್ತಿದ್ದವು. ಆದರೆ ಹಜ್ರತ್ ಮಿರ್ಜಾ ಗುಲಾಂ ಅಹ್ಮದ್ ಇದಕ್ಕೊಂದು ಅಪವಾದವಾಗಿದ್ದರು. ಅವರು ಭಕ್ತರನ್ನು ತಮ್ಮ ಬಳಿ ಕರೆಸಿಕೊಂಡು ಭಗವತ್ ಪ್ರೇರಣೆಯಿಂದ ಆತನ ಕೃಪೆಗೆ ಪಾತ್ರರಾಗಬೇಕೆಂದು ಬೋಧಿಸುತ್ತಿದ್ದರು. ಅವರನ್ನು ನಂಬಿ ಬರುತ್ತಿದ್ದ ಸಹಸ್ರಾರು ಅನುಯಾಯಿಗಳು ಭಗವತ್ ಪ್ರೇರಣೆಯಿಂದ ಧನ್ಯರಾಗಿದ್ದಾರೆ. ಅಹ್ಮದೀಯ ಪಂತ ಮತ್ತು ಆರ್ಯಸಮಾಜದಲ್ಲಿ ಬಹಳಷ್ಟು ಸಾಮ್ಯಗಳಿವೆ ಎಂದು ಕೆನ್ನೆತ್ ಜೋನ್ಸ್ ಬರೆಯುತ್ತಾರೆ. ಆರ್ಯಸಮಾಜದಂತೆ ಅಹ್ಮದೀಯರೂ ಸಾಂಪ್ರದಾಯಿಕ ಇಸ್ಲಾಮನ್ನು ಆಧುನಿಕೀಕರಿಸಲು ಪ್ರಯತ್ನಿಸುತ್ತಿದ್ದರು. ಕ್ರಿಸ್ತ ಮತಾಂತರಿಗಳನ್ನು ಎದುರುಹಾಕಿಕೊಳ್ಳಲು ಹಿಂಜರಿಯುತ್ತಿರಲಿಲ್ಲ. ಮಿರ್ಜಾ ಗುಲಾಂ ಅಹ್ಮದ್‌ರವರು ತಮ್ಮನ್ನು ತಾವೇ ಇಸ್ಲಾಂನ ಕೊನೆಯ ಪ್ರವಾದಿ ಮತ್ತು ಕ್ರಿಸ್ತರ ಮಸೀಯ ಎಂದು ಕರೆದುಕೊಳ್ಳುತ್ತಾರೆ. ಮಿರ್ಜಾ ಅಹ್ಮದ್‌ರವರು ೧೮೭೯ರಲ್ಲಿ ಜನರನ್ನು ಮತಾಂತರಿಸಲು ಪ್ರಾರಂಭಿಸಿದರಾದರೂ ೧೮೮೦ರ ದಶಕದ ಅಂತ್ಯದವರೆಗೆ ಅದು ಪ್ರಭಾವಕಾರಿಯಾಗಿ ಬೆಳೆಯಲಿಲ್ಲ. ಅವರು ತಮ್ಮ ಆಕ್ರಮಣಕಾರಿ ಮತಾಂತರದ ಧೋರಣೆಯಿಂದ ಕ್ರಿಸ್ತ ಹಾಗೂ ಆರ್ಯಸಮಾಜದ ಕೆಂಗಣ್ಣಿಗೆ ಗುರಿಯಾದುದರಲ್ಲಿ ಅಚ್ಚರಿಯೇನಿಲ್ಲ.

    ಹಜ್ರತ್ ಅಹ್ಮದ್‌ರವರು ಬೋಧಿಸುತ್ತಿದ್ದ ಇಸ್ಲಾಂನಲ್ಲಿ ಹುಳುಕನ್ನು ಕಂಡುಹಿಡಿಯಲು ಲೇಖರಾಮ್ ೧೮೮೬ರಲ್ಲಿ ಕಾದಿಯಾಂಗೆ ಭೇಟಿ ನೀಡುತ್ತಾರೆ. ಅದೊಂದು ಅವಸರದ ಭೇಟಿಯಾಗಿತ್ತು. ಅವರನ್ನು ಭೇಟಿಯಾದ ಹಜ್ರತ್ ಗುಲಾಂ ಅಹ್ಮದ್‌ರವರು ಲೇಖರಾಮ್ ಗಳಿಸುತ್ತಿದ್ದುದಕ್ಕಿಂತಲೂ ಎರಡರಷ್ಟು ಆದಾಯ ತಾವು ನೀಡುವುದಾಗಿಯೂ ಇನ್ನೂ ಕೆಲದಿನಗಳ ಕಾಲ ಅಲ್ಲಿ ಉಳಿದು ಭಗವತ್ ಅನುಗ್ರಹವನ್ನು ಕಾಣುವಂತೆ ಒತ್ತಾಯಿಸುತ್ತಾರೆ. ಇದಕ್ಕೆ ಲೇಖರಾಮ್ ಸಿದ್ಧರಿರಲಿಲ್ಲ. ಹಜ್ರತ್ ಮಿರ್ಜಾ ಗುಲಾಂ ಅಹ್ಮದ್‌ರವರು ಎರಡು ಗ್ರಂಥಗಳ ರಚನೆಯಲ್ಲಿ ತೊಡಗಿದ್ದರು. ‘ಬ್ರಹೈನ್ ಇ ಅಹ್ಮದೀಯ’ (Brahain I Ahmadiyya) ಎಂಬ ಪುಸ್ತಕ ಇಸ್ಲಾಂನ ಹಿರಿಮೆಯನ್ನು ಸಾರುವುದಾಗಿದ್ದರೆ ‘ಸುರ್ಮ ಚಸ್ಮೆ ಆರ್ಯ’ (Surma Chasme Arya) ಎಂಬ ಕೈ ಪುಸ್ತಕ ಆರ್ಯರ ಕಣ್ಣು ತೆರೆಸಲೆಂದು ಬರೆಯಲಾಗಿತ್ತು.

    ಇದಕ್ಕುತ್ತರವಾಗಿ ಲೇಖರಾಮ್‌ರವರು ಬರೆದ ‘ತಕ್ಜೀಬ್ ಇ ಬುರಾಹಿನ್ ಅಹ್ಮದೀಯ’ (Takzeeb e Burahin Ahmadiyya) ಅಹ್ಮದೀಯರ ಸುಳ್ಳುಗಳ ಕಂತೆ ಎಂಬ ಪುಸ್ತಕದಲ್ಲಿ ಪ್ರವಾದಿ ಮೊಹಮ್ಮದ್ ಮತ್ತು ಹಜ್ರತ್ ಅಹ್ಮದ್‌ರನ್ನು ಅತೀವವಾಗಿ ನಿಂದಿಸಲಾಗುತ್ತದೆ. ಇದರಲ್ಲಿ ಬಳಸಲಾದ ಕೀಳುಮಟ್ಟದ ಕೊಳಕುಭಾಷೆಯನ್ನು ಒಬ್ಬ ಸಾಮಾನ್ಯ ಬರಹಗಾರನೂ ಬಳಸಲು ಇಚ್ಛಿಸುವುದಿಲ್ಲ ಎಂದು ಲೇಖಕ ಸೈಯದ್ ಹಸ್ನತ್ ಅಹ್ಮದ್ ಆಪಾದಿಸುತ್ತಾರೆ. ಇದರಿಂದ ಮನನೊಂದ ಹಜ್ರತ್ ಅಹ್ಮದ್ ಖಡ್ಗದ ಬದಲಿಗೆ ತಮ್ಮ ಲೇಖನಿಯ ಸಹಾಯದಿಂದ ‘ಇಸ್ಲಾಂನ ಯುದ್ಧ’ವನ್ನು ಘೋಷಿಸುತ್ತಾರೆ. ತಮ್ಮ ಇದುವರೆಗಿನ ಮತೀಯ ಅವಹೇಳನಕಾರಿ ಚಟುವಟಿಕೆಗಳಿಂದ ಮನತಣಿಯದ ಆರ್ಯ ಗೆಜೆಟ್ ೧೮೮೬ರ ಜುಲೈ ೨೭ರಂದು ಅಹ್ಮದ್ ಮುಂದಿನ ಮೂರು ವರ್ಷಗಳಲ್ಲಿ ಸಾವನ್ನಪ್ಪುತ್ತಾರೆ ಎಂದು ಸಾರುವ ಪ್ರಚೋದನಕಾರಿ ಕೈ ಪತ್ರವೊಂದನ್ನು ಪ್ರಕಟಿಸುತ್ತದೆ. ಅದೇ ವರ್ಷದ ಡಿಸೆಂಬರ್ ೩ರಂದು ಹಜ್ರತ್ ಮಿರ್ಜಾ ಗುಲಾಂ ಅಲಿಯವರನ್ನು ಕೊಲೆಗೈಯುವುದಾಗಿ ಬೆದರಿಸುವ ಅನಾಮಧೇಯ ಪತ್ರವೊಂದು ತಲಪುತ್ತದೆ. ಪತ್ರವನ್ನು ಬರೆದವರು ಯಾರು ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗದಂತೆ ಮಾಡಲು ಚಿಕ್ಕ ಮಗುವಿನ ಕೈ ಬರಹವನ್ನು ಬಳಸಲಾಗಿತ್ತಾದರೂ ಪತ್ರದ ಭಾಷೆ ಮಾತ್ರ ಈಗಾಗಲೆ ಪ್ರಕಟವಾಗಿದ್ದ ಕೈಪತ್ರದ ಭಾಷೆಗೆ ಹೋಲಿಕೆಯಾಗುವಂತಿತ್ತು.

    ತಮ್ಮ ಪ್ರಚಾರವನ್ನು ಮುಂದುವರಿಸುವ ಪಂಡಿತ ಲೇಖರಾಮ್‌ರವರು ‘ಹುಜ್ಜತ್ ಉಲ್ ಇಸ್ಲಾಂ’ ಮತ್ತು ‘ಖಾಬ್ತೇಹ್ ಅಹ್ಮದೀಯ’ (Hujjat-ul-Islam and Khabteh-Ahmadiyya) ಎಂಬ ಮತ್ತೆರಡು ಪ್ರಚೋದನಕಾರಿ ಪುಸ್ತಕಗಳನ್ನು ಬರೆಯುತ್ತಾರೆ. ಎರಡನೆಯ ಪುಸ್ತಕದ ೩೨೪ನೇ ಪುಟದಲ್ಲಿ ಆತ ತಮ್ಮೊಂದಿಗೆ ಶಾಸ್ತ್ರಾರ್ಥಕ್ಕಾಗಿ ಬರುವಂತೆ ಹಜ್ರತ್ ಮಿರ್ಜಾ ಅಹ್ಮದ್‌ರವರು ನೀಡಿದ ಪಂಥಾಹ್ವಾನವನ್ನು ಸ್ವೀಕರಿಸುತ್ತ “ನಾಲ್ಕು ವೇದಗಳು ಪರಮ ಪವಿತ್ರ ಗ್ರಂಥಗಳಾಗಿವೆ. ಹುಟ್ಟು ಸಾವುಗಳಿಲ್ಲದ ಆತ್ಮ ಚಿರಾಯುವಾಗಿದೆ. ಭಗವಂತನು ಎಂದೂ ಯಾರೊಬ್ಬರ ಪಾಪವನ್ನು ಕ್ಷಮಿಸುವುದಿಲ್ಲ. ಇದಕ್ಕಾಗಿ ನಾನು ಮತ್ತೊಬ್ಬರ ಮಧ್ಯಸ್ಥಿಕೆಯಲ್ಲಿ ನಂಬಿಕೆ ಹೊಂದಿಲ್ಲ. ಎಲ್ಲ ಭಗವತ್ ಪ್ರೇರಣೆಗಳು ಆರ್ಯಧರ್ಮದಿಂದಲೇ ಲಭ್ಯವಾಗಿದ್ದು ಅದೊಂದು ವಿಶ್ವಗುರುವಾಗಿದೆ. ಆರ್ಯಧರ್ಮದ ಛತ್ರಛಾಯೆಯ ಹೊರಗೆ ಬರುತ್ತಾರೆ ಎನ್ನಲಾಗುವ ಒಂದುನೂರಾ ಇಪ್ಪತ್ತನಾಲ್ಕು ಸಾವಿರ ಪ್ರವಾದಿಗಳಲ್ಲಿ ನನಗೆ ನಂಬಿಕೆಯಿಲ್ಲ. ತೋರಾಹ್, ಬೈಬಲ್ ಮತ್ತು ಕುರಾನ್‌ಗಳು ಮನುಷ್ಯನ ಸುಳ್ಳು ಸೃಷ್ಟಿಗಳಾಗಿದ್ದು ಲಾಲಸೆ, ಮೂರ್ಖತನ ಅಥವಾ ಖಡ್ಗದ ಮೇಲೆ ಆಧಾರಿತವಾಗಿವೆ” ಎಂದು ಬರೆಯುತ್ತಾರೆ.

     ತಮ್ಮ ಜೀವಿತಕಾಲದಲ್ಲಿ ಪಂಡಿತ ಲೇಖರಾಮ್ ಒಟ್ಟಾರೆ ೩೨ ಪುಸ್ತಕಗಳನ್ನು ರಚಿಸಿರುತ್ತಾರೆ. ಮೇಲೆ ಉಲ್ಲೇಖಿಸಲಾದ ಪುಸ್ತಕಗಳಲ್ಲದೆ ಅವರು ‘ನುಷ್ಕ ಎ ಖಬ್ತ್ ಎ ಅಹ್ಮದೀಯ’ (Nushka e Khabt e Ahmadiya – ಅಹ್ಮದೀಯರ ಹುಚ್ಚುತನ), ‘ರದ್ದ್ ಎ ಖಿಲಾತ್ ಎ ಇಸ್ಲಾಂ’ (Radd e Khilaat e Islam – ಇಸ್ಲಾಮಿನ ಗೌರವ ನಿಲುವಂಗಿಯ ನಿರಾಕರಣೆ), ‘ಇಬ್ತಲ್ ಎ ಬಶರ್ತ್ ಅಹ್ಮದೀಯ’ (Ibtal e Bashart Ahmadiya – ಅಹ್ಮದೀಯರ ಹೇಳಿಕೆಗಳಿಗೆ ಪ್ರತ್ಯುತ್ತರ) ಎಂಬ ಕೃತಿಗಳನ್ನೂ ರಚಿಸಿದ್ದಾರೆ. ಆದರೆ ಅವರ ಇಸ್ಲಾಂವಿರೋಧಿ ಪುಸ್ತಕಗಳಲ್ಲಿ ಇಸ್ಲಾಮನ್ನು ಜಿಹಾದ್ ಮೂಲಕ ಸಂಪತ್ತು, ಸ್ತ್ರೀಯರು-ಮಕ್ಕಳು, ಗುಲಾಮರನ್ನು ಗಳಿಸುವ ಒಂದು ಹಿಂಸಾತ್ಮಕ, ದಬ್ಬಾಳಿಕೆಯ ಮತವೆಂದು ವರ್ಣಿಸುವ ‘ಜಿಹಾದ್ – ಮೊಹಮ್ಮದೀಯ ಮತದ ತಳಹದಿ’ ಬಹಳ ಮಹತ್ತ್ವದ್ದಾಗಿದೆ. ವಿಶ್ವದಾದ್ಯಂತ ಅದರಲ್ಲೂ ಮುಖ್ಯವಾಗಿ ಅದು ಭಾರತದಲ್ಲಿ ನಡೆಸಿದ ಕಗ್ಗೊಲೆ ಮತ್ತು ವಿನಾಶದ ಇತಿಹಾಸವನ್ನು ಬಿಚ್ಚಿಡುವ ಅವರ ಪುಸ್ತಕ ಮುಸ್ಲಿಮರನ್ನು ಕೆರಳುವಂತೆ ಮಾಡಿತ್ತು. ಲೇಖರಾಮ್ ತಮ್ಮ ಇಂತಹ ಕೃತಿಗಳಿಂದ ಸಾಂಪ್ರದಾಯಿಕ, ಅಹ್ಮದೀಯ ಹಾಗೂ ಸುಧಾರಣಾವಾದಿ ಮುಸಲ್ಮಾನರ ಕೆಂಗಣ್ಣಿಗೆ ಗುರಿಯಾಗುತ್ತಾರೆ. ಮುಂಬಯಿ ಮತ್ತು ಲಾಹೋರ್‌ಗಳ ನ್ಯಾಯಾಲಯಗಳಲ್ಲಿ ಅವರ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಿದರೆ ಮುಸ್ಲಿಂ, ಸಿಖ್ ಮತ್ತು ಕ್ರಿಸ್ತರ ಪತ್ರಿಕೆಗಳಲ್ಲಿ ಅವರ ಮೇಲೆ ಅವಿರತ ದಾಳಿ ಮುಂದುವರಿಯುತ್ತದೆ. ಇಸ್ಲಾಮನ್ನು ಕುರಿತು ಅವರು ಪ್ರಯೋಗಿಸುತ್ತಿದ್ದ ಭಾಷೆ ಆ ಸಮುದಾಯವನ್ನು ಕೆರಳುವಂತೆ ಮಾಡಿತ್ತು. ೧೮೯೬ರಲ್ಲಿ ಅನೇಕ ಮುಸಲ್ಮಾನರು ಸೇರಿ ನ್ಯಾಯಾಲಯದಲ್ಲಿ ಅವರ ವಿರುದ್ಧ ನೀಡಲಾದ ದೂರನ್ನು ನ್ಯಾಯಾಲಯ ವಜಾ ಮಾಡುತ್ತದೆ. ಆದರೆ ಇಂತಹ ಯಾವ ಬೆದರಿಕೆಗಳಿಗೂ ಬಗ್ಗದ ಲೇಖರಾಮ್‌ರವರನ್ನು ಮಣಿಸುವ ಒಂದೇ ಹಾದಿ ಎಂದರೆ ಅವರನ್ನು ಹಿಂಸೆಯಿಂದ ನಿವಾರಿಸುವುದೆಂಬುದನ್ನು ಮನಗಂಡ ವಿರೋಧಿಗಳು ೧೮೯೭ರ ಮಾರ್ಚ್ ೬ರಂದು ಅವರನ್ನು ದೈಹಿಕವಾಗಿ ಮುಗಿಸುತ್ತಾರೆ.

    * * *

    ಈ ಪ್ರಕರಣದಲ್ಲಿ ಪಂಡಿತ ಲೇಖರಾಮ್ ಮತ್ತು ಹಜ್ರತ್ ಮಿರ್ಜಾ ಅಹ್ಮದ್ ನಡುವೆ ನಡೆದಿದ್ದ ‘ಭವಿಷ್ಯವಾಣಿ’ಗಳ ಕಾದಾಟ ಮಹತ್ತ÷್ವದ ಪಾತ್ರ ವಹಿಸುತ್ತದೆ. ೧೮೮೬ರ ಫೆಬ್ರುವರಿ ೨೦ರಂದು ಸಾವನ್ನಪ್ಪುತ್ತಾರೆ ಎಂಬ ಭವಿಷ್ಯವನ್ನು ನುಡಿದಿದ್ದ ಹಜ್ರತ್ ಮಿರ್ಜಾ ಅಹ್ಮದ್‌ರು ಅದನ್ನು ೧೮೯೩ರ ಫೆಬ್ರುವರಿ ೨೦ರಂದು ಪುನರುಚ್ಚರಿಸುತ್ತಾರೆ.

    ೧೮೮೬ರ ಜುಲೈ ೨೭ರಂದು ಅಹ್ಮದ್ ಮುಂದಿನ ಮೂರು ವರ್ಷಗಳಲ್ಲಿ ಕಾಲರಾದಿಂದ ಸಾವನ್ನಪ್ಪುತ್ತಾರೆ ಎಂಬ ಭವಿಷ್ಯವಾಣಿಯನ್ನು ಆರ್ಯ ಗೆಜೆಟ್‌ನಲ್ಲಿ ಪ್ರಕಟಿಸಿದ್ದಾಗಿತ್ತು. ೧೮೯೩ರ ಫೆಬ್ರ‍್ರುವರಿ ೨೦ರಂದು ಹಜ್ರತ್ ಅಹ್ಮದ್, ಲೇಖರಾಮ್ ಅಂದಿನಿಂದ ಮುಂದಿನ ಆರು ವರ್ಷಗಳೊಳಗೆ ಈದ್ ಹಬ್ಬದ ದಿನಗಳಲ್ಲಿ ಕೊಲ್ಲಲ್ಪಡುತ್ತಾರೆ ಎಂದು ಭಗವಂತ ತಮಗೆ ತಿಳಿಸಿದುದಾಗಿ ನುಡಿಯುತ್ತಾರೆ. “ಇಸ್ಲಾಂ ವಿರುದ್ಧ ಲೇಖರಾಮ್‌ರ ದಾಳಿಗನುಗುಣವಾಗಿ ಅವರ ಶಿಕ್ಷೆಯೂ ಕಠೋರವಾಗಿರುತ್ತದೆ; ಅವರ ಸಾವು ಯಾವುದೇ ಕಾಯಿಲೆಯಿಂದ ಸಂಭವಿಸದೆ ಅವರ ಎಲ್ಲೆಮೀರಿದ ನಡಾವಳಿ ಅವರನ್ನು ವಿಚಿತ್ರ ಸದ್ದನ್ನು ಮಾಡುವ ಒಂದು ಅರೆ ಸತ್ತ ಕರುವಿನಂತೆ ಮಾಡುತ್ತದೆ” ಎಂಬುದಾಗಿ ಭಗವಂತ ತಮಗೆ ತಿಳಿಸಿದ್ದಾನೆ ಎಂದು ತಮ್ಮ ಪುಸ್ತಕ “ಕರಾಮಾತ್ ಉಸ್ ಸಾದಿಕೀನ್” (Karamat-us-Sadiqeen)ನಲ್ಲಿ ಸಾರುತ್ತಾರೆ. ಆದರೆ ಇದಕ್ಕೆ ಕಿವಿಗೊಡದ ಲೇಖರಾಮ್ ನಿರಾತಂಕವಾಗಿ ತಮ್ಮ ಇಸ್ಲಾಂ/ಪ್ರವಾದಿ ಮೊಹಮ್ಮದ್ ವಿರೋಧಿ ಚಟುವಟಿಕೆಗಳನ್ನು ಮುಂದುವರಿಸುತ್ತಾರೆ. “ನಿರಂತರವಾಗಿ ತಮ್ಮ ಕಟುವಾದ ಭಾಷೆಯಿಂದ ಲೇಖರಾಮ್ ಹಚ್ಚಿಸಿದ ಹಿಂಸೆಯ ಕಿಡಿ ಅಂತ್ಯದಲ್ಲಿ ಹಜ್ರತ್ ಅಹ್ಮದ್ ಭವಿಷ್ಯವಾಣಿಯನ್ನು ನಿಜವೆಂದು ರೂಪಿಸುವಲ್ಲಿ ಪರ್ಯವಸಾನವಾಯಿತು.’’

     ಕೆಲವರು ಹಜ್ರತ್ ಭವಿಷ್ಯವಾಣಿಯನ್ನು ಒಂದು ‘ಕಾಕತಾಳೀಯ’ವೆಂದು ಹೀಗಳೆದಾಗ ಹಜ್ರತ್ “ಶಕ್ತಿಯಿದ್ದರೆ ಪಂಡಿತ ಲೇಖರಾಮ್ ಸಹಿತ ತಮ್ಮ ಬಗ್ಗೆ ಇಂತಹದ್ದೊಂದು ಭವಿಷ್ಯವಾಣಿಯನ್ನು ನುಡಿಯಲಿ” ಎಂದು ಸವಾಲು ಹಾಕುತ್ತಾರೆ. ಇದೊಂದು ಸುಲಭದ ಮಾರ್ಗವಾಗಿತ್ತು. ಏಕೆಂದರೆ ಆಗಿನ್ನೂ ಮೂವತ್ತು ವರ್ಷದ ಯುವಕನಾಗಿದ್ದ ಲೇಖರಾಮ್, ಐವತ್ತು ವರ್ಷದ ವಯಸ್ಸನ್ನು ದಾಟಿದ್ದ ಹಜ್ರತ್ ಅಹ್ಮದ್‌ರವರು ಇನ್ನು ಹತ್ತು ವರ್ಷಗಳಲ್ಲಿ ಕೊನೆಗಾಣುತ್ತಾರೆ ಎಂದು ಭವಿಷ್ಯ ನುಡಿದರೂ ಅದು ಸತ್ಯವಾಗುವ ಸಾಧ್ಯತೆ ಇತ್ತು. ಮೂವತ್ತು ವರ್ಷದ ವ್ಯಕ್ತಿಯ ಸಾವನ್ನು ಇನ್ನು ಆರು ವರ್ಷಗಳಲ್ಲಿ ನಿರೀಕ್ಷಿಸುವುದಕ್ಕಿಂತಲೂ ಅರವತ್ತು ವರ್ಷದ ವ್ಯಕ್ತಿಯ ಸಾವನ್ನು ನಿರೀಕ್ಷಿಸುವುದು ಸುಲಭವಾಗಿತ್ತು. ಇಂತಹ ಟೀಕೆಗಳ ಬಾಯಿ ಮುಚ್ಚಿಸಲು ಮತ್ತೊಂದು ಪುಸ್ತಕವನ್ನು ಬರೆಯುವುದರಲ್ಲಿ ತೊಡಗಿದ್ದ ಹಜ್ರತ್ ಅಹ್ಮದ್ ೧೮೯೩ರ ಏಪ್ರಿಲ್ ೨೩ರಂದು ಮತ್ತೊಂದು ಭವಿಷ್ಯವಾಣಿಯನ್ನು ನುಡಿಯುತ್ತಾರೆ.

    ತಮ್ಮ ‘ಬರಕತುದೂವ’ (Barakatudooa) ಎಂಬ ಪುಸ್ತಕದಲ್ಲಿ ‘ಲೇಖರಾಮ್ ಪೇಶಾವರಿಯ ಬಗ್ಗೆ ಮತ್ತೊಂದು ಸುದ್ದಿ’ ಎಂಬ ಶೀರ್ಷಿಕೆಯಲ್ಲಿ “ಇಂದು ಎಂದರೆ ೧೮೯೩ರ ಏಪ್ರಿಲ್ ೨ರಂದು ಮುಂಜಾನೆ ನಾನು ತೂಕಡಿಸುತ್ತಿದ್ದೆ. ನಾನೊಂದು ವಿಶಾಲವಾದ ಮನೆಯಲ್ಲಿದ್ದಂತೆ ಕಂಡುಬಂದಿತು. ಇದ್ದಕ್ಕಿದ್ದಂತೆ ದೈತ್ಯಾಕಾರದ ಭೀಕರ ವ್ಯಕ್ತಿಯೊಬ್ಬ ನನ್ನ ಮುಂದೆ ನಿಂತಂತೆ ಕಂಡಿತು. ಆತನ ಮುಖವನ್ನು ಅವಲೋಕಿಸಿದ ನನಗೆ ಆತನಲ್ಲಿ ಬೇರೊಂದು ಸೃಷ್ಟಿಯ ಲಕ್ಷಣಗಳು ಕಂಡುಬರುತ್ತವೆ. ಆತನೊಬ್ಬ ಮಾನವನಾಗಿರದೆ ದೇವಮಾನವನೋ ಎಂಬ ಭಾವ ಉದಯಿಸಿತು. ಆತ ನನ್ನ ಮುಖವನ್ನು ನೋಡುತ್ತ ‘ಆ ಲೇಖರಾಮ್ ಎಲ್ಲಿದ್ದಾನೆ?’ ಎಂದು ಕೇಳುತ್ತಾನೆ. ಆತ ಲೇಖರಾಮ್‌ನ ಹೆಸರಿನೊಂದಿಗೆ ಮತ್ತೊಂದು ಹೆಸರನ್ನು ಹೇಳಿದನಾದರೂ ಆ ಎರಡನೆಯ ಹೆಸರು ನನ್ನ ಸ್ಮೃತಿಯಲ್ಲಿ ಉಳಿಯಲಿಲ್ಲ. ಈತನನ್ನು ಭಗವಂತನೇ ಲೇಖರಾಮ್‌ನನ್ನು ಶಿಕ್ಷಿಸಲು ಕಳುಹಿಸಿದ್ದಾನೆ ಎಂಬುದು ನನಗೆ ಥಟ್ಟನೆ ಹೊಳೆಯಿತು. ಆ ಮತ್ತೊಬ್ಬ ವ್ಯಕ್ತಿಯ ಬಗ್ಗೆ ನಾನು ಈಗಾಗಲೇ ಒಂದು ಕರಪತ್ರವನ್ನು ಹೊರಡಿಸಿದ್ದೇನೆ ಎಂಬ ಅಂಶ ನನಗೆ ಹೊಳೆಯಿತು’’ ಎಂದು ವಿಶದೀಕರಿಸುತ್ತಾರೆ. ಇದಾದ ಐದು ತಿಂಗಳುಗಳ ನಂತರ ಎಂದರೆ ೧೮೯೩ರ ಆಗಸ್ಟ್ ೨೪ರಂದು ಹಜ್ರತ್ ಮತ್ತೊಂದು ದೃಶ್ಯವನ್ನು ಕಂಡಿರುವುದಾಗಿ ತಿಳಿಸುತ್ತಾರೆ. ತಮ್ಮ ಪುಸ್ತಕ ‘ಕರಾಮಾತ್ ಉಸ್ ಸಾದಿಕೀನ್’ (Karamat-us-Sadiqeen)ನಲ್ಲಿ “ಭಗವಂತನು ನನಗೆ ಮತ್ತೊಂದು ಸಿಹಿ ಸುದ್ದಿಯನ್ನು ಕರುಣಿಸಿ ಈದ್ ಹಬ್ಬದ ಸಮೀಪದಲ್ಲಿ ನಾನದನ್ನು ಕಾಣಲಿದ್ದೇನೆ ಎಂದು ತಿಳಿಸಿದ್ದಾನೆ. ಭಗವಂತ ಮತ್ತು ಪ್ರವಾದಿಯವರನ್ನು ತನ್ನ ಅಶ್ಲೀಲ ಭಾಷೆಯಿಂದ ಹೀಗಳೆಯುತ್ತಿರುವ ಲೇಖರಾಮ್ ಪೇಶಾವರಿ ಎಂಬ ಶತ್ರುವಿನ ವಿರುದ್ಧ ನನ್ನ ಪ್ರಾರ್ಥನೆಯನ್ನು ಮನ್ನಿಸಿ ಆತ ಇನ್ನು ಆರು ವರ್ಷಗಳಲ್ಲಿ ಸಾವನ್ನಪ್ಪಲಿದ್ದಾನೆ ಎಂದು ಭರವಸೆ ನೀಡಿದ.’’

    ಮೇಲ್ಕಂಡ ಭವಿಷ್ಯವಾಣಿಯಿಂದ ನಾಲ್ಕು ಅಂಶಗಳು ಸ್ಪಷ್ಟಗೊಳ್ಳುತ್ತವೆ. ೧. ಲೇಖರಾಮ್ ಒಂದು ಮಾರಣಾಂತಿಕ ವಿಪತ್ತನ್ನು ಎದುರಿಸಲಿದ್ದಾರೆ. ೨. ಇದು ಮೊದಲ ಭವಿಷ್ಯವಾಣಿ ನುಡಿದ ದಿನದಿಂದ (೧೮೯೩ ಫೆಬ್ರುವರಿ ೨೦) ಮುಂದಿನ ಆರು ವರ್ಷಗಳೊಳಗೆ ಜರುಗಲಿದೆ. ೩. ಇದು ಈದ್ ಹಬ್ಬದ ದಿನಗಳಲ್ಲಿ ನಡೆಯಲಿದೆ ೪. ಲೇಖರಾಮ್ (ಮೋಸೆಸ್‌ನ ಯಹೂದಿಗಳ) ಅರೆಸತ್ತ ಕರುವಿನಂತೆ ವಿನಾಶವನ್ನು ಎದುರಿಸಲಿದ್ದಾನೆ.

    ಪಂಜಾಬ್‌ನ ಮುಸಲ್ಮಾನರು ೧೮೯೭ರ ಮಾರ್ಚ್ ೬ರಂದು ಈದ್ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಅಂದು ಲೇಖರಾಮ್ ಲಾಹೋರ್ ನಗರದ ಮಧ್ಯಭಾಗದಲ್ಲಿರುವ ವಾಚ್ಚುವಾಲಿ ಬೀದಿಯಲ್ಲಿದ್ದ ತಮ್ಮ ಮನೆಯಲ್ಲಿದ್ದರು. ಅವರೊಂದಿಗೆ ಅಂದಿನ ದಿನಗಳಲ್ಲಿ ಸಂಸ್ಕೃತ ಕಲಿಯಲು ಬಂದಿದ್ದ ಶಿಷ್ಯನೊಬ್ಬ ಅವರ ಮನೆಯ ಕೋಣೆಯಲ್ಲಿರುತ್ತಾನೆ. ಒಂದು ಸಂಜೆ ಲೇಖರಾಮ್‌ರವರ ತಾಯಿ ಮತ್ತು ಪತ್ನಿ ಮನೆಯ ಹೊರಗಿನ ಅಂಗಳದಲ್ಲಿರುವಾಗ ಇದ್ದಕ್ಕಿದ್ದಂತೆ ಚೀತ್ಕರಿಸುವ ಸದ್ದು ಕೇಳಿಬರುತ್ತದೆ. ಗಾಬರಿಗೊಂಡ ತಾಯಿ ಮತ್ತು ಪತ್ನಿಯರಿಬ್ಬರೂ ಮನೆಯೊಳಕ್ಕೆ ಧಾವಿಸಿದಾಗ ಕೋಣೆಯಲ್ಲಿ ಲೇಖರಾಮ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಹೊಟ್ಟೆಗೆ ಚಾಕುವಿನ ಇರಿತದಿಂದಾದ ಗಾಯದಿಂದ ತಮ್ಮ ಕರುಳು ಹೊರಬೀಳದಂತೆ ಹಿಡಿದುಕೊಂಡಿದ್ದ ಅವರು ವಿಲವಿಲ ಒದ್ದಾಡುತ್ತಿದ್ದರು. ಅವರ ಶಿಷ್ಯನಂತೆ ವೇಷ ಧರಿಸಿದ್ದ ಕೊಲೆಗಾರ ಮಾತ್ರ ಅಲ್ಲಿರಲಿಲ್ಲ. ಮನೆಗಿದ್ದ ಒಂದೇ ಬಾಗಿಲಿನಿಂದ ಕೊಲೆಗಾರ ಓಡಿಹೋದದ್ದನ್ನು ತಾವು ಗಮನಿಸಲಿಲ್ಲ ಎಂದು ಲೇಖರಾಮ್‌ರವರ ತಾಯಿ ಮತ್ತು ಪತ್ನಿ ಇಬ್ಬರೂ ತಿಳಿಸುತ್ತಾರೆ. ‘ಶುದ್ಧೀಕರಣ’ಕ್ಕಾಗಿ ತಮ್ಮ ಬಳಿ ಬಂದಿದ್ದ ವ್ಯಕ್ತಿಯೇ ತಮ್ಮನ್ನು ಇರಿದದ್ದಾಗಿ ಲೇಖರಾಮ್ ತಮ್ಮ ಸಾವಿನ ಹೇಳಿಕೆಯನ್ನು ನೀಡುತ್ತಾರೆ.

    ಕೊಲೆಗಾರನ ರಹಸ್ಯ ಆಳವಾಗುತ್ತಿದ್ದಂತೆ ಸ್ಥಳೀಯ ಪತ್ರಿಕೆಗಳಲ್ಲಿ ವಾದ-ವಿವಾದಗಳ ಸುಳಿಗಳು ಸುತ್ತಿಕೊಳ್ಳತೊಡಗಿದವು. ಇರಿತದ ಸಮಯದಲ್ಲಿ ಲೇಖರಾಮ್ ಬೆತ್ತಲೆ ಇದ್ದರೆಂದು ಬರೆಯುವ ‘ರಹ್ಬಾರ್ ಇ ಹಿಂದ್’ (Rahbar-i-Hind) ಎಂಬ ಲಾಹೋರ್‌ನ ಪತ್ರಿಕೆಯೊಂದು ಮತ್ತೊಬ್ಬ ಮಹಿಳೆಯೊಂದಿಗೆ ಅವರಿಗಿದ್ದ ಅಕ್ರಮ ಸಂಬಂಧವೇ ಅವರ ಕೊಲೆಗೆ ಕಾರಣ ಎಂದು ಬರೆಯುತ್ತದೆ. ಆದರೆ ಲೇಖರಾಮ್ ಸಂಧ್ಯಾವಂದನೆಗಾಗಿ ಅರೆ ಬೆತ್ತಲೆ ಎಂದರೆ ಮೈ ಮೇಲಿನ ಅಂಗವಸ್ತ್ರವನ್ನು ತೆಗೆದಿದ್ದರೆಂಬುದು ವಾಸ್ತವ ಸಂಗತಿ ಇರಬಹುದೆ? ತಮ್ಮ ಮನೆಯ ಮಹಡಿಯ ಮೇಲೆ ಸಂಧ್ಯಾವಂದನೆ ಮುಗಿಸಿದ ಲೇಖರಾಮ್ ತಮ್ಮ ಆಯಾಸವನ್ನು ನೀಗಿಸಲು ಎರಡೂ ತೋಳುಗಳನ್ನು ಮೇಲಕ್ಕೆತ್ತಿ ಮೈಯನ್ನು ಹಿಂದಕ್ಕೆ ಬಾಗಿಸಿ ಮೈ ಮುರಿಯುತ್ತಿದ್ದಾಗ ಮರುದಿನ ಎಂದರೆ ಭಾನುವಾರದಂದು ಇಸ್ಲಾಂನಿಂದ ಹೊಸತಾಗಿ ಶುದ್ಧೀಕರಣಗೊಳ್ಳಲಿರುವ ಶಿಷ್ಯ ಅವರ ಬೊಜ್ಜು ಹೊಟ್ಟೆಗೆ ತನ್ನ ಕೈಯ್ಯಲ್ಲಿದ್ದ ಹರಿತವಾದ ಚೂರಿಯನ್ನು ತೂರಿಸುತ್ತಾನೆ. ಅಚ್ಚರಿಯ ಸಂಗತಿಯೆಂದರೆ ಲೇಖರಾಮ್‌ರಂತಹ ಖ್ಯಾತ ವ್ಯಕ್ತಿಯ ಜೊತೆ ಮೂರು ವಾರಗಳಿಂದ ಓಡಾಡುತ್ತಿದ್ದ ಈ ಆಷಾಢಭೂತಿ ಶಿಷ್ಯನ ಹೆಸರು ಲೇಖರಾಮ್ ಪತ್ನಿ, ತಾಯಿಯೂ ಸೇರಿದಂತೆ ಯಾರಿಗೂ ತಿಳಿದಿರಲಿಲ್ಲ.

    ಪಂಡಿತ ಲೇಖರಾಮ್‌ರ ಅಮಾನುಷ ಕೊಲೆ ಆರ್ಯ ಸಮಾಜದ ಇತರ ಕಾರ್ಯಕರ್ತರಲ್ಲಿ ತಳಮಳ ಹಾಗೂ ಭೀತಿಯನ್ನುಂಟು ಮಾಡುತ್ತದೆ. ಅವರೆಲ್ಲರ ಕಣ್ಣುಗಳು ಈಗ ಹಜ್ರತ್ ಮಿರ್ಜಾ ಅಹ್ಮದ್‌ರವರತ್ತ ತಿರುಗುತ್ತವೆ. ತಮ್ಮ ಭವಿಷ್ಯವಾಣಿಯನ್ನು ನಿಜ ಮಾಡಲು ಹಜ್ರತ್, ಪಂಡಿತ ಲೇಖರಾಮ್‌ರವರ ಕೊಲೆಯನ್ನು ಮಾಡಿಸಿದ್ದಾರೆ ಎಂಬ ಆರೋಪ ದಟ್ಟವಾಗಿ ಕೇಳಿಬರತೊಡಗಿತು. ಲೇಖರಾಮ್‌ರಿಗೆ ಒದಗಿದ ಸ್ಥಿತಿ ತಮಗಾರಿಗೂ ಉಂಟಾಗದಂತೆ ಎಚ್ಚರ ವಹಿಸಬೇಕೆಂಬ ಕಿವಿಮಾತು ಎಲ್ಲರಿಗೂ ಹೇಳಲಾಯಿತು. ೧೮೯೩ರಲ್ಲಿ ಹಜ್ರತ್ ಮಾಡಲಾಗಿದ್ದ ಭವಿಷ್ಯವಾಣಿಯಲ್ಲಿ ಮುಂದಿನ ಆರು ವರ್ಷಗಳಲ್ಲಿ ಎಂದರೆ ೧೮೯೯ರವರೆಗೆ ಲೇಖರಾಮ್‌ರ ಜೀವಕ್ಕೆ ಅಪಾಯ ಒದಗುವ ಸಂಭವವಿದ್ದುದರಿAದ ತಮ್ಮ ಭವಿಷ್ಯವಾಣಿಯ ಸತ್ಯಾಸತ್ಯತೆಯನ್ನು ಪರೀಕ್ಷಿಸಲು ಇನ್ನೂ ಎರಡು ವರ್ಷಗಳ ಕಾಲಾವಕಾಶ ಇದ್ದುದರಿಂದ ಹಜ್ರತ್ ಕೊಲೆಗೈದಿರುವ ಸಾಧ್ಯತೆ ಕಂಡುಬರುವುದಿಲ್ಲ ಎಂಬ ವಾದ ಎಲ್ಲೆಡೆ ಪ್ರಾರಂಭಗೊಳ್ಳುತ್ತದೆ. ಆರ್ಯಸಮಾಜದವರ ಆಪಾದನೆಗಳನ್ನು ಪರಿಶೀಲಿಸಲು ಪೊಲೀಸರು ಹಜ್ರತ್ ಅಹ್ಮದ್‌ರ ಮನೆಯ ಮೇಲೆ ದಾಳಿ ಮಾಡುತ್ತಾರೆ. ಆದರೆ ಅವರಿಗೆ ಯಾವ ಸಾಕ್ಷ್ಯಾಧಾರಗಳೂ ಲಭ್ಯವಾಗಲಿಲ್ಲ.

    ಆರ್ಯಸಮಾಜದವರು ಇಷ್ಟಕ್ಕೆ ಸುಮ್ಮನಾಗಲಿಲ್ಲ. ಲೇಖರಾಮ್‌ರ ಕೊಲೆಯ ಭವಿಷ್ಯವಾಣಿಯನ್ನು ನುಡಿದಿದ್ದ ಹಜ್ರತ್ ಈಗ ಅವರ ಕೊಲೆಗಾರ ಯಾರೆಂಬುದನ್ನು ತಮ್ಮ ಭಗವಂತನನ್ನು ಕೇಳಿ ಜಗತ್ತಿಗೆ ತಿಳಿಸಲಿ ಎಂದು ಸವಾಲನ್ನೆಸೆಯುತ್ತಾರೆ. ಸರಕಾರ ಕೊಲೆಗಾರನ ಬಗ್ಗೆ ಸುಳಿವು ನೀಡಿದವರಿಗೆ ೨೦,೦೦೦ ರೂಪಾಯಿ ಬಹುಮಾನವನ್ನು ಘೋಷಿಸುತ್ತದೆ. ಆನಂತರದಲ್ಲಿ ಬಹುಮಾನದ ಮೊತ್ತವನ್ನು ಹೆಚ್ಚಿಸಲಾಯಿತಲ್ಲದೆ ಕೊಲೆಗಾರ ಸ್ವತಃ ಬಂದು ಶರಣಾದರೆ ಆತನಿಗೆ ಕ್ಷಮಾದಾನ ನೀಡುವ ಆಶ್ವಾಸನೆಯನ್ನೂ ನೀಡಲಾಯಿತು. ಇದರ ಮುಖ್ಯ ಉದ್ದೇಶ ಕೊಲೆಗಾರನಿಗೆ ಶಿಕ್ಷೆ ನೀಡುವುದಾಗಿರದೆ ಹಜ್ರತ್ ಗುಲಾಮ್ ಅಜ್ಮದ್ ಮುಖಕ್ಕೆ ಮಸಿ ಬಳೆಯುವುದಾಗಿತ್ತಲ್ಲದೆ ಅದೊಂದು ದೈವಪ್ರೇರಿತ ಕಾರ್ಯವಾಗಿರದೆ ಬಹಳ ಎಚ್ಚರಿಕೆಯಿಂದ ಹೆಣೆಯಲಾಗಿದ್ದ ಒಂದು ಷಡ್ಯಂತ್ರ ಎಂದು ನಿರೂಪಿಸುವುದಾಗಿತ್ತು.

    ಪಂಡಿತ ಲೇಖರಾಮ್‌ರ ಕೊಲೆಗೆ ಪ್ರತೀಕಾರವಾಗಿ ಲಾಹೋರ್, ಅಮೃತಸರ್, ಬಟಾಲ ಮತ್ತು ಗುಜ್ರನ್ವಾಲಗಳ ಕೆಲವು ವ್ಯಕ್ತಿಗಳು ಸೇರಿ ರಹಸ್ಯ ಷಡ್ಯಂತ್ರವೊಂದನ್ನು ರಚಿಸುತ್ತಾರೆ. ಅದರ ಪ್ರಕಾರ ೨೦,೦೦೦ ರೂಪಾಯಿಗಳನ್ನು ನೀಡಿ ಒಬ್ಬ ಕೊಲೆಗಾರನನ್ನು ಬಾಡಿಗೆಗೆ ತೆಗೆದುಕೊಂಡು ಆತನ ಮೂಲಕ ಹಜ್ರತ್ ಅಹ್ಮದ್ ಕೊಲೆ ಮಾಡುವ ಉದ್ದೇಶ ಅವರದಾಗಿತ್ತು. ೧೮೯೭ರ ಮಾರ್ಚ್ ೧೮ರ ಸಂಚಿಕೆಯಲ್ಲಿ ‘ಅಫ್ತಾಬ್ ಇ ಹಿಂದ್’ ಎಂಬ ಪತ್ರಿಕೆಯೊಂದರಲ್ಲಿ ಬಶೀಶರ್ ದಾಸ್ (Basheshar Das – ಬಿಶ್ವೇಶ್ವರದಾಸ್) ಎಂಬಾತ ‘ಮಿರ್ಜಾ ಕಾದಿಯಾನಿ ಖಬರ್‌ದಾರ್’ ಎಂಬ ಶೀರ್ಷಿಕೆಯಲ್ಲಿ ಬರೆದ ಲೇಖನ ಪ್ರಕಟವಾಗುತ್ತದೆ. ‘ರಾಹ್ಬರ್ ಹಿಂದ್’ ಎಂಬ ಮತ್ತೊಂದು ಪತ್ರಿಕೆಯಲ್ಲಿ ಮಾರ್ಚ್ ೧೫ರಂದು ಇಂತಹ ಮತ್ತೊಂದು ಎಚ್ಚರಿಕೆ ಪ್ರಕಟಗೊಳ್ಳುತ್ತದೆ. ಇಂತಹ ಬೆದರಿಕೆಗಳ ಹೊರತಾಗಿಯೂ ಮುಂದಿನ ಹನ್ನೊಂದು ವರ್ಷಗಳವರೆಗೆ ಅಹ್ಮದ್ ತಮ್ಮ ಜೀವನವನ್ನು ಸಾಫಲ್ಯಪೂರ್ಣವಾಗಿ ಜೀವಿಸುತ್ತಾರೆ. ಅಹ್ಮದ್‌ಗೆ ಸುಮಾರು ೧೭ ವರ್ಷಗಳ ಹಿಂದೆಯೇ ಇಂತಹ ಪ್ರಯತ್ನಗಳು ನಡೆಯಲಿವೆ ಎಂಬ ವಿಚಾರ ತಿಳಿದಿತ್ತಾದರೂ ಭಗವಂತ ಅವರನ್ನು ರಕ್ಷಿಸಲಿದ್ದಾನೆ ಎಂಬ ಭರವಸೆಯೂ ದೊರಕಿತು.

    ಪೊಲೀಸರ ವಿಚಾರಣೆಯ ಸಂದರ್ಭದಲ್ಲಿ ಲೇಖರಾಮ್ ಕೊಲೆಗೆ ಕೆಲದಿನಗಳ ಮೊದಲು ಅವರ ವಿಳಾಸವನ್ನು ತಿಳಿಸುವಂತೆ ಮುಂಬಯಿಯಿಂದ ತಂತಿ ಸಂದೇಶವೊಂದು ಬಂದಿತ್ತು ಎಂಬ ಮತ್ತೊಂದು ಆಸಕ್ತಿಕರ ಸಂಗತಿ ಹೊರಬರುತ್ತದೆ. ಒಂದೆಡೆ ಹಜ್ರತ್ ಮಿರ್ಜಾ ಅಹ್ಮದ್ ಭವಿಷ್ಯವಾಣಿ, ಮತ್ತೊಂದೆಡೆ ಇಂತಹ ಸಂಶಯಾತ್ಮಕ ತಂತಿ ಸಂದೇಶವೊಂದು ಬಂದಾಗ್ಯೂ ಲೇಖರಾಮ್‌ರಿಗೆ ಪೊಲೀಸ್ ಭದ್ರತೆ ಒದಗಿಸುವಂತೆ ಏಕೆ ಕೋರಲಾಗಲಿಲ್ಲ ಎಂಬ ಪ್ರಶ್ನೆ ಏಳುತ್ತದೆ. ಅಬ್ದುಲ್ಲ ಆಥಮ್ ಎಂಬಾತನ ಬಗ್ಗೆಯೂ ಹಜ್ರತ್ ಇಂತಹ ಭವಿಷ್ಯವಾಣಿಯನ್ನು ಮಾಡಿದ್ದರ ವಿರುದ್ಧ ಕ್ರಿಸ್ತ ಸಮುದಾಯದವರು ಅಬ್ದುಲ್ಲ ಆಥಮ್‌ಗೆ ರಕ್ಷಣೆ ನೀಡಲು ಮುಂದಾಗಿದ್ದರು. ‘ಚೌದವೀಂ ಸದಿ’ಎಂಬ ಪತ್ರಿಕೆ ತನ್ನ ೧೮೯೭ರ ಮಾರ್ಚ್ ೨೩ರ ಸಂಚಿಕೆಯಲ್ಲಿ “ಲೇಖರಾಮ್‌ರಿಗೆ ಕೆಲವೇ ದಿನಗಳಲ್ಲಿ ತಮ್ಮ ಕೊಲೆಯಾಗಲಿದೆ ಎಂಬ ಮುನ್ನೆಚ್ಚರಿಕೆಯನ್ನು ನೀಡಲಾಗಿತ್ತಾದರೂ ಅವರು ಮತ್ತು ಅವರ ಅನುಯಾಯಿಗಳು ಹಜ್ರತ್ ಅಹ್ಮದ್ ಮೇಲೆ ಕಣ್ಣಿಡುವಂತೆ ಪೊಲೀಸ್ ಅಧಿಕಾರಿಗಳಿಗೆ ಆಗ್ರಹಿಸಲಿಲ್ಲವೇಕೆ?’’ ಎಂದು ಪ್ರಶ್ನಿಸಿತ್ತು.

    ಕೊಲೆಯಾದ ದಿನ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಲೇಖರಾಮ್ ಕೊಲೆಯಾದ ಕೋಣೆಯನ್ನು ಪರಿಶೀಲಿಸುತ್ತಾರೆ. ಮನೆಗೆ ಒಂದೇ ಬಾಗಿಲಿದ್ದುದರಿಂದ ಹೊರಗಡೆ ಇದ್ದ ತಾಯಿ ಮತ್ತು ಪತ್ನಿಯ ಕಣ್ಣುತಪ್ಪಿಸಿ ಕೊಲೆಗಾರ ಹೇಗೆ ಕಣ್ಮರೆಯಾದ ಎಂಬ ರಹಸ್ಯವನ್ನು ಯಾರೂ ಭೇದಿಸಲಾರದೆ ಹೋದರು. ಮೃತ್ಯುಶಯ್ಯೆಯಲ್ಲಿದ್ದ ಲೇಖರಾಮ್ ಅವರನ್ನು ಅನಾರ್ಕಲಿಯಲ್ಲಿದ್ದ ಮೇಯೊ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅತೀವ ನೋವಿನಿಂದ ಬಳಲುತ್ತಿದ್ದ ಅವರಿಗೆ ಅಲ್ಲಿ ಡಾ. ಮಿರ್ಜಾ ಯಾಕುಬ್ ಬೇಗ್ ಮತ್ತು ಲೆಫ್ಟಿನೆಂಟ್ ಕರ್ನಲ್ ಎಫ್. ಪರ‍್ರಿ ಚಿಕಿತ್ಸೆ ನೀಡುತ್ತಾರೆ. ಬಳಿಕ ಅವರು ಆರು ಗಂಟೆಗಳು ಬದುಕಿದ್ದರು. ತಮ್ಮ ಮರಣಶಯ್ಯೆಯಲ್ಲಿ ಅವರು ಕೊಲೆಗಾರನ ಬಗ್ಗೆ ತಿಳಿಸಿದರಾದರೂ ಹಜ್ರತ್ ಅಹ್ಮದ್ ಬಗ್ಗೆ ಅನುಮಾನ ವ್ಯಕ್ತಪಡಿಸಲಿಲ್ಲ ಎಂದು ಹೇಳಲಾಗುತ್ತದೆ. ಡಾ. ಮಿರ್ಜಾ ಯಾಕುಬ್ ಬೇಗ್ ತಾವು ಹಜ್ರತ್ ಅಹ್ಮದ್‌ರ ಅನುಯಾಯಿ ಎಂದು ತಿಳಿದಾಗ್ಯೂ ಲೇಖರಾಮ್ ತಮ್ಮ ಗುರುವಿನ ಬಗ್ಗೆ ಅನುಮಾನ ವ್ಯಕ್ತಪಡಿಸಲಿಲ್ಲ ಎಂದು ಹೇಳಿಕೊಳ್ಳುತ್ತಾರೆ.

    ಇಲ್ಲಿ ಕುತೂಹಲಕಾರಿ ಸಂಗತಿ ಎಂದರೆ ಲೇಖರಾಮ್‌ರಿಗೆ ಇರಿದ ಸಮಯದಿಂದ ಅವರ ಸಾವಿನವರೆಗೆ ಜೊತೆಗಿದ್ದ ಪೊಲೀಸರು ಅವರ ಅಂತಿಮ ಹೇಳಿಕೆಯನ್ನು ದಾಖಲಿಸಿಕೊಳ್ಳಲಿಲ್ಲ. ಕೊಲೆಯಾದ ದಿನ ರಾತ್ರಿ ಪೊಲೀಸರು ಲೇಖರಾಮ್ ಅವರ ಮನೆಯ ನೆರೆಹೊರೆಯಲ್ಲಿ ತೀವ್ರವಾಗಿ ಶೋಧನೆ ನಡೆಸಿದರಾದರೂ ಕೊಲೆಗಾರನ ಬಗ್ಗೆ ಯಾವುದೇ ಸುಳಿವು ದೊರಕಲಿಲ್ಲ.

    ಈದ್ ಹಬ್ಬದಂದು ಲೇಖರಾಮ್‌ರನ್ನು ಕೊಲೆಗೈದ ಕೊಲೆಗಾರ ಅಂತ್ಯದವರೆಗೂ ಅಜ್ಞಾತನಾಗಿ ಉಳಿಯುತ್ತಾನೆ. ಸಾಂಪ್ರದಾಯಿಕ ಹಿಂದು, ಸಿಖ್ ಮತ್ತು ಮುಸಲ್ಮಾನ ಎಲ್ಲ ಪಂಗಡಗಳನ್ನು ಬೈದು, ಕಟುವಾಗಿ ಟೀಕಿಸುತ್ತಿದ್ದ ಪಂಡಿತ ಲೇಖರಾಮ್‌ರನ್ನು ಯಾವುದೇ ಸಮುದಾಯಕ್ಕೆ ಸೇರಿದ ಕೊಲೆಗಾರ ಕೊಲೆಗೈದಿರುವ ಸಾಧ್ಯತೆಯಿದೆ. ಈ ಕೊಲೆಗೆ ಮತ್ತೊಬ್ಬರು ಕಾರಣ ಎಂದು ಮೇಲ್ಕಂಡ ಎಲ್ಲ ಸಮುದಾಯದವರೂ ಪರಸ್ಪರ ಕಚ್ಚಾಡುವುದರಲ್ಲಿ ಕಾಲ ಕಳೆದರು. ಎಲ್ಲ ವಿಚಾರಣೆ, ಶೋಧನೆಗಳ ಬಳಿಕ ಹಜ್ರತ್ ಮಿರ್ಜಾ ಅಹ್ಮದ್‌ರ ಭವಿಷ್ಯವಾಣಿ ನಿಜವಾಯಿತು ಎಂಬ ಸಂಗತಿ ಮಾತ್ರ ನಿಚ್ಚಳಗೊಳ್ಳುತ್ತದೆ. ಇದು ಹಜ್ರತ್ ಅಹ್ಮದ್ ಅಲ್ಲಾನ ಕೊನೆಯ ಪ್ರವಾದಿ ಎಂಬ ಸತ್ಯವನ್ನು ಸಾರುತ್ತದೆ ಎಂದು ಅಹ್ಮದೀಯ ಸಮುದಾಯದವರು ಬೀಗುತ್ತಾರೆ.

    ಲೇಖರಾಮ್ ಕೊಲೆಯ ನಂತರದ ದಿನಗಳಲ್ಲಿ ಎಲ್ಲ ಕೋಮಿನವರಲ್ಲೂ ಪರಸ್ಪರ ಸಂದೇಹ, ದ್ವೇಷ ಮತ್ತು ಪ್ರತೀಕಾರದ ಭಾವನೆ ಹೊಗೆಯಾಡತೊಡಗುತ್ತದೆ. ಮುಸಲ್ಮಾನರ ವಿರುದ್ಧ ಆರ್ಯಸಮಾಜಿಗಳು ಸಾಮಾಜಿಕ, ಆರ್ಥಿಕ ಬಹಿಷ್ಕಾರ ಸಾರುತ್ತಾರೆ. ಆರ್ಯಸಮಾಜಿಗಳು ತಮ್ಮ ತತ್ತ್ವ ಮತ್ತು ಚಿಂತನೆಗಾಗಿ ದಯಾನಂದ ಸರಸ್ವತಿಯವರ ಬಳಿಕ ಪ್ರಾಣತ್ಯಾಗ ಮಾಡಿದ ಪಂಡಿತ ಲೇಖರಾಮ್ ಅವರನ್ನು ಎರಡನೆಯ ‘ಹುತಾತ್ಮ’ ಎಂದು ಭಾವಿಸತೊಡಗಿದರು. ಅವರ ತೀವ್ರವಾದದ ಚಿಂತನೆಯನ್ನು ಮುಂದುವರಿಸಿಕೊಂಡು ನಡೆಯುವ ಆರ್ಯಸಮಾಜ ಮುಂದಿನ ದಶಕಗಳಲ್ಲಿ ಮುಸಲ್ಮಾನರನ್ನು ತಮ್ಮ ಶಾಶ್ವತ ಶತ್ರುಗಳೆಂದು ಪರಿಗಣಿಸತೊಡಗುತ್ತದೆ. ಅವರ ನೆನೆಪಿನಲ್ಲಿ ಲಾಲಾ ಮುಂಶಿರಾಮ್‌ರವರು (ಸ್ವಾಮಿ ಶ್ರದ್ಧಾನಂದ) ೧೮೯೮ರ ಅಕ್ಟೋಬರ್‌ನಲ್ಲಿ ‘ಆರ್ಯ ಮುಸಾಫಿರ್’ (ಆರ್ಯ ಪ್ರಯಾಣಿಕ) ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸುತ್ತಾರೆ. ಆನಂತರದ ದಿನಗಳಲ್ಲಿ ಕಂಡುಬಂದ ಹಿಂದು-ಮುಸ್ಲಿಂಸಾಮರಸ್ಯದ ಕೊರತೆ, ಹಿಂಸಾಚಾರ, ದೇಶದ ವಿಭಜನೆ ಇತ್ಯಾದಿಗಳು ಆರ್ಯಸಮಾಜದ ‘ಮುಸ್ಲಿಂ ದ್ವೇಷ’ದ ಸತ್ಯಾಸತ್ಯತೆಗೆ ಪುರಾವೆಯಾಗಿ ನಿಲ್ಲುತ್ತದೆ ಎಂದು ಜೋನ್ಸ್ ಕೆನ್ನೆತ್ ಅಭಿಪ್ರಾಯ ಪಡುತ್ತಾರೆ. ವಿಭಜಿತ ಭಾರತ ಸ್ವಾತಂತ್ರ್ಯ ಗಳಿಸಿದ ಬಳಿಕ ಲಾಹೋರ್ ಪಾಕಿಸ್ತಾನದ ಪಾಲಿಗೆ ಸೇರುತ್ತದೆ. ಇದರಿಂದ ಆರ್ಯಸಮಾಜ ತನ್ನ ಮಹತ್ತ್ವವನ್ನು ಕಳೆದುಕೊಂಡಿತು. ಆದರೆ ಇಂದಿಗೂ ಹಿಂದು-ಮುಸ್ಲಿಂ ಸಮುದಾಯಗಳ ನಡುವೆ ಇರುವ ಅನುಮಾನದ ಕಂದಕವನ್ನು ನಿವಾರಿಸಲು ಭಾರತ ಹೆಣಗಾಡುತ್ತಿದೆ.

    ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದಲ್ಲಿ ಮತಾಂತರಿಸುವುದರಲ್ಲಿ ಸಿದ್ಧಹಸ್ತರೆನಿಸಿದ ಕ್ರಿಸ್ತಮಿಶನರಿಗಳು ಮತ್ತು ಬ್ರಹ್ಮಸಮಾಜದ ಕಾರ್ಯವಿಧಾನದಿಂದ ಸ್ಫೂರ್ತಿಗೊಂಡ ಆರ್ಯಸಮಾಜ ಭಾರತೀಯ ಧರ್ಮ, ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ತಳಹದಿಯನ್ನಾಗಿಸಿಕೊಂಡು ಹಿಂದುಸಮಾಜಕ್ಕೆ ಹೊಸತೊಂದು ಆಯಾಮವನ್ನು ಒದಗಿಸುವಲ್ಲಿ ಸಫಲವಾಯಿತು. ಹಿಂದುತ್ವವೆಂಬುದು ಒಂದು ‘ಪ್ರಚಾರಕ ಧರ್ಮ’ದ ರೂಪ ತಾಳುವ ಮೂಲಕ ಹಿಂದು ಸಮುದಾಯ ಅದುವರೆಗೆ ಇತರರು ನಡೆಸುತ್ತಿದ್ದ ಮತಾಂತರವನ್ನು ಬರಿಗೈಯಲ್ಲಿ ಎದುರಿಸುವ ಪರಿಸ್ಥಿತಿಯಿಂದ ಹೊರಬರುವಂತಾಯಿತು. ಆರ್ಯಸಮಾಜದ ‘ಶುದ್ಧಿ’ ಆಂದೋಲನ ಕೇವಲ ರಕ್ಷಣಾತ್ಮಕವಾಗಿ ಉಳಿಯದೆ ಆಕ್ರಮಣಕಾರಿಯಾಗಿಯೂ ಹೊರಹೊಮ್ಮುತ್ತದೆ. ಅವರು ಬಳಸಿದ ಮತಾಂತರ, ಮರು-ಮತಾಂತರ, ಶೈಕ್ಷಣಿಕ ವಿಕಾಸ, ಸಮಾಜ ಸುಧಾರಣೆಯ ಹೊಸ ಆಧುನಿಕ ತಂತ್ರಗಳು ಹಿಂದು ಧರ್ಮವನ್ನು ಇತರ ಧರ್ಮಗಳ ಕೃಪಾಕಟಾಕ್ಷಕ್ಕೆ ಬಲಿಯಾಗುವ ಪಶುವಾಗದೆ ಉಳಿಯುವಂತೆ ಮಾಡುವಲ್ಲಿ ಬಹಳ ಸಹಾಯಕವಾಗಿವೆ. ೧೯೩೯ರಲ್ಲಿ ಆರ್ಯಸಮಾಜದ ಕಟ್ಟಾಳುಗಳಲ್ಲಿ ಒಬ್ಬರಾಗಿದ್ದ ಗಂಗಾಪ್ರಸಾದ್ ಅವರು “ನಲವತ್ತು ವರ್ಷಗಳ ಹಿಂದೆ ಆರ್ಯಸಮಾಜವನ್ನು ಹೊರಗಿನ ಕಲ್ಮಷವನ್ನು ಒಳತರುತ್ತಿರುವ ಒಂದು ಧರ್ಮವಿರೋಧಿ ಸಂಘಟನೆ ಎಂದು ಕಾಣಲಾಗುತ್ತಿತ್ತು. ಆದರೆ ಇಂದು ಅದೇ ಆರ್ಯಸಮಾಜವನ್ನು ಹಿಂದು ಧರ್ಮದ ಸಂರಕ್ಷಕನಂತೆ ಕಾಣಲಾಗುತ್ತಿದೆ” ಎಂದು ಬರೆಯುತ್ತಾರೆ. ವೈದಿಕ ಧರ್ಮದ ಉಳಿವು ಮತ್ತು ಸುಧಾರಣೆಗಾಗಿ ದಯಾನಂದ ಸರಸ್ವತಿಯವರಿಂದ ಪ್ರಾರಂಭಗೊಂಡ ಬಲಿದಾನದ ಇತಿಹಾಸದಲ್ಲಿ ಪಂಡಿತ ಲೇಖರಾಮ್‌ರ ಬಲಿದಾನ ಮತ್ತೊಂದು ಅಧ್ಯಾಯವನ್ನು ಸೇರಿಸುತ್ತದೆ.

    ಆಕರ:

    1.  Asif M Basit, London “A Murder in British Lahore: Closing the Case of Lekh Ram” https://www.reviewofreligions.org/12030/a-murder-in-british-lahore-closing-the-case-of-lekh-ram/

    2.  Kenneth Jones, ‘’Communalism_in_Punjab: The Arya Samaj Contribution’’, The Journal of Asian Studies, Vol 28, No. 1 (Nov., 1968)

    3.  Syed Hasnat Ahmad, Canada, “Pandit Lekh Ram -The Malicious Arya” in ‘Review of Religions’ Vol. LXXIX no. 5, May 1984

    ಆರ್ಯಧರ್ಮದ ಹುತಾತ್ಮ ಪಂಡಿತ ಲೇಖರಾಮ್

  • ಮೂರ್ತಿ ಅವರ ಸಾಧನೆಗೆ ಕಲಶವಿಟ್ಟಂತೆ ಅವರಿಗೆ ದೇಶದ ಚಲನಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೆಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು. ವಿಶೇಷವೆಂದರೆ ಪ್ರಶಸ್ತಿಗೆ ಪಾತ್ರರಾದ ದೇಶದ ಮೊದಲ ತಂತ್ರಜ್ಞ ಹಾಗೂ ಮೊದಲ ಚಲನಚಿತ್ರ ಛಾಯಾಗ್ರಾಹಕ ಅವರಾಗಿದ್ದರು. ಮಹೋನ್ನತ ಸಾಧನೆಯನ್ನು ತಮ್ಮದಾಗಿಸಿಕೊಂಡ ಮೂರ್ತಿ ಅವರಿಗೆ, ಅವರ ಕುಟುಂಬಕ್ಕೆ ಚಲನಚಿತ್ರದ ಹಿನ್ನೆಲೆಯೇನಾದರೂ ಇತ್ತೇ ಎಂದು ಕೇಳಿದರೆ ಇಲ್ಲ ಎನ್ನುವ ಉತ್ತರವೇ ಸಿಗುತ್ತದೆ. ಅಂತಹ ಹಿನ್ನೆಲೆ ಇಲ್ಲದಿದ್ದುದು ಮಾತ್ರವಲ್ಲ; ಅದನ್ನು ಕಲಿಯುವುದಕ್ಕೆ ಬೇಕಾದ ಸಾಧನಸಂಪತ್ತುಗಳಾಗಲಿ, ಪರಿಕರಅನುಕೂಲಗಳಾಗಲಿ ಕೂಡಾ ಅವರಿಗೆ ಇರಲಿಲ್ಲ. ವಿದ್ಯೆಯ ಒಂದು ಕ್ಷೇತ್ರದ ಬಗೆಗಿನ ಎಣೆಯಿಲ್ಲದ ಆಸಕ್ತಿ ಮತ್ತು ಕ್ರಿಯಾಶೀಲವಾದ ಮನಸ್ಸುವಿವೇಕಗಳೇ ಅವರನ್ನು ಮಟ್ಟದ ಸಾಧನೆಗೆ ಅರ್ಹರನ್ನಾಗಿ ಮಾಡಿದವು ಎಂದು ಒಪ್ಪಿಕೊಳ್ಳಲೇಬೇಕು.

    ವಿ.ಕೆ. ಮೂರ್ತಿ ಅವರಿಗೆ ನನ್ನಂತೆಯೇ ಅತ್ಯಂತ ಶ್ರೇಷ್ಠಮಟ್ಟದ ಪರಿಣಾಮವನ್ನೇ ಪಡೆಯಬೇಕೆಂಬ ಹುಚ್ಚಿದೆ. ಚಿತ್ರಗಳಲ್ಲಿ ಅವರು ಗಳಿಸಿರುವ ಅನುಭವ ಅಮೂಲ್ಯವಾದದ್ದು. ಅವರಿಗೆ ಡೆನ್ಸಿಟಿ ಬಗ್ಗೆ, ಸ್ಯಾಚುರೇಶನ್ ಬಗ್ಗೆ, ಇಂಪ್ರಿಂಟಿಂಗ್ ಬಗ್ಗೆ ಎಂಥಾ ತಿಳಿವಳಿಕೆ ಇತ್ತೆಂದರೆ, ಅವರು ಲ್ಯಾಬೊರೇಟರಿಗೆ ಕೊಡುತ್ತಿದ್ದದ್ದು ಒಂದು ‘ಪರ್ಫೆಕ್ಟ್ಲೀ ಎಕ್ಸ್ಪೋಸ್ಡ್ ನೆಗೆಟಿವ್.’ ಅದನ್ನು ಲ್ಯಾಬೊರೇಟರಿಯವರು ನೇರವಾಗಿ ಪ್ರೊಸೆಸ್ ಮಾಡಿದರೆ ಸಾಕಾಗುತ್ತಿತ್ತು. ಇದನ್ನು ಹೆಚ್ಚು ಮಾಡು, ಇದನ್ನು ಕಡಮೆ ಮಾಡು… ಈ ರೀತಿಯ ರಗಳೆಗಳೇ ಇರುತ್ತಿರಲಿಲ್ಲ. ಇದು ಒಬ್ಬ ಛಾಯಾಗ್ರಾಹಕನ ಅದ್ಭುತ ಸಾಮರ್ಥ್ಯ. ಏಕೆಂದರೆ ಆಗಿನ ಕಾಲದಲ್ಲಿ ಲ್ಯಾಬೊರೇಟರಿ ತಂತ್ರಜ್ಞಾನ ಇಂದಿನಷ್ಟು ಮುಂದುವರಿದೂ ಇರಲಿಲ್ಲ. ಇಷ್ಟೆಲ್ಲ ಸಾಧಿಸಲು ಅವರು ತೆಗೆದುಕೊಳ್ಳುತ್ತಿದ್ದ ಆಸಕ್ತಿ, ವಹಿಸುತ್ತಿದ್ದ ಎಚ್ಚರ ಮೆಚ್ಚಬೇಕಾದ್ದು” ಎಂದು ಹೇಳಿದವರು ಹಲವು ಶ್ರೇಷ್ಠ ಚಿತ್ರಗಳ ಖ್ಯಾತ ಚಲನಚಿತ್ರ ನಿರ್ದೇಶಕ ಶ್ಯಾಂ ಬೆನಗಲ್ ಅವರು. ಜನ್ಮಶತಮಾನೋತ್ಸವದ ಈ ಸಂದರ್ಭದಲ್ಲಿ ತಾನು ಕೆಲಸ ಮಾಡಿದಲ್ಲೆಲ್ಲ ಶ್ರೇಷ್ಠತೆಯನ್ನು ಮೆರೆದು ಅಪೂರ್ವ ಗೌರವಕ್ಕೆ ಪಾತ್ರರಾದ ವಿ.ಕೆ. ಮೂರ್ತಿ ಅವರನ್ನು ನೆನಪಿಸಿಕೊಳ್ಳುವುದು ಕನ್ನಡಿಗರಿಗೆ ಅಭಿಮಾನದ ವಿಷಯವೇ ಸರಿ.

    ಭಾರತ್ ಏಕ್ ಖೋಜ್ಸಂಬಂಧ

    ಶ್ಯಾಂ ಬೆನಗಲ್ ಅವರು ಮೂರ್ತಿ ಅವರೊಂದಿಗೆ ಕೆಲಸ ಮಾಡಿದ ಅನುಭವದಿಂದಲೇ ಮೇಲಿನ ಮಾತುಗಳನ್ನು ಹೇಳಿದ್ದಾರೆನ್ನುವುದು ಗಮನಾರ್ಹ. ಆ ಕುರಿತು ಅವರ ಮಾತುಗಳಿವು: “ನಾನು ಇದಕ್ಕೆ ಮೊದಲು ಮೂರ್ತಿ ಅವರನ್ನು ನೋಡಿದ್ದರೂ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದು ೧೯೮೮ರಲ್ಲಿ, ‘ಭಾರತ್ ಏಕ್ ಖೋಜ್’ ಧಾರಾವಾಹಿ ಮಾಡುವ ಸಾಹಸಕ್ಕೆ ಕೈಹಾಕಿದಾಗ. ಆ ಧಾರಾವಾಹಿಯಲ್ಲಿ ನಾನು ಟಿವಿ ನಿರ್ಮಾಪಕರು ಯಾರೂ ಅದುವರೆಗೆ ಮಾಡದ ಒಂದು ಕೆಲಸವನ್ನು ಮಾಡಿದೆ. ಇಡೀ ಧಾರಾವಾಹಿಯನ್ನು ೩೫ ಎಂಎಂ ಫಿಲ್ಮ್ ಮೇಲೆ ಚಿತ್ರೀಕರಣ ಮಾಡಲು ನಿರ್ಧರಿಸಿದೆ. ಸಮಯ, ಹಣ ವಿಪರೀತ ಖರ್ಚಾಗುತ್ತದೆಂದು ಟಿವಿ ನಿರ್ದೇಶಕರು ಆ ಸಾಹಸಕ್ಕೆ ಕೈಹಾಕುತ್ತಿರಲಿಲ್ಲ. ಆದರೆ ನನ್ನ ನಿರ್ಧಾರಕ್ಕೆ ಕಾರಣಗಳಿದ್ದವು. ಅಂದಿನ ವಿಡಿಯೋ ತಂತ್ರಜ್ಞಾನದಿಂದ ಆಗುವ ಪಿಕ್ಚರ್ ಮತ್ತು ಸೌಂಡಿನ ಗುಣಮಟ್ಟ ಸಾಧಾರಣವಾಗಿರುತ್ತಿತ್ತು. ಇನ್ನೊಂದೇನೆಂದರೆ ಭಾರತದ ಇಡೀ ಇತಿಹಾಸದ ಬಗ್ಗೆ ನಾನು ಮಾಡಿದ ಕೆಲಸ ಹೆಚ್ಚು ಕಾಲ ಉಳಿಯುವಂಥದ್ದಾಗಿರಬೇಕಿತ್ತು.

    ಆಗ ನಾನು ಹುಡುಕುತ್ತಿದ್ದ ಛಾಯಾಗ್ರಾಹಕನಿಗೆ ಕೆಲವು ಗುಣಗಳು ಅಗತ್ಯವಾಗಿ ಇರಬೇಕಿತ್ತು. ನನಗೆ ಬೇಕಾಗಿದ್ದದ್ದು ಒಬ್ಬ ಫಸ್ಟ್ ಕ್ಲಾಸ್ ಕ್ಯಾಮೆರಾಮನ್; ಬರೀ ‘ಪರವಾಗಿಲ್ಲ, ಕೆಲಸ ಮಾಡುತ್ತಾರೆ’ ಅನ್ನಿಸಿಕೊಂಡವರಲ್ಲ. ಜೊತೆಗೆ ಚಿತ್ರೀಕರಣದಲ್ಲಿ ಸೀರಿಯಲ್ ಉದ್ದಕ್ಕೂ ಒಬ್ಬನೇ ನಿರ್ದೇಶಕ, ಒಬ್ಬನೇ ಕ್ಯಾಮೆರಾಮನ್ ದುಡಿಯಬೇಕಾಗಿತ್ತು. ಒಂದು ಗಂಟೆಯ ೫೩ ಎಪಿಸೋಡ್‌ಗಳನ್ನು ಶೂಟ್ ಮಾಡಿದಾಗ ಇದು ಸುಲಭವಲ್ಲ, ಜೊತೆಗೆ ನಿಷ್ಠೆಯಿಂದ ಕೆಲಸ ಮಾಡುವವರು ಬೇಕಿತ್ತು. ಈ ವಿಷಯದಲ್ಲಿ ಮೂರ್ತಿಯವರನ್ನು ಮೀರಿಸುವವರು ಯಾರೂ ಇಲ್ಲ. ಅವರಿಗೆ ತಾವು ಮಾಡುವ ಕೆಲಸದಲ್ಲಿ ಯಾವಾಗಲೂ ಶೇ.೧೦೦ ಕಮಿಟ್‌ಮೆಂಟ್ (ಬದ್ಧತೆ) ಇರುತ್ತದೆ. ಅವರೆಂದೂ ತಡವಾಗಿ ಬರುವುದು, ತಮ್ಮ ಬದಲಿಗೆ ಇನ್ನೊಬ್ಬ ಕ್ಯಾಮೆರಾಮೆನ್ ಕಳಿಸುವುದು ಅವೆಲ್ಲ್ಲ ಮಾಡಿದ್ದು ನಾವು ಕೇಳಿಯೇ ಇಲ್ಲ. ಜೊತೆಗೆ ಭಾರತೀಯ ಚಿತ್ರರಂಗದಲ್ಲಿ ನಾನು ನೋಡಿ ಮೆಚ್ಚಿದ ಶ್ರೇಷ್ಠ ಗುಣಮಟ್ಟದ ಕೆಲಸ ಮಾಡಿದವರು ಮೂರ್ತಿ. ಗುರುದತ್ ಚಿತ್ರಗಳು ಮೂಡಿಬಂದ ರೀತಿಯನ್ನು ನಾನು ಅಗಾಧವಾಗಿ ಮೆಚ್ಚಿದ್ದೆ. ಆ ಚಿತ್ರಗಳು ಹಾಗೆ ಬರಲು ಮುಖ್ಯ ಕಾರಣ ಮೂರ್ತಿ ಅವರ ಕೌಶಲ. ಹೀಗಾಗಿ ನಾನು ‘ಭಾರತ್ ಏಕ್ ಖೋಜ್’ ಛಾಯಾಗ್ರಾಹಕರಾಗಿ ಮೂರ್ತಿ ಅವರನ್ನೇ ಆಯ್ಕೆ ಮಾಡಿದೆ” ಎಂದಿದ್ದಾರೆ ಶ್ಯಾಂ ಬೆನಗಲ್ (ನೋಡಿ-ಉಮಾರಾವ್ ಅವರ ಪುಸ್ತಕ ‘ಬಿಸಿಲುಕೋಲು’, ಪ್ರಕಾಶಕರು ಪ್ರಿಸಮ್ ಬುಕ್ಸ್ ಪ್ರೈ.ಲಿ.).

    ರಜೆಯಿಲ್ಲದೆ ಕೆಲಸ

    ಮುಂದುವರಿದು, “೧೯ ತಿಂಗಳ ಶೂಟಿಂಗ್‌ನಲ್ಲಿ ಭಾನುವಾರಗಳನ್ನು ಬಿಟ್ಟರೆ ಮೂರ್ತಿ ಒಂದು ದಿನವೂ ರಜೆ ತೆಗೆದುಕೊಳ್ಳಲಿಲ್ಲ. ಅವರು ವಯಸ್ಸಿನಲ್ಲೂ ಆಗ ಸಣ್ಣವರಾಗಿರಲಿಲ್ಲ (೬೬-೬೭ ವರ್ಷ). ಆದರೆ ಮೂರ್ತಿ ಸಣ್ಣ ವಯಸ್ಸಿನ ಕೆಲಸಗಾರರಷ್ಟೇ ಉತ್ಸಾಹದಿಂದ ದುಡಿಯುತ್ತಿದ್ದರು. ಒಂದು ದಿನವೂ ಸುಸ್ತೆಂದಿದ್ದು ನನಗೆ ನೆನಪಿಲ್ಲ. ೫೩ ಗಂಟೆಗಳ ಟಿವಿ ಫುಟೇಜ್, ಜೊತೆಗೆ ಅಷ್ಟೊಂದು ನಟರು, ಅಷ್ಟೊಂದು ಸೆಟ್‌ಗಳು, ಬೇರೆ ಬೇರೆ ಕತೆಗಳು. ಎಲ್ಲ ಸಂಚಿಕೆಗಳನ್ನು ಸೇರಿಸಿದರೆ ಎಷ್ಟೋ ಪೂರ್ಣ ಅವಧಿಯ ಫಿಲ್ಮ್ಗಳನ್ನು ಶೂಟ್ ಮಾಡಿದಷ್ಟು!” ಎಂದಿದ್ದಾರೆ ಶ್ಯಾಂ ಬೆನಗಲ್.

    ಇನ್ನು ಖ್ಯಾತ ಛಾಯಾಗ್ರಾಹಕ, ನಿರ್ದೇಶಕ ಗೋವಿಂದ ನಿಹಲಾನಿ ಅವರಂತೂ ವಿ.ಕೆ. ಮೂರ್ತಿ ಅವರ ಶಿಷ್ಯ ಎಂದು ಹೇಳಿಕೊಳ್ಳಲು ಹೆಮ್ಮೆಪಟ್ಟವರು. ಅವರು ಮೂರ್ತಿಯವರನ್ನು ಕುರಿತು “ಮೂರ್ತಿ ಅವರು ಚಿತ್ರರಂಗಕ್ಕೆ ಕೊಟ್ಟ ದೊಡ್ಡ ಕೊಡುಗೆಯೆಂದರೆ ಛಾಯಾಗ್ರಹಣವು ರಮ್ಯೀಕರಣವಿಲ್ಲದೆಯೇ ಸುಂದರವಾಗಿರಬಹುದು, ಕಲಾತ್ಮಕವಾಗಿರಬಹುದು ಎಂದು ತೋರಿಸಿದ್ದು. ಹಿಂದಿ ಸಿನೆಮಾದ ‘ಆಧುನಿಕ ಯುಗ’ ಪ್ರಾರಂಭವಾಗುವುದು ಇಲ್ಲಿಂದಲೇ. ‘ಪ್ಯಾಸಾ’ ಮತ್ತು ‘ಕಾಗಜ್ ಕೇ ಫೂಲ್’ ಚಿತ್ರಗಳು ಛಾಯಾಗ್ರಾಹಕರಿಗೆ ಬೇರೆ ಬೇರೆ ಸಾಧ್ಯತೆಗಳ ಅರಿವು ಮೂಡಿಸಿ ಹೊಸ ಜಗತ್ತಿನ ಬಾಗಿಲು ತೆರೆದ ಚಿತ್ರಗಳು. ಆವರೆಗೆ ಇದ್ದ ಸಾಂಪ್ರದಾಯಿಕ ಸಂಕೋಲೆಗಳಿಂದ ಮುಕ್ತಿ ನೀಡಿದ ಚಿತ್ರಗಳು” ಎಂದಿದ್ದಾರೆ.

    ಸ್ವಾತಂತ್ರ್ಯೋತ್ತರ ಭಾರತದ ಅತಿ ಮಹತ್ತ್ವದ ಚಿತ್ರಗಳಲ್ಲಿ ಒಂದಾದ ‘ತಮಸ್’ಗೆ (ಭೀಷ್ಮ ಸಾಹನಿ ಕಾದಂಬರಿ ಆಧಾರಿತ) ನಿಹಲಾನಿ ಮೂರ್ತಿಸಾಬ್ ಅವರ ನೆರವು ಪಡೆಯಲು ಬಯಸಿದರು. ದೇಶದ ವಿಭಜನೆಯ ಕಥೆಯನ್ನು ಒಳಗೊಂಡ ಆ ಚಿತ್ರದಲ್ಲಿ ನೂರಾರು ಪಾತ್ರಗಳು, ವಸ್ತುವಿನ ಸಂಕೀರ್ಣತೆ ಎಲ್ಲ ಇತ್ತು. “ಮೂರ್ತಿಸಾಬ್ ಅವರನ್ನು ಕೇಳುವುದಕ್ಕೆ ಸ್ವಲ್ಪ ಹಿಂಜರಿಕೆ ಇತ್ತು. ಎಷ್ಟಾದರೂ ಅವರು ನನ್ನ ಗುರು. ಆದರೆ ನನ್ನ ಮತ್ತು ಅವರ ಶೈಲಿಯಲ್ಲಿ ಸಾಮ್ಯ ಇರುವುದರಿಂದ ಯಾವ ಗೊಂದಲಗಳೂ ಬರಲಾರವು ಎಂಬ ಭರವಸೆಯೂ ಇತ್ತು. ಅವರು ತಮ್ಮ ಎಂದಿನ ದೊಡ್ಡಗುಣದಿಂದ ಒಪ್ಪಿಕೊಂಡರು” ಎಂದಿದ್ದಾರೆ.

    ಮುಂದುವರಿದು, “ಮೂರ್ತಿಸಾಬ್ ಸೆಟ್ ಮೇಲಿದ್ದರೆ ಅಲ್ಲಿಯ ವಾತಾವರಣಕ್ಕೆ ಒಂದು ಗಾಂಭೀರ್ಯ ಬಂದುಬಿಡುತ್ತದೆ. ಅವರು ಅಷ್ಟು ಹಿರಿಯ, ಗೌರವಾನ್ವಿತ ಕ್ಯಾಮೆರಾಮೆನ್ ಆದ್ದರಿಂದ ಅವರು ಅಲ್ಲಿ ನಡೆದುಬಂದ ಕೂಡಲೆ ಒಂದು ರೀತಿಯ ಶಿಸ್ತು ಎಲ್ಲ ಕಡೆ ಕಾಣತೊಡಗುತ್ತದೆ. ಅವರು ತುಂಬ ಸ್ನೇಹಮಯಿ. ಕೆಲಸ ಮಾಡುವ ಜನ ಮತ್ತು ಕೆಲಸದ ಬಗ್ಗೆ ಅವರ ನಿಲವು ಎಷ್ಟು ಸಕಾರಾತ್ಮಕವಾಗಿರುತ್ತದೆಂದರೆ ಅವರಿದ್ದಾಗ ಎಲ್ಲರಿಗೂ ಒಂದು ರೀತಿಯ ಧೈರ್ಯ ಇರುತ್ತದೆ; ಸುರಕ್ಷಾ ಭಾವನೆ ಇರುತ್ತದೆ. ಯಾರಾದರೂ ಸರಿಯಾಗಿ ಕೆಲಸ ಮಾಡದಿದ್ದರೆ ಅವರಿಗೆ ಕಿರಿಕಿರಿಯಾಗುತ್ತದೆ ಎನ್ನುವುದು ನಿಜ. ಆದರೆ ಆ ವಿಷಯದಲ್ಲಿಯೂ ಅವರು ಸ್ಪಂದಿಸುವುದು ತುಂಬಾ ಪಾಸಿಟಿವ್ ಆಗಿಯೇ. ಅವರನ್ನು ಕರೆದು ಏನು ತಪ್ಪಾಗಿದೆ ಎಂದು ನಿಧಾನವಾಗಿ ವಿವರಿಸಿ ಅದನ್ನು ಸರಿಪಡಿಸುವುದು ಹೇಗೆಂದು ತಿಳಿಸುತ್ತಾರೆ” ಎಂದಿದ್ದಾರೆ.

    ಇನ್ನು ವಿ.ಕೆ. ಮೂರ್ತಿ ಅವರೆಂದರೆ ಚಿತ್ರನಿರ್ದೇಶಕ ಗುರುದತ್ (ಪಡುಕೋಣೆ) ಅವರ ಹೆಸರು ಬರಲೇಬೇಕು. ಮೇಲೆ ಹೇಳಿದ ‘ಪ್ಯಾಸಾ’, ‘ಕಾಗಜ್ ಕೇ ಫೂಲ್’ ಮತ್ತು ‘ಸಾಹಿಬ್ ಬಿಬೀಬಿ ಔರ್ ಗುಲಾಮ್’ ಚಿತ್ರಗಳ ನಿರ್ದೇಶಕರು ಅವರು. ಚಲನಚಿತ್ರದ ಆಧುನಿಕಯುಗಕ್ಕೆ ಅವು ಯಾವ ರೀತಿಯಲ್ಲಿ ಬಾಗಿಲು ತೆರೆದವೋ ಅದರಲ್ಲಿ ನಿರ್ದೇಶಕ ಗುರುದತ್ ಪಾತ್ರವೆಷ್ಟು ಮತ್ತು ಛಾಯಾಗ್ರಾಹಕ ವಿ.ಕೆ. ಮೂರ್ತಿ ಅವರ ಕೊಡುಗೆಯೆಷ್ಟು ಎನ್ನುವುದು ಗಂಭೀರ ಅಧ್ಯಯನದ ವಿಷಯವೇ ಆಗಬಹುದು.

    ಮೂರ್ತಿ ಅವರ ಸಾಧನೆಗೆ ಕಲಶವಿಟ್ಟಂತೆ ಅವರಿಗೆ ೨೦೦೮ರಲ್ಲಿ ಚಲನಚಿತ್ರರಂಗದ ದೇಶದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೆಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು. ವಿಶೇಷವೆಂದರೆ ಈ ಪ್ರಶಸ್ತಿಗೆ ಪಾತ್ರರಾದ ದೇಶದ ಮೊದಲ ತಂತ್ರಜ್ಞ ಹಾಗೂ ಮೊದಲ ಚಲನಚಿತ್ರ ಛಾಯಾಗ್ರಾಹಕ ಅವರಾಗಿದ್ದರು. ೨೦೧೦ರಲ್ಲಿ ನವದೆಹಲಿಯಲ್ಲಿ ಜರಗಿದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ‘ಉತ್ಕೃಷ್ಟ ಜೀವಮಾನದ ಸಾಧನೆಗಾಗಿ’ ಮೂರ್ತಿಯವರಿಗೆ ಈ ಪ್ರಶಸ್ತಿಯನ್ನು ನೀಡಿದರು.

    ಈ ಮಹೋನ್ನತ ಸಾಧನೆಯನ್ನು ತಮ್ಮದಾಗಿಸಿಕೊಂಡ ಮೂರ್ತಿ ಅವರಿಗೆ, ಅವರ ಕುಟುಂಬಕ್ಕೆ ಚಲನಚಿತ್ರದ ಹಿನ್ನೆಲೆಯೇನಾದರೂ ಇತ್ತೇ ಎಂದು ಕೇಳಿದರೆ ಇಲ್ಲ ಎನ್ನುವ ಉತ್ತರವೇ ಸಿಗುತ್ತದೆ. ಅಂತಹ ಹಿನ್ನೆಲೆ ಇಲ್ಲದಿದ್ದುದು ಮಾತ್ರವಲ್ಲ; ಅದನ್ನು ಕಲಿಯುವುದಕ್ಕೆ ಬೇಕಾದ ಸಾಧನ-ಸಂಪತ್ತುಗಳಾಗಲಿ, ಪರಿಕರ-ಅನುಕೂಲಗಳಾಗಲಿ ಕೂಡಾ ಅವರಿಗೆ ಇರಲಿಲ್ಲ. ವಿದ್ಯೆಯ ಒಂದು ಕ್ಷೇತ್ರದ ಬಗೆಗಿನ ಎಣೆಯಿಲ್ಲದ ಆಸಕ್ತಿ ಮತ್ತು ಕ್ರಿಯಾಶೀಲವಾದ ಮನಸ್ಸು-ವಿವೇಕಗಳೇ ಅವರನ್ನು ಆ ಮಟ್ಟದ ಸಾಧನೆಗೆ ಅರ್ಹರನ್ನಾಗಿ ಮಾಡಿದವು ಎಂದು ಒಪ್ಪಿಕೊಳ್ಳಲೇಬೇಕು.

    ಬಾಲ್ಯಬಡತನ

    ವೆಂಕಟರಾಮಾ ಪಂಡಿತ್ ಕೃಷ್ಣಮೂರ್ತಿ ಇದು ಮೂರ್ತಿ ಅವರ ಪೂರ್ಣ ಹೆಸರು. ತಂದೆ ವೆಂಕಟರಾಮಾ ಪಂಡಿತ್, ತಾಯಿ ನಾಗಮ್ಮ. ಐವರು ಮಕ್ಕಳು; ಇಬ್ಬರು ಗಂಡು, ಮೂವರು ಹೆಣ್ಣು. ಮಧ್ಯದವರಾದ ಮೂರ್ತಿಗೆ ಓರ್ವ ಅಣ್ಣ, ಒಬ್ಬಾಕೆ ಅಕ್ಕ; ಇಬ್ಬರು ತಂಗಿಯರು. ತಂದೆ ಸರ್ಕಾರೀ ಆಸ್ಪತ್ರೆಯಲ್ಲಿ ಆಯುರ್ವೇದ ವೈದ್ಯರು. ಕುಟುಂಬದ ವಾಸ ಮೈಸೂರಿನ ಲಕ್ಷ್ಮೀಪುರಂನಲ್ಲಿ. ಆವರಣದಲ್ಲಿದ್ದ ಸಂಪಿಗೆ ಮರಗಳಿಂದಾಗಿ ಮನೆಗೆ ‘ಸಂಪಿಗೆ ಮನೆ’ ಎಂದು ಹೆಸರು. ಮುಖ್ಯ ಮನೆಯನ್ನು ಬಾಡಿಗೆಗೆ ಕೊಟ್ಟು ಕುಟುಂಬ ಔಟ್‌ಹೌಸಿನಲ್ಲಿತ್ತು.

    ಕೃಷ್ಣಮೂರ್ತಿ ಎನ್ನುವ ಹೆಸರು ಮನೆಯವರಿಗೆ ಮತ್ತು ಆಚೀಚಿನವರಿಗೆ ಕುಟ್ಟಿ ಆಗಿತ್ತು. ತಾಯಿಗೆ ಯಾವಾಗಲೂ ಅನಾರೋಗ್ಯ. ಕುಟ್ಟಿಗೆ ೮-೯ ವರ್ಷವಿದ್ದಾಗ ಆಕೆ ತೀರಿಕೊಂಡರು. ಆಗ ಸಣ್ಣ ಮಗುವಿಗೆ ಹನ್ನೊಂದು ತಿಂಗಳು. ಮೂರ್ತಿ ಅಕ್ಕನಿಗೆ ಮದುವೆಯಾಗಿತ್ತು. ಪುಟ್ಟ ಮಗು ಸೇರಿದಂತೆ ಇಬ್ಬರು ತಂಗಿಯರನ್ನು ದೊಡ್ಡಮ್ಮ ಕರೆದುಕೊಂಡು ಹೋಗಿ ಸಾಕಿದರು. ತಂದೆ ಮತ್ತು ಇಬ್ಬರು ಗಂಡುಮಕ್ಕಳು ಮೈಸೂರಿನಲ್ಲಿ ಉಳಿದರು.

    ತಂದೆ ಮತ್ತೆ ಮದುವೆಯಾಗಲಿಲ್ಲವಾದರೂ ಅವರ ಜೀವನಶೈಲಿ ಒಂಥರಾ ಇತ್ತು. ಸಂಜೆ ೬ ಗಂಟೆಗೆ ಆಫೀಸು ಬಿಟ್ಟ ತಂದೆ ಸ್ನೇಹಿತರ ಭೇಟಿ, ಮಾತುಕತೆ ಎಲ್ಲ ಮುಗಿಸಿ ರಾತ್ರಿ ೮.೩೦ರ ಹೊತ್ತಿಗೆ ಮನೆಗೆ ಬರುತ್ತಿದ್ದರು. ಸಂಜೆಗಳು ಈ ಮಕ್ಕಳನ್ನು ಸಿನೆಮಾದತ್ತ ಎಳೆದವು. ಸುಬ್ಬರಾಮಯ್ಯ ಎನ್ನುವ ಕುಟ್ಟಿಯ ಬಂಧು ಸಿನೆಮಾಹಾಲ್‌ನಲ್ಲಿ ಹಾರ್ಮೋನಿಯಂ ನುಡಿಸುತ್ತಿದ್ದ. ಆಗ ಮೂಕಿಚಿತ್ರಗಳ ಕಾಲ. ತೆರೆಯ ಮೇಲೆ ಮೂಕಿಚಿತ್ರದ ಪ್ರದರ್ಶನ ನಡೆಯುವಾಗ ಸಿನೆಮಾಹಾಲ್‌ನ ಬದಿಯಲ್ಲಿ ಆರ್ಕೆಸ್ಟಾç ಇರುತ್ತಿತ್ತು; ಹಾರ್ಮೋನಿಯಂ, ವಯೊಲಿನ್, ತಬಲಾಗಳ ಹಿಮ್ಮೇಳ.

    ಸಿನೆಮಾ ಗೀಳು

    ತಾಯಿ ಇಲ್ಲದ ಹುಡುಗನೆಂದು ಕುಟ್ಟಿಯ ಬಗೆಗೆ ಚಿತ್ರಮಂದಿರದ ಸಿಬ್ಬಂದಿಗಳಲ್ಲೂ ಒಂದು ಬಗೆಯ ಮಮಕಾರವಿತ್ತು. ಅದೇ ಸುಲಭದ ಸಿನೆಮಾ ವೀಕ್ಷಣೆಗೆ ಸಹಾಯವಾಯಿತು. ಮನೆಯಲ್ಲಿ ಅಣ್ಣ-ತಮ್ಮ ಅಡುಗೆ ಮಾಡಲು ಕಲಿಯುವುದು ಅನಿವಾರ್ಯವಾಯಿತು. ಅಕ್ಕನ ಮನೆ ಸಮೀಪವೇ ಇದ್ದ ಕಾರಣ ಹಬ್ಬದ ಸಂದರ್ಭಗಳಲ್ಲಿ ಆಕೆ ಬಂದು ಎಲ್ಲ ಸೇರಿ ಅಡುಗೆ ಮಾಡುತ್ತಿದ್ದರು. ದಿನದ ಅಡುಗೆ ಕ್ರಮೇಣ ಪೂರ್ತಿ ತಮ್ಮನ ಪಾಲಿಗೇ ಬಂತು. ಅಡುಗೆಯೆಂದರೆ ಅನ್ನ-ಸಾರು. ತರಕಾರಿ ಇದ್ದರೆ ಸಾರಿಗೇ ಹಾಕಿಬಿಡುವುದು.

    ಸಿನೆಮಾದ ಮಾಂತ್ರಿಕ ವಾತಾವರಣವು ಬಾಲಕ ಕುಟ್ಟಿಯ ಮೇಲೆ ಮೋಡಿ ಮಾಡಿತು. ಆದಷ್ಟು ಸಿನೆಮಾ ನೋಡಿ ರಾತ್ರಿ ತಂದೆ ಮನೆಗೆ ಬರುವ ಮುನ್ನ ಮನೆಗೆ ಬಂದು ಸೇರಿಕೊಳ್ಳುತ್ತಿದ್ದ. ಸಿನೆಮಾ ಮೂಕಿಯಿಂದ ಟಾಕಿಗೆ ಬಂದಾಗ ಅದೊಂದು ದೊಡ್ಡ ಉತ್ಸಾಹದ ಬದಲಾವಣೆಯಾಗಿತ್ತು. ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಎಲ್ಲ ಬಗೆಯ ಚಿತ್ರಗಳು ಬರಲಾರಂಭಿಸಿದವು. ಮೊದಲು ಹಿಂದಿ, ಇಂಗ್ಲಿಷ್, ತಮಿಳು ಚಿತ್ರಗಳು ಬರುತ್ತಿದ್ದವು; ಕನ್ನಡ ಇರಲಿಲ್ಲ. ಹೆಚ್ಚಾಗಿ ಬರೇ ಆ್ಯಕ್ಷನ್ ಪಿಕ್ರ‍್ಸ್. ತಲೆ ಕತ್ತರಿಸುವುದನ್ನು ಕೂಡ ತೋರಿಸುತ್ತಿದ್ದರು. “ಅದು ತುಂಬ ನೈಜ ಆಗಿರುತ್ತಿತ್ತು; ನನಗೆ ಮರೆಯುವುದಕ್ಕೇ ಆಗುವುದಿಲ್ಲ” ಎಂಬುದು ವಿ.ಕೆ. ಮೂರ್ತಿ ಅವರ ಉದ್ಗಾರ. ಮೋತಿಲಾಲ್, ಈಶ್ವರಲಾಲ್, ಶಾಂತಾ ಆಪ್ಟೆ, ದುರ್ಗಾಖೋಟೆ ಆಗಿನ ಸ್ಟಾರ್‌ಗಳು. ಮೋತಿಲಾಲ್, ಸಬಿತಾದೇವಿ ಒಳ್ಳೆಯ ಜೋಡಿ. ಟಾಕಿ ಸಿನೆಮಾ ಬಂದಾಗ ಹಾಲ್‌ನಲ್ಲಿ ಆರ್ಕೆಸ್ಟ್ರಾ ನುಡಿಸುತ್ತಿದ್ದವರ ಉದ್ಯೋಗಕ್ಕೆ ಕತ್ತರಿ ಬಿತ್ತು. ಚಿತ್ರಮಂದಿರದ ಯಾವಾವುದೋ ಕೆಲಸಗಳಲ್ಲಿ ಸಾಧ್ಯವಾದವರಿಗೆ ಉದ್ಯೋಗ ನೀಡಿದರು ಎಂಬುದು ಮೂರ್ತಿ ನೆನಪು.

    ಲಕ್ಷ್ಮೀಪುರಂ ಪ್ರಾಥಮಿಕ ಶಾಲೆಯಲ್ಲಿ ಅವರ ಮೊದಲ ಓದು; ಮತ್ತೆ ಬನುಮಯ್ಯಸ್ ಮಿಡ್ಲ್ ಸ್ಕೂಲ್. ಹೈಸ್ಕೂಲ್ ವಿದ್ಯಾಭ್ಯಾಸ ಇಂಗ್ಲಿಷ್ ಮಾಧ್ಯಮದಲ್ಲಿ ನಡೆಯಿತು. ಸಮವಸ್ತ್ರದಲ್ಲಿ ಕೋಟು ಕಡ್ಡಾಯ, ಕರಿ ಟೋಪಿ ಇರುತ್ತಿತ್ತು; ಮುಂದೆ ಗಾಂಧಿ ಟೋಪಿಗೆ ಕೂಡ ಒಪ್ಪಿಗೆ ಕೊಟ್ಟರು. “ಒಂದು ಸಲ ನಾವು ಏಳೆಂಟು ಹುಡುಗರು ಸೈಕಲ್ ಮೇಲೆ ಶ್ರವಣಬೆಳಗೊಳಕ್ಕೆ ಹೋಗಿದ್ದೆವು. ಯಾರೋ ೩೦ ಮೈಲು ಅಂದಿದ್ದರು. ಅದು ನೋಡಿದರೆ ೧೦೦ ಮೈಲಿಗಿಂತ ಹೆಚ್ಚಿತ್ತು. ಬೆಳಗ್ಗೆ ಹೊರಟವರು ಸೇರಿದ್ದು ರಾತ್ರಿ” – ಇದೊಂದು ಅನುಭವ. ಕುಟ್ಟಿಗೆ ಈಜುವುದೆಂದರೆ ಮೊದಲಿನಿಂದ ಹುಚ್ಚು; ಈಜಲು ಶ್ರೀರಂಗಪಟ್ಟಣ ಮುಂತಾದೆಡೆಗೆ ಹೋಗುತ್ತಿದ್ದರು. ಒಮ್ಮೆ ಸರ್ಕಸ್‌ನಂತೆ ಸೈಕಲ್ ಜಂಪಿಂಗ್ ಮಾಡಿ ಗಾಯ ಮಾಡಿಕೊಂಡಿದ್ದರು. ಅವರ ತಂಗಿಯರು ದೂರ ಇದ್ದರು. ಕಲಿತದ್ದು ಸಹ ವ್ಯವಸ್ಥೆಯಲ್ಲಿ ಅಲ್ಲ. ಆದ್ದರಿಂದ ಹುಡುಗಿಯರೆಂದರೆ ನಾಚಿಕೆ. “ಹಾಗಾಗಿ ಫಿಲ್ಮ್ ಇಂಡಸ್ಟ್ರಿಗೆ ಬಂದ ಮೇಲೆ ಕೂಡ ನಾನು ಫ್ರೀಯಾಗಿ ಹೆಂಗಸರ ಜೊತೆ ಮಾತನಾಡುತ್ತಿದ್ದದ್ದು ತುಂಬಾ ಕಡಮೆ. ಏನಾದರೂ ಕಾರಣವಿದ್ದರೆ ಮಾತ್ರ ಮಾತು. ಇಲ್ಲವಾದರೆ ನನ್ನ ಪಾಡಿಗೆ ನಾನು ಇರುತ್ತಿದ್ದೆ” ಎಂದಿದ್ದರು ಮೂರ್ತಿ.

    ಸಂಗೀತದತ್ತ ಒಲವು

    ಮಿಡ್ಲ್ ಸ್ಕೂಲ್‌ನಲ್ಲಿದ್ದಾಗ ಕುಟ್ಟಿಗೆ ಸಂಗೀತದ ಮೇಲೆ ಆಕರ್ಷಣೆ ಬಂತು. ಮುಂದಿನ ಮನೆಗೆ ಸಂಗೀತ ಕಲಿಸಲು ವಯೊಲಿನ್ ಗುರುಗಳು ಬಂದರೆ ಈತ ಹೋಗಿ ಅಲ್ಲಿ ಕುಳಿತುಬಿಡುತ್ತಿದ್ದ. ವಯೊಲಿನ್ ಬೇಡ; ಶಾಲೆಯದ್ದು ಓದು ಎಂದು ತಂದೆ ಬುದ್ಧಿವಾದ ಹೇಳಿದರು.

    ಆದರೆ ಆತ ಕೇಳಬೇಕಲ್ಲ! ವರ್ಷವಾದ    ಮೇಲೆ ‘ಕಲಿತುಕೋ’ ಎಂದು ತಂದೆ ವಯೊಲಿನ್ ಕೊಡಿಸಿದರು. ಅದಕ್ಕೆ ಮೂರು ರೂಪಾಯಿ; ರಿಪೇರಿ ಅಂಗಡಿಯಿಂದ ಖರೀದಿಸಿದ್ದು. ಶಂಕರಪ್ಪ ಎಂಬವರು ವಯೊಲಿನ್ ಗುರುಗಳು. ಸುತ್ತಲಿನ ಕೆಲವು ಹುಡುಗರಿಗೂ ಸಂಗೀತದಲ್ಲಿ ಆಸಕ್ತಿ ಬಂದು ಅವರೂ ಕಲಿಯತೊಡಗಿದರು. ಒಟ್ಟು ಸೇರಿ ಅಭ್ಯಾಸ ಮಾಡುವುದು, ರೇಡಿಯೊ, ಗ್ರಾಮೋಫೋನ್ ಕೇಳುವುದು, ರಾಮೋತ್ಸವ ಕಛೇರಿಗಳಿಗೆ ಹೋಗುವುದು, ಬಿಡಾರಂ ಕೃಷ್ಣಪ್ಪ, ಚೌಡಯ್ಯ ಕಾರ್ಯಕ್ರಮಗಳಿಗೆ ತಪ್ಪದೆ ಹೋಗುವುದು – ಎಲ್ಲ ನಡೆಯಿತು.

    ಮಹಾರಾಣೀಸ್ ಹೈಸ್ಕೂಲಿನಲ್ಲಿ ಶಾಸ್ತ್ರೀಯ ಸಂಗೀತವನ್ನು ಒಂದು ಐಚ್ಛಿಕ ವಿಷಯವಾಗಿ ಕಲಿಯುವ ಅವಕಾಶ ಒದಗಿತು. ತಂದೆಯಲ್ಲಿ ಕೇಳಿದಾಗ ‘ನಿನಗೆ ಆಸಕ್ತಿ ಇದ್ದರೆ ತೆಗೆದುಕೋ’ ಎಂದರು. ಗಾಯನಕ್ಕಿಂತ ವಯೊಲಿನ್, ವೀಣೆ ಕಲಿಕೆ ಇಷ್ಟವೆನಿಸಿತು. ಹಾಡಲು ಸಂಕೋಚ. ವಯೊಲಿನ್ ಕಲಿತರು. ಪರೀಕ್ಷಕರಾಗಿ ವೆಂಕಟಗಿರಿಯಪ್ಪ, ದೇವೇಂದ್ರಪ್ಪ ಬಂದಿದ್ದರು. ಶಾಲಾ ಕಲಿಕೆಯಲ್ಲಿ ಮೂರ್ತಿ ಸಾಮಾನ್ಯ ವಿದ್ಯಾರ್ಥಿ. ಗಮನವೆಲ್ಲ ಸಂಗೀತ, ನಾಟಕ, ಸಿನೆಮಾಗಳತ್ತ ಹೋಗಿತ್ತು. ಮಹಾರಾಣೀಸ್‌ನಲ್ಲಿ ಆರ್ಕೆಸ್ಟ್ರಾ ಮಾಡಿದರು. ಅದರಲ್ಲಿ ಏಳೆಂಟು ವಿದ್ಯಾರ್ಥಿಗಳಿದ್ದರು. ಮೂರ್ತಿಯೇ ಮುಖ್ಯ ವಾದಕ (ಮೇನ್ ಪ್ಲೇಯರ್).

    ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಸರ್ ಸಿ.ವಿ. ರಾಮನ್ ಮಾತನಾಡಿಸಿದರು. ಸ್ಪೆಷಲ್ಲಾಗಿ ಮೂರ್ತಿ ಹೆಸರನ್ನು ಹೇಳಿ ಹೊಗಳಿದರು. ಅನಂತರ ಈತನ ಸಂಗೀತಾಭ್ಯಾಸ ಸೀರಿಯಸ್ಸಾಗಿ ನಡೆಯಿತು. ಅಣ್ಣನ ಮದುವೆಯಾಗಿ ಉದ್ಯೋಗದ ನಿಮಿತ್ತ ಬೇರೆ ಕಡೆ ಹೋದ ಮೇಲೆ ಮನೆಯಲ್ಲಿ ತಂದೆ-ಮಗ ಇಬ್ಬರೇ.

    ಜಾಹೀರಾತು ನೋಡಿ ಮುಂಬಯಿಗೆ

    ಕುಟ್ಟಿಯ ಸಿನೆಮಾ ಆಕರ್ಷಣೆ ಯಾವ ರೀತಿ ಇತ್ತೆಂದರೆ ಇನ್ನೂ ಎಸ್ಸೆಸ್ಸೆಲ್ಸಿ ಆಗುವಾಗಲೇ ಪತ್ರಿಕೆಯಲ್ಲಿ ಬಂದ ಪ್ರಭಾತ್ ಮೂವಿಟೋನ್ ಎಂಬ ಕಾಲೇಜಿನ ಜಾಹೀರಾತು ನೋಡಿ ಆಕರ್ಷಿತನಾದ. ಮುಂಬಯಿಯ ಸಂಸ್ಥೆ. ನಟನೆ, ನಿರ್ದೇಶನ, ಸಿನಿಛಾಯಾಗ್ರಹಣಗಳಲ್ಲಿ ಆರು ತಿಂಗಳ ತರಬೇತಿ ಎಂದಿತ್ತು. ಬ್ರೋಶರ್ ತರಿಸಿ ನೋಡಿದ್ದೂ ಆಯಿತು. ತಂದೆಯಲ್ಲಿ ಹೇಳಿದಾಗ ಬೇಡ ಎಂದು ಬೈದರು. ಆದರೂ ಅವರಿವರಲ್ಲಿ ಕೇಳಿ ೪೦ ರೂ. ಸಂಗ್ರಹಿಸಿ ೧೨ ರೂ. ಟಿಕೆಟ್ ಕೊಂಡು ಮುಂಬಯಿ ರೈಲು ಹತ್ತಿದ್ದಾಯಿತು. ಇನ್ನೂ ೧೫-೧೬ ವರ್ಷದ ಹುಡುಗ.

    ಅಲ್ಲಿ ಉಳಿದುಕೊಳ್ಳುವ ಬಗ್ಗೆ ಬಂಧುವಾದ ಪೊಲೀಸ್ ಇನ್‌ಸ್ಪೆಕ್ಟರ್ ವಿ.ಆರ್. ರಾವ್ ಅವರನ್ನು ಭೇಟಿ ಮಾಡಿದಾಗ ಅದು ವಂಚಿಸುವ ನಕಲಿ ಸಂಸ್ಥೆ ಇರಬಹುದು ಎಂದರು. ಪರಿಶೀಲಿಸಿದಾಗ ಅದು ನಿಜವೇ ಆಗಿತ್ತು. ವಾಪಸು ಹೋಗುವುದೆಂದು ನಿರ್ಧರಿಸುವಾಗ ಏಕಾಂಗಿಯಾಗಿದ್ದ ಪೊಲೀಸ್ ಇನ್‌ಸ್ಪೆಕ್ಟರಿಗೆ ಟೈಫಾಯ್ಡ್ ಆಯಿತು. ಕುಟ್ಟಿ ಅವರನ್ನು ನೋಡಿಕೊಳ್ಳಲು ನಿಂತ. ಟೈಫಾಯ್ಡ್ ಆಗ ದೊಡ್ಡ ಕಾಯಿಲೆ. ಗುಣಮುಖರಾದ ಅವರು ಸುಮ್ಮನೆ ಮೈಸೂರಿಗೆ ವಾಪಸ್ಸಾಗಬೇಡ; ಅಪ್ರೆಂಟಿಸ್ ಕೆಲಸವಾದರೂ ಕೊಡಿಸುತ್ತೇನೆ ಎಂದರು. ಅಷ್ಟಾಗುವಾಗ ೨-೩ ತಿಂಗಳು ಕಳೆದಿತ್ತು. ಆ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಬಿಟ್ಟದ್ದಾಯಿತು. ಆದ ಲಾಭವೆಂದರೆ ಅಂದಿನ (೧೯೩೮-೩೯) ಮುಂಬಯಿಯನ್ನು ನೋಡಿದ್ದು. ಒಂದಾಣೆ (ಆರು ಪೈಸೆ) ಟಿಕೆಟ್ ತೆಗೆದುಕೊಂಡರೆ ನಗರದಲ್ಲಿ ಇಡೀ ದಿನ ಸುತ್ತಬಹುದು. ಗಂಟೆಗಟ್ಟಲೆ ಸಮುದ್ರದ ಎದುರು ಕೂತಿರುವುದು, ಬೇಜಾರಾದರೆ ಸಿನೆಮಾ ನೋಡುವುದು (ಟಿಕೆಟಿಗೆ ೩-೪ ಆಣೆ). ನೋಡುವುದು ಇಂಗ್ಲಿಷ್ ಸಿನೆಮಾವೇ ಜಾಸ್ತಿ; ಕಾರಣ ಅಲ್ಲಿಯ ತಂತ್ರಗಳ ಆಕರ್ಷಣೆ. ಇರಾನಿ ಹೊಟೇಲ್‌ಗಳಲ್ಲಿ ಒಳ್ಳೆಯ ಟೀ, ಖಾರ ಬಿಸ್ಕತ್ತು ಸಿಗುತ್ತಿತ್ತು. ಆಗ ಮುಂಬಯಿಯಲ್ಲಿ ಬೆಂಗಳೂರಿನವರಿಗಿಂತ ಮಂಗಳೂರಿನವರೇ ಜಾಸ್ತಿ; ಮಾತುಂಗಾದಲ್ಲಿ ದಕ್ಷಿಣ ಭಾರತೀಯರು ತುಂಬಾ ಇದ್ದರು; ತಿರುಗಾಡುತ್ತಾ ಸಿನೆಮಾ ಸ್ಟುಡಿಯೋಗಳತ್ತ ಇಣುಕುವುದು; ಚಿತ್ರ ನಿರ್ಮಾಣವನ್ನು ನೋಡುವ ಆಸಕ್ತಿ. ಆದರೆ ಯಾರೂ ಒಳಗೆ ಬಿಡುತ್ತಿರಲಿಲ್ಲ. ವಾಚ್‌ಮನ್‌ಗಳು ‘ಜಾವೋ ಜಾವೋ’ ಎಂದು ಓಡಿಸುತ್ತಿದ್ದರು. ಮುಂದೆ ಛಾಯಾಗ್ರಾಹಕನಾಗಿ ಬಾಂಬೆ ಟಾಕೀಸ್‌ಗೆ ಶೂಟಿಂಗ್‌ಗೆ ಹೋದಾಗ ಒಬ್ಬ ವಾಚ್‌ಮೆನ್ ಬಂದು ಗುರುತು ಹಿಡಿದು, ಹಿಂದೆ ನಾನು ನಿಮ್ಮನ್ನು ಗೇಟಿನಿಂದ ಓಡಿಸಿದ್ದೆ ಎಂದನಂತೆ.

    ಬರಿಗೈಲಿ ವಾಪಸ್

    ಕೊನೆಗೆ ವಾಪಸ್ಸಾಗಲು ನಿರ್ಧರಿಸಿದ್ದಾಯಿತು. ಶಾಲೆಗೆ ಮತ್ತೆ ಸೇರಿಸಿಕೊಳ್ಳುತ್ತಾರೆಯೆ ಎನ್ನುವ ಭಯ. ಕೈಯಲ್ಲಿ ಸಾಕಷ್ಟು ಹಣ ಇಲ್ಲ. ಪುಣೆಗೆ ಹೋಗಿ ಅಲ್ಲಿಂದ ಅರಸೀಕೆರೆಗೆ ಹೋಗಿ ರೈಲಿನಲ್ಲಿ ಟಿ.ಸಿ.ಯಿಂದ ಸಿಕ್ಕಿ ಬಿದ್ದದ್ದೂ ಆಯಿತು. ಕೈಯಲ್ಲಿದ್ದ ೨-೩ ರೂ. ಆತ ತೆಗೆದುಕೊಂಡ. ಅರಸೀಕೆರೆಯಲ್ಲಿ ಸೋದರಮಾವ ಇದ್ದರು. ಅಲ್ಲಿ ಒಂದು ತಿಂಗಳು ಕಳೆದದ್ದಾಯಿತು. ಮೈಸೂರಿನಲ್ಲಿ ಮನೆಯವರಿಗಿಂತ ಸ್ನೇಹಿತರಿಗೆ ಮುಖ ತೋರಿಸಲು ನಾಚಿಕೆ, ಭಯ. ಮೈಸೂರಿಗೆ ತಲಪಿ ಚಿಪ್ಪಿನೊಳಗೆ ಸೇರಿಕೊಂಡ. ಮನೆಯಿಂದ ಹೊರಗೆ ಬರಲೇ ಇಲ್ಲ. ತಂದೆ ಒಂದು ವರ್ಷ ಸ್ಕೂಲು ಹೋಯಿತಲ್ಲ ಎಂದು ಸ್ವಲ್ಪ ಬೈದರು; ಅವರು ಆಗ ೩೦ ರೂ. ಪಿಂಚಣಿಯಲ್ಲಿದ್ದರು. ಆದರೆ ಹುಡುಗ ಕುಟ್ಟಿ ಅಂದು ನಿರ್ಧಾರ ಮಾಡಿಯೇಬಿಟ್ಟ; ಒಂದು ದಿನ ಸಿನೆಮಾ ಸೇರಿಯೇ ಸೇರುತ್ತೇನೆ ಎಂದು.

    ಮಂತ್ರಾಲಯದಲ್ಲಿ ಜೀವರಕ್ಷಣೆ

    ಮತ್ತೆ ವಯೊಲಿನ್‌ಗೆ ಹೆಚ್ಚಿನ ಗಮನ ನೀಡಿದ. ಸಂಗೀತದ ಈ ಸ್ನೇಹ ನಿರಂತರವಾಯಿತು. ಅವರ ಬದುಕಿನ ಮುಖ್ಯ ತಿರುವುಗಳಲ್ಲಿ ಅವರಿಗೆ ಜೊತೆ ನೀಡಿರುವುದು ಸಂಗೀತವೇ. ಹಣ ಪಡೆಯದೆ ವಯೊಲಿನ್ ಕಲಿಸುವವರ ಹುಡುಕಾಟ ನಡೆಯಿತು. ಆಗ ಸಿಕ್ಕಿದವರು ಬಿ. ಕೇಶವಮೂರ್ತಿ ಅವರು. ಮಂತ್ರಾಲಯಕ್ಕೆ ಕಛೇರಿ ನೀಡಲು ಹೋಗುತ್ತಿದ್ದ ಅವರು ಜೊತೆಗೆ ಕುಟ್ಟಿಯನ್ನು ಕರೆದುಕೊಂಡು ಹೋದರು. ಅಲ್ಲಿ ನದಿಗೆ ಸ್ನಾನಕ್ಕೆ ಹೋದಾಗ ಒಂದು ಘಟನೆ ನಡೆಯಿತು. ಒಂದು ಮಗು ಮುಳುಗುತ್ತಿದ್ದರೂ ಅಲ್ಲಿದ್ದ ಮೂವರು ಬ್ರಾಹ್ಮಣರು ಸುಮ್ಮನೆ ನೋಡುತ್ತಾ ನಿಂತಿದ್ದರು. ಕಾರಣ ಅದು ಶೂದ್ರ ಮಗು. ಮತ್ತೆ ಮಠಕ್ಕೆ ಹೋದಾಗ ಆ ಮೂವರು ‘ಮುಳುಗುತ್ತಿದ್ದ ಮಗುವನ್ನು ರಾಯರೇ ರಕ್ಷಿಸಿದರೆಂದು’ ಸ್ವಾಮಿಗಳ ಮುಂದೆ ಕತೆ ಕಟ್ಟಿ ವರ್ಣಿಸುತ್ತಿದ್ದರಂತೆ. ಇವರ ಗುರುಗಳು ಸಿಟ್ಟಾಗಿ ಸ್ವಾಮಿಗಳ ಎದುರೇ ರೇಗಾಡಿದರು. ಸ್ವಾಮಿಗಳಿಗೆ ಸತ್ಯ ಗೊತ್ತಾಗಿ ಆ ಮೂವರಿಗೆ ಬೈದರು. ಕುಟ್ಟಿಯನ್ನು ಹೊಗಳಿ ಶಾಲು ಹೊದಿಸಿ ಅಭಿನಂದಿಸಿದರು.

    ಮತ್ತೆ ಶಾಲೆಗೆ ಸೇರಿದ್ದಾಯಿತು. ಜೊತೆಗೆ ಮೂವರು ಮಕ್ಕಳಿಗೆ ಮನೆಪಾಠ ಹೇಳಿ ತಿಂಗಳಿಗೆ ೯ ರೂ. ಗಳಿಸಲು ಆರಂಭಿಸಿದ. ಮೊದಲು ಮುಂಬಯಿನಲ್ಲಿದ್ದ ಅಣ್ಣ ಸೈನ್ಯಕ್ಕೆ ಸೇರಿ ಮದ್ರಾಸಿಗೆ(ಚೆನ್ನೈ) ವರ್ಗವಾಗಿದ್ದರು. ಆದರೆ ಮನೆಗೆ ಅವರಿಂದ ಸಿಗುತ್ತಿದ್ದ ನೆರವು ಅಷ್ಟಕ್ಕಷ್ಟೆ. ಆ ವರ್ಷ ಇಪಿಎಸ್ (ಎಲಿಜಿಬಲ್ ಫಾರ್ ಪಬ್ಲಿಕ್ ಸರ್ವೀಸ್) ಬಂತು. ಆ ಸರ್ಟಿಫಿಕೇಟ್ ತೆಗೆದುಕೊಂಡು ಕೆಲಸ ಸಿಕ್ಕಿದರೆ ಸೇರಬಹುದು. ಶಿಕ್ಷಣವನ್ನು ಮುಂದುವರಿಸುವಂತಿಲ್ಲ. ಕುಟ್ಟಿ ಸಿನೆಮಾಗೆ ಸೇರುವ ಆಸೆಯಿಂದ ಪುಣೆಗೆ ಹೋದ. ಅಲ್ಲಿ ಪುರೋಹಿತ್ ಎನ್ನುವವರ ಪರಿಚಯವಾಗಿ ಅವರ ಮೂಲಕ ಸರಸ್ವತಿ ಸಿನಿಟೋನ್ ಸ್ಟುಡಿಯೋಗೆ ಸೇರಿದ. ಆದರೆ ಅಲ್ಲಿ ಕ್ಯಾಮರಾ ಹತ್ತಿರವೂ ಬಿಡುತ್ತಿರಲಿಲ್ಲ. ಊರಿಗೆ ವಾಪಸಾಗುತ್ತೇನೆ ಎನ್ನುವಾಗ ಪುರೋಹಿತ್ ತನ್ನ ಲಾ ಪುಸ್ತಕಗಳ ಅಂಗಡಿಯಲ್ಲಿ ಸೇರಿಕೊಳ್ಳುವಂತೆ ಹೇಳಿದರು. ಸಂಬಳ ಕೇಳಿದಾಗ ಕಾಂಗ್ರೆಸ್ ಪ್ರೊಸೀಡಿಂಗ್ಸ್ (ಕಾಂಗ್ರೆಸ್ ಕಲಾಪಗಳು) ಪುಸ್ತಕದ ೩೦ ಪ್ರತಿ ಕೊಟ್ಟು ಮಾರಿಕೊಳ್ಳುವಂತೆ ಹೇಳಿದರು. ಅದನ್ನು ಯಾರೂ ಕೊಳ್ಳಲಿಲ್ಲ. ಒಬ್ಬ ವಕೀಲರು ಮಾತ್ರ ಒಂದು ಪ್ರತಿಯನ್ನು ಕೊಂಡುಕೊಂಡರು. ವಿವಿಧ ತೊಂದರೆಗಳಿಂದಾಗಿ ಎಸ್ಸೆಸ್ಸೆಲ್ಸಿ ಮುಗಿಸಲು ನಾಲ್ಕು ವರ್ಷಗಳು ಬೇಕಾದವು. ಮೊದಲ ವರ್ಷ ಮುಂಬಯಿಗೆ ಹೋದರು; ಎರಡನೇ ವರ್ಷ ಇಪಿಎಸ್ ಬಂತು. ಮುಂದಿನ ವರ್ಷ ಪುಣೆಗೆ ಹೋದದ್ದು; ಅಂತೂ ನಾಲ್ಕನೇ ವರ್ಷ ಪರೀಕ್ಷೆಗೆ ಕುಳಿ ಎಸ್‌ಎಸ್‌ಎಲ್‌ಸಿ ಪೂರೈಸಿದ್ದಾಯಿತು; ಅದು ೧೯೪೨ ಎಂದು ಉಮಾರಾವ್ ಈ ಬವಣೆಗಳನ್ನು ವಿವರಿಸಿದ್ದಾರೆ.

    ಕ್ವಿಟ್ ಇಂಡಿಯಾ ಚಳವಳಿ

    ಆ ವರ್ಷ ಕ್ವಿಟ್ ಇಂಡಿಯಾ ಚಳವಳಿ. ಕುಟ್ಟಿ ವಿದ್ಯಾರ್ಥಿ ಚಳವಳಿಗೆ ಸೇರಿದ. ಚಳವಳಿ ಬಗ್ಗೆ ಸಹಾನುಭೂತಿ ಇದ್ದ ಕಾರಣ ತಂದೆ ಬೇಡ ಅನ್ನಲಿಲ್ಲ. ಬಿಳಿ ಖಾದಿ ಪಂಚೆ ಮತ್ತು ಜುಬ್ಬಾ ಆಗಿನ ಅವರ ಡ್ರೆಸ್. ನೂರಾರು ಹುಡುಗರು ಸೇರಿ ಮೆರವಣಿಗೆ ನಡೆಸುವುದು, ಮೈಸೂರಿನ ಸುಬ್ಬರಾಯನ ಕೆರೆ ಮೈದಾನದಲ್ಲಿ ಸಭೆ. ಮುಂದೆ ಪ್ರಧಾನಿ ಕಚೇರಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಎಚ್.ವೈ. ಶಾರದಾಪ್ರಸಾದ್ ಆಗ ಇವರ ಜೊತೆ ಇದ್ದರು. ಸೈಕಲ್ ದಳ ರಚಿಸಲು ಹೇಳಿ ಕುಟ್ಟಿಗೆ ಸೈಕಲ್ ಕೊಡಿಸಿದರು. ಊರೆಲ್ಲ ಸುತ್ತಿ ಸೆಂಟ್ರಲ್ ಪೊಲೀಸ್ ಠಾಣೆ ಎದುರು ನಿಂತರು. ಹೊರಟಾಗ ೬೦-೭೦ ಹುಡುಗರಿದ್ದರು. ಪೊಲೀಸರು ಕರೆದಾಗ ಈತ ಠಾಣೆಯ ಒಳಗೆ ಹೋಗಿ ತಿರುಗಿ ನೋಡಿದರೆ ಅಲ್ಲಿದ್ದದ್ದು ಶಾರದಾಪ್ರಸದ್ ಸೇರಿ ೧೩ ಜನ ಮಾತ್ರ. ಅವರನ್ನೆಲ್ಲ ಬಂಧಿಸಿದರು. ಹುಡುಗರಾದ್ದರಿಂದ ಬಿಡುವರೇನೋ ಎಂಬ ನಿರೀಕ್ಷೆಯಿತ್ತು; ಬಿಡಲಿಲ್ಲ. ಮೂರು ತಿಂಗಳು ಜೈಲು ವಾಸವಾಯಿತು. ಅಲ್ಲಿಯೂ ಸುಮ್ಮನಿರದ ಮೂರ್ತಿ ಕೈದಿಗಳಿಗೆ ಅಕ್ಷರ ಕಲಿಸಿದರು. ಬಂಧಿತ ವಿದ್ಯಾರ್ಥಿಗಳನ್ನೆಲ್ಲ ಮೈಸೂರು ಜೈಲಿಗೆ ಹಾಕಿದ್ದರು. “ಊಟ-ತಿಂಡಿ ಚೆನ್ನಾಗಿತ್ತು; “ಜೈಲಿನಿಂದ ಹೊರಬಂದಾಗ ನನ್ನ ತೂಕ ಐದು ಪೌಂಡ್ ಜಾಸ್ತಿಯಾಗಿತ್ತು” ಎಂದಿದ್ದಾರೆ. ವಿ.ಕೆ. ಮೂರ್ತಿ ಕ್ಷಮೆ ಕೇಳಿದರೆ ಬಿಡುತ್ತಿದ್ದರು. ತಂದೆ ಜೈಲಿಗೆ ಬಂದು ನೋಡಿದವರು ಅತ್ತರು; ಮನೆಗೆ ಬಾ ಎಂದು ಕರೆದರು. ಆದರೂ ಬರಲಿಲ್ಲ. ಜೈಲರ್ ಇವರನ್ನು ಲೀಡರ್ ಮಾಡಿದರು. ಆದರೆ ಅಲ್ಲಿಯ ಗುಂಪುಗಾರಿಕೆ ನೋಡಿ ಇನ್ನು ಚಳವಳಿ ಬೇಡ ಅನ್ನಿಸಿತಂತೆ.

    ಹೀರೋ ಆಗುವಾಸೆ

    ಮೂರ್ತಿ ಅವರಿಗೆ ಮೊದಲು ಇದ್ದದ್ದು ಸಿನೆಮಾದ ಹೀರೋ ಆಗುವಾಸೆಯೇ. ಆದರೆ ಬಹುಬೇಗ ಅದು ಆಗುವುದಿಲ್ಲವೆಂದು ಗೊತ್ತಾಯಿತು. ಮತ್ತೆ ಆರಿಸಿಕೊಂಡದ್ದು ಛಾಯಾಗ್ರಹಣ. ಆಗಲೇ ನಾಲ್ಕೂವರೆ ರೂಪಾಯಿಗೆ ಕೊಡಾಕ್ ಬಾಕ್ಸ್ ಕ್ಯಾಮೆರಾ ಕೊಂಡಿದ್ದರು. ಸೋದರಮಾವನ ಮಗ ಜುಬಾರಿ (ಎಂ.ಎನ್. ಸುಬ್ಬರಾಯ) ಬೆಂಗಳೂರಿನಲ್ಲಿ ತರಬೇತಿಗೆ ಸೇರುವಂತೆ ಕರೆದರು. ಅದು ಶ್ರೀ ಜಯಚಾಮರಾಜೇಂದ್ರ ಆಕ್ಯುಪೇಶನಲ್ ಇನ್‌ಸ್ಟಿಟ್ಯೂಟ್ (ಮುಂದೆ ‘ಪಾಲಿಟೆಕ್ನಿಕ್’); ಎಂ. ವಿಶ್ವೇಶ್ವರಯ್ಯನವರು ಕಟ್ಟಿದ ಸಂಸ್ಥೆ. ಅಲ್ಲಿ ಹತ್ತಾರು ಕೋರ್ಸ್ಗಳಿದ್ದವು. ೬೦ ರೂ. ಫೀಸ್. ಮೂರು ವರ್ಷ ಈ ಹಣವನ್ನು ಕೊಟ್ಟು ಓದಿಸಿದ್ದು ಶ್ರೀನಿವಾಸನ್ ಎನ್ನುವ ಗೆಳೆಯ. ಆಗಲೇ ಉದ್ಯೋಗಕ್ಕೆ ಸೇರಿದ್ದ ಆತ ಮುಂದೆ ೧೭-೧೮ ಕಂಪೆನಿಗಳ ಒಡೆಯನಾದರು. “ಗೆಳೆಯರೇ ನಾನು ಮುಂದೆ ಬರಲು ಕಾರಣ” ಎಂಬುದು ವಿ.ಕೆ. ಮೂರ್ತಿ ಅವರು ಮನದುಂಬಿ ಹೇಳಿದ ಮಾತು. ಉಳಿದುಕೊಂಡದ್ದು ವಾಸು ಎನ್ನುವ ಗೆಳೆಯನ ಜೊತೆ; ಅದೇ ಕುಟ್ಟಿ-ವಾಸು (ಕುವಾ) ನಿವಾಸವಾಯಿತು. ವಿಶ್ವೇಶ್ವರಪುರಂನ ರಾಮಕೃಷ್ಣ ಸ್ಟೂಡೆಂಟ್ಸ್ ಹೋಮ್‌ನಲ್ಲಿ ಊಟ. ತಂದೆ ನಿಧನ ಹೊಂದಿದ ಅನಂತರ ಮೈಸೂರಿನ ಸಂಬಂಧ ಕಡಿಯಿತು.

    ಆರ್ಕೆಸ್ಟ್ರಾ, ನಾಟಕ

    ಸಂಸ್ಥೆಯಲ್ಲಿ ಸಿನೆಮಾಟೋಗ್ರಫಿ ವಿಭಾಗದ ಮುಖ್ಯಸ್ಥರಾಗಿದ್ದವರು ಲಕ್ಷ್ಮೀಪುರಂ ನರಸಿಂಹ ಎಂಬವರು. ಕ್ಯಾಮೆರಾ ಇಲ್ಲ; ಪ್ರಾಕ್ಟಿಕಲ್ ತರಬೇತಿ ಇಲ್ಲ. ಬೇಡವಾದುದನ್ನೆಲ್ಲ ಕಲಿಸುತ್ತಾರೆಂದು ಹೇಳಿ ಕೋರ್ಸನ್ನು ಸರಿಪಡಿಸುವಲ್ಲಿಯೂ ಮೂರ್ತಿ ಶ್ರಮಿಸಿದರು. ಸಂಗೀತದ ಹುಚ್ಚಿನಿಂದ ಇವರು ಜೆ.ಸಿ. ಇನ್‌ಸ್ಟಿಟ್ಯೂಟ್‌ನಲ್ಲೂ ಒಂದು ಆರ್ಕೆಸ್ಟಾç ಮಾಡಿದರು. ಪಂಕಜ್ ಮಲ್ಲಿಕ್ ಮತ್ತು ಗಾಯಕ ಸುರೇಂದ್ರನಾಥ ಇವರಿಗೆ ಇಷ್ಟ. ವಯೊಲಿನ್‌ನ ಇವರೇ ಲೀಡ್ ಪ್ಲೇಯರ್. ಒಂದು ಕಾರ್ಯಕ್ರಮಕ್ಕೆ ಬಂದಿದ್ದ ಮೈಸೂರು ಮಹಾರಾಜರು ಇವರ ಸಂಗೀತ ಕೇಳಿ ಕೈಯನ್ನು ಕುಲುಕಿದರಂತೆ. ಅಲ್ಲೇ ಅವರ ನಾಟಕ ನಿರ್ದೇಶನವೂ ಆರಂಭವಾಯಿತು; ಆರಿಸಿಕೊಂಡ ನಾಟಕ ನಾ. ಕಸ್ತೂರಿ ಅವರ ‘ಗಗ್ಗಯ್ಯನ ಗಡಿಬಿಡಿ.’ ಖ್ಯಾತ ನೃತ್ಯಪಟು ರಾಂಗೋಪಾಲ್ ಅವರಿಗೆ ಒಬ್ಬ ಒಳ್ಳೆಯ ವಯೊಲಿನಿಸ್ಟ್ ಬೇಕು; ತಿಂಗಳಿಗೆ ೨೫೦ ರೂ. ಕೊಡುತ್ತಾರೆ ಎಂದು ಆಗಲೇ ಮೂರ್ತಿಗೆ ಒಂದು ಆಫರ್ ಕೂಡ ಬಂತು. ಅದಕ್ಕೆ ಸೇರಿ ಕಾಲೇಜಿನ ತರಗತಿಗಳನ್ನು ತಪ್ಪಿಸಿಕೊಂಡು ಕಾರ್ಯಕ್ರಮಗಳಿಗೆ ಹೋದದ್ದೂ ಆಯಿತು; ಕಾಲೇಜಿನಿಂದ ಎಚ್ಚರಿಕೆಯೂ ಬಂತು. ಅದರ ರಿಹರ್ಸಲ್ ಕೂಡ ಇರುತ್ತಿತ್ತು. ಆರು ತಿಂಗಳಾದರೂ ಹಣ ಕೊಡಲಿಲ್ಲ. ಕೊಟ್ಟದ್ದು ಮುಂಬಯಿ ಕಾರ್ಯಕ್ರಮದಿಂದ ಮರಳಲು ೭೫ ರೂ. ಮಾತ್ರ. ಮುಂದೆ ಕೂಡ ಹಣದ ವ್ಯವಹಾರವೆಂದರೆ ಮೂರ್ತಿ ಅವರಿಗೆ ನಾಚಿಕೆ. ಅದನ್ನು ಸಂಧ್ಯಾ (ಪತ್ನಿ) ನೋಡಿಕೊಳ್ಳುತ್ತಾಳೆ ಎಂಬುದು ಅವರ ವಿವರಣೆ.

    ೧೩ನೇ ್ಯಾಂಕ್ ಪಾಲಿಟೆಕ್ನಿಕ್ನವರು

    ಪಾಲಿಟೆಕ್ನಿಕ್‌ನವರು ಪ್ರಾಕ್ಟಿಕಲ್‌ಗೆ ಇವರನ್ನು ಮುಂಬಯಿಗೆ ಕಳಿಸಿದರು. ಪರೀಕ್ಷೆ ಮುಗಿಯಿತು. ೧೩ ಜನರ ತರಗತಿಯಲ್ಲಿ ಮೂರ್ತಿ ೧೩ನೇ ರ‍್ಯಾಂಕ್. “ನಾನು ಯಾವಾಗಲೂ ಸಾಧಾರಣ ವಿದ್ಯಾರ್ಥಿ. ಆದರೆ ವೃತ್ತಿಜೀವನದಲ್ಲಿ ಯಶಸ್ಸು ಗಳಿಸಿದೆ. ಏಕೆಂದರೆ ಕ್ಯಾಮೆರಾ ವರ್ಕ್ನಲ್ಲಿ ನನಗೆ ಅಷ್ಟು ಆಸಕ್ತಿಯಿತ್ತು.” ಪ್ರಾಕ್ಟಿಕಲ್ ತರಬೇತಿಗೆ ಅವಕಾಶವಿದ್ದರೂ ಮೂರ್ತಿ ಮದ್ರಾಸಿಗೆ ಹೋಗಲಿಲ್ಲ. ಬಾಂಬೆ ಅವರಿಗೆ ಮೋಡಿ ಮಾಡಿತ್ತು. ಮುಂದೆ ಸಾಂದರ್ಭಿಕವಾಗಿ ತಮ್ಮ ಜೆ.ಸಿ. ಪಾಲಿಟೆಕ್ನಿಕ್ ಬಗ್ಗೆ ಪ್ರಸ್ತಾವಿಸಿ “ಈಗ ಹೆಸರಘಟ್ಟದಲ್ಲಿ (ಬೆಂಗಳೂರು) ಟಿವಿ, ಸಿನೆಮಾ ವಿಭಾಗಕ್ಕೆ ಪ್ರತ್ಯೇಕ ಕಟ್ಟಡ ಕಟ್ಟಿಸಿದ್ದಾರೆ; ವ್ಯವಸ್ಥೆ ಸರಿಯಿಲ್ಲ; ಬೇಕಾದ ಪರಿಕರಗಳಿಲ್ಲ. ಕೇಳಿದರೆ ನಾವು ಸಲಹೆ ನೀಡುತ್ತಿರಲಿಲ್ಲವೆ?” ಎಂದು ನಿವೃತ್ತಿಯ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ ೯೦ ಸಮೀಪವಾಗುತ್ತಿದ್ದ ಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದರು.

    ಮೊದಲು ಅಪ್ರೆಂಟಿಸ್

    ಉದ್ಯೋಗ ಅರಸಲು ಮೂರ್ತಿ ಹೋದದ್ದು ಮುಂಬಯಿಗೇ. ಮೂರು ತಿಂಗಳು ಅಪ್ರೆಂಟಿಸ್ ಆಗಿ ಸೇರಿದರು. ಸಂಬಳ ಇಲ್ಲ. ಮತ್ತೆ ಮುಂಬಯಿಯ ಮಾಮೂಲಿ ಸಮಸ್ಯೆ; ಉಳಿದುಕೊಳ್ಳುವುದೆಲ್ಲಿ? ಮೊದಲಿಗೆ ನೆಂಟರಾದ ಪೊಲೀಸ್ ಇನ್‌ಸ್ಪೆಕ್ಟರ್ ಮನೆಗೆ ಹೋದರು. ಮೂರು ತಿಂಗಳು ಕಳೆದು ಅಲ್ಲಿಂದ ಹೊರಟರು. ಅಂಧೇರಿಯ ಪ್ರಕಾಶ್ ಸ್ಟುಡಿಯೋದಲ್ಲಿ ಕೆಲಸ ಕಲಿಯುವುದಾಯಿತು. ಆಗ ತಾನೆ ಅಲ್ಲಿಂದ ಸೂಪರ್‌ಹಿಟ್ ಚಿತ್ರ ‘ರಾಮರಾಜ್ಯ’ ಬಂದಿತ್ತು. ಪ್ರೇಂ ಅದೀಪ್, ಶೋಭನಾ ಸಮರ್ಥ್ ನಾಯಕ-ನಾಯಕಿಯರು. ಶಂಕರ ವ್ಯಾಸ್ ಸಂಗೀತ. ಅಲ್ಲಿಯ ಕ್ಯಾಮೆರಾಮನ್ ಗುರುನಾಥ್‌ರಿಂದ ಕಲಿತರು. ಇಂಗ್ಲಿಷ್ ಸಿನೆಮಾಗಳ ಕ್ಯಾಮೆರಾ ಇಫೆಕ್ಟ್ ಗಮನಿಸುವುದು ಮುಂದುವರಿದಿತ್ತು. ೨-೩ ವಾರದಲ್ಲಿ ಬಹುತೇಕ ಎಲ್ಲ ಕಲಿತಾಯಿತು. ಒಂದು ದಿನ ಸೀನಿಯರ್ ಸೌಂಡ್ ರೆಕಾರ್ಡಿಸ್ಟ್ ಗಿಲಾನಿ ಸಾಬ್ ಅವರು ಬಂದಿರಲಿಲ್ಲ. ಏನೋ ಸಮಸ್ಯೆಯಾಯಿತು. ಇವರು ಕಾರ್ ಬ್ಯಾಟರಿಗೆ ಲಿಂಕ್ ಮಾಡಿ ಸರಿ ಮಾಡಿಕೊಟ್ಟರು. ಎಲ್ಲರಿಗೂ ಆಶ್ಚರ್ಯ. ಆಗಿನ ಒಂದು ಸಮಸ್ಯೆಯೆಂದರೆ, ಸೀನಿಯರ್‌ಗಳು ಸರಿಯಾಗಿ ಕಲಿಸಿಕೊಡುತ್ತಿರಲಿಲ್ಲ. ತಪ್ಪು ಮಾಡಿಯೇ ಕಲಿಯಬೇಕಿತ್ತು. ಮೂರ್ತಿಗಿದ್ದ ಒಂದು ಅನುಕೂಲವೆಂದರೆ ಅವರು ಡಿಪ್ಲೊಮಾ ಓದಿದವರಾಗಿದ್ದುದು.

    ಅಲ್ಲೂ ಸಂಗೀತ ಮುಂದೆ ಬಂತು. ಇವರ ವಯೊಲಿನ್ ವಾದನವನ್ನು ಮೆಚ್ಚಿದ ಮೋಹನ ಸೇಗಾಲ್ ಸಂಗೀತ ನಿರ್ದೇಶಕರಿಗೆ ಪರಿಚಯಿಸಿದರು. ಪರೇಲ್‌ನ ಜಯಂತ್ ಸ್ಟುಡಿಯೋದಲ್ಲಿ ‘ರೇಣುಕಾ’ ಚಿತ್ರಕ್ಕೆ ಒಂದು ಹಾಡನ್ನು ರೆಕಾರ್ಡ್ ಮಾಡಿದಾಗ ಅಂದಿನ ದೊಡ್ಡ ಮೊತ್ತ ೧೦೦ ರೂ.ಗಳೇ ಮೂರ್ತಿ ಕೈಗೆ ಬಂತು.

    ದ್ರೋಣಾಚಾರ್ಯರ ಶಿಷ್ಯ

    ಮುಂದೆ ಹಿರಿಯ ಕ್ಯಾಮೆರಾಮನ್ ದ್ರೋಣಾಚಾರ್ಯರ ಶಿಷ್ಯನಾಗಿ ಜಯಂತ್ ದೇಸಾಯಿ ಸ್ಟುಡಿಯೋದಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು. ತಿಂಗಳಿಗೆ ೭೫ ರೂ. ಸಂಬಳ. ಆಗ ಅಲ್ಲಿ ‘ಮಹಾರಾಣಾ ಪ್ರತಾಪ್’ ಶೂಟಿಂಗ್ ನಡೆಯುತ್ತಿತ್ತು. ಆಗ ಕ್ಯಾಮೆರಾ ಸರಿಯಾಗಿ ಫೋಕಸ್ ಆಗುತ್ತಿಲ್ಲ ಎಂಬ ಸಮಸ್ಯೆ ಬಂದಾಗ ಅದನ್ನು ಸರಿಪಡಿಸಿದ್ದು ಮೂರ್ತಿಯೇ.  ಸುಮ್ಮನೆ ಗ್ರೌಂಡ್ ಗ್ಲಾಸ್ ತಿರುಗಾಮುರುಗಾ ಹಾಕಿದಾಗ ಫೋಕಸ್ ಸರಿಯಾಯಿತು. ದ್ರೋಣಾಚಾರ್ಯರು ‘ನನ್ನ ೧೪ ವರ್ಷಗಳ ಅನುಭವವನ್ನು ನೀರಿಗೆ ಹಾಕಿಬಿಟ್ಟೆ’ ಎಂದರು. ಸ್ಟುಡಿಯೋದಲ್ಲಿ ಎಲ್ಲ ಟೆಕ್ನಿಕಲ್ ವಿಷಯಗಳಿಗೆ ಇವರನ್ನೇ ಕೇಳುತ್ತಿದ್ದರು. ಕಾರಣ ಇವರಿಗೆ ಥಿಯರಿ ಮೊದಲೇ ಕರಗತವಾಗಿತ್ತು. “ನನಗೆ ಆ ವಿಷಯಗಳಲ್ಲಿ ಯಾವಾಗಲೂ ಜಾಣತನವಿತ್ತು. ಭಯ ಇರಲಿಲ್ಲ. ಓದಿದ್ದರಿಂದ ಆತ್ಮವಿಶ್ವಾಸವಿತ್ತು. ಲೈಟಿಂಗ್ ಮಾಡುವಾಗಲೂ ಅಷ್ಟೆ. ಭಾಷೆಯೂ ಸಮಸ್ಯೆಯಾಗಲಿಲ್ಲ. ಕನ್ನಡ, ಇಂಗ್ಲಿಷ್ ಜೊತೆಗೆ ಸ್ವಲ್ಪ ಹಿಂದಿಯೂ ಬರುತ್ತಿತ್ತು. ಸ್ಟುಡಿಯೋದಲ್ಲಿ ಎಲ್ಲರೂ ಹಿಂದಿ ಮಾತನಾಡುತ್ತಿದ್ದರು. ಕೆಳಹಂತದ ಕೆಲಸಗಾರರು ಮಾತ್ರ ಮರಾಠಿ ಬಳಸುತ್ತಿದ್ದರು” ಎಂದು ವಿ.ಕೆ. ಮೂರ್ತಿ ಹೇಳಿದ್ದಿದೆ.

    ಒಮ್ಮೆ ಸೀನಿಯರ್ ಅಸಿಸ್ಟೆಂಟ್ ಬಂದಿರಲಿಲ್ಲ. ಆಗ ಮೂವಿಂಗ್ ಶಾಟ್ಸ್ನಲ್ಲಿ ಫೋಕಸ್ ಅಡ್ಜಸ್ಟ್ ಮಾಡುತ್ತಿದ್ದರು. ದ್ರೋಣಾಚಾರ್ಯರು ಜೋರಾಗಿ ಕೂಗಿ “ನನ್ನ ಕಡೆ ಯಾಕೆ ನೋಡ್ತೀಯಾ? ಆ್ಯಕ್ಷನ್ ಆ ಕಡೆ ನಡೆಯುತ್ತಿದೆ” ಎಂದರು. ನಡೆದದ್ದು ಅಷ್ಟೆ. ಮೂರ್ತಿ ಅವರಿಗೆ ‘ಇನ್ನು ಇಲ್ಲಿಗೆ ಬರುವುದಿಲ್ಲ’ ಎಂದು ನಿರ್ಧರಿಸಲು ಅಷ್ಟೇ ಸಾಕಾಯಿತು. ಮರುದಿನ ಆಫೀಸಿಗೆ ಲೆಕ್ಕಾಚಾರ ಮಾಡುವುದಕ್ಕೇನೇ ಹೋದರು. ದ್ರೋಣಾಚಾರ್ಯರು ಅಲ್ಲಿ ಇವರನ್ನು ಕಂಡು ಸಮಾಧಾನಪಡಿಸಿ ‘ತುಂಬ ಸೆನ್ಸಿಟಿವ್ ಆಗಿರಬೇಡ’ ಎಂದು ವಾಪಸು ಕರೆದುಕೊಂಡು ಬಂದರು.

    ಬಿಸಿಲುಕೋಲು

    ‘ಮಹಾರಾಣಾ ಪ್ರತಾಪ್’ ಮೂರ್ತಿ ಅವರ ಮೊದಲ ಚಿತ್ರ.  ಐತಿಹಾಸಿಕವಾದ ಕಾರಣ ತುಂಬ ಅವಕಾಶ ಅಲ್ಲಿಂದಲೇ (ಸ್ಕೋಪ್) ಇತ್ತು. ಇವರು ಜೈಲಿನಲ್ಲಿದ್ದ ಕೊಠಡಿಗೆ ಒಂದೇ ಕಿಟಕಿ. ಅಲ್ಲಿಂದಲೇ ಬೆಳಕು ಬರುವುದು. ಅದೇ ಥರ ಇದ್ದ ಇಂಗ್ಲಿಷ್ ಚಿತ್ರಗಳ ಲೈಟಿಂಗನ್ನು ಮೂರ್ತಿ ನೋಡಿದ್ದರು. “ಒಂದು ಕಿಟಕಿಯಿಂದ ಒಂದೇ ಒಂದು ಬಿಸಿಲುಕೋಲು ರೂಮಿನೊಳಗೆ ಬರುವುದನ್ನು ಮಾಡೋಣವೆ? ಇಂಗ್ಲಿಷ್ ಚಿತ್ರಗಳಲ್ಲಿ ಮಾಡುತ್ತಾರೆ” ಎಂದು ಆಚಾರ್ಯರಲ್ಲಿ ಕೇಳಿದರು. ಅದಕ್ಕೆ ಆತ “ಅದು ಇಂಗ್ಲಿಷ್ ಚಿತ್ರ. ನಾವಿಲ್ಲಿ ಮಾಡುವುದಕ್ಕೆ ಆಗುವುದಿಲ್ಲ” ಎಂದುಬಿಟ್ಟರು. ಆ ಸ್ಟುಡಿಯೋದಲ್ಲಿ ಎಲ್ಲರೂ ಇವರನ್ನು ಕುಟ್ಟಿ ಎಂದೇ ಕರೆಯುತ್ತಿದ್ದು, ಸಿನೆಮಾದ ಟೈಟಲ್ಸ್ನಲ್ಲೂ ಹಾಗೆಯೇ ಬಂತಂತೆ!

    ಮೂರನೇ ಅಸಿಸ್ಟೆಂಟಾಗಿ ಅಲ್ಲಿ ಸೇರಿದ ಕುಟ್ಟಿ ಎರಡೇ ತಿಂಗಳಲ್ಲಿ ಫಸ್ಟ್ ಅಸಿಸ್ಟೆಂಟಾಗಿ ಪ್ರೊಮೋಶನ್ ಪಡೆದರು. ಇವರಿಗೆ ವಿಷಯ ಚೆನ್ನಾಗಿ ತಿಳಿದಿದ್ದು, ಮುಖ್ಯ ಕ್ಯಾಮೆರಾಮನ್ ಮತ್ತು ನಿರ್ದೇಶಕರು ಕೂಡ ಇವರ ಸಲಹೆ ಕೇಳುತ್ತಿದ್ದರು. “ನನ್ನ ಆತ್ಮವಿಶ್ವಾಸ ಹೆಚ್ಚಾಯಿತು. ಮೊದಲು ಹಿಂಜರಿಕೆ ಇದ್ದರೂ ಅನಂತರ ಧೈರ್ಯವಾಗಿ ನಾನೇ ಸಲಹೆ ಕೊಡುವುದಕ್ಕೆ ಶುರುಮಾಡಿದೆ” ಎಂದವರು ಹೇಳಿದ್ದಿದೆ.

    ದ್ರೋಣಾಚಾರ್ಯರ ಜೊತೆ ಕೆಲಸ ಮಾಡಿದ್ದು ಏಳು ತಿಂಗಳು. ಅಲ್ಲಿದ್ದಾಗ ಒಮ್ಮೆ ‘ಆಮ್ರಪಾಲಿ’ ಸಿನೆಮಾವನ್ನು ನೋಡಿದರು. ಅದರಲ್ಲಿ ಫಾಲಿ ಮಿಸ್ತ್ರಿ ಅವರ ಅದ್ಭುತ ಕ್ಯಾಮೆರಾ ಕೆಲಸ ಗಮನಸೆಳೆಯಿತು. ಅವರೊಂದಿಗೆ ಕೆಲಸ ಮಾಡಬೇಕೆಂದು ಯೋಚಿಸುವಾಗಲೇ ಅವರೇ ಕರೆಯುತ್ತಿದ್ದಾರೆಂದು ವರ್ತಮಾನ ಬಂತು. ಲಕ್ಷ್ಮಿ ಸ್ಟುಡಿಯೋಗೆ ಹೋಗಿ ಆ ‘ಎತ್ತರದ ಸುಂದರ ಪಾರ್ಸಿ ವ್ಯಕ್ತಿ’ಯನ್ನು ಕಂಡರು. ಸೀದಾ ಸೇರಿಸಿಕೊಂಡರು. ಫಾಲಿ ಅವರಿಂದ “ನನ್ನ ಜೊತೆ ೨೩ ಜನ ಅಸಿಸ್ಟೆಂಟ್‌ಗಳು ಕೆಲಸ ಮಾಡಿದ್ದಾರೆ; ಅದರಲ್ಲಿ “You are the best” ಎನ್ನುವ ಹೊಗಳಿಕೆ ಸಿಕ್ಕಿತು. ಅಲ್ಲಿ ನಾಲ್ವರು ಕ್ಯಾಮೆರಾಮನ್‌ಗಳು, ಏಳೆಂಟು ಜನ ಅಸಿಸ್ಟೆಂಟ್‌ಗಳು ಇದ್ದರು. ಆದರೆ ಎಲ್ಲ ಕ್ಯಾಮೆರಾಮನ್‌ಗಳೂ ಅಸಿಸ್ಟೆಂಟಾಗಿ ಮೂರ್ತಿಯೇ ಬೇಕೆಂದು ಅಪೇಕ್ಷಿಸುತ್ತಿದ್ದರು. ಫಾಲಿ ಮಿಸ್ತ್ರಿ ಅವರಂತೂ “ನಾನು ಅಥವಾ ಸಹೋದರ ಜಾಲ್ ಶೂಟ್ ಮಾಡುವಾಗ ಅಸಿಸ್ಟೆಂಟಾಗಿ ಮೂರ್ತಿಯೇ ಬೇಕು” ಎಂದು ಅಪೇಕ್ಷೆಪಟ್ಟಿದ್ದರು.

    “ಮೊದಲೆಲ್ಲ ಸ್ಟುಡಿಯೋದಲ್ಲೇ ಶೂಟಿಂಗ್; ಹೊರಾಂಗಣ ಇರಲಿಲ್ಲ. ಅದೆಲ್ಲ ತುಂಬ ಅಮೆಚೂರಿಶ್ ಅನ್ನಿಸುತ್ತಿತ್ತು. ನಾನು ಫಾಲಿ ಮಿಸ್ತ್ರಿ ಅವರೊಂದಿಗೆ ಕೆಲಸ ಶುರು ಮಾಡಿದ ಮೇಲೆ ಎಲ್ಲ ಬದಲಾಯಿತು. ನನಗಿಷ್ಟ ಬಂದದ್ದು ಮಾಡಲು ಪೂರ್ಣ ಸ್ವಾತಂತ್ರ್ಯವಿತ್ತು. ನಾವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೆವು” ಎಂದು ಮೂರ್ತಿ ಹೇಳಿದ್ದರು. ಅಲ್ಲಿ ‘ಬಾಬುಲ್’, ‘ಮೇಲಾ’ ಚಿತ್ರಗಳಲ್ಲಿ ತುಂಬ ಕಲಿತೆ. ಅದು ನಾನು ಈ ಕ್ಷೇತ್ರದಲ್ಲಿ ಗ್ರಾಜುಯೇಟ್ ಆದ ಕಾಲ. ‘ಮೇಲಾ’ ಸೂಪರ್‌ಹಿಟ್ ಆಯಿತು ಎಂದು ಕೂಡ ಹೇಳಿದ್ದಾರೆ.

    “ಫಾಲಿ ತುಂಬ ಪುಸ್ತಕಗಳನ್ನು ಓದುತ್ತಿದ್ದರು. ಇಂಗ್ಲಿಷ್ ಚಿತ್ರಗಳನ್ನು ನೋಡುತ್ತಿದ್ದರು. ವಿದೇಶೀ ಪತ್ರಿಕೆಗಳಲ್ಲಿ ಬರುವ ಲೇಖನ, ವಿಮರ್ಶೆಗಳನ್ನು ಓದುತ್ತಿದ್ದರು. ಜೊತೆಗೆ ತುಂಬ ಪ್ರತಿಭೆ ಇತ್ತು. ಪಾರ್ಸಿಗಳು ತುಂಬ ಹೆದರಿಕೆಯ ಜನ. ಅಲ್ಲಲ್ಲಿ ಕುಡಿಯಬಾರದೆಂದು ಫಾಲಿ ಮಿಸ್ತ್ರಿ ನೀರನ್ನೇ ಕುಡಿಯುತ್ತಿರಲಿಲ್ಲ. ಮಾತೆತ್ತಿದರೆ ಸೋಡಾ ತರಿಸುತ್ತಿದ್ದರು. ಮನೆಯಿಂದ ಊಟ ಬರುತ್ತಿತ್ತು. ಅವರ ತಮ್ಮ ಜಾಲ್‌ಗೆ ನಟಿ ನೂತನ್ ಬಹಳ ಇಷ್ಟ. ಅವಳನ್ನು ಚೆನ್ನಾಗಿ ಫೋಟೋಗ್ರಾಫ್ ಮಾಡುತ್ತಿದ್ದ. ಅವಳು ತನ್ನನ್ನು ಪ್ರೀತಿಸುತ್ತಾಳೆಂದು ತಪ್ಪು ತಿಳಿದಿದ್ದ” ಎಂದು ವಿ.ಕೆ. ಮೂರ್ತಿ ಹಿಂದಿ ಚಿತ್ರರಂಗದ ಹಲವರ ಬಗೆಗೆ ಒಳನೋಟಗಳನ್ನು ನೀಡುತ್ತಾರೆ.

    ಎರಡು ತಿಂಗಳು ಕಳೆಯುವಾಗ ಫಾಲಿ ಮಿಸ್ತ್ರಿ “ನಾನು ದೊಡ್ಡ ಪಿಕ್ಚರ್ ಮಾಡಲಿದ್ದೇನೆ. ನಿನ್ನ ಹೆಸರು ಕೊಟ್ಟಿದ್ದೇನೆ. ತಿಂಗಳಿಗೆ ೫೦೦ ರೂ. ಸಂಬಳ ಕೊಡುತ್ತಾರೆ” ಎಂದರು. ಅಲ್ಲಿ ಸಿಗುತ್ತಿದ್ದುದು ೧೦೦ ರೂ. ಅಲ್ಲಿ ಏಳೆಂಟು ತಿಂಗಳು ಕಳೆಯಿತು.

    ಬಳಿಕ ಫೇಮಸ್ ಸ್ಟುಡಿಯೋ ಆರಂಭವಾದಾಗ ಫಾಲಿ ಮೂರ್ತಿಯನ್ನು ಅಲ್ಲಿಗೆ ಕಳುಹಿಸಿ ತಾನು ಮತ್ತೆ ಬರುವೆ ಎಂದರು. ಅಲ್ಲಿ ಮ್ಯಾನೇಜರ್ ಆಗಿದ್ದವರು ಸರ್ವೋತ್ತಮ ಬದಾಮಿ ಎನ್ನುವ ಕನ್ನಡಿಗರು. ಹಲವು ಚಿತ್ರ ನಿರ್ದೇಶಿಸಿದ್ದ ಆತ ಮೂರ್ತಿಗೆ ೫೦೦ ರೂ. ಆಗಲ್ಲ, ೧೭೫ ರೂ. ಕೊಡುವೆ ಎಂದರು. ಅಲ್ಲಿ ಮೂರ್ತಿ ತುಂಬ ಪಾಪ್ಯುಲರ್ ಆದರು. ಅಲ್ಲಿ ೩-೪ ವರ್ಷ ಕಳೆಯಿತು. ಫಾಲಿ ಮಿಸ್ತ್ರಿಯಿಂದ ಅಗಾಧವಾಗಿ ಕಲಿತರು.

    “ನನ್ನ ಗುರು ಫಾಲಿ ನಟರ ಮುಖದ ಸೌಂದರ್ಯ ಎದ್ದು ಕಾಣುವಂತೆ ಫೋಟೋಗ್ರಾಫ್ ಮಾಡುವಲ್ಲಿ ಸಾಟಿ ಇಲ್ಲದವರು. ಪ್ರತಿಯೊಂದು ಮುಖವನ್ನೂ ಗಮನಿಸಿ ಅರ್ಥ ಮಾಡಿಕೊಂಡು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದರು. ಪ್ರತಿಯೊಬ್ಬರೂ ಫೋಟೋಜೆನಿಕ್ಕೇ; ಅರ್ಥ ಮಾಡಿಕೊಂಡು ಲೈಟಿಂಗ್ ಮಾಡಬೇಕು – ಎನ್ನುತ್ತಿದ್ದರು. “ಅವರೊಬ್ಬ ಹುಟ್ಟು ಕಲಾವಿದ. ಜೊತೆಗೆ ಆಧುನಿಕ ತಂತ್ರಗಳ ಬಗ್ಗೆ ತುಂಬ ಓದಿಕೊಂಡು ಪ್ರಯೋಗ ಮಾಡುತ್ತಿದ್ದರು. ಅವರ ಲೈಟಿಂಗ್ ತಂತ್ರ ಎಷ್ಟು ಕಲಾತ್ಮಕ ಆಗಿತ್ತೆಂದರೆ ಹೊರಾಂಗಣದಲ್ಲಿ (ಲೊಕೇಶನ್) ಶೂಟಿಂಗ್ ಮಾಡಿದ್ದಾರೋ ಸೆಟ್‌ನಲ್ಲೋ ಎಂಬುದೇ ತಿಳಿಯುತ್ತಿರಲಿಲ್ಲ. ಅಂತಹ ಮೂರು-ಆಯಾಮ (ತ್ರೀ-ಡೈಮೆನ್‌ಶನಲ್) ಇಫೆಕ್ಟ್, ಡೆಪ್ತ್ ಕೊಡುವ ಸಾಮರ್ಥ್ಯ ಅವರಲ್ಲಿತ್ತು. ಅವರು ನೆರಳು-ಬೆಳಕುಗಳನ್ನು ಬಳಸುವ ರೀತಿ ಅದ್ಭುತ. ಅವರಿಗೆ ಅವರದೇ ಶೈಲಿ ಇತ್ತು. ಹಿಂದೆ ಕ್ಯಾಮೆರಾಮನ್‌ಗಳು ಪ್ರಖರ ಬೆಳಕಿನಲ್ಲಿ ಶೂಟ್ ಮಾಡುತ್ತಿದ್ದರು. ಫಾಲಿ ಯಾವಾಗಲೂ ಹಿಂಬೆಳಕು (ಅಗೈನ್‌ಸ್ಟ್ ಲೈಟ್) ಶೂಟ್ ಮಾಡುತ್ತಿದ್ದರು. ಅದರಿಂದ ಹೆಚ್ಚು ಡೆಪ್ತ್ ತರಲು ಸಾಧ್ಯವಿತ್ತು. ಅದು ಫಾಲಿ ಸ್ಟೆöÊಲ್ ಎಂದು ಹೆಸರಾಯಿತು” ಎಂದು ಮೂರ್ತಿ ತಿಳಿಸಿದ್ದಾರೆ.

    ಅವರು ಯಾವ ಸವಾಲಿಗೂ ಇಲ್ಲ ಎನ್ನುವವರಲ್ಲ. ಪರಿಣಾಮಕಾರಿಯಾಗಲು ನಿರ್ದೇಶಕರಿಗೂ ಸಲಹೆ ಕೊಡುತ್ತಿದ್ದರು. ಕರುಣಾಳು, ಮೃದು ಸ್ವಭಾವದ ಆದರ್ಶ ಗುರು. ಮೇಲಾಗಿ ಯಾವ ಜ್ಞಾನವನ್ನೂ ಮುಚ್ಚಿಡುವವರಲ್ಲ. ಅವರ ಬಹಳಷ್ಟು ಶಿಷ್ಯರು ಕೆಲವೇ ವರ್ಷಗಳಲ್ಲಿ ಪ್ರಖ್ಯಾತ ಕ್ಯಾಮೆರಾಮನ್‌ಗಳಾದರು ಎಂದ ಮೂರ್ತಿ, ಸ್ವತಃ ಆ ಬಳಗಕ್ಕೆ ಸೇರಿದ್ದಾರೆ. ಗುರುಗಳ ಈ ಗುಣ-ಲಕ್ಷಣಗಳೆಲ್ಲ ಅವರಲ್ಲೂ ಬಂದವು. “ಇಂಡಸ್ಟ್ರಿಯಲ್ಲಿ ಶೇ. ೮೦ರಷ್ಟು ಜನ ಫ್ಲಾಟ್ ಲೈಟಿಂಗ್ ಮಾಡುತ್ತಿದ್ದಾಗ ನನಗೆ ಬೇರೆ ದಾರಿಯಲ್ಲಿ ಹೋಗಲು ಧೈರ್ಯ ಬಂತು. ದಿಟ್ಟತನ, ಎದೆಗಾರಿಕೆ ಎಲ್ಲ ಫಾಲಿ ಅವರಿಂದ ಕಲಿತೆ. ನಾಯಕಿಯರ ಸೌಂದರ್ಯವನ್ನು ಹೆಚ್ಚಿಸುವ ತಂತ್ರವನ್ನೂ ಕಲಿತೆ” ಎಂದಿದ್ದಾರೆ. ಮಿಸ್ತ್ರಿ ಸಹೋದರರಂತೆ ಮೂರ್ತಿ ಕೂಡ ಗರಿಗರಿಯಾದ ಬಿಳಿ ಪ್ಯಾಂಟ್, ಬಿಳಿ ಶರ್ಟ್ ಧರಿಸಿ ಸ್ಟುಡಿಯೋಗೆ ಹೋಗುತ್ತಿದ್ದರು.

    ನಾಟಕ ಪ್ರೀತಿ

    ಮುಂಬಯಿ ಜೀವನದಲ್ಲಿ ವಿ.ಕೆ. ಮೂರ್ತಿ ಮತ್ತು ಸಂಧ್ಯಾ ಅವರು ಮೈಸೂರು ಅಸೋಸಿಯೇಶನ್ ಜೊತೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದರು. ನಾಟಕ ಪ್ರದರ್ಶನ, ಸಂಗೀತ ಕಾರ್ಯಕ್ರಮ ಮುಂತಾಗಿ ಅಲ್ಲಿ ಅನೇಕ ಚಟುವಟಿಕೆಗಳನ್ನು ಆರಂಭಿಸಿದರು. ನಾಟಕ ನಿರ್ದೇಶನ, ನಟನೆಗಳು ಅವರಿಗೆ ಪ್ರಿಯವಾದ ಹವ್ಯಾಸವಾಗಿತ್ತು. ಸಂಧ್ಯಾ ಅವರು ತುಂಬ ನಾಟಕಗಳಲ್ಲಿ ಅಭಿನಯಿಸಿದರು. “ನಾನು ನಾಟಕ ಮಾಡಿಸುತ್ತಿದ್ದ ಕಾಲದಲ್ಲಿ ಯಾರಾದರೂ ತಿಂಗಳಿಗೆ ೧೦ ಸಾವಿರ ರೂ. ಸಂಬಳ ಕೊಡ್ತೀನಿ, ನಾಟಕ ಮಾಡಿಕೊಂಡಿರು ಅಂದಿದ್ರೆ ಖಂಡಿತ ಒಪ್ಪಿಕೊಂಡುಬಿಡುತ್ತಿದ್ದೆ; ಸಿನೆಮಾ ಕೂಡ ಬಿಟ್ಟುಬಿಡುತ್ತಿದ್ದೆ” ಎಂದು ಕೂಡ ಅವರು ಹೇಳಿದ್ದಿದೆ. ಮೊದಲಿಗೆ ಹೆಂಗಸರ ಪಾತ್ರಗಳನ್ನು ಗಂಡಸರೇ ಮಾಡುತ್ತಿದ್ದರು. ಮತ್ತೆ ನಿಧಾನವಾಗಿ ಪರಿಸ್ಥಿತಿ ಸುಧಾರಿಸಿತು.

    “ಈಗ ಮಾಡುತ್ತಾರಲ್ಲ ಸೆಟ್ಸ್ ಇಲ್ಲದ ನಾಟಕಗಳು. ಅವು ನನಗೆ ಹಿಡಿಸುವುದಿಲ್ಲ. ಸೆಟ್ಸ್ ಹಾಕಿದರೆ ನಿಜವಾಗಿ ಕಾಣಬೇಕು; ನ್ಯಾಚುರಲ್ ಆಗಿರಬೇಕು. ಎಲ್ಲರಿಗೂ ಅಲ್ಲೇ ಇದ್ದೀವಿ ಅನ್ನಿಸಬೇಕು. ಬರೀ ಕರಿ ಪರದೆ ಹಾಕ್ಕೊಂಡು ಮಾಡಿದರೆ ಕೇವಲ ಡಯಲಾಗ್ ಹೇಳಿದಂತೆ ಆಗುವುದಿಲ್ಲವೆ? ನೀವೊಂದು ಘಟನೆಯ ಬಗ್ಗೆ ತೋರಿಸುತ್ತಿರುವಾಗ ಲೊಕೇಶನ್ನೇ ಇಲ್ಲದಿದ್ದರೆ ಹೇಗೆ? ಮನೆ ಅಂದುಬಿಟ್ಟು ಕುರ್ಚಿ, ಮೇಜು ಕೂಡ ಇಲ್ಲದಿದ್ದರೆ ಹೇಗೆ?” – ಎಂಬುದವರ ಪ್ರಶ್ನೆ. ಅವರು ತಮ್ಮ ನಾಟಕಗಳಿಗೆ ಸೆಟ್ಸ್ ಮಾಡಲು ಸ್ಟುಡಿಯೋ ಸಿಬ್ಬಂದಿಯನ್ನು ಕೂಡ ಬಳಸಿಕೊಳ್ಳುತ್ತಿದ್ದರು.

    ವಿ.ಕೆ. ಮೂರ್ತಿ ಅವರ ಸಂಸಾರಜೀವನವು ಅಕ್ಷರಶಃ ಸಿಹಿ-ಕಹಿಗಳಿಂದ ಕೂಡಿತ್ತು. ಮೊದಲ ಪತ್ನಿ ಓರ್ವ ಗೆಳೆಯನ ತಂಗಿ ಸುಶೀಲಾ. ಹೆಣ್ಣುಮಗುವಿಗೆ ಜನ್ಮ ನೀಡಿದ (೧೯೫೮) ಆಕೆ ಕೆಲವೇ ಸಮಯದಲ್ಲಿ ತೀರಿಕೊಂಡರು. ಮಗು ಛಾಯಾಗೆ ಸೆರೆಬ್ರಲ್ ಪಾಲ್ಸಿ; ಎಲ್ಲರಂತೆ ಬದುಕಲಾರದ ಮಗು. ತನ್ನ ಬಿಡುವಿಲ್ಲದ ಜೀವನದ ನಡುವೆ ಗೆಳೆಯರ ಸಹಕಾರದಿಂದ ಮಗುವಿನ ಲಾಲನೆ-ಪಾಲನೆ ನಡೆಸುತ್ತಿದ್ದರು. ಆಗ ಅವರ ಜೀವನದಲ್ಲಿ ಸಂಧ್ಯಾ ಬಂದರು. ಬೆಂಗಳೂರಿನ ಪ್ರಸಿದ್ಧ ಆಯುರ್ವೇದ ವಿದ್ವಾಂಸರೂ, ಸ್ವಾತಂತ್ರ್ಯಯೋಧರೂ ಆದ ಪಾರ್ಥನಾರಾಯಣ ಪಂಡಿತರ ಮಗಳಾದ ಆಕೆ ಎಂ.ಎ. ಕಲಿಯಲು ಮುಂಬಯಿಗೆ ಬಂದಿದ್ದರು. ಸಮಾನ ಸ್ನೇಹಿತರ ಮೂಲಕ ಪರಿಚಯವಾದದ್ದು ಮದುವೆ ಪ್ರೊಪೋಸಲ್ ಮಾಡುವ ತನಕ ಮುಂದುವರಿಯಿತು. “ನಿನಗೆ ಮಗುವಾದರೆ ಈ ಮಗುವನ್ನು ಅಲಕ್ಷಿಸಬಾರದು” ಎಂದು ತಂದೆ ಸಂಧ್ಯಾಗೆ ಹೇಳಿದ್ದರು. ಆಕೆ ಆ ಕೆಲಸವನ್ನು ಬಹು ಚೆನ್ನಾಗಿ ನಿರ್ವಹಿಸಿದರು. ಮಗು ಚೆನ್ನಾಗಿ ಅವಳ ಗೆಳತಿಯೇ ಆದಳು. ಚಿಕಿತ್ಸೆಯಿಂದ ಆಕೆ ತುಂಬ ಸುಧಾರಿಸಿದಳು. ಮೂರ್ತಿ ದಂಪತಿಗೆ ಆಕೆ ಒಬ್ಬಳೇ ಮಗಳು.

    ಕುಟ್ಟಿಗುರುದತ್ ಜೋಡಿ

    ನಿರ್ದೇಶಕ ಗುರುದತ್ ಮತ್ತು ವಿ.ಕೆ. ಮೂರ್ತಿ ಅವರ ಮೊದಲ ಭೇಟಿ ಆದದ್ದು ೧೯೫೦ರಲ್ಲಿ. ಪುಣೆಯ ಪ್ರಭಾತ್ ಸ್ಟುಡಿಯೋದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಇಬ್ಬರೂ ತುಂಬ ಸ್ನೇಹಿತರಾದರು. ಆಗ ಒಬ್ಬರಿಗೊಬ್ಬರು ಮಾತುಕೊಟ್ಟಿದ್ದರಂತೆ – ಯಾರಿಗೆ ಮೊದಲು ಬ್ರೇಕ್ ಸಿಗುತ್ತದೋ ಅವರು ಇನ್ನೊಬ್ಬರಿಗೆ ಬ್ರೇಕ್ ಕೊಡಬೇಕು ಎಂಬುದಾಗಿ. ‘ಬಾಜಿ’ ಚಿತ್ರದಲ್ಲಿ ನಿರ್ದೇಶಕನಾಗಿ ಗುರುದತ್‌ಗೆ ಬ್ರೇಕ್ ಸಿಕ್ಕಿತು. ಮುಂದೆ ಇಬ್ಬರೂ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದರು. ಆ ರೀತಿಯಲ್ಲಿ ಸೃಷ್ಟಿಸಿದ ಮಾಯಾ ಜಗತ್ತು ಈಗ ಸಿನೆಮಾ ಇತಿಹಾಸ!

    ‘ಪ್ಯಾಸಾ’, ‘ಕಾಗಜ್ ಕೇ ಫೂಲ್’ ಮತ್ತು ‘ಸಾಹಿಬ್, ಬೀಬೀ ಔರ್ ಗುಲಾಮ್’ ಚಿತ್ರಗಳಂತೂ ಇಡೀ ಚಿತ್ರರಂಗದ ಪಥದರ್ಶಕಗಳಾಗಿಬಿಟ್ಟವು. ೧೯೫೨ರಲ್ಲಿ ಮೂರ್ತಿ ಸ್ವತಂತ್ರವಾಗಿ ಕ್ಯಾಮೆರಾಮನ್ ಆದ ಮೊದಲ ಚಿತ್ರ ‘ಜಾಲ್’ ಬಂತು. ಮೊದಲೇ ಮಾಡಿದ್ದರು. ಅಧಿಕೃತವಾಗಿ ಮಾಡಿದ್ದು ಇದು. ಗುರುದತ್ ನಿರ್ದೇಶನ. ಮೂರ್ತಿ ಛಾಯಾಗ್ರಹಣದ ಚಿತ್ರಗಳು ಕಾವ್ಯದ ಮಟ್ಟಕ್ಕೇರಿದವು.

    ಸಿನೆಮಾಗಳು ಒಂದೆಡೆ ಅದ್ಭುತ ಯಶಸ್ಸನ್ನು ಕಾಣುತ್ತಿರುವಾಗಲೇ ಗುರುದತ್ ಅವರ ವೈಯಕ್ತಿಕ ಜೀವನವು ದುರಂತದತ್ತ ಸಾಗುತ್ತಿತ್ತು. ಅದು ಮೂರ್ತಿ ಅವರಿಗೆ ತುಂಬ ನೋವು ತಂದ ವಿಚಾರವಾಗಿತ್ತು. ಚಿತ್ರನಟಿ ಗೀತಾರಾಯ್ ಮದುವೆಯಾಗಿ ಮಕ್ಕಳೂ ಆದವು. ನಟಿಯಾಗಿ ವಹೀದಾ ರೆಹಮಾನ್ ಗುರುದತ್ ಚಿತ್ರಕ್ಕೆ ಬಂದಳು. ಆ ಸಂಬಂಧ ಮೂರ್ತಿ ಹೀಗೆ ಹೇಳಿದ್ದಾರೆ: “ವಹೀದಾ-ಗುರುದತ್ ನಡುವೆ ಮೊದಲೆಲ್ಲ ಸರಿಯಾಗಿಯೇ ಇತ್ತು. ಆಮೇಲೇನೋ ಶುರುವಾಯ್ತು.  ಆದರೆ ಗುರುದತ್‌ರಿಗೆ ಗೀತಾಳನ್ನು ಕಂಡರೆ, ಮಕ್ಕಳನ್ನು ಕಂಡರೆ ಅಪಾರ ಪ್ರೀತಿ ಇತ್ತು. ಅವಳು ಅವನಿಗಿಂತ ಹೆಚ್ಚು ರಂಪ ಮಾಡಿಬಿಟ್ಟಳು. ವಹೀದಾ, ಗುರುದತ್ ಒಂದೇ ಮನೆಯಲ್ಲೇನೂ ಇರಲಿಲ್ಲ. ಏನೋ ಸ್ವಲ್ಪ ದಿನ ಸರಿಹೋಗುತ್ತೇಂತ ಗೀತಾ ಸುಮ್ಮನಿದ್ದುಬಿಡಬಹುದಾಗಿತ್ತು. ಅವನು ದಿನಾ ಮನೆಗೆ ಬರೋನು, ಇರೋನು. ಅವಳು ಸ್ವಲ್ಪ ತಾಳ್ಮೆಯಿಂದ ಇರಬಹುದಾಗಿತ್ತು. ಅವನು ತುಂಬಾ ಸೆಂಟಿಮೆಂಟಲ್ ಫೆಲೋ… ಮುಂದಿನದು ಗೊತ್ತೇ ಇದೆ. ಒಂದು ಅಪೂರ್ವ ಪ್ರತಿಭೆ ತನ್ನ ಕೊನೆಯನ್ನು ತಾನೇ ತಂದುಕೊಂಡದ್ದು.”

    ಇದೇ ವೇಳೆ ವಿ.ಕೆ. ಮೂರ್ತಿ ಅವರ ವೈಯಕ್ತಿಕ ಜೀವನ ಆದರ್ಶಪ್ರಾಯವಾದದ್ದು. ತನ್ನ ಒಂದು ನೋವನ್ನು (ಮಗಳ ಅಸಾಮರ್ಥ್ಯ) ಅವರು ಎದುರಿಸಿದ ರೀತಿಯೂ ಅದ್ಭುತ. ಚಿತ್ರರಂಗದಲ್ಲಿರಲು ಇವರು ಲಾಯಕ್ಕಲ್ಲ ಎಂದು ಪತ್ನಿಯಿಂದಲೇ ತಮಾಷೆ ಮಾಡಿಕೊಂಡವರು ಅವರು!

    ಭಾವನೆಯಾಗಿ ಬಿಂಬ: ಮೂರ್ತಿ ತತ್ತ್ವ

    ಸಿನೆಮಾಗಳ ಬಗ್ಗೆ ತಿಳಿಯುತ್ತ ಹೋದಂತೆ ನನಗೆ ವಿ.ಕೆ. ಮೂರ್ತಿ ಅವರ ಅಸಿಸ್ಟೆಂಟಾಗಿ ಕೆಲಸ ಮಾಡಬೇಕೆನ್ನುವ ಆಸೆ ಅಂಕುರಿಸಿತು. ಆಗ ನಾನು ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನಲ್ಲಿ ಮೋಶನ್ ಪಿಕ್ರ‍್ಸ್ ಟೆಕ್ನಿಕ್ ಡಿಪ್ಲೊಮಾದ ವಿದ್ಯಾರ್ಥಿ. (ಮೂರ್ತಿ ಅಲ್ಲೇ ಕಲಿತದ್ದು) ಮೂರು ವರ್ಷಗಳಲ್ಲಿ ಅವರ ಅಸಿಸ್ಟೆಂಟ್ ಆಗುವ ಆಸೆ ದೃಢವಾಗಿ ಬೇರುಬಿಟ್ಟಿತು. ಹೋಗಿ ಕೇಳಿದಾಗ ಸೀದಾ ಸೇರಿಸಿಕೊಂಡರು.

    ಅವರ ಛಾಯಾಗ್ರಹಣ ಮತ್ತು ಗುರುದತ್ ನಿರ್ದೇಶನದ ‘ಕಾಗಜ್ ಕೇ ಫೂಲ್’ ನೋಡಿದಾಗ ನನ್ನ ಸಿನಿಮ್ಯಾಟಿಕ್ ವಿಶುವಲ್ ಸೆನ್ಸಿಬಿಲಿಟಿಯ ಬೀಜಗಳು ಮೊಳೆತವು. ಅನಂತರ ‘ಸಾಹಿಬ್, ಬೀಬೀ ಔರ್ ಗುಲಾಮ್’ ಇವು ಮತ್ತು ಇವುಗಳಿಗಿಂತ ಮೊದಲು ಬಂದ ‘ಪ್ಯಾಸಾ’ ಭಾರತೀಯ ಚಿತ್ರರಂಗದ ಮಾಸ್ಟರ್ ಪೀಸ್‌ಗಳಲ್ಲಿ ಸೇರುತ್ತವೆ. ಇವು ಭಾರತೀಯ ಸಿನೆಮಾ ಇತಿಹಾಸ ದಾಖಲಿಸಿದ ಶ್ರೇಷ್ಠ ಬಿಂಬಗಳು. ಗುರುದತ್ ಮತ್ತು ಮೂರ್ತಿ ಅವರ ಸೂಕ್ಷ್ಮ ಕಲಾತ್ಮಕ ಸ್ಪಂದನದ ಸಾಮರಸ್ಯಕ್ಕೆ ಇವು ಸಾಕ್ಷಿ. ಇಲ್ಲಿ ಮೂರ್ತಿಸಾಬ್ ಭಾರತೀಯ ಚಿತ್ರರಂಗಕ್ಕೆ ಆಧುನಿಕ ಸಂವೇದನೆಯನ್ನು ತಂದಿದ್ದರು. ಇದು ಸತ್ಯಜಿತ್‌ರಾಯ್ ಮತ್ತು ಸುಬ್ರತೋಮಿತ್ರ ಅವರ ಜೋಡಿಯಂತೆಯೇ ಅಪೂರ್ವವಾದದ್ದು.

    ಗುರುದತ್ ಮತ್ತು ವಿ.ಕೆ. ಮೂರ್ತಿ ಅವರು ಸೃಷ್ಟಿಸಿದ ದೃಶ್ಯಗಳಿಂದ ಹುಟ್ಟಿಕೊಂಡ ಅತಿಮುಖ್ಯ ಅಂಶಗಳೆಂದರೆ ಭಾವನೆಗಳು. ಹಲವು ವರ್ಷ ನಾನು ಮೂರ್ತಿಸಾಬ್ ಅವರ ಅಸಿಸ್ಟೆಂಟ್ ಆಗಿದ್ದೆ. ಅವರ ನಂಬಿಕೆ ತುಂಬ ಸರಳವಾಗಿತ್ತು: ‘ಚಿತ್ರಕತೆ ಹೇಳುವುದು ಮನುಷ್ಯರ ಬಗ್ಗೆ. ಮನುಷ್ಯ ಸಂಬಂಧಗಳೆಂದರೆ ಭಾವನೆಗಳ ತಾಕಲಾಟಗಳು. ಛಾಯಾಗ್ರಾಹಕನ ಮೊದಲ ಜವಾಬ್ದಾರಿಯೆಂದರೆ ತೆರೆಯ ಮೇಲಿನ ಘಟನೆಗಳು ನೋಡುಗರ ಭಾವನೆಗಳನ್ನು ತಟ್ಟಿ ಎಬ್ಬಿಸಿ ಅವರು ಚಿತ್ರಕತೆಗೆ ಸ್ಪಂದಿಸುವಂತಹ ಬಿಂಬಗಳನ್ನು ಸೃಷ್ಟಿಸುವುದು. ಒಬ್ಬ ಸಿನೆಛಾಯಾಗ್ರಾಹಕ ಈ ಉದ್ದೇಶಕ್ಕಾಗಿ ತನ್ನೆಲ್ಲ ತಂತ್ರಗಳನ್ನು ಬಳಸಬೇಕು.’ ನನಗೆ ಇದೇ ಗುರುಮಂತ್ರ; ನನ್ನ ಪ್ರತಿಯೊಂದು ಕೆಲಸದಲ್ಲಿಯೂ ಇದೇ ನನಗೆ ಮಾರ್ಗದರ್ಶನ ಮಾಡುವುದು. ಮೂರ್ತಿಸಾಬ್ ಅವರ ತತ್ತ್ವ-ಇಮೇಜ್ ಆ್ಯಸ್ ಇಮೋಶನ್ (ಭಾವನೆಯಾಗಿ ಬಿಂಬ).

    ಗೋವಿಂದ ನಿಹಲಾನಿ, ಸಿನೆಛಾಯಾಗ್ರಾಹಕ, ನಿರ್ದೇಶಕ

    ಕೈಲಾಸಂ: ವಿ.ಕೆ. ಮೂರ್ತಿ ಕಂಡಂತೆ

    ನ್ಯಾಷನಲ್ ಹೈಸ್ಕೂಲ್ ಟೀಚರ್ ರಾಮರಾವ್ ಎಂಬವರು ಖ್ಯಾತ ನಾಟಕಕಾರ ಟಿ.ಪಿ. ಕೈಲಾಸಮ್ ಅವರಿಗೆ ಆಪ್ತರಾಗಿದ್ದರು. ಅವರು ಒಮ್ಮೆ ಕೈಲಾಸಮ್ ಭೇಟಿಗೆ ಹೋಗುವಾಗ ವಿದ್ಯಾರ್ಥಿ ಮೂರ್ತಿಯವರನ್ನು ತನ್ನ ಜೊತೆ ಕರೆದುಕೊಂಡು ಹೋದರು. ಆಗ ತಾನು ಕಂಡ ಕೈಲಾಸಮ್ ಬಗ್ಗೆ ಮೂರ್ತಿ ನೀಡಿದ ವಿವರಗಳಿವು: “ಮೊದಲು ಕೈಲಾಸಂ ಅವರ ತಂದೆಯ ಮನೆ ‘ವೈಟ್‌ಹೌಸ್’ನಲ್ಲಿದ್ದರು. ನಾವು ಹೋದಾಗ ಆಗಲೇ ವೈಟ್‌ಹೌಸ್ ಮಾರಾಟವಾಗಿಹೋಗಿತ್ತು. ಆ ಮನೆಯ ಪಕ್ಕದಲ್ಲೇ ಒಂದು ಔಟ್‌ಹೌಸಿತ್ತು. ಕೈಲಾಸಂ ಅವರ ತಂದೆ ತಮ್ಮ ಮನೆ ಅಡುಗೆಯವನಿಗೆ ಅದನ್ನು ಉಡುಗೊರೆಯಾಗಿ ಕೊಟ್ಟುಬಿಟ್ಟಿದ್ದರು. ಅವನು ಅಲ್ಲೊಂದು ಅಂಗಡಿ ತೆರೆದುಕೊಂಡಿದ್ದ. ಬೀಡಿ, ಸಿಗರೇಟು, ಪೆಪ್ಪರ್‌ಮಿಂಟ್ ಎಲ್ಲ ಮಾರುತ್ತಿದ್ದ. ಹಿಂದುಗಡೆ ಸ್ವಲ್ಪ ಜಾಗ ಇರುತ್ತಲ್ಲಾ, ಅಲ್ಲೇ ಕೈಲಾಸಂ ಮಲಗಿಕೊಳ್ಳುತ್ತಿದ್ದರು.

    “ನಾವು ಆಲ್ಲಿ ಹೋಗಿ ಕೂಗಿದ ತಕ್ಷಣ ಕೈಲಾಸಂ ‘ಪ್ಲೀಸ್ ಕೂತ್ಕೊಳ್ಳಿ, ರೆಡಿಯಾಗಿ ರ‍್ತೀನಿ’ ಅಂದ್ರು. ಹನ್ನೆರಡೂವರೆ ಗಂಟೆಯವರೆಗೂ ಕಾದಿದ್ದೆವು. ಹಿಂದುಗಡೆ ಯಾವುದೋ ಮನೆಯಲ್ಲಿ ಅವರು ಸ್ನಾನ ಮಾಡಿ ಬರುವುದು ತುಂಬಾ ತಡವಾಯ್ತು. ಪಂಚೆ, ಒಂದು ಕಪ್ಪು ತೋಳಿಲ್ಲದ ಬನಿಯನ್ ಹಾಕಿಕೊಂಡು ಬಂದರು. ಕೈಲಾಸಂ ಅವರನ್ನು ನಾನು ಕಂಡದ್ದು ಅದೇ ಮೊದಲು. ಅನಂತರ ನ್ಯಾಷನಲ್ ಹೈಸ್ಕೂಲಿನಲ್ಲಿ ಅವರು ನಾಟಕಗಳನ್ನು ಓದುತ್ತಿದ್ದಾಗ ತಪ್ಪದೆ ಹೋಗುತ್ತಿದ್ದೆ. ಸೊಗಸಾಗಿ ಓದುತ್ತಿದ್ದರು. ಪುಸ್ತಕ ನೋಡಿಕೊಳ್ತಾ ಇರಲಿಲ್ಲ. ಶುರು ಮಾಡಿಬಿಟ್ರೆ ಹೇಳ್ತಾ ಹೋಗುತ್ತಿದ್ದರು.

    “ಒಂದು ಸಲ ಟೌನ್‌ಹಾಲಿನಲ್ಲಿ ಕೈಲಾಸಂ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೆವು. ಆಗ ಕೈಲಾಸಂ ಮತ್ತು ಅವರ ಹೆಂಡತಿ ಒಟ್ಟಿಗೆ ಇರಲಿಲ್ಲ ಅಂತ ಕೇಳಿದ್ದೆವು. ಆವತ್ತು ಅವರ ಹೆಂಡತಿ ಬಂದು ನಾನು ಅವರಿಗೆ ಒಂದು ನಮಸ್ಕಾರ ಮಾಡಿ ಹೊರಟುಹೋಗುತ್ತೇನೆಂದು ಕೇಳಿಕೊಂಡರು.

    ವ್ಯವಸ್ಥಾಪಕರು ಕೈಲಾಸಂ ಅವರಲ್ಲಿ ಈ ವಿಷಯವನ್ನು ಕೇಳಿಕೊಂಡಾಗ ಅವರು ಒಪ್ಪಿದರು. ಆಕೆ ಸುಮ್ಮನೆ ಬಂದು ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿ ಹೊರಟುಹೋದರು. ಎಷ್ಟೋ ಸಲ ಅವರ ರೀಡಿಂಗ್ ಇದ್ದಾಗ ಕೂಡ ಬಂದು ನಮಸ್ಕರಿಸಿ ಹೋಗುತ್ತಿದ್ದರು. ಮುಂದೊಮ್ಮೆ ಕೈಲಾಸಂ ಬಾಂಬೆಗೆ ಹೋಗಿ ದೀರ್ಘಕಾಲ ಅಲ್ಲಿದ್ದ ಬಗ್ಗೆಯೂ ಮೂರ್ತಿ ಹೇಳಿದ್ದಾರೆ.

    ಫಾಲ್ಕೆ ಪ್ರಶಸ್ತಿ ಪುರಸ್ಕೃತ ಸಿನೆಮಾಟೋಗ್ರಾಫರ್ ವಿ.ಕೆ. ಮೂರ್ತಿ

  • ಈಚೆಗೆ ಬಂಗ್ಲಾದೇಶದ ಪ್ರಧಾನಿಯಾಗಿ ಐದನೇ ಬಾರಿ ಪ್ರಮಾಣವಚನ ಸ್ವೀಕರಿಸಿದ ಶೇಕ್ ಹಸೀನಾ ಅವರಿಗೆ ೫೨ ವರ್ಷಗಳ ಹಿಂದೆ ಜನವರಿ ೧೨, ೧೯೭೨ರಂದು ಅವರ ತಂದೆ ಹಾಗೂ ಬಂಗ್ಲಾದೇಶದ ರಾಷ್ಟ್ರಪಿತ ಶೇಕ್ ಮುಜೀಬುರ್ ರೆಹಮಾನ್ ಅವರು ಹೊಸದಾಗಿ ರಚನೆಯಾದ ಸ್ವತಂತ್ರ ದೇಶದ ಮೊದಲ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ ನೆನಪಾಗಿರಲೇಬೇಕು. ತನ್ನ ದೇಶಬಾಂಧವರು ‘ಬಂಗಬಂಧು’ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಮುಜೀಬ್ ಅವರು ಬಂಗಾಳಿ ಮಾತನಾಡುತ್ತಿದ್ದ ತನ್ನ ಜನರನ್ನು ಪಶ್ಚಿಮ ಪಾಕಿಸ್ತಾನೀಯರ ಆಳ್ವಿಕೆಯ ಸಂಕೋಲೆಯಿಂದ ಬಿಡುಗಡೆ ಮಾಡಿದ್ದಷ್ಟೇ ಅಲ್ಲ; ಹೊಸದಾಗಿ ನಿರ್ಮಾಣಗೊಂಡ ತನ್ನ ದೇಶದಲ್ಲಿ ಪ್ರಜಾಪ್ರಭುತ್ವದ ರಾಜಕೀಯ ವ್ಯವಸ್ಥೆಯ ಬೀಜ ಬಿತ್ತುವ ಕಾರ್ಯವನ್ನು ಕೂಡ ಮಾಡಿದರು.

    ಆದರೆ ಪಾಕಿಸ್ತಾನಕ್ಕೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಲು ಸಾಧ್ಯವಾಗಲೇ ಇಲ್ಲ. ಅದರ ಸ್ಥಾಪಕನಾದ ಮೊಹಮದಾಲಿ ಜಿನ್ನಾ ಪಾಶ್ಚಾತ್ಯ ಮಾದರಿಯ ಪ್ರಜಾಪ್ರಭುತ್ವವನ್ನು ಅಲ್ಲಿ ಜಾರಿಗೆ ತರಲು ಬಯಸಿದ್ದರು; ಆದರೆ ಅದು ಆ ದೇಶದಲ್ಲಿ ಬೇರೂರಲೇ ಇಲ್ಲ. ಅದರ ಅಸ್ತಿತ್ವದ ಮೊದಲ ದಶಕದಲ್ಲಿ ಪಾಕಿಸ್ತಾನಕ್ಕೆ ಒಂದು ಸಂವಿಧಾನ ಕೂಡ ಇರಲಿಲ್ಲ; ಅಲ್ಲಿ ಭಾರತ ಸರ್ಕಾರ ಕಾಯ್ದೆ-೧೯೩೫ರನ್ವಯವೇ ಆಡಳಿತ ನಡೆಸಲಾಗುತ್ತಿತ್ತು.

    ೧೯೫೬ರಲ್ಲಿ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಒಂದು ಸಂವಿಧಾನವು ಜಾರಿಗೆ ಬಂತು; ಆದರೆ ಅದು ಅಲ್ಪಾಯುಷಿ ಆಯಿತು. ೧೯೫೮ರಲ್ಲಿ ಸಂಭವಿಸಿದ ಸೇನಾಕ್ರಾಂತಿಯಲ್ಲಿ ಜನರಲ್ ಅಯೂಬ್‌ಖಾನ್ ಅಧಿಕಾರಕ್ಕೆ ಬಂದರು. ಪಾಕಿಸ್ತಾನ ತನ್ನ ಅಸ್ತಿತ್ವದ ೭೫ ವರ್ಷಗಳಲ್ಲಿ ಬಹುತೇಕ ಅರ್ಧಭಾಗವನ್ನು ಸೇನಾಡಳಿತದಲ್ಲೇ ಕಳೆಯಿತು. ಅಲ್ಲಿ ತಥಾಕಥಿತ ಚುನಾಯಿತ ಸರ್ಕಾರ ಎನ್ನುವ ವ್ಯವಸ್ಥೆ ಇದ್ದಾಗಲೂ ದೇಶ ಸೇನೆಯ ಬಿಗಿ ನಿಯಂತ್ರಣದಲ್ಲೇ ಇತ್ತು.

    ನಿರಂತರವಾಗಿ ಅಧಿಕಾರಕ್ಕೆ ಬಂದ ಸೇನಾಡಳಿತಗಳ ಕಾಲದಲ್ಲಿ ಪೂರ್ವಪಾಕಿಸ್ತಾನವು ಸಾಕಷ್ಟು ಮಲತಾಯಿ ಧೋರಣೆಯನ್ನು ಅನುಭವಿಸಿತ್ತು. ಬಂಗಬಂಧು ಎದ್ದುನಿಂತು ಬಂಗಾಳಿ ರಾಷ್ಟ್ರದ ಹಕ್ಕುಗಳ ಪರವಾಗಿ ಹೋರಾಡಿದರು. ಅದಕ್ಕಾಗಿ ಪಾಕಿಸ್ತಾನದ ಮಿಲಿಟರಿ ಸರ್ವಾಧಿಕಾರಿಗಳು ಅವರನ್ನು ದಂಡಿಸದೆ ಬಿಡಲಿಲ್ಲ. ಒಂದು ಚುನಾವಣೆ ನಡೆಸಿ ಲಾಹೋರ್‌ನಲ್ಲೊಂದು ‘ಕೈಗೊಂಬೆ ಸರ್ಕಾರ’ವನ್ನು ಸ್ಥಾಪಿಸುವುದಕ್ಕೆ ಜನರಲ್ ಯಾಹ್ಯಾಖಾನ್ ಮುಂದಾದಾಗ ಪೂರ್ವಪಾಕಿಸ್ತಾನದ ಬಂಗಾಳಿ ಮತದಾರರು ಬಂಗಬಂಧು ನಾಯಕತ್ವದ ಅವಾಮಿ ಲೀಗನ್ನು ಬೆಂಬಲಿಸಿದರು. ೧೯೭೦ರ ಡಿಸೆಂಬರ್ ೭ರಂದು ನಡೆದ ಚುನಾವಣೆಯಲ್ಲಿ ೩೦೦ ಸ್ಥಾನಗಳ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಾಮಿ ಲೀಗ್ ೧೬೬ ಸ್ಥಾನಗಳಲ್ಲಿ ಜಯಗಳಿಸಿತು.

    ನಿಜವೆಂದರೆ, ಆಗ ಮುಜೀಬುರ್ ರೆಹಮಾನ್ ಅವರನ್ನು ಸರ್ಕಾರ ರಚಿಸುವುದಕ್ಕೆ ಆಹ್ವಾನಿಸಬೇಕಿತ್ತು. ಆದರೆ ಯಾಹ್ಯಾಖಾನ್ ಮಾರ್ಚ್ ೨೫, ೧೯೭೧ರಂದು ಬಂಗಬಂಧುವನ್ನು ಬಂಧಿಸಿದರು; ಮತ್ತು ಪಾಕಿಸ್ತಾನ ಸೇನೆ ಪೂರ್ವಪಾಕಿಸ್ತಾನದ ಜನತೆಯ ಮೇಲೆ ಹೇಳಲಾಗದಷ್ಟು ದೌರ್ಜನ್ಯಗಳನ್ನು ನಡೆಸಿತು. ಅಂತಹ ಸನ್ನಿವೇಶದಲ್ಲಿ ಕೋಲ್ಕತಾದಲ್ಲಿ ಅವಾಮಿ ಲೀಗ್ ನೇತೃತ್ವದ ಸರ್ಕಾರವನ್ನು ಸ್ಥಾಪಿಸಲಾಯಿತು; ಮತ್ತು ಮುಕ್ತಿಬಾಹಿನಿಯ ನೇತೃತ್ವದಲ್ಲಿ ಒಂದು ಬಂಡುಕೋರ ಚಳವಳಿ ಆರಂಭವಾಯಿತು. ಪಶ್ಚಿಮಭಾಗದಲ್ಲಿ ಪಾಕಿಸ್ತಾನದ ಸೇನೆ ಭಾರತೀಯ ಪಡೆಗಳ ಮೇಲೆ ದಾಳಿ ನಡೆಸಿದಾಗ ಭಾರತ ಮಧ್ಯಪ್ರವೇಶಿಸಿತು; ಪರಿಣಾಮವಾಗಿ ಪಾಕಿಸ್ತಾನ ಸೇನೆಗೆ ಅವಮಾನಕರ ಸೋಲಾಗಿ ಅದು ಶರಣಾಗತವಾಯಿತು; ಜೊತೆಗೆ ಬಂಗ್ಲಾದೇಶ ಎನ್ನುವ ಹೊಸ ದೇಶದ ರಚನೆಯಾಯಿತು.

    ಹತ್ತು ತಿಂಗಳ ಜೈಲುವಾಸದಿಂದ ಬಿಡುಗಡೆಗೊಂಡ ಬಂಗಬಂಧು ಜನವರಿ ೧೦, ೧೯೭೨ರಂದು ಢಾಕಾಗೆ ವಾಪಸಾದರು. ವಿಜಯದ ನಗೆಯೊಂದಿಗೆ ಲಂಡನ್‌ನಿಂದ ಹೊರಟ ಅವರು ಅಲ್ಲಿಯ ಹೀತ್ರೊ ವಿಮಾನನಿಲ್ದಾಣದಲ್ಲಿ “ನಾನು ಎಂದೂ ಪಾಕಿಸ್ತಾನದ ಪ್ರಜೆ ಎಂದು ಭಾವಿಸಲಿಲ್ಲ; ಮುಂದೆಯೂ ಭಾವಿಸಲಾರೆ” ಎಂದು ಘೋಷಿಸಿದರು. ಪಾಕಿಸ್ತಾನದಿಂದ ಸಂಪೂರ್ಣ ಭಿನ್ನವಾದ ತತ್ತ್ವಗಳ ಆಧಾರದಲ್ಲಿ ಅವರು ಬಂಗ್ಲಾದೇಶವನ್ನು ಕಟ್ಟಬಯಸಿದರು. ತಾಯ್ನಾಡಿಗೆ ತಮ್ಮನ್ನು ಸ್ವಾಗತಿಸಲು ಬಂದ ೭೦ ಲಕ್ಷ ಜನರನ್ನುದ್ದೇಶಿಸಿ ಭಾಷಣ ಮಾಡುವಾಗ ಅವರು ಹೀಗೆ ಹೇಳಿದರು: “ನನ್ನ ಬಂಗಾಳದ ಜನರಿಗೆ ಹೊಟ್ಟೆ ತುಂಬ ಅನ್ನ ಉಣ್ಣಲು ಸಾಧ್ಯವಾಗದಿದ್ದರೆ, ಬಂಗಾಳದ ನನ್ನ ಮಾತೆಯರಿಗೆ ಮತ್ತು ಸೋದರಿಯರಿಗೆ ಮಾನಮುಚ್ಚುವಂತಹ ಬಟ್ಟೆ ದೊರೆಯುವವರೆಗೆ ಮತ್ತು ನಮ್ಮ ಯುವಜನರಿಗೆಲ್ಲ ಉದ್ಯೋಗ ಅಥವಾ ಉದ್ಯೋಗಾವಕಾಶಗಳು ಲಭ್ಯವಾಗುವವರೆಗೆ ನನ್ನ ಈ ಸ್ವಾತಂತ್ರ್ಯವು ನಿರರ್ಥಕ. ದೇಶವನ್ನು ಸುಭದ್ರವಾದ ಆರ್ಥಿಕ ತಳಹದಿಯ ಮೇಲೆ ನಿಲ್ಲಿಸುವುದು ನನ್ನ ಜೀವನದ ಪರಮಧ್ಯೇಯ” – ಎಂದು.

    ದುರದೃಷ್ಟವೆಂಬಂತೆ, ಪಾಕಿಸ್ತಾನದ ಕರಿನೆರಳಿನಿಂದ ಪಾರಾಗಲು ಬಂಗ್ಲಾದೇಶಕ್ಕೆ ಸಾಧ್ಯವಾಗಲಿಲ್ಲ. ೧೯೭೫ರ ಆಗಸ್ಟ್ ೧೫ರಂದು ಭಾರತವು ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದಾಗ ಬಂಗ್ಲಾದೇಶದ ಸೇನೆ ಮುಜೀಬ್ ಅವರ ನಿವಾಸದ ಮೇಲೆ ದಾಳಿ ನಡೆಸಿ ಅವರನ್ನು ಮತ್ತವರ ಕುಟುಂಬದ ಹತ್ತಾರು ಜನರನ್ನು ಕೊಂದುಹಾಕಿತು; ಅದರಲ್ಲಿ ಅವರ ಪತಿ ಮತ್ತು ಮೂವರು ಪುತ್ರರೂ ಸೇರಿದ್ದರು; ಕೊನೆಯ ಬಾಲಕನಿಗೆ ಕೇವಲ ಹತ್ತು ವರ್ಷ. ಮುಂದೆ ಅದೇ ನವೆಂಬರ್‌ನಲ್ಲಿ ಅಧಿಕಾರಕ್ಕೆ ಬಂದ ಜಿಯಾವುರ್ ರೆಹಮಾನ್ ಸೇನೆಯ ದಾಳಿಯ ವೇಳೆ ಸ್ಥಳದಲ್ಲಿ ಹಾಜರಿರಲಿಲ್ಲ; ಆದರೆ ಆತ ಪಿತೂರಿಗಾರರನ್ನುದ್ದೇಶಿಸಿ ಹೀಗೆ ಹೇಳಿದರೆಂದು ತಿಳಿದುಬಂದಿದೆ: “ನಾನೊಬ್ಬ ಹಿರಿಯ ಅಧಿಕಾರಿ. ಈ ಕೆಲಸದಲ್ಲಿ ನಾನು ಭಾಗಿಯಾಗಲಾರೆ. ಆದರೆ ಓರ್ವ ಕಿರಿಯ ಅಧಿಕಾರಿ ಅದನ್ನು ಮಾಡುವುದಿದ್ದರೆ ಮುಂದುವರಿಸಲಿ.”

    ಬಂಗಬಂಧು ಏನು ಬಯಸಿದ್ದರೋ ಬಂಗ್ಲಾದೇಶ ಆ ರೀತಿ ಮುಂದುವರಿಯಲಿಲ್ಲ. ಅದು ಕೂಡಾ ಪಾಕಿಸ್ತಾನ ಮಾದರಿಯ ಸೇನಾ ಸರ್ವಾಧಿಕಾರವಾಯಿತು; ಮತ್ತು ೧೫ ವರ್ಷ ಅದೇರೀತಿ ಮುಂದುವರಿಯಿತು. ೧೯೮೧ರಲ್ಲಿ ಜ|| ಹುಸೇನ್ ಮಹಮ್ಮದ್ ಇರ್ಷಾದ್, ಜಿಯಾವುರ್ ರೆಹಮಾನ್ ಅವರನ್ನು ಕೊಂದು ಸೇನಾ ಸರ್ವಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ; ಮತ್ತು ಅದೇ ರೀತಿ ಸುಮಾರು ಹತ್ತು ವರ್ಷ ಮುಂದುವರಿದ. ಆಗ ನಕಲಿ ಚುನಾವಣೆಗಳು ನಡೆದು, ಜಿಯಾವುರ್ ರೆಹಮಾನ್ ಅವರ ಬಂಗ್ಲಾದೇಶ್ ನ್ಯಾಷನಲ್ ಪಾರ್ಟಿ (ಬಿಎನ್‌ಪಿ) ಹಾಗೂ ಇರ್ಷಾದ್ ಅವರ ಜತಿಯಾ ಪಾರ್ಟಿಗಳು ಭಾಗವಹಿಸುತ್ತಿದ್ದವು; ಇರ್ಷಾದ್ ನಿರಂತರವಾಗಿ ಸರ್ಕಾರವನ್ನು ಪರೋಕ್ಷವಾಗಿ ನಡೆಸುತ್ತಿದ್ದರು. ಮುಂದೆ ೧೯೯೦ರಲ್ಲಿ ವಿದ್ಯಾರ್ಥಿಗಳು ಬೃಹತ್ ಪ್ರಜಾಸತ್ತಾತ್ಮಕ ಕ್ರಾಂತಿ ನಡೆಸಿದಾಗ ಸೇನೆ ತನ್ನ ನೆಲೆಗಳಿಗೆ ವಾಪಸ್ಸಾಗಬೇಕಾಯಿತು; ಆಗ ಪ್ರಜಾಪ್ರಭುತ್ವವನ್ನು ಹೋಲುವ ಒಂದು ವ್ಯವಸ್ಥೆ ಅಧಿಕಾರಕ್ಕೆ ಬಂತು. ಕಳೆದ ಮೂರು ದಶಕಗಳಲ್ಲಿ ಬಿಎನ್‌ಪಿ ಮತ್ತು ಅವಾಮಿ ಲೀಗ್‌ಗಳು ಸರ್ಕಾರ ನಡೆಸುತ್ತ ಬಂದಿವೆ; ಕಳೆದ ಇಪ್ಪತ್ತು ವರ್ಷಗಳಿಂದ ಅವಾಮಿ ಲೀಗ್ ಅಧಿಕಾರದಲ್ಲಿದೆ.

    ಮುಜೀಬುರ್ ರೆಹಮಾನ್ ಮತ್ತವರ ಇಡೀ ಕುಟುಂಬದ ಹತ್ಯೆ ನಡೆದಾಗ ಪುತ್ರಿಯರಾದ ಶೇಕ್ ಹಸೀನಾ ಮತ್ತು ರೆಹಾನಾ ಯೂರೋಪ್‌ನಲ್ಲಿದ್ದರು. ಈ ಸೋದರಿಯರಿಗೆ ಭಾರತದ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ದೆಹಲಿಯಲ್ಲಿ ಆಶ್ರಯ ನೀಡಿದರು. ಅವಾಮಿ ಲೀಗ್‌ನ ಮುಖ್ಯಸ್ಥೆಯಾಗಿ ಆಯ್ಕೆಗೊಂಡ ಶೇಕ್ ಹಸೀನಾ ೧೯೮೧ರಲ್ಲಿ ಢಾಕಾಗೆ ಮರಳಿದರು; ಆದರೆ ಸೇನಾಡಳಿತ ಅವರನ್ನು ಆಗಾಗ ಬಂಧಿಸುತ್ತಿತ್ತು; ಹಾಗೂ ದಮನಕ್ಕೊಳಪಡಿಸುತ್ತಿತ್ತು. ಅಂತಿಮವಾಗಿ ೧೯೯೦ರಲ್ಲಿ ಪ್ರಜಾಪ್ರಭುತ್ವವು ಮರಳಿದಾಗ ಇಬ್ಬರು ಪ್ರಮುಖ ನಾಯಕರಲ್ಲಿ ಆಕೆ ಒಬ್ಬರಾಗಿದ್ದರು; ಈವರೆಗೆ ಸುಮಾರು ಇಪ್ಪತ್ತು ವರ್ಷ ಹಸೀನಾ ದೇಶದ ಪ್ರಧಾನಿಯಾಗಿದ್ದಾರೆ. ಈಚೆಗೆ (೨೦೨೪) ನಡೆದ ಚುನಾವಣೆಯಲ್ಲಿ ಅವಾಮಿ ಲೀಗ್ ಜಯಿಸುವುದರೊಂದಿಗೆ ಆಕೆ ಮತ್ತೆ ಐದು ವರ್ಷಗಳ ಅಧಿಕಾರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಓರ್ವ ಚುನಾಯಿತ ಪ್ರಧಾನಿಯಾಗಿ ೨೫ ವರ್ಷ ಅಧಿಕಾರವನ್ನು ಗಳಿಸುವ ಮೂಲಕ ಶೇಕ್ ಹಸೀನಾ ಒಂದು ದಾಖಲೆಯನ್ನು ನಿರ್ಮಿಸಿದ್ದಾರೆ.

    ಜೀವನದ ಅನುಭವಗಳು ಹಸೀನಾ ಅವರಿಗೆ ಹಲವು ಮಹತ್ತ್ವದ ಪಾಠಗಳನ್ನು ಕಲಿಸಿವೆ. ಭಯೋತ್ಪಾದನೆ ಮತ್ತು ಮತೀಯ ಉಗ್ರಗಾಮಿಗಳ ವಿರುದ್ಧ ಆಕೆ ಗಟ್ಟಿಯಾಗಿ ನಿಂತಿದ್ದಾರೆ. ಆರ್ಥಿಕ ಪುನಶ್ಚೇತನದ ಬಗೆಗೆ ಅವರು ವಿಶೇಷ ಗಮನ ನೀಡಿದ ಕಾರಣ ದೇಶದ ಆರ್ಥಿಕತೆ ತುಂಬ ಮೇಲ್ಮಟ್ಟಕ್ಕೇರಿದೆ. ೨೦೧೮ರಲ್ಲಿ ಅತಿ ಹಿಂದುಳಿದ ದೇಶವೆನ್ನುವ ವಿಶ್ವಸಂಸ್ಥೆಯ ಪಟ್ಟಿಯಲ್ಲಿದ್ದ ದೇಶ, ಈಗ ಅಭಿವೃದ್ಧಿಶೀಲ ದೇಶ ಎನ್ನುವ ಮಟ್ಟಕ್ಕೆ ಬಂದಿದೆ. ತಲಾ ಜಿಡಿಪಿ, ಮಾನವ ಬಂಡವಾಳ ಸೂಚ್ಯಂಕ ಮತ್ತು ಆರ್ಥಿಕ ಅಪಾಯ ಸೂಚ್ಯಂಕದಂತಹ ಮಾನದಂಡಗಳಲ್ಲಿ ಅದು ನೆರೆರಾಷ್ಟ್ರಗಳನ್ನು ಹಿಂದೆ ಹಾಕಿದೆ.

    ಆದರೂ ದೇಶದ ಪ್ರಜಾಪ್ರಭುತ್ವ ಈಗಲೂ ಸೂಕ್ಷ್ಮಸ್ಥಿತಿಯಲ್ಲೇ (ದುರ್ಬಲ) ಇರುವುದೊಂದು ಪ್ರಧಾನ ಸವಾಲಾಗಿದೆ. ಈಚಿನ ಚುನಾವಣೆಯನ್ನು ಪ್ರಮುಖ ವಿರೋಧಪಕ್ಷವಾದ ಬಿಎನ್‌ಪಿ ಬಹಿಷ್ಕರಿಸಿತು; ಮತ್ತು ಹಿಂಸಾತ್ಮಕ ಘಟನೆಗಳು ನಡೆದವು. ಬಿಎನ್‌ಪಿಯ ‘ಚುನಾವಣೆ ಬಹಿಷ್ಕಾರ’ ನಿರ್ಧಾರವನ್ನು ಯಾರೂ ಬೆಂಬಲಿಸಲು ಸಾಧ್ಯವಿರಲಿಲ್ಲ. ಭಾರತದಲ್ಲಾಗಲಿ ಅಥವಾ ಬಂಗ್ಲಾ ದೇಶದಲ್ಲಾಗಲಿ, ವಿರೋಧಪಕ್ಷವನ್ನು ಬಲಪಡಿಸುವುದು ಆಳುವ ಪಕ್ಷದ ಕರ್ತವ್ಯವೆಂದು ಯಾರೂ ವಾದಿಸಲು ಸಾಧ್ಯವಿಲ್ಲ. ಆದ್ದರಿಂದ ಪಾಶ್ಚಾತ್ಯ ಜಗತ್ತಿನ ಕೆಲವರು ಮಾಡಿದ ಈ ಟೀಕೆ ನಿಲ್ಲುವುದಿಲ್ಲ. ಏನಿದ್ದರೂ ಶೇಕ್ ಹಸೀನಾ ಅವರು ಒಂದು ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು; ಅದೆಂದರೆ, ದೇಶದ ಮುಂದಿರುವ ಸವಾಲನ್ನು ಎದುರಿಸುವುದು;  ಹಾಗೂ ಬಂಗ್ಲಾದೇಶದಲ್ಲಿ ಎಂದಿಗೂ ಪ್ರಜಾಪ್ರಭುತ್ವವೇ ಇರುವುದು; ಮತ್ತು ಬಂಗ್ಲಾದೇಶ ಸದಾ ಒಂದು ಜಾತ್ಯತೀತ (ಸೆಕ್ಯುಲರ್) ರಾಷ್ಟ್ರವಾಗಿರುವುದು ಎನ್ನುವ ಆಕೆಯ ತಂದೆಯ ಕನಸನ್ನು ನನಸಾಗಿಸಲು ಆಕೆಗೆ ಮಾತ್ರ ಸಾಧ್ಯ.  

    (ಅನುವಾದ: ಎಚ್. ಮಂಜುನಾಥ ಭಟ್)

    ಬಂಗ್ಲಾದೇಶದಲ್ಲಿ ಶೇಕ್ ಹಸೀನಾ ಸರ್ಕಾರ ಐದನೇ ಅವಧಿಯ ಸವಾಲು

  • ಸಂವಿಧಾನವೆಂದರೆ ವಕೀಲನ ದಸ್ತಾವೇಜಿನ ಬರಿಯ ಹಾಳೆಗಳಲ್ಲ, ಅದು ಚಲಿಸುತ್ತಿರುವ ಜೀವಂತ ವಾಹನ. ಅದರ ಚೈತನ್ಯ ಆ ಕಾಲಘಟ್ಟದ ಚೈತನ್ಯವೂ ಆಗಿರುತ್ತದೆ’’ ಎನ್ನುವ ಡಾ. ಬಿ.ಆರ್. ಅಂಬೇಡ್ಕರ್‌ರ ಮಾತುಗಳು ಎಷ್ಟು ಅರ್ಥಪೂರ್ಣ ಎಂದರೆ ಪ್ರಸ್ತುತ ಭಾರತ ಆ ಮಾತುಗಳ ಸಾಕ್ಷಾತ್ಕಾರ ಎಂಬಂತೆ ಕಂಗೊಳಿಸುತ್ತಿದೆ.

    ಹೆಚ್ಚೇನು ದೂರದ ಉದಾಹರಣೆ ಬೇಕಿಲ್ಲ. ಪಕ್ಕದ ಪಾಕಿಸ್ತಾನದಲ್ಲಿ ಈ ಕಂತಿನಲ್ಲಿ ರಾಷ್ಟಾçಧ್ಯಕ್ಷ ಆಗಿದ್ದಾತ ಉಳಿದ ಸಮಯ ಜೈಲಿನಲ್ಲಿ ಕೊಳೆತು ಕಾಲ ಕಳೆಯುತ್ತಾನೆ. ಅಧಿಕಾರವೊಂದು ಕೈತಪ್ಪಿದರೆ ನಸುಕೇರುವ ಮುಂಚೆಯೇ ಊರು ಬಿಡುತ್ತಾನೆ ಅಥವಾ ಜೈಲಿನಲ್ಲಿ ಕೈದಿಯಾಗಿರುತ್ತಾನೆ. ಪ್ರಪಂಚದ ಮೂಲೆಯ ಯಾವುದೋ ಊರಿನಲ್ಲಿ ಅಂಡಲೆಯುತ್ತಾನೆ. ಅಲ್ಲಿನ ಐದನೇ ಪ್ರಧಾನಿ ಹುಸೇನ್ ಶಾಹೀದ್ ಸುಹ್ರಾವಾರ್ದಿಯನ್ನು ೧೯೬೨ರಲ್ಲಿಯೇ ಸೇನಾಧ್ಯಕ್ಷ ಅಯೂಬ್‌ಖಾನನಿಗೆ ಸಹಾಯ ಮಾಡಲಿಲ್ಲವೆಂದು ಜೈಲಿಗೆ ದಬ್ಬಲಾಗಿತ್ತು. ಜುಲ್ಫೀಕರ್ ಅಲಿ ಭುಟ್ಟೋ ಅಧ್ಯಕ್ಷಪೀಠವೇರಿ ಇಳಿದ ತಕ್ಷಣ ನೇಣುಗಂಬಕ್ಕೆ ಹಾಕಿ ಅಲ್ಲಿನ ಮಿಲಿಟರಿ ವ್ಯವಸ್ಥೆ ಕುಣಿದಾಡಿಬಿಟ್ಟಿತ್ತು. ಎರಡೆರಡು ಬಾರಿ ಪ್ರಧಾನಿಯಾಗಿ ಅಧಿಕಾರ ಚಲಾಯಿಸಿದ್ದ ಬೆನೆಜಿರ್ ಭುಟ್ಟೋ ಕಂಬಿ ಎಣಿಸುವುದನ್ನು ಯಾರಿಂದಲೂ ತಪ್ಪಿಸಲಾಗಲಿಲ್ಲ. ಜಾಣತನದಿಂದ ತಾನೊಂದು ಚಿಕಿತ್ಸೆಗೆ ತೆರಳುತ್ತೇನೆಂದು ದೇಶ ಬಿಟ್ಟ ಮಾಜಿ ಪ್ರಧಾನಿ ನವಾಜ್ ಶರೀಫ್ ಲಂಡನ್ನಿಗೆ ಪಲಾಯನ ಮಾಡಿ ಮತ್ತೆ ಪಾಕ್ ಕಡೆ ತಲೆಹಾಕಿಯೂ ಮಲಗಲಿಲ್ಲ. ಅಧಿಕಾರ ಸಿಕ್ಕಿದರೆ ಮರಳಿ ಬರುತ್ತೇನೆ ಎನ್ನುವ ನವಾಜ್ ಶರೀಫ್‌ಗೆ ಅಧಿಕಾರ ಹೋದಾಗ ಜೀವಂತ ಇರುತ್ತೇನೆ ಎನ್ನುವ ಯಾವ ಖಾತರಿಯೂ ಇರಲಿಲ್ಲ. ಪರ್ವೇಜ್ ಮುರ‍್ರಫ್‌ನಂತಹ ವ್ಯಕ್ತಿ ಬದುಕಿದೆಯಾ ಬಡಜೀವ ಎಂದು ಕಾಲಿಗೆ ಬುದ್ಧಿ ಹೇಳಿದ್ದು, ಇಮ್ರಾನ್‌ಖಾನ್ ಗುಂಡೇಟು ತಿಂದು ಬಂಧನಕ್ಕೊಳಗಾಗಿ ಪಡಿಪಾಟಲು ಪಡುತ್ತಿರುವುದು ನಮ್ಮ ಕಾಲಘಟ್ಟದಲ್ಲಿಯೇ ನಡೆಯುತ್ತಿದೆ. ಸರಹದ್ದು ಕಾದು ದೇಶದ ಪರಮಾಧಿಕಾರ ರಕ್ಷಿಸಬೇಕಿದ್ದ ಅಯೂಬ್‌ಖಾನ್, ಯಾಹ್ಯಾಖಾನ್, ಜಿಯಾಉಲ್‌ಹಕ್, ಪರ್ವೇಜ್ ಮುರ‍್ರಫ್‌ರಂತಹ ದಂಡನಾಯಕರುಗಳು ಚುನಾಯಿತ ಸರ್ಕಾರಗಳನ್ನು ದಿಂಡುರುಳಿಸಿ ಪಾರಮ್ಯ ಮೆರೆದಿದ್ದು, ಅಧಿಕಾರಕ್ಕಾಗಿ ಮುಗಿಬಿದ್ದಿದ್ದು, ಪಾಕಿಸ್ತಾನದ ರಾಜಕೀಯ ದೊಂಬರಾಟಕ್ಕೆ ಹಿಡಿದ ಕೈಗನ್ನಡಿ. ದೇಶ ರಚನೆಯಾದ ತರುವಾಯ ಪಾಕ್ ಆಡಳಿತದ ಅರ್ಧಭಾಗ ಸೇನೆಯೇ ತನ್ನ ಹೆಸರಿಗೆ ಬರೆಸಿಕೊಂಡಿದೆ. ಅರಾಜಕತೆ ಎಂದರೆ ಏನು ಎಂಬುದಕ್ಕೆ ಪಾಕಿಸ್ತಾನ ಒಂದು ಸ್ಪಷ್ಟ ಉದಾಹರಣೆ.

    ಮಹಾಭಾರತದ ಒಂದು ಶ್ಲೋಕ ಹೀಗಿದೆ: “ಲೋಕರಂಜನಂ ಏವ ಅತ್ರ ರಾಜಧರ್ಮಃ ಸನಾತನ ಸತ್ಯಸ್ಯ ರಕ್ಷಣಂ ಚೈವ ವ್ಯವಹಾರಸ್ಯ ಚರ್ಯವಃ” ಹೇಳುವುದೇನೆಂದರೆ, ಜನರನ್ನು ಅಂದರೆ ಪ್ರಜೆಗಳನ್ನು ಸಂತೋಷವಾಗಿರಿಸುವುದು, ಸತ್ಯದೊಂದಿಗೆ ನಿಲ್ಲುವುದು ಮತ್ತು ಸರಳ ನಡವಳಿಕೆಯನ್ನು ಅಭ್ಯಾಸ ಮಾಡುವುದು ಇದು ರಾಜಧರ್ಮವಾಗಬೇಕು ಎನ್ನುವುದಾಗಿದೆ. ಭಾರತದ ಸಂವಿಧಾನ ಎನ್ನುವುದು ಜನಸಾಮಾನ್ಯನನ್ನು ಸುಖಿಯಾಗಿರಿಸುವ ನಿಟ್ಟಿನಲ್ಲಿ ಅಭೂತಪೂರ್ವ ಕೊಡುಗೆಗಳನ್ನು ನೀಡಿದೆ. ಸತ್ಯದೊಂದಿಗೆ ನಿಲ್ಲುವ ಪರಿಪಾಟಿಗಳನ್ನು ಯಾವತ್ತೂ ತನ್ನ ಹೆಗ್ಗಳಿಕೆ ಎಂದೇ ಪರಿಗಣಿಸಿ ಕೆಲಸ ಮಾಡುತ್ತಿದೆ. ರಾಜಧರ್ಮ ಎಂದರೆ ಸರಳ ನಡವಳಿಕೆಗಳನ್ನು ಅಭ್ಯಾಸ ಮಾಡಿಸುವುದು ಎನ್ನುವ ಭೂಮಿಕೆಯಡಿ ಇಲ್ಲಿನ ಸಂವಿಧಾನ ಜನಸಾಮಾನ್ಯರಿಗೆ ಅಧಿಕಾರ ನೀಡಿದೆ. ಒಂದು ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತಂದಾಗ ಅನೇಕ ಸವಾಲುಗಳು ಎದುರಾಗುತ್ತವೆ. ಅಧಿಕಾರ ಹಂಚಿಕೆ ಸಾಮಾನ್ಯರಿಗೆ ಆದರೆ ಅದರ ಸಫಲತೆ ಎಷ್ಟರಮಟ್ಟಿಗೆ ಸಾಧÀ್ಯ ಎನ್ನುವ ಕಳವಳವೂ ಎದುರಾಗುತ್ತದೆ. ‘ರಾಜಧರ್ಮದ ಪರಿಪಾಲನೆ’ ಎನ್ನುವ ಪರಿಕಲ್ಪನೆಯಲ್ಲಿ ಸರಳ ನಡವಳಿಕೆಗಳನ್ನು ಅಭ್ಯಾಸ ಮಾಡಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಭಾರತದ ಸಂವಿಧಾನ ಅನಾಯಾಸವಾಗಿ ಅದನ್ನು ಸಾಧಿಸಿ ತೋರಿಸಿದೆ ಎನ್ನುವುದೇ ಇದರ ಹೆಗ್ಗಳಿಕೆ.

    ರಾಜಧರ್ಮದ ಮಾತು ಬಂದಾಗ ಈ ನೆಲ ಅನೇಕ ಮೇಲ್ಪಂಕ್ತಿಗಳನ್ನು ಜಗತ್ತಿಗೆ ನೀಡಿದೆ. ಒಬ್ಬ ವ್ಯಕ್ತಿಯ ನೈಜ ಸ್ವಭಾವ ಅರಿಯಲು ಆತನಿಗೆ ಅಧಿಕಾರ ಅಥವಾ ಸಂಪತ್ತನ್ನು ನೀಡಿ ಪರೀಕ್ಷಿಸಬೇಕು ಎನ್ನುವ ಮಾತಿದೆ. ಆದರೆ ಅದನ್ನು ನೀಡಿದಾಗ ಜಗತ್ತಿನಲ್ಲೇ ನಡೆಯದ ವ್ಯತಿರಿಕ್ತಗಳು ಭಾರತದಲ್ಲಿ ನಡೆದುಹೋಗಿವೆ.

    ಸೋದರರೊಳ್ ಸೋದರರಂ

    ಕಾದಿಸುವುದು ಸುತನ ತಂದೆಯೊಳ್ ಬಿಡದು

    ತ್ಪಾದಿಸುವುದು ಕೋಪಮನ್ ಅಳವು

    ಈ ದೊರೆತು ಎನೆ, ತೊಡರ್ವುದೆಂದು ರಾಜ್ಯಶ್ರೀಯೊಳ್

    ಮಲ್ಲಯುದ್ಧ, ದೃಷ್ಟಿಯುದ್ಧ, ಜಲಯುದ್ಧಗಳ ತರುವಾಯ ದೊರೆತ ರಾಜ್ಯ, ಮಕಾಡೆ ಮಲಗಿದ ಅಣ್ಣ ಅರ್ಥಾತ್ ಭರತಚಕ್ರವರ್ತಿಯ ಕಡೆಗೆ ದೃಷ್ಟಿಹರಿಸುತ್ತ ಬಾಹುಬಲಿ ಹೇಳಿದ ಮಾತುಗಳಿವು. ರಾಜಪ್ರಭುತ್ವ ಎಂಬುದು ಸಹೋದರರನ್ನೇ ಎದುರಾಳಿಗಳನ್ನಾಗಿಸುತ್ತದೆ. ತಂದೆ ಮಕ್ಕಳೆನ್ನುವ ಮಾನವ ಸಂಬಂಧಗಳನ್ನೇ ಪಕ್ಕಕ್ಕಿರಿಸಿ ಬಡಿದಾಡಿಸಿಹಾಕುತ್ತದೆ. ಹಾಗಾಗಿ ಇವಾವುದೂ ಬೇಡ – ಎಂದು ಕೈಗೆ ಬಂದ ಅಧಿಕಾರ ತ್ಯಜಿಸಿ ವೈರಾಗ್ಯಮೂರ್ತಿಯಾದ ಬಾಹುಬಲಿಯ ಕತೆಗೆ ಸಾಕ್ಷಿಯಾದ ಭೂಮಿಯಿದು. ಅದೇ ರೀತಿಯಲ್ಲಿ ಕಳಿಂಗದ ಅಶೋಕ ಮಹಾರಾಜ ಯುದ್ಧದ ತರುವಾಯ ಬದಲಾದದ್ದೂ ಕೂಡ ಇಲ್ಲಿನ ಇತಿಹಾಸದಲ್ಲಿ ದಾಖಲಾಗಿದೆ. ‘ರಾಜಧರ್ಮ’ ಎನ್ನುವ ಪರಿಕಲ್ಪನೆ ಭಾರತದ ಪಾಲಿಗೆ ಅತ್ಯಂತ ವಿಶೇಷ. ಒಬ್ಬ ರಾಜನಾಗಿ ಹೇಗೆ ನಡೆದುಕೊಳ್ಳಬೇಕು ಎನ್ನುವ ಔನ್ನತ್ಯ, ಅಂತೆಯೇ ಒಬ್ಬ ಪ್ರಜಾಪಾಲಕನಾಗಿ ಹೇಗಿರಬಾರದೆನ್ನುವ ಹೇಯತನ ಇವೆರಡರ ಪರಿಚಯವನ್ನೂ ಭಾರತದ ಕೆಲ ಕಾಲಘಟ್ಟಗಳು ಮಾಡಿವೆ. ಅರವಟ್ಟಿಗೆ, ಛತ್ರ, ದೀನರಿಗೆ ಆಸರೆಯಾಗಿ ನಿಂತ ರಾಜಮಹಾರಾಜರುಗಳ ಪರಂಪರೆ ಒಂದೆಡೆಯಾದರೆ ದೇವಸ್ಥಾನಗಳನ್ನು ಕೊಳ್ಳೆಹೊಡೆದು, ವಿಗ್ರಹಗಳನ್ನು ಕಡಿದು ತುಂಡರಿಸಿ, ಮೂರ್ತಿಗಳ ಭಂಜನೆ ಮಾಡಿದವರ ಕ್ರೌರ್ಯಗಳೂ ಇಲ್ಲಿನ ಆಡಳಿತದ ಪರಿಚಯ ನೀಡಬಲ್ಲುದು. ಅಂಬೇಡ್ಕರ್ ಹೇಳಿದಂತೆ ಸಂವಿಧಾನ ಆಯಾಯ ಕಾಲಘಟ್ಟದ ಚೈತನ್ಯದ ಅನಾವರಣ ಮಾಡಬಲ್ಲುದು.

    ೧೯೪೬ ನವೆಂಬರ್ ೨೬ರಂದು ಅಂಗೀಕರಿಸಿ, ಜನವರಿ ೨೬, ೧೯೫೦ರಂದು ಜಾರಿಗೆ ಬಂದ ನಮ್ಮ ಸಂವಿಧಾನ ಬದಲಾದ ಕಾಲಘಟ್ಟದಲ್ಲಿ ೪೭೦ ವಿಧಿಗಳು, ೨೫ ಭಾಗಗಳು, ೧೨ ಅನುಚ್ಛೇದಗಳನ್ನು ಹೊಂದಿದೆ. ನಾವು ಹೊಂದಿರುವ ಸಂವಿಧಾನ ಅತ್ಯಂತ ವಿಸ್ತಾರವಾದ ಮತ್ತು ಕಾಲಾನುಕ್ರಮದ ಬದಲಾವಣೆಗಳಿಗೆ ತೆರೆದುಕೊಂಡಿರುವ ಒಂದು ಬೃಹತ್ ಸಂರಚನೆ. ೧೧೮ ತಿದ್ದುಪಡಿಗಳನ್ನು ಹೊಂದಿದ ಈ ವ್ಯವಸ್ಥೆ ಪ್ರಪಂಚದ ಯಾವುದೇ ದೇಶದ ಲಿಖಿತ ಸಂವಿಧಾನಕ್ಕಿAತಲೂ ದೀರ್ಘವಾಗಿರುವಂತಹ ಹೆಗ್ಗಳಿಕೆ ಹೊಂದಿದೆ. ಬ್ರಿಟನ್, ಅಮೆರಿಕಾ ಸಂಯುಕ್ತ ಸಂಸ್ಥಾನ, ಫ್ರಾನ್ಸ್, ಐರ್ಲೆಂಡ್, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಜಪಾನ್ ಮೊದಲಾದ ದೇಶಗಳ ಸಾಂವಿಧಾನಿಕ ವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ ಉದಾತ್ತವಾದ ಭಾರತೀಯತೆಗೆ ಒಗ್ಗುವ ಅನೇಕ ಸಂಗತಿಗಳನ್ನು ಭಾರತದ ಸಂವಿಧಾನದಲ್ಲಿ ಅಡಕಗೊಳಿಸಲಾಯಿತು. ಕೆ.ಎಂ. ಮುನ್ಶಿ, ಮಹಮ್ಮದ್ ಸಾದುಲಾ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಗೋಪಾಲಸ್ವಾಮಿ ಅಯ್ಯಂಗಾರ್, ಬಿ.ಎಲ್. ಮಿಟ್ಟಲ್, ಟಿ.ಟಿ. ಕೃಷ್ಣಮಾಚಾರಿ, ಡಿ.ಪಿ. ಖೈತಾನ್, ಬಿ.ಎನ್. ರಾವ್ – ಅವರನ್ನೊಳಗೊಂಡ ಕರಡು ರಚನಾ ಸಮಿತಿಗೆ ಅಧ್ಯಕ್ಷರಾದವರು ಡಾ. ಬಿ.ಆರ್. ಅಂಬೇಡ್ಕರ್‌ರವರು. ಭಾರತದ ಸೌಭಾಗ್ಯ ಎಂದರೆ ಪ್ರಪಂಚದ ಎಲ್ಲ ಗುಣಾತ್ಮಕತೆಗಳನ್ನು ಪೇರಿಸಿದ ನಂತರ ಭಾರತಕ್ಕೆ ನೈಜವಾಗಿ ಪೀಯೂಷವೇ ಒಲಿಯಿತು. ಅತ್ಯಂತ ಶ್ರೇಷ್ಠವಾದ ಜನತಂತ್ರ ರಾಷ್ಟ್ರವನ್ನು ಕಟ್ಟುವ ನಿಟ್ಟಿನಲ್ಲಿ ಸಂವಿಧಾನ ನೀಡಿದ ಕೊಡುಗೆಯನ್ನು ದೇಶ ನಿತ್ಯ ಸ್ಮರಿಸಬೇಕು.

    ಪ್ರತಿ ಐದು ಕಿ.ಮೀ.ಗೊಂದರಂತೆ ಭಾರತದ ಭಾಷೆಯ ಸೊಗಡು ಬದಲಾಗುತ್ತದೆ ಎನ್ನುವ ಮಾತಿದೆ. ಭಿನ್ನ ಭಿನ್ನ ಭಾಷೆ, ಆಚಾರ, ವಿಚಾರ, ಪ್ರಾಂತ, ಬುಡಕಟ್ಟು, ಜೀವನಕ್ರಮಗಳನ್ನು ಹೊಂದಿರುವ ದೇಶದಲ್ಲಿ ಸಾಮಾಜಿಕ ನ್ಯಾಯಗಳನ್ನು ಒದಗಿಸುವಿಕೆ ಅತ್ಯಂತ ಸವಾಲಿನ ಕೆಲಸ. ಆದರೆ ಭಾರತೀಯರು ಎಲ್ಲ ಸವಾಲುಗಳನ್ನು ಮೀರಿ ಸಂವಿಧಾನದ ಆಶೋತ್ತರಗಳನ್ನು ಭರಪೂರ ಯಶಸ್ವಿಗೊಳಿಸಿದರು. ರಾಜಪ್ರಭುತ್ವವೇ ಜೀವಾಳವಾಗಿದ್ದ ದೇಶದಲ್ಲಿ ಸಹಜ ರೀತಿಯ ಜೀವನದ ಅನುಷ್ಠಾನ ಅಷ್ಟು ಸುಲಭವಾಗಿ ಕಲ್ಪಿಸಿಕೊಳ್ಳಲೂ ಸಾಧ್ಯವಾಗಿರಲಿಲ್ಲ. ರಾಜಧರ್ಮಗಳ ಪಾಲನೆಯ ಹೆಸರಿನಲ್ಲಿ, ಹುಕುಂ ಪಾಲಿಸುವ ಭರದಲ್ಲಿ, ಮಂತ್ರಿಮಾಗಧರ ಕಟ್ಟಪ್ಪಣೆಗಳಲ್ಲಿ ಜನಸಾಮಾನ್ಯ ಪ್ರತಿ ಸಾರಿ ಹೆಣಗುತ್ತಿದ್ದ. ಆದರೆ ಬದಲಾದ ಕಾಲಘಟ್ಟದಲ್ಲಿ ಜನಸಾಮಾನ್ಯನೇ ರಾಜಧರ್ಮ ರೂಪಿಸುವ ಕೆಲಸ ಮಾಡುತ್ತಿದ್ದಾನೆ ಎಂದರೆ ಅದೊಂದು ವಿಸ್ಮಯವೇ ಸರಿ. ಸಂವಿಧಾನ ನಡೆಸಿದ ಕ್ರಾಂತಿ ಯಾವ ಯುದ್ಧಕ್ಕೂ ಕಡಮೆಯಿಲ್ಲ. ಭಾರತದ ಚಿತ್ರಣ ಇಂದು ಸಂಪೂರ್ಣವಾಗಿ ಬದಲಾಗಿದೆ. ಕೂಲಿ ಕಾರ್ಮಿಕ, ರೈತ, ಜಾತಿ ಪಂಥಗಳ ಭೇದವೇ ಇಲ್ಲದಂತೆ ಮೇಲೆದ್ದು ಪ್ರಮುಖ ಸ್ಥಾನಗಳನ್ನು ಅಲಂಕರಿಸುತ್ತಿದ್ದಾನೆ. ದೇಶದ ಪರಮೋಚ್ಚ ಹುದ್ದೆಗಳನ್ನು ಕೂಡ ಜನಸಾಮಾನ್ಯ ಯಾವುದೇ ಹಿನ್ನೆಲೆ ಇರದಾಗ್ಯೂ ಅಲಂಕರಿಸುತ್ತಿದ್ದಾನೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಸಂವಿಧಾನದ ಚೈತನ್ಯ ಆ ಕಾಲಘಟ್ಟದ ಚೈತನ್ಯ ಎಂಬುದು ಹೆಜ್ಜೆಹೆಜ್ಜೆಗೂ ಸಾಕಾರವಾಗುತ್ತಿದೆ. ಪ್ರಜಾಪ್ರಭುತ್ವ ಇಲ್ಲಿನ ಚುನಾವಣೆ, ಸಾಮಾಜಿಕ ಮನ್ನಣೆ, ಜಗತ್ತಿನ ವಿಶ್ವಾಸ ಗಳಿಸುತ್ತಿದೆ. ಬೆರಗು ಮೂಡಿಸುತ್ತಿದೆ ಮಾತ್ರವಲ್ಲ, ಅನೇಕರು ಈಗ ಭಾರತವನ್ನು ಅನುಕರಿಸತೊಡಗಿದ್ದಾರೆ.

     ಜನವರಿ ೨೬ನ್ನು ಭಾರತದಲ್ಲಿ ಸಂವಿಧಾನ ದಿನ ಎಂದು ಆಚರಿಸಲಾಗುತ್ತಿದೆ. ಹೇಗೆ ಕತ್ತಲಿನಲ್ಲಿರುವಾತ ಬೆಳಕಿಗೆ ಹಂಬಲಿಸುತ್ತಾನೋ ಅದೇ ರೀತಿ ಸುತ್ತಮುತ್ತಲಿನ ದೇಶಗಳ ಅರಾಜಕತೆ, ಅನಾಗರಿಕತೆ, ವ್ಯಕ್ತಿಸ್ವಾತಂತ್ರ್ಯದ ಹರಣ, ರಾತೋರಾತ್ರಿ ನಡೆಯುವ ಅಧಿಕಾರಕೇಂದ್ರಿತ ಘೋಟಾಳಗಳ ಮಧ್ಯೆ ನಮ್ಮನ್ನು ಕಲ್ಪಿಸಿಕೊಂಡರೆ ನಮಗೊದಗಿದ ಸೌಭಾಗ್ಯದ ಪರಿಚಯವಾಗುತ್ತದೆ. ಈ ದೇಶದಲ್ಲಿ ಆಶ್ರಯಕ್ಕಾಗಿ ಗುಳೆ ಹೊರಡುವ ಆವಶ್ಯಕತೆಯಿಲ್ಲ. ಕ್ವೆಟಾ ಪ್ರಾಂತದ ಜನ ಘೋಷಿಸಿಕೊಂಡಂತೆ ನಾವು ನಡೆದಾಡುವ ಮೃತದೇಹಗಳು ಎನ್ನುವ ಹಲುಬುವಿಕೆ ಇಲ್ಲ. ಕೈಚೆಲ್ಲಿ ಕುಳಿತು ಬಿಡುವ ಅಸಹಾಯಕತೆಗಳಿಲ್ಲ, ಇಲ್ಲೇ ಹುಟ್ಟಿ ದೇಶದ ನಾಗರಿಕರಾಗಿಯೂ ಮತದಾನಕ್ಕೆ ಅವಕಾಶ ಸಿಗಲಿಲ್ಲ ಎಂದು ಕೊರಗುವ ಪ್ರಮೇಯವೂ ಇಲ್ಲ. ಸಾಧಿಸುವ ಛಲವಿದ್ದಾತನಿಗೆ ಅತಿ ಉನ್ನತ ಹುದ್ದೆ ಏರುವ ಅವಕಾಶಗಳು ಎಂದಿಗೂ ಮುಕ್ತವೇ ಆಗುಳಿದಿವೆ. ಹೋರಾಟ, ಹಕ್ಕುಗಳ ಪ್ರತಿಪಾದನೆಗೆ ಯಾವ ದೊಣ್ಣೆನಾಯಕನ ಅಪ್ಪಣೆಯೂ ಬೇಕಾಗಿಲ್ಲ. ಶಾಸಕಾಂಗ, ಕಾರ್ಯಾಂಗದಲ್ಲಿ ತೃಪ್ತಿಯಾಗದಿದ್ದರೆ ನ್ಯಾಯಾಂಗದ ಬಾಗಿಲು ಬಡಿಯುವ ಮತ್ತು ಯಾರ ಒತ್ತಡವನ್ನು ಕೂಡ ಮೆಟ್ಟಿ ಮಣ್ಣಾಗಿಸುವ ಅವಕಾಶವನ್ನು ಸಂವಿಧಾನ ನಮಗೆ ನೀಡಿದೆ. ನಮ್ಮಷ್ಟು ಅದೃಷ್ಟಶಾಲಿಗಳು ಜಗತ್ತಿನಲ್ಲಿ ಎಲ್ಲಿಯೂ ಸಿಗಲಾರರು. ಸಂವಿಧಾನವೆಂಬ ಸಂರಚನೆಗೆ ಧನ್ಯವಾದ ಹೇಳಿದಷ್ಟೂ ಕಡಮೆಯೇ.

    ೧೯೪೬ ನವೆಂಬರ್ ೨೬ರಂದು ಅಂಗೀಕರಿಸಿ, ಜನವರಿ ೨೬, ೧೯೫೦ರಂದು ಜಾರಿಗೆ ಬಂದ ನಮ್ಮ ಸಂವಿಧಾನ ಬದಲಾದ ಕಾಲಘಟ್ಟದಲ್ಲಿ ೪೭೦ ವಿಧಿಗಳು, ೨೫ ಭಾಗಗಳು, ೧೨ ಅನುಚ್ಛೇದಗಳನ್ನು ಹೊಂದಿದೆ. ನಾವು ಹೊಂದಿರುವ ಸಂವಿಧಾನ ಅತ್ಯಂತ ಸುವಿಸ್ತಾರವಾದ ಮತ್ತು ಕಾಲಾನುಕ್ರಮದ ಬದಲಾವಣೆಗಳಿಗೆ ತೆರೆದುಕೊಂಡಿರುವ

    ಒಂದು ಬೃಹತ್ ಸಂರಚನೆ. ೧೧೮ ತಿದ್ದುಪಡಿಗಳನ್ನು ಹೊಂದಿದ ಈ ವ್ಯವಸ್ಥೆ ಪ್ರಪಂಚದ ಯಾವುದೇ ದೇಶದ ಲಿಖಿತ ಸಂವಿಧಾನಕ್ಕಿಂತಲೂ ದೀರ್ಘವಾಗಿರುವಂತಹ ಹೆಗ್ಗಳಿಕೆ ಹೊಂದಿದೆ. ಬ್ರಿಟನ್, ಅಮೆರಿಕಾ ಸಂಯುಕ್ತ ಸಂಸ್ಥಾನ, ಫ್ರಾನ್ಸ್, ಐರ್ಲೆಂಡ್, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಜಪಾನ್ ಮೊದಲಾದ ದೇಶಗಳ ಸಾಂವಿಧಾನಿಕ ವ್ಯವಸ್ಥೆಗಳನ್ನು ಪರಿಶೀಲಿಸಿದ ನಂತರ ಉದಾತ್ತವಾದ ಭಾರತೀಯತೆಗೆ ಒಗ್ಗುವ ಅನೇಕ ಸಂಗತಿಗಳನ್ನು ಭಾರತದ ಸಂವಿಧಾನದಲ್ಲಿ ಅಡಕಗೊಳಿಸಲಾಯಿತು.

    ಸಂವಿಧಾನವೆಂಬ ಸಾಹಿತ್ಯ: ಜನಸಾಮಾನ್ಯರ ಅಧಿಕಾರ

ಬೆಂಗಳೂರು ನಗರದ ಪ್ರಪ್ರಥಮ ಸೇವಾ ಸಂಸ್ಥೆ  ‘ಶ್ರೀನಿವಾಸ ಮಂದಿರಂ’
ಬೆಂಗಳೂರು ನಗರದ ಪ್ರಪ್ರಥಮ ಸೇವಾ ಸಂಸ್ಥೆ  ‘ಶ್ರೀನಿವಾಸ ಮಂದಿರಂ’

ಸಮಾಜಸುಧಾರಕರಾಗಿ ಅತ್ಯುನ್ನತ ಧ್ಯೇಯವನ್ನು ಇಟ್ಟುಕೊಂಡಿದ್ದ ಗೋಪಾಲಾಚಾರ್ಲು ಅವರು ಬರೀ ದೇವಸ್ಥಾನವಷ್ಟರಿಂದ ತೃಪ್ತಿ ಹೊಂದದೆ ಅನಾಥ ಮಕ್ಕಳಿಗಾಗಿ ಅನಾಥಾಲಯವನ್ನು ಪ್ರಾರಂಭಿಸಲು ಸಂಕಲ್ಪಿಸಿದರು. ಇದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಗೋಪಾಲಾಚಾರ್ಲು ೧೮೮೮ರ ಪ್ರಾರಂಭದಲ್ಲಿ ದೇಶಾದ್ಯಂತ ಸಂಚರಿಸಿ ರಾಜ–ಮಹಾರಾಜರುಗಳನ್ನೂ ಹಾಗೂ ಶ್ರೀಮಂತರನ್ನೂ ಕಂಡು ಹಣವನ್ನು ಶೇಖರಿಸಿಕೊಂಡು...

ಆರ್ಯಧರ್ಮದ ಹುತಾತ್ಮ ಪಂಡಿತ ಲೇಖರಾಮ್
ಆರ್ಯಧರ್ಮದ ಹುತಾತ್ಮ ಪಂಡಿತ ಲೇಖರಾಮ್

ಹಳ್ಳಿಯೊಂದರಲ್ಲಿ ಜನಿಸಿ ಅಲ್ಲಿಯೇ ಶಿಕ್ಷಣ ಪಡೆದಿದ್ದ ಲೇಖರಾಮ್, ಆಂಗ್ಲ ಶಿಕ್ಷಣದಿಂದ ವಂಚಿತರಾಗಿದ್ದರಲ್ಲದೆ ಲಾಹೋರ್‌ನಂತಹ ಸಾಮಾಜಿಕ ಕ್ರಾಂತಿಯ ತವರೂರನ್ನು ಕಂಡಿರಲಿಲ್ಲ. ಆದರೆ ಪರ್ಶಿಯನ್ ಮತ್ತು ಅರಬ್ಬೀ ಭಾಷೆಗಳಲ್ಲಿ ತಮಗಿದ್ದ ಪಾಂಡಿತ್ಯವನ್ನು ಮುಂದಿನ ದಿನಗಳಲ್ಲಿ ಬಹಳ ಪರಿಣಾಮಕಾರಿಯಾಗಿ ಪ್ರಯೋಗಿಸುವಲ್ಲಿ ಸಫಲರಾಗುತ್ತಾರೆ. ೧೮೮೦ರಲ್ಲಿ ಅಜ್ಮೇರದಲ್ಲಿ ಸ್ವಾಮಿ...

ಫಾಲ್ಕೆ ಪ್ರಶಸ್ತಿ ಪುರಸ್ಕೃತ ಸಿನೆಮಾಟೋಗ್ರಾಫರ್ ವಿ.ಕೆ. ಮೂರ್ತಿ
ಫಾಲ್ಕೆ ಪ್ರಶಸ್ತಿ ಪುರಸ್ಕೃತ ಸಿನೆಮಾಟೋಗ್ರಾಫರ್ ವಿ.ಕೆ. ಮೂರ್ತಿ

ಮೂರ್ತಿ ಅವರ ಸಾಧನೆಗೆ ಕಲಶವಿಟ್ಟಂತೆ ಅವರಿಗೆ ದೇಶದ ಚಲನಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೆಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು. ವಿಶೇಷವೆಂದರೆ ಈ ಪ್ರಶಸ್ತಿಗೆ ಪಾತ್ರರಾದ ದೇಶದ ಮೊದಲ ತಂತ್ರಜ್ಞ ಹಾಗೂ ಮೊದಲ ಚಲನಚಿತ್ರ ಛಾಯಾಗ್ರಾಹಕ ಅವರಾಗಿದ್ದರು. ಈ ಮಹೋನ್ನತ ಸಾಧನೆಯನ್ನು ತಮ್ಮದಾಗಿಸಿಕೊಂಡ ಮೂರ್ತಿ...

ಬಂಗ್ಲಾದೇಶದಲ್ಲಿ ಶೇಕ್ ಹಸೀನಾ ಸರ್ಕಾರ ಐದನೇ ಅವಧಿಯ ಸವಾಲು
ಬಂಗ್ಲಾದೇಶದಲ್ಲಿ ಶೇಕ್ ಹಸೀನಾ ಸರ್ಕಾರ ಐದನೇ ಅವಧಿಯ ಸವಾಲು

ಈಚೆಗೆ ಬಂಗ್ಲಾದೇಶದ ಪ್ರಧಾನಿಯಾಗಿ ಐದನೇ ಬಾರಿ ಪ್ರಮಾಣವಚನ ಸ್ವೀಕರಿಸಿದ ಶೇಕ್ ಹಸೀನಾ ಅವರಿಗೆ ೫೨ ವರ್ಷಗಳ ಹಿಂದೆ ಜನವರಿ ೧೨, ೧೯೭೨ರಂದು ಅವರ ತಂದೆ ಹಾಗೂ ಬಂಗ್ಲಾದೇಶದ ರಾಷ್ಟ್ರಪಿತ ಶೇಕ್ ಮುಜೀಬುರ್ ರೆಹಮಾನ್ ಅವರು ಹೊಸದಾಗಿ ರಚನೆಯಾದ ಸ್ವತಂತ್ರ ದೇಶದ ಮೊದಲ...

ಸಂವಿಧಾನವೆಂಬ ಸಾಹಿತ್ಯ: ಜನಸಾಮಾನ್ಯರ ಅಧಿಕಾರ
ಸಂವಿಧಾನವೆಂಬ ಸಾಹಿತ್ಯ: ಜನಸಾಮಾನ್ಯರ ಅಧಿಕಾರ

ಸಂವಿಧಾನವೆಂದರೆ ವಕೀಲನ ದಸ್ತಾವೇಜಿನ ಬರಿಯ ಹಾಳೆಗಳಲ್ಲ, ಅದು ಚಲಿಸುತ್ತಿರುವ ಜೀವಂತ ವಾಹನ. ಅದರ ಚೈತನ್ಯ ಆ ಕಾಲಘಟ್ಟದ ಚೈತನ್ಯವೂ ಆಗಿರುತ್ತದೆ’’ ಎನ್ನುವ ಡಾ. ಬಿ.ಆರ್. ಅಂಬೇಡ್ಕರ್‌ರ ಮಾತುಗಳು ಎಷ್ಟು ಅರ್ಥಪೂರ್ಣ ಎಂದರೆ ಪ್ರಸ್ತುತ ಭಾರತ ಆ ಮಾತುಗಳ ಸಾಕ್ಷಾತ್ಕಾರ ಎಂಬಂತೆ ಕಂಗೊಳಿಸುತ್ತಿದೆ....

ಬೆಂಗಳೂರು ನಗರದ ಪ್ರಪ್ರಥಮ ಸೇವಾ ಸಂಸ್ಥೆ  ‘ಶ್ರೀನಿವಾಸ ಮಂದಿರಂ’
ಬೆಂಗಳೂರು ನಗರದ ಪ್ರಪ್ರಥಮ ಸೇವಾ ಸಂಸ್ಥೆ  ‘ಶ್ರೀನಿವಾಸ ಮಂದಿರಂ’

ಸಮಾಜಸುಧಾರಕರಾಗಿ ಅತ್ಯುನ್ನತ ಧ್ಯೇಯವನ್ನು ಇಟ್ಟುಕೊಂಡಿದ್ದ ಗೋಪಾಲಾಚಾರ್ಲು ಅವರು ಬರೀ ದೇವಸ್ಥಾನವಷ್ಟರಿಂದ ತೃಪ್ತಿ ಹೊಂದದೆ ಅನಾಥ ಮಕ್ಕಳಿಗಾಗಿ ಅನಾಥಾಲಯವನ್ನು ಪ್ರಾರಂಭಿಸಲು ಸಂಕಲ್ಪಿಸಿದರು. ಇದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಗೋಪಾಲಾಚಾರ್ಲು ೧೮೮೮ರ ಪ್ರಾರಂಭದಲ್ಲಿ ದೇಶಾದ್ಯಂತ ಸಂಚರಿಸಿ ರಾಜ–ಮಹಾರಾಜರುಗಳನ್ನೂ ಹಾಗೂ ಶ್ರೀಮಂತರನ್ನೂ ಕಂಡು ಹಣವನ್ನು ಶೇಖರಿಸಿಕೊಂಡು...

ಆರ್ಯಧರ್ಮದ ಹುತಾತ್ಮ ಪಂಡಿತ ಲೇಖರಾಮ್
ಆರ್ಯಧರ್ಮದ ಹುತಾತ್ಮ ಪಂಡಿತ ಲೇಖರಾಮ್

ಹಳ್ಳಿಯೊಂದರಲ್ಲಿ ಜನಿಸಿ ಅಲ್ಲಿಯೇ ಶಿಕ್ಷಣ ಪಡೆದಿದ್ದ ಲೇಖರಾಮ್, ಆಂಗ್ಲ ಶಿಕ್ಷಣದಿಂದ ವಂಚಿತರಾಗಿದ್ದರಲ್ಲದೆ ಲಾಹೋರ್‌ನಂತಹ ಸಾಮಾಜಿಕ ಕ್ರಾಂತಿಯ ತವರೂರನ್ನು ಕಂಡಿರಲಿಲ್ಲ. ಆದರೆ ಪರ್ಶಿಯನ್ ಮತ್ತು ಅರಬ್ಬೀ ಭಾಷೆಗಳಲ್ಲಿ ತಮಗಿದ್ದ ಪಾಂಡಿತ್ಯವನ್ನು ಮುಂದಿನ ದಿನಗಳಲ್ಲಿ ಬಹಳ ಪರಿಣಾಮಕಾರಿಯಾಗಿ ಪ್ರಯೋಗಿಸುವಲ್ಲಿ ಸಫಲರಾಗುತ್ತಾರೆ. ೧೮೮೦ರಲ್ಲಿ ಅಜ್ಮೇರದಲ್ಲಿ ಸ್ವಾಮಿ...

ಫಾಲ್ಕೆ ಪ್ರಶಸ್ತಿ ಪುರಸ್ಕೃತ ಸಿನೆಮಾಟೋಗ್ರಾಫರ್ ವಿ.ಕೆ. ಮೂರ್ತಿ
ಫಾಲ್ಕೆ ಪ್ರಶಸ್ತಿ ಪುರಸ್ಕೃತ ಸಿನೆಮಾಟೋಗ್ರಾಫರ್ ವಿ.ಕೆ. ಮೂರ್ತಿ

ಮೂರ್ತಿ ಅವರ ಸಾಧನೆಗೆ ಕಲಶವಿಟ್ಟಂತೆ ಅವರಿಗೆ ದೇಶದ ಚಲನಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೆಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು. ವಿಶೇಷವೆಂದರೆ ಈ ಪ್ರಶಸ್ತಿಗೆ ಪಾತ್ರರಾದ ದೇಶದ ಮೊದಲ ತಂತ್ರಜ್ಞ ಹಾಗೂ ಮೊದಲ ಚಲನಚಿತ್ರ ಛಾಯಾಗ್ರಾಹಕ ಅವರಾಗಿದ್ದರು. ಈ ಮಹೋನ್ನತ ಸಾಧನೆಯನ್ನು ತಮ್ಮದಾಗಿಸಿಕೊಂಡ ಮೂರ್ತಿ...

ಬಂಗ್ಲಾದೇಶದಲ್ಲಿ ಶೇಕ್ ಹಸೀನಾ ಸರ್ಕಾರ ಐದನೇ ಅವಧಿಯ ಸವಾಲು
ಬಂಗ್ಲಾದೇಶದಲ್ಲಿ ಶೇಕ್ ಹಸೀನಾ ಸರ್ಕಾರ ಐದನೇ ಅವಧಿಯ ಸವಾಲು

ಈಚೆಗೆ ಬಂಗ್ಲಾದೇಶದ ಪ್ರಧಾನಿಯಾಗಿ ಐದನೇ ಬಾರಿ ಪ್ರಮಾಣವಚನ ಸ್ವೀಕರಿಸಿದ ಶೇಕ್ ಹಸೀನಾ ಅವರಿಗೆ ೫೨ ವರ್ಷಗಳ ಹಿಂದೆ ಜನವರಿ ೧೨, ೧೯೭೨ರಂದು ಅವರ ತಂದೆ ಹಾಗೂ ಬಂಗ್ಲಾದೇಶದ ರಾಷ್ಟ್ರಪಿತ ಶೇಕ್ ಮುಜೀಬುರ್ ರೆಹಮಾನ್ ಅವರು ಹೊಸದಾಗಿ ರಚನೆಯಾದ ಸ್ವತಂತ್ರ ದೇಶದ ಮೊದಲ...

ಸಂವಿಧಾನವೆಂಬ ಸಾಹಿತ್ಯ: ಜನಸಾಮಾನ್ಯರ ಅಧಿಕಾರ
ಸಂವಿಧಾನವೆಂಬ ಸಾಹಿತ್ಯ: ಜನಸಾಮಾನ್ಯರ ಅಧಿಕಾರ

ಸಂವಿಧಾನವೆಂದರೆ ವಕೀಲನ ದಸ್ತಾವೇಜಿನ ಬರಿಯ ಹಾಳೆಗಳಲ್ಲ, ಅದು ಚಲಿಸುತ್ತಿರುವ ಜೀವಂತ ವಾಹನ. ಅದರ ಚೈತನ್ಯ ಆ ಕಾಲಘಟ್ಟದ ಚೈತನ್ಯವೂ ಆಗಿರುತ್ತದೆ’’ ಎನ್ನುವ ಡಾ. ಬಿ.ಆರ್. ಅಂಬೇಡ್ಕರ್‌ರ ಮಾತುಗಳು ಎಷ್ಟು ಅರ್ಥಪೂರ್ಣ ಎಂದರೆ ಪ್ರಸ್ತುತ ಭಾರತ ಆ ಮಾತುಗಳ ಸಾಕ್ಷಾತ್ಕಾರ ಎಂಬಂತೆ ಕಂಗೊಳಿಸುತ್ತಿದೆ....

“ಕರ್ಮಣ್ಯೇವಾಧಿಕಾರಸ್ತೇ”
“ಕರ್ಮಣ್ಯೇವಾಧಿಕಾರಸ್ತೇ”

‘ಕೃಷ್ಣ ಹೇಳುತ್ತಾನೆ : ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ || – ಅಂತ. ಅದರ ಅರ್ಥವನ್ನು ಹೀಗೆ ಕೊಟ್ಟಿದ್ದಾರೆ – ನಿನಗೆ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ. ಅದರ ಫಲದಲ್ಲಿ ಇಲ್ಲ. ಆದ್ದರಿಂದ ಮಾಡಿದ...

ಗುಟ್ಟರಿತು ಗುರಿಯೆಡೆಗೆ ನಡೆಯಬೇಕು
ಗುಟ್ಟರಿತು ಗುರಿಯೆಡೆಗೆ ನಡೆಯಬೇಕು

ಭತ್ತ ಕುಟ್ಟಿದ ಮೇಲೆ ಹೊಟ್ಟಿಗೇನಿದೆ ಬೆಲೆಯು ಅತ್ತ ದೂಡುವರದನು ಮೂಲೆಯೆಡೆಗೆ ಹೊತ್ತಿ ಉರಿಸಿದರದನು ಬರಿ ಬೂದಿ ಕರಿಬಣ್ಣ ಹತ್ತಿರಕೂ ಸುಳಿಯರದರ ಕಡೆಗೆ ಅಕ್ಕಿಯಿಂದಲೆ ಅನ್ನವೆಂಬುದೇನೋ ದಿಟವು ಸಿಕ್ಕಿದರೆ ಸಾಕೆಂಬ ಮೌಢ್ಯ ನಮಗೆ ಸೊಕ್ಕಿನಲಿ ಘನವಾದ ವಿಷಯವನೆ ಮರೆತಿಹೆವು ಚಿಕ್ಕದೆನ್ನುವ ತಾತ್ಸಾರ ಭಾವವೆಮಗೆ...

ಮತ್ತೆ ಅಯೋಧ್ಯೆಗೆ ಶ್ರೀರಾಮ
ಮತ್ತೆ ಅಯೋಧ್ಯೆಗೆ ಶ್ರೀರಾಮ

ಪ್ರಭೂ, ಏಕಿಷ್ಟು ತಡಮಾಡಿದಿರಿ ಆಗಮಿಸಲು ಅಯೋಧ್ಯೆಗೆ?, ತೆರಳಿದಿರಾ ಮತ್ತೆ ವನವಾಸಕ್ಕೆ, ಎಲ್ಲವನೂ ತೊರೆದು ಕಾಡಿಗೆ, ಕಾಯುತ್ತಿತ್ತು ಅಯೋಧ್ಯೆ ಮತ್ತೆ ನಿಮ್ಮ ಅರಸೊತ್ತಿಗೆಗೆ, ಬಂದಿರಲ್ಲ ಕಡೆಗೂ ನಮ್ಮೆಲ್ಲರ ನಾಡಿಗೆ, ಹೃದಯದ ಬಾಗಿಲಿಗೆ. ಎಲ್ಲರಲ್ಲಿತ್ತು ಅಚಲ ವಿಶ್ವಾಸ, ನಂಬಿಕೆ, ಅನ್ಯಾಯಕ್ಕೆ ವಿದಾಯ, ಕೋರ್ಟು, ಕಚೇರಿ,...

ರಾಮ ಬರುವನು
ರಾಮ ಬರುವನು

ರಾಮ ಬರುವನು ಎನ್ನ ರಾಮ ಬರುವನು || ಕ್ಲೇಶ ಕಳೆವನು    ಮನಕೆ ಹರುಷ ತರುವನು || ಸುಪ್ರಜಾ ಪಾಲಕ       ಜಗದ ಹಿತದಾಯಕ || ಅಸುರ ಕುಲ ನಾಶಕ        ಪಿತೃವಾಕ್ಯ ಪರಿಪಾಲಕ || ಜಾನಕಿಯ ಪ್ರಾಣಕಾಂತ          ಇವನ...

ಅಂತರಂಗದೊಳಗೂ ಒಂದು ಸಂಬಂಧ
ಅಂತರಂಗದೊಳಗೂ ಒಂದು ಸಂಬಂಧ

ಆ ಹಳೆಯ ಪತ್ರ ಸಿಕ್ಕಿ ಬಹಳ ದಿನವಾಗಿರಲಿಲ್ಲ. ನಾಗಪ್ಪ ಮಾಮ ತೀರಿಕೊಂಡಿದ್ದ. ಅವನ ವೈಕುಂಠಸಮಾರಾಧನೆಗೆಂದು ಗೋಕರ್ಣಕ್ಕೆ ಹೋದಾಗ ವಚ್ಚಲತ್ತೆ ಬಂದಿದ್ದಳು. ಲೋಕಾಭಿರಾಮದ ಮಾತಿನ ನಂತರ ಅವಳ ಬಳಿ ಭೀಮಬೊಪ್ಪನ ಸಾವಿನ ಬಗ್ಗೆ ಕೇಳಿದ್ದೆ. ಅವಳು ನನ್ನಿಂದ ನಿರೀಕ್ಷಿಸದ ಪ್ರಶ್ನೆಗೆ ಗಾಬರಿಯಾಗಿದ್ದಳು. ನಿನ್ನ...

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ