ಗುಜರಾತ್ ಮಿಲ್ಕ್ ಫೆಡರೇಶನ್ (ಗುಜರಾತ್ ಹಾಲು ಒಕ್ಕೂಟ) ದೇಶದ ಅತಿದೊಡ್ಡ ಆಹಾರ ಪದಾರ್ಥ ಮಾರುಕಟ್ಟೆ ಸಂಸ್ಥೆ ಎನ್ನುವ ಗೌರವಕ್ಕೆ ಪಾತ್ರವಾಯಿತು. ಅಮುಲ್ ಮತ್ತು ಸಾಗರ್ ಅದರ ಎರಡು ಬ್ರಾಂಡ್ ನೇಮ್ಗಳು. ೧೯೬೦ರ ದಶಕದಲ್ಲಿ ಆಪರೇಶನ್ ಫ್ಲಡ್ ಪ್ರಸ್ತಾವವನ್ನು ಪರಿಶೀಲಿಸುವಾಗ ಭಾರತವು ಹೆಚ್ಚು ಹಾಲನ್ನು ಉತ್ಪಾದಿಸಬೇಕೇ ಅಥವಾ ಬೆಳೆಯುತ್ತಿರುವ ಜನಸಂಖ್ಯೆಗೆ ಬೇಕಾದ ಆಹಾರಧಾನ್ಯವನ್ನು ಬೆಳೆಸಬೇಕೇ ಎನ್ನುವ ಅಂಶ ಚರ್ಚೆಗೆ ಬಂತು. ಅದರೊಂದಿಗೆ ಹಾಲು ಅನಿವಾರ್ಯ ಅಲ್ಲ ಎನ್ನುವ ಮಾತು ಕೂಡ ಬಂತು. ಇದರಲ್ಲಿ ಸ್ವಲ್ಪ ನಿಜವಿದ್ದರೂ ಕೂಡ ಒಂದು ಅಭಿವೃದ್ಧಿಶೀಲ (ಹಿಂದುಳಿದ) ದೇಶವು ಹಾಲಿನ ವಿಷಯದಲ್ಲಿ ಸ್ವಾವಲಂಬಿ ಆಗಬಾರದೇ ಎನ್ನುವ ಅಂಶ ಕೂಡ ಇತ್ತು. ಮುಂದುವರಿಯುವಾಗ ದೇಶದಲ್ಲಿ ಒಂದು ದನಕ್ಕೆ (ಅಥವಾ ಎಮ್ಮೆಗೆ) ಒಂದು ಎಕರೆ ಹುಲ್ಲು ಸಿಗುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು. ಅದಕ್ಕಾಗಿ ಆನಂದ್ ಸಂಸ್ಥೆಯ ವತಿಯಿಂದ ಪಶುಆಹಾರ (ಫೀಡ್ಸ್), ದನದ ಆರೋಗ್ಯ, ಅದರ ಪೌಷ್ಟಿಕ ಆಹಾರಗಳ ಬಗ್ಗೆ ಸಂಶೋಧನೆ ನಡೆಸಲಾಯಿತು. ಹೊಸ ಯೋಜನೆಗಳನ್ನು ಕೈಗೊಳ್ಳುವಾಗ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯು (ಎನ್ಡಿಡಿಬಿ) ಪೂರ್ಣ (holistic) ದೃಷ್ಟಿಕೋನದಿಂದ ಯೋಚಿಸುತ್ತಿತ್ತು.
ಆಪರೇಶನ್ ಫ್ಲಡ್ ಮೊದಲ ಹಂತವು ಐದು ವರ್ಷಗಳಲ್ಲಿ ಮುಗಿಯಬೇಕಿತ್ತು; ಆದರೆ ಅದು ಹತ್ತು ವರ್ಷಗಳವರೆಗೆ ಮುಂದುವರಿಯಿತು. ಖರ್ಚು ನಿಗದಿತ ೯೬ ಕೋಟಿ ರೂ.ಗಳಿಂದ ೧೧೬ ಕೋಟಿಗೇರಿತು. ಹಾಲಿನ ಹುಡಿ ದರವನ್ನು ಏರಿಸಿ ಅದನ್ನು ಭರಿಸಿಕೊಂಡರು. ದೆಹಲಿ, ಕೋಲ್ಕತಾ, ಮುಂಬಯಿ ಮತ್ತು ಮದ್ರಾಸ್ ಈ ನಾಲ್ಕು ಮಹಾನಗರಗಳಲ್ಲಿ ಮದರ್ಡೈರಿ ಸ್ಥಾಪಿಸುವ ಕಾರಣದಿಂದಾಗಿ ಮೊದಲ ಹಂತ ವಿಳಂಬವಾಯಿತು. ಅದಕ್ಕಾಗಿ ಆನಂದ್ನಂತಹ ೧೭ ಸಂಸ್ಥೆಗಳನ್ನು ಸ್ಥಾಪಿಸಿ ಹತ್ತು ಲಕ್ಷ ಹಾಲು ಉತ್ಪಾದಕ ರೈತರನ್ನು ಸಂಘಟಿಸಬೇಕಿತ್ತು. ಸ್ವಚ್ಛತೆಗಾಗಿ ಮಹಾನಗರಗಳಲ್ಲಿ ದೊಡ್ಡ ಮಾರಾಟ ಯಂತ್ರ (bulk vending machine)ಗಳನ್ನು ಅಳವಡಿಸಬೇಕಿತ್ತು. ಪ್ಯಾಶ್ಚರೈಸರ್ನಲ್ಲಿ ಹಾಲಿನ ಉಷ್ಣತೆಯನ್ನು ೭೨.೪೦ ಡಿಗ್ರಿ ಸೆಲ್ಸಿಯಸ್ಗೆ ಏರಿಸುವ ಮೂಲಕ ಕೆಟ್ಟ ಬ್ಯಾಕ್ಟೀರಿಯಗಳನ್ನು ನಾಶಪಡಿಸುವ ತಂತ್ರಜ್ಞಾನವನ್ನು (ಪ್ಯಾಶ್ಚರೈಸೇಶನ್) ಅಳವಡಿಸಲಾಯಿತು. ಮಹಾನಗರಗಳಿಗಾಗಿ ೨೦೦ ದೊಡ್ಡ ಹಾಲು ಮಾರಾಟ ಯಂತ್ರಗಳನ್ನು ತರಿಸಬೇಕೆಂದು ಕೇಂದ್ರಸರ್ಕಾರವನ್ನು ಸಂಪರ್ಕಿಸಿದಾಗ ಸಚಿವ ಫಕ್ರುದ್ದೀನ್ ಅಲಿ ಅಹಮದ್ ಅವರು ಅದಕ್ಕೆ ನಿರಾಕರಿಸಿದರು. ಆಗ ಆನಂದ್ನಲ್ಲೇ ಅದನ್ನು ಸಿದ್ಧಪಡಿಸಿದರು. ಅದು ಕೂಡ ಮೊದಲ ಹಂತದ ವಿಳಂಬಕ್ಕೆ ಕಾರಣವಾಯಿತು. ಯುನಿಸೆಫ್ ಅಮೆರಿಕದ ಮೂಲಕ ಕೆಲವು ಯಂತ್ರಗಳನ್ನು ನೀಡಿತು. ಒಟ್ಟಿನಲ್ಲಿ ೨೦೦ ಯಂತ್ರ ಭರ್ತಿ ಆಯಿತು. ಅಲ್ಲಿ ಹಾಲು ಮಾರಾಟಕ್ಕೆ ಮಾಜಿ ಸೈನಿಕರನ್ನು ಬಳಸಿಕೊಂಡರು. ಅವರಿಗೆ ಲೀಟರಿಗೆ ಎರಡು ಪೈಸೆ ಕಮಿಷನ್. ಈ ಯಂತ್ರಗಳು ಭಾರೀ ಯಶಸ್ಸು ಗಳಿಸಿದವು. ಅದರಲ್ಲಿ ಇಡೀ ದಿನ ಹಾಲು ಸಿಗುತ್ತಿತ್ತು. ದೇಶದ ಹಾಲು ಮಾರಾಟದಲ್ಲಿ ಅದು ದೊಡ್ಡ ಕ್ರಾಂತಿ ಎನಿಸಿತ್ತು.
‘ಬಿಳಿಸುಳ್ಳೆಂಬ’ ಆರೋಪ
ಆಪರೇಶನ್ ಫ್ಲಡ್ ಬಗ್ಗೆ ಎಲ್ಲರೂ ಗಮನವಿಟ್ಟು ನೋಡಿದರು. ೧೯೮೧ರ ಒಂದು ಸಮೀಕ್ಷೆಯ ಪ್ರಕಾರ ರೈತರ ಆದಾಯ ಇಮ್ಮಡಿಯಾಗಿತ್ತು. ಆಹಾರ ನೆರವು ಯೋಜನೆಯನ್ನು ಇದಕ್ಕೆ ಬಳಸಬಹುದೆಂದು ಸಾಬೀತಾಯಿತು. ಆದರೆ ದೇಶದಲ್ಲಿ ಈ ಸಾಧನೆಯ ಮಹತ್ತ್ವವನ್ನು ಗುರುತಿಸುವವರು ಕಾಣಲಿಲ್ಲ. ೧೯೮೨-೮೩ರಲ್ಲಿ ಡಾ|| ವರ್ಗೀಸ್ ಕುರಿಯನ್ ಮತ್ತು ಆಪರೇಶನ್ ಫ್ಲಡ್ ಕಾರ್ಯಕ್ರಮವನ್ನು ಭಾರೀ ಟೀಕೆಗೆ ಗುರಿಪಡಿಸಲಾಯಿತು. ಹೇಗ್ನ ಒಂದು ಸಂಸ್ಥೆ ಇವರನ್ನು ಟೀಕಿಸಿ ಪುಸ್ತಕವನ್ನು ಕೂಡ ಪ್ರಕಟಿಸಿತು. ೧೯೮೩ರಲ್ಲಿ ‘ಇಲಸ್ಟ್ರೇಟೆಡ್ ವೀಕ್ಲಿ’ ಪತ್ರಿಕೆಯಲ್ಲಿ ಕ್ಲಾಡ್ ಅಲ್ವಾರಿಸ್ ಎನ್ನುವವರು (ಬಿಳಿಸುಳ್ಳು) ಎನ್ನುವ ಲೇಖನ ಬರೆದು, ಕಾರ್ಯಕ್ರಮವು ಪೂರ್ತಿ ವಿಫಲವಾಗಿದೆ; ಅದರ ಉದ್ದೇಶವೇ ಸರಿ ಇಲ್ಲ ಮುಂತಾಗಿ ಟೀಕಿಸಿದರು. ಇತರ ಕೆಲವು ಪತ್ರಿಕೆಗಳಲ್ಲೂ ಅಂತಹ ಲೇಖನಗಳು ಬಂದವು. ರೈತರು-ಬಳಕೆದಾರರ ನಡುವೆ ನೇರಸಂಪರ್ಕ ಉಂಟುಮಾಡಿದ್ದನ್ನು ಕೂಡ ಟೀಕಿಸಲಾಯಿತು. ಹಾಲಿನಂತಹ ಪೌಷ್ಟಿಕ ಆಹಾರವನ್ನು ಹಳ್ಳಿಯಿಂದ ನಗರಕ್ಕೆ ಸಾಗಿಸುತ್ತಾರೆಂದು ಆಕ್ಷೇಪಿಸಿದರು. ಹಾಲಿನ ಕೊಬ್ಬು, ಪ್ರೊಟೀನ್ಗಳು ತರಕಾರಿಗಿಂತ ಉತ್ತಮವಾಗಿದ್ದು, ಹಾಲನ್ನು ಮಾರುವುದಕ್ಕಿಂತ ಬಳಸುವುದೇ ಉತ್ತಮ ಎಂಬ ವಾದವೂ ಬಂತು.
ಆಗ ಡಾ|| ಕುರಿಯನ್, “ಆರ್ಥಿಕ ಬಲ ಇಲ್ಲದವರು ಎಮ್ಮೆ (ದನ) ಸಾಕಿ ಹಾಲನ್ನು ಮಾರಬೇಕು. ಬಂದ ಹಣದಲ್ಲಿ ಶೇ. ೩೩ ಭಾಗವನ್ನು ಕಳೆದುಕೊಂಡ ಪೌಷ್ಟಿಕ ಆಹಾರಕ್ಕಾಗಿ ಬಳಸಿದರೆ ಉಳಿದ ಶೇ. ೬೭ ಭಾಗವನ್ನು ತಮ್ಮ ಉಳಿದ ಅಗತ್ಯಗಳಿಗೆ ಬಳಸಿಕೊಳ್ಳಬೇಕು” ಎಂಬ ಸಲಹೆ ನೀಡಿದರು. ನಮ್ಮಲ್ಲಿ ಅಪೌಷ್ಟಿಕತೆಗೆ ಕಾರಣ ಬಡತನವಾಗಿದ್ದು, ಅದಕ್ಕಾಗಿ ಬಡವರ ಆದಾಯ ಏರಿಕೆಗೆ ಆದ್ಯತೆ ನಿಡಬೇಕು. ಉದಾಹರಣೆಗೆ, ದೊಡ್ಡ ನಗರಗಳಲ್ಲಿ ಬೃಹತ್ ಕಟ್ಟಡ ಕಟ್ಟುವ ಕೆಲಸಗಾರರಿಗೆ ಚೆಂದದ ಮನೆ ಇರುವುದಿಲ್ಲ; ಅದಕ್ಕಾಗಿ ಅವರಿಗೆ ಕಟ್ಟಡ ಕಟ್ಟುವುದನ್ನು ಬಿಟ್ಟು ನಿಮ್ಮ ಮನೆಯನ್ನು ಕಟ್ಟಿಕೊಳ್ಳಿ ಎನ್ನಬಹುದೆ? – ಎಂದು ಕುರಿಯನ್ ಪ್ರಶ್ನಿಸಿದರು. ಹಾಲು ಉತ್ಪಾದಕರಿಗೆ ಹಾಲನ್ನು ಮಾರಬೇಡಿ ಎನ್ನುವುದು ಸರಿಯಲ್ಲ. ಬದಲಿಗೆ ದೇಶದ ಬಡವರ ಆದಾಯವನ್ನು ಹೆಚ್ಚಿಸಬೇಕು – ಎಂದು ಸೂಚಿಸಿದರು. ಆ ಕೆಲಸವನ್ನು ಆಪರೇಶನ್ ಫ್ಲಡ್ ಮಾಡಿತು. ರೈತರ ಆದಾಯವನ್ನು ಹೆಚ್ಚಿಸಿತು. ಆ ಕಾರಣದಿಂದ ಅವರು ಹಾಲನ್ನು ಬಳಸುವುದು ಕೂಡ ಏರಿತು. ಈ ಬದಲಾವಣೆಯನ್ನು ಹಲವರು ಅಲಕ್ಷಿಸಿದರು.
ಆಪರೇಶನ್ ಫ್ಲಡ್ ಟೀಕೆಯ ಪುಸ್ತಕವನ್ನು ಓದಿದ ನೆದರ್ಲೆಂಡ್ಸ್ನ ರಾಣಿ ಸ್ವತಃ ತಿಳಿದುಕೊಳ್ಳುವ ಉದ್ದೇಶದಿಂದ ಅಮುಲ್ಗೆ ಬಂದರು. ಹಲವು ಪ್ರಶ್ನೆ ಕೇಳಿ ವಿಷಯವನ್ನು ತಿಳಿದುಕೊಂಡರು. ಎಲ್ಲವನ್ನೂ ನೋಡಿದ ಆಕೆ ‘ನನಗೆ ಸಮಾಧಾನವಾಯಿತು’ ಎಂದು ಸಂತೋಷ ವ್ಯಕ್ತಪಡಿಸಿದರು.
೧೯೮೧ರಲ್ಲಿ ರಾಬರ್ಟ್ ಮೆಕ್ನಮಾರ ಅವರು ವಿಶ್ವಬ್ಯಾಂಕ್ನಿಂದ ನಿವೃತ್ತರಾಗುವಾಗ ಕೃತಜ್ಞತೆ ಹೇಳಿ ಡಾ|| ಕುರಿಯನ್ರಿಗೆ ಪತ್ರ ಬರೆದರು. ‘ನನಗೂ ನಿವೃತ್ತನಾಗಬೇಕು ಅನ್ನಿಸುತ್ತಿದೆ’ ಎಂದು ಕುರಿಯನ್ ಅವರು ಉತ್ತರ ಬರೆದಾಗ ಆ ವಿದೇಶೀ ಗಣ್ಯರು “ನಾನಾದರೆ ಸರಿ; ನೀವಿಲ್ಲದೆ ಆಪರೇಶನ್ ಫ್ಲಡ್ ಪೂರ್ಣಗೊಳ್ಳದು. ಅಂತಹ ಮಾತನಾಡಬೇಡಿ” ಎಂದರು. “ಇಂತಹ ಮಾತುಗಳು ನನಗೆ ಹೋರಾಟಕ್ಕೆ ಉತ್ಸಾಹ ನೀಡಿದವು” ಎಂದು ಕುರಿಯನ್ ಹೇಳಿದ್ದಾರೆ.
ಮಂತ್ರಿಉಲ್ಟಾಮಾತು
೧೯೮೩ರಲ್ಲಿ ನಡೆದ ‘ದನಗಳ ಸಾಕಣೆ, ಪೌಷ್ಟಿಕ ಆಹಾರ’ದ ಬಗೆಗಿನ ಎರಡು ದಿನಗಳ ವಿಚಾರಸಂಕಿರಣದ ಸಮಾರೋಪ ಭಾಷಣ ಮಾಡಲು ಕೃಷಿ ಮಂತ್ರಿ ರಾವ್ ಬೀರೇಂದ್ರಸಿಂಗ್ ಆಗಮಿಸಿದ್ದರು. ತಮ್ಮ ಭಾಷಣದಲ್ಲಿ ಅವರು ಆಪರೇಶನ್ ಫ್ಲಡ್ನ ಆರಂಭ ಮತ್ತು ಅದರ ಅನುಷ್ಠಾನದ ಯಶಸ್ಸಿನ ಬಗ್ಗೆ ಪ್ರಶ್ನಿಸತೊಡಗಿದರು. ಅವರೊಂದಿಗೆ ಕುರಿಯನ್ರಿಗೆ ಸಮಸ್ಯೆ ಇತ್ತು. ಆದರೂ ಈ ರೀತಿ ಭಾಷಣ ಮಾಡುತ್ತಾರೆಂದು ಅವರು ಎಣಿಸಿರಲಿಲ್ಲ. ಸತ್ಸಂಪ್ರದಾಯ ಅಲ್ಲದಿದ್ದರೂ ಕುರಿಯನ್ ಅನಂತರ ಮಾತನಾಡಿ ಆಪರೇಶನನ್ನು ಸಮರ್ಥಿಸಿಕೊಂಡರು. ಅದೊಂದು ಬಹಿರಂಗ ಜಗಳವೇ ಆಯಿತು.
ಅದೇ ವರ್ಷ ಡಿಸೆಂಬರ್ ೨ರಂದು ರಾಜ್ಯಸಭೆಯಲ್ಲಿ ಸದಸ್ಯರೊಬ್ಬರು ‘ಇಲಸ್ಟ್ರೇಟೆಡ್ ವೀಕ್ಲಿ’ ಲೇಖನವನ್ನು ಉಲ್ಲೇಖಿಸಿ ಆಪರೇಶನ್ ಫ್ಲಡ್ ಬಗ್ಗೆ ಪ್ರಶ್ನೆ ಕೇಳಿದರು. ಉಪಮಂತ್ರಿ ಯೋಗೇಂದ್ರ ಮಕ್ವಾನ ಅದಕ್ಕೆ ಉತ್ತರಿಸಿ, ಎನ್ಡಿಡಿಬಿ ಮತ್ತು ಐಡಿಸಿಗಳ ಕಾರ್ಯನಿರ್ವಹಣೆಯ ಬಗ್ಗೆ ಕೆಲವು ತಜ್ಞರು ಪರಿಶೀಲಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕೆಗಳಲ್ಲಿ ಅದು ಬಂದಾಗ ಎರಡೂ ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಆಕ್ರೋಶಗೊಂಡರು; ಮತ್ತು ಎನ್ಡಿಡಿಬಿ ಕಾರ್ಯದರ್ಶಿ ಆರ್.ಪಿ. ಅನೇಜಾ ಅವರ ಬಳಿ ದೂರಿಕೊಂಡರು. ಅನೇಜಾ ಅದನ್ನು ಕುರಿಯನ್ರಿಗೆ ತಿಳಿಸಿದಾಗ, “ನೀವು ಗಲಿಬಿಲಿಗೊಂಡದ್ದು (ಅಪ್ಸೆಟ್ ಆದದ್ದು) ನಿಜವಾದರೆ ಏನು ಮಾಡಬೇಕೆಂದು ನಿರ್ಧರಿಸಿ” ಎಂದು ಸೂಚಿಸಿದರು.
ಸಾಮೂಹಿಕರಾಜೀನಾಮೆ
ತಮ್ಮೊಳಗೆ ಚರ್ಚಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಡಿಸೆಂಬರ್ ೧೩ರಂದು ತಮ್ಮ ರಾಜೀನಾಮೆ ಪತ್ರವನ್ನು ಅನೇಜಾ ಅವರ ಮೂಲಕ ಕುರಿಯನ್ರಿಗೆ ಕಳುಹಿಸಿಕೊಟ್ಟರು. ೭೦೦ಕ್ಕೂ ಅಧಿಕ ಜನ ಸಾಮೂಹಿಕ ರಾಜೀನಾಮೆಗೆ ಸಹಿ ಹಾಕಿದ್ದರು. ಸಂಸ್ಥೆಯ ಎಲ್ಲರೂ ಬಂಡೆಯಂತೆ ಡಾ|| ಕುರಿಯನ್ ಅವರ ಹಿಂದೆ ನಿಂತರು. ಅದರಿಂದ ಸಂಸ್ಥೆ (ಕಾರ್ಯಕ್ರಮ) ಗಟ್ಟಿಯಾಗಿ ಅದಕ್ಕೆ ಹಾನಿ ಎಸಗುವುದು ಅಸಾಧ್ಯ ಎನಿಸಿತು.
ಇನ್ನೊಂದೆಡೆ ರಾವ್ ಬೀರೇಂದ್ರಸಿಂಗ್ ಸಂಸತ್ತಿನಲ್ಲಿ ಸಿಕ್ಕಿಬಿದ್ದರು. ಎನ್ಡಿಡಿಬಿಯಲ್ಲಿ ಸಾಮೂಹಿಕ ರಾಜೀನಾಮೆ ಏತಕ್ಕೆ ಎನ್ನುವ ಪ್ರಶ್ನೆಗೆ ಉತ್ತರಿಸುವಾಗ ಅವರ ಧ್ವನಿ ಬದಲಾಯಿತು. “ತನಿಖೆ ನಡೆಸುವುದಲ್ಲ; ಆಪರೇಷನ್ ಫ್ಲಡ್ನ ಪ್ರಗತಿಯನ್ನು ಪರಿಶೀಲಿಸಲಾಗುವುದು” ಎಂದು ಸಮಜಾಯಿಷಿ ನೀಡಿದರು. ಪ್ರಧಾನಿ ಇಂದಿರಾಗಾಂಧಿಯವರು ಡಾ|| ಕುರಿಯನ್ರಿಗೆ ಫೋನ್ ಮಾಡಿ, “ಈ ಬಗ್ಗೆ ನಾನೇನು ಮಾಡಬೇಕು?” ಎಂದು ಕೇಳಿದರು. “ಯೋಗ್ಯ ವ್ಯಕ್ತಿಯಿಂದ ತನಿಖೆ ನಡೆಸಿ; ನನ್ನ ಪರಿಚಯದವರು ಬೇಡ” ಎಂದು ಇವರು ಹೇಳಿದ ಮೇರೆಗೆ ಎಲ್.ಕೆ. ಝಾ ಅಧ್ಯಕ್ಷತೆಯ ಮೌಲ್ಯಮಾಪನ (ಸಮೀಕ್ಷೆ) ಸಮಿತಿಯನ್ನು ರಚಿಸಲಾಯಿತು. ಸಮಿತಿಯು ಎಲ್ಲ ಅಂಶಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಸವಿವರ ವರದಿಯನ್ನು ಸಲ್ಲಿಸಿತು. ಅದರ ಮುಖ್ಯಾಂಶ ಹೀಗಿತ್ತು:
ಬೆಂಬಲಿಸಿದಝಾಸಮಿತಿ
“ಯಾವುದೇ ಮಾನದಂಡದಿಂದ ನೋಡಿದರೂ ಆಪರೇಶನ್ ಫ್ಲಡ್ ಒಂದು ಯಶಸ್ವೀ ಕಾರ್ಯಕ್ರಮವಾಗಿದೆ. ಅದನ್ನು ದಕ್ಷತೆ ಮತ್ತು ಅರ್ಪಣಾ ಮನೋಭಾವದಿಂದ ಜಾರಿಗೊಳಿಸಿದ್ದು, ಅದರ ಕೀರ್ತಿ ಎನ್ಡಿಡಿಬಿ ಮತ್ತು ಐಡಿಸಿಗಳಿಗೆ ಸಲ್ಲುತ್ತದೆ. ಹಾಲಿನ ಉತ್ಪಾದನೆಯ ಹೆಚ್ಚಳಕ್ಕೆ ಇನ್ನಷ್ಟು ಪ್ರಯತ್ನ ಅಗತ್ಯವೆನ್ನುವುದು ನಿಜವಾದರೂ ಅವರ ಇದುವರೆಗಿನ ಒಟ್ಟಾರೆ ಸಾಧನೆ ಚೆನ್ನಾಗಿಯೇ ಇದೆ.
“ಈ ಪ್ರಯತ್ನಕ್ಕೆ ಕಷ್ಟಗಳು ಎದುರಾದದ್ದು ನಿಜ. ಆಪರೇಶನ್ ಫ್ಲಡ್ನ ಯಶಸ್ವಿ ಅನುಷ್ಠಾನವು ಕೇವಲ ಎನ್ಡಿಡಿಬಿ ಮತ್ತು ಐಡಿಸಿಗಳ ಮೇಲೆ ಅವಲಂಬಿತವಾದದ್ದಲ್ಲ; ರಾಜ್ಯಸರ್ಕಾರಗಳ ಒಪ್ಪಿಗೆ, ಬೆಂಬಲಗಳ ಪಾತ್ರವೂ ಅದರಲ್ಲಿತ್ತು; ಮತ್ತು ಹಾಲಿನ ಉತ್ಪಾದಕರು ಮತ್ತು ಮಾರಾಟ ಮಾಡುವವರ ಸಹಕಾರವೂ ಅಗತ್ಯವಿತ್ತು. ರಾಜ್ಯಸರ್ಕಾರಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಹಾಗೂ ಸಹಕಾರಿ ಸಂಘಗಳ ಸಂಘಟನೆಗೆ ತಗಲುವ ಸಮಯ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿತ್ತು; ಜಿಲ್ಲೆಯಿಂದ ಜಿಲ್ಲೆಗೂ ವ್ಯತ್ಯಾಸವಿತ್ತು. ಅದರಿಂದಾಗಿ ಹಿಂದೆ ಎಣಿಸಿದ್ದಕ್ಕಿಂತ ಸಹಜವಾಗಿ ತಡವಾಗುತ್ತಿತ್ತು.
“ಕೆಲವರು ಇಡೀ ಕಾರ್ಯಕ್ರಮವನ್ನು ಟೀಕಿಸಿದರೆ ನಮ್ಮ ಬಳಿ ಇರುವ ಹೆಚ್ಚಿನ ಸಾಕ್ಷ್ಯಗಳ ಪ್ರಕಾರ ಎನ್ಡಿಡಿಬಿ ಮತ್ತು ಐಡಿಸಿಗಳು ತಮ್ಮ ಜವಾಬ್ದಾರಿಯನ್ನು ಎಚ್ಚರ ಮತ್ತು ದಕ್ಷತೆಯಿಂದ ನಿರ್ವಹಿಸಿದ್ದು ಗೊತ್ತಾಗುತ್ತದೆ.
“ಸಲಹೆಗಾರ ಸಂಸ್ಥೆಯಾಗಿ ಎನ್ಡಿಡಿಬಿ ಉತ್ತಮ ಮಟ್ಟದ ತಾಂತ್ರಿಕ ತಜ್ಞತೆಯನ್ನು ನೀಡುತ್ತಿದೆ; ಈ ಎರಡು ಸಂಸ್ಥೆಗಳಲ್ಲಿ ಒಟ್ಟು ಸುಮಾರು ೮೦೦ ಜನ ವಿವಿಧ ವೃತ್ತಿಪರರಿದ್ದಾರೆ. ಅವರು ದೊಡ್ಡ ನಗರಗಳಲ್ಲಿ ಡೈರಿಗಳನ್ನು ಸ್ಥಾಪಿಸಿದ್ದಲ್ಲದೆ ದಕ್ಷವಾಗಿ ನಿರ್ವಹಣೆ ಮಾಡಿದ್ದಾರೆ. ಕೆಲವು ನಗರಗಳಲ್ಲಿ ಮೊದಲೇ ಇದ್ದ ಡೈರಿಗಳನ್ನು ಇವರಿಗೆ ವಹಿಸಿದ್ದು, ಅಲ್ಲಿ ಉತ್ತಮ ಫಲಿತಾಂಶಗಳು ಕಂಡುಬಂದಿವೆ. ಈ ಎರಡು ಉತ್ತಮ ಸಾಧನೆ ತೋರಿಸಿದ ಇನ್ನೊಂದು ಕ್ಷೇತ್ರವು ಸಂಶೋಧನೆಗೆ ಸಂಬಂಧಿಸಿದ್ದು. ಬೃಹತ್ ಹಾಲು ಮಾರಾಟ ಯಂತ್ರ, ಇಲೆಕ್ಟ್ರಾನಿಕ್ ಕೊಬ್ಬು ಪರೀಕ್ಷಾ ಯಂತ್ರಗಳ ಬಳಕೆ, ಡೈರಿ ಉಪಕರಣಗಳ ಉತ್ಪಾದನೆಯಲ್ಲಿ ವ್ಯಾಪಕ ಸ್ವದೇಶೀ ನಿರ್ವಹಣೆ ಮುಂತಾದವು ಅದರಲ್ಲಿ ಸೇರುತ್ತವೆ.
“ಆಡಳಿತ ಮತ್ತು ಮಾರಾಟಕ್ಕೆ ಕೂಡ ಐಡಿಸಿ, ಎನ್ಡಿಡಿಬಿಗಳಿಗೆ ಉತ್ತಮ ಅಂಕಗಳು ಸಲ್ಲುತ್ತವೆ. ಹೆಚ್ಚುವರಿ ಪ್ರದೇಶದಿಂದ ನೂರಾರು ಕಿ.ಮೀ. ದೂರದಲ್ಲಿರುವ ಹಾಲಿನ ಕೊರತೆ ಪ್ರದೇಶಕ್ಕೆ ಹಾಲು ಕೆಡದಂತೆ ರಸ್ತೆ ಅಥವಾ ರೈಲಿನ ಮೂಲಕ ಸಾಗಿಸುವುದು ಮತ್ತು ದಾರಿಯಲ್ಲಿ ಸೋರಿಕೆ ಅಥವಾ ಕಲಬೆರಕೆ ಆಗದಂತೆ ನೋಡಿಕೊಳ್ಳುವ ಮೂಲಕ ರಾಷ್ಟ್ರೀಯ ಹಾಲಿನ ಗ್ರಿಡ್ ನಿರ್ಮಿಸಲಾಗಿದೆ; ಹಿಂದೆ ಇದು ಅಸಾಧ್ಯವಾಗಿದ್ದು ಹಾಲು ಸ್ಥಳದಲ್ಲೇ ಬಳಕೆಯಾಗುತ್ತಿತ್ತು.”
ಎಲ್.ಕೆ. ಝಾ ಸಮಿತಿಯ ಇಂತಹ ಮಾತುಗಳು ಕುರಿಯನ್ ಮತ್ತವರ ಸಹೋದ್ಯೋಗಿಗಳಿಗೆ ತುಂಬ ಅನುಕೂಲಕರವಾಗಿ ಕೂಡಿಬಂದವು. ಟೀಕಾಕಾರರ ಬಾಯಿಗಳು ಬಂದ್ ಆದವು. “ಆ ಹೊತ್ತಿಗೆ ನಮಗೆ ಇದಕ್ಕಿಂತ ಉತ್ತಮವಾದದ್ದೇನೂ ಆಗಲು ಸಾಧ್ಯವಿರಲಿಲ್ಲ. ಎನ್ಡಿಡಿಬಿಗೆ ಇದರಿಂದ ತುಂಬ ಪ್ರಯೋಜನವಾಯಿತು. ಆಪರೇಶನ್ ಫ್ಲಡ್ನ ವಿಶ್ವಾಸಾರ್ಹತೆ ಹೆಚ್ಚಿತು. ಕಾರ್ಯಕ್ರಮದ ಮೂರನೇ ಹಂತಕ್ಕೆ ಬೆಂಬಲ ನೀಡುವ ಬಗ್ಗೆ ಪರಿಶೀಲಿಸುತ್ತಿದ್ದ ಯೂರೋಪಿನ ಇಇಸಿ ಮತ್ತು ವಿಶ್ವಬ್ಯಾಂಕ್ಗಳಿಗೆ ತೀರ್ಮಾನ ಕೈಗೊಳ್ಳಲು ಅನುಕೂಲವಾಯಿತು” ಎಂದು ಡಾ|| ಕುರಿಯನ್ ಹೇಳಿದ್ದಾರೆ.
ವಿಲೀನಕ್ಕೆಶಿಫಾರಸು
ತುಂಬ ಅನುಕೂಲಕರವಾದ ಹಲವು ಶಿಫಾರಸುಗಳನ್ನು ಕೂಡ ಝಾ ಸಮಿತಿ ಮಾಡಿತ್ತು. ಅದರಲ್ಲೊಂದು ಎನ್ಡಿಡಿಬಿ ಮತ್ತು ಐಡಿಸಿಗಳ ವಿಲೀನದ ಬಗೆಗಿನ ಶಿಫಾರಸು. ಅದನ್ನು ಜಾರಿಗೊಳಿಸಿದಾಗ ಸಂಸ್ಥೆ ವೇಗವಾಗಿ ಬೆಳೆಯಿತು; ಅದಕ್ಕೆ ಎನ್ಡಿಡಿಬಿ ಎಂಬ ಹೆಸರು ಬಂತು. ಭಾರತಸರ್ಕಾರ ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸಿ ಎನ್ಡಿಡಿಬಿಯನ್ನು ರಾಷ್ಟ್ರೀಯ ಮಹತ್ತ್ವದ ಸಂಸ್ಥೆ ಎಂದು ಘೋಷಿಸಿತು. ಅದಕ್ಕೆ ಉದ್ಯಮಸಂಸ್ಥೆಯ (ಕಾರ್ಪೊರೇಟ್) ಸ್ಥಾನಮಾನವನ್ನು ನೀಡಿತು. ಮಸೂದೆಗೆ ಪಕ್ಷಭೇದವಿಲ್ಲದೆ ಬೆಂಬಲ ಬಂದು ನಾಲ್ಕೇ ದಿನಗಳಲ್ಲಿ ಎರಡೂ ಸದನಗಳಲ್ಲಿ ಪಾಸಾಯಿತು. ಸಂಸತ್ ಎನ್ಡಿಡಿಬಿ ಮೇಲೆ ಅಂತಹ ವಿಶ್ವಾಸ ಇರಿಸಿತ್ತು. ಅದರಿಂದಾಗಿ ಆಪರೇಶನ್ ಫ್ಲಡ್-೩ನೇ ಹಂತವು ವೇಗವಾಗಿ ಮತ್ತು ಸಲೀಸಾಗಿ ಜಾರಿಗೆ ಬಂತು.
ಇಷ್ಟಾದರೂ ಕೃಷಿ ಮಂತ್ರಿ ರಾವ್ ಬೀರೇಂದ್ರಸಿಂಗ್ ಅವರ ಕಿರಿಕಿರಿ ನಿಲ್ಲಲಿಲ್ಲ. ಅದಕ್ಕಾಗಿ ಒಂದಕ್ಕಿಂತ ಹೆಚ್ಚು ಸಲ ಕುರಿಯನ್ ರಾಜೀನಾಮೆ ಸಲ್ಲಿಸಿದರು; ಆದರೆ ಸರ್ಕಾರ ಅದನ್ನು ಅಂಗೀಕರಿಸಲಿಲ್ಲ. ಇಬ್ಬರೂ ಹುದ್ದೆಯಲ್ಲಿ ಮುಂದುವರಿಯುವುದು ಅಸಾಧ್ಯವೆಂಬ ತೀರ್ಮಾನಕ್ಕೆ ಕುರಿಯನ್ ಬಂದರು. ಸುಮಾರು ಹತ್ತು ವರ್ಷಗಳ ಹಿಂದೆ ಜಗಜೀವನರಾಮ್ ಅವರು ಇಲಾಖಾ ಮಂತ್ರಿಯಾಗಿದ್ದಾಗಲೂ ಕುರಿಯನ್ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದರು. ಆ ಬಗ್ಗೆ ದೆಹಲಿಗೆ ಹೋದಾಗ ಹಳೆಯ ಸ್ನೇಹಿತ ವಿಕ್ರಂ ಸಾರಾಭಾಯಿ ಸಿಕ್ಕಿದ್ದರು; ಸಂಜೆ ತಮ್ಮ ಕೊಠಡಿಗೆ ಬರುವಂತೆ ಹೇಳಿದರು. ಅಲ್ಲಿ ಡಿ.ಪಿ. ಧರ್ ಮತ್ತಿತರ ಹಿರಿಯ ಅಧಿಕಾರಿಗಳಿದ್ದರು. ರಾಜೀನಾಮೆ ಕೊಡುವುದು ಬೇಡ; ಮಂತ್ರಿಯವರಿಗೆ ತಾವೇ ಹೇಳುತ್ತೇವೆ ಎಂದಿದ್ದರು; ಅದು ಫಲ ನೀಡಿತ್ತು.
ಪ್ರಧಾನಿಗೆದೂರು
ಆ ಅನುಭವದ ಧೈರ್ಯದಿಂದ ದೆಹಲಿಗೆ ಹೋಗಿ ಇಂದಿರಾಗಾಂಧಿಯವರನ್ನು ಕಂಡು ಮಂತ್ರಿ ಬೀರೇಂದ್ರಸಿಂಗ್ ಜೊತೆಗಿನ ಸಮಸ್ಯೆಯ ಬಗ್ಗೆ ವಿವರಿಸಿದರು. ಕೂಡಲೇ ಫೋನ್ ಎತ್ತಿಕೊಂಡ ಪ್ರಧಾನಿ ಇಂದಿರಾಗಾಂಧಿ, “ಹೀಗೆಲ್ಲ ಮಾಡಬೇಡಿ; ಕುರಿಯನ್ ಅವರನ್ನು ಅವರಷ್ಟಕ್ಕೆ ಬಿಡಿ” ಎಂದು ನೇರವಾಗಿಯೇ ಹೇಳಿದರು. ಆದರೂ ಮಂತ್ರಿ ಸರಿಮಾಡಿಕೊಳ್ಳಲಿಲ್ಲ. ತೊಂದರೆ ಕೊಡುವುದು ಹೆಚ್ಚೇ ಆಯಿತು. ಪ್ರಧಾನಿಯ ಭೇಟಿಗೆ ಹೋದ ಕುರಿಯನ್ “ಮೇಡಂ, ಇದೇ ಕೊನೆ. ಇನ್ನು ನಾನು ಮುಂದುವರಿಯಲಾರೆ. ಕಳೆದ ಸಲ ತಾವು ಅವರೊಂದಿಗೆ ಮಾತನಾಡಿದ ಅನಂತರ ಅವರ ದ್ವೇಷ ಇನ್ನೂ ಹೆಚ್ಚಾಗಿದೆ. ಹೀಗಿರುವುದು ಅಸಾಧ್ಯ” ಎಂದರು.
ಕುರಿಯನ್ರನ್ನು ಒಮ್ಮೆ ದಿಟ್ಟಿಸಿ ನೋಡಿದ ಇಂದಿರಾಗಾಂಧಿ “ಡಾ|| ಕುರಿಯನ್, ಹಾಗಾದರೆ ನಾನವರನ್ನು ತೆಗೆಯುತ್ತೇನೆ” ಎಂದು ಗುಡುಗಿದರು; ಮತ್ತು ಅದನ್ನೇ ಮಾಡಿದರು. ಎನ್ಡಿಡಿಬಿ ಕೆಲಸಗಳಲ್ಲಿ ಆತ ಹಸ್ತಕ್ಷೇಪ ಮಾಡಿದ್ದೇ ಕೃಷಿ ಮಂತ್ರಿಸ್ಥಾನದಿಂದ ವಜಾಗೊಳಿಸಿದ್ದಕ್ಕೆ ಕಾರಣ.
“ಎನ್ಡಿಡಿಬಿಯಲ್ಲಿ ನಾವು ಸಾಧನೆಯ ಶಿಖರಗಳನ್ನು ನಿರ್ಮಿಸಲು ಶ್ರಮಿಸಿದೆವು. ಎಲ್ಲದರಲ್ಲೂ ಅದ್ಭುತ ಸಾಧನೆ ಮಾಡಿದೆವು. ರಾಜಕಾರಣಿಗಳು ಮತ್ತು ಅಧಿಕಾರಿಗಳ ಹಸ್ತಕ್ಷೇಪವೇ ನಮಗಿದ್ದ ಸಮಸ್ಯೆ. ಕ್ರಮೇಣ ನಾನು ಟೀಕೆ ಮತ್ತು ವಿರೋಧಗಳ ನಡುವೆ ಇರುವುದನ್ನು ಕಲಿತೆ. ನಾನು ಸರ್ವಾಧಿಕಾರಿ ಎನ್ನುವ ಟೀಕೆ ಇದೆ. ಅದು ಸ್ವಲ್ಪ ನಿಜ. ಆದರೆ ತ್ರಿಭುವನದಾಸ್ ಪಟೇಲರು ಹಾಕಿದ್ದ ಬೀಜ ನನ್ನಲ್ಲಿತ್ತು. ಆಪರೇಶನ್ ಫ್ಲಡ್ ವೇಳೆ ಪೂರ್ತಿ ಅಭಿವೃದ್ಧಿಯ ಕಡೆಗೆ ನಮ್ಮ ಗಮನ ಇತ್ತು. ಆದರೆ ನಾನು ಎಲ್ಲವೂ ನನ್ನ ಕೈಕೆಳಗೆ ಇರುವಂತೆ ಮಾಡಲಿಲ್ಲ. ನನ್ನ ಅಥವಾ ನಮ್ಮ ಸಾಮ್ರಾಜ್ಯವನ್ನು ಕಟ್ಟಲಿಲ್ಲ. ಬದಲಿಗೆ ಭಾರತದ ರೈತರ ಸಾಮ್ರಾಜ್ಯ ಸ್ಥಾಪನೆ, ವಿಸ್ತರಣೆಗಳೇ ನಮ್ಮ ಗುರಿಯಾಗಿತ್ತು. ೧೦೦೦ ಕೋಟಿ ರೂ. ವೆಚ್ಚ ಮಾಡಿದರೂ ಎನ್ಡಿಡಿಬಿ ಬಳಿ ಏನೂ ಇರಲಿಲ್ಲ. ಅದು ನಮಗೆ ಹೆಮ್ಮೆಯ ವಿಷಯ” ಎಂದು ಕುರಿಯನ್ ಆತ್ಮಕಥನದಲ್ಲಿ ಆತ್ಮಾವಲೋಕನವನ್ನು ಮಾಡಿಕೊಂಡಿದ್ದಾರೆ.
ನನ್ನೊಂದಿಗೆ ಹಲವು ಉತ್ತಮ ಅಧಿಕಾರಿಗಳಿದ್ದರು. ನನಗೆ ಅಂಥವರ ಸಹಕಾರ ಸಿಕ್ಕಿದೆ. ಪ್ರಧಾನಿಗಳು, ಮುಖ್ಯಮಂತ್ರಿಗಳು, ಮಂತ್ರಿಗಳು ಆನಂದ್ಗೆ ಭೇಟಿ ನೀಡಿ ಆಪರೇಶನ್ ಫ್ಲಡ್ ಟೇಕಾಫ್ ಆಗಬೇಕು ಎಂದರು. ಅದಕ್ಕನುಗುಣವಾಗಿ ಹಲವು ಅಧಿಕಾರಿಗಳು ಬೆಂಬಲ ನೀಡಿದರು. ನಮ್ಮ ವಿರೋಧಿಗಳನ್ನು ನಿಷ್ಕಿçಯ(ನ್ಯೂಟ್ರಲ್)ಗೊಳಿಸಿದರು. ಅದರಿಂದ ನನ್ನ ಧೈರ್ಯ ಬೆಳೆಯಿತು – ಎಂದ ಕುರಿಯನ್, ನೀರಾವರಿ ಮತ್ತು ಕೃಷಿ ಮಂತ್ರಿ ಜಗಜೀವನರಾಮ್ ಜೊತೆಗಿನ ಒಂದು ಮುಖಾಮುಖಿಯನ್ನು ಸ್ಮರಿಸಿಕೊಂಡಿದ್ದಾರೆ.
ಜಗಜೀವನರಾಂಮುಖಾಮುಖಿ
೧೯೭೦ರಲ್ಲಿ ಒಂದು ದಿನ ಡಾ|| ಕುರಿಯನ್ ದೆಹಲಿಯ ಕೃಷಿ ಭವನದಲ್ಲಿ ಕೃಷಿ ವಿಜ್ಞಾನಿ ಡಾ|| ಎಂ.ಎಸ್. ಸ್ವಾಮಿನಾಥನ್ ಅವರ ಭೇಟಿಗೆ ಹೋಗಿದ್ದರು. ಮೈಸೂರಿನ ಸಿಎಫ್ಟಿಆರ್ಐಗೆ ಒಬ್ಬ ನಿರ್ದೇಶಕರನ್ನು ನೇಮಿಸಬೇಕಿತ್ತು. ಆಗ ಜಗಜೀವನರಾಂ ಅವರಿಂದ ಬುಲಾವ್ ಬಂತು. “ಕೂಡಲೆ ಹೋಗಿ. ದೊಡ್ಡ ಮಂತ್ರಿಗಳು ಕರೆಯುವಾಗ ಕೂಡಲೆ ಹೋಗಬೇಕು. ನಾವು ಕಾಯುತ್ತೇವೆ” ಎಂದು ಸ್ವಾಮಿನಾಥನ್ ಸಲಹೆ ನೀಡಿದರು.
ಅದರಂತೆ ಜಗಜೀವನರಾಂ ಕಚೇರಿಗೆ ಧಾವಿಸಿದಾಗ ತಮ್ಮ ಕ್ಷೇತ್ರದಲ್ಲೊಂದು ಖಾಸಗಿ ಡೈರಿಯನ್ನು ಮಾಡಿಕೊಡಿ ಎನ್ನುವ ಬೇಡಿಕೆಯನ್ನು ಮುಂದಿಟ್ಟರು. ‘ಅದಾಗುವುದಿಲ್ಲ’ ಎಂದಾಗ ರಾಂ ಅವರಿಂದ ‘ಇನ್ನೊಮ್ಮೆ ಹೇಳಿ’ ಎನ್ನುವ ದರ್ಪದ ಮಾತು ನಿರೀಕ್ಷಿಸಿರಲಿಲ್ಲ. ಅದನ್ನು ಗಟ್ಟಿಯಾಗಿ ಪುನರುಚ್ಚರಿಸಿ “ನಾನದನ್ನು ಮಾಡಲಾರೆ. ಸಹಕಾರಿ ಡೈರಿಗಳನ್ನು ಸ್ಥಾಪಿಸುವುದು ನನ್ನ ಕೆಲಸ; ಯಾರದಾದರೂ ಖಾಸಗಿ ಡೈರಿಯ ಕೆಲಸವನ್ನು ಮಾಡಲಾರೆ” ಎನ್ನುವ ಸ್ಪಷ್ಟೀಕರಣವನ್ನು ನೀಡಿದರು. ‘ಓ ಹಾಗಾ?’ ಎಂದು ಜಗಜೀವನರಾಂ ಹೇಳಿದಾಗ ಇವರು ‘ಹೌದು’ ಎಂದರು; ದೊಡ್ಡ ಮಂತ್ರಿಗೆ ಆಘಾತವಾಗಿತ್ತು; ಸ್ವಲ್ಪ ಒರಟಾಗಿ “ನೀವಿನ್ನು ಹೋಗಬಹುದು” ಎಂದರು.
ಭೇಟಿ ಅಲ್ಲಿಗೆ ಮುಗಿಯಿತು. ಇಲ್ಲಿ ತಾನು ತಪ್ಪಾಗಿ ನಡೆದುಕೊಂಡೆ ಎಂದು ಕುರಿಯನ್ಗೆ ಅನ್ನಿಸತೊಡಗಿತು. ಅವರು ಹೇಳಿದ್ದಕ್ಕೆ ಒಪ್ಪಿಕೊಂಡು “ಸರಿ ಸರ್, ಇದೊಂದು ಒಳ್ಳೆಯ ಯೋಚನೆ. ಆ ಬಗ್ಗೆ ಯೋಚಿಸುತ್ತೇನೆ. ನಿಮಗೊಂದು ಟಿಪ್ಪಣಿ ಕಳುಹಿಸುತ್ತೇನೆ” ಎಂದು ಸಮಯ ಪಡೆದುಕೊಳ್ಳಬೇಕಿತ್ತು. ಅನಂತರ ಎನ್ಡಿಡಿಬಿ ಹಣವನ್ನು ಖಾಸಗಿರಂಗ ಡೈರಿ ನಿರ್ಮಿಸಲು ಬರುವುದಿಲ್ಲ ಎಂದು ಮನವರಿಕೆ ಮಾಡಬೇಕಿತ್ತು. ತುಂಬ ಒರಟಾಗಿ ಮತ್ತು ಅಪಕ್ವತೆಯಿಂದ ನಡೆದುಕೊಂಡೆ ಅನ್ನಿಸಿತು.
“ನಿಜವೆಂದರೆ, ಜಗಜೀವನರಾಂ ನಮ್ಮ ಅತ್ಯಂತ ಸಮರ್ಥ ಮಂತ್ರಿಗಳಲ್ಲಿ ಒಬ್ಬರಾಗಿದ್ದರು. ಅನುಭವಿ ರಾಜಕಾರಣಿಯಾಗಿದ್ದು ತಮ್ಮ ಅಧಿಕಾರಿಗಳನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿದ್ದರು. ಅವರೆಲ್ಲ ರಾಂರನ್ನು ಪ್ರೀತಿಸುತ್ತಿದ್ದರು. ಅವರ ಕೋರಿಕೆಯನ್ನು ಎಚ್ಚರದಿಂದ ನಿರ್ವಹಿಸಿದ್ದರೆ ನನಗೊಬ್ಬ ದೊಡ್ಡ ಬೆಂಬಲಿಗ ಸಿಗುತ್ತಿದ್ದರು. ನಾನು ಬಹುದೊಡ್ಡ ತಪ್ಪು ಮಾಡಿರುವುದಾಗಿ ಅವರೆಲ್ಲ ನನಗೆ ಹೇಳಿದರು. ಜಗಜೀವನರಾಂ ಎಂತಹ ಚಾಣಾಕ್ಷ ವ್ಯಕ್ತಿಯೆಂದರೆ ಅವರು ನಿಮ್ಮ ಕುತ್ತಿಗೆ ಕತ್ತರಿಸಿದರೆ ಅದು ಗೊತ್ತಾಗುವುದು ತಲೆ ಉರುಳಿದ ಮೇಲೆಯೇ ಎಂದೆಲ್ಲ ಹೇಳಿದರು. ನಾನು ತೊಂದರೆಗೆ ಸಿಲುಕಿದ್ದೆ” ಎಂದು ಕುರಿಯನ್ ಹೇಳಿದ್ದಾರೆ.
‘ಈತನನ್ನುವಜಾಗೊಳಿಸಿ’
ಕೆಲವೇ ಸಮಯದಲ್ಲಿ ಸಚಿವ ರಾಂ ಅವರು ತಮ್ಮ ಕಡತವನ್ನು ತರಿಸಿಕೊಂಡದ್ದು ದೆಹಲಿ ಮಿತ್ರರ ಮೂಲಕ ಕುರಿಯನ್ಗೆ ಗೊತ್ತಾಯಿತು. ಸಹಾನುಭೂತಿ ಹೊಂದಿದ್ದ ಓರ್ವ ಅಧಿಕಾರಿ ನನಗೆ ಕಡತವನ್ನು ತೋರಿಸಿದರು. ಅದರ ಮೇಲೆ ಕೆಂಪು ಶಾಯಿಯಲ್ಲಿ ‘ಈತನನ್ನು ವಜಾಗೊಳಿಸಿ’ (Remove him) ಎಂದು ಬರೆದಿದ್ದರು. ಅದರಿಂದ ಕೃಷಿ ಇಲಾಖೆಯ ಹಲವರಿಗೆ ಸಂತೋಷವಾಗಿತ್ತು. ಆ ಸೂಚನೆಗೆ ಅವರು ನೀಡಿದ ಕಾರಣವೆಂದರೆ ಒಬ್ಬ ವ್ಯಕ್ತಿ ಎರಡು ಹುದ್ದೆಗಳನ್ನು ಹೊಂದಿರುವುದು ಬೇಡ ಎನ್ನುವುದು. ಕುರಿಯನ್ ಆಗ ಎನ್ಡಿಡಿಬಿ ಮತ್ತು ಐಡಿಸಿ ಎರಡಕ್ಕೂ ಅಧ್ಯಕ್ಷರಾಗಿದ್ದರು. ಚಾಣಾಕ್ಷರಾದ ಮಂತ್ರಿಯವರಿಗೆ ಹಣ ಇರುವುದು ಐಡಿಸಿಯಲ್ಲಿ ಎಂಬುದು ಗೊತ್ತಿತ್ತು, ಆದ್ದರಿಂದ ಐಡಿಸಿ ಅಧ್ಯಕ್ಷತೆಯಿಂದ ವಜಾ ಮಾಡಿ ಎಂದು ಸೂಚಿಸಿದ್ದರು.
ತನಗೆ ಒಂದು ದಾರಿ ಇರುವುದೆಂದು ಕುರಿಯನ್ಗೆ ಗೊತ್ತಿತ್ತು. ಇಂದಿರಾಗಾಂಧಿಯವರಿಗೆ ಪತ್ರ ಬರೆದು ವಿಷಯವನ್ನು ತಿಳಿಸಿ ಭೇಟಿಗೆ ಅವಕಾಶ ಕೋರಿದರು. ಆಗ ಪ್ರಧಾನಿಯ ಕಚೇರಿಯಲ್ಲಿದ್ದ ಅಧಿಕಾರಿ ವಿ. ರಾಮಚಂದ್ರನ್ ಪ್ರಧಾನಿಯವರಿಗೆ ತಿಳಿಸಿ, ಒಂದು ಹುದ್ದೆಯಿಂದ ಈ ರೀತಿಯಲ್ಲಿ ವಜಾಗೊಳಿಸುವ ಕ್ರಮ ಸರಿಯಲ್ಲವೆನ್ನುವ ಕುರಿಯನ್ ಅಪೇಕ್ಷೆಯನ್ನು ತಿಳಿಸಿದರು. ಪ್ರಧಾನಿ ಕೃಷಿ ಸಚಿವರಿಗೊಂದು ಪತ್ರ ಬರೆದು, “ಕುರಿಯನ್ ಅವರನ್ನು ಮುಟ್ಟಬೇಡ; ಅವರಷ್ಟಕ್ಕೆ ಬಿಡಿ” ಎನ್ನುವ ಸೂಚನೆ ನೀಡಿದರು. ಪ್ರಕರಣ ಅಲ್ಲಿಗೆ ಮುಕ್ತಾಯವಾಯಿತು. ನಿಕಟ ಪರಿಚಯವಿದ್ದ ಕುರಿಯನ್ ಬಗ್ಗೆ ಇಂದಿರಾಗಾಂಧಿ ಅಷ್ಟೊಂದು ಗೌರವ, ವಿಶ್ವಾಸ ಹೊಂದಿದ್ದರು.
ಖಾದ್ಯತೈಲಕ್ಷೇತ್ರಕ್ಕೆ
೧೯೭೭ರಲ್ಲಿ ಮೊರಾರ್ಜಿ ದೇಸಾಯಿ ಅವರ ಜನತಾಪಕ್ಷದ ಸರ್ಕಾರದಲ್ಲಿ ಎಚ್.ಎಂ. ಪಟೇಲ್ ಹಣಕಾಸು ಮಂತ್ರಿಯಾದರು. ಅವರು ಕೂಡ ಕೈರಾ ಸಹಕಾರಿ ಹಾಲು ಉತ್ಪಾದಕರ ಸಂಸ್ಥೆಯ ಮಿತ್ರರೂ, ಹಿತೈಷಿಯೂ ಆಗಿದ್ದರು. ಒಮ್ಮೆ ಅವರು ಡಾ|| ಕುರಿಯನ್ರನ್ನು ದೆಹಲಿಗೆ ಕರೆದು ಎನ್ಡಿಡಿಬಿ ಖಾದ್ಯ ತೈಲ ಕ್ಷೇತ್ರಕ್ಕೆ ಪ್ರವೇಶಿಸಬಹುದೇ ಎಂದು ಕೇಳಿದರು. “ಖಾದ್ಯತೈಲ ಆಮದಿಗೆ ಸುಮಾರು ೧೦೦೦ ಕೋಟಿ ರೂ. ವೆಚ್ಚವಾಗುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಇದು ಆತಂಕಕಾರಿ ಆಗಬಹುದು” ಎಂದರು. ಅವರಿಗೆ ಅಮೂಲ್ಯವಾದ ವಿದೇಶೀ ವಿನಿಮಯವನ್ನು ಉಳಿಸಬೇಕಿತ್ತು. ಆನಂದ್ ಮಾದರಿಯನ್ನು ಖಾದ್ಯತೈಲದಲ್ಲೂ ಅನುಸರಿಸಬಹುದೆ? ಹಾಲಿನಲ್ಲಿ ಆಮದು ನಿಲ್ಲಿಸಿ ದೇಶ ಸ್ವಾವಲಂಬಿಯಾದಂತೆ ಇದರಲ್ಲೂ ಆಗಬಹುದೆ? – ಎಂದವರು ಕೇಳಿದರು. ಅದರಂತೆ ಎನ್ಡಿಡಿಬಿ ಖಾದ್ಯತೈಲ ಮಾರುಕಟ್ಟೆಗೆ ಪ್ರವೇಶಿಸಿತು. ಆನಂದ್ ಮಾದರಿಯಲ್ಲಿ ಖರೀದಿ, ಸಂಸ್ಕರಣ, ಮಾರಾಟಗಳನ್ನು ಮಾಡಬೇಕಿತ್ತು. ಅಂತಿಮವಾಗಿ ಈ ವ್ಯವಹಾರವನ್ನು ಎಣ್ಣೆಕಾಳು ಉತ್ಪಾದಕರಿಗೆ ಹಸ್ತಾಂತರಿಸಿ, ವ್ಯವಸ್ಥೆಯು ಅವರ ಹಿಡಿತದಲ್ಲಿರುವಂತೆ ನೋಡಿಕೊಳ್ಳುವುದು ಅವರ ಗುರಿ. ಆ ಮೂಲಕ ಮಧ್ಯವರ್ತಿಗಳಾದ ಶಕ್ತಿಶಾಲಿ ‘ತೇಲಿಯಾ ರಾಜ’ರನ್ನು ಹೊರಗಿಡಬೇಕು. ಬಳಕೆದಾರನು ಕೊಡುವ ಹಣದಲ್ಲಿ ಉತ್ಪಾದಕ (ರೈತ)ನಿಗೆ ದೊಡ್ಡಪಾಲು ಸಿಗಬೇಕು ಎಂಬ ಉದ್ದೇಶದಿಂದ ೭೦೦ ಕೋಟಿ ರೂ. ವೆಚ್ಚದ ಯೋಜನೆಯನ್ನು ಸಿದ್ಧಪಡಿಸಲಾಯಿತು; ಖಾದ್ಯತೈಲ ಉತ್ಪಾದನೆ ಮತ್ತು ಮಾರಾಟದ ಆಯೋಜನೆಯ ಮೂಲಕ ಉದ್ಯಮವನ್ನು ಖಾಸಗಿರಂಗಕ್ಕೆ ತರಲು ಪ್ರಯತ್ನಿಸಲಾಯಿತು.
೧೯೭೯ರಲ್ಲಿ ದೇಶದ ಏಳು ರಾಜ್ಯಗಳಲ್ಲಿ ಯೋಜನೆ ಕಾರ್ಯಾರಂಭಗೊಂಡಿತು; ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಒರಿಸ್ಸಾ(ಒಡಿಶಾ) ಮತ್ತು ರಾಜಸ್ಥಾನ ಆ ರಾಜ್ಯಗಳು. ೧೯೮೬ರ ಹೊತ್ತಿಗೆ ೩ ಲಕ್ಷಕ್ಕೂ ಅಧಿಕ ರೈತರು ೨೫೦೦ ಎಣ್ಣೆಕಾಳು ಬೆಳೆಗಾರರ ಸಹಕಾರಿ ಸಂಘಗಳಿಗೆ ಸೇರಿದ್ದರು. ಎಣ್ಣೆಕಾಳು ಉತ್ಪಾದನೆ, ಖರೀದಿ, ಸಂಸ್ಕರಣ ಮತ್ತು ಮಾರಾಟಕ್ಕೆ ಸಂಬಂಧಿಸಿದ ಆ ಸಂಘಗಳಿಗೆ ಜಿಲ್ಲಾಮಟ್ಟದಲ್ಲಿ ಜಿಲ್ಲಾ ಯೂನಿಯನ್, ರಾಜ್ಯಮಟ್ಟದಲ್ಲಿ ರಾಜ್ಯ ಫೆಡರೇಶನ್(ಒಕ್ಕೂಟ)ಗಳಿದ್ದವು. ೧೯೮೯ರಲ್ಲಿ ಸರ್ಕಾರ ಅದಕ್ಕೆ ಸಮಗ್ರ ನೀತಿಯನ್ನು ರೂಪಿಸಿತು. ಅದರಲ್ಲಿ ಆಮದು ಮತ್ತು ವಿತರಣೆಗಳು ಕೂಡ ಸೇರಿದ್ದವು.
ಮೂರುಇಲಾಖೆಅಡಿಯಲ್ಲಿ
ಖಾದ್ಯತೈಲದ ವಿಷಯದಲ್ಲಿ ವಾಣಿಜ್ಯ, ನಾಗರಿಕ ಪೂರೈಕೆ ಮತ್ತು ಕೃಷಿ ಇಲಾಖೆಗಳು ಹೊಂದಾಣಿಕೆಯಿಂದ ಕೆಲಸ ಮಾಡಬೇಕಿತ್ತು. ಅಂತಹ ಹೊಂದಾಣಿಕೆಯ ಕೊರತೆ ಕಂಡುಬಂತು. ಮಾರುಕಟ್ಟೆಯ ಹೊಣೆ ಎನ್ಡಿಡಿಬಿಗೆಂದು ಸರ್ಕಾರ ನಿರ್ಧರಿಸಿತು; ಟೀಕೆಗಳು ಬಂದರೂ ಕೂಡ ಕೆಲಸ ನಡೆಯಿತು. ಎನ್ಡಿಡಿಬಿ ಎಣ್ಣೆಕಾಳು ಮತ್ತು ಖಾದ್ಯತೈಲ ಎರಡನ್ನೂ ಖರೀದಿಸಬೇಕು. ಖರೀದಿಸಿ, ದಾಸ್ತಾನು ಮಾಡಿ ಎಣ್ಣೆ ತಯಾರಿಸಿ ಮಾರಬೇಕು. ಅವ್ಯವಸ್ಥೆಯಲ್ಲಿದ್ದ ಮಾರುಕಟ್ಟೆಯಲ್ಲಿ ಭದ್ರತೆಯನ್ನು ತರಬೇಕಿತ್ತು. ರೈತರ ರಕ್ಷಣೆಗಾಗಿ ದರ ಸ್ವಲ್ಪ ಜಾಸ್ತಿ ಇಡಬೇಕು; ಆದರೆ ಅದು ಗ್ರಾಹಕನಿಗೆ ಜಾಸ್ತಿ ಆಗಬಾರದು. ವ್ಯಾಪಾರಿ (ತೇಲಿಯಾ ರಾಜ) ಸುಳ್ಳು ಸುದ್ದಿ ಹಬ್ಬಿಸಿ ಮಾರುಕಟ್ಟೆಯಲ್ಲಿ ಏರುಪೇರು ಮಾಡಿ ಹಣ ಮಾಡಲು ಹೊಂಚುಹಾಕುತ್ತಿದ್ದ. ಕೃಷಿಯಲ್ಲಿ ಮಾರುಕಟ್ಟೆಗೆ ಎಷ್ಟು ಬೇಕೋ ಅಷ್ಟನ್ನೇ ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಶೇ.೫ರಷ್ಟು ಹೆಚ್ಚು ಉತ್ಪಾದಿಸಿದರೆ ವ್ಯಾಪಾರಿ ದರವನ್ನು ಶೇ.೫೦ರಷ್ಟು ಇಳಿಸುತ್ತಾನೆ; ಉತ್ಪಾದನೆ ಶೇ.೫ರಷ್ಟು ಕಡಮೆಯಾದರೆ ಗ್ರಾಹಕನ ದರವನ್ನು ಶೇ.೫೦ರಷ್ಟು ಏರಿಸುತ್ತಾನೆ. ಭಾರತದಲ್ಲಿ ಅನಿಶ್ಚಿತವಾದ ಮಳೆಯನ್ನು ನಂಬಿರುವ ಕಾರಣ ನಿಖರವಾದ ಯೋಜನೆ ಮಾಡಲು ಸಾಧ್ಯವಾಗುವುದಿಲ್ಲ. ಅದರ ಲಾಭ ಮಾಡಿಕೊಳ್ಳುವವರು ವ್ಯಾಪಾರಿಗಳು. ಖರೀದಿಸಿ ದಾಸ್ತಾನು ಮಾಡಿ ಮಾರುಕಟ್ಟೆಗೆ ಬಿಡದಿದ್ದರೆ ಬೆಲೆಗಳು ಏರಿಕೆಯಾಗಿ ದೊಡ್ಡ ಲಾಭವೇ ಸಿಗುತ್ತದೆ. ಬೆಳೆಗಾರ, ಬಳಕೆದಾರ ಇಬ್ಬರೂ ಅನುಕೂಲವಾಗುವಂತಹ ದರದ ಸ್ಥಿರತೆಗೆ ಎನ್ಡಿಡಿಬಿ ಶ್ರಮಿಸಿತು.
‘ಧಾರಾ’ ಎಂಬಖಾದ್ಯತೈಲ
೧೯೯೪ರ ಹೊತ್ತಿಗೆ ೫೩೪೮ ಎಣ್ಣೆಕಾಳು ಬೆಳೆಗಾರರ ಸಹಕಾರಿ ಸಂಘಗಳಾಗಿ ಸುಮಾರು ೧೦ ಲಕ್ಷ ರೈತರು ಅವುಗಳ ಸದಸ್ಯರಾಗಿದ್ದರು. ಏಳು ರಾಜ್ಯಗಳಲ್ಲಿ ೧೯ ಬೆಳೆಗಾರರ ಜಿಲ್ಲಾ ಯೂನಿಯನ್ಗಳಿದ್ದವು. ಎನ್ಡಿಡಿಬಿ ಹಲವು ದೊಡ್ಡ ಆಧುನಿಕ ಎಣ್ಣೆ ಕಾರ್ಖಾನೆಗಳನ್ನು ಸ್ಥಾಪಿಸಿತು. ಸಹಕಾರಿ ಸಂಘಗಳ ಎಣ್ಣೆಯನ್ನು ಖಾದ್ಯತೈಲ ಪ್ಯಾಕ್ನಲ್ಲಿ ನೀಡಿದರು. ಆ ಎಣ್ಣೆಗೆ ‘ಧಾರಾ’ ಎಂದು ಹೆಸರಿಡಲಾಯಿತು. ಈ ಸಹಕಾರಿ ಸಂಘಗಳು ಬಲಶಾಲಿಯಾದವು.
‘ಧಾರಾ’ ಬಹುಬೇಗ ಗುಣಮಟ್ಟದ, ವಿಶ್ವಾಸಾರ್ಹ, ಕಲಬೆರಕೆರಹಿತ ಮತ್ತು ಯೋಗ್ಯದರದ ಖಾದ್ಯತೈಲ ಎನ್ನುವ ಹೆಸರು ಪಡೆಯಿತು. ಅಮುಲ್ ಯಶಸ್ವಿ ಎನಿಸಲು ಸುಮಾರು ೨೫ ವರ್ಷಗಳು ಬೇಕಾದರೆ ಇದಕ್ಕೆ ಕೆಲವೇ ವರ್ಷ ಸಾಕಾಯಿತು. ಅತಿ ಕಡಮೆ ಬೆಲೆಯ ಬ್ರಾಂಡೆಡ್ ಆಯಿಲ್ ಎನಿಸಿದ್ದು, ಅದರ ಗುಣಮಟ್ಟ ಅಧಿಕ ಬೆಲೆಯ ಬ್ರಾಂಡಿಗೆ ಸಮಾನ ಅಥವಾ ಉತ್ತಮವಾಗಿತ್ತು.
ಅಮುಲ್ ಉತ್ಪನ್ನಗಳ ಮಾರಾಟಕ್ಕೆ ಗುಜರಾತ್ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು (ಜಿಸಿಎಂಎಂಎಫ್) ದೇಶಾದ್ಯಂತ ೫ ಲಕ್ಷ ಚಿಲ್ಲರೆ ಅಂಗಡಿಗಳನ್ನು ಹೊಂದಿತ್ತು. ಧಾರಾ ಮಾರಾಟವನ್ನು ಅದಕ್ಕೆ ವಹಿಸಲಾಯಿತು. ಕೇವಲ ಶೇ.೧.೫ ಮಾರ್ಜಿನ್ ಇದ್ದ ಕಾರಣ ಬೇರೆಯವರು ಅದನ್ನು ಮಾರಲು ಒಪ್ಪುತ್ತಿರಲಿಲ್ಲ.
ಮೊದಲಿಗೆ ಎನ್ಡಿಡಿಬಿ ಅಸಲು ಖರ್ಚಿಗಿಂತ ಕಡಮೆ ಬೆಲೆಗೆ ಖಾದ್ಯತೈಲದ ಮಾರಾಟ ಮಾಡಿತು. ಮಾರುಕಟ್ಟೆ ಗಳಿಕೆಗಾಗಿ ಅದು ಅಗತ್ಯವಿದ್ದು, ನಷ್ಟವಾದರೆ ಅದನ್ನು ಭರಿಸುತ್ತೇವೆಂದು ಸರ್ಕಾರ ಲಿಖಿತ ಭರವಸೆಯನ್ನು ನೀಡಿತ್ತು. ಈ ನಷ್ಟ ತುಂಬಿಸುವ ಬಗ್ಗೆ ಸರ್ಕಾರ ೧.೫೦ ಲಕ್ಷ ಟನ್ ಆಮದಾದ ಖಾದ್ಯತೈಲವನ್ನು ನೀಡಿದ್ದು, ಅದನ್ನು ಮಾರಿ ಬಂದ ಹಣ ಎನ್ಡಿಡಿಬಿಗೆ ಲಭಿಸಿತು. ಅದರಿಂದಾಗಿ ಮೊದಲ ಎರಡು ವರ್ಷ ನಷ್ಟವಾಗಲಿಲ್ಲ. ಮುಂದೆ ವಿದೇಶೀ ವಿನಿಮಯದ ಬಿಕ್ಕಟ್ಟಿನಿಂದಾಗಿ ಸರ್ಕಾರಕ್ಕೆ ಆಮದಾದ ತೈಲ ಕೊಡಲು ಸಾಧ್ಯವಾಗಲಿಲ್ಲ.
ಒಂದು ಕೃಷಿ ಉತ್ಪನ್ನದ ಕೊರತೆಯಾದಾಗ ರೈತನಿಗೆ ಹೆಚ್ಚು ಬೆಲೆ ನೀಡಿದರೆ ಆತ ಹೆಚ್ಚು ಉತ್ಪಾದಿಸಿ ಕೊರತೆಯನ್ನು ತುಂಬುತ್ತಾನೆನ್ನುವುದು ಡಾ|| ಕುರಿಯನ್ ಅವರ ಸಿದ್ಧಾಂತ. ಅದಕ್ಕಾಗಿ ದರ ಏರಿಸಿದರು. ಉತ್ಪನ್ನಗಳು ಉತ್ಪಾದಕರಿಂದ ಗ್ರಾಹಕರಿಗೆ ನೇರವಾಗಿ ತಲಪುವುದು, ಆ ಮೂಲಕ ವ್ಯಾಪಾರಿಯನ್ನು ದೂರವಿಡುವುದು ಎನ್ಡಿಡಿಬಿಯ ಗುರಿಯಾಗಿದ್ದು, ಅದಕ್ಕಾಗಿ ಗ್ರಾಹಕರ ದೊಡ್ಡ ಮಾರುಕಟ್ಟೆಯನ್ನು ಗಳಿಸಿಕೊಳ್ಳಬೇಕಿತ್ತು. ಇಲ್ಲಿ ಅವರಿಗೆ ಹಾಲಿನಂತಹ ಯಶಸ್ಸು ಸಿಗಲಿಲ್ಲ. ವಸ್ತುವಿನ ಸ್ವರೂಪ ಅದಕ್ಕೆ ಕಾರಣ. ಹಾಲಿನ ದಾಸ್ತಾನು ಅಸಾಧ್ಯವಾದರೆ ಖಾದ್ಯತೈಲದ್ದು ಸಾಧ್ಯ. ಆದರೂ ಎಣ್ಣೆಯ ಶಕ್ತಿಶಾಲಿ ಲಾಬಿಯನ್ನು ಧಾರಾ ಅಲುಗಾಡಿಸಿತು. “ಇದು ಗಮನಾರ್ಹ ಯಶಸ್ಸಾದರೂ ಯಾರೂ ಇದನ್ನು ಗುರುತಿಸಲಿಲ್ಲ; ಏಕೆಂದರೆ ಇದು ಬಹುರಾಷ್ಟ್ರೀಯ ಕಂಪೆನಿಯ (ಎಂಎನ್ಸಿ) ಸಾಧನೆಯಲ್ಲ. ಭಾರತದ ದುರಂತವೆಂದರೆ ಭಾರತೀಯರು, ಅವರ ಪ್ರಯತ್ನ ಮತ್ತು ಸಾಧನೆಗಳ ಬಗ್ಗೆ ನಮಗೆ ಗೌರವವಿಲ್ಲ. ಒಮ್ಮೆ ಒಬ್ಬ ಸರ್ಕಾರಿ ಅಧಿಕಾರಿ ನನ್ನ ಬಳಿ ನೆಸ್ಲೆಯನ್ನು ಹೊಗಳಿದಾಗ, ‘ಬ್ರಿಟಿಷರ ಆಡಳಿತ ಚೆನ್ನಾಗಿತ್ತು. ಅವರನ್ನು ವಾಪಸು ಕರೆಸೋಣವೆ?’ ಎಂದು ಕೇಳಿದ್ದೆ” ಎಂದು ಕುರಿಯನ್ ಬೇಸರದಿಂದ ಹೇಳಿದ್ದಾರೆ.
ಆಮದುಇಳಿಕೆ
ಖಾದ್ಯತೈಲ ಮಾರುಕಟ್ಟೆಗೆ ಎನ್ಡಿಡಿಬಿ ಪ್ರವೇಶಕ್ಕೆ ಸಂಬಂಧಿಸಿ ಸರ್ಕಾರದ ನಿರೀಕ್ಷೆ ಹುಸಿಯಾಗಲಿಲ್ಲ. ಅದರ ಆಮದು ವೆಚ್ಚ ೧೦೦೦ ಕೋಟಿ ರೂ. ಗಳಿಂದ ೧೬೫ ಕೋಟಿಗೆ ಇಳಿಯಿತು. ಧಾರಾದ ವಾರ್ಷಿಕ ಮಾರಾಟ ೧೦೦೦ ಕೋಟಿ ರೂ.ಗೆ ಏರಿತು. ಬೇರೆ ಎಣ್ಣೆಗಳ ಮಾರಾಟ ವಾರ್ಷಿಕ ಶೇ.೧೨ರಷ್ಟು ಏರಿದರೆ, ಧಾರಾದ್ದು ಶೇ.೩೫ರಷ್ಟು ಏರುತ್ತಿತ್ತು. ಆಮದಾಗದಿದ್ದರೆ ವಾಣಿಜ್ಯ ಇಲಾಖೆಯ ಸ್ಟೇಟ್ ಟ್ರೇಡಿಂಗ್ ಕಾರ್ಪೊರೇಶನ್ಗೆ (ಎಸ್ಟಿಸಿ) ಕಷ್ಟವಾಗುತ್ತಿತ್ತು. ನಾಗರಿಕ ಪೂರೈಕೆ ಇಲಾಖೆಯು ಆಮದು ಎಣ್ಣೆಯನ್ನು ದೇಶದ ಜನರಿಗೆ ಕಡಮೆ ಬೆಲೆಗೆ ಮಾರಬೇಕಿತ್ತು. ಕಡಮೆ ಬೆಲೆಗೆ ಮಾರಬೇಕಾದರೆ ಸರ್ಕಾರ ಸಬ್ಸಿಡಿ ನೀಡಬೇಕು. ಖಾದ್ಯತೈಲದಲ್ಲಿ ಸ್ವಾವಲಂಬಿಯಾದರೆ ಮೇಲಿನ ಸಮಸ್ಯೆಗಳು ಪರಿಹಾರವಾಗುತ್ತವೆ. ಅದಕ್ಕೆ ಪ್ರೋತ್ಸಾಹಕ (incentive) ನೀಡಿ ಅಧಿಕ ಉತ್ಪಾದನೆ ಮಾಡಿಸುವುದೇ ಪರಿಹಾರ. ೧೯೯೩ರ ಹೊತ್ತಿಗೆ ಭಾರತ ಖಾದ್ಯತೈಲದಲ್ಲಿ ಸ್ವಾವಲಂಬಿ ಆಯಿತು. ೨೦ ಲಕ್ಷ ಟನ್ ಇದ್ದ ಆಮದು ಎರಡು ಲಕ್ಷ ಟನ್ಗೆ ಇಳಿಯಿತು. ದೇಶದೊಳಗೂ ಸ್ವಲ್ಪ ಶಿಸ್ತು ಬಂತು. ತೇಲಿಯಾ ರಾಜಾಗಳನ್ನು ತಕ್ಕಮಟ್ಟಿಗೆ ನಿಯಂತ್ರಿಸಲಾಯಿತು. ಆ ಕಾರಣದಿಂದ ಹಲವು ಎನ್ಡಿಡಿಬಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಯಿತು. ಭಾವನಗರದ ಎಣ್ಣೆ ಕಾರ್ಖಾನೆಗೆ ಅನೇಕ ಸಲ ಬೆಂಕಿ ಹಚ್ಚಿದರು. “ಆದರೆ ನಾವು ಹಿಂದೆ ಸರಿಯಲಿಲ್ಲ. ನಮ್ಮ ಖಾದ್ಯತೈಲ ಯೋಜನೆಯು ವಿಫಲವಾಗಬೇಕೆಂದು ಆ ಪುಂಡರು ಕಾಯುತ್ತಿದ್ದರು. ಇದು ಹಾಲಿನಂತಲ್ಲ; ಎಣ್ಣೆಯಲ್ಲಿ ಕಾಲು ಜಾರುತ್ತದೆ. ಡಾ|| ಕುರಿಯನ್ ಕಾಲು ಜಾರಿ ಬೀಳುವುದರಲ್ಲಿ ಸಂದೇಹವೇ ಇಲ್ಲ – ಎನ್ನುತ್ತಿದ್ದರು. ಆದರೆ ಬಿದ್ದದ್ದು ಅವರು. ಇದರಿಂದ ಹಲವರಿಗೆ ಬೇಸರ ಆಗಿರಬಹುದು. ಏನಿದ್ದರೂ ನಾವು ಲಕ್ಷಾಂತರ ಎಣ್ಣೆಕಾಳು ಬೆಳೆಗಾರರಿಗೆ ಲಾಭ ಗಳಿಸಿಕೊಟ್ಟಿದ್ದೇವೆ” ಎಂದು ಕುರಿಯನ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಮಂತ್ರಿಯಭ್ರಷ್ಟಾಚಾರ
ಒಮ್ಮೆ ಒಂದು ಕುತೂಹಲಕರ ಘಟನೆ ನಡೆಯಿತು. ಡಾ|| ಕುರಿಯನ್ ಅವರು ಪತ್ನಿಯೊಂದಿಗೆ ದೆಹಲಿಗೆ ಹೋಗಿದ್ದಾಗ ಒಬ್ಬ ಅಧಿಕಾರಿ ಫೋನ್ ಮಾಡಿ ಆತಂಕವನ್ನು ತೋಡಿಕೊಂಡರು. ನಾಗರಿಕ ಪೂರೈಕೆ ಮಂತ್ರಿ ಸಂಜೆ ೭ ಗಂಟೆಗೆ ಪ್ರಧಾನಿ ರಾಜೀವ್ಗಾಂಧಿಯವರನ್ನು ಭೇಟಿ ಮಾಡಿ ದಾಸ್ತಾನಿರುವ ೨೭ ಸಾವಿರ ಟನ್ ಖಾದ್ಯತೈಲವನ್ನು ಎನ್ಡಿಡಿಬಿಗೆ ಕೊಡುವ ಬದಲು ಅರ್ಧಬೆಲೆಗೆ ಖಾಸಗಿಯವರಿಗೆ ಮಾರಲು ಅನುಮತಿ ಪಡೆಯುತ್ತಿದ್ದಾರೆಂಬುದೇ ಆ ಸುದ್ದಿ. ಆಗ ಸಂಜೆ ಗಂಟೆ ೫. ಎರಡು ಗಂಟೆಯೊಳಗೆ ಪ್ರಧಾನಿಯನ್ನು ಭೇಟಿ ಮಾಡಿ ಆ ಅವ್ಯವಹಾರವನ್ನು ತಡೆಯಲು ಹೇಗೆ ಸಾಧ್ಯ? ಪ್ರಧಾನಿ ಕಚೇರಿಯ ಓರ್ವ ಪರಿಚಿತ ಅಧಿಕಾರಿಗೆ ಫೋನ್ ಮಾಡಿ ೬.೪೫ಕ್ಕೆ ಪ್ರಧಾನಿ ಭೇಟಿಯ ಅವಕಾಶವನ್ನು ಪಡೆದುಕೊಂಡರು. ಎಣ್ಣೆ ಹಾಳಾದ ಕಾರಣ ಅರ್ಧಬೆಲೆಗೆ ಮಾರುತ್ತೇನೆನ್ನುವುದು ಮಂತ್ರಿಯ ಸಬೂಬು. “ನಾವದನ್ನು ಪೂರ್ತಿ ಬೆಲೆಗೆ ಪಡೆದುಕೊಳ್ಳುತ್ತೇವೆ; ನಮಗೆ ಎಣ್ಣೆ ಬೇಕಿದ್ದರೂ ಮಂತ್ರಿ ಕೊಡುತ್ತಿಲ್ಲ” ಎಂದು ಕುರಿಯನ್ ರಾಜೀವ್ಗಾಂಧಿಯವರಲ್ಲಿ ಹೇಳಿ ಹೊರಡುವುದಕ್ಕೆ ಅನುಮತಿ ಕೇಳಿದರು. “ಬೇಡ, ಇಲ್ಲೇ ಇರಿ” ಎಂದರು ರಾಜೀವ್ಗಾಂಧಿ. ಆಗ ಸಂಪುಟ ಕಾರ್ಯದರ್ಶಿಯಾಗಿದ್ದ ಟಿ.ಎನ್. ಶೇಷನ್ ಕೂಡ ಅಲ್ಲಿದ್ದರು.
ಮಂತ್ರಿ ಎಣ್ಣೆಯನ್ನು ಅರ್ಧ ಬೆಲೆಗೆ ಮಾರುವ ಮಾತನಾಡಿದಾಗ ಕುರಿಯನ್ ಪೂರ್ತಿ ಬೆಲೆಗೆ ಖರೀದಿಸುವುದಾಗಿ ಹೇಳಿದರು. “ಪೂರ್ತಿ ಬೆಲೆಗೆ ಸರ್ಕಾರೀ ರಂಗದ ಎನ್ಡಿಡಿಬಿಗೆ ಖರೀದಿಸಲು ಇವರು ತಯಾರಿರುವಾಗ ಅರ್ಧಬೆಲೆಗೆ ಖಾಸಗಿಯವರಿಗೆ ಕೊಡುವುದೇಕೆ? ಇದು ಯಾವ ನೀತಿ?” ಎಂದು ಪ್ರಧಾನಿ ರಾಜೀವ್ಗಾಂಧಿ ಅವರು ಮಂತ್ರಿಯನ್ನು ತರಾಟೆಗೆ ತೆಗೆದುಕೊಂಡರು; ಮತ್ತು ೨೪ ಗಂಟೆಯೊಳಗೆ ಎಲ್ಲ ತೈಲವನ್ನು ಡಾ|| ಕುರಿಯನ್ ಅವರಿಗೆ ಕೊಡಲು ಸೂಚಿಸಿದರು. ಕುರಿಯನ್ ಮುಂದುವರಿದು, “ಈ ಸಚಿವರ ಬಗ್ಗೆ ನನಗೆ ಹೇಳುವುದಿದೆ. ಕಳೆದ ಸಲದ ತೈಲ ಆಮದಿನಲ್ಲಿ ಈತ ಕೋಟಿಗಟ್ಟಲೆ ಹಣ ಮಾಡಿಕೊಂಡರೆಂದು ಮುಂಬಯಿ ತೇಲಿಯಾ ರಾಜಾಗಳು ಕೂಗಿ ಹೇಳುತ್ತಿದ್ದಾರೆ. ಅಂತಹ ಖದೀಮರು ನಿಮ್ಮ ಮಂತ್ರಿಯ ಬಗ್ಗೆ ಬೀದಿಯಲ್ಲಿ ಇಂತಹ ಸುದ್ದಿ ಹಬ್ಬಿಸುತ್ತಿದ್ದಾರೆಂದರೆ ನಿಮ್ಮ ಸರ್ಕಾರದ ಗೌರವದ ಗತಿ ಏನಾಗಬೇಕು?” ಎಂದು ರಾಜೀವ್ ಅವರಲ್ಲಿ ಕೇಳಿದರು. ಕುರಿಯನ್ ಅಲ್ಲಿಂದ ಹೊರಟಾಗ ಶೇಷನ್ ಕೈ ಕುಲುಕಿ “ಇಂತಹ ಮಾತನಾಡುವ ಸಾಮರ್ಥ್ಯ ನಿಮಗಿದೆ ಎಂದು ಗೊತ್ತಿರಲಿಲ್ಲ” ಎಂದರಂತೆ! “ಆ ಮಂತ್ರಿ ನನ್ನನ್ನು ಕ್ಷಮಿಸಲೇ ಇಲ್ಲ. ಈಗಲೂ ಎಲ್ಲಾದರೂ ಸಿಕ್ಕಿದರೆ ಮುಖ ತಿರುಗಿಸುತ್ತಾರೆ” ಎಂದು ಕುರಿಯನ್ ಆತ್ಮಕಥನದಲ್ಲಿ ದಾಖಲಿಸಿದ್ದಾರೆ.
* * *
ವಿದೇಶದಲ್ಲಿಪ್ರಭಾವ
ಆಪರೇಶನ್ ಫ್ಲಡ್ ಯಶಸ್ವಿಯಾಗಿ ಜಗತ್ತಿಗೆ ಅದು ತಿಳಿದಾಗ ಹಲವರು ಆನಂದ್ಗೆ ಬಂದು ನೋಡಬಯಸಿದರು. ಬ್ರಿಟನ್ನ ಪ್ರಿನ್ಸ್ ಚಾರ್ಲ್ಸ್, ಪ್ರಧಾನಿ ಲಾರ್ಡ್ ಜೇಮ್ಸ್ ಕಾಲಘನ್, ನೆದರ್ಲೆಂಡ್ಸ್ನ ರಾಣಿಯಲ್ಲದೆ ಸೋವಿಯತ್ ಒಕ್ಕೂಟದ (ಯುಎಸ್ಎಸ್ಆರ್) ಅಲೆಕ್ಸಿ ಕೊಸಿಗಿನ್ ಕೂಡ ಬಂದರು. ಎಲ್ಲ ನೋಡಿದ ಕೊಸಿಗಿನ್ “ಇದು ನಿಧಾನವಾಯಿತು. ಕ್ರಾಂತಿ ಆಗಬೇಕು” ಎಂದರಲ್ಲದೆ ಕ್ರಾಂತಿ ತಂದ ಬದಲಾವಣೆಯನ್ನು ನೋಡಲು ಕುರಿಯನ್ರನ್ನು ರಷ್ಯಾಗೆ ಆಹ್ವಾನಿಸಿದರು. ಅಲ್ಲಿಗೆ ಹೋದ ಕುರಿಯನ್ರಿಗೆ ಗುಪ್ತಚರ ಸಂಸ್ಥೆ ಕೆ.ಜಿ.ಬಿ. ತಮ್ಮನ್ನು ಹಿಂಬಾಲಿಸುತ್ತಿರುವುದು ಮತ್ತು ‘ಕುಳಿತುಕೋ, ನಿಲ್ಲು’ ಎಂಬಂತೆ ನಡೆಸಿಕೊಳ್ಳುವುದು ಇಷ್ಟವಾಗಲಿಲ್ಲ; ಪ್ರತಿಭಟಿಸಿದಾಗ ಇಬ್ಬರು ಮಂತ್ರಿಗಳು ಬಂದು ಕ್ಷಮೆ ಕೇಳಿದರು. ಅವರ ಡೈರಿ ಉದ್ಯಮ ಇವರಿಗೆ ಇಷ್ಟವಾಗಲಿಲ್ಲ. ದನಗಳನ್ನು ಚೆನ್ನಾಗಿ ಸಾಕುತ್ತಿಲ್ಲ; ಡೈರಿಗಳು ದಕ್ಷವಾಗಿ ಕೆಲಸ ಮಾಡುತ್ತಿಲ್ಲ ಅನ್ನಿಸಿತು.
ಏಷ್ಯಾ, ಆಫ್ರಿಕ, ಲ್ಯಾಟಿನ್ ಅಮೆರಿಕದ ಹಲವು ದೇಶಗಳು ಅಮುಲ್ ಮಾದರಿಯನ್ನು ಅನುಸರಿಸಿದವು. ಇಲ್ಲಿಗೆ ಬಂದು ಕಲಿತುಕೊಂಡರು. ೧೯೮೨ರಲ್ಲಿ ಪಾಕಿಸ್ತಾನದವರು ಡಾ|| ಕುರಿಯನ್ರನ್ನು ತಮ್ಮ ದೇಶಕ್ಕೆ ಕರೆದರು. ಆಗ ಉಭಯ ದೇಶಗಳ ಸಂಬಂಧ ಹಾಳಾಗಿದ್ದ ಕಾರಣ ಒಪ್ಪಿಗೆ ಸಿಗಲಿಲ್ಲ. ಕೊನೆಗೆ ವಿಶ್ವಬ್ಯಾಂಕ್ ಮೂಲಕ ಕುರಿಯನ್ ನೇತೃತ್ವದ ತಂಡವನ್ನು ತಮ್ಮಲ್ಲಿಗೆ ಕರೆಸಿಕೊಂಡು ಇವರಿಂದ ಕಲಿತರು. ಐದು ವಾರಗಳ ಅದೊಂದು ಸುಂದರ ಅನುಭವವಾಗಿತ್ತು. ಚಂದ್ರಿಕಾ ಕುಮಾರತುಂಗ ಅವರ ಆಹ್ವಾನದ ಮೇರೆಗೆ ಶ್ರೀಲಂಕೆಗೂ ಹೋಗಿಬಂದರು. ಅಲ್ಲಿ ನ್ಯೂಜಿಲೆಂಡ್, ನೆಸ್ಲೆ ಮುಂತಾದವರ ಹಿತಾಸಕ್ತಿ ಇರುವುದು ಗಮನಕ್ಕೆ ಬಂತು.
* * *
ಕೈತುಂಬಕೆಲಸ
ಡಾ|| ಕುರಿಯನ್ ಸಂಬಳ ಪಡೆಯುತ್ತಿದ್ದ ಕೆಲಸ ಒಂದೇ. ಅದು ಕೈರಾ ಹಾಲು ಸಹಕಾರಿ ಯೂನಿಯನ್ನ ಜನರಲ್ ಮ್ಯಾನೇಜರ್ ಹುದ್ದೆ. ಆದರೆ ಹಲವು ಜವಾಬ್ದಾರಿಗಳಿಗೆ ಅವರು ಹೆಗಲು ಕೊಡಬೇಕಾಯಿತು. ಸಮಸ್ಯೆ ಇರುವಲ್ಲಿಗೆ ಕರೆದಾಗ ಹೋದರು. ಅದಕ್ಕೆ ಸರಿಯಾಗಿ ಸಂಸತ್ ಅಂಗೀಕರಿಸಿದ ಎನ್ಡಿಡಿಬಿ ಕಾಯ್ದೆಯಲ್ಲಿ ಹಾಲು ಮಾತ್ರ ಅಲ್ಲ; ರಾಜ್ಯ ಅಥವಾ ಕೇಂದ್ರಸರ್ಕಾರಗಳು ವಹಿಸುವ ಯಾವುದೇ ಹೊಣೆಯನ್ನು ನಿರ್ವಹಿಸಬೇಕು ಎಂದಿತ್ತು. ೧೯೮೪ರಲ್ಲಿ ಅವರನ್ನು ಗುಜರಾತ್ ಕೃಷಿ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಿಸಲಾಯಿತು. ಗುಜರಾತ್ ವಿದ್ಯುತ್ ಮಂಡಳಿಯ (ಜಿಇಬಿ) ಅಧ್ಯಕ್ಷರಾಗಿ ಸರ್ಕಾರ ನೇಮಿಸಿತು. ಆ ಹುದ್ದೆಯಲ್ಲಿ ಅವರು ಹಲವು ಬದಲಾವಣೆ-ಸುಧಾರಣೆಗಳನ್ನು ತಂದರು. ಗುಣಮಟ್ಟದ ವಿದ್ಯುತ್ ಪೂರೈಕೆ, ಆವಶ್ಯಕತೆಗೆ ಸದಾ ಸ್ಪಂದನೆ, ವಿದ್ಯುತ್ ಕಳವಿಗೆ ತಡೆ ಅವರ ಮುಖ್ಯ ಉದ್ದೇಶಗಳಾಗಿದ್ದವು. ಊರಿಗೊಂದು ಮೀಟರ್ ಹಾಕಿ ಅದನ್ನು ನೋಡಿಕೊಳ್ಳುವುದಕ್ಕೆ ಅಲ್ಲೊಂದು ವಿದ್ಯುತ್ ಸಮಿತಿ, ಮೀಟರ್ನ ಪ್ರಕಾರ ಆ ಹಳ್ಳಿಗೆ ದರ, ಸರ್ಕಾರದಿಂದ ವಿದ್ಯುತ್ ಉತ್ಪಾದನೆ ಮಾತ್ರ; ನಿರ್ವಹಣೆ, ವಿತರಣೆಗಳು ಜನರ ಹೊಣೆ – ಹೀಗೆ ಹಲವು ಸುಧಾರಣೆಗಳಿಗೆ ಮಾರ್ಗ ಹಾಕಿಕೊಟ್ಟರು. ಕೈರಾ ಜಿಲ್ಲೆಯ ವಿದ್ಯುತ್ ವಿತರಣೆಯನ್ನು ತಾವೇ ವಹಿಸಿಕೊಂಡರು. ವಿದ್ಯುತ್ ಕೈಕೊಡಬಾರದು, ವೋಲ್ಟೇಜ್ ಸರಿ ಇರಬೇಕು ಎಂಬುದನ್ನು ಜಾರಿ ಮಾಡುವಾಗ ಜಿಇಬಿ ವಿದ್ಯುತ್ ಬೇಡ; ತಾವೇ ಉತ್ಪಾದಿಸೋಣ ಎನಿಸಿ ಆ ಬಗೆಗೂ ಕಾರ್ಯಪ್ರವೃತ್ತರಾದರು.
ಗುಜರಾತಿನ ಕಛ್ನ ರಾಣ್ನ ಹಾಲು ಸಹಕಾರಿ ಸಂಸ್ಥೆಯ ಅಧ್ಯಕ್ಷ ಒಮ್ಮೆ (೧೯೮೭) ಕುರಿಯನ್ ಅವರ ಬಳಿಗೆ ಬಂದು ಉಪ್ಪು ತಯಾರಕ ರೈತರ ಶೋಷಣೆಯ ಬಗ್ಗೆ ತಿಳಿಸಿದರು. ದೇಶದ ಶೇ.೬೦ರಷ್ಟು ಉಪ್ಪು ಗುಜರಾತಿನಲ್ಲಿ ತಯಾರಾಗುತ್ತದೆ. ಆದರೆ ಅದರ ತಯಾರಕರ ಕಷ್ಟ ಯಾರಿಗೂ ಗೊತ್ತಿಲ್ಲ. ಅದು ಮರುಭೂಮಿ; ಒಂದು ಮರವೂ ಇಲ್ಲ. ವರ್ಷ ಹತ್ತು ತಿಂಗಳು ಕೆಲಸ. ನೀರನ್ನು ವ್ಯಾಪಾರಿಯಿಂದ ಖರೀದಿಸಬೇಕು; ಉಪ್ಪನ್ನು ಅವನಿಗೇ ಮಾರುವುದು. ಅವರಿಗೆ ಆಗ ಕಿಲೋ ಉಪ್ಪಿಗೆ ಸಿಗುತ್ತಿದ್ದುದು ಎರಡು ಪೈಸೆ ಮಾತ್ರ. ಕಾಲುಗಳು ಉಪ್ಪನ್ನು ಹೀರಿಕೊಂಡು ಬೆಂಕಿ ಹಚ್ಚಿದರೂ ಸುಡುವುದಿಲ್ಲ ಮುಂತಾಗಿ ವಿವರಿಸಿದರು. ‘ಕೇಳಲಾರೆ, ಹೋಗಿ’ ಎಂದು ಕುರಿಯನ್ ಕಳುಹಿಸಿದರೆ ಎರಡನೇ ದಿನದಲ್ಲಿ ಆತ ಅಪಘಾತದಲ್ಲಿ ತೀರಿಕೊಂಡರು.
ಉಪ್ಪಿನವರಬವಣೆ
ಆತನ ಗೌರವಾರ್ಥ ಎನ್ಡಿಡಿಬಿ ಈಗ ಉಪ್ಪಿನ ಕ್ಷೇತ್ರಕ್ಕೆ ಪ್ರವೇಶಿಸಿತು. ಉಪ್ಪು ತಯಾರಕರನ್ನು ಸಂಘಟಿಸಿದರು. ಉಪ್ಪಿನ ಗುಣಮಟ್ಟ ಏರಿಸಿ ಮಾರಾಟ ಮಾಡಿದರು. ಮೊದಲ ವರ್ಷ ೧೦ ಸಾವಿರ ಟನ್, ಎರಡನೇ ವರ್ಷ ೨೫ ಸಾವಿರ ಟನ್ ಹಾಗೂ ಮೂರನೇ ವರ್ಷ ಒಂದು ಲಕ್ಷ ಟನ್ವರೆಗೆ ಮಾರಾಟ ಮಾಡಿದರು. ಉಪ್ಪು ತಯಾರಕರಿಗೆ ವಿವಿಧ ಸೌಲಭ್ಯಗಳನ್ನು ನೀಡಿದರು. ಕೆಲವು ವರ್ಷ ಆಗುವಾಗ ಅವರಿಗೆ ಕಿಲೋಗೆ ಐದು ಪೈಸೆ ಸಿಗುವಂತಾಯಿತು. ಆ ಹೊತ್ತಿಗೆ ಟಾಟಾದವರು ಅಯೊಡೈಸ್ಡ್ ಉಪ್ಪನ್ನು ಮಾರತೊಡಗಿದರು. ಆಗ ಎನ್ಡಿಡಿಬಿ ಹಿಂದೆ ಸರಿಯಿತು.
“ಎನ್ಡಿಡಿಬಿಯಲ್ಲಿ ನಾವು ಕಂಡದ್ದೆಂದರೆ, ಭಾರತದ ಕೃಷಿಯ ದೊಡ್ಡ ಸಮಸ್ಯೆ ಬೇಡಿಕೆಗೆ ಅನುಗುಣವಾಗಿ ನಮ್ಮ ಉತ್ಪಾದನೆ ವ್ಯವಸ್ಥಿತವಾಗಿ ಲಭ್ಯವಿಲ್ಲ; ಉತ್ಪಾದನೆ ಮಳೆಗಾಗಿ ಕಾಯಬೇಕಾಗುತ್ತದೆ. ವ್ಯಾಪಾರಿಗಳು ಈ ಸ್ಥಿತಿಯ ದುರುಪಯೋಗ ಮಾಡಿಕೊಳ್ಳು ಡುತ್ತಾರೆ; ಅವರಿಗೆ ಹಣವೇ ಮುಖ್ಯ. ಆದ್ದರಿಂದ ಶೋಷಣೆಯಿಲ್ಲದ ಸಹಕಾರಿ ವ್ಯವಸ್ಥೆ ಬರಬೇಕು. ಹಾಲಿನ ವಿಷಯದಲ್ಲಿ ಸಾಧ್ಯವಾದದ್ದು, ಇತರ ಕೃಷಿ ಉತ್ಪನ್ನಗಳಿಗೂ ಅನ್ವಯವಾಗಬೇಕು. ಅದಕ್ಕಾಗಿ ನಾವು ಖಾದ್ಯತೈಲ ಕ್ಷೇತ್ರದಲ್ಲಿ ಪ್ರಯೋಗ ಮಾಡಿದೆವು” ಎಂದಿದ್ದಾರೆ ಕುರಿಯನ್.
“ದೇಶದ ಸಹಕಾರಿ ಕಾನೂನುಗಳು ನಮ್ಮ ಕೈಕಟ್ಟುತ್ತವೆ. ದೇಶದಲ್ಲಿ ಇಂದಿಗೂ ‘ಸಹಕಾರಿ’ ಎಂಬುದು ಒಳ್ಳೆಯ ಶಬ್ದ ಅಲ್ಲ. ಸಹಕಾರಿ ಶಾಸನಗಳು ಪ್ರಾಚೀನ ಕಾಲದವಾಗಿದ್ದು, ಅವು ಅಧಿಕಾರಿಗಳ ಮತ್ತು ರಾಜಕಾರಣಿಗಳ ಹಿಡಿತದಲ್ಲಿವೆ – ಎನ್ನುವ ಅವರು, ಸರ್ಕಾರೀ ನಿಯಂತ್ರಣ ಇಲ್ಲದಿದ್ದರೆ ಸಹಕಾರಿರಂಗವು ಚೆನ್ನಾಗಿ ಸ್ಪರ್ಧಿಸಬಹುದು ಎನ್ನುವ ವಿಶ್ವಾಸ ತಳೆದಿದ್ದಾರೆ. ಎಂಎನ್ಸಿಗಳು ಬಂದರೂ ದೇಶದಲ್ಲಿ ಅತಿ ದೊಡ್ಡ ಬೇಬಿಫುಡ್ ಉತ್ಪಾದಕ ಸಂಸ್ಥೆ ಅಮುಲೇ ಆಗಿದೆ.
“ಹಣಕಾಸು ಮಂತ್ರಿಯಾಗಿ ಡಾ|| ಮನಮೋಹನ್ಸಿಂಗ್ ಕೈಗಾರಿಕೆಗಿಂತ ಮೊದಲು ಕೃಷಿಯ ಉದಾರೀಕರಣ ಮಾಡಬೇಕಿತ್ತು. ಕೃಷಿಯ ಕೈ ಕಟ್ಟಿಹಾಕಿ ಕೈಗಾರಿಕೆಗಳನ್ನು ಮುಕ್ತ ಮಾಡಿದಾಗ ಕೃಷಿಯ ಶೋಷಣೆ ಹೆಚ್ಚಾಯಿತು. ನಗರಗಳು ಹಳ್ಳಿಗಳನ್ನು ಹೀರಿ ಮೆರೆಯುತ್ತಿವೆ; ಕೈಗಾರಿಕೆ ಕೃಷಿಯನ್ನು ಶೋಷಿಸುತ್ತಿದೆ. ಸರ್ಕಾರ ಕೃಷಿ ಕ್ಷೇತ್ರವನ್ನು ಮರೆತಿದೆ. ಅದು ಸರಿಯಲ್ಲ. ಸರ್ಕಾರದ ಆಡಳಿತ ಎಲ್ಲ ಕ್ಷೇತ್ರಗಳನ್ನು ಮುಟ್ಟಬೇಕು; ಆಡಳಿತ ಮಾಡಬೇಕು. ಸರ್ಕಾರ ಡೈರಿ ನಡೆಸದಿದ್ದರೂ ಖಾಸಗಿಯವರು ಅದನ್ನು ಹಾಳುಮಾಡದಂತೆ ನೋಡಬೇಕು” ಇವು ಡಾ|| ಕುರಿಯನ್ ಅವರ ಅನುಭವಪೂರ್ಣ ಮಾತುಗಳು.
ದೇಶದಲ್ಲಿ ಇನ್ನೊಬ್ಬ ಡಾ|| ಕುರಿಯನ್ ಬರುವುದು ಸುಲಭವಲ್ಲ. ಅವರ ಸಾಧನೆಗಳೆಲ್ಲ ಆ ಕ್ಷೇತ್ರದ ಪ್ರಥಮ ಎನಿಸುವಂಥವು.
(ಮುಗಿಯಿತು)
ರಾಜೀವ್ಗಾಂಧಿಅವರಮನವಿ
ಇತರ ಕೆಲವು ಪ್ರಧಾನಿಗಳಂತೆಯೇ ರಾಜೀವ್ಗಾಂಧಿ ಅವರೊಂದಿಗೆ ಕೂಡ ಡಾ|| ಕುರಿಯನ್ ಅವರಿಗೆ ಆತ್ಮೀಯ ಸಂಬಂಧವಿತ್ತು. “ರಾಜೀವ್ ಒಳ್ಳೆಯ ಮನುಷ್ಯ. ಕಾಂಪ್ಲಿಕೇಶನ್ ಇಲ್ಲದ ವ್ಯಕ್ತಿ. ಆತ ಮಾಡಿದ ಏಕೈಕ ತಪ್ಪೆಂದರೆ ಎಲ್ಲ ಬಗೆಯ ಭ್ರಷ್ಟ ಮಂತ್ರಿಗಳನ್ನು ತನ್ನ ಸುತ್ತ ಇಟ್ಟುಕೊಂಡದ್ದು. ಒಮ್ಮೆ ಏನನ್ನೋ ಉದ್ಘಾಟಿಸಲು ಆನಂದ್ಗೆ ಬಂದಾಗ ಆತ ನನ್ನ ಜೊತೆ ಒಂದು ಸಮಸ್ಯೆಯನ್ನು ಹೇಳಿಕೊಂಡರು” ಎಂದು ಕುರಿಯನ್ ಆ ಬಗ್ಗೆ ವಿವರಿಸಿದ್ದಾರೆ.
“ಕುರಿಯನ್ಜೀ, ನಾನೊಂದು ದೊಡ್ಡ ತಪ್ಪು ಮಾಡಿದೆ. ನನ್ನ ಕ್ಷೇತ್ರ ರಾಯ್ಬರೇಲಿಯಲ್ಲಿ ೧೦೦ ಕೋಟಿ ರೂ. ಖರ್ಚು ಮಾಡಿ ಒಂದು ಕಾರ್ಖಾನೆ ಸ್ಥಾಪಿಸಿದೆ. ಅಲ್ಲಿಯ ೨೦೦೦ ಉದ್ಯೋಗದಲ್ಲಿ ೧೯೮೦ ಹೊರಗಿನವರಿಗಾಯಿತು; ಉಳಿದ ೨೦ ಕಸಗುಡಿಸುವ ಕೆಲಸ ಸ್ಥಳೀಯರಿಗೆ ಸಿಕ್ಕಿತು. ಇದರಿಂದ ಟೀಕೆಗೆ ಗುರಿಯಾಗಬೇಕಾಯಿತು. ನೀವು ಆನಂದ್ನAತಹ ಒಂದು ಘಟಕವನ್ನು ಅಲ್ಲಿ ಹಾಕುವಿರಾ? – ಎಂದು ಕೇಳಿದರು. “ಅದು ಬೇಗ ಆಗುವುದಿಲ್ಲ. ದನ ಸಾಕಿ ಹಾಲು ಬೇಕಾದಷ್ಟು ಉತ್ಪಾದಿಸಬೇಕು; ಮತ್ತೆ ಡೈರಿಯನ್ನು ಸ್ಥಾಪಿಸಬಹುದು” ಎಂದ ಕುರಿಯನ್ ಆ ಬಗ್ಗೆ ಕಾರ್ಯಪ್ರವೃತ್ತರಾದರು.
ಅಷ್ಟರಲ್ಲಿ ರಾಜೀವ್ಗಾಂಧಿಯವರ ಹತ್ಯೆ ನಡೆಯಿತು. ಸ್ವಲ್ಪ ಸಮಯ ಕಳೆದ ಮೇಲೆ ಕುರಿಯನ್, ಸೋನಿಯಾಗಾಂಧಿಯವರನ್ನು ಸಂಪರ್ಕಿಸಿ ರಾಜೀವ್ ಆರಂಭಿಸಿದ ಯೋಜನೆಯನ್ನು ಬಂದು ನೋಡಿ ಎಂದರು. “ಬಂದು ನೋಡುತ್ತೇನೆ; ಆದರೆ ಯೋಜನೆಯ ವಿವಿಧ ಕೆಲಸ ನೋಡಿಕೊಳ್ಳಲು ಯಾರನ್ನಾದರೂ ಸೇರಿಸಿಕೊಳ್ಳಿ” ಎಂದರು. ಅದರಂತೆ ರಾಜೀವ್ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದ ಬಲರಾಂ ಜಾಖಡ್ ಅವರನ್ನು ಸೇರಿಸಿಕೊಳ್ಳಲಾಯಿತು.
ಸೋನಿಯಾ ರಾಯ್ಬರೇಲಿಗೆ ಬರುವಾಗ ಜೊತೆಗೆ ಮಗಳು ಪ್ರಿಯಾಂಕಾ ಕೂಡ ಇದ್ದರು. ಗಾಂಧಿ-ನೆಹರು ಕುಟುಂಬದ ಬಗ್ಗೆ ರಾಯ್ಬರೇಲಿ ಜನರಿಗಿದ್ದ ಒಲವು ಅಲ್ಲಿ ಕಂಡುಬಂತು. ಸೋನಿಯಾ ಅವರನ್ನು ನೋಡಲು, ಅವರ ಮಾತು ಕೇಳಲು ಕನಿಷ್ಠ ಒಂದು ಲಕ್ಷ ಜನ ಅಲ್ಲಿ ಸೇರಿದ್ದರು. ಗುಂಪು – ‘ಪ್ರಿಯಾಂಕಾ, ಪ್ರಿಯಾಂಕಾ’ ಎಂದು ಕೂಗುವುದಕ್ಕೂ ಆರಂಭಿಸಿತು. ಸೋನಿಯಾ ಜನರ ಬಳಿ ಹೋದಾಗ ಮಹಿಳೆಯರು ಅಳಲಾರಂಭಿಸಿದರು. ಸೋನಿಯಾಗೆ ಅಲ್ಲಿಂದ ಹೊರಡುವುದೇ ಕಷ್ಟವಾಯಿತಂತೆ. ಈ ಪ್ರಾಜೆಕ್ಟ್ ಕುರಿತು ಡಾ|| ಕುರಿಯನ್ ಮುಂದೇನೂ ಹೇಳುವುದಿಲ್ಲ. ಅದು ಗುರಿ ಮುಟ್ಟಿರಲಾರದು ಎನಿಸುತ್ತದೆ. ಆದರೆ ರಾಜೀವ್ ಅವರ ಉದ್ದೇಶದ ಬಗ್ಗೆ ಕುರಿಯನ್ರಿಗೆ ತುಂಬ ಮೆಚ್ಚುಗೆಯಿದೆ. ಹಿಂದೆ ೧೯೭೦ರಲ್ಲಿ ಸಚಿವ ಜಗಜೀವನರಾಂ ತಮ್ಮ ಕ್ಷೇತ್ರದಲ್ಲಿ ಖಾಸಗಿ ಡೈರಿ ಸ್ಥಾಪಿಸಲು ಕೋರಿದ್ದನ್ನು ಇದರೊಂದಿಗೆ ಹೋಲಿಸಿ ಅದರಲ್ಲಿ ಬಡವರಿಗೆ ನೆರವಾಗುವ ಉದ್ದೇಶ ಇರಲಿಲ್ಲ; ಬಡವರ ಸಬಲೀಕರಣ ಮತ್ತು ಅದಕ್ಕಾಗಿ ಸಹಕಾರಿ ಸಂಘವೇ ತಮ್ಮ ಧ್ಯೇಯ ಎಂದಿದ್ದಾರೆ.
ಗುರೂಜೀ: ಡಾ|| ಕುರಿಯನ್ಕಂಡಂತೆ
೧೯೬೭ರಲ್ಲಿ ರಚಿಸಿದ ಒಂದು ಉನ್ನತಾಧಿಕಾರ ಸಮಿತಿಗೆ ಎನ್ಡಿಡಿಬಿ ಅಧ್ಯಕ್ಷರಾಗಿದ್ದ ಡಾ|| ವರ್ಗೀಸ್ ಕುರಿಯನ್ ಅವರನ್ನು ಸದಸ್ಯರಾಗಿ ಸೇರಿಸಿಕೊಂಡರು. ಅದು ಗೋಸಂರಕ್ಷಣೆ ಬಗೆಗಿನ ಸಮಿತಿ. ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರು ಅದರ ಅಧ್ಯಕ್ಷರಾದರೆ ಸದಸ್ಯರ ಪುರಿ ಶಂಕರಾಚಾರ್ಯರು, ಆರೆಸ್ಸೆಸ್ ಸರಸಂಘಚಾಲಕ ಎಂ.ಎಸ್. ಗೋಲ್ವಲ್ಕರ್ (ಗುರೂಜಿ), ಅಶೋಕ್ಮಿತ್ರ ಮುಂತಾದವರಿದ್ದರು. ಶಂಕರಾಚಾರ್ಯರು ಸಭೆಗೆ ಜಿಂಕೆಯ ಚರ್ಮ, ದಂಡ-ಕಮಂಡಲುಗಳ ಸಹಿತವೇ ಬರುತ್ತಿದ್ದರು. ಡಾ|| ಕುರಿಯನ್ ಸಿಗರೇಟು ಸೇದುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲ. ಸಮಿತಿ ೧೨ ವರ್ಷ ಕ್ರಮ ಪ್ರಕಾರ ಸಭೆಗಳನ್ನು ನಡೆಸಿತು. ಗೋಹತ್ಯೆ ಕುರಿತು ಹಲವರ ಸಂದರ್ಶನ ನಡೆಸಿತು. ಈ ನಡುವೆ ಗೋಹತ್ಯೆಯನ್ನು ಪೂರ್ತಿ ತಡೆಯಬಾರದೆಂಬುದು ಕುರಿಯನ್ ಅವರ ನಿಲವು. ರೋಗಪೀಡಿತ ದನಗಳನ್ನು ಉಳಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ; ಉಪಯುಕ್ತ ದನಗಳನ್ನು ಕೊಲ್ಲಬಾರದು ಎಂದವರು ಹೇಳುತ್ತಿದ್ದರು. ಶಂಕರಾಚಾರ್ಯರು ಅದನ್ನು ವಿರೋಧಿಸಿದಾಗ, “ಎಲ್ಲ ಅನುಪಯುಕ್ತ ದನಗಳನ್ನು ನಿಮ್ಮ ಕಡೆ ಕಳುಹಿಸಿದರೆ ಸಾಕುತ್ತೀರಾ?” ಎಂದು ಕುರಿಯನ್ ಕೇಳಿದರು; ಮತ್ತು ಆಚಾರ್ಯರಲ್ಲಿ ಅದಕ್ಕೆ ಉತ್ತರ ಇರಲಿಲ್ಲವಂತೆ. ಕುರಿಯನ್ ಸಲಹೆ ಮೇರೆಗೆ ಪ್ರಧಾನಿ ಮೊರಾರ್ಜಿ ದೇಸಾಯಿ ಆ ಸಮಿತಿಯನ್ನು ರದ್ದುಪಡಿಸಿದರು.
ಅಲ್ಲಿ ಗುರೂಜಿ ಅವರೊಂದಿಗೆ ಉಂಟಾದ ಸಂಪರ್ಕವನ್ನು ಕುರಿಯನ್ ಹೀಗೆ ವಿವರಿಸಿದ್ದಾರೆ: “ಸಮಿತಿಯ ಸಭೆಗಳ ವೇಳೆ ಉಂಟಾದ ಒಂದು ಅನಿರೀಕ್ಷಿತ ಬೆಳವಣಿಗೆಯೆಂದರೆ ಗೋಲ್ವಲ್ಕರ್ ಮತ್ತು ನಾನು ನಿಕಟ ಸ್ನೇಹಿತರಾದೆವು. ಎಷ್ಟು ನಿಕಟ ಆದೆವೆಂದರೆ ನಾನು ಕೊಠಡಿಗೆ ಬರುವುದನ್ನು ಕಾಣುತ್ತಲೇ ಅವರು ಬಂದು ತಬ್ಬಿಕೊಳ್ಳುತ್ತಿದ್ದರು. ಸಭೆಯ ಅನಂತರ ನನ್ನನ್ನು ಬದಿಗೆ ಕರೆದು ಸಮಾಧಾನಪಡಿಸುತ್ತಿದ್ದರು. “ಶಂಕರಾಚಾರ್ಯರ ವಿಷಯದಲ್ಲಿ ಏಕೆ ಸುಮ್ಮನೆ ತಾಳ್ಮೆ ಕಳೆದುಕೊಳ್ಳುತ್ತೀರಿ? ಅವರ ವಿಷಯದಲ್ಲಿ ನನ್ನ ಅಭಿಪ್ರಾಯ ಕೂಡ ಅದೇ. ಸುಮ್ಮನೆ ಜಗಳಾಡಬೇಡಿ. ಸುಮ್ಮನೆ ಅಲಕ್ಷಿಸಿ” ಎಂದು ಹೇಳುತ್ತಿದ್ದರು.
“ಗೋಲ್ವಲ್ಕರ್ ಭರ್ಜರಿ ಆಳೇನೂ ಅಲ್ಲ; ಐದಡಿ ಎತ್ತರವಿರಬಹುದಷ್ಟೆ. ಆದರೆ ಅವರಿಗೆ ಕೋಪ ಬಂದಾಗ ಕಣ್ಣುಗಳು ಬೆಂಕಿಯನ್ನು ಉಗುಳುತ್ತಿದ್ದವು. ಅವರ ವಿಷಯದಲ್ಲಿ ನನಗೆ ತುಂಬ ಇಷ್ಟವಾದ ವಿಷಯವೆಂದರೆ ಅವರೊಬ್ಬ ಅತ್ಯಂತ ತೀವ್ರ ದೇಶಪ್ರೇಮಿ ಭಾರತೀಯ. ಅವರು ತಮ್ಮ ಕಲ್ಪನೆಯ ರಾಷ್ಟ್ರೀಯತೆಯನ್ನು ತಮ್ಮದೇ ರೀತಿಯಲ್ಲಿ ಬೋಧಿಸುತ್ತ ಹೋಗುತ್ತಿದ್ದಾರೆಂದು ನೀವು ವಾದಿಸಬಹುದು; ಆದರೆ ಯಾರೂ ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿಲ್ಲ. ಒಂದು ದಿನ ಗೋಹತ್ಯೆ ನಿಷೇಧಿಸಬೇಕೆಂದು ತೀವ್ರವಾಗಿ ವಾದಿಸಿದ ಬಳಿಕ ಅವರು ನನ್ನ ಬಳಿ ಬಂದು, “ಕುರಿಯನ್, ಈ ಗೋಹತ್ಯೆ ವಿಷಯವನ್ನು ನಾನೇಕೆ ಅಷ್ಟು ದೊಡ್ಡದು ಮಾಡುತ್ತಿದ್ದೇನೆ ಗೊತ್ತೆ?” ಎಂದು ಕೇಳಿದರು. “ಹೇಳಿ, ಅದುಬಿಟ್ಟರೆ ನೀವು ತುಂಬ ವಿಚಾರವಂತರಿದ್ದೀರಿ; ಅದೇಕೆ ಹಾಗೆ?” ಎಂದು ಕೇಳಿದೆ.
“ಗೋಹತ್ಯೆ ನಿಷೇಧದ ಬಗ್ಗೆ ಈ ಮನವಿಗೆ ೧೦ ಲಕ್ಷ ಸಹಿ ಸಂಗ್ರಹಿಸಿ ರಾಷ್ಟçಪತಿಗೆ ನೀಡಬೇಕೆಂದಿದ್ದೇನೆ. ಇದಕ್ಕಾಗಿ ದೇಶಾದ್ಯಂತ ಸಂಚರಿಸುತ್ತಿದ್ದೇನೆ. ಹಾಗೆ ಒಮ್ಮೆ ಉತ್ತರಪ್ರದೇಶದ ಒಂದು ಹಳ್ಳಿಗೆ ಹೋಗಿದ್ದೆ. ಅಲ್ಲೊಬ್ಬ ಮಹಿಳೆ ಪತಿಯನ್ನು ಕೆಲಸಕ್ಕೆ, ಇಬ್ಬರು ಮಕ್ಕಳನ್ನು ಶಾಲೆಗೆ ಕಳುಹಿಸಿದ ಬಳಿಕ ಈ ಮನವಿಗೆ ಸಹಿ ಸಂಗ್ರಹಿಸಲು ಮನೆಮನೆಗೆ ಸುತ್ತುತ್ತಿದ್ದಳು. ಆಕೆ ಇಷ್ಟೇಕೆ ಶ್ರಮ ವಹಿಸುತ್ತಿದ್ದಾಳೆಂದು ನೋಡುವಾಗ ತನ್ನ ದನಕ್ಕಾಗಿ ಮಾಡುತ್ತಿದ್ದಾಳೆಂದು ತಿಳಿಯಿತು. ಒಂದು ದನದಲ್ಲಿ ಅಷ್ಟೊಂದು ಶಕ್ತಿಯಿದೆ. ಗೋವಿನ ಮೂಲಕ ದೇಶವನ್ನು ಒಗ್ಗೂಡಿಸಲು ಸಾಧ್ಯ; ಅದು ದೇಶದ ಸಂಸ್ಕೃತಿಯ ಪ್ರತೀಕ. ಗೋಹತ್ಯೆ ನಿಷೇಧದಿಂದ ಐದೇ ವರ್ಷದಲ್ಲಿ ದೇಶವನ್ನು ಒಗ್ಗೂಡಿಸಬಹುದು. ನಮ್ಮ ಭಾರತೀಯತ್ವದ ಪ್ರಕಟೀಕರಣಕ್ಕೆ ನಾನು ಗೋವನ್ನು ಬಳಸುತ್ತೇನೆ” ಎಂದರವರು.
“ಗೋಹತ್ಯೆ ನಿಷೇಧವನ್ನು ನಾನು ಒಪ್ಪದಿದ್ದರೂ ಗೋವಿನ ಮೂಲಕ ಅವರು ಭಾರತೀಯರಲ್ಲಿ ದೇಶದ ಬಗ್ಗೆ ಹೆಮ್ಮೆ ಮೂಡಿಸಲು ಯತ್ನಿಸುತ್ತಿದ್ದಾರೆಂಬುದು ನನಗೆ ಖಚಿತವಾಯಿತು. ಅವರ ವ್ಯಕ್ತಿತ್ವದ ಈ ಮುಖ ನನಗೆ ತುಂಬ ಇಷ್ಟವಾಯಿತು ಕೂಡ. ಗಾಂಧಿ ಹತ್ಯೆಯ ಸಂಚಿನಲ್ಲಿ ಗೋಲ್ವಲ್ಕರ್ ಇದ್ದಾರೆಂದು ಕೆಲವರು ಆರೋಪಿಸುತ್ತಾರೆ. ನಾನು ಎಂದೂ ಕೂಡ ಅದನ್ನು ನಂಬಲಾರೆ. ನನ್ನ ಪ್ರಕಾರ ಅವರೊಬ್ಬ ಪ್ರಾಮಾಣಿಕ ಮತ್ತು ನೇರಮಾತಿನ ವ್ಯಕ್ತಿ; ಮತ್ತು ಅವರೊಬ್ಬ ಹಿಂದೂ ಮತಾಂಧನಾಗಿದ್ದರೆ ನನ್ನ ಸ್ನೇಹಿತರಾಗಲು ಸಾಧ್ಯವಿರಲಿಲ್ಲ.
“ಕೊನೆಯ ದಿನಗಳು ಸಮೀಪಿಸಿದಾಗ ಗುರೂಜೀ ಪುಣೆಯಲ್ಲಿದ್ದರು. ಆಗ ರಾಜ್ಯಗಳ ಆರೆಸ್ಸೆಸ್ ಮುಖ್ಯಸ್ಥರನ್ನು ಕರೆದು ಅವರೊಂದಿಗೆ ಮಾತನಾಡಿದರು. ಗೋಲ್ವಲ್ಕರ್ ನಿಧನದ ಅನಂತರ ಅವರಲ್ಲೊಬ್ಬರು ನನ್ನ ಕಚೇರಿಗೆ ಬಂದರು. ನಾನು ಗುಜರಾತಿನವ ಎಂದಾಗ ಗುರೂಜೀ ‘ನೀನು ಗುಜರಾತಿಗೆ ಮರಳಿದಾಗ ಡಾ|| ಕುರಿಯನ್ ಭೇಟಿ ಮಾಡಿ ಅವರಿಗೆ ನನ್ನ ಆಶೀರ್ವಾದ ತಿಳಿಸು’ ಎಂದರು. ಅದಕ್ಕಾಗಿ ಬಂದಿದ್ದೇನೆ ಎಂದಾತ ಹೇಳಿದರು. ಆಗ ನಾನು ಭಾವುಕನಾದೆ; ಅವರಿಗೆ ಕೃತಜ್ಞತೆ ಹೇಳಿದೆ. ‘ನೀವು ಕ್ರೈಸ್ತರಾದರೂ ಇಡೀ ಗುಜರಾತಿನಲ್ಲಿ ಗುರೂಜೀ ನಿಮಗೆ ಮಾತ್ರ ಏಕೆ ಸಂದೇಶ ಕಳುಹಿಸಿದ್ದಾರೆ?’ ಎಂದಾತ ಕೇಳಿದಾಗ, ‘ನನಗೆ ಗೊತ್ತಿಲ್ಲ; ನೀವು ಅವರನ್ನೇ ಕೇಳಬೇಕಿತ್ತು’ ಎಂದೆ. ಇದು ಇಬ್ಬರು ಅಪ್ಪಟ ಪ್ರಾಮಾಣಿಕ ವ್ಯಕ್ತಿಗಳ ಹೃದಯಸಂಬಂಧ!
ಸಹಕಾರಿಗಳಿಗೆಪಕ್ಷಅಮುಖ್ಯ
೧೯೯೦ರ ದಶಕದಲ್ಲೊಮ್ಮೆ ಕೈರಾ ಸಹಕಾರಿ ಸಂಸ್ಥೆಗೆ ಕೇಂದ್ರ ಕೃಷಿ ಮಂತ್ರಿ ಹಾಗೂ ಉಪಪ್ರಧಾನಿ ದೇವೀಲಾಲ್ ಆಗಮಿಸಿದ್ದರು. ಜೊತೆಗೆ ಗುಜರಾತ್ ಮುಖ್ಯಮಂತ್ರಿ ಚಿಮಣ್ಭಾಯಿ ಪಟೇಲ್ ಕೂಡ ಇದ್ದರು. ಅಲ್ಲಿ ಸುಮಾರು ೫೦ ಸಾವಿರ ಜನ ರೈತರು ಸೇರಿದ್ದರು. ದೇವೀಲಾಲ್ ರೈತರ ನಡುವೆ ಹೋಗಿ ಮಾತು ಆರಂಭಿಸಿದರು. ಒಬ್ಬ ರೈತನಾಯಕನಲ್ಲಿ ‘ನೀನು ಯಾವ ಪಕ್ಷ?’ ಎಂದು ಕೇಳಿದರು. ಆತ ಜನತಾದಳ ಎಂದ; ಅವರು ಮುಗುಳ್ನಕ್ಕರು. ಅನಂತರ ಇನ್ನೊಬ್ಬನಲ್ಲಿ ಅದೇ ಪ್ರಶ್ನೆಯನ್ನು ಕೇಳಿದರು. ಆತ ‘ಕಾಂಗ್ರೆಸ್’ ಎಂದಾಗ ದೇವೀಲಾಲ್ ಗಲಿಬಿಲಿಗೊಂಡರು. ಮೂರನೆಯ ರೈತ ನಾಯಕನಲ್ಲಿ ಅದೇ ಪ್ರಶ್ನೆಯನ್ನು ಕೇಳಿದಾಗ ಆತ ‘ಭಾಜಪಾ’ ಎಂದ. ಗೊಂದಲಕ್ಕೊಳಗಾದ ದೇವೀಲಾಲ್ “ವಿವಿಧ ಪಕ್ಷಗಳ ನೀವು ಇಲ್ಲಿ ಒಟ್ಟಾದದ್ದು ಹೇಗೆ?” ಎಂದು ಕೇಳಿದರು. ಅದಕ್ಕೆ “ಸಹಕಾರಿ ಸಂಸ್ಥೆಯೊಳಗೆ ನಾವು ಪಕ್ಷದ ಜನ ಅಲ್ಲ; ಮೊದಲಿಗೆ ರೈತರು” ಎನ್ನುವ ಉತ್ತರ ಬಂತು. ಅನಂತರ ನಡೆದ ಚರ್ಚೆಯಲ್ಲಿ ರೈತರು ಕುರಿಯನ್ರನ್ನು ಬಹುವಾಗಿ ಹೊಗಳಿದರು. ಅಂದಿನಿಂದ ದೇವೀಲಾಲ್ ಕುರಿಯನ್ರ ಪಕ್ಕಾ ಬೆಂಬಲಿಗನಾದರು. ಚಿಮಣ್ಭಾಯಿ ಕುರಿಯನ್ರನ್ನು ‘ಗ್ರೇಟ್ ಗುಜರಾತಿ’ ಎಂದು ಹೊಗಳಿದರು. ‘ಇದು ರೈತರಿಂದ ನನಗೆ ದೊರೆತ ಪ್ರಶಸ್ತಿ’ ಎಂದು ಡಾ|| ಕುರಿಯನ್ ಸಂತೋಷ ಸೂಚಿಸಿದ್ದಾರೆ.
ಜನಸಂಖ್ಯೆಯಲ್ಲಿ ಇದೀಗ ಚೀನಾವನ್ನು ಹಿಂದೆ ಹಾಕಿ ಒಂದನೇ ಸ್ಥಾನವನ್ನು ಅಲಂಕರಿಸಿರುವ ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಇದು ಹೆಮ್ಮೆಪಡುವಂತಹ ಸಾಧನೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ದೇಶದ ಪ್ರಜಾಪ್ರಭುತ್ವವು ಈಗ ಅಪಾಯದಲ್ಲಿದೆ; ಕೇಂದ್ರದಲ್ಲಿ ಅಧಿಕಾರದಲ್ಲಿರುವ ಭಾರತೀಯ ಜನತಾಪಕ್ಷದ ಸರ್ಕಾರದಿಂದ ಸಂವಿಧಾನಕ್ಕೆ ಅಪಾಯವಿದೆ; ಸಂವಿಧಾನವನ್ನು ಅವರು ಹಾಳುಗೆಡವುತ್ತಾರೆ; ದೇಶದ ಬಹುತ್ವವನ್ನು ನಾಶ ಮಾಡಿ ಏಕರೂಪವನ್ನು ತರುತ್ತಾರೆ – ಎಂದು ವಿರೋಧಪಕ್ಷ ಕಾಂಗ್ರೆಸ್ ಮತ್ತು ಚೂರುಪಾರು ಜೀವ ಉಳಿಸಿಕೊಂಡಿರುವ ಕಮ್ಯೂನಿಸ್ಟರು ಆರೋಪಿಸುತ್ತಾರೆ. ಈ ಪಕ್ಷಗಳ ಬಾಲಂಗೋಚಿಗಳಂತೆ ವರ್ತಿಸುತ್ತಿರುವ ದೇಶದ ಬುದ್ಧಿಜೀವಿ ವರ್ಗಕ್ಕಂತೂ ಈ ವಿಷಯದಲ್ಲಿ ಯಾವುದೇ ಸಂಶಯವಿಲ್ಲ. ಅವರು ಈ ರಾಜಕೀಯ ಪಕ್ಷಗಳಿಗಿಂತ ಒಂದು ಹೆಜ್ಜೆ ಮುಂದೆ ಇರುತ್ತಾರೆ.
ಇವರೆಲ್ಲ ಕಾಂಗ್ರೆಸ್ ಪಕ್ಷ ಮತ್ತು ಅದರ ಪ್ರಧಾನಿ ಇಂದಿರಾಗಾಂಧಿಯವರು ೧೯೭೦ರ ದಶಕದ ಮಧ್ಯಭಾಗದಲ್ಲಿ ಇಡೀ ದೇಶದ ಮೇಲೆ ಹೇರಿದ ಭಯಾನಕ ತುರ್ತುಪರಿಸ್ಥಿತಿಯನ್ನು ಜನ ಮರೆತಿದ್ದಾರೆಂದು ಭಾವಿಸಿದ್ದಾರೋ ಏನೋ! ಆದರೆ ದೇಶ ಅದನ್ನು ಮರೆಯುವುದು ಸಾಧ್ಯವಿಲ್ಲ. ಅದರಲ್ಲಿ ವೈಯಕ್ತಿಕವಾಗಿ ಹಿಂಸೆ, ಕಷ್ಟ-ನಷ್ಟಗಳನ್ನು ಅನುಭವಿಸಿದ ಅಸಂಖ್ಯ ಮಂದಿ ಈಗಲೂ ನಮ್ಮ ನಡುವೆ ಇದ್ದಾರೆ. ಅದಲ್ಲದೆ ಈಗ ನಾವು ಕೆಲವರಿಂದ ಇನ್ನೂ ಒಂದು ಮಾತನ್ನು ಕೇಳುತ್ತೇವೆ. ಅದೆಂದರೆ ದೇಶದಲ್ಲೀಗ ತುರ್ತುಪರಿಸ್ಥಿತಿಗಿಂತಲೂ ಭಯಾನಕ ವಾತಾವರಣವನ್ನು ಕೇಂದ್ರದ ಎನ್ಡಿಎ (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ) ಸರ್ಕಾರವು ನಿರ್ಮಿಸಿದೆ ಎಂಬುದು.
ಇವರೆಲ್ಲ ತುರ್ತುಪರಿಸ್ಥಿತಿಯ ವೇಳೆ ದೇಶದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಯಾವೆಲ್ಲ ಅಸೀಮ ದೌರ್ಜನ್ಯಗಳು ನಡೆದವು; ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಂತಹ ಶೋಚನೀಯ ಸ್ಥಿತಿಯನ್ನು ತಂದೊಡ್ಡಲಾಗಿತ್ತು; ಸಂವಿಧಾನಕ್ಕೆ ಎಂತಹ ನಗೆಪಾಟಲು ಪರಿಸ್ಥಿತಿಯನ್ನು ಉಂಟುಮಾಡಲಾಗಿತ್ತು – ಎನ್ನುವ ಕುರಿತು ತುರ್ತುಪರಿಸ್ಥಿತಿಯನ್ನು ಹೇರಿ ೪೮ ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಇನ್ನೊಮ್ಮೆ ನೋಡುವುದು ಕಾಲೋಚಿತ ಎನಿಸುತ್ತದೆ. ತುರ್ತುಪರಿಸ್ಥಿತಿಗಿರುವ ಅದ್ಭುತ ದಾಖಲೆಯೇ ಶಾ ಕಮಿಷನ್ ವರದಿ. ತುರ್ತುಪರಿಸ್ಥಿತಿಯ ಆ ಭೀಕರ ಅಧ್ಯಾಯದ ಅನಂತರ ಸುಪ್ರೀಂಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಾಧೀಶ ಜೆ.ಸಿ. ಶಾ ಅವರು ಅಂದಿನ ಅತಿರೇಕಗಳನ್ನು ಕುರಿತು ಸಿದ್ಧಪಡಿಸಿದ ಸವಿವರ ವರದಿಯೇ ‘ಶಾ ಕಮಿಷನ್ ರಿಪೋರ್ಟ್’ ಎಂದು ಪ್ರಸಿದ್ಧವಾದ ಶಾ ಆಯೋಗದ ವರದಿ.
ಕಳೆದುಹೋದವರದಿ
ಮಾಜಿ ಸಂಸತ್ ಸದಸ್ಯ ಇರಾ ಸೆಳಿಯನ್ ಅವರು ಸಂಪಾದಿಸಿ ಸಂಗ್ರಹಿಸಿದ ಶಾ ಕಮಿಷನ್ ವರದಿಯ ಶೀರ್ಷಿಕೆಯ ಜೊತೆಗೆ ‘ಒಮ್ಮೆ ಕಳೆದುಹೋಗಿ ಮತ್ತೆ ಮೇಲಕ್ಕೆ ತಂದದ್ದು (Lost and Regained)’ ಎಂದು ಉಲ್ಲೇಖಿಸಲಾಗಿದೆ. ಅದಲ್ಲದೆ ‘ಒಂದು ಅಮೂಲ್ಯ ಐತಿಹಾಸಿಕ ಮತ್ತು ರಾಜಕೀಯ ದಾಖಲೆ – ಒಮ್ಮೆ ಹೂತುಹಾಕಿ ಮತ್ತೆ ಮೇಲಕ್ಕೆ ತಂದದ್ದು’ ಹಾಗೂ ‘೧೯೭೫-೭೭ರ ಅವಧಿಯಲ್ಲಿ ಹೇರಿದ ಆಂತರಿಕ ಮತ್ತು ಬಾಹ್ಯ ಎನ್ನುವ ಎರಡು ತುರ್ತುಪರಿಸ್ಥಿತಿಗಳ ಹೇರಿಕೆಗಳ ವೇಳೆ ನಡೆದ ವ್ಯಾಪಕ ಅಧಿಕಾರ ದುರುಪಯೋಗದ ತನಿಖೆ’ ಎನ್ನುವ ಸಂಕ್ಷಿಪ್ತ ವಿವರವನ್ನೂ ನೀಡಲಾಗಿದೆ.
ಹಾಗಾದರೆ ಇಂದಿರಾಗಾಂಧಿಯವರ ಕಾಂಗ್ರೆಸ್ ಸರ್ಕಾರ ತುರ್ತುಪರಿಸ್ಥಿತಿ ಹೇರಿಕೆಯಂತಹ ಉಗ್ರಕ್ರಮಕ್ಕೆ ಮುಂದಾದದ್ದೇಕೆ ಎನ್ನುವ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಒಂದು ರೀತಿಯಲ್ಲಿ ನೋಡುವುದಾದರೆ ತುರ್ತುಪರಿಸ್ಥಿತಿ ಹೇರಿಕೆಯು ಆಕಸ್ಮಿಕವಲ್ಲ. ೧೯೬೬ರ ಆರಂಭದಲ್ಲಿ ಪ್ರಧಾನಿಯಾದ ಇಂದಿರಾಗಾಂಧಿ ಮರುವರ್ಷ ತಮ್ಮ ಮೊದಲ ಲೋಕಸಭಾ ಚುನಾವಣೆಯನ್ನು ಎದುರಿಸಿದಾಗ ಮಿಶ್ರಫಲವನ್ನು ಕಂಡಿದ್ದರು. ತಮ್ಮ ನಾಯಕತ್ವವನ್ನು ಗಟ್ಟಿಗೊಳಿಸುವ ಆವಶ್ಯಕತೆ ಅವರಿಗೆ ಕಂಡಾಗ ಎದುರಾದದ್ದು ಪಕ್ಷದ ಹಿರಿಯ ನಾಯಕರ ಸಮಸ್ಯೆ. ಅವರನ್ನು ಬದಿಗೊತ್ತಿ ತಮ್ಮ ಹಿಂಬಾಲಕವರ್ಗವನ್ನು ಬೆಳೆಸಬಯಸಿದ ಆಕೆ ೧೯೬೯ರ ರಾಷ್ಟ್ರಪತಿ ಚುನಾವಣೆಯನ್ನು ಅದಕ್ಕೆ ಬಳಸಿಕೊಂಡರು. ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನೀಲಂ ಸಂಜೀವರೆಡ್ಡಿ ಅವರನ್ನು ಆರಿಸಿದ ಬಳಿಕ ವಿ.ವಿ. ಗಿರಿಯವರನ್ನು ಕಣಕ್ಕಿಳಿಸಿ ಅವರನ್ನು ಬೆಂಬಲಿಸಿದರು. ಇದು ಪಕ್ಕಾ ಅಶಿಸ್ತು ಮತ್ತು ಪಕ್ಷವಿರೋಧಿ ಚಟುವಟಿಕೆಯಾಗಿತ್ತು. ಆದರೂ ಅವರ ಬೆಂಬಲಿಗರಿಂದಾಗಿ ವಿ.ವಿ. ಗಿರಿ ಗೆದ್ದರು. ಪಕ್ಷ ಒಡೆಯುವುದು ಅನಿವಾರ್ಯವಾಯಿತು. ಹಿರಿಯರು ಹೊರಗೆ ಹೋದಾಗ ಪಕ್ಷವು ಬಹುತೇಕ ಪೂರ್ತಿಯಾಗಿ ಇಂದಿರಾ ಅವರ ಹಿಡಿತಕ್ಕೆ ಸಿಕ್ಕಿತು. ಭಾರತ-ಪಾಕಿಸ್ತಾನ ಯುದ್ಧದಲ್ಲಿ ಜಯ ಮತ್ತು ಬಂಗ್ಲಾದೇಶದ ಉದಯದಿಂದ ಅವರ ವರ್ಚಸ್ಸು ಹೆಚ್ಚಿತು; ಹಿಂಬಾಲಕರು ಚೇಲಾಗಳಾಗತೊಡಗಿದರು. ಶಾಸಕಾಂಗ ಕಾರ್ಯಾಂಗಗಳಾಚೆಗೆ ನ್ಯಾಯಾಂಗವೂ ತಮ್ಮ ಹಿಡಿತಕ್ಕೆ ಸಿಗುವಂತೆ ಆಕೆ ಕಾರ್ಯಪ್ರವೃತ್ತರಾದರು; ನ್ಯಾಯಮೂರ್ತಿಗಳ ಸೀನಿಯಾರಿಟಿಯನ್ನು (ಹಿರಿತನ) ಮುರಿದು ತಮಗೆ ಇಷ್ಟವಾದವರನ್ನು ಉನ್ನತ ಸ್ಥಾನಕ್ಕೆ ಏರಿಸಿದರು. ಚೇಲಾಗಳ ಬಳಗ ಬೆಳೆದಂತೆ ಆಡಳಿತದಲ್ಲಿ ಭ್ರಷ್ಟಾಚಾರ, ದುರಾಡಳಿತಗಳು ವ್ಯಾಪಕವಾದವು. ಆ ಹೊತ್ತಿಗೆ ಸರ್ವಾಧಿಕಾರಿ ಪ್ರವೃತ್ತಿ ಇಂದಿರಾ ಅವರಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿತ್ತು.
ಜೆ.ಪಿ. ಚಳವಳಿಯಬಿಸಿ
ಈ ಸರ್ವಾಧಿಕಾರಿ ಪ್ರವೃತ್ತಿ, ಭ್ರಷ್ಟಾಚಾರ, ದುರಾಡಳಿತಗಳನ್ನು ನೇರವಾಗಿ ಎದುರುಹಾಕಿಕೊಂಡು ಚಳವಳಿಗೆ ಇಳಿದವರು ಅಪೂರ್ವ ನಾಯಕ ಜಯಪ್ರಕಾಶ ನಾರಾಯಣರು. ದೆಹಲಿಯಲ್ಲದೆ ಗುಜರಾತ್, ಬಿಹಾರ ಮುಂತಾಗಿ ಇತರ ಭಾಗಗಳಲ್ಲೂ ‘ಸಂಪೂರ್ಣ ಕ್ರಾಂತಿ’ ಚಳವಳಿಯು ಬಿರುಸನ್ನು ಪಡೆದುಕೊಂಡು ಇಂದಿರಾಗಾಂಧಿಯವರನ್ನು ಕೆಣಕುತ್ತಲೇ ಹೋಯಿತು. ದೇಶದ ಯುವಜನರ ಒಂದು ದೊಡ್ಡ ವರ್ಗ ಜೆ.ಪಿ. ಅವರ ಹೋರಾಟದಲ್ಲಿ ಭಾಗಿಯಾಗತೊಡಗಿತು. ಆ ಸನ್ನಿವೇಶದಲ್ಲಿ ಬಂದದ್ದು ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದ ಅಲಹಾಬಾದ್ ಹೈಕೋರ್ಟ್ನ ತೀರ್ಪು.
೧೯೭೧ರ ಲೋಕಸಭಾ ಚುನಾವಣೆಯಲ್ಲಿ ರಾಯ್ಬರೇಲಿ ಕ್ಷೇತ್ರದಲ್ಲಿ ಇಂದಿರಾಗಾಂಧಿಯವರು ರಾಜನಾರಾಯಣ್ ಮತ್ತಿತರರನ್ನು ಸೋಲಿಸಿದ್ದರು. ರಾಜನಾರಾಯಣ್ ಅದನ್ನು ಅಲಹಾಬಾದ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ನ್ಯಾ. ಜೆ.ಎಂ.ಎಲ್. ಸಿನ್ಹಾ ಅವರು ಜೂನ್ ೧೨, ೧೯೭೫ರಂದು ನೀಡಿದ ತೀರ್ಪಿನಲ್ಲಿ, ಇಂದಿರಾಗಾಂಧಿಯವರು ಚುನಾವಣಾ ಅಕ್ರಮವೆಸಗಿದ್ದು ದೃಢಪಟ್ಟಿದ್ದು, ಅವರ ಸದಸ್ಯತ್ವವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದರು. ಆದರೆ ಆ ತೀರ್ಪಿಗೆ ಇಪ್ಪತ್ತು ದಿನ ತಡೆ ನೀಡಿ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶ ನೀಡಿದರು. ಮುಂದಿನ ಆರು ವರ್ಷ ಚುನಾವಣೆಗೆ ಸ್ಪರ್ಧಿಸಬಾರದೆಂಬುದು ತೀರ್ಪಿನ ಇನ್ನೊಂದು ಅಂಶ.
ಆದರೆ ಈ ತೀರ್ಪಿಗೆ ಇಂದಿರಾಗಾಂಧಿ ಮತ್ತವರ ಬೆಂಬಲಿಗರ ಪ್ರತಿಕ್ರಿಯೆ ಬೇರೆಯೇ ರೀತಿ ಇತ್ತು. ದೆಹಲಿಯಲ್ಲಿ ಬಗೆಬಗೆಯ ಚಟುವಟಿಕೆಗಳು ಗರಿಗೆದರಿದವು. ಇಂದಿರಾ ಅವರ ಅನರ್ಹತೆಯನ್ನು ಬದಿಗೊತ್ತಬೇಕು; ಕೋರ್ಟ್ ಏನೇ ಹೇಳಿರಲಿ, ಆಕೆ ಪ್ರಧಾನಿಯಾಗಿ ಮುಂದುವರಿಯಬೇಕು – ಎಂಬ ಉದ್ದೇಶದಿಂದ ದೆಹಲಿಯಲ್ಲಿ ಪ್ರತಿಭಟನೆ, ಮತಪ್ರದರ್ಶನ, ರ್ಯಾಲಿಗಳು ದೊಡ್ಡ ರೀತಿಯಲ್ಲಿ ನಡೆದವು. ಅದಕ್ಕಾಗಿ ವಿಶೇಷ ಬಸ್ಸುಗಳು ಓಡಿದವು; ಅದರಲ್ಲಿ ಭಾಗಿಯಾಗಿ ಯಶಸ್ವಿಗೊಳಿಸುವಂತೆ ಸರ್ಕಾರಿ ಅಧಿಕಾರಿ-ನೌಕರರ ಮೇಲೂ ಒತ್ತಡಗಳು ಬಂದವು.
ತುರ್ತುಪರಿಸ್ಥಿತಿಯು ಸರ್ಕಾರ ಮತ್ತು ಅದರ ವಿವಿಧ ಇಲಾಖೆಗಳಲ್ಲಿ ರೂಪಗೊಳ್ಳುತ್ತ ಮುಂದುವರಿಯಿತು; ಕೆಲವು ಇಲಾಖೆಗಳಲ್ಲಿ ಅದರ ಪ್ರಭಾವ-ಪರಿಣಾಮ ಜೋರಾಗಿತ್ತು. ಅಂತಹ ಇಲಾಖೆಗಳಲ್ಲಿ ಮುಖ್ಯವಾದ ಒಂದು ಇಲಾಖೆಯೆಂದರೆ ಕೇಂದ್ರದ ವಾರ್ತಾ-ಪ್ರಸಾರ ಇಲಾಖೆ. ಸೂಕ್ಷ್ಮವೂ, ಜನರ ನಾಡಿಮಿಡಿತಕ್ಕೆ ಹತ್ತಿರವೂ ಆದ ಇಲಾಖೆಯಲ್ಲಿ ಮಾರಕ ನಿರ್ಧಾರಗಳು ಬಂದವು; ಒರಟುತನವೇ ಆಡಳಿತದ ಮುಖ್ಯಲಕ್ಷಣ ಎಂಬಂತಾಯಿತು. ಎಂತೆಂಥವರು ಅದಕ್ಕೆ ತಲೆಬಾಗಿದರು, ತಲೆಬಾಗಬೇಕಾಯಿತು ಎಂಬುದನ್ನು ಗಮನಿಸಿದರೆ ಮೈಜುಮ್ಮೆನ್ನುತ್ತದೆ. ಅದನ್ನೆಲ್ಲ ನ್ಯಾ. ಜೆ.ಸಿ. ಶಾ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಮಾಧ್ಯಮಕ್ಕೆಮೂಗುದಾರ
ವಾರ್ತಾ-ಪ್ರಸಾರ ಇಲಾಖೆಗೆ ಸಂಬಂಧಿಸಿದಂತೆ ಪ್ರಧಾನಿ ಇಂದಿರಾಗಾAಧಿಯವರ ಅಪೇಕ್ಷೆಯ ಮೇರೆಗೆ ಅವರ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಭೆಯೊಂದು ಜರುಗಿತು. ಅದರಲ್ಲಿ ಆಗಿನ ಕಾನೂನು ಮಂತ್ರಿ ಎಚ್.ಆರ್. ಗೋಖಲೆ, ವಾರ್ತಾ-ಪ್ರಸಾರ ಸಚಿವ ವಿದ್ಯಾಚರಣ ಶುಕ್ಲ, ವಿದೇಶಾಂಗ ಖಾತೆಯ ಜಿ. ಪಾರ್ಥಸಾರಥಿ ಮೊದಲಾದವರು ಭಾಗವಹಿಸಿದ್ದರು. ‘ವರ್ತಮಾನ ಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ದೋಷಪೂರಿತ, ಕಿಡಿಗೇಡಿ ವರದಿಗಳು ಪ್ರಕಟವಾಗುತ್ತಿದ್ದು ಇನ್ನು ಮುಂದೆ ಅಂಥವು ಬರಬಾರದು; ಸುದ್ದಿಸಂಸ್ಥೆಗಳ ಪುನರ್ವ್ಯವಸ್ಥೆಯಾಗಬೇಕು; ಡಿಎವಿಪಿ ಮೂಲಕ ನೀಡುವ ಜಾಹೀರಾತಿನ ನೀತಿಯನ್ನು ಪುನರ್ವಿಮರ್ಶೆ ಮಾಡಬೇಕು; ಪತ್ರಿಕಾಮಂಡಳಿಯು (ಪ್ರೆಸ್ ಕೌನ್ಸಿಲ್) ಸಹಜ ಸಾವಿಗೆ ಗುರಿಯಾಗಬೇಕು ಮತ್ತು ಸರ್ಕಾರವು ಪತ್ರಿಕಾ ವರದಿಗಾರರಿಗೆ (ಬಾತ್ಮೀದಾರರಿಗೆ) ನೀಡುವ ಸವಲತ್ತುಗಳ ಮರುಪರಿಶೀಲನೆ ನಡೆಯಬೇಕು’ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ತುರ್ತುಪರಿಸ್ಥಿತಿಯನ್ನು ಹೇರುವುದಕ್ಕೆ ಕಾರಣವಾದ ಸನ್ನಿವೇಶದ ಬಗ್ಗೆ ವಿವರಿಸಿದ ಇಂದಿರಾಗಾಂಧಿ “ಪತ್ರಿಕೆಗಳು ಜನರನ್ನು ಪ್ರಚೋದಿಸಿ ಅಸಹನೀಯ ಪರಿಸ್ಥಿತಿಯನ್ನು ನಿರ್ಮಿಸಿದವು. ಚಳವಳಿ (ಹೋರಾಟ) ಇದ್ದುದು ಪತ್ರಿಕೆಗಳಲ್ಲಿ ಮಾತ್ರ. ಅವುಗಳ ಮೇಲೆ ನಿರ್ಬಂಧವನ್ನು ಹೇರುತ್ತಲೇ ಚಳವಳಿಯು ನಿಂತುಹೋಯಿತು” ಎಂದು ಹೇಳಿದರು.
ಚಿಂತನೆಯನಿಯಂತ್ರಣ
‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆಯ ಸಂಪಾದಕ ಬಿ.ಜಿ. ವರ್ಗೀಸ್ ಅವರು, ಶಾ ಆಯೋಗದ ಮುಂದೆ ನೀಡಿದ ಹೇಳಿಕೆಯಲ್ಲಿ ದೆಹಲಿಯಲ್ಲಿರುವ ಪತ್ರಿಕೆಗಳ ಸಂಪಾದಕರ ಮೊದಲ ಸಭೆಯ ವಿವರ ನೀಡಿದರು. ಅಲ್ಲಿ ಮಾತನಾಡಿದ ವಿ.ಸಿ. ಶುಕ್ಲ ಅವರು “ಇನ್ನು ಮುಂದೆ ಪತ್ರಿಕೆ ಮತ್ತು ಸರ್ಕಾರದ ನಡುವೆ ಮುಖಾಮುಖಿಗೆ (ಜಗಳ) ಅವಕಾಶವಿಲ್ಲ; ಹಾಗೆಯೇ ಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆಗಳಿಗೆ ಕೂಡ ಅವಕಾಶವಿಲ್ಲ” ಎಂದು ಅಬ್ಬರಿಸಿದರಂತೆ. ವರ್ಗೀಸ್ ಅವರ ಪ್ರಕಾರ ಈ ಕ್ರಮಗಳಿಗೆ ಕಾರಣವೆಂದರೆ, ಜನರನ್ನು ಅಜ್ಞಾನದಲ್ಲಿಡುವುದು, ಅವರಲ್ಲಿ ಭಯ ಹುಟ್ಟಿಸುವುದು ಮತ್ತು ಆ ಮೂಲಕ ಎಲ್ಲ ಬಗೆಯ ವೈಯಕ್ತಿಕ, ರಾಜಕೀಯ, ಸಂಸದೀಯ ಮತ್ತು ನ್ಯಾಯಾಂಗ ಭಿನ್ನಾಭಿಪ್ರಾಯಗಳಿಗೆ ತಡೆಹಾಕುವುದು. ಸುದ್ದಿ ನಿರ್ವಹಣೆಯು ಅದರ ಮಾರ್ಗವಾದರೆ ಚಿಂತನೆಯನ್ನೇ ನಿಯಂತ್ರಿಸುವುದು ಅದರ ಗುರಿ.
ಮುಂಬಯಿಯ ‘ಹಿಮ್ಮತ್’ ಪತ್ರಿಕೆಯ ಸಂಪಾದಕ ರಾಜಮೋಹನ್ಗಾಂಧಿ ಅವರು ಶಾ ಆಯೋಗದ ಮುಂದೆ ಹೇಳಿಕೆ ನೀಡಿ, ಪತ್ರಿಕಾ ನಿರ್ಬಂಧದ (ಸೆನ್ಸಾರ್ಶಿಪ್) ಉದ್ದೇಶವು ಭಿನ್ನಾಭಿಪ್ರಾಯಗಳಿಗೆ ತಡೆ ಹಾಕುವುದಾಗಿತ್ತು; ದೇಶದ ರಕ್ಷಣೆ ಮತ್ತು ಆಂತರಿಕ ಭದ್ರತೆಗಳನ್ನು ಉದ್ದೇಶವೆಂದು ಹೇಳಿಕೊಂಡಿದ್ದರೂ ನಿಜವಾಗಿ ಅದರ ಉದ್ದೇಶ ಪ್ರಜಾಪ್ರಭುತ್ವ ಎನ್ನುವ ಪ್ರತಿಷ್ಠೆಯ ಜೊತೆಗೆ ಸರ್ವಾಧಿಕಾರದಲ್ಲಿ ಇರುವಂತಹ ಅಧಿಕಾರವನ್ನು ನೀಡುವುದಾಗಿತ್ತು – ಎಂದು ಹೇಳಿದರು. “ಈ ವೃತ್ತಿಯ ಎಲ್ಲರ ಸುತ್ತ ಭಯ ಆವರಿಸಿತ್ತು. ರಾಷ್ಟ್ರೀಯ ದೈನಿಕಗಳ ಸಂಪಾದಕರು ಕೂಡ ಮಾಧ್ಯಮದ ವಿರುದ್ಧ ಸರ್ಕಾರ ಕೈಗೊಂಡ ಕ್ರಮಗಳ ವಿರುದ್ಧ ಮಾತನಾಡಲಿಲ್ಲ” ಎಂದವರು ‘ಸೆಮಿನಾರ್’ ಸಂಪಾದಕ ರೊಮೇಶ್ ಥಾವರ್.
ತುರ್ತುಪರಿಸ್ಥಿತಿಯ ನಿರ್ಬಂಧಗಳ ಕಾರಣದಿಂದಾಗಿ ಹಲವು ನಿಯತಕಾಲಿಕಗಳು ಪ್ರಕಟಣೆಯನ್ನು ನಿಲ್ಲಿಸಿದವು. ಏಕೆಂದರೆ ಭಯದಿಂದ ಹಲವು ಮುದ್ರಕರು ಪತ್ರಿಕೆಗಳ ಮುದ್ರಣದಿಂದ ಹಿಂದೆ ಸರಿದರು. ಮುದ್ರಕರು ಸಿಗದ ಕಾರಣ ‘ಒಪಿನಿಯನ್’ ಸಂಪಾದಕ ಎ.ಡಿ. ಗೋರ್ವಾಲಾ ಅವರು ತಮ್ಮ ಪತ್ರಿಕೆಯನ್ನು ಸೈಕ್ಲೋಸ್ಟೈಲ್ನಲ್ಲಿ ಮುದ್ರಿಸಿ ಓದುಗರಿಗೆ ತಲಪಿಸಿದರು. ಕೆಲವು ಸಂಪಾದಕರಿಗೆ ಮುದ್ರಣಾಲಯಗಳನ್ನು ಬದಲಿಸಬೇಕಾಯಿತು. ಕೆಲವು ಪ್ರೆಸ್ಗಳವರು ವಕೀಲರನ್ನು ಇರಿಸಿಕೊಂಡು ಅವರು ‘ಮುದ್ರಿಸಬಹುದು’ ಎಂದು ಒಪ್ಪಿದ ಅನಂತರವೇ ಸಂಬಂಧಪಟ್ಟ ಪತ್ರಿಕೆಯನ್ನು ಮುದ್ರಿಸುವ ಕ್ರಮವನ್ನು ಅನುಸರಿಸಿದರು.
ಪತ್ರಿಕಾಕಚೇರಿಗೆವಿದ್ಯುತ್ಸ್ಥಗಿತ
ತುರ್ತುಪರಿಸ್ಥಿತಿಯ ವೇಳೆ ಮಾಧ್ಯಮಗಳು ಕೆಲಸ ಮಾಡಬೇಕಿದ್ದ ಪರಿಸ್ಥಿತಿಯನ್ನು ಶಾ ಆಯೋಗವು ಮುಖ್ಯವಾಗಿ ಮೂರು ವಿಭಾಗಗಳಲ್ಲಿ ಗಮನಿಸಿದೆ. ಅವುಗಳೆಂದರೆ,
೧. ಪತ್ರಿಕಾ ನಿರ್ಬಂಧ (ಸೆನ್ಸಾರ್ಶಿಪ್)
೨. ಪತ್ರಿಕೆಗಳ ಮೇಲೆ ಇತರ ಒತ್ತಡಗಳು
೩. ಆಕಾಶವಾಣಿ, ದೂರದರ್ಶನಗಳು ಸೇರಿದಂತೆ ಸರ್ಕಾರಿ ಮಾಧ್ಯಮಗಳು ಕೆಲಸ ಮಾಡುತ್ತಿದ್ದ ರೀತಿ.
೧. ಪತ್ರಿಕಾ ನಿರ್ಬಂಧ
ತುರ್ತುಪರಿಸ್ಥಿತಿ ಸಂದರ್ಭದ ಪತ್ರಿಕೆ ನಿರ್ಬಂಧವು ಮುದ್ರಣಾಲಯಗಳ ವಿದ್ಯುತ್ ಪೂರೈಕೆ ಸ್ಥಗಿತದ ಕೆಟ್ಟ ರೀತಿಯಲ್ಲಿ ಆರಂಭವಾಯಿತು. ಜೂನ್ ೨೫, ೧೯೭೫ರಂದು ಇದ್ದಕ್ಕಿದ್ದಂತೆ ತುರ್ತುಪರಿಸ್ಥಿತಿಯನ್ನು ಹೇರಿದಾಗ ಪತ್ರಿಕೆಗಳನ್ನು ಹಾಗೆಯೇ ಬಿಡುವಂತಿರಲಿಲ್ಲ. ನಿಯಂತ್ರಣ ಅನಿವಾರ್ಯವಾಗಿತ್ತು. ಮರುದಿನ ಗೃಹಇಲಾಖೆಯ ಶಿಫಾರಸ್ಸಿನ ಮೇರೆಗೆ ಸೆನ್ಸಾರ್ಶಿಪ್ ಜಾರಿಗೊಳಿಸಿದರು; ಮತ್ತು ೨-೩ ದಿನಗಳಲ್ಲಿ ಪತ್ರಿಕಾನಿರ್ಬಂಧದ ವಿಧಿವಿಧಾನಗಳನ್ನು ರೂಪಿಸಿದರು. ಅದಕ್ಕೆ ಮುನ್ನ ಏನಾದರೂ ಮಾಡಬೇಕಿತ್ತು. ಆಗ ದೆಹಲಿಯಲ್ಲಿ ಕೈಗೊಂಡ ಕ್ರಮವೆಂದರೆ ಪತ್ರಿಕಾ ಕಚೇರಿ, ಮುದ್ರಣಾಲಯಗಳ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದ್ದು. ಜೂನ್ ೨೫ರಂದು ರಾತ್ರಿಯೇ ಅದು ಜಾರಿಯಾಯಿತು.
ವಿದ್ಯುತ್ ಪೂರೈಕೆಯನ್ನು ನಿಲ್ಲಿಸುವ ಬಗ್ಗೆ ದೆಹಲಿ ಉಪ ರಾಜ್ಯಪಾಲ (ಲೆಫ್ಟಿನೆಂಟ್ ಗವರ್ನರ್) ಕೃಶನ್ಚಂದ್ ಅವರು ದೆಹಲಿ ವಿದ್ಯುತ್ ಪೂರೈಕೆ ಸಂಸ್ಥೆಯ ಜನರಲ್ ಮ್ಯಾನೇಜರ್ ಅವರಿಗೆ ಮೌಖಿಕ ಆದೇಶ ನೀಡಿದ್ದರು. ಔಪಚಾರಿಕ ಆದೇಶದಲ್ಲಿ ಭದ್ರತೆಯ ಕಾರಣವನ್ನು ನೀಡಿದ್ದರು. ಪತ್ರಿಕಾ ಕಚೇರಿ, ಮುದ್ರಣಾಲಯಗಳು ಬೇರೆಬೇರೆ ಕಡೆಗಳಲ್ಲಿ ಇದ್ದ ಕಾರಣ ಏಕಕಾಲಕ್ಕೆ ವಿದ್ಯುತ್ ಕಡಿತ ಆಗಲಿಲ್ಲ. ಜೂನ್ ೨೫ರಂದು ವಿದ್ಯುತ್ ಕಡಿತ ಮಾಡದಿದ್ದ ಕಡೆ ೨೬ರಂದು ಕಡಿತ ಮಾಡಿದರು. ಎರಡು-ಮೂರು ದಿನಗಳಾಗುವಷ್ಟರಲ್ಲಿ ಪತ್ರಿಕಾ ನಿರ್ಬಂಧದ ವಿಧಿ-ವಿಧಾನಗಳು ಸಿದ್ಧವಾದ ಮೇಲೆ ವಿದ್ಯುತ್ ಪೂರೈಕೆ ತೊಂದರೆ ನಿವಾರಣೆಯಾಯಿತು. ಪ್ರಧಾನಿಯವರ ನಿವಾಸದಲ್ಲಿ ಹತ್ತಾರು ಸಭೆಗಳು ನಡೆಯುವಾಗಲೇ ವಿದ್ಯುತ್ ಕಡಿತದ ಬಗ್ಗೆ ಸೂಚನೆ ಬಂದಿತ್ತು. ಯಾರು ಹೇಳಿದ್ದೆಂದು ನೆನಪಾಗುವುದಿಲ್ಲವೆಂದು ಉಪರಾಜ್ಯಪಾಲರು ಆಯೋಗದ ಮುಂದೆ ಹೇಳಿದರು.
ನಿಯಮ೪೮
ಭಾರತದ ರಕ್ಷಣೆ ಮತ್ತು ಆಂತರಿಕ ಭದ್ರತಾ ನಿಯಮಗಳ ನಿಯಮ ೪೮ರ ಪ್ರಕಾರ ಪತ್ರಿಕಾ ನಿರ್ಬಂಧವನ್ನು (ಸೆನ್ಸಾರ್ಶಿಪ್) ಹೇರಿದರು. ಅದರಂತೆ ಸರ್ಕಾರ ಈ ಕೆಳಗಿನ ವಿಷಯಗಳಲ್ಲಿ ಸೆನ್ಸಾರ್ಶಿಪ್ ಪ್ರಿ-ಸೆನ್ಸಾರ್ಶಿಪ್ (ಪತ್ರಿಕಾನಿರ್ಬಂಧ ಪೂರ್ವ) ಅವಕಾಶಗಳನ್ನು ಪಡೆದುಕೊಂಡಿತ್ತು. ಎ) ಭಾರತದ ರಕ್ಷಣೆ ಬಿ) ನಾಗರಿಕ ಸಂರಕ್ಷಣೆ (ಸಿವಿಲ್ ಡಿಫೆನ್ಸ್) ಸಿ) ಸಾರ್ವಜನಿಕ ಸುರಕ್ಷೆ ಡಿ) ಸಾರ್ವಜನಿಕ ವ್ಯವಸ್ಥೆಯ ನಿರ್ವಹಣೆ ಇ) ಸೇನಾ ಕಾರ್ಯಾಚರಣೆಯ ದಕ್ಷ ನಿರ್ವಹಣೆ.
ಯಾವೆಲ್ಲ ವಿಷಯಗಳು ಪ್ರಿ-ಸೆನ್ಸಾರ್ಶಿಪ್ಗೆ ಸೇರುತ್ತವೆಂದು ಸರ್ಕಾರ ಜೂನ್ ೨೬ರಂದು ಆದೇಶವನ್ನು ಹೊರಡಿಸಿತು. ಮುಂದೆ ಇನ್ನಷ್ಟು ವಿಷಯಗಳನ್ನು ಸೇರಿಸಿದರು.
ಸೆನ್ಸಾರ್ಶಿಪ್ ಮಾರ್ಗದರ್ಶಿ ಸೂತ್ರಗಳು: ಪ್ರಧಾನ ಸೆನ್ಸಾರ್ ಅಧಿಕಾರಿಯವರು ಹೊರಡಿಸಿದ ‘ಮಾರ್ಗದರ್ಶಿಸೂತ್ರ’ಗಳ ಪ್ರಕಾರ ಪತ್ರಿಕಾನಿರ್ಬಂಧವನ್ನು ಮಾಡಲಾಯಿತು. ಅವುಗಳನ್ನು ಅವರ ಕೆಳಗಿನ ಅಧಿಕಾರಿಗಳು ಮತ್ತು ಪತ್ರಿಕಾ ಕಚೇರಿಗಳಿಗೆ ತಿಳಿಸಲಾಯಿತು. ಈ ಮಾರ್ಗದರ್ಶಿಸೂತ್ರಗಳನ್ನು ಪ್ರಕಟಿಸಬಾರದೆನ್ನುವ ನಿಯಮವಿತ್ತು. ಮಾರ್ಗದರ್ಶಿಸೂತ್ರಗಳು ಜುಲೈ ೩ ಮತ್ತು ೪ರಂದು ಬಂದವು. ಅವುಗಳನ್ನು ಅವಸರದಲ್ಲಿ ಮಾಡಿದ್ದು, ಅದರಲ್ಲಿ ಅಸ್ಪಷ್ಟತೆ ಇತ್ತು. ಅದಕ್ಕಾಗಿ ವಾರ್ತಾಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಕೆ.ಎನ್. ಪ್ರಸಾದ್ ಅವರು ಮತ್ತೆ ಹೊಸದಾಗಿ ತಯಾರಿಸಿದ್ದು, ಮಂತ್ರಿ ವಿ.ಸಿ. ಶುಕ್ಲ ಅದಕ್ಕೆ ಮಂಜೂರಾತಿ ನೀಡಿದರು.
ನಿಜವೆಂದರೆ, ಈ ಮಾರ್ಗದರ್ಶಿಸೂತ್ರಗಳು (ಗೈಡ್ಲೈನ್ಸ್) ಭದ್ರತೆಗೆ ಸಂಬಂಧಿಸಿದ ನಿಯಮ ೪೮ನ್ನು ಮೀರಿದ್ದವು. ಅದರ ಪ್ರಕಾರ ಪತ್ರಿಕೆಗಳ ಸಂಪಾದಕೀಯದ ಜಾಗವನ್ನು ಖಾಲಿ ಬಿಡುವುದು ಅಥವಾ ಅಲ್ಲಿ ಮಹಾತ್ಮಾ ಗಾಂಧಿ, ಟಾಗೋರ್ ಮುಂತಾದವರ ಹೇಳಿಕೆಗಳನ್ನು ಹಾಕುವುದು ಇತ್ಯಾದಿಗೆ ಅವಕಾಶವಿಲ್ಲ. ಇವು ನಿಯಮ ೪೮ರ ವ್ಯಾಪ್ತಿಯ ಒಳಗಿವೆಯೇ ಇಲ್ಲವೆ ಎಂದು ಪರಿಶೀಲಿಸಲು ವಾರ್ತಾಇಲಾಖೆ ಹೋಗಲಿಲ್ಲ. ಅದಕ್ಕೆ ಕಾನೂನುಇಲಾಖೆಯ ಅನುಮೋದನೆಯನ್ನು ಪಡೆದುಕೊಳ್ಳೋಣವೆಂದು ಹೇಳಿದರು.
ಕಾನೂನುಬಾಹಿರ
ಶಾ ಆಯೋಗದ ಮುಂದೆ ಸಾಕ್ಷ್ಯ ಹೇಳುವಾಗ ಶುಕ್ಲ ಅವರು “ಸಂಪಾದಕರಿಗೆ ಸಹಾಯವಾಗಲೆಂದು ಆ ಮಾರ್ಗದರ್ಶಿಸೂತ್ರಗಳನ್ನು ತಯಾರಿಸಿದ್ದೆವು. ಅವುಗಳಿಗೆ ಕಾನೂನಾತ್ಮಕ ಸಿಂಧುತ್ವ ಬೇಕು ಅನ್ನಿಸಲಿಲ್ಲ. ಆದ್ದರಿಂದ ಅವು ಕಾನೂನಿಗೆ ಅನುಗುಣವಾಗಿವೆಯೆ ಎಂದು ನೋಡಲಿಲ್ಲ. ಆದರೆ ಆ ಸೂತ್ರಗಳಿಗೆ ಅವಿಧೇಯತೆಯನ್ನು ತೋರಿಸಿದರೆ ಶಿಕ್ಷೆ ಆಗಿಯೇ ಆಗುತ್ತದೆ ಎಂಬಂತಿರಲಿಲ್ಲ” ಎಂದು ಸಮರ್ಥಿಸಿಕೊಂಡರು.
ಆದರೆ ಅದು ನಿಜವಲ್ಲ. ಗುಜರಾತ್ ಹೈಕೋರ್ಟಿನ ಮುಂದೆ ಬಂದ ‘ಭೂಮಿಪುತ್ರ’ ಪ್ರಕರಣದಲ್ಲಿ ಪ್ರಧಾನ ಸೆನ್ಸಾರ್ ಅಧಿಕಾರಿಯವರ ಪರವಾಗಿ ವಾದಿಸಿದ ಕೇಂದ್ರಸರ್ಕಾರದ ವಕೀಲರು ಈ ಮಾರ್ಗದರ್ಶಿಸೂತ್ರಗಳನ್ನು ಹಿಡಿದೇ ವಾದಿಸಿದರು. ‘ಭೂಮಿಪುತ್ರ’ ಪತ್ರಿಕೆಯ ಮೇಲೆ ಗೈಡ್ಲೈನ್ಸ್ ಪ್ರಕಾರ ನಿರ್ಬಂಧ ಹೇರಲಾಗಿದ್ದು, ಹೈಕೋರ್ಟ್ ತನ್ನ ತೀರ್ಪಿನಲ್ಲಿ ಮಾರ್ಗದರ್ಶಿಸೂತ್ರಗಳು ಕಾನೂನುಬಾಹಿರ ಮತ್ತು ಅವು ಕೆಲಸ (ಕಾರ್ಯನಿರ್ವಹಣೆ) ಮಾಡುವುದಿಲ್ಲ ಎಂದು ಹೇಳಿತು. ಪ್ರಸ್ತುತ ನಿಯಮ ೪೮ನ್ನು ತಯಾರಿಸಿದ ಮೇಲೆ ಕೇಂದ್ರಸರ್ಕಾರ ಮತ್ತು ಪ್ರಧಾನ ಸೆನ್ಸಾರ್ ಅಧಿಕಾರಿಯವರು ನಿಯಮ ೪೮ನ್ನು ಮತ್ತೆ ಮತ್ತೆ ಉಲ್ಲಂಘಿಸಿದರೆಂದು ಹೈಕೋರ್ಟ್ ದಾಖಲಿಸಿತು. ಇನ್ನೊಂದು ಪ್ರಕರಣದಲ್ಲಿ ಮುಂಬಯಿ ಹೈಕೋರ್ಟ್, ಸೆನ್ಸಾರ್ಶಿಪ್ ಆದೇಶದ ಅಡಿಯಲ್ಲಿ ಪ್ರಧಾನ ಸೆನ್ಸಾರ್ ಅವರು ನಿರ್ದೇಶನ ನೀಡುವಂತಿಲ್ಲ; ಅದು ಸೆನ್ಸಾರ್ಶಿಪ್ ವ್ಯಾಪ್ತಿಯನ್ನು ಮೀರುತ್ತದೆ ಎಂದು ಹೇಳಿತು.
ಸಂಸತ್ಕಲಾಪದವರದಿ
ತುರ್ತುಪರಿಸ್ಥಿತಿಯ ವೇಳೆ ಪಾರ್ಲಿಮೆಂಟ್ ಮತ್ತು ನ್ಯಾಯಾಲಯದ ಕಲಾಪಗಳನ್ನು ಕೂಡ ಸೆನ್ಸಾರ್ಶಿಪ್ಗೆ ಒಳಪಡಿಸಲಾಯಿತು. ಸಂಸತ್ ಮತ್ತು ಶಾಸನಸಭೆಗಳಿಗೆ ಸಂಬಂಧಿಸಿದ ಕೆಲವು ಸುದ್ದಿಗಳ ಪ್ರಕಟಣೆಗೆ ಕೂಡ ಪತ್ರಿಕಾನಿರ್ಬಂಧವು ಅನ್ವಯವಾಗುತ್ತದೆಂದು ಜುಲೈ ೧೩ರ (೧೯೭೫) ಮಾರ್ಗದರ್ಶಿಸೂತ್ರವು ಹೇಳಿತು: “ಸರ್ಕಾರದ ಪರವಾಗಿ ನೀಡಿದ ಹೇಳಿಕೆಗಳನ್ನು ಪೂರ್ತಿ ಅಥವಾ ಸಾರರೂಪದಲ್ಲಿ ಪ್ರಕಟಿಸಬಹುದು. ಆದರೆ ಸೆನ್ಸಾರ್ಶಿಪ್ ನಿಯಮವನ್ನು ಮೀರುವಂತಿಲ್ಲ. ಸದಸ್ಯರು ಒಂದು ವಿಷಯದ ಪರ ಅಥವಾ ವಿರುದ್ಧವಾಗಿ ಮಾತನಾಡಿದಾಗ ಅವರ ಹೆಸರು ಮತ್ತು ಅವರ ಪಕ್ಷವನ್ನು ಮಾತ್ರ ಹೇಳಬಹುದು. ವಿಷಯವನ್ನು ಮತಕ್ಕೆ ಹಾಕಿದಾಗ ಅದರ ಫಲಿತಾಂಶವನ್ನು ಪ್ರಕಟಿಸಬಹುದು” ಎಂದಿತ್ತು.
ಸಂಸತ್ ಕಲಾಪದ ವರದಿಗೆ ಸಂಬಂಧಿಸಿದ ಪೂರಕ ಸೂತ್ರಗಳು ಅದೇ ಜುಲೈ ೨೨ರಂದು ಬಂದವು. ಅದರಲ್ಲಿ,
೧. ಸದನದೊಳಗೆ ಸದಸ್ಯರು ಆಚೀಚೆ ಹೋದುದನ್ನು ವರದಿ ಮಾಡಬಾರದು. ಉದಾಹರಣೆಗೆ, ಆಳುವ ಪಕ್ಷದ ಸದಸ್ಯರು ಪ್ರತಿಪಕ್ಷದವರ ಬಳಿಗೆ ಹೋದರು ಅಥವಾ ಪ್ರತಿಪಕ್ಷದವರು ಆಳುವ ಸದಸ್ಯರ ಕಡೆಗೆ ಹೋದರು ಮುಂತಾಗಿ ವರದಿ ಮಾಡಬಾರದು.
೨. ಸದನದ ಅಧ್ಯಕ್ಷರು (ಸ್ಪೀಕರ್) ಅಥವಾ ಸಭಾಪತಿ ನೀಡಿದ ಪತ್ರಿಕ್ರಿಯೆಗಳನ್ನು (ಕಮೆಂಟ್) ವರದಿ ಮಾಡಬಾರದು.
೩. ಪ್ರತಿಪಕ್ಷದ ಯಾರು ಗೈರುಹಾಜರಾಗಿದ್ದಾರೆ ಎಂಬುದರ ವರದಿ ಸಲ್ಲದು.
೪. ಯಾವ ಸದಸ್ಯರು ಗೈರುಹಾಜರಾಗಿದ್ದಾರೆ ಎಂದು ಕೂಡ ಪತ್ರಿಕೆಗಳು ವರದಿ ಮಾಡುವಂತಿಲ್ಲ.
ಚಳಿಗಾಲದ ಅಧಿವೇಶನದ ಮುನ್ನ ಡಿಸೆಂಬರ್ ೧೩, ೧೯೭೫ರಂದು ಸಂಸದೀಯ ವ್ಯವಹಾರ ಸಚಿವ ಕೆ. ರಘುರಾಮಯ್ಯ ಅವರ ನಿವಾಸದಲ್ಲೊಂದು ಸಭೆ ಜರಗಿತು. ಅಲ್ಲಿ ಲೋಕಸಭೆ, ರಾಜ್ಯಸಭೆಗಳ ಅಧಿವೇಶನದ ಬಗೆಗಿನ ಎಲ್ಲ ಸುದ್ದಿ, ಕಾಮೆಂಟ್, ವದಂತಿಗಳನ್ನು ಪ್ರಿ-ಸೆನ್ಸಾರ್ಶಿಪ್ಗೆ ಒಳಪಡಿಸಬೇಕು. ಅಧಿವೇಶನಕ್ಕೆ ನಿಯಮ ೪೮ ಅನ್ವಯವಾಗುವ ಕಾರಣ ಪ್ರಕಟಣೆಗೆ ಮುನ್ನ ಸೆನ್ಸಾರ್ ಅಧಿಕಾರಿಯ ಒಪ್ಪಿಗೆ ಪಡೆಯಬೇಕು. ಜೊತೆಗೆ ಮಾಡು, ಮಾಡಬೇಡದ (ವಿಧಿ-ನಿಷೇಧ) ದೊಡ್ಡಪಟ್ಟಿಯೂ ಬಂತು. ಅದಲ್ಲದೆ ಸಂಸತ್ನಲ್ಲಿ ಫಲಕ(ಬೋರ್ಡ್)ವಿಲ್ಲದ ಒಂದು ಸೆನ್ಸಾರ್ರೂಮ್ ಬಂತು. ಸಂಸತ್ನಲ್ಲಿ ಸೆನ್ಸಾರ್ಶಿಪ್ ಬಗ್ಗೆ ನಡೆದ ಪ್ರಶ್ನೆ, ಉತ್ತರ, ಹೇಳಿಕೆ, ಚರ್ಚೆ ಬಗೆಗಿನ ಯಾವುದೇ ಸುದ್ದಿಯನ್ನು ಪ್ರಕಟಿಸಬಾರದು.
ಮರುವರ್ಷ ಮಾರ್ಚ್ ೭ರಂದು (೧೯೭೬) ಸಂಸತ್ನ ವಿಷಯದ ಪ್ರಕಟಣೆಗೆ ಸಂಬAಧಿಸಿ ಹೊಸ ಮಾರ್ಗದರ್ಶಿಸೂತ್ರಗಳು ಬಂದವು. ಪಾರ್ಲಿಮೆಂಟ್ ಜನತೆಯ ಧ್ವನಿ, ಸಾರ್ವಭೌಮ ಸಂಸ್ಥೆ ಎಂಬ ಘನತೆಗೆ ಕುಂದುಬರಬಾರದು. ಆದರೆ ಎಲ್ಲ ಕಲಾಪಗಳ ಸುದ್ದಿ ನಿಯಮ-೪೮ಕ್ಕೆ ಅಧೀನ ಎಂಬುದರಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನುವಲ್ಲಿ ಸರ್ಕಾರದ ದ್ವಂದ್ವ ನಿಲವಷ್ಟೇ ಪ್ರಕಟವಾಗಿತ್ತು.
ಕೋರ್ಟ್ವರದಿಗೂಸೆನ್ಸಾರ್
ನ್ಯಾಯಾಲಯದ ಕಲಾಪಗಳನ್ನು ವರದಿ ಮಾಡುವ ಬಗ್ಗೆ ಕೂಡ ಪತ್ರಿಕೆಗಳಿಗೆ ಗೈಡ್ಲೈನ್ಸ್ ನೀಡಲಾಯಿತು. ನ್ಯಾಯಾಲಯದ ಸುದ್ದಿ, ಕಾಮೆಂಟ್ಗಳನ್ನು ವರದಿ ಮಾಡುವಾಗ ಆಪರೇಟಿವ್ (ಕ್ರಿಯಾತ್ಮಕ) ವಿಭಾಗವನ್ನು ಮಾತ್ರ ವರದಿ ಮಾಡಬೇಕು; ಅದು ಸೂಕ್ತಭಾಷೆಯಲ್ಲಿರಬೇಕು. ಸೆನ್ಸಾರ್ಶಿಪ್ ಕಾನೂನನ್ನು ಮೀರುವ ಏನನ್ನೂ ಪ್ರಕಟಿಸಬಾರದು – ಎಂದು ಸೂಚಿಸಿದ್ದರು. “ಗೃಹಇಲಾಖೆಯು ಕಾನೂನುಇಲಾಖೆಯ ಜೊತೆ ಚರ್ಚಿಸಿ ನೀಡಿದ ಸೂಚನೆಗಳ ಮೇರೆಗೆ ಕೋರ್ಟ್ ಕಲಾಪಗಳನ್ನು ಸೆನ್ಸಾರ್ ಮಾಡಲಾಗುತ್ತಿತ್ತು” ಎಂದು ಪ್ರಧಾನ ಸೆನ್ಸಾರ್ ಅಧಿಕಾರಿ (ಚೀಫ್ ಸೆನ್ಸಾರ್) ಎಚ್.ಜೆ. ಡಿಪೆನ್ಹಾ ಆಯೋಗದ ಮುಂದೆ ಹೇಳಿದರು. ‘ಭೂಮಿಪುತ್ರ’ ಪ್ರಕರಣದಲ್ಲಿ ತೀರ್ಪನ್ನು ಸೆನ್ಸಾರ್ ಮಾಡಬಾರದೆಂದು ಹೈಕೋರ್ಟ್ ಆದೇಶ ನೀಡಿದ್ದರೂ ‘ನೀವು ಎಲ್ಲ ಪತ್ರಿಕೆಗಳಿಗೆ ತೀರ್ಪನ್ನು ಪ್ರಕಟಿಸಬಾರದೆಂದು ಸೂಚಿಸಿದಿರಲ್ಲವೇ?’ ಎಂದು ಕೇಳಿದಾಗ ಆ ಅಧಿಕಾರಿ “ಅದು ಸೆನ್ಸಾರ್ಶಿಪ್ ಆದೇಶವಲ್ಲ; ಕೇವಲ ‘ಜನಸಂಪರ್ಕ’ದ ಬಗೆಗಿನ ಸಲಹೆ” ಎಂದು ಜಾರಿಕೊಂಡರು.
ತುರ್ತುಪರಿಸ್ಥಿತಿಯ ವೇಳೆ ನ್ಯಾಯಾಲಯದ ತೀರ್ಪುಗಳ ಪ್ರಕಟಣೆಯನ್ನು ಸೆನ್ಸಾರ್ ಮಾಡಿದ್ದಷ್ಟೇ ಅಲ್ಲ; ನಿರ್ದಿಷ್ಟ ತೀರ್ಪುಗಳನ್ನು ಹೇಗೆ ಪ್ರಕಟಿಸಬೇಕೆಂದು ನಿರ್ದೇಶನ ಕೂಡ ನೀಡಲಾಯಿತು. ತಮ್ಮ ಚುನಾವಣೆ ಪ್ರಕರಣದಲ್ಲಿ ಇಂದಿರಾಗಾಂಧಿಯವರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದಾಗ ಚೀಫ್ ಸೆನ್ಸಾರ್ ಅವರು ಪತ್ರಿಕೆಗಳಿಗೆ ಹಲವು ನಿರ್ದೇಶನಗಳನ್ನು ನೀಡಿದರು: ಪ್ರಕರಣದ ಯಾವ ಅಂಶಗಳಿಗೆ ಪ್ರಚಾರ ನೀಡಬೇಕು; ಯಾವ ಅಂಶಗಳನ್ನು ಹೇಳಲೇಬಾರದು ಇತ್ಯಾದಿ. ಪ್ರಕರಣದ ತೀರ್ಪು ಬಂದಾಗ ಎಲ್ಲ ವರ್ತಮಾನ ಪತ್ರಿಕೆಗಳಿಗೆ ಸೂಚನೆ ಹೋಯಿತು. ಇಂದಿರಾ ಅವರ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ ಎಂಬುದನ್ನು ಒತ್ತು ನೀಡಿ ಪ್ರಕಟಿಸಬೇಕು; ಅದೇ ರೀತಿ ರಾಜನಾರಾಯಣರ ಪ್ರತಿ ಮೇಲ್ಮನವಿಯನ್ನು ವಜಾ ಮಾಡಲಾಗಿದೆ ಎಂಬುದಕ್ಕೆ ಕೂಡ ಒತ್ತು ನೀಡಬೇಕು – ಎಂದು ಸೂಚಿಸಲಾಗಿತ್ತು. ಆಯೋಗದ ಮುಂದೆ ನೀಡಿದ ಹೇಳಿಕೆಯಲ್ಲಿ ವಿ.ಸಿ. ಶುಕ್ಲ ಅವರು “ಹೈಕೋರ್ಟ್ ತೀರ್ಪುಗಳ ಪ್ರಕಟಣೆಗೆ ಸಂಬಂಧಿಸಿದ ನಮ್ಮ ಸೂಚನೆಗಳೆಲ್ಲ ಕಾನೂನು ಪ್ರಕಾರವೇ ಇದ್ದವು. ಇಲಾಖೆಯ ಯಾವುದೇ ಅಧಿಕಾರಿ ಕಾನೂನು ಮೀರುವಂತಿರಲಿಲ್ಲ; ಅಥವಾ ಕೋರ್ಟ್ ನಿರ್ದೇಶನದ ವಿರುದ್ಧ ಹೋಗುವಂತಿರಲಿಲ್ಲ” ಎಂದು ಸಮರ್ಥಿಸಿಕೊಳ್ಳದೆ ಬಿಡಲಿಲ್ಲ.
ಅಧಿಕಾರಹಸ್ತಾಂತರ
ಪತ್ರಿಕಾನಿರ್ಬಂಧವನ್ನು ಹೇರಿದ ಆರಂಭದಲ್ಲಿ ನಿಯಮ-೪೮ರ ಅಧಿಕಾರವು ಗೃಹಇಲಾಖೆಯ ಬಳಿ ಇತ್ತು. ಸಾಕಷ್ಟು ಸಮಯಾವಕಾಶ ಮತ್ತು ವಿಷಯ ಇಲ್ಲದಿದ್ದರೂ ಪ್ರಿ-ಸೆನ್ಸಾರ್ಶಿಪ್ ಆದೇಶ ಹೊರಡಿಸಿ ಎಂದು ವಾರ್ತಾ-ಪ್ರಸಾರ ಇಲಾಖೆಯು ಕೇಳುತ್ತಿದ್ದ ಬಗ್ಗೆ ಗೃಹಇಲಾಖೆಗೆ ಬೇಸರವಿತ್ತು. ‘ಸೆಮಿನಾರ್’ ಪತ್ರಿಕೆಗೆ ಪ್ರಿ-ಸೆನ್ಸಾರ್ಶಿಪ್ ವಿಧಿಸುವಾಗ ವಾರ್ತಾಇಲಾಖೆ ಸಂಬಂಧಿತ ಆಯ್ದಭಾಗವನ್ನು ಕೊಡಲಿಲ್ಲ; ಮತ್ತು ಪರಿಶೀಲನೆಗೆ ಸಮಯಾವಕಾಶವನ್ನೂ ಕೊಡದೆ ಆದೇಶವು ಕೂಡ ಬರಬೇಕೆಂದು ಒತ್ತಾಯಿಸಿತು. ಜುಲೈ ೧೫, ೧೯೭೬ರಂದು ನಡೆದ ಸಭೆಯಲ್ಲಿ ವಿ.ಸಿ. ಶುಕ್ಲ ಅವರು ಗೃಹಇಲಾಖೆ ಜಂಟಿ ಕಾರ್ಯದರ್ಶಿಯವರಿಗೆ “ನನ್ನ ಮಟ್ಟದಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಿ ಒಂದು ನಿರ್ಧಾರವನ್ನು ಕೈಗೊಂಡ ಬಳಿಕ ಗೃಹಇಲಾಖೆಯಲ್ಲಿ ಮತ್ತೆ ಅದರ ಪರಿಶೀಲನೆ ನಡೆಯುವುದು ಸರಿಯಲ್ಲ” ಎಂದು ಹೇಳಿದರು.
ಆಗ ಗೃಹಸಚಿವರ ಮಟ್ಟದಲ್ಲಿ ಒಂದು ನಿರ್ಧಾರವನ್ನು ಕೈಗೊಳ್ಳಲಾಯಿತು. ವಾರ್ತಾಇಲಾಖೆಯು ಅವಶ್ಯವಾದ ಪೂರ್ತಿ ವಿಷಯಗಳನ್ನು (ಮೆಟೀರಿಯಲ್) ಒದಗಿಸಬೇಕು; ಆಗ ಗೃಹಇಲಾಖೆ ಶೀಘ್ರ ನಿರ್ಧಾರವನ್ನು ಕೈಗೊಳ್ಳುತ್ತದೆ ಎಂದು ತಿಳಿಸಲಾಯಿತು.
ಆದರೆ ಸಮಸ್ಯೆ ಅಲ್ಲಿಗೆ ಬಗೆಹರಿಯಲಿಲ್ಲ. ಮುಂದೆ ಆಗಸ್ಟ್ ೨೧ರಂದು ‘ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಯ ಮೇಲೆ ಪ್ರಿ-ಸೆನ್ಸಾರ್ಶಿಪ್ ವಿಧಿಸಬೇಕೆಂದು ಕೋರಿದ ವಾರ್ತಾಇಲಾಖೆ ಕಾರಣ ತಿಳಿಸಲಿಲ್ಲ. ತುಂಬ ಒತ್ತಾಯ ಮಾಡಿದ ಅನಂತರ ಗೃಹಇಲಾಖೆಯು ಫೋನ್ ಮೂಲಕ ಪ್ರಿ-ಸೆನ್ಸಾರ್ಶಿಪ್ ಬಗ್ಗೆ ಆದೇಶ ನೀಡಿತು. ವಿವರಗಳನ್ನು ಮತ್ತು ಅಗತ್ಯ ವಿಷಯಗಳನ್ನು ನೀಡಲು ವಾರ್ತಾಇಲಾಖೆಗೆ ಇಷ್ಟವಿಲ್ಲ ಎಂಬುದು ಇದರಿಂದ ಖಚಿತವಾಯಿತು. ಪರಿಣಾಮವಾಗಿ ಈ ನಿಟ್ಟಿನಲ್ಲಿ ನಿಯಮ-೪೮ರ ಎಲ್ಲ ಅಧಿಕಾರಗಳನ್ನು ಗೃಹಇಲಾಖೆ ವಾರ್ತಾಇಲಾಖೆಗೆ ಬಿಟ್ಟುಕೊಟ್ಟಿತು.
ಲಾಗ್ಬುಕ್ನಲ್ಲಿಎಂಟ್ರಿ
೧೯೭೫ರ ಜುಲೈನಲ್ಲಿ ನೀಡಿದ ಒಂದು ಮಾರ್ಗದರ್ಶಿಸೂತ್ರದಲ್ಲಿ ಪ್ರಧಾನ ಸೆನ್ಸಾರ್ ಅಧಿಕಾರಿ ಮೌಖಿಕ ಆದೇಶಗಳು ಸಲ್ಲದೆಂದು ಹೇಳಿದ್ದರು. “ಆದರೆ ವರ್ತಮಾನ ಪತ್ರಿಕೆಗಳು ಇಡೀ ದಿನ ಕೆಲಸ ಮಾಡುತ್ತವೆ. ಆದ್ದರಿಂದ ಆದೇಶಗಳು ಲಿಖಿತವಾಗಿಯೆ ಬರಬೇಕೆಂದರೆ ಸೆನ್ಸಾರ್ಶಿಪ್ನ ಉದ್ದೇಶವೇ ವಿಫಲವಾದೀತು. ಆದ್ದರಿಂದ ಮೌಖಿಕ ಆದೇಶ ಅನಿವಾರ್ಯ. ವಾರ್ತಾಇಲಾಖೆಯ ಹಲವು ಅಧಿಕಾರಿಗಳು ನನಗೆ ಮೌಖಿಕ ಆದೇಶವನ್ನೇ ನೀಡುತ್ತಿದ್ದರು. ಇತರ ಇಲಾಖೆಗಳಲ್ಲೂ ಹಾಗೆಯೆ ನಡೆಯುತ್ತಿತ್ತು. ತೀರಾ ಅಪರೂಪವಾಗಿ ಲಿಖಿತ ಆದೇಶಗಳು ಬರುತ್ತಿದ್ದವು. ಅದಕ್ಕಾಗಿ ಸೆನ್ಸಾರ್ ಲಾಗ್ಬುಕ್ನಲ್ಲಿ ಎಂಟ್ರಿ ಮಾಡುತ್ತಿದ್ದೆವು” ಎಂದು ಅವರೇ ತಿಳಿಸಿದ್ದರು. ಕೆಲವು ಎಂಟ್ರಿಗಳು ಹೀಗಿವೆ:
೧. ಸಂಸತ್ ಕಲಾಪ ಅಥವಾ ಸುಪ್ರೀಂಕೋರ್ಟ್ನಲ್ಲಿ ಪ್ರಧಾನಿ ಸಲ್ಲಿಸಿದ ಮೇಲ್ಮನವಿ ಬಗ್ಗೆ ಯಾವುದೇ ವರದಿಗೆ ಅನುಮತಿ ನೀಡಲಾಗಿಲ್ಲ. (ಜುಲೈ ೧೪, ೧೯೭೪)
೨. ಪ್ರಧಾನಿಯವರ ಮೇಲ್ಮನವಿ ವಿಚಾರಣೆಯ ದಿನಾಂಕವನ್ನು ಮಾತ್ರ ವರದಿ ಮಾಡಬಹುದು. ನ್ಯಾಯವಾದಿಗಳ ಹೆಸರನ್ನು ಪ್ರಕಟಿಸಬಹುದು; ಆದರೆ ನ್ಯಾಯಾಧೀಶರ ಹೆಸರು ಬೇಡ. (ಜುಲೈ ೨೨, ೧೯೭೫)
೩. ಅಹಮದಾಬಾದ್ನಲ್ಲಿ ಆಳುವ ಪಕ್ಷ ಜನತಾ ಫ್ರಂಟ್ ಬಂದ್ ನಡೆಸಿತು. ಬಂದ್ ವಿಫಲವಾಯಿತೆಂದು ವರದಿಗಳು ಬಂದರೆ ಅದಕ್ಕೆ ಅನುಮತಿ ನೀಡಬಹುದು. ಆದರೆ ಬಂದ್ನ ವಿವರಗಳು ಸೆನ್ಸಾರ್ ಸೂಚನೆಗಳಿಗೆ ವಿರುದ್ಧ ಆಗಿರಬಾರದು.
೪. ಗುಜರಾತ್ ಮುಖ್ಯಮಂತ್ರಿಯವರು ಕೇಂದ್ರಸರ್ಕಾರವು ಕೈಗೊಂಡ ಕ್ರಮವನ್ನು ಟೀಕಿಸಿ ಯಾವುದೇ ಹೇಳಿಕೆ ನೀಡಿದರೆ ಅದನ್ನು ಪ್ರಕಟಿಸುವುದು ಬೇಡ; ಅವರ ಹೇಳಿಕೆ ಸೌಮ್ಯವಾಗಿದ್ದರೆ ಪ್ರಕಟಿಸಬಹುದು. ಯಾವುದೇ ಸಂಶಯವಿದ್ದರೆ ಹೆಚ್ಚುವರಿ ಪ್ರಧಾನ ಸೆನ್ಸಾರ್ ಅವರಿಗೆ ಫೋನ್ ಮಾಡಬಹುದು. (ಜುಲೈ ೨೬, ೧೯೭೫)
೫. ನೌಕರರ ಬೋನಸ್ ಬಗೆಗಿನ ಯಾವುದೇ ವರದಿ, ಪ್ರತಿಕ್ರಿಯೆ, ಸಂಪಾದಕೀಯ, ಲೇಖನ, ಹೇಳಿಕೆ ಅಥವಾ ಸುದ್ದಿಗಳಿಗೆ ಅವಕಾಶ ಇಲ್ಲ. (ಸೆಪ್ಟೆಂಬರ್ ೪, ೧೯೭೫)
೬. ‘ಮೀಸಾ’ ಬಂಧಿತರಿಗೆ ಹೈಕೋರ್ಟ್ ಮೆಟ್ಟಿಲೇರುವ ಅಧಿಕಾರ ಇದೆ ಎನ್ನುವ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಕಟಿಸುವುದು ಬೇಡ; ಆ ವರದಿಯನ್ನು ಹರಿದುಹಾಕಿ. (ಅಕ್ಟೋಬರ್ ೩೦, ೧೯೭೫)
೭. ಜೆ.ಪಿ. ಅವರ ಬಿಡುಗಡೆ ಬಗೆಗಿನ ವರದಿಗೆ ಮಹತ್ತ್ವ ನೀಡುವುದು (ಫೋಟೋ ಸಹಿತ ಪ್ರಕಟಣೆ ಇತ್ಯಾದಿ) ಬೇಡ. (ನವೆಂಬರ್ ೧೩, ೧೯೭೫)
೮. ಗುಜರಾತ್ನ ಜನತಾರಂಗ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಕೆಲವು ಶಾಸಕರು ಹಿಂತೆಗೆದುಕೊಳ್ಳಬಹುದು. ಅವರ ಹೇಳಿಕೆಗಳನ್ನು ಪ್ರಕಟಿಸಲೇಬೇಕು. ಆ ಸರ್ಕಾರಕ್ಕೆ ಬೆಂಬಲ ನೀಡುವವರ ಹೇಳಿಕೆಗಳನ್ನು ಹರಿದುಹಾಕಿ. (ಫೆಬ್ರುವರಿ ೧೧, ೧೯೭೬)
೯. ಹೈಕೋರ್ಟ್ ನ್ಯಾಯಾಧೀಶರ ವರ್ಗಾವಣೆಗೆ ಸಂಬAಧಿಸಿದ ಯಾವುದೇ ಉಲ್ಲೇಖ ಅಥವಾ ಪ್ರತಿಕ್ರಿಯೆಗಳಿಗೆ ಅನುಮತಿ ಬೇಡ. (ಜೂನ್ ೧, ೧೯೭೬)
ಹೀಗೆ ಸರ್ಕಾರಕ್ಕೆ ಪರವಲ್ಲದ ಸುದ್ದಿಗಳನ್ನು ಮುಚ್ಚಿಹಾಕಲು ಪತ್ರಿಕಾನಿರ್ಬಂಧವನ್ನು ಧಾರಾಳವಾಗಿ ಬಳಸಲಾಯಿತು. ಸರ್ಕಾರಕ್ಕೆ ಪರವಾದುದನ್ನು ಎತ್ತಿ ಹೇಳಿದರು. ಕಾಂಗ್ರೆಸ್ ಬೆಂಬಲಿಗರ ಸುದ್ದಿಗಳಿಗೆ ಮಹತ್ತ್ವ ನೀಡಿದರು. ಸಚಿವರ ಸೂಚನೆಯ ಮೇರೆಗೇ ಹಾಗೆ ಮಾಡಲಾಗುತ್ತಿತ್ತು. ಕಾಂಗ್ರೆಸ್ನ ಒಳಜಗಳಗಳ ಸುದ್ದಿಗಳನ್ನು ಸೂಚನೆಯ ಮೇರೆಗೆ ತಡೆಯಲಾಗುತ್ತಿತ್ತು.
ಸಂಜಯಗಾಂಧಿಟೀಕೆಗೆಶಿಕ್ಷೆ
ಇಂದಿರಾಗಾಂಧಿಯವರ ಪುತ್ರ ಸಂಜಯಗಾಂಧಿ ಅವರು ತುರ್ತುಪರಿಸ್ಥಿತಿ ಕಾಲದ ಅನೇಕ ಅತಿರೇಕಗಳ ಹಿಂದೆ ಇದ್ದರು. ‘ಮೈನ್ಸ್ಟ್ರೀಮ್’ ಪತ್ರಿಕೆಯ ಮೇಲೆ ಪ್ರಿ-ಸೆನ್ಸಾರ್ಶಿಪ್ ಹೇರಿದ್ದಕ್ಕೆ ಅದರ ಸಂಪಾದಕ ನಿಖಿಲ್ ಚಕ್ರವರ್ತಿ ಅವರು ಸಂಜಯಗಾಂಧಿ ಅವರನ್ನು ಟೀಕಿಸಿದ್ದೇ ಕಾರಣವಾಗಿತ್ತು. ವಿ.ಸಿ. ಶುಕ್ಲ ಅವರು ಚಕ್ರವರ್ತಿ ಅವರಿಗೆ ಫೋನ್ ಮಾಡಿ “ಸಂಜಯಗಾಂಧಿ ಅವರು ರಾಷ್ಟ್ರೀಯ ನಾಯಕರಾಗಿದ್ದು ಅವರನ್ನು ಟೀಕಿಸುವ ಲೇಖನವನ್ನು ಪ್ರಕಟಿಸಬಾರದು; ಮುಂದೆ ಟೀಕಿಸುವುದಿಲ್ಲವೆಂದು ಭರವಸೆ ನೀಡಬೇಕು” ಎಂದು ಒತ್ತಡ ತಂದರು. ‘ಭರವಸೆ ಕೊಡುವುದಿಲ್ಲ’ ಎಂದಾಗ ಪತ್ರಿಕೆಯನ್ನು ಪ್ರಿ-ಸೆನ್ಸಾರ್ಶಿಪ್ಗೆ ಒಳಪಡಿಸಿದರು. ಕೇಂದ್ರದಲ್ಲಿದ್ದ ಒಂದು ಕೂಟಕ್ಕೆ ಇಷ್ಟವಿಲ್ಲದೆ ಮುಖ್ಯಮಂತ್ರಿಗಳನ್ನು ಪದಚ್ಯುತಗೊಳಿಸಿದ ಸಂಬಂಧ ಸಂಜಯಗಾಂಧಿಯನ್ನು ಟೀಕಿಸಲಾಗಿತ್ತು. ಆಯೋಗವು ಆ ಬಗ್ಗೆ ಕೇಳಿದಾಗ ವಿ.ಸಿ. ಶುಕ್ಲ “ಅವರ ಒಳ್ಳೆಯದಕ್ಕಾಗಿ ನಾನು ಹಾಗೆ ಹೇಳಿದೆ. ಮುಂದೆ ನಿಖಿಲ್ ಚಕ್ರವರ್ತಿ ಮತ್ತವರ ಪತ್ರಿಕೆಯ ವಿರುದ್ಧ ನಡೆಸಲಾದ ಕ್ರಮಕ್ಕೂ ನನ್ನ ಮಾತು ಕೇಳದೆ ಇದ್ದುದಕ್ಕೂ ಸಂಬAಧವಿಲ್ಲ” ಎಂದು ಹೇಳಲು ಮರೆಯಲಿಲ್ಲ.
ಸೆನ್ಸಾರ್ ಅಧಿಕಾರಿಗಳು ಬೇಕಾಬಿಟ್ಟಿ ಮತ್ತು ಏಕಪಕ್ಷೀಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆಂದು ಹಲವು ಸಂಪಾದಕರು ಶಾ ಆಯೋಗದ ಮುಂದೆ ಸಾಕ್ಷ್ಯ ನೀಡಿದರು. ದೇಶದ ರಕ್ಷಣೆ ಅಥವಾ ಆಂತರಿಕ ಭದ್ರತೆಗೆ ಏನೂ ಸಂಬಂಧವಿಲ್ಲದಿದ್ದರೂ ತಮ್ಮ ಪತ್ರಿಕೆಯ ಬಹಳಷ್ಟು ಹಾಸ್ಯಲೇಖನ, ವ್ಯಂಗ್ಯಚಿತ್ರ, ವ್ಯಂಗ್ಯಲೇಖನಗಳನ್ನೂ ಅಧಿಕಾರಿಗಳು ತಡೆಹಿಡಿದರೆಂದು ‘ತುಘಲಕ್’ ಪತ್ರಿಕೆಯ ಸಂಪಾದಕ ಚೋ. ರಾಮಸ್ವಾಮಿ ಆರೋಪಿಸಿದರು. ಮೊರಾರ್ಜಿ ದೇಸಾಯಿ ಅವರ ಜನ್ಮದಿನದಂದು ಪ್ರಕಟಿಸಬಯಸಿದ ಶುಭಾಶಯಗಳನ್ನು ಕೂಡ ಪೂರ್ತಿ ಸೆನ್ಸಾರ್ ಮಾಡಿದರು. ಇಂದಿರಾಗಾಂಧಿಯವರ ಹಿಂದಿನ ಕೆಲವು ಹೇಳಿಕೆಗಳನ್ನು ಕೂಡ ಪ್ರಕಟಿಸಬಾರದೆಂದರು. ಕೆಲವು ಸಲ ಇಡೀ ಪತ್ರಿಕೆಯನ್ನು ಪ್ರಿ-ಸೆನ್ಸಾರ್ಶಿಪ್ಗೆ ಒಳಪಡಿಸಿದರು.
‘ಒಪಿನಿಯನ್’ ಪತ್ರಿಕೆಯಲ್ಲಿ ಭಗವದ್ಗೀತೆಯ ಕೊಟೇಶನ್ಗಳನ್ನು ಪ್ರಕಟಿಸಲು ಮುಂದಾದಾಗ ಅದನ್ನು ಪೂರ್ತಿ ಸೆನ್ಸಾರ್ ಮಾಡಲಾಯಿತು. ಲೋಕಸಭೆಯಲ್ಲಿ ಮಾಡಿದ ಭಾಷಣಗಳು, ಸ್ಪೀಕರ್ ಅನುಮತಿಯ ಮೇರೆಗೆ ಪುಸ್ತಕರೂಪದಲ್ಲಿ ಪ್ರಕಟವಾದುದನ್ನು ಪ್ರಕಟಿಸುವುದಕ್ಕೂ ಸೆನ್ಸಾರ್ನವರು ಒಪ್ಪಲಿಲ್ಲವೆಂದು ‘ಒಪಿನಿಯನ್’ ಸಂಪಾದಕರು ದೂರಿದರು. ಸೆನ್ಸಾರ್ಶಿಪ್ ಬಂದಾಗ ತನಗೆ ಹೊಳೆದದ್ದೆಂದರೆ ‘ಒಪಿನಿಯನ್’ನಂತಹ ಪತ್ರಿಕೆ ಈಗ ಇರಿಸಿಕೊಳ್ಳಬಹುದಾದ ಏಕೈಕ ಗುರಿ ಎಂದರೆ ಸ್ವಾತಂತ್ರö್ಯಕ್ಕಾಗಿ ಹೋರಾಡುವುದು ಎನ್ನುವುದು – ಎಂದು ಸಂಪಾದಕ ಎ.ಡಿ. ಗೋರ್ವಾಲಾ ಹೇಳಿದರು. ತುರ್ತುಪರಿಸ್ಥಿತಿ ಹೇರಿಕೆ ಅನಂತರದ ಮೊದಲ ಸಂಚಿಕೆಯಲ್ಲಿ ಅವರು ಸ್ವಾತಂತ್ರ್ಯದ ಬಗ್ಗೆ ಯರ್ಯಾರು ಏನೇನು ಹೇಳಿದ್ದರೋ ಎಲ್ಲವನ್ನೂ ಹಾಕಿದ್ದರು. ಆದರೆ ಸೆನ್ಸಾರ್ ಅಧಿಕಾರಿಗಳು ಅದನ್ನೆಲ್ಲ ಹೊಡೆದುಹಾಕಿದರು; ಲಿಬರ್ಟಿ, ಫ್ರೀಡಂ, ಡೆಮಾಕ್ರಸಿ ಮುಂತಾದ ಪದಗಳಿಗೆ ಕೂಡ ಅವಕಾಶ ಕೊಡಲಿಲ್ಲ.
ತನ್ನ ಅನುಭವ ಕೂಡ ಅದೇ ಎಂದವರು ‘ಸಾಧನಾ’ದ ಸಂಪಾದಕ ಎಸ್.ಎಂ. ಜೋಶಿ ಅವರು. ಗಾಂಧಿ ಮತ್ತಿತರ ಗಣ್ಯರು, ನಾಯಕರ ಹೇಳಿಕೆಗಳನ್ನು ಕೂಡ ಪ್ರಕಟಿಸುವುದಕ್ಕೆ ಬಿಡಲಿಲ್ಲ ಎಂದ ಅವರು, ಎಲ್ಲರ ಬಾಯಿ ಮುಚ್ಚಿಸುವುದೇ ಸರ್ಕಾರದ ಉದ್ದೇಶವಾಗಿತ್ತು; ಪತ್ರಿಕಾನಿರ್ಬಂಧದ ವಿಷಯದಲ್ಲಿ ಕಾನೂನೆಂಬುದೇ ಇರಲಿಲ್ಲ – ಎಂದು ಆಯೋಗಕ್ಕೆ ತಿಳಿಸಿದರು. ಆ ಕುರಿತು ಸ್ಪಷ್ಟನೆ ಕೇಳಿದಾಗ ಮಂತ್ರಿ ಶುಕ್ಲ “ಆ ಕೊಟೇಶನ್ಗಳು ಬ್ರಿಟಿಷರ ಆಳ್ವಿಕೆಯ ವಿರುದ್ಧವಿದ್ದು ಇಂದಿನ ಪರಿಸ್ಥಿತಿಗೆ ಅದು ಹೊಂದುವುದಿಲ್ಲ (ಅಪ್ರಯೋಜಕ); ಮತ್ತು ತಪ್ಪು ಅಭಿಪ್ರಾಯ ಉಂಟುಮಾಡುತ್ತವೆ; ಅದಕ್ಕಾಗಿ ಬೇಡ ಎಂದೆವು” ಎಂದು ಸಮರ್ಥನೆ ನೀಡಿದರು.
ಖಾಲಿಜಾಗಸಲ್ಲದು
ತುರ್ತುಪರಿಸ್ಥಿತಿಯನ್ನು ಹೇರಿದ ಕರಾಳದಿನ (ಮರುದಿನದ ಸಂಚಿಕೆ) ಕೆಲವು ಪತ್ರಿಕೆಗಳು ತಮ್ಮ ಸಂಪಾದಕೀಯದ ಜಾಗವನ್ನು ಖಾಲಿಬಿಟ್ಟವು. ಅದು ತಾನಾಗಿಯೇ ಒಂದು ಪ್ರತಿಭಟನೆಯಾಗಿತ್ತು. ಆದ್ದರಿಂದ ಮುಂದೆ ಸೆನ್ಸಾರ್ನವರು ಖಾಲಿ ಜಾಗವನ್ನು ಬಿಡಲು ಒಪ್ಪಲಿಲ್ಲ. “ಜಾಗ ಖಾಲಿ ಬಿಟ್ಟರೆ ಅದು ಪತ್ರಿಭಟನೆಯಾಗುತ್ತದೆ. ಸರ್ಕಾರದ ನೀತಿಯ ಪ್ರಕಾರ ಈ ವಿಷಯದಲ್ಲಿ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ. ಅದು ಕಾನೂನುಬಾಹಿರವಾಗುತ್ತದೆ. ಆದ್ದರಿಂದ ಖಾಲಿ ಬಿಡಬಾರದು” ಎಂದು ಮಂತ್ರಿ ಶುಕ್ಲ ಸ್ಪಷ್ಟೀಕರಣವನ್ನು ನೀಡಿದರು. ದೇಶದಲ್ಲಿ ಪತ್ರಿಕಾನಿರ್ಬಂಧ (ಸೆನ್ಸಾರ್ಶಿಪ್) ಇಲ್ಲ ಎನ್ನುವ ಭಾವನೆಯನ್ನು ಉಂಟುಮಾಡುವ ಉದ್ದೇಶದಿಂದ ಕೂಡ ಸರ್ಕಾರ ಸಂಪಾದಕೀಯದ ಜಾಗವನ್ನು ಖಾಲಿ ಬಿಡಬಾರದೆಂದು ಕಟ್ಟುನಿಟ್ಟು ಮಾಡಿತೆಂದು ರಾಜಮೋಹನಗಾಂಧಿ ಮತ್ತು ನಿಖಿಲ್ ಚಕ್ರವರ್ತಿ ಹೇಳಿದ್ದಾರೆ. ಸರ್ಕಾರಕ್ಕೆ ಅನುಕೂಲಕರವಾದ ಲೇಖನಗಳಿಗೆ ಜಾಗ ಬೇಕಲ್ಲವೆ? ಆ ಉದ್ದೇಶದಿಂದ ಕೂಡ ಜಾಗ ಖಾಲಿ ಬಿಡಬಾರದೆಂದು ಸೂಚಿಸಿದರೆಂದು ವಿಶ್ಲೇಷಿಸಲಾಗಿದೆ.
* * *
ಚುನಾವಣೆಘೋಷಣೆ
ಯಾರ ಸಲಹೆಯೋ ಅಥವಾ ಚುನಾವಣೆ ನಡೆಸಿ ಗೆದ್ದು ಬಂದು ಸರ್ವಾಧಿಕಾರಕ್ಕೆ ಅಧಿಕೃತ ಮುದ್ರೆಯನ್ನು ಪಡೆದುಕೊಳ್ಳುವ ಹುನ್ನಾರವೋ, ಅಂತೂ ಜನವರಿ ೧೮, ೧೯೭೭ರಂದು ಇಂದಿರಾಗಾಂಧಿ ಚುನಾವಣೆಯನ್ನು ಘೋಷಿಸಿದರು. ಅದರೊಂದಿಗೆ ಪತ್ರಿಕಾನಿರ್ಬಂಧವನ್ನು ಸಡಿಲಗೊಳಿಸಿ, ಅದಕ್ಕೆ ಸಂಬಂಧಿಸಿದ ಶಾಸನವನ್ನು ಅಮಾನತಿನಲ್ಲಿಟ್ಟರು. ಆದರೂ ಆಗ ಪತ್ರಿಕೆಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳುವ ಒಂದು ಬಗೆಯ ಪ್ರಯತ್ನ ಮುಂದುವರಿದೇ ಇತ್ತು. ಸರ್ಕಾರ ಅನೌಪಚಾರಿಕವಾಗಿ ಆಫ್ ದ ರೆಕಾರ್ಡ್ (ಪ್ರಕಟಣೆಯ ಆಚೆಗೆ) ಮುಸುಕಿನ ಬೆದರಿಕೆಯನ್ನು ಹಾಕುತ್ತಿತ್ತು. ಸರ್ಕಾರದ ನಿರ್ದೇಶನವನ್ನು ಪಾಲಿಸದಿದ್ದರೆ ಚುನಾವಣೆ ಫಲಿತಾಂಶದ ಅನಂತರ ಏನಾದೀತೆನ್ನುವ ಎಚ್ಚರ ಇರಲಿ; ಅದಕ್ಕಾಗಿ ನಿರ್ದಿಷ್ಟ ಲೇಖನಗಳನ್ನು ಪ್ರಕಟಿಸಿ; ಪ್ರಚಾರಕ್ಕೆ ಸಹಕರಿಸಿ ಎಂದು ತೆರೆಮರೆಯಿಂದ ಹೇಳುತ್ತಿದ್ದರು.
ಪತ್ರಿಕೆಗಳ ಕೆಲಸದ ಮೇಲೆ ನಿಗಾ ಇಡುವ ಸಲುವಾಗಿ ಮೇಲ್ತನಿಖೆ ಸಮಿತಿಯೊಂದನ್ನು ರಚಿಸಬೇಕೆಂದು ‘ಟೈಮ್ಸ್ ಆಫ್ ಇಂಡಿಯ’ ಸಂಪಾದಕ ಗಿರಿಲಾಲ್ಜೈನ್ ಆಯೋಗದ ಮುಂದೆ ಹೇಳಿದರು. ಅದಕ್ಕಾಗಿ ಸಚಿವಾಲಯದ ಅಧಿಕಾರಿಗಳು ‘ನೀತಿಸಂಹಿತೆ’ಯನ್ನು ಕೂಡ ತಯಾರಿಸಿದ್ದರು. ಆದರೆ ದೊಡ್ಡ ಪತ್ರಕರ್ತರನ್ನು ಹೊರಗಿಟ್ಟೇ ಅದನ್ನು ಮಾಡಿದ್ದರು. ಈ ನೀತಿಸಂಹಿತೆಯು (ಕೋಡ್ ಆಫ್ ಎಥಿಕ್ಸ್) ಶಾಸನ ಆಗಬೇಕೆಂದು ವಿ.ಸಿ. ಶುಕ್ಲ ಮಂಡಿಸಿದರು; ಆದರೆ ಸಚಿವ ಸಂಪುಟ ಅದನ್ನು ವಿರೋಧಿಸಿತು. ಪತ್ರಿಕೆಗಳು ಕೂಡ ಅದನ್ನು ಒಪ್ಪಲಿಲ್ಲ. ಏನಿದ್ದರೂ ಚುನಾವಣೆಯ ವೇಳೆಯೂ ಪ್ರಧಾನ ವಾರ್ತಾಧಿಕಾರಿ ಎಲ್. ದಯಾಳ್ ಪತ್ರಿಕೆಗಳಿಗೆ ಅನೌಪಚಾರಿಕ ಎಚ್ಚರಿಕೆ ನೀಡುತ್ತಿದ್ದರೆಂದು ‘ಸ್ಟೇಟ್ಸ್ಮನ್’ ಸಂಪಾದಕ ಎಸ್. ಸಹಾಯ್ ಆಯೋಗಕ್ಕೆ ತಿಳಿಸಿದರು. ಡಿಪೆನ್ಹಾ ಮತ್ತು ಕೆ.ಎನ್. ಪ್ರಸಾದ್ (ವಾರ್ತಾಇಲಾಖೆ ಹೆಚ್ಚುವರಿ ಕಾರ್ಯದರ್ಶಿ) ಎಚ್ಚರಿಕೆ ನೀಡಿದ್ದರೆಂದು ‘ಇಂಡಿಯನ್ ಎಕ್ಸ್ಪ್ರೆಸ್’ ಸಂಪಾದಕರು, ಅಧಿಕಾರಿಗಳು ಹೇಳಿದರು. ಕೆಲವು ಪತ್ರಿಕೆಗಳು ಕುಟುಂಬಯೋಜನೆಯ ದೌರ್ಜನ್ಯಗಳ ಕುರಿತು ಲೇಖನ ಪ್ರಕಟಿಸಿದಾಗ, ಸರ್ಕಾರಕ್ಕೆ ಅದರಿಂದ ಸಿಟ್ಟು ಬಂದಿದೆ. ಚುನಾವಣೆಯ ಬಿಸಿ ಏರುವಾಗ ಕುಟುಂಬಯೋಜನೆಯ ವಿಷಯ ಅದನ್ನು ಹೆಚ್ಚಿಸೀತು ಎಂಬಂತಹ ಎಚ್ಚರಿಕೆಗಳು ಬಂದವು.
ಹೊಸಕಾಯ್ದೆಗಳು
ಒಟ್ಟಿನಲ್ಲಿ ತುರ್ತುಪರಿಸ್ಥಿತಿಯ ವೇಳೆ ಪತ್ರಿಕಾನಿರ್ಬಂಧವನ್ನು ನಾಡಿನ ಸಾಮಾನ್ಯ ಶಾಸನಗಳೊಂದಿಗೆ ಸೇರುವಂತೆ ಮಾಡಲಾಯಿತು. ಆ ನಿಟ್ಟಿನಲ್ಲಿ ಆಕ್ಷೇಪಾರ್ಹ ವಿಷಯದ ಪ್ರಕಟಣೆ ತಡೆ ಕಾಯ್ದೆಯನ್ನು (Prevention of Publication of Objectionable Matter Act) ತರಲಾಯಿತು. ಒಂದು ಸುಗ್ರೀವಾಜ್ಞೆಯ ಮೂಲಕ ಭಾರತ ಪತ್ರಿಕಾಮಂಡಳಿಯನ್ನು (ಪ್ರೆಸ್ ಕೌನ್ಸಿಲ್ ಆಫ್ ಇಂಡಿಯ) ವಜಾಗೊಳಿಸಲಾಯಿತು. ಸಂಸದೀಯ ಕಲಾಪ (ಪ್ರಕಟಣೆಯ ರಕ್ಷಣೆ) ಕಾಯ್ದೆ-೧೯೫೬ನ್ನು ರದ್ದುಗೊಳಿಸುವ ಮಸೂದೆಯನ್ನು ಅಂಗೀಕರಿಸಲಾಯಿತು. ತುರ್ತುಪರಿಸ್ಥಿತಿಯನ್ನು ಸಾಂಸ್ಥಿಕವಾಗಿ ಭದ್ರಗೊಳಿಸುವುದು ಈ ಶಾಸನದ ಉದ್ದೇಶವಾಗಿತ್ತು.
ಇತರಒತ್ತಡಗಳು
ತನ್ನ ಉದ್ದೇಶ ಈಡೇರಿಕೆಗಾಗಿ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತ್ರಿಕೆಗಳ ಮೇಲೆ ಇತರ ಒತ್ತಡಗಳನ್ನು ತರುವಲ್ಲಿ ಹಿಂದೆ ಬೀಳಲಿಲ್ಲ. ಆ ನಿಟ್ಟಿನಲ್ಲಿ ಜಾಹೀರಾತು ಮತ್ತು ದೃಶ್ಯ ಪ್ರಚಾರದ ವಿಭಾಗವನ್ನು (ಡಿಎವಿಪಿ) ಬಳಸಿಕೊಳ್ಳಲಾಯಿತು. ಇದು ಸರ್ಕಾರದ ಜಾಹೀರಾತು ಸಂಸ್ಥೆಯಾಗಿದ್ದು, ಜಾಹೀರಾತು ಉದ್ದೇಶಕ್ಕೆ ಸಾರ್ವಜನಿಕರಂಗದ (ಸರ್ಕಾರೀ) ಇತರ ಸಂಸ್ಥೆಗಳು ಕೂಡ ಇದನ್ನು ಬಳಸಿಕೊಳ್ಳುತ್ತವೆ. ಸಂಸತ್ತಿನ ಒಪ್ಪಿಗೆಯ ಮೇರೆಗೆ ಸರ್ಕಾರ ಆಗಾಗ ಜಾಹೀರಾತು ನೀತಿಯನ್ನು ಬದಲಿಸುತ್ತದೆ. ಆದರೆ ಸರ್ಕಾರೀ ಜಾಹೀರಾತನ್ನು ರಾಜಕೀಯದ ಆಧಾರದಲ್ಲಿ ತಾರತಮ್ಯಕ್ಕೆ ಅವಕಾಶವಿಲ್ಲ; ಅಂದರೆ ಆಳುವ ಪಕ್ಷ, ವಿರೋಧಪಕ್ಷ ಎಂಬ ಭೇದ ಸಲ್ಲದು. ಸಮತೋಲನ, ಸಮಾನತೆ ಬೇಕು; ಮತ್ತು ಇದು ಪತ್ರಿಕೆಗಳಿಗೆ ನೀಡುವ ಆರ್ಥಿಕ ಸಹಾಯ ಅಲ್ಲ (ಆ ರೀತಿಯಲ್ಲಿ ಅದನ್ನು ಬಳಸಿಕೊಳ್ಳಬಾರದು).
ತುರ್ತುಪರಿಸ್ಥಿತಿಯ ಘೋಷಣೆಯ ಅನಂತರ ಜುಲೈ ೨೬ರಂದು ಪ್ರಧಾನಿ ಇಂದಿರಾಗಾಂಧಿಯವರ ಕಚೇರಿಯಲ್ಲಿ ಒಂದು ಉನ್ನತಮಟ್ಟದ ಸಭೆ ನಡೆಯಿತು. ಸರ್ಕಾರದ ಜಾಹೀರಾತು ನೀತಿಯನ್ನು ನಿರ್ಧರಿಸುವುದು ಅದರ ಉದ್ದೇಶವಾಗಿದ್ದು, ವಾರ್ತಾ-ಪ್ರಸಾರ ಮಂತ್ರಿ ವಿ.ಸಿ. ಶುಕ್ಲ ಮತ್ತಿತರರು ಅದರಲ್ಲಿ ಭಾಗವಹಿಸಿದ್ದರು. ಅದಕ್ಕೆ ಮುನ್ನ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಶುಕ್ಲ ಅವರು, ಎಲ್ಲ ಪತ್ರಿಕೆಗಳನ್ನು (ಸರ್ಕಾರದ) ಸ್ನೇಹಿತರು, ತಟಸ್ಥರು ಮತ್ತು ವಿರೋಧಿಗಳು ಎನ್ನುವ ರೀತಿಯಲ್ಲಿ ಒಂದು ಪಟ್ಟಿಯನ್ನು ತಯಾರಿಸಲು ಪ್ರಧಾನ ವಾರ್ತಾಧಿಕಾರಿಗೆ ಸೂಚಿಸಿದ್ದರು. ಅದರಂತೆ ಡಾ|| ಎ.ಆರ್. ಬಾಜಿ ಅವರು, ತುರ್ತುಪರಿಸ್ಥಿತಿಗೆ ಮುನ್ನ ಮತ್ತು ಅದನ್ನು ಹೇರುತ್ತಲೇ ನಿರ್ದಿಷ್ಟ ವರ್ತಮಾನ ಪತ್ರಿಕೆಯು ಸುದ್ದಿ ಹಾಗೂ ಕಾಮೆಂಟ್(ಪ್ರತಿಕ್ರಿಯೆ)ಗಳನ್ನು ಯಾವ ರೀತಿ ಮಾಡಿತು ಎಂಬುದರ ಆಧಾರದಲ್ಲಿ ವರ್ಗೀಕರಣ ಮಾಡಿ ಪಟ್ಟಿಯನ್ನು ತಯಾರಿಸಿದ್ದರು. ಮುಂದೆ ಅದೇ ಜೂನ್ ೧೨-೨೬ರ ನಡುವೆ ಪತ್ರಿಕೆಯ ಸಂಪಾದಕೀಯ ಅಂಕಣಗಳು ಹೇಗಿದ್ದವೆಂದು ನೋಡಿ ಆ ಪಟ್ಟಿಯನ್ನು ಚಿಕ್ಕದು (ಶಾರ್ಟ್ಲಿಸ್ಟ್) ಮಾಡಿದರು. ಪಟ್ಟಿಯನ್ನು ಮೊದಲಿಗೆ ಸಚಿವ ಶುಕ್ಲ ಮತ್ತು ಅನಂತರ ಹೆಚ್ಚುವರಿ ಕಾರ್ಯದರ್ಶಿ ಕೆ.ಎನ್. ಪ್ರಸಾದ್ ಅವರ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಒಟ್ಟಾರೆ ರೇಟಿಂಗ್ ಕೊಟ್ಟು ಪಟ್ಟಿಯನ್ನು ಅಂತಿಮಗೊಳಿಸಿದರು.
ಜಾಹೀರಾತುದುರುಪಯೋಗ
ಹೀಗೆ ರಾಜಕೀಯ ತಾರತಮ್ಯ ಸಲ್ಲದೆನ್ನುವ ಡಿಎವಿಪಿ ನಿಯಮಕ್ಕೇನೇ ಅಲ್ಲಿ ತಿಲಾಂಜಲಿ ನೀಡಲಾಗಿತ್ತು. ಪತ್ರಿಕೆಯ ರಾಜಕೀಯ ನಿಲವು ಅದಕ್ಕೆ ಸಂಬಂಧಪಟ್ಟ ರಾಜಕೀಯ ನಾಯಕರು, ಪಕ್ಷಗಳ ಜೊತೆಗಿನ ಅದರ ಸಂಬಂಧ ಮುಂತಾದವು ಆ ವರ್ಗೀಕರಣದಲ್ಲಿ ನಿರ್ಣಾಯಕವಾಗಿದ್ದವು. ಸರ್ಕಾರದ ಬಗೆಗಿನ ಅದರ ನಿಲವು, ಸಂಬಂಧಗಳು ಮುಖ್ಯವಾಗಿದ್ದವು. ಎ, ಬಿ, ಸಿ ಎನ್ನುವ ಆ ವರ್ಗೀಕರಣದಲ್ಲಿ ಎ-ಸ್ನೇಹಿತರು, ಬಿ-ವಿರೋಧಿಗಳು ಮತ್ತು ಸಿ-ತಟಸ್ಥರು ಎಂದಾಗಿತ್ತು. ಎ ಯಲ್ಲಿ ಇಂಗ್ಲಿಷ್ ದೈನಿಕ ‘ದ ಹಿಂದು’, ‘ಮಲೆಯಾಳ ಮನೋರಮಾ’, ‘ಟೈಮ್ಸ್ ಆಫ್ ಇಂಡಿಯ’, ‘ಅಮೃತಬಾಜಾರ್ ಪತ್ರಿಕಾ’ ಮೊದಲಾದವಿದ್ದರೆ, ಬಿ ಯಲ್ಲಿ ‘ಇಂಡಿಯನ್ ಎಕ್ಸ್ಪ್ರೆಸ್, ‘ದೇಶಾಭಿಮಾನಿ’ (ಮಲೆಯಾಳಂ), ‘ಕನ್ನಡಪ್ರಭ’, ಮರಾಠಿಯ ‘ನವಭಾರತ್’ ಇತ್ಯಾದಿ ಇದ್ದವು. ಸಿ ವಿಭಾಗದಲ್ಲಿ ‘ಡೆಕ್ಕನ್ ಕ್ರಾನಿಕಲ್’, ‘ಫಿನಾನ್ಶಿಯಲ್ ಎಕ್ಸ್ಪ್ರೆಸ್’, ‘ಪ್ರಜಾವಾಣಿ’ ಮೊದಲಾದವನ್ನು ಸೇರಿಸಲಾಗಿತ್ತು. ಬಹಳಷ್ಟು ಪತ್ರಿಕೆಗಳನ್ನು ಬಿ ವಿಭಾಗದಲ್ಲಿ (ವಿರೋಧಿಗಳು) ಸೇರಿಸಿದ್ದರು. ಸಚಿವರು (ಶುಕ್ಲ) ನೀಡಿದ ಸೂಚನೆಯ ಮೇರೆಗೆ ಈ ಪಟ್ಟಿಯನ್ನು ಮಾಡಿದ್ದೇವೆಂದು ಅಧಿಕಾರಿಗಳು ಆಯೋಗಕ್ಕೆ ತಿಳಿಸಿದರೆ, ವಿ.ಸಿ. ಶುಕ್ಲ ಅವರು, “ಈ ಪಟ್ಟಿಯನ್ನು ತಯಾರಿಸಲು ನಾನು ನಿರ್ದೇಶನ ನೀಡಿದ್ದು ನಿಜ. ಸರ್ಕಾರದ ಜೊತೆಗಿನ ಅವರ ಸಾಮಾನ್ಯ ಸಂಬಂಧ, ಸಹಕಾರಗಳನ್ನು ನೋಡಿ ಮುಖ್ಯವಾಗಿ ತುರ್ತುಪರಿಸ್ಥಿತಿ ಸಮಯದ ಹೊಂದಾಣಿಕೆಯನ್ನು ಗಮನಿಸಿ ಪಟ್ಟಿಯನ್ನು ಸಿದ್ಧಪಡಿಸಲಾಯಿತು” ಎಂದರು.
ಲಭ್ಯ ಸಾಕ್ಷ್ಯಗಳಿಂದ ತಿಳಿಯುವ ಅಂಶವೆಂದರೆ, ಸರ್ಕಾರದ ಜಾಹೀರಾತು ನೀಡುವುದಕ್ಕೆ ರಾಜಕೀಯವು ನಿರ್ಣಾಯಕ ಅಂಶವಾಯಿತು. ದಾಸ್ತಾನ್-ಎ-ವತನ್’ ಎನ್ನುವ ಉರ್ದು ನಿಯತಕಾಲಿಕವು ಹಿಂದೆ ಜನಸಂಘ ಪರ (ಹಿಂದಿನ ಬಿಜೆಪಿ) ನೀತಿಯನ್ನು ಅನುಸರಿಸುತ್ತಿತ್ತು. ಅದನ್ನು ಬಿಟ್ಟು ಪತ್ರಿಕೆಯು ಕಾಂಗ್ರೆಸ್ಪರ ಆದ ಬಳಿಕ ಜಾಹೀರಾತು ನೀಡಲು ಆರಂಭಿಸಲಾಯಿತು. ಇದಕ್ಕೆ ಭಿನ್ನವಾಗಿ ಗುಜರಾತ್ನ ‘ಲೋಕರಾಜ್’ ಸಂಸ್ಥಾ ಕಾಂಗ್ರೆಸ್ಗೆ ಬೆಂಬಲ ನೀಡುತ್ತಿದೆ ಎಂಬ ದೂರು ಬಂದ ಮೇರೆಗೆ ಅದಕ್ಕೆ ಜಾಹೀರಾತನ್ನು ನಿಲ್ಲಿಸಿದರು. ಪತ್ರಿಕಾ ಮಾಹಿತಿ ಕಾರ್ಯಾಲಯದ (ಪಿಐಬಿ) ಮೂಲಕ ತನಿಖೆ ನಡೆಸಿದಾಗ ಅದು ಕಾಂಗ್ರೆಸ್ ಪರವೇ ಎಂದು ಗೊತ್ತಾಗಿ ಶುಕ್ಲ ಜಾಹೀರಾತು ಪುನರಾರಂಭಕ್ಕೆ ಆದೇಶ ನೀಡಿದರು.
ದೊಂಬರಾಟ, ಕಸರತ್ತು
ಇದರಲ್ಲಿ ಏನೇನೋ ದೊಂಬರಾಟ ನಡೆದದ್ದು ಬೇಕಾದಷ್ಟಿದೆ. ತಮಿಳಿನ ‘ಅಲಾ ಒ ಸಾ’ ದೈನಿಕವು ಡಿಎಂಕೆ ಪರ ಎಂದು ತೀರ್ಮಾನಿಸಿದ ಡಿಎವಿಪಿ ಜಾಹೀರಾತನ್ನು ತಡೆಹಿಡಿಯಿತು. ಪಕ್ಷದ ನಾಯಕ ಎಂ. ಭಕ್ತವತ್ಸಲಂ ಅವರು ತಮಗೆ ಜಾಹೀರಾತು ನೀಡಬೇಕೆಂದು ಶುಕ್ಲ ಅವರಲ್ಲಿ ಮನವಿ ಮಾಡಿದಾಗ ಕೊಡಲು ಆರಂಭಿಸಿದರು. ಸಂಸದ ವಿ. ವಿಶ್ವನಾಥನ್ ಅವರು ಪತ್ರಿಕೆಯು ತುಂಬಾ ಡಿಎಂಕೆ ಪರ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಜಾಹೀರಾತನ್ನು ನಿಲ್ಲಿಸಲಾಯಿತು. ಕೆಲವೇ ಸಮಯದಲ್ಲಿ ತಮಿಳುನಾಡು ಕಾಂಗ್ರೆಸ್ ಉಪಾಧ್ಯಕ್ಷರು ಸಚಿವರಿಗೆ ಪತ್ರ ಬರೆದು ಈಗ ಆ ದೈನಿಕವನ್ನು ಒಬ್ಬ ಕಾಂಗ್ರೆಸಿಗರು ಖರೀದಿಸಿದ್ದಾರೆ ಎಂಬ ಮಾಹಿತಿ ನೀಡಿದರು. ಡಿಎವಿಪಿ ಕೂಡಲೆ ಜಾಹೀರಾತು ನೀಡಲು ಪುನರಾರಂಭಿಸಿತು. ಕಾಂಗ್ರೆಸ್ನ ಹಲವು ಅಧಿಕೃತ ಸಾಪ್ತಾಹಿಕಗಳಿಗೆ ಸರ್ಕಾರ ತುಂಬಾ ಜಾಹೀರಾತು ನೀಡಿದರೆ ಪ್ರತಿಪಕ್ಷಗಳ ಅಧಿಕೃತ ಪತ್ರಿಕೆಗಳಿಗೆ ಅದು ಕುಸಿಯುತ್ತಲೇ ಹೋಯಿತು.
ಇದರಿಂದ ಸ್ಪಷ್ಟವಾಗುವ ಅಂಶವೆಂದರೆ, ಸಂಸತ್ತಿನಲ್ಲಿ ಪ್ರಕಟಿಸಿದ ಜಾಹೀರಾತು ನೀತಿಗೆ ವಿರುದ್ಧವಾಗಿ ಜಾಹೀರಾತು ಬಿಡುಗಡೆ ಮಾಡುವಾಗ ರಾಜಕೀಯ ಅಂಶಗಳನ್ನು ಪರಿಗಣಿಸಲಾಯಿತು. ಜಾಹೀರಾತು ನೀತಿಯನ್ನು ಪತ್ರಿಕೆಗಳಿಗೆ ಆರ್ಥಿಕ ನೆರವು ನೀಡುವ ಅಥವಾ ಅವುಗಳನ್ನು ದಂಡಿಸುವ (ನೆರವು ನಿರಾಕರಿಸುವ) ರೀತಿಯಲ್ಲಿ ಬಳಸಿಕೊಂಡರು. ಸರ್ಕಾರದ ನೀತಿಯನ್ನು ಆಕ್ಷೇಪಿಸಿದ, ಟೀಕಿಸಿದ ಪತ್ರಿಕೆಗಳಿಗೆ ಜಾಹೀರಾತನ್ನು ನಿರಾಕರಿಸಿದರು. ಸರ್ಕಾರದ ನೀತಿಯನ್ನು ಬೆಂಬಲಿಸಿದ ಅಮೃತ್ಬಜಾರ್ ಪತ್ರಿಕಾ, ನ್ಯಾಷನಲ್ ಹೆರಾಲ್ಡ್ಗಳಿಗೆ ಅವುಗಳ ನ್ಯಾಯಸಮ್ಮತ ಪಾಲಿಗಿಂತ ಜಾಸ್ತಿ ಜಾಹೀರಾತನ್ನು ನೀಡಿದರು. ‘ಸೆಮಿನಾರ್’ ಪತ್ರಿಕೆಯ ಕೆಲವು ಲೇಖನಗಳಲ್ಲಿ ಆಕ್ಷೇಪಾರ್ಹ ಅಂಶಗಳಿವೆ ಎಂದು ಸರ್ಕಾರ ಅದಕ್ಕೆ ಜಾಹೀರಾತು ನಿಲ್ಲಿಸಿತೆಂದು ಸಂಪಾದಕ ರೊಮೇಶ್ ಥಾವರ್ ಹೇಳಿದರೆ, ‘ಹಿಮ್ಮತ್’ ಪತ್ರಿಕೆಗೆ ಬ್ಯಾಂಕ್ಗಳು ಜಾಹೀರಾತು ನಿಲ್ಲಿಸಿದಾಗ ಸಂಪಾದಕ ರಾಜಮೋಹನ್ಗಾಂಧಿ ಆ ಸಂಸ್ಥೆಗಳನ್ನು ಕೇಳಿದಾಗ ‘ನಿಮ್ಮನ್ನು ಸರ್ಕಾರ ನಿರ್ಬಂಧಿತ ಪಟ್ಟಿಯಲ್ಲಿ ಇರಿಸಿದೆ’ ಎಂಬ ಉತ್ತರ ದೊರೆಯಿತು.
ಅಮೃತಬಾಜಾರ್ ಪತ್ರಿಕಾ ಸರ್ಕಾರವನ್ನು ಬೆಂಬಲಿಸಲು ಏನು ಬೇಕಾದರೂ ಮಾಡುವ ಸ್ಥಿತಿಯಲ್ಲಿತ್ತು; ಆ ಪತ್ರಿಕೆಗೆ ಶುಕ್ಲ ಜಾಹೀರಾತು ದರದ ಮಧ್ಯಾವಧಿ ಪರಿಷ್ಕರಣೆಗೂ (ಏರಿಕೆ) ಅವಕಾಶ ನೀಡಿದರು; ಅಂತಹ ಸಂದರ್ಭದಲ್ಲಿ ಪತ್ರಿಕೆಯ ಪ್ರಸಾರ ಇಳಿದರೂ ದರ ಏರಿಸುತ್ತಿದ್ದರು. ಆ ಬಗ್ಗೆ ಕೇಳಿದಾಗ ಶುಕ್ಲ, “ರಾಷ್ಟ್ರೀಯವಾದಿ ನೀತಿಗಳನ್ನು ಬೆಂಬಲಿಸುತ್ತಿದ್ದ ಅವರು ಹಕ್ಕಿನಿಂದ ದರ ಏರಿಕೆಗೆ ಕೇಳಿದ್ದರು” ಎನ್ನುವ ಉತ್ತರ ನೀಡಿದರು. ಅದೇ ರೀತಿ ಕಾಂಗ್ರೆಸ್ನ ಕೃಪಾಕಟಾಕ್ಷಕ್ಕೆ ಪಾತ್ರವಾಗಿದ್ದ ‘ನ್ಯಾಷನಲ್ ಹೆರಾಲ್ಡ್’ನ ಜಾಹೀರಾತು ದರ ಎರಡು, ಮೂರು, ನಾಲ್ಕು ಪಾಲು ಏರಿತು; ಪತ್ರಿಕೆಯ ಪ್ರಸಾರ ಇದ್ದಲ್ಲೇ ಇತ್ತು. ಆಯೋಗದ ಪ್ರಶ್ನೆಗೆ ಉತ್ತರಿಸಿದ ವಿ.ಸಿ. ಶುಕ್ಲ ಸರ್ಕಾರ ಕೆಲವು ಮಾನದಂಡಗಳನ್ನು (ಕ್ರೈಟೀರಿಯ) ಮಾಡಿಕೊಂಡು ಅದನ್ನು ಸಾಧ್ಯವಾದಷ್ಟು ನ್ಯಾಯಸಮ್ಮತವಾಗಿ ಜಾರಿ ಮಾಡಲು ಯತ್ನಿಸಿತು” ಎಂದರು. ನಿರ್ದಿಷ್ಟ ವ್ಯಕ್ತಿ ಅಥವಾ ಪ್ರಕರಣಗಳ ಬಗ್ಗೆ ಪ್ರತಿಕ್ರಿಯೆ ನೀಡುವುದನ್ನು ತಪ್ಪಿಸಿಕೊಂಡ ಅವರು “ದಾಖಲೆಗಳನ್ನು ನೋಡಿ ನೀವು ನಿಮ್ಮದೇ ತೀರ್ಮಾನಕ್ಕೆ ಬನ್ನಿ; ಅಧಿಕಾರಿಗಳು ಗೈಡ್ಲೈನ್ಸ್ಗಳನ್ನು ತಪ್ಪಾಗಿ ಜಾರಿ ಮಾಡಿ ತಪ್ಪೆಸಗಿರಲೂಬಹುದು” ಎಂದು ಸಮಜಾಯಿಷಿ ನೀಡಿದರು.
ಹೆಚ್ಚುವರಿ ಕಾರ್ಯದರ್ಶಿ ಪ್ರಸಾದ್ ಅವರು ಸಚಿವ ಶುಕ್ಲ ಅವರೊಂದಿಗೆ ಚರ್ಚಿಸಿ ಡಿಎವಿಪಿಗೆ ಒಂದು ನೀತಿಸಂಬಂಧಿ ಸೂಚನೆಯನ್ನು (policy note) ನೀಡಿದರು. ಡಿಎವಿಪಿ ಅದರಂತೆ ಎಲ್ಲ ಕೇಂದ್ರ ಸಚಿವಾಲಯಗಳು, ಇಲಾಖೆಗಳು, ಸಾರ್ವಜನಿಕರಂಗದ ಸಂಸ್ಥೆಗಳು ಮತ್ತು ರಾಷ್ಟ್ರೀಯ ಸ್ವಾಯತ್ತ ಸಂಸ್ಥೆಗಳ ಜಾಹೀರಾತುಗಳನ್ನು ಬಿಡುಗಡೆ ಮಾಡುತ್ತಿತ್ತು. ರಾಜ್ಯಸರ್ಕಾರಗಳು ಡಿಎವಿಪಿ ಮೂಲಕ ಜಾಹೀರಾತು ಬಿಡುಗಡೆಗೆ ಒಪ್ಪಲಾರವು ಎಂದಿದ್ದರೂ ಕೂಡ ತಾನು ಪಟ್ಟಿಯಿಂದ ಹೊರಹಾಕಿದ ಪತ್ರಿಕೆಗಳಿಗೆ ಜಾಹೀರಾತು ನೀಡಬೇಡಿ ಎಂದು ಕೇಂದ್ರಸರ್ಕಾರ ಸೂಚನೆ ನೀಡಿತ್ತು.
ಖಾಸಗಿಜಾಹೀರಾತಿಗೂತಡೆ
ಪಟ್ಟಿಯಿಂದ ಹೊರಹಾಕಿದ ಪತ್ರಿಕೆಗಳಿಗೆ ಖಾಸಗಿ ಜಾಹೀರಾತು ಸಂಸ್ಥೆಗಳು ಜಾಹೀರಾತು ನೀಡುವುದನ್ನೂ ತಡೆಯುವ ಸಾಧ್ಯತೆಯ ಬಗ್ಗೆ ಜಾಣತನದಿಂದ ಪ್ರಯತ್ನಿಸಬೇಕೆಂದು ಡಿಎವಿಪಿಗೆ ಸೂಚಿಸಲಾಗಿತ್ತು. ಆದರೆ ಪಟ್ಟಿಯಿಂದ ಹೊರಹಾಕಲಾದ (ಡೀಲಿಸ್ಟಾದ) ವರ್ತಮಾನ ಪತ್ರಿಕೆಗಳಿಗೆ ಜಾಹೀರಾತು ನೀಡದಂತೆ ಖಾಸಗಿ ಜಾಹೀರಾತು ಸಂಸ್ಥೆಗಳನ್ನು ಒಲಿಸುವ ಕೆಲಸ ಡಿಎವಿಪಿಯಿಂದ ಸಾಧ್ಯವಾಗಲಿಲ್ಲ; ಅವು ಡಿಎವಿಪಿ ಮಾತು ಕೇಳಲಿಲ್ಲ. ಆಗ ಶುಕ್ಲ ಸ್ವತಃ ಖಾಸಗಿ ಜಾಹೀರಾತು ಸಂಸ್ಥೆಗಳ ಪ್ರತಿನಿಧಿಗಳ ಸಭೆ ಕರೆದು ಒತ್ತಡ ತಂದರು. ಆ ಮೂಲಕ ಜಾಹೀರಾತು ಬಿಡುಗಡೆಯ ಸರ್ಕಾರಿ ನೀತಿಯನ್ನು ಪಾಲಿಸುತ್ತೇವೆ ಎಂದು ಅವರಿಂದ ಭರವಸೆ ಪಡೆಯಲಾಯಿತು.
ಸರ್ಕಾರದ ಪರ ಪತ್ರಿಕೆ, ನಿಯತಕಾಲಿಕಗಳಿಗೆ ಉದಾರವಾಗಿ ಜಾಹೀರಾತು ನೀಡಿದ ಕಾರಣದಿಂದ ಡಿಎವಿಪಿ ವೆಚ್ಚದಲ್ಲಿ ಭಾರೀ ಏರಿಕೆಯಾಯಿತು. ೧೯೭೪-೭೫ರಲ್ಲಿ ೧.೪೨ ಕೋಟಿ ರೂ. ಇದ್ದ ವೆಚ್ಚ ಮುಂದಿನ ವರ್ಷ ೨.೨೧ ಕೋಟಿ ರೂ. ಗೇರಿತು; ಮತ್ತು ೧೯೭೬-೭೭ರಲ್ಲಿ ೨.೭೯ ಕೋಟಿಗೇರಿತು. ಅದೇ ಅವಧಿಯಲ್ಲಿ ೮೯ ವರ್ತಮಾನ ಪತ್ರಿಕೆ ಮತ್ತು ನಿಯತಕಾಲಿಕಗಳಿಗೆ ಬಹುತೇಕ ರಾಜಕೀಯ ಕಾರಣದಿಂದ (ಬೇರೆ ಬೇರೆ ಅವಧಿಗೆ) ಜಾಹೀರಾತನ್ನು ನಿರಾಕರಿಸಲಾಯಿತು.
‘ಸಮಾಚಾರ್’ ಸ್ಥಾಪನೆ
‘ಸಮಾಚಾರ್’ ಎನ್ನುವ ಏಕೀಕೃತ ಸುದ್ದಿಸಂಸ್ಥೆಯು ತುರ್ತುಪರಿಸ್ಥಿತಿ ಸಂದರ್ಭದ ಒಂದು ಪ್ರಮುಖ ಘಟನೆಯಾಗಿದೆ. ಆಗ ಪಿಟಿಐ, ಯುಎನ್ಐ, ಹಿಂದುಸ್ತಾನ್ ಸಮಾಚಾರ್ ಮತ್ತು ಸಮಾಚಾರ್ ಭಾರತಿ ಎನ್ನುವ ನಾಲ್ಕು ಸುದ್ದಿಸಂಸ್ಥೆಗಳಿದ್ದವು. ಜುಲೈ ೨೬, ೧೯೭೫ ಮತ್ತು ಮುಂದಿನ ತಿಂಗಳು ೧೨ರಂದು ಪ್ರಧಾನಿ ಇಂದಿರಾಗಾಂಧಿ ಅವರ ನೇತೃತ್ವದಲ್ಲಿ ನಡೆದ ಎರಡು ಸಭೆಗಳಲ್ಲಿ ಅವುಗಳನ್ನು ವಿಲೀನಗೊಳಿಸಿ ಒಂದು ಸಂಸ್ಥೆ ರಚಿಸಲು ತೀರ್ಮಾನಿಸಲಾಯಿತು. ವಿಲೀನದ ಬಗ್ಗೆ ಮಂತ್ರಿಮಂಡಲದ ಒಪ್ಪಿಗೆ ಪಡೆಯುವ ಉದ್ದೇಶದಿಂದ ಸಚಿವ ಶುಕ್ಲ ಅವರು ಒಂದು ಸುಗ್ರೀವಾಜ್ಞೆಯನ್ನು ಸಿದ್ಧಪಡಿಸಿದರು. ಸಂಪುಟ ಅದಕ್ಕೆ ಒಪ್ಪಲಿಲ್ಲ. ಕಾನೂನು ಪ್ರಕ್ರಿಯೆ ಮೂಲಕ ಮಾಡುವುದು ಬೇಡ; ಇತರ ವಿಧಾನವನ್ನು ಅನುಸರಿಸಿ ಎಂದು ಸಲಹೆ ನೀಡಿತು.
‘ಇತರ ವಿಧಾನ’ ಎಂಬುದಕ್ಕೆ ಶುಕ್ಲ ಅವರು ಮಾಡಿದ ಅರ್ಥವೆಂದರೆ, ಆ ಸುದ್ದಿಸಂಸ್ಥೆಗಳ ಮೇಲೆ ಒತ್ತಡ ಹಾಕುವುದು, ಆಕಾಶವಾಣಿ ಅವುಗಳ ಚಂದಾದಾರಿಕೆಯನ್ನು ನಿಲ್ಲಿಸುವುದು, ಸುದ್ದಿ ನೀಡುವ ಅವರ ಟೆಲಿಪ್ರಿಂಟರ್ ಬೇಡ ಎನ್ನುವುದು, ಸರ್ಕಾರಕ್ಕೆ ಆ ಸಂಸ್ಥೆಗಳಿಂದ ಬರಬೇಕಾದ ಹಣವನ್ನು ಬಲಾತ್ಕಾರವಾಗಿ ವಸೂಲಿ ಮಾಡುವುದು ಇತ್ಯಾದಿ. ವಿಲೀನ ಮಾಡುವುದರ ಉದ್ದೇಶ ಒಂದೇ ಸಂಸ್ಥೆಯಾದರೆ ನಿಯಂತ್ರಣ (ಸೆನ್ಸಾರ್ಶಿಪ್) ಸುಲಭವಾಗುತ್ತದೆ ಎನ್ನುವುದಾಗಿತ್ತು. ಇತರ ವಿಧಾನಗಳನ್ನು ಅನುಸರಿಸಬೇಕು ಎಂಬುದರಲ್ಲಿ ಒತ್ತಾಯಿಸುವುದು, ಒತ್ತಡ ತರುವುದು, ಜನಾಭಿಪ್ರಾಯ ರೂಪಿಸುವುದು, ವೃತ್ತಿಪರ ಸಂಸ್ಥೆಗಳ ಅಭಿಪ್ರಾಯ ರೂಪಿಸುವುದು, ಸುದ್ದಿಸಂಸ್ಥೆಗಳ ನೌಕರರ ಅಭಿಪ್ರಾಯ ರೂಪಿಸುವುದು ಕೂಡ ಇದ್ದವು.
ಕಾಕತಾಳೀಯಎಂದಮಂತ್ರಿ
ಆ ಸಂಬಂಧವಾಗಿ ವಿ.ಸಿ. ಶುಕ್ಲ, ಶಾ ಆಯೋಗದ ಮುಂದೆ ಹೇಳಿದ್ದಿಷ್ಟು: “ನಾಲ್ಕು ಸಂಸ್ಥೆಗಳ ವಿಲೀನದ ಕುರಿತು ಚರ್ಚೆ ನಡೆಯುವಾಗಲೇ ಸರ್ಕಾರಿ ಕಚೇರಿಗಳ ಟೆಲಿಪ್ರಿಂಟರ್ಗಳ ಸಂಪರ್ಕವನ್ನು ಕಡಿದುಹಾಕಿದ್ದು ಕೇವಲ ಕಾಕತಾಳೀಯ.” ಅಂಚೆ-ತಂತಿ ಇಲಾಖೆಯ ಬಾಕಿ ವಸೂಲಿಗೆ ಸರ್ಕಾರ ಸುದ್ದಿಸಂಸ್ಥೆಗಳ ವಿರುದ್ಧ ತುರ್ತುಕ್ರಮವನ್ನು ಕೈಗೊಳ್ಳಲಿಲ್ಲ. ಏಕೆಂದರೆ ಆ ಸಂಸ್ಥೆಗಳ ಆರ್ಥಿಕ ಸ್ಥಿತಿ ಕಷ್ಟವಾಗಿತ್ತು. ಸ್ವಲ್ಪ ಸಮಯ ಒಲವು, ಅಂದರೆ ಒಂದು ಬಗೆಯ ಪೋಷಕತ್ವವನ್ನು (patronage) ತೋರಿಸಲಾಯಿತು. ಪೋಷಕತ್ವ ಬೇಡ ಎಂದು ನಿರ್ಧರಿಸಿದಂದಿನಿಂದ ಅಂಚೆ-ತಂತಿ ಇಲಾಖೆಯು ಬಾಕಿ ವಸೂಲಿಗೆ ಆರಂಭಿಸಿತು.
ಆಕಾಶವಾಣಿ ನಡೆಸಿದ ಬಾಕಿ ವಸೂಲಿಯ ಬಗ್ಗೆ ವಿವರಣೆ ನೀಡಿದ ವಿ.ಸಿ. ಶುಕ್ಲ ಅವರು, “ಸುದ್ದಿಸಂಸ್ಥೆಗಳ ಜೊತೆಗಿನ ಒಪ್ಪಂದದ ಅವಧಿ ಮುಗಿದಿತ್ತು; ಹೊಸ ಒಪ್ಪಂದ ಮಾಡಲಾಯಿತು. ಆದರೆ ಅದಕ್ಕೆ ಸಹಿ ಮಾಡಲಿಲ್ಲ. ಪಾವತಿಗಳನ್ನು ಅಡ್ಹಾಕ್ (ತಾತ್ಕಾಲಿಕ) ರೀತಿಯಲ್ಲಿ ಮಾಡಲಾಯಿತು. ಸಂಸ್ಥೆಗಳ ಆರ್ಥಿಕ ಸ್ಥಿತಿ ಕೆಟ್ಟದಾಗಿದ್ದ ಕಾರಣ ಪೂರ್ತಿ ಅಡ್ಹಾಕ್ ರೀತಿಯಲ್ಲಿ ಅವುಗಳಿಗೆ ೫ ಲಕ್ಷ ರೂ. ನೀಡಲಾಯಿತು” ಎಂದು ತಿಳಿಸಿದರು.
ಒತ್ತಡದಿಂದನಿವೃತ್ತಿ
ವಿಲೀನಕ್ಕೆ ಸಂಬಂಧಿಸಿ ಆಯೋಗದ ಮುಂದೆ ಹೇಳಿಕೆ ನೀಡಿದ ಯುಎನ್ಐ ಸಂಸ್ಥೆಯ ಸಂಪಾದಕ ಮತ್ತು ಜನರಲ್ ಮ್ಯಾನೇಜರ್ ಮೀರ್ಚಂದಾನಿ ಅವರು “ಸುಗ್ರೀವಾಜ್ಞೆಯನ್ನು ಸಚಿವ ಸಂಪುಟವು ತಿರಸ್ಕರಿಸಿದ್ದು ತನಗಾದ ಹಿನ್ನಡೆ ಎಂದು ತಿಳಿದ ಶುಕ್ಲ ಅವರು ವಿಲೀನಕ್ಕೆ ಸಂಬಂಧಿಸಿ ಸುದ್ದಿಸಂಸ್ಥೆಗಳ ಆಡಳಿತಗಳಿಗೆ ಕಿರುಕುಳ ನೀಡಲಾರಂಭಿಸಿದರು. ನಾನು ಅವರಿಗೆ ಅಸಮಾಧಾನವನ್ನು ಉಂಟುಮಾಡಿದೆ. ಸಂಪುಟವು ಸುಗ್ರೀವಾಜ್ಞೆಯನ್ನು ತಿರಸ್ಕರಿಸಿದ್ದಕ್ಕೆ ನಾನೇ ಕಾರಣವೆಂದು ಅವರು ನಂಬಿದ್ದರು. ವಿಲೀನದ ತಡೆಗಾಗಿ ನಾನು ಸಂಜಯಗಾಂಧಿ ಅವರನ್ನು ಕೂಡ ಭೇಟಿ ಮಾಡಿದ್ದೆ. ಆದ್ದರಿಂದ ಶುಕ್ಲ ಅವರ ಬೇಡಿಕೆ (ಆಗ್ರಹ) ಮೇರೆಗೆ ನಾನು ನಿವೃತ್ತನಾಗಬೇಕಾಯಿತು” ಎಂದರು.
ಅದೇ ಸಂಸ್ಥೆಯ ಅಧ್ಯಕ್ಷ ರಾಂ ತನೇಜ ಅವರು, ಮೀರ್ಚಂದಾನಿ ಅವರನ್ನು ನಿವೃತ್ತಿಗೊಳಿಸಲು ಶುಕ್ಲ ತನ್ನ ಮೇಲೆ ತುಂಬ ಒತ್ತಡ ಹಾಕಿದರೆಂದು ತಿಳಿಸಿದರು. ಆ ಬಗ್ಗೆ ಶುಕ್ಲ ಅವರು “ಮೀರ್ಚಂದಾನಿ ವಿಲೀನವನ್ನು ವಿರೋಧಿಸಿದ್ದು ನನಗೆ ಗೊತ್ತಿತ್ತು. ಅಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಅವರಿಗೆ ಸಂಸ್ಥೆಯಲ್ಲಿ ಸ್ಥಾಪಿತ ಹಿತಾಸಕ್ತಿ ಇತ್ತು. ಒಂದು ಏಕೀಕೃತ ರಾಷ್ಟ್ರೀಯ ಸುದ್ದಿಸಂಸ್ಥೆಯಲ್ಲಿ ನಂಬಿಕೆ ಇಲ್ಲದ ವ್ಯಕ್ತಿ ಅದಕ್ಕೊಂದು ತಡೆ ಎಂದು ನನಗೆ ಅನ್ನಿಸಿತ್ತು” ಎಂದು ಸಮರ್ಥಿಸಿಕೊಂಡರು.
ಪಿಟಿಐ ಅಧ್ಯಕ್ಷ ಪಿ.ಸಿ. ಗುಪ್ತ ಮತ್ತು ರಾಂ ತನೇಜ ಅವರು ನೀಡಿದ ಹೇಳಿಕೆಯಲ್ಲಿ “ಟೆಲಿಪ್ರಿಂಟರ್ ಸಂಪರ್ಕ ಕಡಿತ, ಆಕಾಶವಾಣಿಯ ಬಾಕಿ ಹಣ ಕೊಡದಿರುವುದು, ತುಂಬ ಬಾಕಿ ಮಾಡಿಕೊಂಡಿದ್ದಾರೆಂದು ಪತ್ರಿಕೆಗಳಲ್ಲಿ ಅಪಪ್ರಚಾರ ಮುಂತಾದ ರೀತಿಯಲ್ಲಿ ನಮ್ಮ ಮೇಲೆ ಸಚಿವರು ಒತ್ತಡ ತಂದರು” ಎಂದು ತಿಳಿಸಿದರು. ‘ಸುದ್ದಿಸಂಸ್ಥೆಗಳ ವಿಲೀನಕ್ಕೆ ಸುಗ್ರೀವಾಜ್ಞೆಗೆ ಹೊರತಾದ ವಿಧಾನ ಅನುಸರಿಸಿ ಎಂದು ಸಂಪುಟ ನನಗೆ ಡಿಸೆಂಬರ್ ೧೩ರಂದು ಸೂಚಿಸಿತ್ತು. ೪೧ ದಿನಗಳಲ್ಲಿ ನನ್ನ ಪ್ರಯತ್ನ ಫಲ ನೀಡಿತು’ ಎಂದು ಶುಕ್ಲ ಆಯೋಗಕ್ಕೆ ತಿಳಿಸಿದರು.
ಸರ್ಕಾರದನಿಗಾದಲ್ಲೇಕೆಲಸ
‘ಸಮಾಚಾರ್’ ಸ್ಥಾಪನೆಯಾದ ಮೇಲೆ ಸರ್ಕಾರಕ್ಕೆ ಸುದ್ದಿಗಳ ನಿಯಂತ್ರಣ, ನಿರ್ವಹಣೆ ಸುಲಭವಾಯಿತು. ಸಂಸ್ಥೆಯ ಆಡಳಿತ ಮತ್ತು ಸಂಪಾದಕೀಯ ಎರಡೂ ಸರ್ಕಾರದ ನಿಗಾದಲ್ಲೇ ಕಾರ್ಯನಿರ್ವಹಿಸಿದವು. ಸಮಾಚಾರ್ ಆಡಳಿತ ಮಂಡಳಿಯ ಅಧ್ಯಕ್ಷ ಜಿ. ಕಸ್ತೂರಿ ಅವರು (‘ದ ಹಿಂದು’ ಸಂಪಾದಕರು) ಹೇಳಿಕೆ ನೀಡಿ, “ಸಂಸ್ಥೆಯ ಕೆಲಸದಲ್ಲಿ ಸರ್ಕಾರವು ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಆಗಾಗ ಸರ್ಕಾರ ಮತ್ತು ಸಚಿವ ಶುಕ್ಲ ಸಲಹೆ ನೀಡುತ್ತಿದ್ದರು. ಅದನ್ನು ಅನುಸರಿಸಲೇಬೇಕಾಗಿತ್ತು. ಏಕೆಂದರೆ ಸರ್ಕಾರ ಆರಂಭದಿಂದಲೇ ಸಂಸ್ಥೆಯಲ್ಲಿತ್ತು; ಮತ್ತು ಸಮಾಚಾರ್ ಆರ್ಥಿಕವಾಗಿ ಗಟ್ಟಿಯಾಗಲು ಸರ್ಕಾರದ ನೆರವು ಬೇಕಿತ್ತು” ಎಂದು ಹೇಳಿದರು.
ಆದರೆ ಇಲಾಖೆಯ ದಾಖಲೆಗಳಿಂದ ತಿಳಿಯುವ ಅಂಶವೆಂದರೆ, ಮೂರು ಸಮಾಚಾರ್ ಸಮಿತಿಗಳನ್ನು ರಚಿಸುವ ಬಗ್ಗೆ (ಕಾಂಗ್ರೆಸ್ ನಾಯಕ) ಮಹಮ್ಮದ್ ಯೂನುಸ್ ಅವರಿಗೆ ಸಲಹೆ ನೀಡುವ ಮುನ್ನ ಕಸ್ತೂರಿ ಅವರು ಹೆಚ್ಚುವರಿ ಕಾರ್ಯದರ್ಶಿ ಕೆ.ಎನ್. ಪ್ರಸಾದ್ ಅವರೊಂದಿಗೆ ಚರ್ಚಿಸಿದ್ದರು. ಅದೇ ರೀತಿ ಕಾರ್ಯಕ್ರಮ ಪಟ್ಟಿಯ (ಅಜೆಂಡಾ) ಬಗ್ಗೆ ಪ್ರಸಾದ್ ಅವರು, ಯೂನುಸ್ ಮತ್ತು ಶುಕ್ಲ ಅವರ ಒಪ್ಪಿಗೆ ಪಡೆದಿದ್ದರು. ಅದರಂತೆ ಯೂನುಸ್ ಮುಂದೆ ಸಮಾಚಾರ್ ಆಡಳಿತ ಸಮಿತಿ ಸಭೆಗಳಲ್ಲಿ ಅಗತ್ಯ ಕ್ರಮಕೈಗೊಳ್ಳುತ್ತಿದ್ದರು. “ಸಮಾಚಾರ್ ಸಿಬ್ಬಂದಿಗಳ ಪಟ್ಟಿಯನ್ನು ಪರಿಶೀಲನೆಗಾಗಿ ಸರ್ಕಾರಕ್ಕೆ ಕಳುಹಿಸುತ್ತಿದ್ದೆವು. ಹಣಕಾಸಿಗೆ ಸಂಬಂಧಿಸಿ ನಾನು ಆಗಾಗ ಸರ್ಕಾರವನ್ನು ಸಂಪರ್ಕಿಸುತ್ತಿದ್ದೆ. ಆದರೆ ನಾನು ಸರ್ಕಾರದಿಂದ ನಿರ್ದೇಶನ ಪಡೆಯುತ್ತಿರಲಿಲ್ಲ” ಎಂದು ಸಮಾಚಾರ್ ಜನರಲ್ ಮ್ಯಾನೇಜರ್ ಡಬ್ಲ್ಯು. ಲಾಜರಸ್ ಶಾ ಆಯೋಗಕ್ಕೆ ತಿಳಿಸಿದರು. ಆದರೆ ಪಿ.ಸಿ. ಗುಪ್ತ ಮತ್ತು ರಾಂ ತನೇಜ ಅವರು (ಇಬ್ಬರೂ ಸಮಾಚಾರ್ ಸಮಿತಿ ಸದಸ್ಯರು) “ಆಡಳಿತದ ವಿವಿಧ ವಿಷಯಗಳಲ್ಲಿ ಸರ್ಕಾರದಿಂದ ಆದೇಶಗಳು ನಿರಂತರವಾಗಿ ಬರುತ್ತಿದ್ದವು” ಎಂದು ತಿಳಿಸಿದರು.
ಸಂಪಾದಕೀಯನಿಯಂತ್ರಣ
ಸಂಪಾದಕೀಯ ವಿಭಾಗದ ನಿಯಂತ್ರಣಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ ಆ ವಿಭಾಗದ ಪಿ.ಎಸ್. ಕಸ್ಬೇಕರ್, ಸಿ.ಪಿ. ಮಾಣಿಕ್ತಲಾ, ಸಿ.ಕೆ. ಅರೋರಾ, ಡಿ.ವಿ. ದೇಸಾಯಿ ಮತ್ತಿತರರು ಸರ್ಕಾರ ಮತ್ತು ಅಧಿಕಾರಿಗಳಿಂದ ಸೂಚನೆಗಳು ಬರುತ್ತಲೇ ಇದ್ದವು ಎಂದರು. ವರದಿಗಾರರಿಗೆ ‘ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಗೆ ಉತ್ತಮ ಪ್ರಚಾರ ನೀಡಬೇಕು; ಪ್ರತಿಪಕ್ಷಗಳ ಚಟುವಟಿಕೆಗಳಿಗೆ ಹೆಚ್ಚು ಪ್ರಚಾರ ನೀಡಬಾರದು’ ಎನ್ನುವ ಸೂಚನೆ ನೀಡಲಾಗಿತ್ತು. ಚುನಾವಣೆಯ ವೇಳೆ ಈ ಅಸಮತೋಲನವು ಹೆಚ್ಚಾಯಿತು. ಸಮಾಚಾರ್ ವರದಿಗಾರರು ಸಿದ್ಧಪಡಿಸಿದ ಮೂಲ ವರದಿ ಮತ್ತು ಎಡಿಟಾದ ವರದಿಗಳ ನಡುವೆ ತುಂಬ ವ್ಯತ್ಯಾಸ ಇರುತ್ತಿತ್ತು. ವಾರ್ತಾಇಲಾಖೆ ಕಾರ್ಯದರ್ಶಿ ಎಸ್.ಎಂ.ಎಚ್. ಬರ್ನಿ ಅವರು ನಡೆಸುವ ಸಮನ್ವಯ ಸಭೆಗಳಲ್ಲಿ ಸಮಾಚಾರ್ ಜನರಲ್ ಮ್ಯಾನೇಜರ್ ಲಾಜರಸ್, ಕಾರ್ಯಕಾರಿ ಸಮಿತಿ ಸದಸ್ಯ ಡಾ|| ರಾಜ್ ಕೆ. ನಿಗಮ್ ಕೂಡ ಭಾಗವಹಿಸುತ್ತಿದ್ದರು.
ಸಚಿವಾಲಯವು ಸಮಾಚಾರ್ನ ಸಂಪಾದಕೀಯ ಸ್ವಾತಂತ್ರ್ಯದಲ್ಲಿ ಕೈಹಾಕುತ್ತಿದ್ದದ್ದು ತನಗೆ ಗೊತ್ತಿಲ್ಲ ಎಂದು ಆಯೋಗಕ್ಕೆ ತಿಳಿಸಿದ ಹೆಚ್ಚುವರಿ ಕಾರ್ಯದರ್ಶಿ ಪ್ರಸಾದ್, ಆದರೆ ಸೆನ್ಸಾರ್ಶಿಪ್ ಮತ್ತು ಪತ್ರಿಕಾ ಹೇಳಿಕೆಗಳ ಬಗ್ಗೆ ಸಮಾಚಾರ್ಗೆ ಸೂಚನೆಗಳು ಬರುತ್ತಿದ್ದುದು ನಿಜ ಎಂದು ಒಪ್ಪಿಕೊಂಡರು. ಸೂಕ್ಷ್ಮಸ್ವರೂಪದ ವರದಿಗಳ (sensitive copy) ಬಗ್ಗೆ ತನಗೆ ತಿಳಿಸಿ ಎಂದು ಪ್ರಸಾದ್ ತನ್ನಲ್ಲಿ ಹೇಳಿದ್ದರೆಂದು ಲಾಜರಸ್ ತಿಳಿಸಿದರು. ಸರ್ಕಾರದ ಅಗತ್ಯಕ್ಕೆ ಅನುಗುಣವಾಗಿ ಸುದ್ದಿಗಳನ್ನು ತಿದ್ದುವುದಕ್ಕಾಗಿ (ಉದಾಹರಣೆಗೆ ಕಾಂಗ್ರೆಸಿಗೆ ಜಗಜೀವನರಾಮ್ ಅವರ ರಾಜೀನಾಮೆ) ಹೆಚ್ಚುವರಿ ಕಾರ್ಯದರ್ಶಿ ಪ್ರಸಾದ್ ಅವರಿಗೆ ತಿಳಿಸಬೇಕಿತ್ತು; ಸಚಿವ ಶುಕ್ಲ ಅವರು ಹೇಳಿದಂತೆ ತಾನಿದನ್ನು ಮಾಡುತ್ತಿದ್ದೆ ಎಂದು ಲಾಜರಸ್, ಶಾ ಆಯೋಗಕ್ಕೆ ತಿಳಿಸಿದರು.
ಪತ್ರಕರ್ತರಿಗೆಪೊಲೀಸ್ತಪಾಸಣೆ
ತುರ್ತುಪರಿಸ್ಥಿತಿಯ ವೇಳೆ ಬಗೆಬಗೆಯ ಹಿಂಸೆ-ಕಿರುಕುಳಗಳನ್ನು ಅನುಭವಿಸಿದವರಲ್ಲಿ ಪತ್ರಕರ್ತರು ಕೂಡ ಸೇರಿದ್ದಾರೆ. ಸರ್ಕಾರದ ಚಟುವಟಿಕೆಗಳನ್ನು ವರದಿ ಮಾಡುವುದಕ್ಕೆ ವರದಿಗಾರರು ಮತ್ತು ಕ್ಯಾಮರಾಮನ್ಗಳಿಗೆ ಎಕ್ರೆಡಿಟೇಶನ್ ಕಾರ್ಡ್ ನೀಡುವ ಕ್ರಮ ಹಿಂದಿನಿಂದ ಚಾಲ್ತಿಯಲ್ಲಿತ್ತು. ತುರ್ತುಪರಿಸ್ಥಿತಿ ಘೋಷಣೆಯಾದಾಗ ದೆಹಲಿಯ ಹಲವು ಪತ್ರಕರ್ತರ ಎಕ್ರೆಡಿಟೇಶನ್ ಕಾರ್ಡ್ಗಳನ್ನು ರದ್ದುಗೊಳಿಸಿದರು; ಅದರ ಪುನರ್ವಿಮರ್ಶೆ ಮಾಡುವುದಾಗಿ ತಿಳಿಸಲಾಯಿತು.
ವಾರ್ತಾ-ಪ್ರಸಾರ ಸಚಿವ ವಿ.ಸಿ. ಶುಕ್ಲ ಅವರು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಕೆ.ಎನ್. ಪ್ರಸಾದ್ ಅವರಿಗೆ ಎಕ್ರೆಡಿಟೇಶನ್ ಹೊಂದಿರುವ ಬಾತ್ಮೀದಾರರ ಒಂದು ಪಟ್ಟಿ ನೀಡಿ, ಇದರಲ್ಲಿ ಯಾರ್ಯಾರು ನಿಷೇಧಿತ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆಂದು ತಪಾಸಣೆ ನಡೆಸಿ ಎಂದು ಸೂಚಿಸಿದರು. ಇಂಟೆಲಿಜೆನ್ಸ್ ಬ್ಯೂರೋ (ಜಾಗೃತದಳ) ಮೂಲಕ ಪ್ರಸಾದ್ ತಪಾಸಣೆ ನಡೆಸಿ ಪಟ್ಟಿಯನ್ನು ಸಚಿವರಿಗೆ ಮರಳಿಸಿದರು. ಕಡತದ ಮೇಲೆ ಹೆಚ್ಚುವರಿ ಕಾರ್ಯದರ್ಶಿಯವರು “ಸಚಿವರು ಪಟ್ಟಿಯನ್ನು ನೋಡಿದ್ದಾರೆ; ಮತ್ತು ಎಕ್ರೆಡಿಟೇಶನ್ ಕಾರ್ಡ್ ನಿಯಮವನ್ನು ಅಂಗೀಕರಿಸಿದ್ದಾರೆ” ಎಂದು ಟಿಪ್ಪಣಿಯನ್ನು ಹಾಕಿದ್ದರು. ಸಚಿವರು ೩೩ ಬಾತ್ಮೀದಾರರ ಎಕ್ರೆಡಿಟೇಶನ್ ಕಾರ್ಡ್ಗಳನ್ನು ರದ್ದುಪಡಿಸಿದರು. ಕೆಲವರಿಗೆ ಪ್ರತಿಕೂಲವಾದ ತಪಾಸಣಾ ವರದಿ ಕಾರಣವಾದರೆ ಇತರರು ವ್ಯವಸ್ಥೆಯ (ಸರ್ಕಾರ) ವಿರೋಧಿ ನಿಲವು ಹೊಂದಿದ್ದು ಕಾರಣವಾಗಿತ್ತು. ಇದೆಲ್ಲವೂ ಶುಕ್ಲ ಅವರ ಸಮ್ಮತಿಯ ಮೇರೆಗೆ ನಡೆದಿತ್ತು.
ತುರ್ತುಪರಿಸ್ಥಿತಿಯ ವೇಳೆ ವಿದೇಶೀ ಬಾತ್ಮೀದಾರರ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಯಿತು. ಸರ್ಕಾರದ ನೀತಿಯನ್ನು ಅವರು ಒಪ್ಪಿಕೊಳ್ಳಬೇಕಿತ್ತು; ಮತ್ತು ಪ್ರಿ-ಸೆನ್ಸಾರ್ ಕಾನೂನಿಗೆ ತಮ್ಮ ಒಪ್ಪಿಗೆಯಿದೆ ಎನ್ನುವ ಬಾಂಡ್ಗೆ ಸಹಿ ಹಾಕಬೇಕಿತ್ತು. ಇದು ಸರ್ಕಾರದ ನೀತಿಯಾಗಿದ್ದು, ಸ್ವದೇಶಿ-ವಿದೇಶಿ ಎಂಬ ಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಅನ್ವಯವಾಗಿತ್ತು. ಭಾರತದಲ್ಲಿ ಕೆಲಸ ಮಾಡುವುದಾದರೆ ಅವರು ನಾಡಿನ ಶಾಸನವನ್ನು ಪಾಲಿಸಬೇಕೆಂದು ಶುಕ್ಲ ಹೇಳಿದರು. ವಿದೇಶೀ ಪತ್ರಿಕೆಗಳ ಕೆಲವು ಭಾರತೀಯ ಪ್ರತಿನಿಧಿಗಳಿಗೆ ಹೆಚ್ಚು ಕಿರುಕುಳ ನೀಡಿದ ಪ್ರಸಂಗಗಳು ಕೂಡ ಇವೆ. ಉದಾಹರಣೆಗೆ ಅಮೆರಿಕದ ‘ನ್ಯೂಸ್ವೀಕ್’ನ ಬಾತ್ಮೀದಾರ ರಾಮಾನುಜಂ ಅವರ ಟೆಲಿಫೋನ್ ಸಂಪರ್ಕವನ್ನು ಕಡಿತಗೊಳಿಸಿದ್ದಲ್ಲದೆ, ಆತನಿಗೆ ನೀಡಿದ್ದ ಮನೆಯನ್ನು ವಾಪಸ್ ಪಡೆದರು; ಪತ್ರಿಕೆ ನಿರ್ಬಂಧ ವಿಧಿಸಿದ ಅನಂತರದ ಭಾರತದ ಬಗೆಗಿನ ಯಾವುದೇ ವರದಿಗೆ ರಾಮಾನುಜಂ ಕಾರಣ ಅಲ್ಲವೆಂದು ‘ನ್ಯೂಸ್ವೀಕ್’ ವತಿಯಿಂದ ಭಾರತಸರ್ಕಾರಕ್ಕೆ ತಿಳಿಸಿದರೂ ಕೂಡ ಆತನ ಬಗ್ಗೆ ಕರುಣೆ ತೋರಿಸಲಿಲ್ಲ.
(ಸಶೇಷ)
ದೇಶದ ಜನತೆಯ ಬಾಯಿ ಮುಚ್ಚಿಸಿದ ಕಾಂಗ್ರೆಸ್ ಸರ್ಕಾರದ ತುರ್ತುಪರಿಸ್ಥಿತಿ
ಪ್ರಜಾಪ್ರಭುತ್ವವ್ಯವಸ್ಥೆಯಲ್ಲಿಚುನಾವಣೆಮೊದಲನೆಯಭಾಗವಾದರೆ, ಅನಂತರಸರ್ಕಾರದಪಾತ್ರ. ಚುನಾವಣೆವ್ಯವಸ್ಥೆಯಮೂಲಕಆಡಳಿತದಭಾಗವಾಗಲುಎಲ್ಲರಿಗೂಮುಕ್ತಅವಕಾಶವಿದೆಎಂದುಸಾಮಾನ್ಯವಾಗಿಹೇಳಲಾಗುತ್ತದೆ. ಗಾಂಧಿಯವರುಹೇಳಿದ್ದರು: “ಬಲಇರುವವರಿಗೆನೀಡುವಷ್ಟೆಅವಕಾಶವನ್ನುಬಲಹೀನರಿಗೂಪ್ರಜಾಪ್ರಭುತ್ವನೀಡುತ್ತದೆಎಂದುನಾನುತಿಳಿದಿದ್ದೇನೆ” ಎಂದು. ಈಹಿಂದೆಚರ್ಚೆನಡೆಸಿದಹಣದಶಕ್ತಿಯಆಧಾರದಲ್ಲೆಈಗಅನೇಕಬಲಹೀನರುಚುನಾವಣೆವ್ಯವಸ್ಥೆಯಿಂದಹೊರಗೆಹೋಗುತ್ತಾರೆ.
ಈಗಷ್ಟೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಹಬ್ಬ ಮುಗಿದಿದೆ. ಕರ್ನಾಟಕದ ಇತಿಹಾಸದಲ್ಲೆ ಅತಿ ಹೆಚ್ಚು ಎನ್ನಬಹುದಾದ ಶೇ. ೭೩.೧೯ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರ ಮೂಲಕ ಸ್ಪಷ್ಟ ಬಹುಮತದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸರ್ಕಾರಕ್ಕೆ ಅವಕಾಶ ನೀಡಿದ್ದಾರೆ. ಮುಖ್ಯಮಂತ್ರಿ ಸ್ಥಾನದ ಹಂಚಿಕೆ, ಅನಂತರದ ಹೊಂದಾಣಿಕೆಯಲ್ಲಿ ಯಾವುದೇ ತೊಂದರೆ ಮಾಡಿಕೊಳ್ಳದಿದ್ದರೆ ಮುಂದಿನ ಐದು ವರ್ಷಗಳವರೆಗೆ ಚುನಾವಣೆ ಇಲ್ಲದಂತೆ ಸರ್ಕಾರ ನಡೆಯಬೇಕು. ಇದೆಲ್ಲದರ ನಡುವೆ ಒಂದು ಪ್ರಶ್ನೆಯೆಂದರೆ, ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟು ಮಟ್ಟಿಗೆ ಅರ್ಥವಂತವಾಗಿದೆ?
ಹೀಗೆ ಹೇಳಿದ ತಕ್ಷಣ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಒಕ್ಕೂಟದ (ಎನ್ಡಿಎ) ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಯಾರೂ ಕಣ್ಣು ಕೆಂಪಾಗಿಸಿಕೊಳ್ಳಬೇಕಿಲ್ಲ. ಇದು ಒಂದು ಸಾಮಾನ್ಯ ಪ್ರಶ್ನೆ. ಚುನಾವಣೆಯ ಪ್ರಕ್ರಿಯೆ ನಿಜವಾಗಿಯೂ ಪ್ರಜಾತಾಂತ್ರಿಕವಾಗಿ ನಡೆಯುತ್ತದೆಯೇ? ಹೀಗೆ ಯಾರಾದರೂ ಎದೆ ಮುಟ್ಟಿ ಹೇಳಿಕೊಳ್ಳಲು ಸಾಧ್ಯವೇ?
ದೇಶ ಕಂಡ ಮುತ್ಸದ್ದಿ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಅವರು ಒಮ್ಮೆ ಹೇಳಿದ್ದರು: “ಪ್ರತಿ ಹೊಸ ಶಾಸಕನೂ ಸುಳ್ಳು ಹೇಳುವ ಮೂಲಕ ತನ್ನ ರಾಜಕೀಯ ಜೀವನವನ್ನು ಆರಂಭಿಸುತ್ತಾನೆ. ಅದೆಂದರೆ ಚುನಾವಣಾ ಖರ್ಚಿನ ಲೆಕ್ಕದ ವರದಿ” ಎಂದಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವವರು ಹಣದ ಹೊಳೆ ಹರಿಸಬಾರದು, ನಿಯಂತ್ರಣದಲ್ಲಿರಬೇಕು ಎಂಬ ಕಾರಣಕ್ಕೆ ಒಬ್ಬ ಅಭ್ಯರ್ಥಿಗೆ ೪೦ ಲಕ್ಷ ರೂ. ಮಿತಿ ವಿಧಿಸಲಾಗಿದೆ. ಅಷ್ಟರೊಳಗೇ ಆತ ಚುನಾವಣೆಯನ್ನು ಪೂರ್ಣಗೊಳಿಸಬೇಕು ಎನ್ನುವುದು ಉದ್ದೇಶ. ಇದಕ್ಕಾಗಿ ಚುನಾವಣಾ ಅಧಿಕಾರಿಗಳು ಅಭ್ಯರ್ಥಿಗಳ ಮೇಲೆ ‘ಹದ್ದಿನ ಕಣ್ಣು’ ಇಟ್ಟಿರುತ್ತೇವೆ ಎಂದು ಹೇಳುತ್ತಾರೆ. ಆದರೆ ಈ ಹದ್ದಿನ ಕಣ್ಣಿನ ಎದುರೇ ಕೋಟ್ಯಂತರ ರೂ. ಖರ್ಚಾಗುತಿರುತ್ತದೆ, ಅದಕ್ಕೆ ಗೊತ್ತೇ ಆಗುವುದಿಲ್ಲ.
ರಾಜಕೀಯ ಪರಿಭಾಷೆಯಲ್ಲಿ ತಿರುಮಂಗಲಂ ಸೂತ್ರ ಎಂಬ ಮಾತೊಂದಿದೆ. ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂ. ಕರುಣಾನಿಧಿ ಅವಧಿಯಲ್ಲಿ ನಡೆದ ಘಟನೆ ಇದು. ಯಾರು ಉತ್ತರಾಧಿಕಾರಿ ಆಗಬೇಕು ಎಂದು ಕರುಣಾನಿಧಿ ಅವರ ಇಬ್ಬರು ಪುತ್ರರಾದ ಅಳಗಿರಿ ಹಾಗೂ ಈಗ ತಮಿಳುನಾಡು ಮುಖ್ಯಮಂತ್ರಿಯಾಗಿರುವ ಸ್ಟಾಲಿನ್ ನಡುವೆ ಪೈಪೋಟಿ ನಡೆದಿತ್ತು. ಹಿರಿಯಪುತ್ರ ಅಳಗಿರಿಗಿಂತಲೂ ಕಿರಿಯಪುತ್ರ ಸ್ಟಾಲಿನ್ ಮೇಲೆ ಕರುಣಾನಿಧಿ ಅವರಿಗೆ ಹೆಚ್ಚು ವಿಶ್ವಾಸ. ಇದೇ ಸಮಯಕ್ಕೆ ೨೦೦೯ರಲ್ಲಿ ತಿರುಮಂಗಲಂ ಉಪಚುನಾವಣೆ ಘೋಷಣೆಯಾಯಿತು. ಹಾಗೆ ನೋಡಿದರೆ ಉಪಚುನಾವಣೆಯಲ್ಲಿ ಕರುಣಾನಿಧಿ ಅವರ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಗೆಲ್ಲುವುದು ಬಹುತೇಕ ಖಚಿತವಾಗಿತ್ತು. ಆದರೂ ಈ ಚುನಾವಣೆಯಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡುವ ಮೂಲಕ ಅಪ್ಪನ ಮನವೊಲಿಸಬೇಕು ಎಂದು ಅಳಗಿರಿ ನಿರ್ಧರಿಸಿದರು.
ಪಕ್ಷದ ಸಂಪೂರ್ಣ ವ್ಯವಸ್ಥೆಯನ್ನು ಆ ಚುನಾವಣೆಯಲ್ಲಿ ತೊಡಗಿಸಿದರು. ಬೂತ್ಮಟ್ಟದಲ್ಲಿ ಕಾರ್ಯಕರ್ತರನ್ನು ನಿಯೋಜನೆ ಮಾಡಿ ಪ್ರತಿ ಮನೆಯ ಮತದಾರರ ತಲೆಗಳನ್ನು ಗುರುತಿಸಿದರು. ಚುನಾವಣಾ ಆಯೋಗದ ಕಣ್ಣಿಗೆ ಬೀಳದಂತೆ ಪ್ರತಿ ಮತದಾರನಿಗೆ ಎನ್ವಲಪ್ ಕವರ್ನಲ್ಲಿ ೫೦೦ ರೂ. ತಲಪಿಸಿದರು. ಚುನಾವಣೆಯಲ್ಲಿ ಡಿಎಂಕೆ ಅಭ್ಯರ್ಥಿ ಲತಾ ಜಯಗಳಿಸಿದರು. ಆದರೆ ತಾನು ಚುನಾವಣೆ ಎದುರಿಸಲು ಬಳಸುತ್ತಿದ್ದ ಮಾರ್ಗವನ್ನು ಬಿಟ್ಟು ವಾಮಮಾರ್ಗವನ್ನು ಅನುಸರಿಸಿದ ಎಂದು ಕರುಣಾನಿಧಿ ಬೇಸರ ವ್ಯಕ್ತಪಡಿಸಿದರು. ವಿಪರ್ಯಾಸ ಎಂದರೆ ಅನಂತರದ ದಿನಗಳಲ್ಲಿ ಡಿಎಂಕೆ ಹಾಗೂ ಎದುರಾಳಿ ಎಐಎಡಿಎಂಕೆ ಸಹ ಇದೇ ‘ತಿರುಮಂಗಲಂ ಸೂತ್ರ’ವನ್ನು ಮುಂದಿನ ಎಲ್ಲ ಚುನಾವಣೆಗಳಲ್ಲಿ ಅಳವಡಿಸಿಕೊಂಡವು. ಅಷ್ಟೆ ಅಲ್ಲ, ದೇಶಾದ್ಯಂತ ಇದೀಗ ಎಲ್ಲ ಕಡೆಯೂ ತಿರುಮಂಗಲಂ ಸೂತ್ರ ನಡೆಯುತ್ತಿದೆ.
ಇದೀಗ ಕರ್ನಾಟಕದಲ್ಲಿ ಮುಕ್ತಾಯವಾದ ಚುನಾವಣೆಯಲ್ಲೂ ಹಣದ ಹೊಳೆ ಹರಿದಿದೆ. ಚುನಾವಣಾ ಆಯೋಗ ಈ ಬಾರಿ ಚುನಾವಣಾ ಘೋಷಣೆ ಮಾಡುವ ಸಂದರ್ಭದಲ್ಲಿ ಎರಡು ಸವಾಲುಗಳ ಬಗ್ಗೆ ಉಲ್ಲೇಖಿಸಿತ್ತು. ಕರ್ನಾಟಕದಲ್ಲಿ ಚುನಾವಣೆ ನಡೆಸುವಾಗ ಎದುರಾಗುವ ಎರಡು ಸವಾಲೆಂದರೆ, ಮೊದಲನೆಯದು, ನಗರ ಮತದಾರರು ಮತಗಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸದೆ ಇರುವುದನ್ನು ಸರಿಪಡಿಸುವುದು. ಎರಡನೆಯದು, ಹಣದ ಹೊಳೆ ಹರಿಯುವುದನ್ನು ತಡೆಯುವುದು. ಮತದಾನ ಪ್ರಮಾಣ ಗಣನೀಯವಾಗಿಯಲ್ಲದಿದ್ದರೂ ಸ್ವಲ್ಪವಾದರೂ ಹೆಚ್ಚಾಗಿದೆ ಎಂದು ಹೇಳಬಹುದು. ಹಾಗೆಯೇ ಚುನಾವಣಾ ಆಯೋಗ ವಶಪಡಿಸಿಕೊಂಡಿರುವ ಮೊತ್ತವೂ ಬಹು ಹೆಚ್ಚಾಗಿದೆ. ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗುವ ವೇಳೆಗೆ ಸುಮಾರು ೪೦೦ ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ನಗದು, ಮದ್ಯ, ಚಿನ್ನ, ಬೆಳ್ಳಿ, ಉಡುಗೊರೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಾರಿ ಚುನಾವಣೆ ನೀತಿಸಂಹಿತೆ ಜಾರಿಯಾಗುವ ಮುನ್ನವೇ ೫೮ ಕೋಟಿ ರೂ. ಮೌಲ್ಯದ ನಗದು, ಇನ್ನಿತರೆ ವಸ್ತುಗಳನ್ನು ಚುನಾವಣಾ ಆಯೋಗ ವಶಕ್ಕೆ ಪಡೆದಿತ್ತು. ೨೦೧೮ರಲ್ಲಿ ವಶಕ್ಕೆ ಪಡೆದಿದ್ದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಚುನಾವಣೆ ಘೋಷಣೆಗೆ ಮುನ್ನವೇ ಸೀಜ್ ಮಾಡಿತ್ತು. ಇದು ದೊಡ್ಡ ಮೊತ್ತದಂತೆ ಕಾಣುತ್ತದೆ. ಆದರೆ ನಿಜವಾಗಿಯೂ ಇದು ಒಟ್ಟು ಚುನಾವಣೆಯಲ್ಲಿ ನಡೆಯುವ ವಹಿವಾಟಿನ ಶೇ. ೪-೫ ಮಾತ್ರ. ಏಕೆಂದರೆ ರಾಜಕೀಯ ಪಕ್ಷಗಳ ಮುಖಂಡರು ಹೇಳುವ ಪ್ರಕಾರ ಒಂದು ದೊಡ್ಡ ಪಕ್ಷ ಒಂದು ಕ್ಷೇತ್ರಕ್ಕೆ ಸರಾಸರಿ ೨೦ ಕೋಟಿ ರೂ. ವೆಚ್ಚ ಮಾಡುತ್ತದೆ. ಈ ರೀತಿ ಕರ್ನಾಟಕದಲ್ಲಿ ಎರಡು ದೊಡ್ಡ ಪಕ್ಷಗಳು, ಒಂದು ಸಣ್ಣ ಪಕ್ಷ ಇವೆ. ಇದೆಲ್ಲವನ್ನೂ ಸೇರಿಸಿದರೆ ಕರ್ನಾಟಕದ ಚುನಾವಣಾ ಬಜೆಟ್ ೧೦ ಸಾವಿರ ಕೋಟಿ ರೂ. ಆಗುತ್ತದೆ. ಇದಕ್ಕೆ ಎಲ್ಲೂ ಲೆಕ್ಕ ಸಿಗುವುದಿಲ್ಲವಾದ್ದರಿಂದ ನಿರೂಪಿಸುವುದು ಅಸಾಧ್ಯ. ಈ ಪರಿಯ ಹಣದ ಹೊಳೆ ಹರಿಯುತ್ತಿರುವುದಕ್ಕೆ ರಾಜಕೀಯ ಪಕ್ಷಗಳನ್ನು ದೂಷಿಸಬಹುದು, ದೂಷಿಸಬೇಕು. ಆದರೆ ಜನಸಾಮಾನ್ಯರ ಬೆಂಬಲ, ಸಹಕಾರ ಇಲ್ಲದೆ ಇದು ಹೇಗೆ ನಡೆಯುತ್ತದೆ? ೨೦೦೮, ೨೦೦೯ ಹಾಗೂ ೨೦೧೪ರ ಚುನಾವಣೆಗಳ ಕುರಿತು ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ (ಸಿಎಂಎಸ್) ಎಂಬ ಸಂಸ್ಥೆ ಮಾಡಿದ ಸಮೀಕ್ಷೆ ಪ್ರಕಾರ ದೇಶದ ಐದನೇ ಒಂದು ಭಾಗದಷ್ಟು ಮತದಾರರು ಹಣ ಪಡೆದಿದ್ದಾರೆ. ಅಲ್ಲಿಗೆ, ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿ, ತಾನು ೪೦ ಲಕ್ಷ ರೂ. ಒಳಗೆ ವೆಚ್ಚ ಮಾಡಿದ್ದೇನೆ ಎಂದು ಸುಳ್ಳು ಲೆಕ್ಕ ನೀಡುವ ಮೂಲಕ ರಾಜಕೀಯ ಜೀವನ ಆರಂಭಿಸುತ್ತಾನೆ.
ಸರ್ಕಾರಗಳುನಡೆಯುವುದುಪ್ರಜಾತಾಂತ್ರಿಕವಾಗಿಯೇ?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮೊದಲನೆಯ ಭಾಗವಾದರೆ, ಅನಂತರ ಸರ್ಕಾರದ ಪಾತ್ರ. ಚುನಾವಣೆ ವ್ಯವಸ್ಥೆಯ ಮೂಲಕ ಆಡಳಿತದ ಭಾಗವಾಗಲು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಗಾಂಧಿಯವರು ಹೇಳಿದ್ದರು: “ಬಲ ಇರುವವರಿಗೆ ನೀಡುವಷ್ಟೆ ಅವಕಾಶವನ್ನು ಬಲಹೀನರಿಗೂ ಪ್ರಜಾಪ್ರಭುತ್ವ ನೀಡುತ್ತದೆ ಎಂದು ನಾನು ತಿಳಿದಿದ್ದೇನೆ” ಎಂದು. ಈ ಹಿಂದೆ ಚರ್ಚೆ ನಡೆಸಿದ ಹಣದ ಶಕ್ತಿಯ ಆಧಾರದಲ್ಲೆ ಈಗ ಅನೇಕ ಬಲಹೀನರು ಚುನಾವಣೆ ವ್ಯವಸ್ಥೆಯಿಂದ ಹೊರಗೆ ಹೋಗುತ್ತಾರೆ.
ಯಾವುದೇ ವ್ಯವಸ್ಥೆಗೆ ಹೊಸಬರು ಹಾಗೂ ಹಣವಿಲ್ಲದವರು ಪ್ರವೇಶಿಸಲು ಪ್ರತಿಬಂಧ ಇದ್ದರೆ ಅದನ್ನು ನೈಸರ್ಗಿಕ ವ್ಯವಸ್ಥೆ ಎಂದು ಹೇಳಲಾಗದು. ಒಂದು ಉದ್ಯಮವು ಯಾವುದೋ ಕುಟುಂಬದ ಅಥವಾ ಸಂಸ್ಥೆಯ ಏಕಚಕ್ರಾಧಿಪತ್ಯಕ್ಕೆ ಅವಕಾಶ ನೀಡಬಾರದು. ಇದಕ್ಕಾಗಿ ಅನೇಕ ಕಾನೂನುಗಳನ್ನು ರೂಪಿಸಲಾಗಿದೆ, ಆಯೋಗಗಳಿವೆ. ಆದರೆ ರಾಜಕೀಯದಲ್ಲಿ ಸಾಂಸ್ಥಿಕ ವ್ಯವಸ್ಥೆಯನ್ನು ಸುಭದ್ರಗೊಳಿಸಲು, ಸ್ವತಂತ್ರವಾಗಿ ಜನರ ಸೇವೆ ಮಾಡಬಯಸುವವರನ್ನು ತಡೆಯುವಂತೆಯೇ ಎಲ್ಲ ವ್ಯವಸ್ಥೆಗಳಿವೆ.
ಉದಾಹರಣೆಗೆ ಕರ್ನಾಟಕದಲ್ಲಿ ೧೯೫೭ರಲ್ಲಿ ೩೫ ಪಕ್ಷೇತರ ಶಾಸಕರು ಆಯ್ಕೆಯಾಗಿದ್ದರು. ಇದೇ ಸಂಖ್ಯೆ ೧೯೬೨ರಲ್ಲಿ ೨೭, ೧೯೬೭ರಲ್ಲಿ ೪೧, ೧೯೭೨ರಲ್ಲಿ ೨೦ ಶಾಸಕರು ಆಯ್ಕೆಯಾದರು. ಅನಂತರ ನಿರಂತರ ಇಳಿಮುಖವಾಗಿಯೇ ಸಾಗಿ ೨೦೧೮ರಲ್ಲಿ ಕೇವಲ ಒಬ್ಬ ಸ್ವತಂತ್ರ ಶಾಸಕರು ಆಯ್ಕೆಯಾದರು. ಇದೀಗ ೨೦೨೩ರ ಚುನಾವಣೆಯಲ್ಲಿ ಕೇವಲ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. (ಲತಾ ಮಲ್ಲಿಕಾರ್ಜುನ – ಹರಪನಹಳ್ಳಿ, ಕೆ. ಪುಟ್ಟಸ್ವಾಮಿಗೌಡ – ಗೌರಿಬಿದನೂರು). ಸ್ವತಂತ್ರ ಅಭ್ಯರ್ಥಿಗಳು ಪಡೆದ ಒಟ್ಟು ಮತದ ಪ್ರಮಾಣ ೧೯೫೭ರ ಶೇ. ೨೮.೭೪ರಿಂದ ಇದೀಗ ಶೇ. ೪ರ ಆಸುಪಾಸಿಗೆ ಬಂದಿದೆ.
ಸ್ವತಂತ್ರ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಜಯಗಳಿಸಲು ಬಹುತೇಕ ಅಸಾಧ್ಯ ಎನ್ನುವ ವಾತಾವರಣವನ್ನು ನಿರ್ಮಾಣ ಮಾಡಲಾಗಿದೆ. ಮೊದಲನೆಯದಾಗಿ ಈಗಾಗಲೆ ಚರ್ಚೆ ನಡೆಸಿದ ಹಣದ ಬಲದ ಪರಿಣಾಮ. ದೊಡ್ಡ ಪಕ್ಷಗಳಿಗೆ ಹಣವಿರುತ್ತದೆ, ಅವರು ಅದನ್ನು ಹಂಚುವ ಮೂಲಕ, ದೊಡ್ಡ ಪ್ರಚಾರ ಕಾರ್ಯಕ್ರಮ ನಡೆಸುವ ಮೂಲಕ, ಜಾಹೀರಾತಿನ ಮೂಲಕ ಜನರನ್ನು ಸೆಳೆಯುತ್ತಾರೆ. ಎರಡನೆಯದು, ಸರ್ಕಾರ ನಡೆಯುವ ರೀತಿಯಲ್ಲೇ, ಸ್ವತಂತ್ರ ಅಭ್ಯರ್ಥಿಗಳು ಜಯಿಸದಂತೆ ನಿರ್ಬಂಧಿಸಲಾಗುತ್ತದೆ.
ಶಾಸಕ ಎಂದರೆ ಏನು? ಆತನು ಒಂದು ಕ್ಷೇತ್ರವನ್ನು ಪ್ರತಿನಿಧಿಸುವ ಕರ್ನಾಟಕ ವಿಧಾನಸಭೆಯ ಸದಸ್ಯ ಎಂದಲ್ಲವೇ? ಆತನು ತನ್ನ ಕ್ಷೇತ್ರವನ್ನೂ ಸೇರಿ ಇಡೀ ರಾಜ್ಯದ ಎಲ್ಲ ಕ್ಷೇತ್ರಗಳಿಗೂ ಅನುಕೂಲವಾಗುವ ನೀತಿಗಳನ್ನು ವಿಧಾನಸಭೆಯಲ್ಲಿ ರೂಪಿಸಬೇಕು. ಇದರಿಂದ ಒಟ್ಟಾರೆ ವ್ಯವಸ್ಥೆಯಲ್ಲಿ ಸುಧಾರಣೆ ಆಗಿ ಜನರ ಜೀವನ ಹಸನಾಗಬೇಕು. ಆದರೆ ಈಗಿನ ಶಾಸಕರು ತಾವು ತಮ್ಮ ಕ್ಷೇತ್ರಕ್ಕಷ್ಟೇ ಸೀಮಿತವಾಗಿದ್ದಾರೆ. ಶಾಸನ ರಚನೆಯ ಕೆಲಸವನ್ನು ಬಿಟ್ಟು ಸ್ಥಳೀಯ ಸಂಸ್ಥೆಯ ಸದಸ್ಯನ ರೀತಿ ಕೇವಲ ರಸ್ತೆ, ಚರಂಡಿ ಸಮಸ್ಯೆಗಳನ್ನು ಬಗೆಹರಿಸಲು ಖುದ್ದಾಗಿ ನಿಲ್ಲುತ್ತಿದ್ದಾನೆ.
ಈ ಸಮಸ್ಯೆಗಳನ್ನು ಪರಿಹರಿಸುವುದು ಶಾಸಕನ ಕೆಲಸ ಅಲ್ಲ ಎನ್ನುವುದು ಈ ಮಾತಿನ ಅರ್ಥವಲ್ಲ. ಆದರೆ ಇವೆಲ್ಲ ನಿಜವಾಗಿಯೂ ನಗರ ಪಾಲಿಕೆ, ಗ್ರಾಮ ಪಂಚಾಯಿತಿ ಸದಸ್ಯರು ಮಾಡಬೇಕಾದ ಕೆಲಸ. ಅವರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಿ, ಅವರಿಂದ ಸೂಕ್ತ ಕೆಲಸ ತೆಗೆಸುವುದು ಶಾಸಕನ ಕೆಲಸವಲ್ಲವೇ? ಆದರೆ ಸರ್ಕಾರದಲ್ಲಿ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಎಂಬ ಅನುದಾನ ನೀಡಲಾಗುತ್ತದೆ. ಯೋಜನೆಗಳ ಮೂಲಕ ಎಲ್ಲ ಕ್ಷೇತ್ರಗಳಿಗೆ, ಯೋಜನೆಗಳಿಗೆ ನೀಡುವ ಹಣವಲ್ಲದೆ, ಪ್ರತಿ ಕ್ಷೇತ್ರದ ಶಾಸಕನಿಗೆ ವಾರ್ಷಿಕ ೨ ಕೋಟಿ ರೂ. ನಿಧಿ ಮೀಸಲಿರುತ್ತದೆ. ಈ ಹಣವನ್ನು ಆತ ಸೂಚಿತ ಸಾರ್ವಜನಿಕ ಕಾರ್ಯಗಳಿಗೆ ವಿನಿಯೋಗ ಮಾಡಬಹುದು. ಈ ನಿಧಿಯ ಮೂಲಕ ಶಾಸಕನಿಗೆ, ಹಣವನ್ನು ಎಲ್ಲಿ ವೆಚ್ಚ ಮಾಡಬೇಕು ಎಂಬ ನಿರ್ಧಾರ ಕೈಗೊಳ್ಳುವ ಕಾರ್ಯಾಂಗದ ಕಾರ್ಯವನ್ನೂ ನೀಡಲಾಯಿತು. ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ, ಮುಖ್ಯಮಂತ್ರಿಯವರ ವಿವೇಚನಾಧಿಕಾರ ನಿಧಿ ಎಂಬ ಹಣವಿದೆ. ಯಾವುದೇ ಮಾನದಂಡ, ಷರತ್ತು ಇಲ್ಲದೆ ಮುಖ್ಯಮಂತ್ರಿ ತನಗೆ ತೋಚಿದ ಮೊತ್ತವನ್ನು ಶಾಸಕರ ಕ್ಷೇತ್ರಗಳಿಗೆ ನೀಡಬಹುದು. ‘ಈ ಎರಡು ನಿಧಿಗಳನ್ನು ಸಾರ್ವಜನಿಕ ಕಾರ್ಯಗಳಿಗೆ ತಾನೆ ವಿನಿಯೋಗಿಸುವುದು? ಇದರಲ್ಲಿ ತಪ್ಪೇನಿದೆ?’ ಎಂದು ಹೇಳಬಹುದು.
ಆದರೆ ಇದರಿಂದ ಶಾಸಕನು ತನ್ನ ಸ್ವಾತಂತ್ರ್ಯವನ್ನೇ ಕಳೆದುಕೊಳ್ಳುತ್ತಾನೆ. ಸರ್ಕಾರ ಏನೇ ತಪ್ಪು ಮಾಡಿದರೂ, ಭ್ರಷ್ಟಾಚಾರ ನಡೆಸಿದರೂ ಪ್ರಶ್ನೆ ಮಾಡದೆ ಸುಮ್ಮನೆ ಕೂರುತ್ತಾನೆ. ಸರ್ಕಾರವು ತನ್ನ ಕಡೆಯ ಹಾಗೂ ವಿರೋಧ ಪಕ್ಷದ ಶಾಸಕರಿಗೂ ವಿಶೇಷ ಅನುದಾನಗಳನ್ನು ನೀಡುತ್ತ ಎಲ್ಲರ ಬಾಯಿಮುಚ್ಚಿಸುವ ಕೆಲಸ ಮಾಡುತ್ತದೆ. ಈ ರೀತಿಯ ವಿಶೇಷ ಅನುದಾನದ ಅನುಕೂಲವು ಪಕ್ಷೇತರ ಅಥವಾ ಸ್ವತಂತ್ರ ಅಭ್ಯರ್ಥಿಗಳಿಗೆ ಇರುವುದಿಲ್ಲ. ಸರ್ಕಾರದ ಭಾಗವಾಗಬಹುದಾದ ಪಕ್ಷದ ಶಾಸಕನನ್ನೇ ಜನರು ಸಹಜವಾಗಿ ಇಷ್ಟಪಡುತ್ತಾರೆ. ಅಲ್ಲಿಗೆ ಗಾಂಧಿ ಹೇಳಿದಂತೆ, ಎಲ್ಲರಿಗೂ ಸಮಾನ ಅವಕಾಶ ಸಿಗುವ ಸಾಧ್ಯತೆ ಮರೀಚಿಕೆಯಾಯಿತು.
ವ್ಯವಸ್ಥೆಯೊಳಗಿನಪ್ರಜಾಪ್ರಭುತ್ವ
ಮೊದಲನೆಯದು ಚುನಾವಣೆಯಲ್ಲಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ, ಎರಡನೆಯದು ಆಡಳಿತದಲ್ಲಿ ಧ್ವನಿಯನ್ನು ಅಡಗಿಸುವ ಕೆಲಸ. ಮೂರನೆಯ ಹಾಗೂ ಕೊನೆಯ ಅಂಶವೆAದರೆ ವ್ಯವಸ್ಥೆಯಲ್ಲಿನ ದೋಷ. ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಒಂದು ವಿಚಿತ್ರ ಪದ್ಧತಿ ಇದೆ. ‘ವಿಪ್’ ನೀಡುವುದು ಎಂದು ಇದನ್ನು ಹೇಳಲಾಗುತ್ತದೆ. ಸರ್ಕಾರ ಒಂದು ಮಸೂದೆಯನ್ನು ಅಂಗೀಕರಿಸಬೇಕು ಎಂದು ಸದನಕ್ಕೆ ಮನವಿ ಮಾಡುತ್ತದೆ. ಸದನವು ಅಂಗೀಕರಿಸಿದರೆ ಅದು ಕಾಯ್ದೆ ಆಗುತ್ತದೆ. ಅಂಗೀಕರಿಸುವ ಮುನ್ನ ಎಲ್ಲ ಶಾಸಕರೂ ಧ್ವನಿಮತದ ಮೂಲಕ ತಮ್ಮ ಸಮ್ಮತಿಯನ್ನು ಸೂಚಿಸುತ್ತಾರೆ. ಆದರೆ ಕೆಲವು ಕ್ಲಿಷ್ಟಕರ ಸನ್ನಿವೇಶದಲ್ಲಿ ಮತದಾನ ಮಾಡಬೇಕಾಗುತ್ತದೆ. ಸಹಜವಾಗಿ ಸರ್ಕಾರದ ಕಡೆಗೆ ಬಹುಮತ ಇರುತ್ತದೆ, ಅವರೇ ಗೆಲ್ಲಬೇಕು ಅಲ್ಲವೇ? ಆದರೆ ಎಲ್ಲಿ ತನ್ನ ಕಡೆಯ ಶಾಸಕರು ತನ್ನ ನಿರ್ಧಾರಕ್ಕೆ ವಿರುದ್ಧವಾಗಿ ಮತ ಚಲಾಯಿಸುತ್ತಾರೋ ಎಂದು ಸರ್ಕಾರಗಳಿಗೆ ಭಯವಿರುತ್ತದೆ. ಅದಕ್ಕಾಗಿ ವಿಪ್ ಹೊರಡಿಸಲಾಗುತ್ತದೆ. ಸರ್ಕಾರದ ಪರವಾಗಿಯೇ ಮತ ಚಲಾಯಿಸಬೇಕು ಎಂದು ಅದರಲ್ಲಿ ತಿಳಿಸಿರಲಾಗುತ್ತದೆ. ಹಾಗೊಂದು ವೇಳೆ ವಿಪ್ ಉಲ್ಲಂಘನೆ ಮಾಡಿದರೆ ಆತನನ್ನು ಸದಸ್ಯತ್ವದಿಂದ ಅಮಾನತುಗೊಳಿಸಲು ಅವಕಾಶ ಇರುತ್ತದೆ.
ಇದೇ ವ್ಯವಸ್ಥೆ ರಾಜ್ಯಸಭೆ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲೂ ಇದೆ. ಶಾಸಕರು ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ವಿಪ್ ಹೊರಡಿಸಲಾಗುತ್ತದೆ. ಅಭ್ಯರ್ಥಿ ತಾನು ಚಲಾಯಿಸಿದ ಮತವನ್ನು ತನ್ನ ಪಕ್ಷದ ಏಜೆಂಟ್ಗೆ ತೋರಿಸಬೇಕು. ಹಾಗೇನಾದರೂ ಆತ ವಿರುದ್ಧ ಮತ ಚಲಾಯಿಸಿದ್ದು ಕಂಡುಬಂದರೆ ಆತನನ್ನು ಅಮಾನತು ಮಾಡಲು ಅವಕಾಶವಿರುತ್ತದೆ. ಚುನಾವಣೆ ಎಂದರೆ ಏನು, ಮತದಾನ ಎಂದರೆ ಏನು ಎಂಬ ಮೂಲಭೂತ ಪ್ರಜಾಪ್ರಭುತ್ವ ಅಂಶಗಳಿಗೆ ಈ ವ್ಯವಸ್ಥೆ ವಿರುದ್ಧವಾಗಿದೆ. ಒಬ್ಬ ಶಾಸಕ ತನ್ನ ಇಚ್ಛೆಯಂತೆ ಮತದಾನ ಮಾಡಲಾಗದಿದ್ದರೆ ಆ ಮತದಾನಕ್ಕೆ ಯಾವ ಬೆಲೆ ಇದೆ? ಇದೆಲ್ಲವೂ ಪಕ್ಷಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮಾಡಿಕೊಂಡಿರುವ ವ್ಯವಸ್ಥೆಗಳು. ಪ್ರಜಾತಾಂತ್ರಿಕ ವ್ಯವಸ್ಥೆ ಇದೆ ಎಂದು ಮೇಲ್ನೋಟಕ್ಕೆ ಕಂಡರೂ, ಆ ವ್ಯವಸ್ಥೆಗೆ ತದ್ವಿರುದ್ಧವಾದ ಅನೇಕ ಕಾನೂನಾತ್ಮಕ, ಕಾನೂನುಬಾಹಿರ ಚಟುವಟಿಕೆಗಳು ನಿರಂತರ ನಡೆದಿವೆ. ನಿಜವಾಗಲೂ ಪ್ರಜಾಪ್ರಭುತ್ವ ವ್ಯವಸ್ಥೆ ಜಯಗಳಿಸಬೇಕು ಎಂದರೆ ಇಂತಹ ಮೂಲಭೂತ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕು. ಇಲ್ಲದಿದ್ದರೆ, ನಾವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ, ಅನುಭವ ಮಂಟಪದ ಮೂಲಕ ವಿಶ್ವಕ್ಕೆ ಪ್ರಜಾಪ್ರಭುತ್ವ ಪರಿಚಯಿಸಿದ ರಾಷ್ಟ್ರ ಎನ್ನುವುದು ಕೇವಲ ಒಣ ಹೇಳಿಕೆಗಳಾಗುತ್ತವೆ.
ಕರ್ನಾಟಕದ ಜನತೆ ಹದಿನಾರನೆಯ ವಿಧಾನಸಭೆಯನ್ನು ಆಯ್ಕೆ ಮಾಡಿದ್ದಾರೆ. ಚುನಾವಣಾ ಫಲಿತಾಂಶಗಳು ಹೊರಬಿದ್ದು ಈ ಲೇಖನ ಬರೆಯುವ ಹೊತ್ತಿಗೆ ಐದು ದಿನಗಳಾಗುತ್ತಿವೆ. ರಾಜ್ಯಕ್ಕೆ ಹೊಸಸರ್ಕಾರ ದಕ್ಕುವುದರಲ್ಲಿ ನಾಲ್ಕೈದು ದಿನಗಳ ವಿಳಂಬವಾದದ್ದು ಅಸಹಜವೇನಲ್ಲ. ೨೦೧೪ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ನಿಚ್ಚಳ ಬಹುಮತ ಪಡೆದು ವಾರ ಕಳೆದರೂ ಸರ್ಕಾರ ರಚನೆಯಾಗಿರಲಿಲ್ಲ. ಕರ್ನಾಟಕವನ್ನೇ ತೆಗೆದುಕೊಂಡರೆ ೨೦೧೮ರ ಚುನಾವಣೆಗಳಾಗಿ ಎರಡು ವಾರಗಳು ಕಳೆದರೂ ರಾಜ್ಯದ ಜನತೆ ಹೊಸಸರ್ಕಾರಕ್ಕಾಗಿ ಕಾಯುತ್ತಲೇ ಇದ್ದುದನ್ನು ನೆನಪಿಸಿಕೊಳ್ಳಬಹುದು. ಆದರೆ ಆ ಎರಡು ಪ್ರಕರಣಗಳಿಗೂ ಇಂದಿನ ಕರ್‘ನಾಟಕ’ಕ್ಕೂ ವ್ಯತ್ಯಾಸವಿದೆ. ಉತ್ತರಪ್ರದೇಶದಲ್ಲಿ ರಾಜಕೀಯ ರಂಗದಾಚೆಯಿಂದ ಹೊಸಮುಖವೊಂದನ್ನು ತಂದು ದೆಹಲಿಯ ಗದ್ದುಗೆಗೆ ಕೀಲಿಕೈ ಎಂದು ಕರೆಸಿಕೊಳ್ಳುತ್ತಿದ್ದರೂ ದಶಕಗಳಿಂದಲೂ ಅವ್ಯವಸ್ಥೆಯ ಆಗರವಾಗಿದ್ದ ರಾಜ್ಯ ರಾಜಕಾರಣವನ್ನು ಸ್ವಚ್ಛಗೊಳಿಸಲು ಬಿಜೆಪಿ ಕೇಂದ್ರೀಯ ನಾಯಕತ್ವ ನಿರ್ಣಾಯಕ ನಡೆಯಲ್ಲಿ ತೊಡಗಿದ್ದರಿಂದ ಹೊಸಸರ್ಕಾರ ರಚನೆ ವಿಳಂಬಗೊಂಡಿತ್ತು. ಅತಂತ್ರ ವಿಧಾನಸಭೆಗೆ ಮುಖಾಮುಖಿಯಾದ ಕರ್ನಾಟಕದಲ್ಲಿ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರೂ ಸಂಪುಟ ರಚಿಸಿ ಸರ್ಕಾರವನ್ನು ಸ್ಥಾಪಿಸುವ ಅವಕಾಶ ಸಿಗದೆ ರಾಜೀನಾಮೆ ನೀಡಿದ್ದು, ಅನಂತರ ಜೆಡಿ(ಎಸ್) ಮತ್ತು ಕಾಂಗ್ರೆಸ್ ಒಟ್ಟುಗೂಡಿ, ಸಮ್ಮಿಶ್ರಸರ್ಕಾರ ರಚನೆಗೆ ಸಾಂವಿಧಾನಿಕ ಅವಕಾಶ ಪಡೆದಾಗ್ಯೂ ಎರಡೂ ಪಕ್ಷಗಳ ನಡುವೆ ಖಾತೆಗಳ ಕ್ಯಾತೆಯಾಗಿ ಸರ್ಕಾರ ರಚನೆ ಮುಂದುಮುಂದಕ್ಕೆ ಹೋಗುತ್ತಲೇ ಇತ್ತು.
ಉತ್ತರಪ್ರದೇಶದಲ್ಲಿ ಬಿಜೆಪಿ ಕೇಂದ್ರೀಯ ನಾಯಕತ್ವದ ಲೆಕ್ಕಾಚಾರಿಕ ಅಪಾಯ ನಿರ್ವಹಣಾ ನಡೆ ಅದ್ಭುತ ಯಶಸ್ಸು ಕಂಡು ರಾಜ್ಯದ ರಾಜಕೀಯ, ಆಡಳಿತಾತ್ಮಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮುಖವೇ ಊಹಿಸಲಾಗದಿದ್ದ ಮಟ್ಟಕ್ಕೆ ಈ ಆರು ವರ್ಷಗಳಲ್ಲಿ ಬದಲಾಗಿಹೋಗಿರುವುದನ್ನೂ, ಆ ಪ್ರಕ್ರಿಯೆ ಡಬಲ್ ಎಂಜಿನ್ ಸಾಮರ್ಥ್ಯದಲ್ಲಿ ವೇಗವಾಗಿ ಮುಂದುವರಿಯುತ್ತಿರುವುದನ್ನೂ ನಾವು ನೋಡುತ್ತಲೇ ಇದ್ದೇವೆ. ಇದಕ್ಕೆ ವಿರುದ್ಧವಾಗಿ ಕರ್ನಾಟಕದಲ್ಲಿ ಅವಕಾಶವಾದಿ ರಾಜಕಾರಣಿಗಳು ನಡೆಸಿದ ರಾಜಕೀಯ ದೊಂಬರಾಟ ಒಂದೂವರೆ ವರ್ಷದಲ್ಲಿ ನೆಲಕಚ್ಚಿ, ಸರ್ಕಾರ ರಚನೆಯ ಸಾಮರ್ಥ್ಯ ಬಿಜೆಪಿಯ ಪಾಲಿಗೆ ದಕ್ಕಿದ್ದನ್ನೂ ಕಂಡಿದ್ದೇವೆ. ಇಂದಿನ ಕರ್ನಾಟಕದ ಸ್ಥಿತಿ ಇವೆರಡಕ್ಕಿಂತಲೂ ಹಲವು ಬಗೆಯಲ್ಲಿ ಭಿನ್ನ.
ಕಳೆದ ಮೂರೂವರೆ ವರ್ಷಗಳು ರಾಜ್ಯದ ಚುಕ್ಕಾಣಿ ಹಿಡಿದ ಬಿಜೆಪಿ ರಾಜ್ಯದಲ್ಲಿನ ಹಣದುಬ್ಬರ ಪ್ರಮಾಣ ಮತ್ತು ನಿರುದ್ಯೋಗ ಸ್ಥಿತಿಯನ್ನು ರಾಷ್ಟ್ರೀಯ ಸರಾಸರಿಗಿಂತ ಕ್ರಮವಾಗಿ ೨% ಮತ್ತು ೫% ಕೆಳಗೆ ಇರಿಸಿದರೂ, ಜಾಗತಿಕ ವರ್ಚಸ್ವೀ ರಾಜಕೀಯ ನೇತಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಉಸಿರುಗಟ್ಟುವ ವೇಗ ಮತ್ತು ಒತ್ತಡದಲ್ಲಿ ಪ್ರಚಾರ ನಡೆಸಿದರೂ ಬಿಜೆಪಿಗೆ ದಕ್ಕಿರುವುದು ಕಳೆದ ಹತ್ತೊಂಬತ್ತು ವರ್ಷಗಳಲ್ಲೇ ಅತ್ಯಂತ ಕಡಮೆ ಸ್ಥಾನಗಳು. ಅದಕ್ಕೆ ವಿರುದ್ಧವಾಗಿ ರಾಹುಲ್ಗಾಂಧಿಯವರ ವಿದೂಷಕ ನಡೆನುಡಿಗಳು, ಪ್ರಿಯಾಂಕಾಗಾಂಧಿಯವರ ವೈಯಕ್ತಿಕ ವರ್ಚಸ್ಸಿನ ವೃದ್ಧಿಯೇ ಪ್ರಧಾನವಾದ ಕಸರತ್ತುಗಳು, ಸೋನಿಯಾಗಾಂಧಿಯವರ ಕೊನೆಗಳಿಗೆಯ ಎಡವಟ್ಟು ಉಕ್ತಿಗಳು ಮತ್ತು ಒಟ್ಟಾರೆ ಕಾಂಗ್ರೆಸ್ ಪಕ್ಷದ ಪ್ರಶ್ನಾರ್ಹ ಆಶ್ವಾಸನೆಗಳು; ಇವೆಲ್ಲ ಇದ್ದೂ ಚುನಾವಣಾ ಪ್ರಣಾಳಿಕೆಯ ಹೊರತಾಗಿಯೂ ಆ ಪಕ್ಷ ಮೂವತ್ತೈದು ವರ್ಷಗಳ ನಂತರ ನಿಚ್ಚಳ ಬಹುಮತ ಪಡೆದಿದೆ ಮತ್ತು ಅದು ಬಿಜೆಪಿ ಸಾಧಿಸಿದ್ದಕ್ಕಿಂತಲೂ ಎರಡುಪಟ್ಟು ಹೆಚ್ಚಾಗಿದೆ.
ಹಾಗಿದ್ದರೆ ಕರ್ನಾಟಕದಲ್ಲಿ ನಡೆದದ್ದೇನು? ರಾಷ್ಟ್ರೀಯ ಮಟ್ಟದಲ್ಲಿ ೫೯% ಸಮ್ಮತಿ ಪ್ರಮಾಣ ಗಳಿಸಿ ಸಮೀಪದ ಪ್ರತಿಸ್ಪರ್ಧಿ ರಾಹುಲ್ಗಾಂಧಿಯವರಿಗಿಂತ ಆರುಪಟ್ಟು ಹೆಚ್ಚು ಮುಂದಿರುವ ನರೇಂದ್ರ ಮೋದಿಯವರ ವರ್ಚಸ್ಸು ಕುಗ್ಗುತ್ತಿದೆಯೇ? ‘ಮೋದಿ ಮ್ಯಾಜಿಕ್’ನ ಅಂತ್ಯದ ಆರಂಭವೇ ಇದು? ರಾಷ್ಟ್ರರಾಜಕಾರಣದಲ್ಲಿ ಅಪ್ರಸ್ತುತತೆಯ ದಾರಿಗಿಳಿದಿದ್ದ ರಾಹುಲ್ಗಾಂಧಿಯವರಿಗೆ ಕರ್ನಾಟಕದ ಜನತೆ ಮರುಜೀವ ನೀಡಿದ್ದಾರೆಯೇ? – ಇವು ಕರ್ನಾಟಕ ಚುನಾವಣಾ ಫಲಿತಾಂಶಕ್ಕೆ ಕಾರಣಗಳನ್ನು ರಾಜ್ಯದಾಚೆ ಹುಡುಕುವ ಕೆಲವು ಪ್ರಯತ್ನಗಳು ಸೃಷ್ಟಿಸಿರುವ ಪ್ರಶ್ನೆಗಳು. ಇನ್ನು ಬಿಜೆಪಿ ಹಿನ್ನಡೆ ಮತ್ತು ಕಾಂಗ್ರೆಸ್ ಮುನ್ನಡೆಗೆ ರಾಜ್ಯದೊಳಗೆ ಕಾರಣ ಹುಡುಕುವ ಕೆಲವು ಪ್ರಯತ್ನಗಳು ನೀಡುವ ಚಿತ್ರಣಗಳಲ್ಲೊಂದು ರಾಜ್ಯದ ಜನತೆ ಬಿಜೆಪಿಸರ್ಕಾರ ಸೃಷ್ಟಿಸಿಕೊಟ್ಟಿರುವ ಐತಿಹಾಸಿಕ ಉತ್ತಮ ಜೀವನಮಟ್ಟವನ್ನು ನಿರ್ಲಕ್ಷಿಸಿ, ಕಾಂಗ್ರೆಸ್ ಕಣ್ಣಮುಂದೆ ಅಲ್ಲಾಡಿಸಿದ ಅವಾಸ್ತವಿಕ ಆಶ್ವಾಸನೆಗಳಿಗೆ ಬಲಿಬಿದ್ದು “ಮೇಲಿನ ಮೋಡ ನೋಡಿ ಸೇದೋ ಬಾವಿಯನ್ನು ಕೆಡಿಸಿದಂತಹ ಎಡವಟ್ಟು ಕೆಲಸ” ಮಾಡಿದ್ದಾರೆಯೇ?
ಇವೆಲ್ಲ ಪ್ರಶ್ನೆಗಳಿಗೆ ಒಂದೇ ಪದದ ಉತ್ತರ – ಒಂದು ದೊಡ್ಡ “ಇಲ್ಲ.’’
ಹಾಗಿದ್ದರೆ ಇಂದಿನ ಕರ್ನಾಟಕದ ನಾಟಕದ ವಿಮರ್ಶೆಗಿರುವ ಸೂಕ್ತ ಮಾನದಂಡಗಳೇನು? ರಂಗಸ್ಥಳವನ್ನು ನಾವು ಯಾವ ಕೋನದಿಂದ ವೀಕ್ಷಿಸಬೇಕು?
ನಿಷ್ಪಕ್ಷಪಾತ ಮನಃಸ್ಥಿತಿಯಿಂದ ಈ ಪ್ರಶ್ನೆಯನ್ನು ಗಂಭೀರವಾಗಿ ವಿಶ್ಲೇಷಿಸಲು ಹೋದರೆ ಒಂದಕ್ಕಿಂತ ಹೆಚ್ಚು ಕಹಿಸತ್ಯಗಳನ್ನು ಅನಿವಾರ್ಯವಾಗಿ ಹೇಳಲೇಬೇಕಾಗುತ್ತದೆ.
ಅದೆಷ್ಟೋ ಕನಸುಗಳೊಂದಿಗೆ ೧೯೫೬ರಲ್ಲಿ ಮೈಸೂರು ರಾಜ್ಯವಾಗಿ ಉದಯಿಸಿ, ಹದಿನೇಳರ ಜಾರುವ ನೆಲದಲ್ಲಿ ಕರ್ನಾಟಕವೆಂದು ದೇಶದ ಕಣ್ಸೆಳೆಯುವ ಹೊತ್ತಿಗೆ ಸ್ವಾತಂತ್ರ್ಯ, ಸ್ವಾವಲಂಬನೆ, ಆತ್ಮಗೌರವ, ಬಡತನ ನಿರ್ಮೂಲನೆ, ಸ್ವಚ್ಛ ಆಡಳಿತಗಳೆಂಬ ರೊಮ್ಯಾಂಟಿಕ್ ಮೌಲ್ಯಗಳೆಲ್ಲ್ಲ ಬಣ್ಣ ಕಳೆದುಕೊಂಡು ತಗಡುಗಳಾಗಿಹೋಗಿದ್ದವು. ಮೊದಮೊದಲು ನಾಚಿಕೆಯಲ್ಲಿ ಮುಖ ಮುಚ್ಚಿಕೊಳ್ಳುತ್ತಿದ್ದ ‘ಸಮಾಜವಾದಿಗಳ’ ಭ್ರಷ್ಟಾಚಾರ ಬೀದಿಯಲ್ಲಿ ಬೆತ್ತಲೆ ಕುಣಿಯಲೂತೊಡಗಿತ್ತು. ಹೀಗೆ ಕಾಂಗ್ರೆಸ್ಸಿಗರು ಗರೀಬಿ ಹಠಾವೋ ಎಂದು ಘೋಷಣೆ ಕೂಗುತ್ತಲೇ ತಮ್ಮ ಹಾಗೂ ಸ್ವಜನರ ಗರೀಬಿಯನ್ನು ಹಠಾಯಿಸಿಕೊಳ್ಳುವುದರಲ್ಲಿ ನಿರತರಾಗಿಹೋಗಿದ್ದರು. “ನಮ್ಮ ಜನರಿಗೆ ಉಪಕಾರ ಮಾಡದಿದ್ದರೆ ನಾನು ಮುಖ್ಯಮಂತ್ರಿಯಾಗಿದ್ದು ಏನು ಪ್ರಯೋಜನ?’’ ಎಂದು ಮುಖ್ಯಮಂತ್ರಿಯಾಗಿ ಆರ್. ಗುಂಡೂರಾವ್ ಕೇಳಿದಾಗ, “ನಿಮ್ಮ ಜನರನ್ನೆಲ್ಲ್ಲ ಒಂದು ಲಾರಿಯಲ್ಲಿ ತುಂಬಿ ಗುಂಡ್ಲುಪೇಟೆಗೋ ಚಾಮರಾಜನಗರಕ್ಕೋ ಬಿಟ್ಟು ಬನ್ನಿ” ಎಂದು ನಜೀರ್ಸಾಬ್ರಿಗೆ ಲಂಕೇಶ್ ಹೇಳಿದಾಗ ಸ್ವಜನಪಕ್ಷಪಾತ ಯಾವ ಮಟ್ಟದಲ್ಲಿದೆಯೆಂದು ನಾವೆಲ್ಲ ಬೆರಗುಗೊಂಡೆವು. ಅದೇ ಆವಧಿಯಲ್ಲಿ ‘ಮೌಲ್ಯಾಧಾರಿತ’ ಆಡಳಿತವೆಂಬ ಕನಸು ಬಿತ್ತಿದ ರಾಮಕೃಷ್ಣ ಹೆಗಡೆಯವರ ಮೌಲ್ಯ ಟೆಲಿಫೋನ್ ತಂತಿಗಳಲ್ಲಿ ಹರಿದುಹೋದದ್ದನ್ನು ಕಂಡು ನಾವು ಇನ್ನಷ್ಟು ಕನಲಿಹೋದೆವು. ಆಮೇಲೆ ಗೌಡರ ಗದ್ಲ, ತಂದೆ-ಮಕ್ಕಳ ಅಧಿಕಾರದಾಹಗಳನ್ನೂ ಕಂಡದ್ದಾಯಿತು ಬಿಡಿ. ಬಿಜೆಪಿಯ ಬೆನ್ನೇರಿ ಕುರ್ಚಿಗೆ ಜಾರಿಕೊಂಡ ಮಗರಾಯ ತಂದೆಯ ಮಾತು ಕೇಳಿ ವಿಶ್ವಾಸಘಾತಕತನ ತೋರಿ ಪಿತೃವಾಕ್ಯಪರಿಪಾಲನೆ ಮಾಡಿದಾಗ ರಾಜಕಾರಣ ಈ ಬಗೆಯ ಕೊಚ್ಚೆಯೇ ಎಂದು ದಿಗ್ಭ್ರಮೆಗೊಂಡೂಬಿಟ್ಟೆವು.
ಆನಂತರ ಬಿಜೆಪಿ ಯುಗ ಆರಂಭವಾದರೂ ಈ ಹದಿನೈದು ವರ್ಷಗಳಲ್ಲಿ ಆ ಪಕ್ಷಕ್ಕೆ ರಾಜ್ಯದ ಜನತೆ ಎಂದೂ ನಿಚ್ಚಳ ಬಹುಮತ ನೀಡಲಿಲ್ಲ ಎನ್ನುವುದನ್ನೂ ಗುರುತಿಸಬೇಕು. ಪರಿಣಾಮವಾಗಿ ನಡೆದ ಆಪರೇಷನ್ ಕಮಲಕ್ಕೆ ಗಣಿಧಣಿಗಳ ಹಣದ ಹೊಲಿಗೆ ಬಿದ್ದು ಎಲ್ಲ ಕಾಗೆಗಳೂ ಕಪ್ಪು ಎನ್ನುವಂತೆ ಎಲ್ಲ ರಾಜಕಾರಣಿಗಳೂ ಭ್ರಷ್ಟರೇ ಎಂದು ಮುಖ ತಿರುವಿದವರೆಷ್ಟೋ ಜನ. ಗೌಡರ ಗದ್ಲದಲ್ಲಿ ತನ್ನ ಕೂಗೇನೂ ಕೇಳದು ಎಂದು ಜೆಡಿಎಸ್ ತೊರೆದು ಕಾಂಗ್ರೆಸ್ ಪಾಳಯ ಸೇರಿ ಕನಸಿನ ನನಸಿಗೆ ಹತ್ತಿರಾಗುತ್ತಿದ್ದ ಎಸ್. ಸಿದ್ದರಾಮಯ್ಯ ಅಕ್ಟೋಬರ್ ೧೨, ೨೦೧೦ರಂದು ವಿಧಾನಸಭೆಯಲ್ಲಿ ಮೇಜು ಹತ್ತಿ ತೋಳೇರಿಸಿ ಕುಣಿದು ರಾಜ್ಯದ ಮುಂದಿನ ರಾಜಕಾರಣದ ಒಂದು ಟ್ರೇಲರ್ ಬಿಡುಗಡೆ ಮಾಡಿದರು. ಎರಡೂವರೆ ವರ್ಷಗಳಲ್ಲಿ ಸಿನೆಮಾ ‘ಸಿದ್ಧ’ಗೊಂಡು ರಿಲೀಸ್ ಸಹ ಆಯಿತು. ಅನಂತರದ ಐದು ವರ್ಷಗಳ ಕಾಂಗ್ರೆಸ್ ಆಡಳಿತ ಹಲವು ಅಧ್ವಾನಗಳ ಸರಮಾಲೆ. ತಥಾಕಥಿತ ಪ್ರಗತಿಪರರ ಅಟ್ಟಹಾಸ, ಸೆಕ್ಯೂಲರಿಸ್ಟರ ಕೋಮುವಾದಿ ಕಿಡಿಗೇಡಿತನ, ಧಾರ್ಮಿಕ ಕಂದರವನ್ನು ಆಳ-ಅಗಲಗೊಳಿಸುವ ಸರ್ಕಾರದ ನೀತಿಗಳು ಕಳೆದ ಚುನಾವಣೆಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ತರಬಹುದೆಂಬ ನಿರೀಕ್ಷೆ ಸುಳ್ಳಾದದ್ದು ಮತದಾರ ಎಸೆಯುವ ವಿವಿಧ ಗೂಗ್ಲಿಗಳಲ್ಲೊಂದು.
ಇಲ್ಲೊಂದು ಅಚ್ಚರಿಯ ವಾಸ್ತವವನ್ನು ಗಮನಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಆಧಿಕಾರ ಗಳಿಸಲಿ ಕಳೆದುಕೊಳ್ಳಲಿ, ಅದರ ಮತ ಪ್ರಮಾಣ ಯಾವಾಗಲೂ ಬಿಜೆಪಿ ಗಳಿಸಿದ್ದಕ್ಕಿಂತ ಹೆಚ್ಚಾಗಿರುತ್ತದೆ. ಕಳೆದ ಚುನಾವಣೆಗಳಲ್ಲಿಯೂ ಬಿಜೆಪಿ ಮೂರಂಕೆ ದಾಟಿ ಅತಿ ದೊಡ್ಡ ಪಕ್ಷವಾಗಿ ಎದ್ದು ನಿಂತರೂ ಮತ ಪ್ರಮಾಣದಲ್ಲಿ ಅದು ಕಾಂಗ್ರೆಸ್ಗಿಂತ ಹಿಂದಿತ್ತು.
ಇಷ್ಟು ಪೂರ್ವಭಾವಿ ಅರಿವಿನೊಂದಿಗೆ ಪ್ರಸಕ್ತ ಚುನಾವಣೆಗಳನ್ನು ವಿಶ್ಲೇಷಿಸೋಣ.
ಈ ಬಾರಿಯ ಹಣಾಹಣಿಯಲ್ಲಿ ವರ್ಚಸ್ಸು ಕಳೆದುಕೊಂಡ ಕಾಂಗ್ರೆಸ್ ಕೇಂದ್ರೀಯ ನಾಯಕತ್ವ, ವರ್ಚಸ್ಸು ಗಳಿಸಿಕೊಳ್ಳಲು ಪ್ರಯತ್ನಿಸುತ್ತ ಸಾಗಿದ ಕಾಂಗ್ರೆಸ್ ರಾಜ್ಯ ನಾಯಕತ್ವ ಒಂದು ಕಡೆಯಿದ್ದರೆ, ಇನ್ನೊಂದು ಕಡೆ ವರ್ಚಸ್ಸು ವೃದ್ಧಿಸಿಕೊಂಡ ಬಿಜೆಪಿ ಕೇಂದ್ರೀಯ ನಾಯಕತ್ವ ಮತ್ತು ಅದಷ್ಟೇ ಸಾಕು, ತನಗೆ ವರ್ಚಸ್ಸಿನ ಉಸಾಬರಿಯೇನೂ ಬೇಡ ಎಂದು ತಿಳಿದ ರಾಜ್ಯ ಬಿಜೆಪಿ ಇದ್ದವು. ಮೊದಲಿಗೆ ರಾಜ್ಯ ಬಿಜೆಪಿ ವರ್ಚಸ್ಸು ಕಳೆದುಕೊಂಡ ಬಗೆಯನ್ನು ನೋಡೋಣ. ಬಿ.ಎಸ್. ಯಡಿಯೂರಪ್ಪನವರ ಬಗ್ಗೆ ರಾಜ್ಯ/ಕೇಂದ್ರ ಬಿಜೆಪಿ ನಾಯಕತ್ವಕ್ಕೆ ಯಾವುದೇ ನಕಾರಾತ್ಮಕ ಭಾವನೆ, ಅದಕ್ಕೆ ಕಾರಣ ನಿಜವಾದದ್ದೇ ಇರಲಿ ಅಥವಾ ಕಲ್ಪಿತವೇ ಇರಲಿ, ರಾಜ್ಯದ ಏಕೈಕ ವರ್ಚಸ್ವಿ ಮುಖ ಆ ಹಿರಿಯ ನಾಯಕರೇ ಎನ್ನುವುದು ನಿರ್ವಿವಾದ. ಅವರನ್ನು ನಾಯಕತ್ವದಿಂದ ಇಳಿಸಿದಾಗ ಅವರೇ ಸೂಚಿಸಿದ ಬಸವರಾಜ ಬೊಮ್ಮಾಯಿ ಬಿಜೆಪಿಗರಿಗೇ ಸಹ್ಯ ಮುಖವೆನಿಸಲಿಲ್ಲ. ಯಡಿಯೂರಪ್ಪನವರ ಸ್ಥಾನವನ್ನು, ಅವರನ್ನು ಸರಿಗಟ್ಟುವ ಹಾಗೆ ಭರ್ತಿ ಮಾಡುವಂತಹ ನಾಯಕನೊಬ್ಬನನ್ನು ಸೃಷ್ಟಿಸಿಕೊಳ್ಳಲಾಗದ್ದು ಬಿಜೆಪಿಯ ಅತಿ ದೊಡ್ಡ ಬಲಹೀನತೆಯೇ ಸರಿ. ಬೊಮ್ಮಾಯಿಯವರಿಗೆ ಮೋದಿ ತಮ್ಮ ವರ್ಚಸ್ಸನ್ನು ಕಡ ನೀಡಿ ತಕ್ಕಡಿ ತೂಗಿಸುತ್ತಾರೆಂದು ಪಕ್ಷದಲ್ಲಿ ಯಾರಾದರೂ ತಿಳಿದಿದ್ದರೆ ಅವರನ್ನು ಚುನಾವಣಾ ರಾಜಕಾರಣದಲ್ಲಿ ಅನನುಭವಿಗಳೆನ್ನಬೇಕು. ರಾಷ್ಟ್ರರಾಜಕಾರಣದಲ್ಲಿ ಹೆಚ್ಚಿನ ಮತದಾರರ ಕಣ್ಮಣಿಯಾದ ಮೋದಿಯವರ ವರ್ಚಸ್ಸು ಲೋಕಸಭಾ ಚುನಾವಣೆಗಳಲ್ಲಿ ಮಾಡುವ ಮೋಡಿಯನ್ನು ವಿಧಾನಸಭಾ ಚುನಾವಣೆಗಳಲ್ಲಿ ಮಾಡಲಾರದು. ಅವರ ಸ್ವಂತದ ರಾಜ್ಯವಾದ ಗುಜರಾತ್ನಲ್ಲಿ ಅದು ನಡೆದರೂ ಇತರೆಡೆ ಅದು ನಡೆಯುವುದಿಲ್ಲ. ಅದು ಕರ್ನಾಟಕದಲ್ಲಿ ೨೦೧೮ರಲ್ಲಿ; ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಡ್ಗಳಲ್ಲಿ ಅದೇ ವರ್ಷದ ಕೊನೆಯಲ್ಲಿ ಮತ್ತು ಮರುವರ್ಷ ಮಹಾರಾದಲ್ಲಿ ಸಾಬೀತಾಗಿದೆ. ಇಂದಿರಾಗಾಂಧಿಯವರ ಕಾಲಕ್ಕಿಂತ ಚುನಾವಣಾ ರಾಜಕಾರಣ ಅದೆಷ್ಟೋ ಮುಂದೆ ಸಾಗಿಬಿಟ್ಟಿದೆ. ಉತ್ತರಪ್ರದೇಶ ಹಾಗೂ ಅಸ್ಸಾಂನಲ್ಲಿ ಬಿಜೆಪಿ ಸತತ ಎರಡನೆಯ ಬಾರಿ ಗೆಲವು ಸಾಧಿಸಿದ್ದು ಸ್ಥಳೀಯ ನಾಯಕತ್ವದ ವರ್ಚಸ್ಸಿನಿಂದ.
ಯಾವುದೇ ರಾಜಕೀಯ ಪಕ್ಷಕ್ಕೆ ಅದರದೇ ಆದ ಸಣ್ಣದೋ ದೊಡ್ಡದೋ ನಿಷ್ಠಾವಂತ ಬೆಂಬಲಿಗರ ಗುಂಪೊಂದಿರುತ್ತದೆ. ಅವರು ತಮ್ಮ ಪಕ್ಷದ ಸರ್ಕಾರದಿಂದ ಪುಕ್ಕಟೆ ಸೌಲಭ್ಯಗಳನ್ನು ಬಯಸುವುದಿಲ್ಲ. ಅವರು ನಿರೀಕ್ಷಿಸುವುದು ಸ್ಥಾಪಿತ ಮೌಲ್ಯಗಳಿಗೆ ತಮ್ಮ ಪಕ್ಷ ಹಾಗೂ ಸರ್ಕಾರದ ನಿರಂತರ ನಿಷ್ಠೆಯನ್ನಷ್ಟೇ. ಬಿಜೆಪಿಯ ಆ ಬಗೆಯ ನಿಷ್ಠಾವಂತ ಬೆಂಬಲಿಗರು ಬಯಸುವುದು ಹಿಂದೂ/ಭಾರತೀಯ ಮೌಲ್ಯಗಳಿಗೆ ಪಕ್ಷದ ಹಾಗೂ ಸರ್ಕಾರದ ಮುಕ್ಕಾಗದ ಬದ್ಧತೆ. ಅದನ್ನು ಬಿಜೆಪಿ ತೋರಿದೆಯೇ? ರಾಷ್ಟ್ರಮಟ್ಟದಲ್ಲೆ ನೋಡುವುದಾದರೆ ನೂಪುರ್ ಶರ್ಮ, ಕಾಜಲ್ ಹಿಂದೂಸ್ತಾನಿಯಂತಹವರ ಸಂಕಷ್ಟಗಳನ್ನು ದೂರ ಮಾಡಲು ಕೇಂದ್ರಸರ್ಕಾರ ಅಗತ್ಯವಿರುವಷ್ಟು ಮನಸ್ಸು ಮಾಡುತ್ತಿಲ್ಲ ಎನ್ನುವುದು ನಿಷ್ಠಾವಂತ ಬಿಜೆಪಿಗರಿಗೆ ಅರ್ಥವಾಗಿದೆ. ನೂಪುರ್ ಶರ್ಮಗೆ ಸಂಬಂಧಿಸಿದಂತೆ ಪುಟ್ಟ ಖತರ್ನ ಎದುರು ಕೇಂದ್ರಸರ್ಕಾರ ಬಾಗಿದ್ದು ಬಿಜೆಪಿಯ ಕಟ್ಟಾ ಬೆಂಬಲಿಗರಿಗೆ ಸಮ್ಮತವಾಗಿಲ್ಲ. ಜೊತೆಗೆ ಸಮಾನ ನಾಗರಿಕ ಕಾಯಿದೆ, ಪೌರತ್ವ ತಿದ್ದುಪಡಿ ಕಾಯಿದೆಗಳನ್ನು ಪೂರ್ಣವಾಗಿ ಅನುಷ್ಠಾನಕ್ಕೆ ತರಲು; ಹಿಂದೂ-ವಿರೋಧಿಯಾದ ವಕ್ಫ್ ಕಾಯಿದೆ, ಅಲ್ಪಸಂಖ್ಯಾತರ ಹಕ್ಕುಗಳ ಕಾಯಿದೆ, ಪೂಜಾಸ್ಥಳಗಳ ಕಾಯಿದೆಗಳನ್ನು ರದ್ದುಗೊಳಿಸಲು ಸರ್ಕಾರ ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎಂಬ ಅನಿಸಿಕೆಯೂ ಅವರಲ್ಲಿ ಗಾಢವಾಗುತ್ತಿದೆ.
ರಾಜ್ಯದ ಬಗ್ಗೆ ಹೇಳುವುದಾದರೆ ಹಿಂದೂಗಳ ವಿರುದ್ಧದ ಹಿಂಸಾಚಾರದ ತಡೆಗೂ ಗಂಭೀರ ಪ್ರಯತ್ನಗಳಾಗುತ್ತಿಲ್ಲ ಎಂಬ ಭಾವನೆ ಜನಜನಿತವಾಗಿದೆ. ಜೊತೆಗೆ, ಭಾರತೀಯ ಹಾಗೂ ಹಿಂದೂ ಮೌಲ್ಯಗಳ ಬಗ್ಗೆ ಆಳ ಜ್ಞಾನ ಹಾಗೂ ವಿಶ್ವಾಸ ಹೊಂದಿರುವ ಮತ್ತು ಆ ಕಾರಣದಿಂದಲೇ ಅಸಂಖ್ಯಾತ ಹಿಂದೂಗಳ ಪ್ರೀತಿ ಹಾಗೂ ಗೌರವಗಳಿಗೆ ಪಾತ್ರರಾಗಿರುವ ಹಲವರು ಹಿರಿಯರು ತಮ್ಮ ಉಪನ್ಯಾಸಗಳು ಮತ್ತು ಬರಹಗಳ ಮೂಲಕ ಬಿಜೆಪಿಯ ಜನಪ್ರಿಯ ಹೆಚ್ಚಳಕ್ಕೆ ಕಾರಣರಾಗಿರುವುದನ್ನು ರಾಜ್ಯ ಬಿಜೆಪಿಸರ್ಕಾರ ಗುರುತಿಸಿ ಗೌರವಿಸಿಲ್ಲ ಎನ್ನುವ ಕೊರಗೂ ಸಹ ಪಕ್ಷದ ನಿಷ್ಠಾವಂತ ಬೆಂಬಲಿಗರಲ್ಲಿದೆ. ನಿದರ್ಶನಕ್ಕೆ: ಹಿರಿಯ ವಿದ್ವಾಂಸರಾದ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಗತಿಸಿದಾಗ ಆ ಬಗ್ಗೆ ರಾಜ್ಯಸರ್ಕಾರ ತೋರಿದ ಉದಾಸೀನದ ನಡವಳಿಕೆ ನೋವುಂಟು ಮಾಡಿದ್ದು ಲಕ್ಷಾಂತರ ಜನರಿಗೆ.
ಹೀಗೆ ಅಸಮಾಧಾನಗೊಂಡ ನಿಷ್ಠಾವಂತರೇನೂ ಏಕಾಏಕಿ ಪಕ್ಷ ಬದಲಾಯಿಸುವುದಿಲ್ಲ. ಅಧಿಕಾರಲಾಲಸಿ ರಾಜಕಾರಣಿಗಳೇನಲ್ಲ ಅವರು. ನೆಚ್ಚಿನ ಎಮ್ಮೆ ಕೋಣ ಕರುವನ್ನು ಈದಿದೆ ಎಂದು ತಿಳಿದಾಗ ಅವರು ಮತಗಟ್ಟೆಗಳಿಗೆ ಹೋಗುವುದಿಲ್ಲ, ಹೋದರೂ ನೋಟಾ ಚಲಾಯಿಸುತ್ತಾರೆ ಅಷ್ಟೇ. ಪಕ್ಷಕ್ಕೆ ಅಷ್ಟರಮಟ್ಟಿಗೆ ಹಾನಿ ಖಂಡಿತ.
ಪುಟ್ಟ ನಿಷ್ಠಾವಂತ ಬೆಂಬಲಿಗ ವರ್ಗವನ್ನು ಉಳಿಸಿಕೊಳ್ಳುವುದರ ಜೊತೆಗೆ ಪಕ್ಷದತ್ತ ಮುಖ ಮಾಡಿ ಅಡ್ಡಗೋಡೆಯ ಮೇಲೆ ಕುಳಿತ ದೊಡ್ಡ ವರ್ಗವನ್ನು ಸೆಳೆಯಲು ರಾಜಕೀಯ ಪಕ್ಷಗಳು ಕಸರತ್ತು ನಡೆಸಬೇಕಾಗುತ್ತದೆ. ಉಚಿತ ಗ್ಯಾಸ್ ಸಿಲಿಂಡರ್ ನೀಡುವುದರಿಂದ, ಯಾವಾವುದೋ ಹೆಸರಿನಲ್ಲಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವುದರಿಂದ; ಮನೆ, ಶೌಚಾಲಯ ಕಟ್ಟಿಸಿಕೊಡುವುದರಿಂದ ಅವರನ್ನು ಒಂದು ಪಕ್ಷ ಶಾಶ್ವತವಾಗಿ ತನ್ನತ್ತ ಸೆಳೆದುಕೊಳ್ಳಲಾದೀತೆ ಎಂಬುದು ಪ್ರಶ್ನಾರ್ಹ. ಅವರಿಗೆ ಪಕ್ಷ/ಸರ್ಕಾರದಿಂದ ಬೇಕಾಗಿರುವುದು ‘ಹೈ ಪ್ರೊಫೈಲ್’ ನಡೆಗಳು. ಅಣ್ವಸ್ತ್ರ ಪರೀಕ್ಷೆ, ಕಾರ್ಗಿಲ್ ವಿಜಯ, ಬಾಲಾಕೋಟ್ ದಾಳಿ, ೩೭೦ನೇ ವಿಧಿಯ ರದ್ದತಿ, ರಾಮಮಂದಿರ ನಿರ್ಮಾಣದಂತಹ ಪ್ರಕರಣಗಳು ಇವರನ್ನು ಪ್ರಭಾವಿಸುವಷ್ಟು ಹಣ, ಸಿಲಿಂಡರ್ಗಳು ಅಥವಾ ಶೌಚಾಲಯಗಳು ಇವರನ್ನು ಪ್ರಭಾವಿಸಲಾರವೇನೊ. ಚುನಾವಣೆಗಳಲ್ಲಿ ವಿಜಯ ಬಯಸುವ ಯಾವುದೇ ಪಕ್ಷ ಅಗತ್ಯವಾಗಿ ಪರೀಕ್ಷಿಸಿಕೊಳ್ಳಬೇಕಾದ ವಾಸ್ತವವಿದು.
ಮೂರೋ ಐದೋ ಟೆಸ್ಟ್ಗಳ ಕ್ರಿಕೆಟ್ ಸರಣಿಯಲ್ಲಿ ಹೊಸಮುಖಗಳನ್ನು ಪಿಚ್ಗೆ ಇಳಿಸಬಹುದು. ಮೊದಲ ಯತ್ನದಲ್ಲಿ ಪ್ರಯೋಗ ವಿಫಲವಾದರೆ ಅನಂತರದ ಟೆಸ್ಟ್ ಗಳಲ್ಲಿ ಸರಿದೂಗಿಸಿಕೊಳ್ಳಬಹುದು. ಆದರೆ ಒಂದೇ ಟೆಸ್ಟ್ ನಂತಹ ಚುನಾವಣೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಹೊಸಮುಖಗಳನ್ನು ಮುಂದೆ ನಿಲ್ಲಿಸುವುದು ಆತ್ಮಹತ್ಯೆಯಂತಹ ನಡೆ.
ಕಾಂಗ್ರೆಸ್ ಸ್ಥಳೀಯರಿಗೆ ಪರಿಚಿತವಾದ ಮುಖಗಳನ್ನೇ ಕಣಕ್ಕಿಳಿಸಿದ್ದು, ಬಿಜೆಪಿ ಪ್ರಯೋಗಕ್ಕೆ ಇಳಿದದ್ದು ಮತ್ತು ಇವು ತಂದ ಫಲಿತಾಂಶಗಳು ಇಲ್ಲಿ ಪರಿಶೀಲನಾರ್ಹ. ಬಿಜೆಪಿಯ ೧೦೩ ಹೊಸಮುಖಗಳಲ್ಲಿ ಜಯ ಗಳಿಸಿದವರು ಕೇವಲ ೧೭ ಎನ್ನುವುದು ಪಕ್ಷ ನಡೆಸಿದ ಪ್ರಯೋಗದ ದುರಂತ ಕಥೆ ಹೇಳುತ್ತದೆ. “ಅಪರಿಚಿತ ದೇವದೂತರಿಗಿಂತಲೂ ಪರಿಚಿತ ದೆವ್ವವೇ ಉತ್ತಮ” ಎಂದು ತರ್ಕಿಸಿದ ಅದೆಷ್ಟೋ ಕೇರಿ, ಹಳ್ಳಿ, ಊರುಗಳು ಸಾರಾಸಗಟಾಗಿ ಬಿಜೆಪಿ ತೊರೆದು ಕಾಂಗ್ರೆಸ್ನತ್ತ ತಿರುಗಿದ್ದು ಈ ಬಾರಿಯ ಚುನಾವಣೆಯ ಗಮನಾರ್ಹ ಅಂಶಗಳಲ್ಲೊಂದು. ಒಂದುವೇಳೆ ಕರ್ನಾಟಕ ಚುನಾವಣೆಯನ್ನು ಕ್ವಾರ್ಟರ್ ಫೈನಲ್ಸ್, ಡಿಸೆಂಬರ್ನಲ್ಲಿನ ನಾಲ್ಕು ರಾಜ್ಯಗಳ ಚುನಾವಣೆಗಳನ್ನು ಸೆಮಿಫೈನಲ್ಸ್, ಮುಂದಿನ ವರ್ಷದ ಲೋಕಸಭಾ ಚುನಾವಣೆಗಳನ್ನು ಫೈನಲ್ಸ್ ಎಂದು ಬಿಜೆಪಿಯ ಕೇಂದ್ರ ಸಮಿತಿ ತಿಳಿದಿದ್ದರೆ ಕರ್ನಾಟಕದಲ್ಲಿ ಕಲಿತ ಪಾಠಗಳಿಂದ ತನ್ನ ಮುಂದಿನ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸುತ್ತದೆ ಎಂದು ಆಶಿಸೋಣ.
ಇನ್ನು ಮೋದಿಯವರ ಪ್ರಚಾರದ ವಿಷಯ. ಕರ್ನಾಟಕದಲ್ಲಿ ಅದೇನೂ ವ್ಯರ್ಥವಾಗಿಲ್ಲ. ಕಳೆದ ಬಾರಿಗಿಂತ ಈ ಬಾರಿ ಪಕ್ಷ ಗಳಿಸಿರುವ ಮತಗಳ ಪ್ರಮಾಣದಲ್ಲಿನ ಅಂತರ ಇಲ್ಲವೇ ಇಲ್ಲ ಎನ್ನುವಷ್ಟು ನಗಣ್ಯ. ಇದರರ್ಥ, ವರ್ಚಸ್ಸುಹೀನ ರಾಜ್ಯ ಬಿಜೆಪಿ ಮುಖಗಳು ಮತ್ತು ಈ ಬಾರಿ ಒಟ್ಟಾರೆ ಪಕ್ಷದ ಎಡವಟ್ಟು ಪ್ರಯೋಗಗಳು ಬಿಜೆಪಿಯಿಂದ ಸಾಕಷ್ಟು ಮತಗಳನ್ನು ದೂರ ಮಾಡಿದ್ದರೂ ನಷ್ಟವನ್ನು ತುಂಬಿದ್ದು ಮೋದಿಯವರ ಭಾಷಣಗಳು, ರೋಡ್ ಶೋಗಳು. ಇದರ ಜೊತೆಗೆ ಜೆಡಿಎಸ್ನಿಂದ ಒಕ್ಕಲಿಗ ಮತಗಳನ್ನು ಕಿತ್ತು ಡಿ.ಕೆ. ಶಿವಕುಮಾರ್ ಕಾಂಗ್ರೆಸ್ಗೆ ತಂದಂತೆ ಲಿಂಗಾಯತ ಮತಗಳನ್ನು ಬಿಜೆಪಿಯಲ್ಲೇ ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಬೊಮ್ಮಾಯಿ ಅಥವಾ ಬೇರೆ ಯಾರಾದರೂ ಬಿಜೆಪಿ ನಾಯಕ ತೋರಿದ್ದಿದ್ದರೆ ಈ ಸೋಲನ್ನು ತಪ್ಪಿಸಬಹುದಾಗಿತ್ತು.
ಕರ್ನಾಟಕದ ಈ ಫಲಿತಾಂಶಗಳು ಬಿಜೆಪಿಗೆ ಒಂದು ಪಾಠವಷ್ಟೇ ಹೊರತು ತಡೆಗೋಡೆಯೇನಲ್ಲ. ಲೋಕಸಭಾ ಚುನಾವಣೆಗಳಲ್ಲಿ ಮೋದಿಯವರನ್ನು ಸರಿಗಟ್ಟುವುದಿರಲಿ, ಹತ್ತಿರಕ್ಕೂ ಬರುವ ಸಾಮರ್ಥ್ಯ ದೇಶದ ಯಾವುದೇ ನಾಯಕ/ನಾಯಕಿಗೆ ಈಗ ಇಲ್ಲ. ಜೊತೆಗೆ, ಕರ್ನಾಟಕದಲ್ಲಿನ ಕಾಂಗ್ರೆಸ್ ವಿಜಯ ಬಿಜೆಪಿಗಿಂತಲೂ ಇತರ ವಿರೋಧಪಕ್ಷಗಳಿಗೆ ದುಃಸ್ವಪ್ನವಾಗಿದೆ. ರಾಹುಲ್ಗಾಂಧಿಯವರ ಅನಾಕರ್ಷಕ ಹಾಗೂ ನಗೆಪಾಟಲೆನಿಸುವ ನಡೆನುಡಿಗಳಿಂದಾಗಿ ಅವರನ್ನೂ ಅವರ ಪಕ್ಷವನ್ನೂ ನಿರ್ಲಕ್ಷಿಸಿದ್ದ ತೃಣಮೂಲ ಕಾಂಗ್ರೆಸ್, ಜೆಡಿಯು, ಎನ್ಸಿಪಿಯಂತಹ ಪಕ್ಷಗಳು ಈಗ ಕಾಂಗ್ರೆಸ್ ಬಗ್ಗೆ ಮರುಚಿಂತನೆ ನಡೆಸುವ ಒತ್ತಡಕ್ಕೊಳಗಾಗಿವೆ. ಅಷ್ಟರಮಟ್ಟಿಗೆ ಅವುಗಳ ಗೊಂದಲ ಹೆಚ್ಚಿದೆ. ಇದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲಕರವಾಗುತ್ತದೆ. ಆ ಚುನಾವಣೆಗಳಲ್ಲಿ ಈ ಕಡೆ ಬಸವರಾಜ ಬೊಮ್ಮಾಯಿಯವರು, ಆ ಕಡೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇರುವುದಿಲ್ಲ. ಅಲ್ಲಿ ಈ ಕಡೆ ನರೇಂದ್ರ ಮೋದಿ ಇದ್ದರೆ, ಆ ಕಡೆ ರಾಹುಲ್ಗಾಂಧಿ, ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಸುಪ್ರಿಯಾ ಸುಳೆ, ಉದ್ಧವ್ ಠಾಕ್ರೆ ಮತ್ತು ನಿತೀಶ್ಕುಮಾರ್ ಅಂತಹವರು ಇರುತ್ತಾರೆ. ಇಂದು ಸ್ವಾಭಿಮಾನಿಯಾಗಿರುವ ಭಾರತೀಯರ ಒಲವು ಯಾರ ಕಡೆ ಇರುತ್ತದೆಂದು ಇಲ್ಲಿ ವಿವರಿಸಿ ಹೇಳಬೇಕಾಗಿಲ್ಲ.
ಇದೀಗ ಸಿದ್ದರಾಮಯ್ಯ ಮುಖ್ಯಮಂತ್ರಿ ಮತ್ತು ಶಿವಕುಮಾರ್ ಉಪ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಹೈಕಮಾಂಡ್ ನಿರ್ಣಯಿಸಿದೆ. ತನ್ನ ಮತ ದಾರಿತಪ್ಪಿತೆ ಎಂದು ಕರ್ನಾಟಕದ ‘ಜಾಣ’ ಮತದಾರವರ್ಗ ಚಿಂತನೆಗೊಳಗಾದೀತೆ? ಮುಂದಿನ ಚುನಾವಣೆ ಇನ್ನೆಷ್ಟು ದೂರ? ಅಥವಾ ಇನ್ನೆಷ್ಟು ಹತ್ತಿರ?
ಇನ್ನು ಕಾಲ ವೇಗವಾಗಿ ಸರಿಯುತ್ತದೆ!
ಕರ್ ‘ನಾಟಕ’ ಕಲಿಸುವ ಪಾಠಗಳು
ಜನಸಂಖ್ಯೆಯ ಪ್ರಮಾಣದಲ್ಲಿ ಚೀಣಾವನ್ನು ಭಾರತ ಹಿಂದಿಕ್ಕಬಹುದೆಂಬ ಸಂಭವಮಂಡನೆ ಒಂದಷ್ಟು ಸಮಯದಿಂದ ಪ್ರಚಲಿತವಿತ್ತು. ಈ ಊಹನೆಯು ನಿಜವಾಗುತ್ತಿದೆಯೆಂಬ ಸೂಚನೆ ಇತ್ತೀಚೆಗೆ ಲಭಿಸಿದೆ. ಈ ವರ್ಷದ (೨೦೨೩) ನಡುಭಾಗದ ವೇಳೆಗೆ ಭಾರತದ ಜನಸಂಖ್ಯೆ ಚೀಣಾದ್ದಕ್ಕಿಂತ ಮೂವತ್ತು ಲಕ್ಷದಷ್ಟು ಅಧಿಕವಾಗಬಹುದು – ಎಂಬ ಅಂದಾಜನ್ನು ಇದೀಗ ವಿಶ್ವಸಂಸ್ಥೆ ಪ್ರಕಟಿಸಿದೆ. ಆ ಅಂದಾಜಿನಂತೆ ಭಾರತದ ಜನಸಂಖ್ಯೆ ೧.೪೨೮೬ ಶತಕೋಟಿ ತಲಪುತ್ತದೆ; ಚೀಣಾದ್ದು ೧.೪೨೫೭ ಶತಕೋಟಿಯಷ್ಟು ಇರುತ್ತದೆ.
ಈ ಮಾಹಿತಿ ಆರ್ಥಿಕಾದಿ ವಲಯಗಳಲ್ಲಿ ಪರಾಮರ್ಶನೆಗೆ ಗ್ರಾಸವಾಗಿದೆ.
ಜನಸಂಖ್ಯೆ ಹೆಚ್ಚಿದಷ್ಟೂ ಸಮಸ್ಯೆಗಳು ಹೆಚ್ಚುತ್ತವೆಂಬ ಹಿಂದೆ ವಾಡಿಕೆಯಾಗಿದ್ದಂಥ ಗಾಬರಿಗಳಿಗೆ ಕಾರಣವಿಲ್ಲವೆಂದೂ ಟಿಪ್ಪಣಿ ಮಾಡಿರುವ ವಿಶ್ವಸಂಸ್ಥೆಯ ವರದಿ ‘೮ ಶತಕೋಟಿ ಜೀವಗಳು, ಅನಂತ ಸಾಧ್ಯತೆಗಳು, ಸ್ಥಿರೀಕೃತ ಹಕ್ಕುಗಳು, ಹೆಚ್ಚಿನ ಆಯ್ಕೆ ಅವಕಾಶಗಳು’ ಎಂದು ಸದ್ಯಃಸ್ಥಿತಿಯ ಗುಣಾಂಶಗಳನ್ನು ಪ್ರಮುಖವಾಗಿ ನಮೂದಿಸಿದೆ.
ವರವೆ, ಶಾಪವೆ?
ಜನಸಂಖ್ಯೆಯ ಹೆಚ್ಚಳ ದೇಶಕ್ಕೆ ಅನುಕೂಲಕರವೆಂದು ಒಂದು ವರ್ಗದ ತಜ್ಞರ ಅಭಿಮತವಿದ್ದರೆ ಈ ಹೆಚ್ಚಳದಿಂದ ಭೂಮಿ, ಕಾಡು, ನೀರು, ಗಾಳಿ ಮೊದಲಾದ ದೇಶದ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚಿ ಕೊರತೆಗಳುಂಟಾಗುತ್ತವೆ ಎಂಬುದು ಕೆಲವರ ವಾದ. ‘ಇರುವುದೊಂದೇ ಭೂಮಿ.’
ಒಂದು ದೇಶದ ಜನಸಂಖ್ಯೆಯ ಪ್ರಮಾಣವನ್ನು ಜಾಗತಿಕ ಸ್ಥಿತಿಯ ಭೂಮಿಕೆಯಲ್ಲಿಯೂ ವಿಶ್ಲೇಷಣೆ ಮಾಡಬೇಕಾಗುತ್ತದೆಂಬುದು ಮತ್ತೊಂದು ವಾದ.
ಸ್ಥೂಲವಾಗಿ ಹೇಳುವುದಾದರೆ ಒಂದು ದೇಶದ ಜನಸಂಖ್ಯೆಗೂ ಅದರ ಆರ್ಥಿಕ ಮುನ್ನಡೆಗೂ ಸಂಬಂಧವಿರುತ್ತದೆ. ದುಡಿಯುವ ಕೈಗಳು ಹೆಚ್ಚಾಗಿದ್ದಲ್ಲಿ ಸಂಪದುತ್ಪಾದನೆ ಸಹಜವಾಗಿ ಹೆಚ್ಚುತ್ತದೆ – ಎಂಬುದು ಸರಳ ತರ್ಕ. ಹಿಂದಿನ ವರ್ಷಗಳಲ್ಲಿ ಚೀಣಾದ ಆರ್ಥಿಕತೆಯ ವೃದ್ಧಿಗೆ ಕಾರಣವಾಗಿದ್ದ ಅಂಶಗಳಲ್ಲೊಂದು ಅಲ್ಲಿಯ ಜನಸಂಖ್ಯಾಧಿಕ್ಯವೇ. ಪೂರಕವಾಗುವ ಅನ್ಯ ಅಂಶಗಳು ಹಲವು ಇದ್ದರೂ ಅಧಿಕ ಜನಸಂಖ್ಯೆಯೂ ಒಂದು ಪ್ರಮುಖ ಸಂಪನ್ಮೂಲವೆಂಬುದನ್ನು ಅಲ್ಲಗಳೆಯಲಾಗದು. ದುಡಿಯುವ ವರ್ಗದ ಹೆಚ್ಚಳವಾದಲ್ಲಿ ಉತ್ಪಾದನೆಯ ವೃದ್ಧಿ ಮಾತ್ರವಲ್ಲದೆ ಉಳಿತಾಯದ ಹೆಚ್ಚಳ ಮೊದಲಾದ ಅನ್ಯ ಲಾಭಗಳೂ ಸಿದ್ಧಿಸುತ್ತವೆ. ಇದರ ಫಲವಾಗಿ ಹಣದ ಹೂಡಿಕೆಯೂ ಅಧಿಕಗೊಳ್ಳುತ್ತದೆ. ಯೂರೋಪಿನ ಎಲ್ಲೆಡೆ ದುಡಿಯಲಾಗದ ಅಪರವಯಸ್ಕರ ಪ್ರಮಾಣ ನಿರಂತರ ಏರುತ್ತಿದ್ದು ಅವರ ಪೋಷಣೆಯ ಹೊರೆ ಆತಂಕ ತರುತ್ತಿದೆ. ಅಮೆರಿಕದಲ್ಲೂ ಅದೇ ಸ್ಥಿತಿ ಇದೆ.
ಬೇರೆಡೆಗಳಂತಲ್ಲದೆ ಭಾರತದಲ್ಲಿ ತರುಣರ ಎಂದರೆ ದುಡಿಯಬಲ್ಲವರ ಪ್ರಮಾಣ ಅಧಿಕವಾಗಿದ್ದು ಇದೇ ಸ್ಥಿತಿ ಹಲವು ದಶಕಗಳ ಕಾಲ ಮುಂದುವರಿಯಲಿದೆ. ಈ ಸನ್ನಿವೇಶ ಭಾರತಕ್ಕೆ ವರದಾನವಾಗಿದೆ.
ಸವಾಲುಗಳು
ಇದರ ಪ್ರಯೋಜನ ಒಂದಷ್ಟುಮಟ್ಟಿಗೆ ಸಹಜ ಲಬ್ಧವಾದರೂ ಪೂರ್ಣ ಲಾಭ ಕೈಹತ್ತಬೇಕಾದರೆ ಹಲವು ಪೂರಕ ಕ್ರಮಗಳೂ ಅನಿವರ್ಯ. ಮುಂದಿನ ಹಲವು ದಶಕಗಳಲ್ಲಿ ತಿಂಗಳಿಗೆ ಹತ್ತು ಲಕ್ಷದಷ್ಟು ಹೊಸಬರು ಕಾರ್ಮಿಕ ಪಡೆಗೆ ಸೇರ್ಪಡೆಗೊಳ್ಳಲಿದ್ದಾರೆ. ಉದ್ಯೋಗಸೃಷ್ಟಿಯೂ ಶಿಕ್ಷಣವೂ ಕೌಶಲಾಭಿವೃದ್ಧಿಯೂ ಆ ಪ್ರಮಾಣದಲ್ಲಿ ಬೆಳೆಯಬೇಕಾಗುತ್ತದೆ. ಇದೆಲ್ಲ ತಾನಾಗಿ ಆಗುವಂಥದಲ್ಲ. ವಿಶೇಷ ಯೋಜನೆಗಳು ಅವಶ್ಯಬೀಳುತ್ತವೆ. ನವೋದ್ಯಮ ಸೃಷ್ಟಿಯ ವೇಗ ಈಗ ಇರುವುದಕ್ಕಿಂತ ಬಹುಪಾಲು ಹೆಚ್ಚಬೇಕಾಗಿದೆ. ಹಾಗೆ ಆದಲ್ಲಿ ಮಾತ್ರ ನಮ್ಮ ಜನಸಂಖ್ಯಾಧಿಕ್ಯದ ಮತ್ತು ವಿಶೇಷವಾಗಿ ತರುಣಶಕ್ತಿಯ ಲಭ್ಯತೆಯ ಪೂರ್ಣ ಪ್ರಯೋಜನ ನಮಗೆ ಸಿದ್ಧಿಸಬಲ್ಲದು.
ಬೃಹನ್ನಗರಗಳಿಗೆ ಹೋಲಿಸಿದಲ್ಲಿ ದ್ವಿತೀಯದರ್ಜೆಯ ನಗರಗಳಲ್ಲಿಯೂ ಗ್ರಾಮೀಣಭಾಗಗಳಲ್ಲಿಯೂ ಔದ್ಯಮಿಕ ಚೇತರಿಕೆ ಇದೀಗ ಅಪೇಕ್ಷಿತ ಮಟ್ಟದಲ್ಲಿಲ್ಲ. ಈ ಅಂತರವನ್ನು ಕಡಮೆ ಮಾಡಬೇಕಾದ ಆವಶ್ಯಕತೆ ಇದೆ. ಮಹಿಳೆಯರ ಉದ್ಯೋಗಾವಕಾಶಗಳಲ್ಲಿಯೂ ಹೆಚ್ಚಳ ಆಗಬೇಕಾಗಿದೆ. ನಿರುದ್ಯೋಗ-ಅರೆಉದ್ಯೋಗದ ಸ್ಥಿತಿ ನೀಗಬೇಕಾಗಿದೆ.
ಇದು ಸೂಕ್ಷ್ಮವೂ ಜಟಿಲವೂ ಆದ ಪ್ರಕ್ರಿಯೆ. ಬಹು-ಸ್ತರೀಯ ಉದ್ಯಮನಿರ್ಮಿತಿಯೂ ಕೌಶಲವೃದ್ಧಿಯೂ ಸಾಧ್ಯವಾಗಬೇಕಾದರೆ ಆಧಾರಮಟ್ಟದ ಒಳಹಂದರದ ಮತ್ತು ಮೂಲಸೌಕರ್ಯಗಳ ವರ್ಧನೆ ಅತ್ಯವಶ್ಯ. ಇದಕ್ಕೆ ಇತ್ತೀಚಿನ ವರ್ಷಗಳಲ್ಲಿ ಆದ್ಯತೆ ಸಲ್ಲುತ್ತಿರುವುದು ಆಶಾಸ್ಪದವಾಗಿದೆ. ಬೇರೆ ಶಬ್ದಗಳಲ್ಲಿ ಹೇಳಬೇಕಾದರೆ – ಮಾನವಶಕ್ತಿ ಸಂವರ್ಧನೆಗೆ ಆದ್ಯತೆ ಸಲ್ಲಬೇಕಾಗಿದೆ.
ತರುಣ ಸಮುದಾಯದವರಲ್ಲಿ ಉದ್ಯೋಗಾರ್ಹ ಕ್ಷಮತೆಯನ್ನು ಬೆಳೆಸಲೂ ವಿಶೇಷ ಯೋಜನೆಗಳ ಆವಶ್ಯಕತೆಯಿದೆ.
ಸಂಧಿಕಾಲ
ಈ ಸಂಗತಿಗಳನ್ನೆಲ್ಲ ಪರಿಶೀಲಿಸಿದಲ್ಲಿ ಹೊಮ್ಮುವ ತಥ್ಯವೆಂದರೆ ಇದೀಗ ಭಾರತದ್ದು ಒಂದು ಸಂಧಿಕಾಲವಾಗಿದೆಯೆಂಬುದು.
ಆರ್ಥಿಕ ಹಿಂಜರಿತವಿದ್ದಾಗ ಜನಸಂಖ್ಯಾಧಿಕ್ಯ ಹೊರೆಯೆನಿಸುವುದು ಸಹಜ.
ಆರ್ಥಿಕವೃದ್ಧಿಗೆ ಹಲವು ಸಹಜ ಪರಿಮಿತಿಗಳೂ ಇವೆ. ಉದಾಹರಣೆಗೆ: ಭಾರತ ಕೃಷಿಪ್ರಧಾನ ದೇಶ. ಆದರೆ ಕಾಲಕ್ರಮದಲ್ಲಿ ಜಮೀನುಗಳು ಪಾಲಾಗುತ್ತ ಹೋಗಿ ಹಿಡುವಳಿಗಳ ಗಾತ್ರ ಕುಗ್ಗುತ್ತಿದೆ. ಈ ಕೊರತೆಯನ್ನು ಸರಿದೂಗಿಸಲು ಔದ್ಯಮಿಕೋತ್ಪಾದನೆ ಬಹುಪಾಲು ಹೆಚ್ಚಬೇಕಾಗುತ್ತದೆ. ಇದನ್ನು ಸಾಧಿಸಲು ದೀರ್ಘಕಾಲದ ದೃಢ ಪ್ರಯಾಸ ಆಗಬೇಕಾಗುತ್ತದೆ.
ಇನ್ನು ಎರಡೂವರೆ ದಶಕಗಳಲ್ಲಿ ‘ಅಭಿವರ್ಧಿತ’ ರಾಷ್ಟ್ರಗಳ ಪಾಲಿಗೆ ಸೇರಬೇಕೆಂಬ ಭಾರತದ ಲಕ್ಷ್ಯ ಈಡೇರಬೇಕಾದರೆ ಜನಸಂಖ್ಯಾಧಿಕ್ಯದ ಪೂರ್ಣ ಲಾಭ ಪಡೆಯುವ ದಿಶೆಯಲ್ಲಿ ಸಮರೋಪಾದಿಯ ಪ್ರಯತ್ನಗಳು ನಡೆಯುವುದು ಆವಶ್ಯಕವಿದೆ. ಮುಂದಿನ ಮೂರು ದಶಕಗಳಲ್ಲಿ ೩೦ ಕೋಟಿ ದಾಟಲಿರುವ ವೃದ್ಧರ ಪ್ರಮಾಣ, ಜಾಗತಿಕ ಆರ್ಥಿಕ ಸಂಕ್ಷೋಭೆಗಳು, ಹವಾಮಾನ ವೈಪರೀತ್ಯಗಳು – ಈ ಪರಿಮಿತಿಗಳನ್ನೆಲ್ಲ ಮೆಟ್ಟಿ ನಿಂತು ಜನಸಂಖ್ಯೆಯ ಹೆಚ್ಚಳವನ್ನು ಲಾಭಕಾರಿಯಾಗಿಸಿಕೊಳ್ಳಲು ಸರ್ಕಾರದ ನೀತಿರೂಪಣ ಮತ್ತು ಅನುಷ್ಠಾನಗಳಲ್ಲಿ ದಾರ್ಢ್ಯವೂ ಪ್ರಯತ್ನಸಾತತ್ಯವೂ ವಿವಿಧ ಜನವರ್ಗಗಳ ಉತ್ಸಾಹಪೂರ್ಣ ಸಹಕಾರವೂ ಅವಶ್ಯವಾಗುತ್ತವೆ. ಅವೆಲ್ಲ ಕೂಡಿಬರಲೆಂದು ಹಾರೈಸೋಣ.
ಕೆಲವು ಪ್ರಧಾನಿಗಳಂತೆಯೇ ರಾಜೀವ್ಗಾಂಧಿ ಅವರೊಂದಿಗೆ ಕೂಡ ಡಾ|| ಕುರಿಯನ್ ಅವರಿಗೆ ಆತ್ಮೀಯ ಸಂಬಂಧವಿತ್ತು. “ರಾಜೀವ್ ಒಳ್ಳೆಯ ಮನುಷ್ಯ. ಕಾಂಪ್ಲಿಕೇಶನ್ ಇಲ್ಲದ ವ್ಯಕ್ತಿ. ಆತ ಮಾಡಿದ ಏಕೈಕ ತಪ್ಪೆಂದರೆ ಎಲ್ಲ ಬಗೆಯ ಭ್ರಷ್ಟ ಮಂತ್ರಿಗಳನ್ನು ತನ್ನ ಸುತ್ತ ಇಟ್ಟುಕೊಂಡದ್ದು. ಒಮ್ಮೆ ಏನನ್ನೋ ಉದ್ಘಾಟಿಸಲು...
ತುರ್ತುಪರಿಸ್ಥಿತಿಯ ವೇಳೆ ದೇಶದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಯಾವೆಲ್ಲ ದೌರ್ಜನ್ಯಗಳು ನಡೆದವು; ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಂತಹ ಶೋಚನೀಯ ಸ್ಥಿತಿಯನ್ನು ತಂದೊಡ್ಡಲಾಗಿತ್ತು; ಸಂವಿಧಾನಕ್ಕೆ ಎಂತಹ ನಗೆಪಾಟಲು ಪರಿಸ್ಥಿತಿಯನ್ನು ಉಂಟುಮಾಡಲಾಗಿತ್ತು ಎನ್ನುವ ಕುರಿತು ತುರ್ತುಪರಿಸ್ಥಿತಿಯನ್ನು ಹೇರಿ ೪೮ ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಇನ್ನೊಮ್ಮೆ ನೋಡುವುದು ಕಾಲೋಚಿತ...
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮೊದಲನೆಯ ಭಾಗವಾದರೆ, ಅನಂತರ ಸರ್ಕಾರದ ಪಾತ್ರ. ಚುನಾವಣೆ ವ್ಯವಸ್ಥೆಯ ಮೂಲಕ ಆಡಳಿತದ ಭಾಗವಾಗಲು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಗಾಂಧಿಯವರು ಹೇಳಿದ್ದರು: “ಬಲ ಇರುವವರಿಗೆ ನೀಡುವಷ್ಟೆ ಅವಕಾಶವನ್ನು ಬಲಹೀನರಿಗೂ ಪ್ರಜಾಪ್ರಭುತ್ವ ನೀಡುತ್ತದೆ ಎಂದು ನಾನು...
ಯಾವುದೇ ರಾಜಕೀಯ ಪಕ್ಷಕ್ಕೆ ಅದರದೇ ಆದ ಸಣ್ಣದೋ ದೊಡ್ಡದೋ ನಿಷ್ಠಾವಂತ ಬೆಂಬಲಿಗರ ಗುಂಪೊಂದಿರುತ್ತದೆ. ಅವರು ತಮ್ಮ ಪಕ್ಷದ ಸರ್ಕಾರದಿಂದ ಪುಕ್ಕಟೆ ಸೌಲಭ್ಯಗಳನ್ನು ಬಯಸುವುದಿಲ್ಲ. ಅವರು ನಿರೀಕ್ಷಿಸುವುದು ಸ್ಥಾಪಿತ ಮೌಲ್ಯಗಳಿಗೆ ತಮ್ಮ ಪಕ್ಷ ಹಾಗೂ ಸರ್ಕಾರದ ನಿರಂತರ ನಿಷ್ಠೆಯನ್ನಷ್ಟೇ. ಬಿಜೆಪಿಯ ಆ ಬಗೆಯ...
ಜನಸಂಖ್ಯೆಯ ಪ್ರಮಾಣದಲ್ಲಿ ಚೀಣಾವನ್ನು ಭಾರತ ಹಿಂದಿಕ್ಕಬಹುದೆಂಬ ಸಂಭವಮಂಡನೆ ಒಂದಷ್ಟು ಸಮಯದಿಂದ ಪ್ರಚಲಿತವಿತ್ತು. ಈ ಊಹನೆಯು ನಿಜವಾಗುತ್ತಿದೆಯೆಂಬ ಸೂಚನೆ ಇತ್ತೀಚೆಗೆ ಲಭಿಸಿದೆ. ಈ ವರ್ಷದ (೨೦೨೩) ನಡುಭಾಗದ ವೇಳೆಗೆ ಭಾರತದ ಜನಸಂಖ್ಯೆ ಚೀಣಾದ್ದಕ್ಕಿಂತ ಮೂವತ್ತು ಲಕ್ಷದಷ್ಟು ಅಧಿಕವಾಗಬಹುದು – ಎಂಬ ಅಂದಾಜನ್ನು ಇದೀಗ...
ಕೆಲವು ಪ್ರಧಾನಿಗಳಂತೆಯೇ ರಾಜೀವ್ಗಾಂಧಿ ಅವರೊಂದಿಗೆ ಕೂಡ ಡಾ|| ಕುರಿಯನ್ ಅವರಿಗೆ ಆತ್ಮೀಯ ಸಂಬಂಧವಿತ್ತು. “ರಾಜೀವ್ ಒಳ್ಳೆಯ ಮನುಷ್ಯ. ಕಾಂಪ್ಲಿಕೇಶನ್ ಇಲ್ಲದ ವ್ಯಕ್ತಿ. ಆತ ಮಾಡಿದ ಏಕೈಕ ತಪ್ಪೆಂದರೆ ಎಲ್ಲ ಬಗೆಯ ಭ್ರಷ್ಟ ಮಂತ್ರಿಗಳನ್ನು ತನ್ನ ಸುತ್ತ ಇಟ್ಟುಕೊಂಡದ್ದು. ಒಮ್ಮೆ ಏನನ್ನೋ ಉದ್ಘಾಟಿಸಲು...
ತುರ್ತುಪರಿಸ್ಥಿತಿಯ ವೇಳೆ ದೇಶದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಯಾವೆಲ್ಲ ದೌರ್ಜನ್ಯಗಳು ನಡೆದವು; ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಂತಹ ಶೋಚನೀಯ ಸ್ಥಿತಿಯನ್ನು ತಂದೊಡ್ಡಲಾಗಿತ್ತು; ಸಂವಿಧಾನಕ್ಕೆ ಎಂತಹ ನಗೆಪಾಟಲು ಪರಿಸ್ಥಿತಿಯನ್ನು ಉಂಟುಮಾಡಲಾಗಿತ್ತು ಎನ್ನುವ ಕುರಿತು ತುರ್ತುಪರಿಸ್ಥಿತಿಯನ್ನು ಹೇರಿ ೪೮ ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಇನ್ನೊಮ್ಮೆ ನೋಡುವುದು ಕಾಲೋಚಿತ...
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮೊದಲನೆಯ ಭಾಗವಾದರೆ, ಅನಂತರ ಸರ್ಕಾರದ ಪಾತ್ರ. ಚುನಾವಣೆ ವ್ಯವಸ್ಥೆಯ ಮೂಲಕ ಆಡಳಿತದ ಭಾಗವಾಗಲು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಗಾಂಧಿಯವರು ಹೇಳಿದ್ದರು: “ಬಲ ಇರುವವರಿಗೆ ನೀಡುವಷ್ಟೆ ಅವಕಾಶವನ್ನು ಬಲಹೀನರಿಗೂ ಪ್ರಜಾಪ್ರಭುತ್ವ ನೀಡುತ್ತದೆ ಎಂದು ನಾನು...
ಯಾವುದೇ ರಾಜಕೀಯ ಪಕ್ಷಕ್ಕೆ ಅದರದೇ ಆದ ಸಣ್ಣದೋ ದೊಡ್ಡದೋ ನಿಷ್ಠಾವಂತ ಬೆಂಬಲಿಗರ ಗುಂಪೊಂದಿರುತ್ತದೆ. ಅವರು ತಮ್ಮ ಪಕ್ಷದ ಸರ್ಕಾರದಿಂದ ಪುಕ್ಕಟೆ ಸೌಲಭ್ಯಗಳನ್ನು ಬಯಸುವುದಿಲ್ಲ. ಅವರು ನಿರೀಕ್ಷಿಸುವುದು ಸ್ಥಾಪಿತ ಮೌಲ್ಯಗಳಿಗೆ ತಮ್ಮ ಪಕ್ಷ ಹಾಗೂ ಸರ್ಕಾರದ ನಿರಂತರ ನಿಷ್ಠೆಯನ್ನಷ್ಟೇ. ಬಿಜೆಪಿಯ ಆ ಬಗೆಯ...
ಜನಸಂಖ್ಯೆಯ ಪ್ರಮಾಣದಲ್ಲಿ ಚೀಣಾವನ್ನು ಭಾರತ ಹಿಂದಿಕ್ಕಬಹುದೆಂಬ ಸಂಭವಮಂಡನೆ ಒಂದಷ್ಟು ಸಮಯದಿಂದ ಪ್ರಚಲಿತವಿತ್ತು. ಈ ಊಹನೆಯು ನಿಜವಾಗುತ್ತಿದೆಯೆಂಬ ಸೂಚನೆ ಇತ್ತೀಚೆಗೆ ಲಭಿಸಿದೆ. ಈ ವರ್ಷದ (೨೦೨೩) ನಡುಭಾಗದ ವೇಳೆಗೆ ಭಾರತದ ಜನಸಂಖ್ಯೆ ಚೀಣಾದ್ದಕ್ಕಿಂತ ಮೂವತ್ತು ಲಕ್ಷದಷ್ಟು ಅಧಿಕವಾಗಬಹುದು – ಎಂಬ ಅಂದಾಜನ್ನು ಇದೀಗ...
ಊರಿನ ಎಲ್ಲ ಬಿಸಿಬಿಸಿ ವರ್ತಮಾನ, ಬೆಳ್ಳಂಬೆಳಗ್ಗೆ ಉಪ್ಪಿಟ್ಟಿಗೆ ಹಾಕುವ ಉಳ್ಳಾಗಡ್ಡಿ ಒಗ್ಗರಣೆಯೊಂದಿಗೆ ಈರವ್ವಕ್ಕಳ ಬಾಣಲೆಗೆ ಬಂದು ಬೀಳುತ್ತಿದ್ದವು. ಉದ್ರಿ–ಬಾಕಿ ಉಳಿಸಿಕೊಂಡ ಕೆಲ ಬಾಯಿ ಚಪಲಿಗರು ಈಕೆಗೆ ನಿಷ್ಠೆಯ ಹನುಮನಂತಾದರು. “ರೊಕ್ಕ ಎಲ್ಲಿ ಹೊಕ್ಕೈತಿ! ನಾಳೆ ನಾಡಿದ್ದು ಕೊಡು ಸಾಕು” ಎನ್ನುತ್ತಿದ್ದ ಈರವ್ವಕ್ಕಗ...
ಸೀತೆ ನೀನು ಸಾವಿತ್ರಿ ನೀನು ಸಾಕ್ಷಾತ್ ನಾರಾಯಣಿ, ಶಕ್ತಿ ಸ್ವರೂಪಿಣಿ ನೀನು ಹರಿಯುವ ನದಿ ನೀನು, ಭಾರಹೊತ್ತ ಭೂಮಿಯೂ ನೀನು, ಭವ ಬಂಧವ ಕಳೆವ ವೈತರಣಿಯು ನೀನು ಭವ್ಯ ಭಾರತವೇ ನೀನು ಕಂಸನನ್ನು ನಡುಗಿಸಿದ ದುರ್ಗೆ ನೀನು ದುಷ್ಟದಾನವರ ಸಂಹಾರಿಣಿಯು ನೀನು...
ಅವನನ್ನು ನೋಡಿದರೆ ಆತ ಒಂದೆರಡು ದಿನ ಸ್ನಾನ ಮಾಡದೆ ಇದ್ದ ಹಾಗೆ ಇದ್ದ. ಕೆದರಿದ ತಲೆಕೂದಲು, ಎಣ್ಣೆ ಹಚ್ಚಿಕೊಂಡ ಥರ ಇರುವ ಮುಖ, ಬಾಯಿ ತೆರೆದರೆ ಕಾಣುವ ಒಂದು ಹಲ್ಲು ಕಿತ್ತುಹೋದ ಸ್ಥಳ, ಒರಟಾದ ತುಟಿ, ಬಲಿಷ್ಠವಾದ ಕಾಲುಗಳು ಮತ್ತು ಅವನೇನಾದರೂ...
ಪಚ್ಚಿಯಪ್ಪ ಅಂದಿನ ಕಾಲದಲ್ಲಿ ಕರ್ನಾಟಕದ ಶ್ರೇಷ್ಠ ಕಲಾವಿದರಲ್ಲಿ ಒಬ್ಬನಾಗಿದ್ದ. ಹಬ್ಬದ ಸಮಯಲ್ಲಿ ಗಣೇಶ, ಗೌರಿಯರ ಮೂರ್ತಿಗಳು, ನವರಾತ್ರಿಯಲ್ಲಿ ದುರ್ಗಾದೇವಿ, ಕಾಳಿಕಾದೇವಿ, ಅವಳ ಕಾಲ ಬಳಿ ಬಿದ್ದ ರಾಕ್ಷಸರು ಇತ್ಯಾದಿಗಳನ್ನು ಯಥಾವತ್ ನಿರ್ಮಿಸುತ್ತಿದ್ದ. ಉಳಿದ ಸಮಯದಲ್ಲಿ ರಾಕ್ಷಸರ ಮೂರ್ತಿಗಳಿಗೆ ತಮಿಳುನಾಡು, ಆಂಧ್ರ, ಕೇರಳದಿಂದ...
ನೆನಪುಗಳ ಕೊಳಕ್ಕೆ ಕಲ್ಲು ಹಾಕಿದಾಗ ಹುಟ್ಟಿದ ಅಲೆಗಳು ರೇಖಾಳ ಸಹಿಷ್ಣುತೆಯ ಮಟ್ಟವನ್ನು ಮೀರಿ ಅವಳನ್ನು ದುರ್ಬಲವಾಗಿಸತೊಡಗಿದವು. ಕಾಲೇಜ್ ಕ್ಯಾಂಟೀನಿನಲ್ಲಿ ಎಲ್ಲರೆದುರೇ “ನಿಂಗೆ ನನ್ನನ್ನ ಕಂಡ್ರೆ ಇಷ್ಟಾನಾ ಇಲ್ವಾ ಅಂತ ಕ್ಲಿಯರ್ ಆಗಿ ಹೇಳ್ಬಿಡು” ಎಂದು ವಿಕಾಸ ಪ್ರೇಮನಿವೇದನೆ ಮಾಡಿದ್ದು, ಅಪ್ಪ-ಅಮ್ಮ ಇಲ್ಲದೋಳು...
ಉತ್ಥಾನ ಸೆಪ್ಟೆಂಬರ್ 2023
ಉತ್ಥಾನದ ಚಂದಾದಾರಾಗಿ...
ಕೇವಲ ₹ 1000 /- (5 ವರ್ಷಕ್ಕೆ) & 1 ವರ್ಷಕ್ಕೆ – ₹ 220 /-
ಕೆಳಗೆ ಸೂಚಿಸಲಾದ ಬ್ಯಾಂಕ್ ಖಾತೆಗೆ ಚಂದಾಹಣವನ್ನು (ವಾರ್ಷಿಕ ಚಂದಾ ಕೇವಲ ರೂ. 220/- ಮಾತ್ರ) NEFT/RTGS ಮೂಲಕ ಪಾವತಿಸಿ.
ಬ್ಯಾಂಕ್ ಹೆಸರು: HDFC Bank Ltd, ಕಾವೇರಿ ಭವನ ಶಾಖೆ, ಬೆಂಗಳೂರು
ಖಾತೆದಾರರ ಹೆಸರು : UTTHANA TRUST
IFSC CODE: HDFC0000509
A/C No: 50100283886338
ನಿಮ್ಮಿಂದ ಚಂದಾ ಹಣವನ್ನು ಸಂಗ್ರಹಿಸಿದ ನಂತರ ನಿಮ್ಮ ಉತ್ಥಾನವನ್ನು ನಿಮ್ಮ ವಿಳಾಸಕ್ಕೆ POST ಮೂಲಕ ಕಳಿಸುವ ವ್ಯವಸ್ಥೆಯನ್ನು ಮಾಡುತ್ತೇವೆ.
ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ನಿಮ್ಮಆಯ್ಕೆಯ ಯಾವುದೇ ಪುಸ್ತಕದ ಕುರಿತು ಪುಸ್ತಕವಿಮರ್ಶೆ ಬರೆದು ಕಳುಹಿಸಿ. ಆಯ್ಕೆಯಾದ ವಿಮರ್ಶೆಗೆ ಸೂಕ್ತ ಸಂಭಾವನೆ ಇದೆ ಇಮೇಲ್: [email protected]