ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಲೇಖನಗಳು > ಎರಡು ಸಮಾವೇಶಗಳು, ಹಲವು ಕೌತುಕಗಳು

ಎರಡು ಸಮಾವೇಶಗಳು, ಹಲವು ಕೌತುಕಗಳು

ಹೆಸರಿಗೆ ಹತ್ತಾರು ಪಕ್ಷಗಳ ಪಟ್ಟಿ ಮಂಡಿತವಾಗಿದ್ದರೂ ಹಲವಾರು ಪಕ್ಷಗಳಲ್ಲಿ ಲೋಕಸಭೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಪಡೆದಿರದ ಪಕ್ಷಗಳೂ ಸೇರಿವೆ. ಪ್ರತಿಯಾಗಿ ಆಂಧ್ರಪ್ರದೇಶದಲ್ಲಿ ಅಧಿಕಾರಸ್ಥವಾಗಿರುವ ಪಕ್ಷಗಳೂ ವಿಪಕ್ಷ ಕ್ಲಬ್ಗೆ ಆಮಂತ್ರಿತವಾಗಿಲ್ಲ. ಎರಡೂ ಬಣಗಳು ತಮ್ಮ ಯು.ಎಸ್.ಪಿ. ಎಂದು ಭಾವಿಸುವ ಅಲ್ಪಸಂಖ್ಯಾತ ಹಿತದ ಗುರಿಗುಂಪುಗಳಾದ ಪಕ್ಷಗಳು ಎರಡು ಕೂಟಗಳಿಂದಲೂ ದೂರವೇ ಉಳಿದಿವೆಮಜ್ಲಿಸ್ ಮುಂತಾದವು. ಅದು ಹಾಗಿರಲಿ. ವಿಪಕ್ಷಕೂಟದ ಅಗ್ರಣಿ ಮಾನಿಟರ್ ಯಾರು ಆಗಬೇಕೆಂಬ ಐನಾತಿ ಪ್ರಶ್ನೆಯೂ ಉತ್ತರಕ್ಕಾಗಿ ಕಾಯುತ್ತಿದೆ. ಎನ್.ಡಿ.. ಒಕ್ಕೂಟದಲ್ಲಿ ನಾಯಕತ್ವದ ಬಗೆಗೆ ರವೆಯಷ್ಟೂ ಗೊಂದಲವಿಲ್ಲ.

ಕಳೆದ (೨೦೨೩) ಜುಲೈ ನಡುಭಾಗದಲ್ಲಿ ಬೆಂಗಳೂರಿನಲ್ಲಿ ವಿಪಕ್ಷಗಳದೂ ದೆಹಲಿಯಲ್ಲಿ ಎನ್.ಡಿ.ಎ. ಕೂಟದ್ದೂ ಸಮಾವೇಶಗಳು ನಡೆದವು. ಕೆಲವು ಕೌತುಕಗಳು ಹೊರನೋಟಕ್ಕೇ ಎದ್ದುಕಾಣುತ್ತವೆ. ಎನ್.ಡಿ.ಎ. ಕೂಟಕ್ಕೆ ತನ್ನ ಅಧಿಷ್ಠಾನವೇನೆಂಬುದರ ಬಗೆಗೆ ಗೊಂದಲವಿಲ್ಲ. ವಿಪಕ್ಷಗಳ ಕೂಟವಾದರೋ ತನ್ನ ಒಗ್ಗೂಡುವಿಕೆಯ ಅಡಿಪಾಯವೇನೆಂಬುದನ್ನು ಶಬ್ದೀಕರಿಸಲೂ ಪ್ರಯಾಸಪಟ್ಟಿದೆ. ಏಕೆಂದರೆ ಮೋದಿ ಹಟಾವ್ ಎಂಬುದಷ್ಟೆ ತಮ್ಮ ಏಕಾಂಶ ಕಾರ್ಯಕ್ರಮವೆಂದು ಹೇಳಿದಲ್ಲಿ ಈ ಸರಕು ಜನರಲ್ಲಿ ಮಾರಾಟವಾಗುವುದು ದುಷ್ಕರವೆಂದು ಈ ಲೂಸ್ ಷಂಟಿಂಗ್ನ ಅಂಗಪಕ್ಷಗಳಿಗೆ ಪೂರ್ಣ ಅರಿವಿದೆ. ಅವು ಒಟ್ಟಾಗಹೊರಟಿರುವುದೇ ಅವುಗಳ ಅಪರ್ಯಾಪ್ತತಾ ಪ್ರಜ್ಞೆಯ ಸೂಚಕವೆಂದಂತೂ ಹೇಳಲೇಬೇಕಾಗಿಲ್ಲ.

ಹೆಸರಿಗೆ ಹತ್ತಾರು ಪಕ್ಷಗಳ ಪಟ್ಟಿ ಮಂಡಿತವಾಗಿದ್ದರೂ ಆ ಹಲವಾರು ಪಕ್ಷಗಳಲ್ಲಿ ಲೋಕಸಭೆಯಲ್ಲಿ ಒಂದೇ ಒಂದು ಸ್ಥಾನವನ್ನೂ ಪಡೆದಿರದ ಪಕ್ಷಗಳೂ ಸೇರಿವೆ. ಪ್ರತಿಯಾಗಿ ಆಂಧ್ರಪ್ರದೇಶದಲ್ಲಿ ಅಧಿಕಾರಸ್ಥವಾಗಿರುವ ಪಕ್ಷಗಳೂ ವಿಪಕ್ಷ ಕ್ಲಬ್ಗೆ ಆಮಂತ್ರಿತವಾಗಿಲ್ಲ. ಎರಡೂ ಬಣಗಳು ತಮ್ಮ ಯು.ಎಸ್.ಪಿ. ಎಂದು ಭಾವಿಸುವ ಅಲ್ಪಸಂಖ್ಯಾತ ಹಿತದ ಗುರಿಗುಂಪುಗಳಾದ ಪಕ್ಷಗಳು ಎರಡು ಕೂಟಗಳಿಂದಲೂ ದೂರವೇ ಉಳಿದಿವೆ – ಮಜ್ಲಿಸ್ ಮುಂತಾದವು. ಅದು ಹಾಗಿರಲಿ. ವಿಪಕ್ಷಕೂಟದ ಅಗ್ರಣಿ ಮಾನಿಟರ್ ಯಾರು ಆಗಬೇಕೆಂಬ ಐನಾತಿ ಪ್ರಶ್ನೆಯೂ ಉತ್ತರಕ್ಕಾಗಿ ಕಾಯುತ್ತಿದೆ. ಎನ್.ಡಿ.ಎ. ಒಕ್ಕೂಟದಲ್ಲಿ ನಾಯಕತ್ವದ ಬಗೆಗೆ ರವೆಯಷ್ಟೂ ಗೊಂದಲವಿಲ್ಲ ಮಾತ್ರವಲ್ಲ; ಹಿಂದೆ ಎನ್.ಡಿ.ಎ.ದಿಂದ ದೂರ ಸರಿದಿದ್ದ ಅಕಾಲಿದಳ, ತೆಲುಗುದೇಶಂ, ಪಾಸ್ವಾನ್ ಪಕ್ಷ ಮೊದಲಾದವೆಲ್ಲ ಎನ್.ಡಿ.ಎ. ತೆಕ್ಕೆಗೆ ಮರಳಲು ಈಗ ಸಜ್ಜಾಗಿವೆ. ಶಿವಸೇನೆಯಂತೂ ಎರಡಾಗಿ ಸೀಳಿ ದುರ್ಬಲಗೊಂಡಿದೆ.

ಈ ಹಿನ್ನೆಲೆಯಲ್ಲಿ ತನ್ನ ಅಂತಃಶೈಥಿಲ್ಯವನ್ನು ತಾನೇ ಅನಿವಾರ್ಯವಾಗಿ ಗಮನಿಸಿಕೊಂಡಿರುವ ವಿಪಕ್ಷಕೂಟ ಇದುವರೆಗಿನ ಯು.ಪಿ.ಎ. ನೇತೃತ್ವ ಎಂಬ ಹಣೆಪಟ್ಟಿಗೆ ತಿಲಾಂಜಲಿಯಿತ್ತು ತನಗೆ ಐ.ಎನ್.ಡಿ.ಐ.ಎ. – ಇಂಡಿಯನ್ ನ್ಯಾಶನಲ್ ಡೆಮೊಕ್ರ್ಯಾಟಿಕ್ ಇನ್‌ಕ್ಲೂಸಿವ್ ಆಲಿಯೆನ್ಸ್ ಎಂದು ಹೊಸ ನಾಮಕರಣ ಮಾಡಿಕೊಂಡಿದೆ (ಜಾಹೀರಾತು ಕಂಪೆನಿಗಳು ನ್ಯೂ ಇಂಪ್ರೂವ್ಡ್ ಎನ್ನುವಂತೆ). ಕಷ್ಟಪಟ್ಟು ಸರ್ಕಸ್ ನಡೆಸಿ ಸಂಯೋಜಿಸಿದ ಈ ಹೊಸ ಹೆಸರಿನಲ್ಲಿರುವ ಐದರಲ್ಲಿ ಮೂರು ಶಬ್ದಗಳು ಈಗಾಗಲೆ ಎನ್.ಡಿ.ಎ. ಹೆಸರಿನಲ್ಲಿ ಇರುವವೇ ಆಗಿವೆ. (ಇಂಡಿಯ ಎಂಬ ಭಾರತೀಯೇತರ ಶಬ್ದ ವಸಾಹತುಶಾಹಿಯ ಉತ್ಪನ್ನವೆಂಬ ಟೀಕೆಯೂ ಹೊಮ್ಮಿದೆ.)

ಒಂದು ಕಡೆ ಕಾಂಗ್ರೆಸ್, ಆಪ್ ಮೊದಲಾದ ಪೂರ್ತಿ ಭಿನ್ನಮನಸ್ಕಗಳಾದ ಪಕ್ಷಗಳು ಸಾಲುಗಟ್ಟಿದ್ದರೆ ಇನ್ನೊಂದು ಕಡೆ ಭಾಜಪಾದೊಡನೆ ಘನಿಷ್ಠ ಹೊಂದಾಣಿಕೆ ಇರುವ ಪಕ್ಷಗಳು ಇವೆ.

ಲೋಕಸಭೆಯ ಚುನಾವಣೆಯ ತೇರೀಜುಬೇರೀಜುಗಳನ್ನು ಸರಿಸಿ ಯೋಚನೆ ಮಾಡುವುದಾದಲ್ಲಿ; ಎನ್.ಡಿ.ಎ.ದ ಹತ್ತಿರಹತ್ತಿರ ಒಂದು ದಶಕದ ವಿವಿಧ ಯೋಜನೆಗಳ ಸತ್ಫಲ ಜನತೆಗೆ ಈಗಷ್ಟೆ ಕೈಹತ್ತತೊಡಗಿದೆ. ಅಕಸ್ಮಾತ್ ವಿಪಕ್ಷಕೂಟ ಗದ್ದುಗೆಗೇರಿದಲ್ಲಿ ಜನಹಿತಾಭಿಮುಖ ಯೋಜನೆಗಳನ್ನು ಮುಂದುವರಿಸುವುದು ವಿವೇಕಪೂರ್ಣ ಕ್ರಮವಾಗುತ್ತದೆ. ಹಾಗಲ್ಲದೆ ಛಲ-ಅಹಮಿಕೆ-ಅಪ್ರಬುದ್ಧತೆಗಳದೇ ಮೇಲುಗೈಯಾದರೆ ಅದು ಆತ್ಮಘಾತಕವೂ ರಾಷ್ಟ್ರಘಾತಕವೂ ಆಗುತ್ತದೆ.

ಕಾಂಗ್ರೆಸಿನದು ಈಗ ಉಳಿವು-ಅಳಿವಿನ ನಿರ್ಣಾಯಕ ಸೆಣಸಾಟವಾಗಿದೆ. ಇದು ಕಾಂಗ್ರೆಸಿನ ಹೆಣಗಾಟವೆಂದು ಸಂಕೇತಿತವಾಗಿದ್ದರೂ ವಾಸ್ತವವಾಗಿ ಈಗಿನದು ನಿರ್ವಾಹವಿಲ್ಲದೆ ಕಾಂಗ್ರೆಸಿನ ನೇತೃತ್ವದ ಛಾಯೆಯಲ್ಲಿ ತಮ್ಮ ವರ್ಚಸ್ಸನ್ನು ವೃದ್ಧಿಸಿಕೊಳ್ಳಲೆಳಸಿರುವ ಔಪವಿಭಕ್ತಿಕ ಪಕ್ಷಗಳ ಸೆಣಸಾಟವಾಗಿದೆ. ಆದರೆ ಇತ್ತೀಚಿನ (ಜುಲೈ ೨೦೨೩) ಸಮೀಕ್ಷೆಗಳೂ ಸ್ಥಿರೀಕರಿಸಿರುವಂತೆ ಕೇಂದ್ರದಲ್ಲಿ ಎನ್.ಡಿ.ಎ. ಕೂಟದ ಮುಂದುವರಿಕೆಗೆ ವಿಚ್ಛಿತ್ತಿ ತಲೆದೋರುವ ಸಂಭವ ಕಾಣುತ್ತಿಲ್ಲ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ