ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮೇ 2015 > ಕಾವ್ಯಗಂಗಾ

ಕಾವ್ಯಗಂಗಾ

ಲಗುನ-ಮರಣವನುದಿನ

Laguna-Maranavanudina

ಹೋಮ ಹೊಗೆಯುಕ್ಕುತಿದೆ ಸಪ್ತಪದಿ ತುಳಿಯಲಿಕೆ

ಧೂಮವಿಕ್ಕಿದೆ ಕೊಳ್ಳಿ ಸೂತಕವ ತೋರಲಿಕೆ             ||೧||

 

ಸಿರಿಸೌಖ್ಯದಿಂ ಬಾಳಿರೆಂದಕ್ಕಿಯಿಕ್ಕುವರು

ಚಿರಶಾಂತಿ ಲಭಿಸಲೆನೆ ಬಾಯ್ಗಕ್ಕಿ ಹಾಕುವರು      ||೨||

 

ಮೆರವಣಿಗೆ ಹೊರಟಿಹುದು ನಾಲ್ಚಕ್ರರಥದಲ್ಲಿ

ಮೆರೆಸುವರು ಶವವನ್ನು ನಾಲ್ಜನರ ಹೆಗಲಲ್ಲಿ             ||೩||

 

ಖುಷಿಯಲ್ಲಿ ಹಾಕುವರು ನವಪುಷ್ಪಗಳ ಮಾಲೆ

ವ್ಯಸನ ಸೂಸಿಡುವರು ಸುಮಸರವ ಶವದ ಮೇಲೆ   ||೪||

 

ಮಲಗುವರು ಕೋಣೆಯೊಳು ಒರುಜನ್ಮವೀಯಲಿಕೆ

ಮಲಗಿಪರು ಕುಳಿಯೊಳಗೆ ಮರುಜನ್ಮ ಪಡೆಯಲಿಕೆ        ||೫||

 

ತಳ್ಕೈಸಿ ಕಳುಹೆ ವಧುವನು ಬಿಕ್ಕುತಳುತಿಹರು

ಬೀಳ್ಕೊಡಲು ಶವವನ್ನು ಕಂಬನಿಯ ಕರೆಯುವರು   ||೬||

 

ಹರಿಯುತಿದೆ ಜನಜಂಗುಳಿಯು ಹುಚ್ಚುಹೊಳೆಯಂತೆ

ಹಿರಿಕಿರಿಯರೆನ್ನದಲೆ ಭೇದವೇನಿರದಂತೆ                 ||೭||

 

ನೋಡಿದಾಗಿವನೆರಡ ತುಸುಸಾಮ್ಯ ಕಂಡೊಡಂ

ಗಾಢವಿಹುದೈ ಭೇದ ತೋರುತತಿಜಂಜಡಂ         ||೮||

 

ಇಂತೊಂದು ಶುಭಲಗುನ ಮತ್ತೊಂದಶುಭಮರಣ

ಸಂತಸದಿ ಸಂಕಟದಿ ಸಾಗುತ್ತಿದೆಯನುದಿನ               ||೯||

—  ಶ್ರೀ ಕುಮಾರನಿಜಗುಣ ಸ್ವಾಮಿಗಳು

ಲೇಖಕರು ಅಧ್ಯಾತ್ಮ ಸಾಧಕರು; ಕೊಳ್ಳೇಗಾಲ ಚಿಲುಕವಾಡಿಯ ನಿಜಗುಣ ಫೌಂಡೇಷನ್ಸ್ ಅಧ್ಯಕ್ಷರು ಹಾಗೂ ಕವಿಗಳು.

 

ನೀಲಿಬಾನಿನಂಗಳದಿ ಅರಳಿ ನಿಂತ ಮೋಡಗಳೆ…

Image0031ನೀಲಿಬಾನಿನಂಗಳದಿ ಅರಳಿ ನಿಂತ ಮೋಡಗಳೆ

ನನ್ನ ಭುವಿಗೆ ಮಳೆಯ ತನ್ನಿ |

ಉರಿ ಬಿಸಿಲ ಬೇಗುದಿಗೆ ಬೆಂದು ಬಳಲಿ ಬಸವಳಿದ

ಈ ಧರೆಯ ತಣಿಸ ಬನ್ನಿ || ನನ್ನ ಭುವಿಗೆ ಮಳೆಯ ತನ್ನಿ ||

 

ಬತ್ತ, ರಾಗಿ, ಜೋಳ, ಗೋದಿ, ಹುರುಳಿ, ತೊಗರಿ, ಹೆಸರುಕಾಳ

ಬಗ್ಗಡದಿ ಬಿತ್ತ ಬನ್ನಿ |

ತೇವಕಾವವು ಬೆಸೆದು ಹೊಸ ಸೃಷ್ಟಿ ಚಿಗುರು ಒಡೆದು

ಹೊಲಕೆಲ್ಲ ಹಸಿರು ತನ್ನಿ || ನನ್ನ ಭುವಿಗೆ ಮಳೆಯ ತನ್ನಿ ||

 

ಒಡೆದ ಏರಿಯ ಬೆಸೆದು ನೆಲದಾಳದ ಹೂಳು ತೆಗೆದು

ಕೆರೆ ಒಡಲ ತುಂಬ ಬನ್ನಿ |

ಕೋಡಿ ತೂಬಿನ ಕದವ ಬಾಡ ಬದುಕಿಗೆ ತೆರೆದು

ಹೊಸತನವನು ನೀಡ ಬನ್ನಿ || ನನ್ನ ಭುವಿಗೆ ಮಳೆಯ ತನ್ನಿ ||

 

ಬೆಟ್ಟ ಕಣಿವೆಯಾ ಕೊರೆದು ಹಳ್ಳ ತೊರೆಗಳ ಹೆಣೆದು

ಗಂಗೆಯಾಗಿ ಹರಿಯ ಬನ್ನಿ |

ನೈಜತೆಯ ರೂಪತಳೆದು ಜೀವಸಂಕುಲ ಪೊರೆದು

ಸಾಗರವ ಸೇರ ಬನ್ನಿ || ನನ್ನ ಭುವಿಗೆ ಮಳೆಯ ತನ್ನಿ ||

—  ಪೆ|| ನಾರಾಯಣ ಶೆಣೈ ಕೆ.

ಲೇಖಕರು ತಂತ್ರಜ್ಞಾನ ಪ್ರೊಫೆಸರ್ ಹಾಗೂ ಪರಿಸರ ಚಳವಳಿ ಕಾರ್ಯಕರ್ತರು

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ