ವೇದಾಂತದರ್ಶನಕ್ಕಿಂತ `ಸೆಕ್ಯುಲರ್’ ಆದ ಸಿದ್ಧಾಂತ ಜಗತ್ತಿನಲ್ಲಿ ಬೇರೆ ಇಲ್ಲ. ಪಾವಿತ್ರ್ಯವು ಪ್ರತಿವ್ಯಕ್ತಿಯ ಸಹಜಸ್ವರೂಪ ಎಂಬುದನ್ನು ಒಪ್ಪದಿರುವ ಯಾವ ಪ್ರಸ್ಥಾನವೂ ಹಿಂದೂಧರ್ಮದ ಕಕ್ಷೆಯಲ್ಲಿ ಇಲ್ಲ. ಆತ್ಮಬಲವು ಚಿಮ್ಮಬಲ್ಲದ್ದು ಸತ್ಯಾರಾಧನೆಯಿಂದ ಮಾತ್ರ. ಈಗ್ಗೆ ಕೆಲವು ದಶಕಗಳ ಹಿಂದೆ ಎಲ್ಲೆಡೆ ವಿರಾಜಿಸುತ್ತಿದ್ದ ಸ್ವಾಮಿ ವಿವೇಕಾನಂದರ ಚಿತ್ರದ ಕೆಳಗೆ ಇರುತ್ತಿದ್ದ ವರ್ಣನೆ “ದಿ ಹಿಂಡೂ ಮಾಂಕ್ ಆಫ್ ಇಂಡಿಯಾ” ಎಂದು. ದೇಶವಿದೇಶಗಳವರು ಸ್ವಾಮಿಜೀಯವರನ್ನು ಗುರುತಿಸಿದ್ದುದು ಹಾಗೆಯೇ. ಅದು ಅನ್ವರ್ಥವೂ ಆಗಿತ್ತು. ಸ್ವಾಮಿಜೀಯವರ ಮುಖ್ಯ ಸಂದೇಶವೆಂದರೆ ಹಿಂದೂಧರ್ಮದ ಔಜ್ಜ್ವಲ್ಯವನ್ನು ಇಡೀ ವಿಶ್ವದ ಗಮನಕ್ಕೆ ತರಬೇಕೆಂಬುದು […]




