![](http://utthana.in/wp-content/uploads/2017/07/nagu.jpg)
“ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ.”
ಹೋಗಿ ಬಂದವರಿಲ್ಲ, ವರದಿ ತಂದವರಿಲ್ಲ.
ಆದರೆ ಮದುವೆಯ ಸಂದರ್ಭದಲ್ಲಿ ಹಾಗೂ ಅನಂತರದ ದಿನಗಳಲ್ಲಿ ಕಾಣಿಸಿಕೊಳ್ಳುವ ಕುಸ್ತಿಪಂದ್ಯಗಳು ಭೂಮಿಯ ಮೇಲೆ ಮಾತ್ರ ನಡೆಯುತ್ತವೆ.
ನಾನು ಮತ್ತು ನನ್ನ ಗೆಳೆಯ ವಿಶ್ವ ಒಂದು ಅದ್ಧೂರಿ ಮದುವೆ ಸಮಾರಂಭಕ್ಕೆ ಕಳೆದವ? ಹೋಗಿದ್ದೆವು. ಬಾಗಿಲ ಚಂದದ ಹುಡುಗಿಯರು ಸ್ವಾಗತ ಕೋರಿದರು. ಅವರು ಯಾರೆಂಬುದು ನಮಗೆ ಗೊತ್ತಿರಲಿಲ್ಲ. ಅತ್ಯಂತ ಪರಿಚಯ ಇರುವಂತೆ ಅವರು ನಕ್ಕಾಗ, ವಿಶ್ವ: ’ನೀನು ಲೇಖಕ ಅಲ್ವಾ? ಅದಕ್ಕೋಸ್ಕರ ನಿನ್ನ ನೋಡಿ ನಕ್ಕಿದ್ದಾರೆ’ ಎಂದು ನನಗೆ ರೈಲು ಹತ್ತಿಸಿದ. ಇರಬಹುದೋ ಏನೋ ಎಂದು ಪರಿಚಯ ಹೇಳಿದೆ.
“ನಾನು ಕವಿ, ಪದ್ಯಗಳು ಬರೀತೀನಿ” ಎಂದೆ.
“ನನಗೆ ಕವಿಗಳನ್ನು ಕಂಡ್ರೆ ಆಗೊಲ್ಲ” ಎಂದ ಆ ಹುಡುಗಿ, “ನಮ್ಮ ಅಕ್ಕನ್ನ ಒಬ್ಬ ಕವಿ ಮದುವೆಯಾಗಿ ಕಣ್ಣೀರಲ್ಲಿ ಕೈ ತೊಳೆಸ್ತಿದ್ದಾನೆ. ಅಯೋಗ್ಯ” ಎಂದಳು.
“ನನಗೆ ಕಸಿವಿಸಿಯಾಯಿತು. ನೀವು ಈ ಮದುವೆಗೆ ಬಂದಿದ್ದೀರ, ನೀವು ಯಾರು?” ಎಂದೆ.
“ನಾವು ವೆಲ್ಕಮ್ ಗರ್ಲ್ಸ್. ಯಾರೇ ಬರಲಿ, ಕೈ ಮುಗಿದು ವೆಲ್ಕಮ್ ಮಾಡ್ತೀವಿ” ಎಂದಳು.
“ಒಂದು ಕತ್ತೆ ಬಂದರೆ?” ಎಂದ ವಿಶ್ವ.
“ಆಗಲೂ ವೆಲ್ಕಮ್ ಹೇಳ್ತೀವಿ. ಈಗ ನಿಮಗೆ ಹೇಳಲಿಲ್ಲವೇ?” ಎಂದು ಕಿಲಕ್ಕನೆ ನಕ್ಕಳು.
ಔಟ್ಸೋರ್ಸ್ ವೆಲ್ಕಂ
ಛತ್ರದ ಮುಖ್ಯದ್ವಾರದತ್ತ ನಡೆದೆವು. ಅಲ್ಲಿ ಒಂದು ಸುಂದರವಾದ ಆಳೆತ್ತರ ಹೆಣ್ಣಿನ ಗೊಂಬೆ ನಿಂತಿತ್ತು. ಮತ್ತೆ ಮತ್ತೆ ನೋಡುವ? ಅದು ಆಕ?ಕವಾಗಿತ್ತು. ಅದರ ಬಳಿ ನಾವು ಹೋಗುತ್ತಿದ್ದಂತೆಯೇ ಅದು ತನ್ನ ಎರಡೂ ಕೈಗಳನ್ನು ಎತ್ತಿ ‘ನಮಸ್ಕಾರ’ ಎಂದಿತು. ಅದಕ್ಕೆ ಸೆನ್ಸಾರ್ ಅಳವಡಿಸಿದ್ದರು. ಯಾವುದೇ ನೆರಳು ಬಿದ್ದಾಗ ಆ ಗೊಂಬೆ ಕೈ ಮುಗಿಯುತ್ತದೆ. ಇನ್ನೂ ಸ್ವಲ್ಪ ಮುಂದೆ ಹೋದಾಗ ಅದೇ ರೀತಿಯ ಮತ್ತೊಂದು ಹೆಣ್ಣುಗೊಂಬೆ ಇತ್ತು. ಅದರ ಕೈಲಿ ಒಂದು ಪನ್ನೀರುದಾನಿ. ಅದು ಪನ್ನೀರನ್ನು ಚಿಮುಕಿಸುತ್ತಿತು. ನನಗೆ ಆಶ್ಚರ್ಯವಾಯಿತು, ಹಿಂದೆ ಬಂದು ಮತ್ತೆ ಮುಂದೆ ಬಂದೆ. ಮತ್ತೆ ಅದು ಪನ್ನೀರನ್ನು ಎರಡನೇ ಬಾರಿ ಚಿಮುಕಿಸಿತು.
ಸೆನ್ಸಾರ್ ಅಳವಡಿಸಿರುವುದರಿಂದ, ಯಾವುದೇ ನೆರಳು ಬಿದ್ದಾಗಲೂ ಅದು ಪನ್ನೀರು ಚಿಮುಕಿಸುತ್ತದೆ. ಒಂದು ನಾಯಿ ಅದರ ಮುಂದೆ ಚಲಿಸಿದಾಗ ಕೂಡ ಸೆನ್ಸಾರ್ ಕೆಲಸ ಮಾಡುತ್ತದೆ. ನಾಯಿಗೆ ಪನ್ನೀರನ್ನು ಚಿಮುಕಿಸುತ್ತದೆ. ಕಳ್ಳ ಬಂದಾಗಲೂ ಅದು ಪನ್ನೀರು ಚಿಮುಕಿಸುತ್ತದೆ, ನಮಸ್ಕಾರ ಹೇಳುತ್ತದೆ.
ಛತ್ರದ ಒಳಗೆ ಬಂದೆವು. ನಮ್ಮನ್ನು ವಿಚಾರಿಸಿದವರೆ ಹೊಸಬರೇ. ಯಾವುದೂ ಪರಿಚಿತ ಮುಖಗಳಿಲ್ಲ. ಸಂಬಂಧಿಕರಲ್ಲಿ ಕೆಲವರು ಮದುವೆಯ ಮಂಟಪದಲ್ಲಿ ಕುಳಿತಿದ್ದರು. ಉಳಿದವರು ಹಾಲ್ನಲ್ಲಿ ಅಲ್ಲಲ್ಲಿ ಕುಳಿತು ಫೋನ್ನಲ್ಲಿ ಮೆಸೇಜ್ ಓದುತ್ತಿದ್ದರು. ಕೆಲವರು ಕ್ಯಾಂಡಿಕ್ರಶ್ ಆಡುತ್ತಿದ್ದರು.
ಇಡೀ ಮದುವೆಕಾರ್ಯವನ್ನು ಶಾಸ್ತ್ರಿಗಳಿಗೆ ಕಾಂಟ್ರಾಕ್ಟ್ ಕೊಟ್ಟಿದ್ದರಿಂದ ಅವರು ಪಟಪಟನೆ ಮಂತ್ರ ಹೇಳಿ ಮುಗಿಸಿ ಮಾಂಗಲ್ಯಧಾರಣೆ ಮಾಡಿಸಿದರು. ಅನಂತರ ಊಟಕ್ಕೆ ಎಲ್ಲರೂ ಎದ್ದಾಗ ನಾವೂ ಎದ್ದೇವು. ಊಟದ ಮನೆಯಲ್ಲಿ ನಮ್ಮನ್ನು ಉಪಚರಿಸಿದ್ದು ಹೊಸಮುಖಗಳೇ. ಊಟದಮನೆಗೆ ಕರೆದುಕೊಂಡು ಹೋದವರು, ಊಟ ಮಾಡಿಸಿದವರು, ತಾಂಬೂಲ ಕೊಟ್ಟವರು, ಕೈ ಮುಗಿದು ನಮ್ಮನ್ನು ಹೊರಕ್ಕೆ ಕಳಿಸಿದವರು ಎಲ್ಲರೂ ಹೊಸಮುಖದವರೇ. ಆದರೆ ನಗುವಿಗೆ ಕೊರತೆ ಇರಲಿಲ್ಲ. ಹೊರಗಡೆ ಬಂದಾಗ ಮತ್ತೆ ಕೆಲವು ಹುಡುಗಿಯರು ಕೈಮುಗಿದು ‘ಹೋಗಿ ಬನ್ನಿ’ ಎಂದರು. ನನಗೆ ತಲೆ ಕೆಟ್ಟುಹೋಯಿತು. ಯಾಕೆ ಹೀಗೆ ಕಂಡ ಕಂಡವರು ನಮ್ಮನ್ನು ವಿಚಾರಿಸುತ್ತಿದ್ದಾರೆ ಎಂದು ಯೋಚಿಸುತ್ತಾ, ವಿಶ್ವನನ್ನು ಎಳೆದುಕೊಂಡು ಪಕ್ಕಕ್ಕೆ ಬಂದೆ. ಛತ್ರದ ಬಳಿಯೇ ಇದ್ದ ಒಂದು ಕಲ್ಲುಬೆಂಚಿನ ಮೇಲೆ ಕುಳಿತೆ.
“ನಮ್ಮನ್ನು ಉಪಚರಿಸಿದವರಲ್ಲಿ ಯಾರೂ ಪರಿಚಯಸ್ಥರು ಇರಲಿಲ್ಲ. ಯಾಕೆ ಹೀಗೆ ವಿಶ್ವಾಸ” ಎಂದಾಗ,”ಎಲ್ಲವನ್ನೂ ಔಟ್ಸೋರ್ಸ್ ಮಾಡಿದ್ದಾರೆ” ಎಂದ.
“ಮದುವೇನೇ ಔಟ್ಸೋರ್ಸ್ ಮಾಡಿದ್ದಾರಾ?”
“ಹೌದು. ಹೊರಗುತ್ತಿಗೆ ಕೊಟ್ಟರೆ ಪ್ರತಿಯೊಂದೂ ಅವರೇ ಮಾಡ್ತಾರೆ. ಹಣ ಕೊಟ್ಟರೆ ಸಾಕು. ನಮ್ಮನ್ನ ಸ್ವಾಗತ ಮಾಡಿದ ಸ್ವಾಗತಕಾರಿಣಿಯರು, ವೆಲ್ಕಮ್ ಗರ್ಲ್ಸ್, ಅವರಿಗೆ ಜಾಸ್ತಿ ಹಣ ಕೊಟ್ಟರೆ ಅವರು ಬಾಯಿತುಂಬಾ ನಗ್ತಾರೆ. ನಮಸ್ಕಾರ ಮಾಡಿ ಒಳಗಡೆ ಕರ್ಕೊಂಡು ಹೋಗ್ತಾರೆ. ತಾಂಬೂಲ ಕೊಡ್ತಾರೆ, ಎಲ್ಲವೂ ಅವರೇ ಮಾಡ್ತಾರೆ” ಎಂದ.
“ಕಡಮೆ ಹಣಕ್ಕೆ ಒಂದೇ ನಮಸ್ಕಾರಾನಾ?” ಎಂದು ನಕ್ಕೆ.
“ಹೌದು, ನೀನೇ ನೋಡಿದೆಯಲ್ಲಾ?” ಎಂದ ವಿಶ್ವ.
“ಮತ್ತೆ ಊಟದ ಮನೆಗೆ ಬಂದು ಉಪಚಾರ ಹೇಳೋಕೆ ಬಂಧುಗಳು ಇರಲಿಲ್ಲವಾ?” ಎಂದೆ.
“ಉಪಚಾರ ಹೇಳೋದೂ ಕೂಡ ಹೊರಗುತ್ತಿಗೇನೇ! ಊಟ ಬಡಿಸಿ ತಾಂಬೂಲ ಕೊಟ್ಟು ಕೈಮುಗಿದು ಕಳಿಸೋವರೆಗೂ ಒಟ್ಟು ಐದು ನಮಸ್ಕಾರಗಳ ಕಾಂಟ್ರಾಕ್ಟ್ ಕೊಟ್ಟಿದ್ದರು. ಒಂದೊಂದು ನಮಸ್ಕಾರಕ್ಕೂ ಅವರು ಚಾರ್ಜ್ ಮಾಡುತ್ತಾರೆ” ಎಂದ.
ನನಗೆ ಆಶ್ಚರ್ಯವಾಯಿತು.
“ಇದೆಂಥಾ ಉಪಚಾರ?” ಎನ್ನಿಸಿತು.
ಯಾರೋ ಸ್ವಾಗತ ಮಾಡುತ್ತಾರೆ, ಯಾರೋ ನಮಸ್ಕಾರ ಮಾಡುತ್ತಾರೆ, ಯಾರೋ ನಗುತ್ತಾರೆ, ಏನಿದು ವಿಚಿತ್ರ ಎನ್ನಿಸಿತು.
ಬದಲಾದ ಪರಿಸ್ಥಿತಿ
“ಆದರೆ ವಿಶ್ವ ನಾನು ಮದುವೆಯಾದಾಗ ಈರೀತಿ ಪರಿಸ್ಥಿತಿ ಇರಲಿಲ್ಲ” ಎಂದೆ.
ಆ ಕಾಲದಲ್ಲಿ ಮೂರುದಿನಗಳ ಮದುವೆ ಮಾಮೂಲು. ಇನ್ನೂ ಕೆಲವು ಮದುವೆಗಳು ಐದುದಿನಗಳ ಕಾಲ ನಡಿಯುತ್ತಿದ್ದವು. ಮದುವೆ ನಿಶ್ಚಯವಾದರೆ ಸಾಕು. ಅನೇಕ ಹತ್ತಿರದ ಬಂಧುಗಳು, ಮಿತ್ರರು ಬಂದು ಆ ಮನೆಯಲ್ಲಿ ಒಂದು ತಿಂಗಳಕಾಲ ಠಿಕಾಣಿ ಹೂಡುತ್ತಿದ್ದರು. ಭತ್ತವನ್ನು ಅಕ್ಕಿ ಮಾಡುವುದು, ಚಕ್ಲಿ ಉಂಡೆ ಮಾಡುವುದರಿಂದ ಹಿಡಿದು, ಅರಿಶಿನದ ಕೊಂಬನ್ನು ಕುಟ್ಟಿ ಪುಡಿಮಾಡುವವರೆಗೆ ಮದುವೆಗೆ ಬೇಕಾದ ಸಮಸ್ತವನ್ನೂ ಮನೆಯ ಎ ಸೇರಿ ಸಿದ್ಧಪಡಿಸುತ್ತಿದ್ದರು.
`ಕೂಡುಕುಟುಂಬಗಳಲ್ಲಿ ಈ ಮದುವೆ ಎಂಬುದು ಒಂದು ಜಾತ್ರೆಯ ಮಾದರಿ ಸಂತಸ ತರುತ್ತಿತ್ತು. ಅಂತಹ ಆನಂದಕ್ಕೆ ಇವತ್ತು ಏನಾಗಿದೆ? ಆ ಸಡಗರ ಎಲ್ಲಿಗೆ ಹೋಗಿದೆ?’ ಎಂದು ಯೋಚನೆ ಮಾಡಿದೆ.
“ಈಗ ಪ್ರತಿಯೊಬ್ಬರೂ ಬ್ಯುಸಿಯಾಗಿರ್ತಾರಪ್ಪ, ಯಾರನ್ನು ಕರೆದರೂ ಬರೋದಿಲ್ಲ” ಎಂದ ವಿಶ್ವ.
“ಹಾಗೇನೂ ಇಲ್ಲ. ನೀವು ಕರೀತಿಲ್ಲ, ಆದ್ದರಿಂದ ಅವರು ಬರ್ತಾ ಇಲ್ಲ ಅ?. ಪ್ರತಿಯೊಂದೂ ಔಟ್ಸೋರ್ಸ್ ಮಾಡಿದರೆ ಗತಿಯೇನು?”
“ನಾಳೆ ಅಪ್ಪ-ಅಮ್ಮನಿಗೆ ನಮಸ್ಕಾರ ಮಾಡೋದೂ ಕೂಡ ಔಟ್ಸೋರ್ಸ್ ಮಾಡ್ತೀರೋ ಏನೋ?” ಎಂದೆ.
“ಹೌದು ಅದೂ ಕೂಡ ಆಗಿದೆ” ಎಂದು ವಿಶ್ವ ಹೇಳಿದಾಗ ನನಗೆ ತಬ್ಬಿಬ್ಬು.
“ನಿಜವಾಗಲೂ” ಎಂದೆ.
“ನನ್ನ ಗೆಳೆಯನೊಬ್ಬನ ಅಪ್ಪ ಆಸ್ಪತ್ರೇಲಿ ಇದ್ದ. ಬೇಗ ಗುಣಮುಖವಾಗಿರಿ ಎಂದು ಒಂದು ಬೊಕೆಯನ್ನು ಕಳಿಸಲು ಔಟ್ಸೋರ್ಸ್ನವರಿಗೆ ಹೇಳಿದ್ದ. ಫೋನ್ ಮಾಡಿದಾಗ ಅಂಗಡಿಯವನು ಬೊಕೆಯನ್ನು ತೆಗೆದುಕೊಂಡು ಹೋಗಿ ಅವನು ಹೇಳಿದಂತೆ ಎಂಟನೇ ಬೆಡ್ನ ವ್ಯಕ್ತಿಗೆ ಅದನ್ನು ಕೊಟ್ಟು ಕೈಕುಲುಕಿ ಬಂದ. ಆದರೆ ಅ?ರಲ್ಲಿ ಒಂದು ಯಡವಟ್ಟು ಆಗಿತ್ತು.”
“ಅಂದರೆ…”
“ಆ ವ್ಯಕ್ತಿ ಆ ಆಸ್ಪತ್ರೆಗೆ ಹೋಗುವ ವೇಳೆಗೆ ಎಂಟನೆ ಬೆಡ್ಡಿನಲ್ಲಿ ಇದ್ದ ಇವನ ತಂದೆ ಡಿಸ್ಜಾರ್ಜ್ ಆಗಿ ಮನೆಗೆ ಹೋಗಿದ್ದ. ಅದೇ ಬೆಡ್ಡಿಗೆ ಬೇರೆ ಒಬ್ಬ ಬಂದಿದ್ದ. ಆ ಹೂಗುಚ್ಚವನ್ನು ಅವನು ಸ್ವೀಕರಿಸಿದ. ಬಿಲ್ ಅಂತು ನನ್ನ ಗೆಳೆಯನಿಗೇ ಬಂತು.”
ಕೂಡುಕುಟುಂಬ
ಕೂಡುಕುಟುಂಬಗಳು ಮಾಯ ಆಗಲು ಶುರುವಾದ ಮೇಲೆ ಈ ಔಟ್ಸೋರ್ಸ್ಗೆ ಡಿಮ್ಯಾಂಡ್ ಬಂದಿದೆ. ಇವೆಂಟ್ ಮ್ಯಾನೇಜರ್ಸ್ಗೆ ಹೇರಳವಾಗಿ ಕೆಲಸ ಸಿಗುತ್ತಿದೆ. ಮದುವೆ ಆಗಲಿರುವ ಹುಡುಗ ಹುಡುಗಿಯ ಹೆಸರು ಹೇಳಿ ಹಣ ಕೊಟ್ಟರೆ ಸಾಕು; ಛತ್ರ ಬುಕ್ ಮಾಡಿ, ಅವರಿಗೆ ಬೇಕಾದ ಅಡುಗೆಯನ್ನು ಬಡಿಸಿ, ಅವರನ್ನು ಒಂದು ಒಳ್ಳೆಯ ಕಾರಿನಲ್ಲಿ ಕೂರಿಸಿ, ಅವರು ಹೇಳಿದ ಜಾಗಕ್ಕೆ ಹನಿಮೂನಿಗೆ ಕಳಿಸೋವರೆಗೂ ಫುಲ್ಪ್ಯಾಕೇಜ್ ಇರುತ್ತದೆ.
ನಮಸ್ಕಾರ ಮಾಡಲು ಬಾಡಿಗೆಜನ ಸಿಗುವಾಗ ಹೃದಯಗಳಿಗೆ ಹೆಚ್ಚು ಕೆಲಸ ಇರುವುದಿಲ್ಲ. ಹಣ ಒಂದಿದ್ದರೆ ಹೃದಯ ಬೇಕಾಗುವುದಿಲ್ಲ.
ಮದುವೆ, ಮುಂಜಿ, ಉಪನಯನ ಮುಂತಾದ ಸಂದರ್ಭಗಳಲ್ಲಿ ಬಂಧುಗಳು ಒಗ್ಗಟ್ಟಾಗುತ್ತಿದ್ದರು. ಕಷ್ಟಸುಖಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಪರಸ್ಪರ ಸಹಾಯ ದೊರೆಯುತ್ತಿತ್ತು. ಈ ದಿನಗಳಲ್ಲಿ ಅವೆಲ್ಲ ಇಲ್ಲವೇ ಇಲ್ಲ. ಸಿನಿಮಾಥಿಯೇಟರ್ಗೆ ಹೋಗಿ ಬಂದಂತೆ ಹತ್ತಿರದ ಮದುವೆ ಮನೆಗಳಿಗೆ ಹೋಗಿ ಬರುತ್ತೇವೆ. ಇದು ಹೀಗೇ ಮುಂದುವರಿದರೆ ನಮ್ಮ ಸಂಪ್ರದಾಯ ಹಳ್ಳಹಿಡಿಯುತ್ತದೆ ಅಷ್ಟೇ. ಭಾರತೀಯ ಕುಟುಂಬ ಕಲ್ಪನೆ ನಿಂತಿರುವುದೇ ಪರಸ್ಪರ ಪ್ರೀತಿ, ನಂಬಿಕೆ ಸೌಹಾರ್ದತೆ ಎಂಬ ಬುನಾದಿಯ ಮೇಲೆ. ಪ್ರೀತಿ ಸಂಪ್ರದಾಯಗಳನ್ನು ಔಟ್ಸೋರ್ಸ್ ಮಾಡಲು ಹೊರಟವರಿಗೆ ಏನೆಂದು ಹೇಳೋಣ?