ನಾವು ಡಾಕ್ಟರ್ ಅಂದ್ರೆ ಜೀವ ಉಳ್ಸೋರು, ತೆಗೆಯೋರಲ್ಲ….
ಬದುಕು ಯಾರಿಗೆ ಮುಖ್ಯವಲ್ಲ? ಒಂದರಿಂದ ಇನ್ನೊಂದರ, ಒಬ್ಬರಿಂದ ಇನ್ನೊಬ್ಬರ ಸೃಷ್ಟಿಕ್ರಿಯೆಯೇ ಅನನ್ಯ. ಸೃಷ್ಟಿಸಿದರೆ ಸಾಕೇ? ಅದರ ಪೋಷಣೆ? ವೈದ್ಯಕೀಯ ಲೋಕವೆಂಬುದು ಇರುವುದೇತಕ್ಕೆ ಮತ್ತೆ? ಯಮನ ಪಾಶದೊಳಗೆ ಮೂಕಪ್ರಾಣಿಯಂತೆ ಮರಗಟ್ಟಿ ಹೋಗುತ್ತಿದ್ದವನನ್ನು ಮರಳಿ ಕರೆತರಲು ಅಂದಿನ ಸತಿಸಾವಿತ್ರಿಗಾದೀತು. ಆಂಜನೇಯನ ಜಿಗಿತವಂತೂ ಇಂದು ಅಸಾಧ್ಯವೇ ಸರಿ. ಈ ಸಂಜೀವಿನಿಯ ಆವಿಷ್ಕಾರವೇ ವಿಚಿತ್ರ. ಜೀವ ಉಳಿಸುವುದೊಂದೇ ಅದರ ಉದ್ದೇಶ ಆಗಿದ್ದರೆ ಸಾಕು ಎಂದು ಬೇಡುವುದೂ ಅನಿವಾರ್ಯ.
“ಬನ್ನಿ ಮೇಡಂ. ಬಹಳ ಅಪರೂಪ. ತುಂಬಾ ಇಳಿದು ಹೋಗಿದ್ದೀರಿ.”
“ಹಲೋ ಡಾಕ್ಟರ್…. ನೀವು ಅದೆಷ್ಟು ಸುಲಭದಲ್ಲಿ ಡಾಕ್ಟರ್ ಆಗಿದ್ದೀರೋ ನಾ ಕಾಣೆ. ನಾನು ಮಾತ್ರ ಪ್ರಾಣ ಹೋಯಿತೇನೋ ಎನ್ನುವಷ್ಟು ಒದ್ದಾಡಿದೆ. ಸಾಕಪ್ಪಾ ಸಾಕು.”
“ಓಹ್ ಹೌದಲ್ವಾ? ನೀವೂ ಈಗ ಡಾಕ್ಟರ್ ಆಗಿದ್ದೀರಿ. ವಿಶ್ ಮಾಡೋದಕ್ಕೆ ಮರ್ತೇ ಹೋಯ್ತು ನೋಡಿ. ಅಭಿನಂದನೆಗಳು.”
“ಎಲ್ಲಾ ನಿಮ್ಮಂಥವ್ರ ಆಶೀರ್ವಾದ ಡಾಕ್ಟರ್.”
“ನನ್ನ ಕ್ಲಿನಿಕ್ನ ಮುಂದೆ ನೀವು ಕ್ಲಿನಿಕ್ ತೆರೆಯಲಿಕ್ಕಿಲ್ಲ ಎಂಬ ಖಾತ್ರಿಯಲ್ಲೇ ಆಶೀರ್ವಾದ ಮಾಡಿದ್ದೆ. ಹ…. ಹ….. ಹ….”
“ನೀವೂ ಸರಿಯೇ ಡಾಕ್ಟರ್…. ಪಿಹೆಚ್.ಡಿ. ಮಾಡಿ ನಾನ್ಯಾಕೆ ಕ್ಲಿನಿಕ್ ತೆರೀಲಿ? ನನಗೆ ಜನರ ಬಗ್ಗೆ ಕಾಳಜಿ ಇದೆ.”
“ಸರಿ ಮೇಡಂ. ತಮಾಷೆ ಮಾಡಿದೆ. ಈಗ ಡಾಕ್ಟರ್ ಡಾಕ್ಟರನ್ನು ಹುಡುಕಿ ಬಂದ ಕಾರಣ?”
“ಒಂದು ತಿಂಗಳಿನಿಂದ ಆರೋಗ್ಯ ಸರಿ ಇಲ್ಲ ಡಾಕ್ಟರ್. ಕೆಲಸದ ಒತ್ತಡವೂ ಆಗಿರ್ಬೋದು. ಆದ್ರೆ ಲಿವರ್ ಸಮಸ್ಯೆ ಕಡೆಗಣಿಸ್ಬಾರ್ದು ಅಲ್ವಾ? ಮೋಶನ್ ಸಮಸ್ಯೆ ಜೀವ ತಿಂತಿದೆ.”
“ಅಷ್ಟೇನಾ? ನಾನೇನೋ ಅಂದ್ಕೊಂಡೆ. ಬನ್ನಿ ಟೆಸ್ಟ್ ಮಾಡಿ ನೋಡೋಣ.”
“ಅಯ್ಯೋ…. ಟೆಸ್ಟ್ ಮಾಡ್ತೀರಾ?”
“ಥೂ ನಿಮ್ಮ….. ಏನ್ ಪಿಹೆಚ್.ಡಿ. ನೀವು? ಜನರಲ್ ಚೆಕಪ್ ಮಾಡ್ಬೇಕು ಅಂದೆ ಅಷ್ಟೆ.”
“ಅಬ್ಬಾ. ಬದುಕಿದೆ. ನಡೀರಿ.”
“ಅರೆ ಅರೆ…. ಏನಿದು ಗುಲಾಬಕ್ಕಾ…. ಒಳಗೆ ಪೇಶಂಟ್ ಒಬ್ರು ಇರೋವಾಗ ಹೀಗೆ ಗೂಳಿ ಥರ ನುಗ್ತೀಯಲ್ಲಾ? ಯಾಕಿಷ್ಟು ಗಾಬರಿ, ಏನಾಯ್ತು?”
“ಡಾಕಟ್ರೇ…. ಒಸಿ ಜಲ್ದೀ ಮಾಡಿ. ಒಂದು ಹುಡ್ಗೀ ಜ್ಞಾನ ತಪ್ಪಿದೆ. ರಕ್ತ ಬೇರೆ ವಾಂತಿ ಮಾಡ್ತದೆ. ಒಸಿ ನೋಡಿ ಡಾಕಟ್ರೇ?”
“ಸರಿ. ಕರ್ಕೊಂಡು ಬಾ ಒಳಗೆ. ಮೇಡಂ ಬೇಜಾರ್ ಮಾಡ್ಕೋಬೇಡಿ. ಸ್ವಲ್ಪ ಇಲ್ಲೇ ಬದಿಯಲ್ಲಿ ಕೂತಿರಿ. ಅವರನ್ನು ಕಳಿಸಿ ಆಮೇಲೆ ನಿಮ್ಮನ್ನು ನೋಡ್ತೇನೆ. ಏ…. ಗುಲಾಬಿ….. ಹುಶಾರು…. ಮೆಲ್ಲ ಮೆಲ್ಲ….. ಇಲ್ಲಿ ಮಲ್ಗಿಸಿ… ಒಮ್ಮೆ ಎಲ್ರೂ ಹೊರಗೆ ಹೋಗಿ ನೋಡ್ವ. ಗುಲಾಬಿ, ನೀನು ಮತ್ತೆ ಆ ಹುಡುಗಿ ತಾಯಿ ಮಾತ್ರ ಇದ್ರೆ ಸಾಕು. ಎಲ್ರನ್ನು ಕಳ್ಸು.”
“ಆಗ್ಲಿ ಡಾಕಟ್ರೇ. ಏ ಹೊರಗಿರ್ರಪ್ಪೋ. ನಾ ಎಲ್ಲ ನೋಡ್ಕಂತೀನಿ.”
“ನೀನೇನು ನೋಡ್ಕೋಳೋದೇ ಗುಲಾಬಿ. ನೋಡ್ಕೊಳ್ಳೋಳು ಇದೆಲ್ಲಾ ಆಗುವಾಗ ಎಲ್ಲಿದ್ದೆ?”
“ಏನ್ ಹೇಳೋದು ಡಾಕಟ್ರೇ. ಎಲ್ಲ ಕಣ್ಮುಚ್ಚಿ ತೆರೆಯೋದ್ರೊಳಗ ಆಗೋಯ್ತ್ರಿ. ಅದೂ ಅದೂ ಏನಾಯ್ತೂ ಅಂದ್ರೆ?”
“ಏ ನೀನ್ ಸುಮ್ಕಿರೇ ಗುಲಾಬಿ. ಇದ್ದದ್ದನ್ನು ಇಲ್ಲದ್ದನ್ನು ಎಲ್ಲಾ ಹೇಳ್ಬ್ಯಾಡ. ನಾನು ಆಕಿ ತಾಯಿ. ನಾನೇ ಯೋಳ್ತೀನಿ. ಡಾಕಟ್ರೇ ನನ್ ಕೂಸು ಕತ್ತಲಾಯ್ತೂಂತ ಓಡೋಡಿ ಬಂತಾ? ಮುಗ್ಗರಿಸಿ ಬಿತ್ತು. ಅದ್ಕ ಮುಂದಿನ ಹಲ್ಲು ಕಳಚದೆ. ಆಟೇಯಾ. ಇನ್ನೇನಿಲ್ಲ…..”
“ಆದ್ರೆ ತಾಯೀ ಇದು ಮುಗ್ಗರಿಸಿ ಬಿದ್ದ ಹಾಗೆ ಕಾಣ್ತಾ ಇಲ್ಲ. ಯಾರೋ ಬಲವಾಗಿ ದೂಡಿದ್ದೋ ಅಥವಾ ಹೊಡೆದದ್ದೋ? ನಂಗ್ಯಾಕೋ ಇದು ಪೊಲೀಸ್ ಕೇಸ್ ಆಗ್ಬೇಕಾಗಿರೋದು ಅನ್ನಿಸ್ತಿದೆ. ಏನೇ ಗುಲಾಬಿ?”
“ಅದೇ ಮತ್ತೆ. ನಾನಾಗ್ಲೇ ಯೋಳ್ದೆ ನಿಂಗೆ ನಿಜಾನೆ ಯೋಳೋಣಾಂತ. ಕೇಳ್ತಿಯಾ ನನ್ನ ಮಾತನ್ನು? ಈಗೇಳೂ ನಿನ್ ಮಗ್ಳ ಕತಿನಾ…. ಡಾಕಟ್ರ ತಾವ ಸುಳ್ ಯೋಳ್ಬಾರ್ದೂ. ಅಷ್ಟೂ ಗೊತ್ತಾಗಕಿಲ್ವಾ?’
“ಅಯ್ಯೋ ಡಾಕಟ್ರೇ ನಿಮ್ ದಮ್ಮಯ್ಯ ಯಾರ್ಗೂ ಹೇಳಾಕ್ ಹೋಗ್ಬೇಡ್ರೀ. ನಾನೇ ಯೋಳ್ತೀನಿ. ಆದ್ರ ಮೊದ್ಲು ಕೂಸಿಗೆ ಏನಾರ ಔಷದ-ಗಿವ್ಷದ ಹಚ್ಚಿ ಇಲ್ಲೇ ಮಲಗಿಸ್ರೀ. ನೀವ್ ಒಸಿ ಆ ಕಡೆ ಬಂದ್ರ ವಿಚಾರ ಎಲ್ಲ ಯೋಳ್ತೀನ್ರಿ…..ಊಂ….. ಊಂ…..”
“ಸರಿ ನೀನೀಗ ಆ ಹುಡುಗಿ ಮುಂದೆ ಅಳ್ಬೇಡ. ಅಲ್ಲಿ ಮೇಡಂ ಜೊತೆ ಕೂತಿರು. ನಾನು ಡ್ರಿಪ್ಸ್ ಹಾಕಿ ಬರ್ತೇನೆ….. ಸರಿ ಈಗ ಹೇಳಿ ಏನೇನ್ ನಡೀತು….”
“ಅದೂ ಡಾಕಟ್ರೇ…. ನನ್ ಮಗ್ಳು ಗಾರ್ಮೆಂಟ್ ಪ್ಯಾಕ್ಟ್ರಿನಾಗ ಕೆಲ್ಸಕ್ಕೊಗ್ತಾಳ್ರೀ. ಆಕಿಗೆ ಯಾರದೋ ದೋಸ್ತಿ ಐತೆ ಅಂತ ನನಗೆ ಗುಮಾನಿತ್ರೀ. ಈ ಗುಲಾಬಿ ಮೊದ್ಲೇ ಯೋಳಿದ್ರೂ ನಾ ನನ್ ಕೂಸನ್ನೇ ನಂಬ್ದೆ. ಆದ್ರೆ ಈಗೀಗ ರಾತ್ರಿ ತಡವಾಗಿ ಬರ್ತಾಳ್ರೀ. ಇವತ್ತು ಕೇಳಿದ್ರ ಎದುರುತ್ರ ಕೊಟ್ಲು ಕಣ್ರೀ. ಹಾಂಗ ತಲೆ ಹಿಡ್ದು ಗೋಡೆಗೆ ಚಚ್ಚಿದೆ ಬೋಸುಡೀದು.”
“ನಂಗೆ ಆಗ್ಲೇ ಗೊತ್ತಾಗಿತ್ತು. ಹೀಗೇ ಏನೋ ಆಗಿರ್ಬೇಕು ಅಂತ. ನನ್ನ ಹತ್ರಾನೇ ಸುಳ್ಳು ಹೇಳ್ತೀರಲ್ಲಾ?”
“ನಾನು ಯೋಳ್ದೆ ಡಾಕಟ್ರೇ, ಮೈನೆರೆದ ಹುಡ್ಗಿ. ಏನಾರೂ ಹೆಚ್ಚು ಕಡಮೆ ಆದೀತು. ಒಸಿ ಕಂಡ್ಕ ಅಂತ. ನನ್ನೇ ಬಾಯಿ ಮುಚ್ಚಿಸಿದ್ಲು ಅಂತೀನಿ.”
“ಹೆಚ್ಚು ಕಡಮೆ ಆಗಿಯಾಗಿದೆ. ಈಗ ಅದಕ್ಕೆ ಪರಿಹಾರ ಹುಡುಕ್ಬೇಕು ಅಷ್ಟೆ.”
“ಹ್ಞಾಂ! ಏನಂದ್ರಿ ನನ್ನಪ್ಪಾ? ಹೋತೋ…. ನನ್ನ ಮಾನ ಮರ್ವಾದೆ ಎಲ್ಲಾ ಹೋತಲ್ಲಪ್ಪಾ…. ಡಾಕಟ್ರೇ ನಂಗೊಂದೀಟು ವಿಷ ಕೊಟ್ಬಿಡಪ್ಪಾ…. ನಾನು ಬದ್ಕಿರಂಗಿಲ್ಲಾ…. ಅಯ್ಯೋ ಶಿವನೇ…. ಗುಲಾಬೀ…. ಎಲ್ಲ ಮುಗೀತಲ್ಲಮ್ಮೀ…..”
“ನೋಡು, ಹೊರಗಡೆ ಜನ ಇದ್ದಾರೆ. ನೀನು ಹೀಗೆ ಬೊಬ್ಬೆ ಹಾಕಿ, ನಿನ್ನ ಮಗಳ ಮಾನ ನೀನೇ ಹರಾಜು ಹಾಕ್ತಿದೀಯಾ.”
“ಅಯ್ಯೋ, ಹೌದಲ್ಲಾ ಡಾಕಟ್ರೇ. ಇದಕ್ಕಿನ್ನು ನೀವೇ ದಿಕ್ಕುರೀ.”
“ಅಯ್ಯೋ….. ಇದೊಳ್ಳೆ ಕಥೆ. ನಿಮ್ಮ ರಗಳೆಗೆ ನಾನೇನಮ್ಮಾ ಮಾಡ್ಲೀ?”
“ಅಪ್ಪೋರೆ ನಿಮ್ಮ ಕಾಲಿಗ ಬೀಳ್ತೀನ್ರೀ. ನೀವೇ ಮನಸ್ಸು ಮಾಡ್ಬೇಕ್ರೀ….”
“ಹುಂ….. ನೋಡು ತಾಯೀ….. ಈಗ ನಮಗೆ ಇರೋದು ಒಂದೇ ದಾರಿ.”
“`ಹುಂ….ಹುಂ….. ನಾನೂ ಅದನ್ನೇ ಹೇಳೋಣಾಂತ….”
“ಆ ಹುಡ್ಗ ಯಾರೂಂತ ನೋಡಿ ಅವನನ್ನು ನಿನ್ನ ಮಗಳಿಗೆ ಮದುವೆ ಮಾಡೋದು. ಒಂದು ಸಣ್ಣ ಉದ್ಯೋಗಿ ಆಗಿದ್ರೂ ಸಾಕು. ಅಲ್ಲ ಪೋಲಿ ಆದ್ರೂ ಒಪ್ಕೊಳ್ಳೇಬೇಕು. ಇದು ಬಿಟ್ರೆ ಬೇರೆ ದಾರಿ ಇಲ್ಲಮ್ಮಾ….”
“ಅಯ್ಯೋ ಬುಡ್ತು ಅನ್ನಿ ಡಾಕಟ್ರೇ… ಇದು ಮಾತ್ರ ಆಗಂಗಿಲ್ಲ.”
“ಆಗೋದಿಲ್ಲಾಂದ್ರೆ? ಏ, ಗುಲಾಬಿ ನೀನಾದ್ರೂ ಹೇಳೆ ಮಾರಾಯ್ತಿ.”
“ಅಯ್ಯೋ ಸುಮ್ಕಿರಿ ಡಾಕಟ್ರೇ….. ಅವನೂ ಅಬ್ಬೇಪಾರಿ. ನಾನು ಅವನನ್ನು ಮೊದ್ಲು ಕಂಡೋಳೆ ಈಕಿಗೆ ಹೇಳಿದ್ದೆ. ಮೂರುಕಾಸಿನವ ಅವ….. ನಿನ್ನ ಮಗಳನ್ನು ೨ ರೂಪಾಯಿ ಕಡ್ಲೆಕಾಯಿಗೆ ಮಾರಾಟ ಮಾಡ್ತಾನಂತ. ಈಕಿ ನಂಗೇ ದಬಾಯಿಸಿದ್ಲೂ ಅಂತೀನಿ…..”
“ಅಯ್ಯೋ ನನ್ನವ್ವಾ ಗಾಯದ ಮ್ಯಾಲೆ ಉಪ್ಪು ಸವ್ರುಬೇಡ್ವೇ…. ನಿನ್ನ ದಮ್ಮಯ್ಯಾ….”
“ಅಯ್ಯೋ ನಾನ್ಯಾಕವ್ವಾ ನಿನ್ನ ಗಾಯದ ತಂಟಿಗ್ ಬರ್ಲೀ? ಅವನು ಸರಿಯಿಲ್ಲ ಅಂತ ಅವತ್ತು ಹೇಳಿದ್ದನ್ನು ಇವತ್ತು ಮತ್ತೆ ನೆನಪು ಮಾಡೀನಿ. ಜಪ್ತಿಲಿಟ್ಕ….. ಅವಳಿಗೇನಾರ ಈ ಸಂಗತಿ ತಿಳಿತಂದ್ರ ಆಯಪ್ಪ ಹೇಳ್ದೆ ಕೇಳ್ದೆ ಪರಾರಿ ಆಗೋನೆಯ. ನಿನ್ನ ಮಗಳಿಗೆ ಈ ವಿಚಾರ ಗೊತ್ತಾರೆ ಇವಳೇ ಅವನನ್ನು ಹುಡ್ಕೊಂಡು ಹೋಗ್ತಾಳ.”
“ನೋಡು ಗುಲಾಬಿ. ಇದನ್ನೆಲ್ಲ ಇಲ್ಲಿ ಚರ್ಚೆ ಮಾಡೋದಲ್ಲ. ನಿಮ್ಮವರು ನಿಮ್ಮ ಸಮುದಾಯದವರು ಎಲ್ಲರೂ ಒಟ್ಟಿಗೆ ಕೂತು ತೀರ್ಮಾನಕ್ಕೆ ಬನ್ನಿ. ಒಂದು ಮಾತು ನೆನಪಿರಲಿ. ನೀವೇನೇ ಮಾಡಿದ್ರೂ ಆ ಹುಡುಗಿಗೆ ಒಳ್ಳೇದಾಗ್ಬೇಕು ಅಷ್ಟೆ.”
`ಅಯ್ಯೋ ಶಿವ್ನೇ…. ಏನಪ್ಪಾ ಮಾಡ್ಲಿ?”
“ಮೇಡಂ ನೀವ್ಯಾಕೆ ಹೀಗೆ ಬಿಳ್ಚಿಕೊಂಡಿದೀರಿ? ಇವರ ಗಲಾಟೇಲಿ ನಿಮ್ಮನ್ನು ಮರ್ತೇ ಬಿಟ್ಟೆ ನೋಡಿ.”
“ಏನಿಲ್ಲ ಡಾಕ್ಟರ್. ನನಗೆ ಆಹಾರ ಜೀರ್ಣ ಆಗೋದೆ ಕಷ್ಟ ಅಂತ ನಿಮ್ಮಲ್ಲಿಗೆ ಬಂದೆ. ಈ ಸಂಗತಿ ನನಗೆ ಜೀವಮಾನ ಇಡೀ ಅಜೀರ್ಣವಾಗ್ಬೋದು. ಏನಿದೆಲ್ಲ ಡಾಕ್ಟರ್? ಈ ಹೆಣ್ಮಕ್ಳು ಯಾಕ್ ಹೀಗಾಗ್ತಿದ್ದಾರೆ?”
“ಇನ್ನೇನು ಕಾರಣ. ಮನೆಯವರ ಸಲುಗೆ. ಈಗ ಬೇಕಾದ್ರೆ ಈಕೆ ಬೊಬ್ಬೆಹೊಡೀಲಿ. ಹೀಗಾಗೋದಿಕ್ಕೆ ಇವಳು ಮಗಳಿಗೆ ಕೊಟ್ಟ ಸಲುಗೆಯೇ ಕಾರಣ. ಬೇರೇನಲ್ಲ.”
“ಅದನ್ನು ಇನ್ನೊಂದಪಾ ಹೇಳಿ ಡಾಕಟ್ರೇ? ಒಬ್ಲೇ ಮಗ್ಳು ಅಂತ ತಲಿಮ್ಯಾಲಿಂದೆ ಇಳ್ಸಾದೇ ಇಲ್ಲ ಅಂದ್ಲು. ಅದೀಗ ಅಲ್ಲಿಂದಾನೇ ಉಚ್ಚೆ ಹೊಯ್ತಿದೆ. ನಮ್ಮ ಸಮುದಾಯದೋರೆಲ್ಲ ಏಟೊಂದು ಬುದ್ಧಿ ಹೇಳಿದ್ರೂಂತೀನಿ?”
“ಅಯ್ಯೋ ಎಲ್ರೂ ನನಗೇ ಬೈತಾರಲ್ಲಪ್ಪೋ. ಈಗಿನ್ನು ಚಪ್ಪಲಿ ತಗಂಡು ಹೊಡಿತಾರ. ಶಿವನೇ ನಾನು ಸಾಯ್ಬಾರ್ದೇನಪ್ಪಾ?”
“ಇಗೋಳಮ್ಮಾ, ಈ ನೀರು ಕುಡಿ. ತಾಳ್ಮೆ ತಂದ್ಕೊ. ಆಗೋದು ಆಗಿದೆ. ಇನ್ನು ಮುಂದೇನು ಅಂತ ಯೋಚಿಸ್ಬೇಕು.”
“ಅದೇ ಹೇಳಿದ್ನಲ್ಲಾ ಅಪ್ಪೋರೇ. ಎಲ್ಲಾ ನಿಮ್ಮ ಕೈನಾಗೈತಿ. ನೀವು ಮನಸ್ಸು ಮಾಡ್ಬೇಕು ಆಟೇಯ.”
“ಅಯ್ಯೋ ಮತ್ತೆ ಹಳೇ ರಾಗನೇನೇ. ಅದೇನ್ ಮಾಡ್ಬೇಕೂ ಅಂತಿ?”
“ಹುಂ….. ಹುಂ….. ಮತ್ತೆ ಮತ್ತೆ ತೊಳ್ದು ಬುಡ್ರೀ ಡಾಕಟ್ರೇ? ಯಾರ್ಗೂ ಗೊತ್ತಾಗೂದಿಲ್ರೀ.”
“ಹಾಂ?!”
“ಹಾಂ? ಮೇಡಂ, ನೀವು ಗಾಬರಿ ಆಗ್ಬೇಡಿ. ಏ, ಏಳಮ್ಮಾ ನೀನು. ಗುಲಾಬಿ ಮೊದ್ಲು ನೀವಿಲ್ಲಿಂದ ಜಾಗ ಖಾಲಿ ಮಾಡಿ. ಡಾಕ್ಟ್ರು ಅಂದ್ರೆ ಏನಂತ ಮಾಡಿದ್ರಿ? ಹಾಂ? ಏಳಿ. ಆ ಡ್ರಿಪ್ಸ್ ಹಾಕಿದ ಕಂಬಾನ ಹಿಡ್ಕೊಂಡೇ ಹೋಗಿ, ಅದನ್ನು ವಾಪಾಸ್ ತಂದ್ಕೊಡೋ ಕೆಲಸ ನಿನ್ನದು ಗುಲಾಬಿ. ಜೀವ ಉಳ್ಸೋರು ನಾವು, ತೆಗೆಯೋರಲ್ಲ. ನಡೀರಿ. ಹೋಗಿ.”
“ಡಾಕಟ್ರೇ ನಿಮ್ಮ ದಮ್ಮಯ್ಯಾ ಅಂತೀನಿ.”
“ಮುಚ್ಚು ಬಾಯಿ. ಹೋಗಿ ಅಂದ್ನಲ್ಲಾ, ಇಲ್ಲಾಂದ್ರೆ ನಾನೇ ಪೊಲೀಸರಿಗೆ ಹೇಳ್ತೀನಿ.”
“ಏ ಬಾರೆ ಗುಲಾಬಿ. ಇವ್ರ ತಾವ ಅದೇನು ಮಾತು. ನನಗೆ ಗೊತ್ತಿರೋರೊಬ್ರು ಅದಾರ. ಅವರು ಇಂಥಾದ್ರಾಗೆ ಚಲೋ ಚಾಲಾಕಿ. ಅವ್ರ ತಾವ ಹೋಗೋಣು ನಡೀ…..”