ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಜನವರಿ 2022 > ವಾರ್ಷಿಕ ಕಥಾಸ್ಪರ್ಧೆ 2021 – ತೀರ್ಪುಗಾರರ ಅಭಿಪ್ರಾಯ

ವಾರ್ಷಿಕ ಕಥಾಸ್ಪರ್ಧೆ 2021 – ತೀರ್ಪುಗಾರರ ಅಭಿಪ್ರಾಯ

೨೦೨೧ರ ಸಾಲಿನ ‘ಉತ್ಥಾನ’ ಕಥಾಸ್ಪರ್ಧೆಗೆ ರಾಜ್ಯದ ೩೦ ಜಿಲ್ಲೆಗಳಿಂದ ಅಲ್ಲದೆ, ೫ ಹೊರರಾಜ್ಯಗಳು ಹಾಗೂ ವಿದೇಶಗಳಿಂದ ಒಟ್ಟು ೩೪೨ ಕಥೆಗಳು ಬಂದಿದ್ದವು.

– ಸಂಪಾದಕ

‘ಉತ್ಥಾನ’ ವಾರ್ಷಿಕ ಕಥಾಸ್ಪರ್ಧೆಗೆ ಬಂದ ೩೪೨ ಕಥೆಗಳಲ್ಲಿ ಆಯ್ದ ೪೦ ಕಥೆಗಳನ್ನು ಮೌಲ್ಯಮಾಪನ ಮಾಡಿ ಅವುಗಳ ಸ್ಥಾನ ನಿರ್ದೇಶಿಸುವ ಕಾರ್ಯ ಸುಲಭವೇನಲ್ಲದಿದ್ದರೂ ಸಂತೋಷದ್ದಾಗಿತ್ತು ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು.

ಕಥೆ ಹೇಳುವುದು, ಕೇಳುವುದು ಮಾನವನ ಆದಿ-ಅಂತ್ಯಗಳಿಲ್ಲದ ಗುಣ. ಮೌಖಿಕ ಪರಂಪರೆಯಿಂದ ಹಿಡಿದು ಇವತ್ತಿನ ತನಕ ಕಥೆಗಳದು ಆಕರ್ಷಕ ಸೆಳೆತದ ಸ್ವರೂಪ. ಈ ಹಿನ್ನೆಲೆಯಲ್ಲಿಯೇ ಇಂದಿಗೂ ಸಣ್ಣಕಥೆಗಳದು ಸಮೃದ್ಧ ಕೃಷಿ. ಪ್ರಖ್ಯಾತ ಪತ್ರಿಕೆಗಳು ನಡೆಸುವ ಕಥಾಸ್ಪರ್ಧೆಗೆ ಆ ಸಮೃದ್ಧ ಕೃಷಿಯ ಕಾರಣ, ಪರಿಣಾಮಗಳೆರಡೂ ಮುಖವನ್ನು ಪ್ರತಿಬಿಂಬಿಸುತ್ತವೆ.

‘ಉತ್ಥಾನ’ ವಾರ್ಷಿಕ ಕಥಾಸ್ಪರ್ಧೆಗೆ ಬಂದ ೩೪೨ ಕಥೆಗಳಲ್ಲಿ ಆಯ್ದ ೪೦ ಕಥೆಗಳನ್ನು ಮೌಲ್ಯಮಾಪನ ಮಾಡಿ ಅವುಗಳ ಸ್ಥಾನ ನಿರ್ದೇಶಿಸುವ ಕಾರ್ಯ ಸುಲಭವೇನಲ್ಲದಿದ್ದರೂ ಸಂತೋಷದ್ದಾಗಿತ್ತು ಎಂಬುದನ್ನು ನಾನು ಒಪ್ಪಿಕೊಳ್ಳಲೇಬೇಕು.

ಕೈಗೆ ಬಂದ ಕಥೆಗಳನ್ನು ಓದುವ ಸಂದರ್ಭದಲ್ಲಿ ಮೊದಲಿಗೆ ಗಮನಸೆಳೆದದ್ದು ಅವುಗಳಲ್ಲಿನ ವಸ್ತುವೈವಿಧ್ಯ. ಮಾನವಕೇಂದ್ರಿತ ಮನುಷ್ಯಜಗತ್ತಿನ ಅನಾವರಣ ಮಾಡಲು ಅವು ತಹತಹಿಸುತ್ತಿರುವ ಪರಿಯೂ ಮನಸ್ಸಿಗೆ ತಟ್ಟುತ್ತದೆ. ತಂದೆ, ತಾಯಿ, ಬಾಲ್ಯ, ಕುಟುಂಬ, ಊರು, ಸಮಾಜ, ಆದರ್ಶ, ಸ್ನೇಹ, ಸಂಬಂಧ – ಹೀಗೆ ಎಲ್ಲವೂ ಈ ಕಥೆಗಳಲ್ಲಿ ಬರುತ್ತವೆ. ಒಳಿತು-ಕೆಡುಕು, ನೋವು-ನಲಿವು, ತಲ್ಲಣ-ತವಕಗಳು ಮೇಲಿಂದ ಮೇಲೆ ಕಥೆಗಳಲ್ಲಿ ಮುಖಾಮುಖಿಯಾದಂತೆ ಕಾಣಿಸಿಕೊಳ್ಳುತ್ತವೆ.

ಒಂದು ಕಥೆ ಯಾಕೆ ನಮ್ಮನ್ನು ಕಾಡುತ್ತದೆ ಎಂಬುದು ಸಾಪೇಕ್ಷವಾದ ಪ್ರಶ್ನೆ. ಇಲ್ಲಿನ ಬಹಳಷ್ಟು ಕಥೆಗಳು ಕಥೆಯನ್ನು ಚೆನ್ನಾಗಿಯೆ ಹೇಳುತ್ತಿವೆ. ಆದರೆ ಆ ಕಥೆಗಳಿಗೆ ಮನದಲ್ಲಿ ನಿಂತು ಕಾಡುವ ಶಕ್ತಿ ಕಡಮೆ ಇದೆ ಎನ್ನಿಸುವ ಭಾವ ಮೂಡುತ್ತದೆ. ಬಹಳಷ್ಟು ಕಥೆಗಳು ‘ಹದ’ಗೊಳ್ಳುವುದರಲ್ಲಿಯೇ ಆತುರ ತೋರಿದಂತಿವೆ. ಆ ‘ಹದ’ ಕಥೆಗಾರ/ರ್ತಿಯರು ತಾಳ್ಮೆಯಿಂದ ಕಂಡುಕೊಂಡು ದಕ್ಕಿಸಿಕೊಳ್ಳಬೇಕಾದ ಹದ. ಕಥನ ಒಳಗೊಂಡಿರುವ ವಸ್ತು, ಪಾತ್ರ, ಸನ್ನಿವೇಶಗಳೆಲ್ಲವೂ ಹೊಸದೆಂಬಂತಹ ನಿರೂಪಣೆಯಲ್ಲಿ ಸಾಧಿಸಬಹುದಾದ ಕಲಾತ್ಮಕತೆ, ಅದರಾಚೆಗೆ ಆ ಕಥೆ ಕಟ್ಟಿಕೊಡಬಹುದಾದ ಅತೀತವಾದದ್ದೊಂದು ದರ್ಶನ… ಹೀಗೆ ಏನ್ನೆಲ್ಲಾ ಹೇಳುತ್ತಾ ಹೋಗಬಹುದಾದರೂ ‘ಹದ’ವೆಂಬುದು ಅವರವರ ಕೈಯಲ್ಲಿ ರೂಪಗೊಳ್ಳಬೇಕಾದ ಅಂಶವೇ ಹೌದು.

ಹಾಗೆ ತಮ್ಮಂತೆಯೆ ‘ಹದ’ಗೊಂಡ ಪಾಕದಲ್ಲಿ ಕಾಡಿದ ಹಲವು ಕಥೆಗಳನ್ನು ಬಹುಮಾನಕ್ಕಾಗಿ ಇಲ್ಲಿ ಆಯ್ದುಕೊಳ್ಳಲಾಗಿದೆ.

ಪ್ರಥಮ ಬಹುಮಾನ: ‘ದೊರೆ

ಕೋವಿಡ್-೧೯, ಲಾಕ್‌ಡೌನ್, ಕಾರ್ಮಿಕರ ವಲಸೆ – ಇವೆಲ್ಲವೂ ನಮ್ಮ ನಡುವೆಯೇ ನಡೆದ, ತಲ್ಲಣದ ಹೊರೆ ಹೊತ್ತ ಸಂಗತಿಗಳು. ಆ ತಲ್ಲಣದೊಳಗೇ ತೆರೆದುಕೊಳ್ಳುವ ದುರಿತಗಳ ಯಾತನಾಮಯದ್ದೊಂದು ಮುಖ ‘ದೊರೆ’ ಕಥೆಯಲ್ಲಿ ಅನಾವರಣಗೊಂಡಿದೆ. ಸಮಕಾಲೀನವನ್ನು ಸಾಹಿತ್ಯವಾಗಿ ಎದುರಾಗುವ ವರದಿಯಾಗಿಸುವ ಆತಂಕ, ಉತ್ಪ್ರೇಕ್ಷೆಯಾಗಬಹುದಾದ ಶೋಕದ ಕಥನದಂತಹವುಗಳಿಂದ ಹೊರತಾಗಿ ಸಮತೋಲನದ ನಿರೂಪಣೆಯೊಂದಿಗೆ ಅಭಿವ್ಯಕ್ತಗೊಂಡ ಈ ಕಥೆ, ‘ಸಮಕಾಲೀನ’ವನ್ನು ಕಚ್ಚಾ ಸರಕಾಗದಂತೆ ಕಲಾತ್ಮಕ ಘನತೆಯಲ್ಲಿ ಮೂಡಿಸಬಹುದಾದ ಕಥನಕ್ರಿಯೆಗೆ ಪಾಠದಂತೆ ಕಂಡುಬರುತ್ತದೆ. ಹಾಗಾಗಿಯೇ ಅದಕ್ಕೆ ಪ್ರಥಮ ಸ್ಥಾನ ದೊರಕಿದೆ.

ಎರಡನೆಯ ಬಹುಮಾನ: ‘ರಾಮಾಯಣ ಕಥಾ ಪ್ರಸಂಗ

ರಾಮಾಯಣದ ಕಥೆಯ ನಿಮಿತ್ತದಲ್ಲಿ ತೆರೆದುಕೊಳ್ಳುವ ಹಲವರ, ಹಲವು ರಾಮಾಯಣಗಳ ಕಥೆ, ಅತಿಶಯಗಳಿಗೆಡೆಕೊಡದೆ, ಅಲ್ಲಲ್ಲಿ ಪ್ರಸಂಗಗಳನ್ನು ಅಲ್ಲಲ್ಲಿಗೆ ನಿಲ್ಲಿಸುತ್ತಾ, ಮಾತಿನಲ್ಲಿ ವಿಜೃಂಭಿಸದೆ, ವಿರಮಿಸುತ್ತಾ, ವಿವರಗಳನ್ನು ತುಂಬಿಕೊಳ್ಳಲು ಓದುಗರಿಗೆ ಬಿಟ್ಟುಬಿಡದ ಪರಿ ವಿಶೇಷವೆನ್ನಿಸುತ್ತದೆ. ವ್ಯಕ್ತಿ, ಜಾತಿ, ವರ್ಗ, ಲಿಂಗ – ಹೀಗೆ ಯಾವುದರ ಹಂಗೂ ಇಲ್ಲದೆ ಎಲ್ಲವನ್ನೂ ‘ರಾಮಾಯಣ’ವೇ ಆವರಿಸಿಕೊಳ್ಳುವ ಬಗೆ ಕುತೂಹಲ ಮೂಡಿಸುತ್ತದೆ. ಸಂಯಮದ ಅಭಿವ್ಯಕ್ತಿ ಮನಸೆಳೆಯುತ್ತದೆ.

ಮೂರನೆಯ ಬಹುಮಾನ: ‘ದ್ರೌಪದಿಯ ಪಟ್ಟಾಭಿಷೇಕ ಪ್ರಸಂಗವು

ದೀರ್ಘವೆನ್ನಿಸಿದರೂ “ಇದು ಮಹಾಕಾವ್ಯವು ಒಳಗೊಳ್ಳುವಷ್ಟು ಚಾರಿತ್ರಿಕವಾದ ಘಟನೆಯೇನೂ ಅಲ್ಲ” ಎಂದು ವ್ಯಾಸರಿಂದ ನಿರಾಕೃತಗೊಂಡ ‘ದ್ರೌಪದಿಯ ಪಟ್ಟಾಭಿಷೇಕ ಪ್ರಸಂಗವು’ ಕಥೆ ಕೊಡುವ ಅನುಭವ ವಿಶೇಷ ಮತ್ತು ಭಿನ್ನವಾಗಿದೆ.

ಮೆಚ್ಚುಗೆ ಪಡೆದ ಕಥೆಗಳು

ಅಸಮ ವಿವಾಹ – ಬಾಲ ವೈಧವ್ಯಗಳ ಬದುಕಿನ ತಲ್ಲಣಗಳನ್ನು ನವುರಾಗಿ ತೆರೆದಿಡುವ ‘ಗಂಡ ಹೆಂಡತಿ’, ಕೂಡು ಕುಟುಂಬದ ಚಿತ್ರಣವನ್ನು ಎಲ್ಲಿಯೂ ವಾಲದಂತೆ ಸಾವಧಾನವಾಗಿ ನಿರೂಪಿಸುವ ‘ಜೇನುಗೂಡು’, ಬಾಲೆ ಅನುಭವದ ಮೂಲಕ ತೆರೆದುಕೊಳ್ಳುವ ‘ಚಾಮಿಯಪ್ಪ’ನ ಚಿತ್ರಗಳು, ಕಾರ್ಪೋರೇಟ್ ಜಗತ್ತಿನ ವಿವೇಕ ಹೀಗೆ ಲಾಭಕೋರತನದ ಅಮಾನವೀಯ ನಡೆ-ನುಡಿಗಳನ್ನು ತಣ್ಣಗೆ ತೆರೆದಿಡುವ ‘ಕಾರ್ಪೋರೇಟ್ ಕಂಪನಿ ಮತ್ತು ಗೋಪಾಲಯ್ಯನ ಹಸು’ ಕಥೆಗಳು ಮೆಚ್ಚುಗೆಯ ಬಹುಮಾನಗಳನ್ನು ಗಳಿಸಿವೆ.

ಮೆಚ್ಚುಗೆ ಪಡೆದ ಇನ್ನೊಂದು ಕಥೆ ‘ಆರಿದ್ರಾ’. ಬೆಂಗಳೂರು ಕೊಚ್ಚಿಕೊಂಡು ಹೋಗುವಂತೆ ಬಿದ್ದ ‘ಆರಿದ್ರಾ’ ಮಳೆಯಲ್ಲಿ ಉಳ್ಳವರ ಕುಶಾಲಿಗಾಗಿ ಸೂರನ್ನು ಕಳೆದುಕೊಳ್ಳಬೇಕಾಗಿ ಬರುವ ಬಡವರ ಸ್ಥಿತಿ ‘ಆರಿದ್ರಾ’ ಕಥೆಯಲ್ಲಿ ಅನಾವರಣಗೊಂಡಿದೆ. ಮಹಾನಗರಗಳು ಮಾನವೀಯತೆಗೆ ಎರವಾಗುವ ಬದುಕಿನ ಒಂದು ನೋಟವನ್ನು ಈ ಕಥೆ ನೀಡುತ್ತದೆ.

ವಾರ್ಷಿಕ ಕಥಾಸ್ಪರ್ಧೆಯ ಕಥೆಗಳ ಮೌಲ್ಯಮಾಪನ ಕಾರ್ಯ ವಹಿಸಿದ ‘ಪತ್ರಿಕೆ’ಯ ಸಂಪಾದಕ ಬಳಗಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ.

ಬಹುಮಾನ ವಿಜೇತರೆಲ್ಲರಿಗೂ ತುಂಬುಹೃದಯದ ಅಭಿನಂದನೆಗಳು. ಕಥಾಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಶುಭಾಶಯಗಳು.

-ಎಂ.ಎಸ್. ವೇದಾ

ಲೇಖಕಿ, ಕಥೆಗಾರ್ತಿ; ಪ್ರಾಧ್ಯಾಪಕರು,

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು,

ಮೈಸೂರು

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat