ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಸೆಪ್ಟೆಂಬರ್ 2018 > ಅರ್ಥಗರ್ಭಿತ, ಹೊಣೆಗಾರಿಕೆಯ ಶಿಕ್ಷಣ – ನಮ್ಮ ಗುರಿ : ಪ್ರಕಾಶ್ ಜಾವಡೇಕರ್

ಅರ್ಥಗರ್ಭಿತ, ಹೊಣೆಗಾರಿಕೆಯ ಶಿಕ್ಷಣ – ನಮ್ಮ ಗುರಿ : ಪ್ರಕಾಶ್ ಜಾವಡೇಕರ್

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಮಹತ್ತ್ವದ ಮಾನವಸಂಪನ್ಮೂಲ ಅಭಿವೃದ್ಧಿ ಖಾತೆಯನ್ನು ಪ್ರಕಾಶ್ ಜಾವಡೇಕರ್ ಅವರು ಹೊಂದಿದ್ದಾರೆ. ಮೋದಿಯವರ ಕನಸಿನ ನವಭಾರತದ ನಿರ್ಮಾಣಕಾರ್ಯದಲ್ಲಿ ಅತ್ಯಂತ ಪ್ರಮುಖ ಭಾಗ- ದೇಶದ ಯುವಜನಾಂಗದ ಸರ್ವಾಂಗೀಣ ಅಭಿವೃದ್ಧಿ. ಅಂತಹ ಗುರುತರವಾದ ಜವಾಬ್ದಾರಿಯನ್ನು ಅವರು ಹೊಂದಿದ್ದಾರೆ. ಉತ್ಥಾನದ ಸೆಪ್ಟೆಂಬರ್ ೨೦೧೮ರ ಸಂಚಿಕೆಗಾಗಿ, ಇತ್ತೀಚೆಗೆ ಬೆಂಗಳೂರಿನಲ್ಲಿ ಮಾನ್ಯ ಸಚಿವರ ಸಂದರ್ಶನವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಅವರು ಸದ್ಯದ ಶಿಕ್ಷಣ ವ್ಯವಸ್ಥೆಯ ಕುರಿತಾಗಿ, ವಿಶ್ವಮಟ್ಟದಲ್ಲಿ ಯೂನಿವರ್ಸಿಟಿ ಕ್ಯಾಂಪಸ್‌ಗಳನ್ನು ಸುಧಾರಿಸುವ ಕುರಿತಾಗಿ, ಶಿಕ್ಷಣದಲ್ಲಿ ಸಾಂಪ್ರದಾಯಿಕ ಪರಿಕಲ್ಪನೆಯನ್ನು ಮೀರಿದ ಯೋಚನೆಗಳ ಕುರಿತಾಗಿ ವಿವರಣೆ ನೀಡಿದರು. ಜಾವಡೇಕರರ ಜೊತೆಗಿನ ಸಂದರ್ಶನದ ಪೂರ್ಣಪಾಠ ಇಲ್ಲಿದೆ:

ಪ್ರಶ್ನೆ: ಪ್ರಸ್ತುತ ಶಿಕ್ಷಣವ್ಯವಸ್ಥೆಯ ಬಗ್ಗೆ ಏನು ಹೇಳಬಯಸುತ್ತೀರಿ?

ಉತ್ತರ: ನೋಡಿ, ನಮ್ಮ ಶಿಕ್ಷಣದ ಪ್ರಮುಖ ಸಮಸ್ಯೆಯೆಂದರೆ ಅದು ನಿರಂತರತೆಯಿಂದ ಕೂಡಿಲ್ಲ. ಸರ್ಕಾರದಿಂದಲೇ ಶಿಕ್ಷಣ ಎಂದಾಗ ಬಿಕ್ಕಟ್ಟು ಹೆಚ್ಚಾಯಿತು. ಅದರಲ್ಲೂ ನಿರ್ದಿ?ವಾಗಿ ಹೇಳುವುದಾದರೆ ಆರ್‌ಟಿಇ ಜಾರಿಗೆ ಬಂದು, ೧೦ನೇ ತರಗತಿಯ ತನಕ ಎಲ್ಲರನ್ನೂ ಕಡ್ಡಾಯವಾಗಿ ಉತ್ತೀರ್ಣ ಮಾಡಬೇಕು ಎನ್ನುವ ನಿಯಮದಿಂದಾಗಿ ಪ್ರಮುಖವಾಗಿ ಸರ್ಕಾರೀ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯಿತು. ನಾವು ನಡೆಸಿದ ಅ? ಸಮೀಕ್ಷೆಗಳ ಫಲಿತಾಂಶವೇನೆಂದರೆ ೮ನೇ ತರಗತಿಯ ವಿದ್ಯಾರ್ಥಿ ೫ನೇ ತರಗತಿಯ ಪಠ್ಯವನ್ನು ಓದಲೂ ಅಸಾಧ್ಯವಾಗಿತ್ತು, ೪ನೇ ತರಗತಿಯ ಗಣಿತದ ಸಮಸ್ಯೆಯೊಂದನ್ನು 7ನೇ ತರಗತಿಯ ವಿದ್ಯಾರ್ಥಿ ಬಿಡಿಸಲು ಕಷ್ಟಪಡುತ್ತಿದ್ದ, – ಹೀಗೆ. ಇದಕ್ಕೆಲ್ಲ ಮೂಲಕಾರಣ, ವಿದ್ಯಾರ್ಥಿಗಳ ಮೇಲೆ ಯಾವುದೇ ಜವಾಬ್ದಾರಿಯ ನಿಗಾ ಇಲ್ಲದಿರುವುದು (no detention – no tension);  ಉತ್ತೀರ್ಣ ಅನುತ್ತೀರ್ಣ ಎನ್ನುವ ಪರಿಕಲ್ಪನೆ ಇಲ್ಲದಿರುವುದು; ಅದರೊಂದಿಗೆ ತಾನು ಉತ್ತೀರ್ಣನಾಗಬೇಕು ಎನ್ನುವ ಉತ್ಸಾಹವೇ ಬೆಳೆಯದೇ ಹೋಯಿತು. ವಿದ್ಯಾರ್ಥಿಗಳು, ಹೆತ್ತವರು, ಶಿಕ್ಷಕರು ಎಲ್ಲರ ಹೊಣೆಗಾರಿಕೆಯೂ ಕಡಮೆಯಾಯಿತು. ಹಲವು ಶಾಲೆಗಳು ಮಧ್ಯಾಹ್ನ ಊಟದ ಕೇಂದ್ರಗಳ? ಆಗಿ ಉಳಿದವು. (ಆನಾ-ಖಾನಾ-ಜಾನಾ!)

ನರೇಂದ್ರ ಮೋದಿಯವರು ಗುಜರಾತಿನ ಮುಖ್ಯಮಂತ್ರಿಗಳಾಗಿದ್ದಾಗ ಕಲಿಕಾ ಫಲಿತಾಂಶವನ್ನು ತಿಳಿಯಲು ಕೆಲವು ವ್ಯವಸ್ಥೆಗಳನ್ನು ಜಾರಿಗೆ ತಂದಿದ್ದರು. ಈಗ ಕೇಂದ್ರದಲ್ಲಿ ನಾವು ಅಧಿಕಾರಕ್ಕೆ ಬಂದ ಬಳಿಕ, ದೇಶದ ಶಿಕ್ಷಣರಂಗದಲ್ಲಿ ಕಲಿಕಾ ಫಲಿತಾಂಶವನ್ನು ತಿಳಿಯುವ ವ್ಯವಸ್ಥೆಯನ್ನು ತರುತ್ತಿದ್ದೇವೆ. ಪ್ರತಿ ತರಗತಿಯ ಹಂತದಲ್ಲಿ ವಿದ್ಯಾರ್ಥಿಯ ಸಾಮರ್ಥ್ಯ ಯಾವ ಮಟ್ಟದ್ದಾಗಿರಬೇಕು ಎನ್ನುವುದನ್ನು ಸೂಚಿಸಲಾಗಿದೆ. ಎಲ್ಲ ಶಿಕ್ಷಕರಿಗೆ ಕಲಿಕಾ ಫಲಿತಾಂಶದ ಕುರಿತಾಗಿ ಅರಿವನ್ನು ಮೂಡಿಸಲಾಗಿದೆ. ಕಲಿಕಾ ಫಲಿತಾಂಶವನ್ನು ಸಾಧಿಸಲು ಮಾರ್ಗಸೂಚಿಯನ್ನು ನೀಡಲಾಗಿದೆ. ಹೀಗೆ ಎಲ್ಲರಿಗೂ ಅವರವರ ಹೊಣೆಗಾರಿಕೆಯನ್ನು ಸ್ಪಷ್ಟಗೊಳಿಸಲಾಗಿದೆ.

ಇದೀಗ ಲೋಕಸಭೆಯಲ್ಲಿ ಮಸೂದೆಯೊಂದನ್ನು ಅಂಗೀಕರಿಸಲಾಗಿದೆ. ಇದರ ಪ್ರಕಾರ, ೫ ಮತ್ತು ೮ನೇ ತರಗತಿಗೆ ಪರೀಕ್ಷೆ ನಡೆಸಲಾಗುತ್ತದೆ. ಉತ್ತೀರ್ಣ, ಅನುತ್ತೀರ್ಣ ವ್ಯವಸ್ಥೆಯನ್ನು ಸೇರಿಸಲಾಗಿದೆ. ಮಾರ್ಚ್ ತಿಂಗಳ ಮುಖ್ಯಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಮೇ ತಿಂಗಳಲ್ಲಿ ಮರುಪರೀಕ್ಷೆ ನಡೆಸಲಾಗುವುದು. ಆ ಪರೀಕ್ಷೆಯಲ್ಲೂ ಉತ್ತೀರ್ಣನಾಗಲು ವಿಫಲನಾದರೆ, ಮತ್ತೆ ಮುಂದಿನ ವ? ಆತ ಅದೇ ತರಗತಿಯಲ್ಲಿ ಕಲಿಯಬೇಕು. ಈ ಬಿಲ್ ಸದ್ಯಃ ರಾಜ್ಯಸಭೆಯ ಮುಂದಿದೆ, ಅಲ್ಲಿಯೂ ಈ ಬಿಲ್ಪಾ ಸ್ ಆಗುತ್ತದೆ ಎನ್ನುವ ಭರವಸೆಯಿದೆ. ಉತ್ತೀರ್ಣ-ಅನುತ್ತೀರ್ಣ ವ್ಯವಸ್ಥೆ ಪುನಃ ಜಾರಿಗೆ ತರಬೇಕೋ ಬೇಡವೋ ಎಂದು ನಿರ್ಧರಿಸುವುದನ್ನು ಆಯಾ ರಾಜ್ಯಗಳಿಗೆ ಬಿಟ್ಟಿದ್ದೇವೆ.

ಪ್ರಶ್ನೆ: ಇಂದಿನ ಮಕ್ಕಳು ದೇಶದ ಜವಾಬ್ದಾರೀ ಪ್ರಜೆಗಳಾಗುವವರು. ಶಿಕ್ಷಣ ನೀಡುವ ಶಿಕ್ಷಕರೇ ಇವರನ್ನು ರೂಪಿಸಲು ಸಾಧ್ಯ. ಉತ್ತಮ ಜವಾಬ್ದಾರೀ ಪ್ರಜೆಗಳ ನಿರ್ಮಾಣಕ್ಕೆ ಶಿಕ್ಷಕರಿಗೆ ಯಾವ ರೀತಿಯ ತರಬೇತಿಯನ್ನು ನೀಡುತ್ತಿದ್ದೀರಿ?

ಉತ್ತರ: ಪ್ರಸ್ತುತ ಶೇ. ೨೫ರಷ್ಟು ಶಿಕ್ಷಕರು ನಿಗದಿಪಡಿಸಿದ ಅರ್ಹತೆಯನ್ನು ಹೊಂದಿಲ್ಲ. ಶಿಕ್ಷಣದ ಡಿಪ್ಲೊಮಾ ಕೋರ್ಸ್‌ಗಳನ್ನು ಅವರು ಮಾಡಿಲ್ಲ, ಕೇವಲ ಪಿಯುಸಿ ವಿದ್ಯಾಭ್ಯಾಸವಷ್ಟು ಅವರ ಅರ್ಹತೆಯಾಗಿದೆ. ಉತ್ತಮ ಶಿಕ್ಷಕ ಇಲ್ಲದಿದ್ದರೆ, ಸಿಗುವ ಶಿಕ್ಷಣವೇ ವ್ಯರ್ಥ. ಅದಕ್ಕಾಗಿ ಎರಡುವ?ದ ಗಡುವನ್ನು ನೀಡಿದ್ದೇವೆ. ಇವರಿಗಾಗಿ ಆನ್‌ಲೈನ್ ಮತ್ತು ಆಫ್‌ಲೈನ್ ಶಿಕ್ಷಣ ಕಲಿಕಾ ಕೇಂದ್ರಗಳನ್ನು ಆರಂಭಿಸಿದ್ದೇವೆ. ೩೨ ಶಿಕ್ಷಣ ಚಾನೆಲ್‌ಗಳನ್ನು ಆರಂಭಿಸಲಾಗಿದೆ. ೪೦.೫ ಲಕ್ಷ ಶಿಕ್ಷಕರು ವಿದ್ಯಾರ್ಥಿಗಳಾಗಿ ಡಿಪ್ಲೋಮಾ ಇನ್ ಎಜ್ಯುಕೇಶನ್ ತರಬೇತಿಯನ್ನು ಪಡೆಯುತ್ತಿದ್ದಾರೆ. ಒಟ್ಟು ಸಾವಿರ ಗಂಟೆಗಳ ಪಠ್ಯಕ್ರಮವಿದೆ. ಪ್ರಥಮ ವರ್ಷದ ವಾರ್ಷಿಕ ಪರೀಕ್ಷೆಗಳು ಈಗಾಗಲೇ ಮುಗಿದಿವೆ. ಮುಂದಿನ ಮಾರ್ಚ್‌ನಲ್ಲಿ ಇನ್ನೊಂದು ಪರೀಕ್ಷೆಯನ್ನು ಬರೆಯಲಿದ್ದಾರೆ. ತರಬೇತಿಗೆ ಸಂಬಂಧಿಸಿದ ಪಠ್ಯವಸ್ತು, ಟ್ಯುಟೋರಿಯಲ್, ಚರ್ಚಾವೇದಿಕೆ ಎಲ್ಲವೂ ಟಿ.ವಿ. ಚಾನೆಲ್ ಮೂಲಕ ಲಭ್ಯವಾಗುತ್ತಿದೆ. ಶಿಕ್ಷಕರು ಇಂದು ಕಲಿಯುತ್ತಿದ್ದಾರೆ. ಉತ್ತರಪ್ರದೇಶ, ಬಿಹಾರ, ಪಶ್ಚಿಮಬಂಗಾಳ, ಝಾರ್ಖಂಡ್, ಅಸ್ಸಾಮ್‌ನಂತಹ ರಾಜ್ಯಗಳಲ್ಲಿ ಇಂತಹ ಶಿಕ್ಷಕರ ಸಂಖ್ಯೆ ಹೆಚ್ಚಿತ್ತು. ಇಂದು ಅಲ್ಲಿನ ಎಲ್ಲ ಶಿಕ್ಷಕರು ಕಲಿಯುವ ಮೂಲಕ ಅರ್ಹ ಜವಾಬ್ದಾರೀ ಶಿಕ್ಷಕರಾಗುತ್ತಿದ್ದಾರೆ.

ಪ್ರಶ್ನೆ: ನೀವು ಕಲಿಕಾ ಫಲಿತಾಂಶದ ಬಗ್ಗೆ ಉಲ್ಲೇಖಿಸಿದಿರಿ, ಅದನ್ನು ಅನುಷ್ಠಾನಗೊಳಿಸುವ ಚಿಂತನೆ ನಡೆದಿದೆಯೇ?

ಉತ್ತರ: ಶಾಲಾಶಿಕ್ಷಣದ ಪುನರ್‌ನಿರ್ಮಾಣವೇ ಕಲಿಕಾ ಫಲಿತಾಂಶದ ಮುಂದಿನ ಹಂತ. ೩, ೫ ಮತ್ತು ೮ನೇ ತರಗತಿಯ ೨೨ ಲಕ್ಷ ವಿದ್ಯಾರ್ಥಿಗಳನ್ನು, ೧೦ನೇ ತರಗತಿಯ ೧೫ ಲಕ್ಷ ವಿದ್ಯಾರ್ಥಿಗಳನ್ನು ಒಂದೇ ದಿನ ಮೌಲ್ಯಮಾಪನ ಮಾಡಲಾಯಿತು. ಇದರಿಂದಾಗಿ ಪ್ರತಿ ಜಿಲ್ಲೆಯ ಶಿಕ್ಷಣದ ಗುಣಮಟ್ಟವನ್ನು ತಿಳಿದಿದ್ದೇವೆ. ಈ ಸಮೀಕ್ಷೆಯ ಮೌಲ್ಯಮಾಪನವನ್ನು ಎಲ್ಲ ಸಂಸದರಿಗೆ ಕಳುಹಿಸಲಾಗಿದೆ. ತನ್ಮೂಲಕ ಎಲ್ಲ ಸಂಸದರು, ಜನಸಾಮಾನ್ಯರು ಶಿಕ್ಷಣರಂಗದಲ್ಲಿ ಒಂದಾಗಿ ಕೆಲಸಮಾಡಬೇಕು, ಇದಕ್ಕೆ ಪ್ರತಿಯೊಬ್ಬರೂ ಜವಾಬುದಾರರು ಎನ್ನುವುದೇ ನನ್ನ ಉದ್ದೇಶ.

ಪ್ರಶ್ನೆ: ಶಿಕ್ಷಣದಲ್ಲಿ ಪ್ರಸ್ತುತ ಅಳವಡಿಸುತ್ತಿರುವ ಬದಲಾವಣೆಗಳ ಹಿಂದಿನ ಚಿಂತನೆ ವಿವರಿಸಬಹುದೆ?

ಉತ್ತರ: ಶಿಕ್ಷಣ ಎಂದರೇನು? ಗ್ರಹಿಕೆ, ಸಂವಹನ, ವಿಶ್ಲೇಷಣಾ ಸಾಮರ್ಥ್ಯ – ಇದುವೇ ಶಿಕ್ಷಣ. ಶಿಕ್ಷಣದ ಉದ್ದೇಶ ಉತ್ತಮ ಪ್ರಜೆಯನ್ನು ನಿರ್ಮಿಸುವುದು. ಉತ್ತಮ ಪ್ರಜೆ ಬೇಕಾದರೆ ತರಗತಿ ಪಾಠದ ಜೊತೆಗೆ ಮೌಲ್ಯಗಳ ಶಿಕ್ಷಣ, ದೈಹಿಕ ಶಿಕ್ಷಣ, ಜೀವನಕೌಶಲ, ಪ್ರಾಯೋಗಿಕ ಅನುಭವದ ಮೂಲಕ ಕಲಿಕೆ ಇವೆಲ್ಲವೂ ಅತ್ಯಗತ್ಯ. ವಿದ್ಯಾರ್ಥಿಗಳಲ್ಲಿರುವ ಸರ್ಜನಶೀಲತೆಗೆ ಅವಕಾಶ ನೀಡಬೇಕು. ಈ ಕುರಿತು ನಾವು ಶಿಕ್ಷಣಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅನೇಕ ಸ್ವಯಂಸೇವಾ ಸಂಸ್ಥೆಗಳ ಭಾಗವಹಿಸುವಿಕೆಯೊಂದಿಗೆ ಆರು ವರ್ಕ್‌ಶಾಪ್‌ಗಳನ್ನು ನಡೆಸಿದೆವು. ಇಲ್ಲಿ ತಿಳಿದುಬಂದ ಅಂಶವೆಂದರೆ – ಈ ಎಲ್ಲಚಟುವಟಿಕೆಗಳ ಅವಶ್ಯವಿದೆ, ಆದರೆ ಈಗಿರುವ ಪಠ್ಯಕ್ರಮದ ಹೊರೆಯಿಂದಾಗಿ, ಹೆಚ್ಚುವರಿ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ – ಎಂದು. ಪಾಠ್ಯಾಂಶದಲ್ಲಿ ಇಳಿಕೆಮಾಡುವ ಮೂಲಕ ಈ ಎಲ್ಲ ಚಟುವಟಿಕೆಗಳನ್ನು ಶಾಲಾಶಿಕ್ಷಣದಲ್ಲಿ ಅಳವಡಿಸುವ ಕುರಿತಾಗಿ ಆಲೋಚನೆ ನಡೆಸಲಾಗಿದೆ. ಜೀವನಕೌಶಲ,  ದೈಹಿಕಶಿಕ್ಷಣ, ನೀತಿಪಾಠ, ಅನುಭವದ ಕಲಿಕೆ ಇವೆಲ್ಲವೂ ಪಠ್ಯಕ್ರಮದಲ್ಲಿ ಸೇರಲಿವೆ. ಇವು ಪಠ್ಯೇತರ ಚಟುವಟಿಕೆಗಳಲ್ಲ, ಇವೇ ಪ್ರಮುಖ ಕಲಿಕೆ ಎಂಬುದು ನನ್ನ ಭಾವನೆ. ಪ್ರಸಕ್ತ ವ? ಯಾವ ವಿಷಯದ ಪಾಠ್ಯಾಂಶದಲ್ಲಿ ಎಷ್ಟು ಕಡಮೆ ಮಾಡಬಹುದು ಎನ್ನುವ ಕುರಿತಾಗಿ ಸಲಹೆಗಳನ್ನು ಸ್ವೀಕರಿಸಿದ್ದೇವೆ. ಈ ವರ್ಷ ಶೇ. ೧೫ರಿಂದ ೨೦, ಮುಂದಿನ ವರ್ಷ ಶೇ. ೧೫ರಿಂದ ೨೦ರಷ್ಟು ಪಠ್ಯಕ್ರಮಗಳಲ್ಲಿ ಬದಲಾವಣೆ ತರುವ ಮೂಲಕ ಈ ಎಲ್ಲಚಟುವಟಿಕೆಗಳು ಶಾಲಾಶಿಕ್ಷಣದ ಮುಖ್ಯವಾಹಿನಿಗೆ ಬರಲಿವೆ.

ಶಾಲಾಮಕ್ಕಳಲ್ಲಿ ಸಂಸ್ಕಾರವನ್ನು ಬಿತ್ತುವ ಕಾರ್ಯವೂ ನಡೆಯುತ್ತಿದೆ. ಇದಕ್ಕಾಗಿಯೇ ಸ್ವಚ್ಛವಿದ್ಯಾಲಯ ಪುರಸ್ಕಾರ ಯೋಜನೆ ಹಮ್ಮಿಕೊಂಡಿದ್ದೇವೆ. ಕಳೆದ ವ? ೨.೫ ಲಕ್ಷ ಸರ್ಕಾರೀ ಶಾಲೆಗಳು ಈ ಆನ್‌ಲೈನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಈ ಎಲ್ಲ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ತಮ್ಮ ಶಾಲಾ ಪರಿಸರವನ್ನು ಸ್ವಚ್ಛವಾಗಿರಿಸಲು ಶಕ್ತಿಮೀರಿ ಪ್ರಯತ್ನವನ್ನು ಮಾಡಿದ್ದಾರೆ. ಇದರೊಂದಿಗೆ ಮಕ್ಕಳಲ್ಲಿ ಸ್ವಚ್ಛತೆಯ ಅರಿವು ಮೂಡಿದೆ. ಪ್ರಸಕ್ತ ವರ್ಷ ಖಾಸಗೀ ಶಾಲೆಗಳನ್ನೂ ಸೇರಿಸಿಕೊಂಡಿದ್ದೇವೆ; ೬ ಲಕ್ಷ ಶಾಲೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ.

ಇದು, ಮುಂದಿನ ಜವಾಬ್ದಾರೀ ಪ್ರಜೆಗಳನ್ನು ನಿರ್ಮಿಸುವ ಶಾಲಾಶಿಕ್ಷಣದ ಒಟ್ಟಾರೆ ಚಿತ್ರಣವಾಗಿದೆ

ಪ್ರಶ್ನೆ: ಭಾರತದಲ್ಲಿ ಶೇ. 100ರಷ್ಟು ಸಾಕ್ಷರತೆ ಸಾಧಿಸಲು ನಿಮ್ಮ ಯೋಜನೆಯನ್ನು ವಿವರಿಸುತ್ತೀರಾ?

ಉತ್ತರ: ಸಾಕ್ಷರತೆ ಎನ್ನುವುದು ಮೂಲಭೂತ ಸಬಲೀಕರಣ. ನಮಗೆ ಸ್ವಾತಂತ್ರ್ಯ ದೊರಕಿದ  ಸಮಯದಲ್ಲಿ ಶೇ. ೧೮ರ? ಸಾಕ್ಷರತೆಯನ್ನು ಹೊಂದಿದ್ದೆವು. ಇಂದು ಶೇ. ೮೦ರಷ್ಟು ಸಾಕ್ಷರತಾ ಮಟ್ಟವನ್ನು ತಲಪಿದ್ದೇವೆ. ಇನ್ನು ಉಳಿದಿರುವುದು ಕೇವಲ ಇಪ್ಪತ್ತು ಶೇಕಡಾ ಅಷ್ಟೆ. ಇದನ್ನು ಹೇಗೆ ಸಾಧಿಸಬಹುದು ಎಂದು ಯೋಚಿಸಿದರೆ, ನಮ್ಮಲ್ಲಿ ಒಂದು ವಿಶಿ? ಆಲೋಚನೆಯಿದೆ. ಪ್ರತಿ ಮನೆಯಿಂದ ಶಾಲೆಗೆ ಹೋಗುತ್ತಿರುವ ಕನಿ? ಒಬ್ಬ ವಿದ್ಯಾರ್ಥಿ ಇರುತ್ತಾನೆ. ೬ನೇ ತರಗತಿಯಿಂದ ೧೦ನೇ ತರಗತಿಯವರೆಗಿನ ವಿದ್ಯಾರ್ಥಿಗಳು ತಮ್ಮ ಹೆತ್ತವರು ಅವಿದ್ಯಾವಂತರಾಗಿದ್ದರೆ, ಅವರೇ ತಂದೆ ತಾಯಿಗೆ ಪಾಠಮಾಡಬಹುದು. ಯಾವ ರೀತಿ ಪಾಠ ಮಾಡಬೇಕು ಎನ್ನುವುದು ಮಕ್ಕಳಿಗೆ ಕಲಿಸಿಕೊಡುವ ಯೋಜನೆ ಹಾಕಿಕೊಂಡಿದ್ದೇವೆ. ಮಕ್ಕಳು ತಮ್ಮ ತಂದೆ-ತಾಯಿ, ಅಜ್ಜ- ಅಜ್ಜಿಗೆ ಪಾಠಮಾಡುತ್ತಾರೆ. ಮಕ್ಕಳಿಗೆ ತಮ್ಮ ಹಿರಿಯರಿಗೆ ಅಕ್ಷರ ಕಲಿಸಿದ್ದೇವೆ ಎನ್ನುವ ಹೆಮ್ಮೆ ಒಂದೆಡೆಯಾದರೆ; ತಮ್ಮ ಮಕ್ಕಳಿಂದ ತಾವು ಸಾಕ್ಷರರಾಗಿದ್ದೇವೆ ಎನ್ನುವ ಸಂತಸ ಹಿರಿಯರಿಗೆ. ನಾನು ಸ್ವತಃ ಈ ಕಾರ್ಯವನ್ನು ಮಾಡಿದ್ದೇನೆ. ನನ್ನ ತಾಯಿ ನಿವೃತ್ತ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಕಿ. ೫೫ ವ?ಗಳ ಹಿಂದೆ ಆಕೆಯ ಜೊತೆ ನಾನು ವಾರ್ಷಿಕ ಸಾಕ್ಷರತಾ ಆಂದೋಲನಗಳಿಗೆ ಹೋಗುತ್ತಿದ್ದೆ. ನನಗೆ ೧೦ ವ?ವಿದ್ದಾಗ, ಅಕ್ಷರ ಕಲಿಸುವ ಕೆಲಸವನ್ನು ಮಾಡಿದ್ದೇನೆ. ಆದ್ದರಿಂದ ಮಕ್ಕಳ ಮೂಲಕ ಸಾಕ್ಷರತೆಯನ್ನು ಸಾಧಿಸುವುದು ಸುಲಭ ಮತ್ತು ಗೆಲವಿನ ಮಾರ್ಗವಾಗಿದೆ.

ಪ್ರಶ್ನೆ: ಇತ್ತೀಚಿನ ದಿನಗಳಲ್ಲಿ, ನಮ್ಮ ದೇಶದ ಉನ್ನತ ಶಿಕ್ಷಣದ ಕೇಂದ್ರಗಳಾದ ವಿಶ್ವವಿದ್ಯಾಲಯಗಳು ಸೈದ್ಧಾಂತಿಕ ಯುದ್ಧಭೂಮಿಗಳಾಗಿ ಮಾರ್ಪಡುತ್ತಿವೆಯೇ ಹೊರತು ಸಂಶೋಧನೆಗಳು ಕಡಮೆಯಾಗುತ್ತಿವೆ ಎನ್ನುವ ಅಪವಾದವನ್ನು ಎದುರಿಸುತ್ತಿವೆ. ಈ ಬೆಳವಣಿಗೆಯ ಕುರಿತಾಗಿ ನಿಮ್ಮ ಅಭಿಪ್ರಾಯವೇನು?

ಉತ್ತರ: ಇಲ್ಲ, ಇದು ಸರಿಯಾದ ಚಿತ್ರಣವಲ್ಲ. ನಮ್ಮಲ್ಲಿ ೯೦೦ ಯೂನಿವರ್ಸಿಟಿಗಳು ಇವೆ. ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಉತ್ತಮಮಟ್ಟದ ಸಂಶೋಧನೆಗಳು ನಡೆಯುತ್ತಿವೆ. ಸೈದ್ಧಾಂತಿಕ ಯುದ್ಧಭೂಮಿಗಳಾಗಿ ಹೆಸರಾಗಿರುವ ಕೆಲವು ಯೂನಿವರ್ಸಿಟಿಗಳು ಕೂಡ ಉತ್ತಮ ರ‍್ಯಾಂಕಿಂಗ್ ಅನ್ನು ಹೊಂದಿವೆ; ಅದಕ್ಕೆ ಕಾರಣ ಇಂಜಿನಿಯರಿಂಗ್, ಬಯೋಟೆಕ್ನಾಲಜಿ ಮುಂತಾದ ಕ್ಷೇತ್ರಗಳಲ್ಲಿ ಅವರು ಮಾಡುತ್ತಿರುವ ಉತ್ತಮ ಸಂಶೋಧನೆಗಳು. ಆದರೆ ಸುದ್ದಿಮಾಧ್ಯಮಗಳು ಈ ಯೂನಿವರ್ಸಿಟಿಗಳ ಸೈದ್ಧಾಂತಿಕ ವಿಚಾರವನ್ನ? ಪ್ರಚಾರಮಾಡುತ್ತಿವೆ, ತತ್ಪರಿಣಾಮವಾಗಿ ಯೂನಿವರ್ಸಿಟಿಗಳು ಸಂಶೋಧನೆಗಳತ್ತ ಮುಖಮಾಡಿಲ್ಲ, ಬದಲಾಗಿ ಸೈದ್ಧಾಂತಿಕ ಹೋರಾಟವನ್ನ? ಮಾಡುತ್ತಿವೆ ಎನ್ನುವ ಅಭಿಪ್ರಾಯ ಜನಸಾಮಾನ್ಯರಲ್ಲಿ ಮೂಡುತ್ತಿದೆ.

ಜಾಗತಿಕಮಟ್ಟದಲ್ಲಿ ನೋಡಿದರೆ, ಸರಾಸರಿ ಒಬ್ಬ ಪ್ರೊಫೆಸರ್‌ನ ತರಬೇತಿಯಲ್ಲಿ ೨ರಿಂದ ೩ ವಿದ್ಯಾರ್ಥಿಗಳು ಪಿಹೆಚ್.ಡಿ. ಮಾಡುತ್ತಿದ್ದಾರೆ. ನಾವು ೮ ವಿದ್ಯಾರ್ಥಿಗಳಿಗೆ ಒಬ್ಬ ಪ್ರೊಫೆಸರ್  ತರಬೇತಿಯನ್ನು ನೀಡಬಹುದು ಎಂದು ಅನುಮತಿ ನೀಡಿದ್ದೇವೆ. ಆದರೆ ಜೆಎನ್‌ಯು ಅಲ್ಲಿ ೩೦ ಸಂಶೋಧನಾ ವಿದ್ಯಾರ್ಥಿಗಳನ್ನು ಹೊಂದಿರುವ ಪ್ರೊಫೆಸರನ್ನು ಕಾಣಬಹುದು. ಇದು ಉತ್ತಮ ಬೆಳವಣಿಗೆಯಾಗಿರಲಿಲ್ಲ. ಇದನ್ನು ಸರಿಪಡಿಸುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರೊಫೆಸರ್‌ಗಳ ನೇಮಕಾತಿ ನಡೆಯುತ್ತಿದೆ. ಹಲವು ದಶಕಗಳಿಂದ ಈ ಸ್ಥಾನಗಳು ಖಾಲಿಯೇ ಇತ್ತು, ಇವೆಲ್ಲವನ್ನು ನೇಮಕಾತಿ ಮಾಡುವ ಮೂಲಕ ಸರಿದಾರಿಯಲ್ಲಿ ಸಾಗುವಂತೆ ಪ್ರಯತ್ನಗಳು ನಡೆಯುತ್ತಿವೆ. ತನ್ಮೂಲಕ ಉತ್ತಮ ಸಂಶೋಧನಾ ವಿದ್ಯಾರ್ಥಿಗಳು ಸಿಗುತ್ತಾರೆ – ಉತ್ತಮ ಸಂಶೋಧನೆಗಳು ನಡೆಯುತ್ತವೆ. ಪ್ರಜಾಪ್ರಭುತ್ವದಲ್ಲಿ ತನ್ನದೇ ಆದ ಸೈದ್ಧಾಂತಿಕ ಅಭಿಪ್ರಾಯವನ್ನು ಹೊಂದಲು ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ ಶಿಕ್ಷಣದ ವಿಷಯಕ್ಕೆ ಬಂದಾಗ, ಜೆಎನ್‌ಯು ಅಥವಾ ಇನ್ನಾವುದೇ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಒಬ್ಬ ವಿದ್ಯಾರ್ಥಿಗೆ ತಿಂಗಳಿಗೆ ೧೫ ರೂ. ಅಂತೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಆದರೆ ತಿಂಗಳ ವೆಚ್ಚ ೨೦ ಸಾವಿರ ರೂ. ಆಗಿದೆ. ಆದ್ದರಿಂದ ಈ ಯೂನಿವರ್ಸಿಟಿಗಳಲ್ಲಿ ಕಲಿಯುತ್ತಿರುವ ಪ್ರತಿ ವಿದ್ಯಾರ್ಥಿಗೂ ಸಮಾಜಕ್ಕೆ, ವಿಶೇ?ವಾಗಿ ಬಡವರ್ಗಕ್ಕೆ ಬದ್ಧವಾಗಿರುವ ಕರ್ತವ್ಯವೂ ಇದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಧನಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಪ್ರಶ್ನೆ: ಪ್ರತಿಭಾವಂತ ವಿದ್ಯಾರ್ಥಿಗಳು ಕಲೆ, ಸಾಹಿತ್ಯ ಇತ್ಯಾದಿ ಮಾನವಿಕ ವಿಷಯಗಳನ್ನು ತಮ್ಮ ಅಧ್ಯಯನಕ್ಕೆ ಆರಿಸಿಕೊಳ್ಳುವುದನ್ನು ಕೊನೆಯ ಆಯ್ಕೆಯಾಗಿ ಇಟ್ಟುಕೊಳ್ಳುತ್ತಾರೆ. ವಿದ್ಯಾರ್ಥಿಗಳನ್ನು ಈ ವಿಭಾಗಕ್ಕೆ ಆಕರ್ಷಿಸುವಂತೆ ಯಾವುದಾದರೂ ಯೋಜನೆ, ಪರಿಕಲ್ಪನೆ ಇಟ್ಟುಕೊಂಡಿದ್ದೀರಾ?

ಉತ್ತರ: ಪ್ರತಿ ಐಐಟಿಗಳಲ್ಲಿ ಪುರಾತತ್ತ್ವ ಇತ್ಯಾದಿ ವಿವಿಧ ವಿಷಯಗಳ ಅಧ್ಯಯನ ಕೇಂದ್ರ ಇರುವ
ಬಗ್ಗೆ ಖಚಿತಪಡಿಸಿಕೊಳ್ಳುತ್ತೇನೆ. ಎಲ್ಲ ಐಐಟಿಗಳಲ್ಲೂ ಮಾನವಿಕ ವಿಷಯಗಳ ವಿಭಾಗಕ್ಕೆ ಸಂಬಂಧಿಸಿ ಯಾವುದಾದರೂ ಒಂದು ವಿಷಯದ ಕೇಂದ್ರ ಇದೆ. ಏಕೆಂದರೆ ಆಂತರ್‌ಶಿಸ್ತಿನಿಂದ ಕೂಡಿದ ಶಿಕ್ಷಣ ಇಂದಿನ ಅಗತ್ಯ. ನಮಗೆ ಯಾವ ರೀತಿ ಉತ್ತಮ ಭೌತಶಾಸ್ತ್ರಜ್ಞರು, ರಸಾಯನಶಾಸ್ತ್ರಜ್ಞರು, ಗಣಿತಜ್ಞರ ಅಗತ್ಯವಿದೆಯೋ, ಅದೇ ರೀತಿ ಇತಿಹಾಸಕಾರರು, ಪುರಾತತ್ತ್ವಜ್ಞರು, ತತ್ತ್ವಶಾಸ್ತ್ರಜ್ಞರ ಅಗತ್ಯವಿದೆ. ಆದರೆ ಈ ವಿಚಾರವಾಗಿ ಪೋಷಕರಲ್ಲಿ ಧನಾತ್ಮಕ ಅಭಿಪ್ರಾಯವನ್ನು ಬೆಳೆಸುವುದು ಅವಶ್ಯವಾಗಿದೆ. ಇದಕ್ಕಾಗಿ ಹಲವು ಯೋಜನೆಗಳ ಕುರಿತಾಗಿ ಚರ್ಚೆಗಳು ನಡೆಯುತ್ತಿವೆ. ಕಲಾವಿಭಾಗಕ್ಕೆ ಸಂಬಂಧಿಸಿ ಇರುವ ಹಲವು ಕೋರ್ಸ್‌ಗಳ ಬಗೆಗೆ ವಿದ್ಯಾರ್ಥಿಗಳು, ಪೋಷಕರು ತಿಳಿದುಕೊಳ್ಳುವಂತೆ ಅರಿವನ್ನು ಮೂಡಿಸುವ ಪ್ರಯತ್ನ ಸಾಗುತ್ತಿದೆ. ಕಲಾವಿಭಾಗಕ್ಕೂ ಹೆಚ್ಚಿನ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದೇವೆ.ಈ ವಿಭಾಗದಲ್ಲೂ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ.

ಕಳೆದ ಹಲವು ವರ್ಷಗಳಿಂದ ಕಲಾವಿಭಾಗದ ಪಠ್ಯಕ್ರಮಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರತಿ ವರ್ಷ ನವೀಕರಿಸಲ್ಪಟ್ಟ ಪಠ್ಯಕ್ರಮವನ್ನು ತರುವಂತೆ ಯುಜಿಸಿಗೆ ಹೇಳಿದ್ದೇನೆ. ತನ್ಮೂಲಕ ವಿದ್ಯಾಭ್ಯಾಸದ ಬಳಿಕ ಉದ್ಯೋಗಕ್ಕೂ ಅನುವಾಗುವಂತೆ ಮಾಡಬಹುದು.

ಪ್ರಶ್ನೆ: ಮೂಲವಿಜ್ಞಾನ ಸಂಶೋಧನಾ ಕ್ಷೇತ್ರಗಳಲ್ಲಿ ಗಮನಾರ್ಹವಾದ ಇಳಿಕೆ ಕಂಡುಬಂದಿತ್ತು. ಐಐಎಸ್ಸಿ, ಇಸ್ರೋದಂತಹ ಸಂಸ್ಥೆಗಳ ಮುಖ್ಯಸ್ಥರು ಈ ಬಗ್ಗೆ ಒಂದು ದಶಕದ ಹಿಂದೆಯೇ ಎಚ್ಚರಿಸಿದ್ದರು. ಮೂಲವಿಜ್ಞಾನ ಸಂಶೋಧನೆಗಳಿಗೆ ಪ್ರತಿಭೆಗಳನ್ನು ಆಕರ್ಷಿಸಲು ನಿಮ್ಮ ಇಲಾಖೆಯಿಂದ ಯಾವ ರೀತಿಯ ಪ್ರಯತ್ನಗಳು ನಡೆಯುತ್ತಿವೆ?

ಉತ್ತರ: ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಸಂಬಂಧಿಸಿ ನಡೆಯುತ್ತಿರುವ ಕಾರ್ಯಗಳು ಈಗ ಹೆಚ್ಚಾಗಿವೆ. ಆವಿಷ್ಕಾರ ಎನ್ನುವುದೊಂದು ಸಂಸ್ಕೃತಿ, ಅದನ್ನು ನಾವು ಕಲಿಸಬೇಕಾಗಿದೆ. ಇದಕ್ಕೆ ಪೂರಕವಾಗಿ ಸ್ಮಾರ್ಟ್ ಇಂಡಿಯ ಹ್ಯಾಕಥಾನ್ ಆರಂಭಿಸಿದ್ದೇವೆ. ಹ್ಯಾಕಥಾನ್‌ನಲ್ಲಿ ವಿದ್ಯಾರ್ಥಿಗಳಿಗೆ ನೇರವಾಗಿ ಸಮಸ್ಯೆಗಳನ್ನು ನೀಡಲಾಗುತ್ತದೆ. ಕಳೆದ ವರ್ಷ ಎರಡು ಸಾವಿರ ಕಾಲೇಜುಗಳಿಂದ ೪೦ ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಿಜಿಟಲ್ ಪರಿಹಾರ ಬೇಕಾಗಿರುವಂತಹ ೬೦೦ ಸಮಸ್ಯೆಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ೬ ವಿದ್ಯಾರ್ಥಿಗಳು, ಒಬ್ಬ ಮಾರ್ಗದರ್ಶಿಯ ಗುಂಪಿನ ಮೂಲಕ ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಬೇಕು. ಸಂತಸದ ವಿಷಯವೆಂದರೆ, ಮೊದಲ ಪ್ರಯತ್ನದಲ್ಲೇ ೫೦ ಅತ್ಯುತ್ತಮ ಪರಿಹಾರಗಳು ಸಿಕ್ಕಿವೆ. ಈ ಪರಿಹಾರಗಳು ಇಂದು ಅನುಷ್ಠಾನದ ಮಾರ್ಗದಲ್ಲಿವೆ. ಹೀಗೆ ಹ್ಯಾಕಥಾನ್ ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮತ್ತು ಆವಿಷ್ಕಾರ ಮನೋಭಾವವನ್ನು ಬೆಳೆಸುತ್ತಿದೆ.

ಇಂಪ್ರಿಂಟ್ (https://imprint-india.org ) ಎನ್ನುವ ಹೊಸ ವೇದಿಕೆ ಕಲ್ಪಿಸಲಾಗಿದೆ. ಭಾರತವು ಪ್ರಮುಖವಾದ ವಿಜ್ಞಾನ ಮತ್ತು ಇಂಜಿನಿಯರಿಂಗ್ ಸವಾಲುಗಳನ್ನು ಎದುರಿಸಲು ಇದೇ ಮೊದಲ ಬಾರಿಗೆ ಪ್ಯಾನ್ ಐಐಟಿ ಮತ್ತು ಐಐಎಸ್ಸಿ ಜಂಟಿಯಾಗಿ ಆರಂಭಿಸಿರುವ ವೇದಿಕೆ ಇದಾಗಿದ್ದು, ಸಮಗ್ರ ಬೆಳವಣಿಗೆ ಮತ್ತು ಸ್ವಾವಲಂಬನೆಗಾಗಿ ಭಾರತವನ್ನು ಸಶಕ್ತಗೊಳಿಸಲು, ರಾಷ್ಟ್ರವನ್ನು ಜಾಗತಿಕಮಟ್ಟದಲ್ಲಿ ಎತ್ತಿಹಿಡಿಯುವುದು ಉದ್ದೇಶವಾಗಿದೆ. ಸಾಮಾಜಿಕ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ಮಾರ್ಗದರ್ಶನ ನೀಡುವ ಇಂಪ್ರಿಂಟ್ ಯೋಜನೆಯು, ವ್ಯಾಪಕ ದೃಷ್ಟಿಕೋನವನ್ನು ಹೊಂದಿದೆ. ಕೈಗಾರಿಕಾ ಸಂಸ್ಥೆಗಳು ನೇರವಾಗಿ ವಿದ್ಯಾರ್ಥಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ, ಅವರ ಆವಶ್ಯಕತೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳು ಸಂಶೋಧನೆಯನ್ನು ನಡೆಸುತ್ತಾರೆ. ಅಟಲ್ ಇನ್ಕ್ಯುಬೇಷನ್ ಕೇಂದ್ರಗಳನ್ನು ತೆರೆಯಲಾಗಿದೆ. ಒಂದೇ ಪ್ರಾಜೆಕ್ಟ್‌ಗಾಗಿ ವಿದ್ಯಾರ್ಥಿಗಳು, ಶಿಕ್ಷಕರು, ಉದ್ಯಮಿಗಳು ಜೊತೆಯಾಗಿ ಕೆಲಸ ಮಾಡುವ ವೇದಿಕೆ ಇದು.

ಇನ್ನೊಂದು ಉತ್ತಮ ಯೋಜನೆ ‘ಉಚ್ಚತರ್ ಆವಿಷ್ಕಾರ ಯೋಜನೆ’. ಕೈಗಾರಿಕೆಗಳಿಗೆ ಅವರ ಅಗತ್ಯಕ್ಕೆ
ಅನುಗುಣವಾಗಿ ಬೇಡಿಕೆಯನ್ನು ಸಂಶೋಧನಾ ಸಂಸ್ಥೆಗಳಿಗೆ ನೀಡಲು ಹೇಳಿದ್ದೇವೆ. ಇದರ ಮೂಲಕ ೯೮ ಪ್ರಾಜೆಕ್ಟ್‌ಗಳು ಪ್ರಗತಿಯಲ್ಲಿವೆ. ಹೀಗೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ವಿಚಾರ ಇಂದು ಮುನ್ನೆಲೆಯಲ್ಲಿದೆ.

ಪ್ರಶ್ನೆ: ಹೆಚ್ಚಿನ ವಿಶ್ವವಿದ್ಯಾನಿಲಯಗಳಿಗೆ ಸ್ವಾಯತ್ತತೆಯನ್ನು ನೀಡುತ್ತಿದ್ದೀರಿ. ಈ ಹೆಜ್ಜೆಯ ಹಿಂದಿನ ಪರಿಕಲ್ಪನೆ ಏನು?

ಉತ್ತರ: ಸ್ವಾಯತ್ತತೆ ಪಡೆಯುವುದು ಕಡ್ಡಾಯವಲ್ಲ. ಯಾವುದೇ ವಿಶ್ವವಿದ್ಯಾನಿಲಯಕ್ಕೆ ಸ್ವಾಯತ್ತತೆ ಪಡೆಯಬೇಕು ಎನ್ನುವ ಹಂಬಲವಿದ್ದರೆ, ಅವರು ಅದಕ್ಕಾಗಿ ತಮ್ಮ ಸಂಸ್ಥೆಯನ್ನು ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಮಾಡಿದ ತಕ್ಷಣ ಸಂಸ್ಥೆಗೆ ಸ್ವಾಯತ್ತತೆ ಸಿಗುವುದಿಲ್ಲ. ಸಂಸ್ಥೆಯು ಸ್ವಾಯತ್ತತೆ ಹೊಂದಬೇಕಾದರೆ, ಅದಕ್ಕೆ ಬೇಕಾದ ಕನಿಷ್ಠ ಮಾನದಂಡಗಳನ್ನು ಹೊಂದಿರಬೇಕು. ಪ್ರತಿಯೊಂದು ಕೂಡ ಇಂದು ಯೋಗ್ಯತೆಯೊಂದಿಗೆ ಸಂಲಗ್ನಗೊಂಡಿದೆ. ಯೋಗ್ಯತೆಯನ್ನು ಹೊಂದಿರುವ ಸಂಸ್ಥೆ ಮಾತ್ರವೇ ಸ್ವಾಯತ್ತತೆಯನ್ನು ಪಡೆಯುತ್ತದೆ.

ನನಗೆ ವಿದ್ಯಾರ್ಥಿಗಳಲ್ಲಿ, ಶಿಕ್ಷಕರಲ್ಲಿ ನಂಬಿಕೆ ಇದೆ. ಎರಡು ಹಂತವನ್ನು ಮಾಡಿದ್ದೇವೆ. ವಿಶ್ವಮಟ್ಟದ ೨೦ ಯೂನಿವರ್ಸಿಟಿಗಳಿಗೆ, ಡಿಗ್ರಿಯನ್ನು ಕೊಡುವುದಕ್ಕಾಗಿ ಮಾತ್ರ ಯುಜಿಸಿ ಕಾರ್ಯನಿರ್ವಹಿಸುತ್ತಿದೆ. ತಮ್ಮ ಸ್ವಾಯತ್ತತೆಯನ್ನು ಹೊಂದಿರುವ ಈ ಯೂನಿವರ್ಸಿಟಿಗಳಿಗೆ ಪೂರ್ಣಸ್ವಾತಂತ್ರ್ಯವನ್ನು ನಮ್ಮ ಇಲಾಖೆಯ ಮಾರ್ಗದರ್ಶನದಲ್ಲಿ ನೀಡಿದ್ದೇವೆ. ಎಲ್ಲ ಪಕ್ಷಗಳು ಇದಕ್ಕೆ ಬೆಂಬಲ ನೀಡಿವೆ ಎನ್ನುವುದು ಖುಷಿಯ ವಿಚಾರ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಬಂಡವಾಳ ಹೂಡಿ ಮತ್ತು ಮರೆತುಬಿಡಿ – ಇದನ್ನು ನಾವು ಕಲಿಯಬೇಕಿದೆ. ವಾರ್ಷಿಕವರದಿ, ಲೆಕ್ಕಪತ್ರಗಳಿಗೆ ಸಂಬಂಧಿಸಿ ನಾವು ಪರಿಶೀಲನೆಯನ್ನು ಮಾಡುತ್ತಿರುತ್ತೇವೆ. ಆದರೆ ಕಲಿಕಾವಿಚಾರವಾಗಿ ನಾವು ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು ನಂಬುತ್ತಿಲ್ಲ ಎಂದರೆ ಇನ್ನಾರನ್ನು ನಂಬಲು ಸಾಧ್ಯ? ಅದಕ್ಕಾಗಿಯೇ ಗ್ರೇಡೆಡ್ ಸ್ವಾಯತ್ತತೆಯನ್ನು ನೀಡುತ್ತಿದ್ದೇವೆ.

ಪ್ರಶ್ನೆ: ಶ್ರೇಷ್ಠ ಸಂಸ್ಥೆಗಳು (‘Institutes of Excellence’)  ಎನ್ನುವ ಪರಿಕಲ್ಪನೆಯ ಕುರಿತಾಗಿ ಯೋಚನೆ ಹೇಗೆ ಮೂಡಿತು? ಈ ವಿನ್ಯಾಸದ ಪ್ರಗತಿಯನ್ನು ಯಾವ ರೀತಿಯಲ್ಲಿ ಪರಿವೀಕ್ಷಿಸುತ್ತಿದ್ದೀರಿ

ಉತ್ತರ: ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್/ ಎಕ್ಸಲೆನ್ಸ್ ಎನ್ನುವುದು ಶಿಕ್ಷಣಕ್ಷೇತ್ರದ ಸುಧಾರಣೆಗಾಗಿ ಪ್ರಧಾನಮಂತ್ರಿ ಅವರ ದೃಷ್ಟಿಕೋನವಾಗಿದೆ. ವಿದೇಶಗಳಲ್ಲಿ ಯೂನಿವರ್ಸಿಟಿಗಳನ್ನು ನಡೆಸುವ ಸಂಸ್ಥೆಯೇ ಎಲ್ಲವನ್ನು ನಿರ್ಧರಿಸುತ್ತದೆ. ಸರ್ಕಾರವು ಯೋಜನೆಗಳಿಗೆ ಅನುಮತಿಯನ್ನಷ್ಟೆ ನೀಡುತ್ತದೆ. ಇದೇ ಸಂಸ್ಕೃತಿಯನ್ನು ನಮ್ಮಲ್ಲಿಯೂ ತರಬೇಕು ಎನ್ನುವ ಉದ್ದೇಶವೇ ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್‌ ನದ್ದಾಗಿದೆ. ಸಂಪೂರ್ಣ ಸ್ವಾಯತ್ತತೆಯನ್ನು ನೀಡುವುದು ಮತ್ತು ಉತ್ತಮ ಸಾಧನೆಯನ್ನು ಮಾಡುವ ಮೂಲಕ ೧೦ ವರ್ಷಗಳ ಒಳಗಾಗಿ ವಿಶ್ವರ‍್ಯಾಂಕಿಂಗ್ ಪಟ್ಟಿಯನ್ನು ಸೇರುವುದು ನಮ್ಮ ಗುರಿಯಾಗಿದೆ.

ಇನ್ನು ಪ್ರಗತಿಯ ಪರಿವೀಕ್ಷಣೆಯ ಕುರಿತಾಗಿ: ಸಂಸ್ಥೆಯು ವಾರ್ಷಿಕವರದಿಯನ್ನು ನಮಗೆ ಸಲ್ಲಿಸುತ್ತದೆ. ಈ ವರದಿಯ ಕುರಿತು ಸಂಸತ್ತಿನಲ್ಲಿ, ಸಮಿತಿಯಲ್ಲಿ ಚರ್ಚೆಗೆ ಆಸ್ಪದವಿದೆ. ಸ್ವಾಯತ್ತತೆಯನ್ನು ಹೊಂದಿದ್ದರೂ ಸಂಸತ್ತಿನ ವಿಮರ್ಶೆಗೆ ಸದಾ ಒಳಪಟ್ಟಿರುತ್ತದೆ. ಆದರೆ ದೈನಂದಿನ ವ್ಯವಹಾರಕ್ಕೆ ಸಂಸತ್ತು ಅಡ್ಡಿಪಡಿಸುವುದಿಲ್ಲ ಮತ್ತು ನಮ್ಮ ಸಮಿತಿಯ ಯಾವುದೇ ಸದಸ್ಯರನ್ನು ಅಲ್ಲಿ ನೇಮಕ ಮಾಡುವುದಿಲ್ಲ. ಅವರದ್ದೇ ಆದ ಸಮಿತಿಯನ್ನು ಅವರು ಹೊಂದಿರುತ್ತಾರೆ. ಐಐಎಂನ ಈಗಿನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು ಮುಂದಿನ ಆಡಳಿತ ಮಂಡಳಿಯನ್ನು ಆಯ್ಕೆಮಾಡುತ್ತಾರೆ. ತನ್ಮೂಲಕ ಇದು ಒಂದು ಅಟೋಮೆಟಿಕ್ ಪ್ರೊಸೆಸ್‌ನಂತೆ ಸಾಗುತ್ತಿರುತ್ತದೆ. ಯಾವುದೇ ಆಡಳಿತ ವರ್ಗದ ರಾಜಕೀಯಗಳು ಇಲ್ಲಿ ಸೇರಿರುವುದಿಲ್ಲ. ಇದರಿಂದ ಸಂಸ್ಥೆಗಳು ಗುಣಮಟ್ಟದಲ್ಲಿ ಶ್ರೇಷ್ಠತೆಯನ್ನು ತಲಪುತ್ತವೆ. ಇದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಸುಲಭ.  ಒಂದು ಕುಟುಂಬವನ್ನೇ ತೆಗೆದುಕೊಳ್ಳಿ. ನಿಮ್ಮ ಮಕ್ಕಳಲ್ಲಿ ನೀವು ನಂಬಿಕೆ ಇಡಿ. ಅವರ ಸಾಧನೆ ತಾನಾಗಿಯೇ ಉತ್ತಮವಾಗುತ್ತದೆ. ಅದನ್ನೇ ಇಲ್ಲಿಯೂ ಅನ್ವಯಿಸುತ್ತಿದ್ದೇವೆ. ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು, ಸಂಸ್ಥೆಯನ್ನು ನಂಬುತ್ತೇವೆ. ನಾನು ಬಹಳಷ್ಟು
ವಿದ್ಯಾರ್ಥಿಗಳ ಜೊತೆಯಲ್ಲಿ ಮಾತುಕತೆ ನಡೆಸಿದ್ದೇನೆ, ಅವರು ಯಾವ ವಿಚಾರವಾಗಿ ಸಂಶೋಧನೆ ನಡೆಸುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಂಡಿದ್ದೇನೆ. ಈ ಧೈರ್ಯದಲ್ಲಿ ಹೇಳುತ್ತೇನೆ, ಭಾರತದ ಭವಿಷ್ಯ ನಿಜಕ್ಕೂ ಪ್ರಕಾಶಮಾನವಾಗಿದೆ.

ಪ್ರಶ್ನೆ : ವಿಶ್ವಮಟ್ಟದಲ್ಲಿ ನಮ್ಮ ವಿಶ್ವವಿದ್ಯಾಲಯಗಳ ಸ್ಥಿತಿಗತಿ ಸುಧಾರಿಸುವ ನಿಟ್ಟಿನಲ್ಲಿ ಆಗುತ್ತಿರುವ ಕಾರ್ಯಗಳ ಬಗ್ಗೆ ತಿಳಿಸಬಹುದೆ?

ನಮ್ಮ ದೇಶದಲ್ಲಿ ೯೦೦ ಯೂನಿವರ್ಸಿಟಿಗಳಿವೆ. ಆದರೆ ಜಾಗತಿಕಮಟ್ಟದಲ್ಲಿ ನೋಡಿದರೆ, ನಮ್ಮ ಯಾವ ಯೂನಿವರ್ಸಿಟಿಯೂ ಕೂಡ ಮೊದಲನೆಯ ೧೦೦ರ ಸ್ಥಾನದಲ್ಲಿ ಇಲ್ಲ. ಈಗ ಇರುವ ಯೂನಿವರ್ಸಿಟಿಗಳಲ್ಲಿ ಐಐಎಸ್ಸಿ ಅಂತಹ ಕೆಲವೇ ಕೆಲವು ಉತ್ತಮ ಗುಣಮಟ್ಟದ ಯೂನಿವರ್ಸಿಟಿಗಳನ್ನಷ್ಟೆ  ನಾವು ಹೊಂದಿದ್ದೇವೆ. ಆದ್ದರಿಂದ, ೨೦ ಯೂನಿವರ್ಸಿಟಿಗಳು, ೧೦ ಪಬ್ಲಿಕ್ ಸ್ಕೂಲ್‌ಗಳು, ೧೦ ಪ್ರೈವೇಟ್ ಸೆಕ್ಟರ್ ವಿದ್ಯಾಲಯಗಳನ್ನು ಇನ್ಸ್ಟಿಟ್ಯೂಟ್ಸ್ ಆಫ್ ಎಮಿನೆನ್ಸ್ ಅಡಿಯಲ್ಲಿ  ಆಯ್ಕೆ ಮಾಡಿದೆವು. ಈ ವಿಚಾರದಲ್ಲಿ ಅನಗತ್ಯ ವಿವಾದ ಉಂಟುಮಾಡಿದರು. ವಿಶ್ವದ ಉತ್ತಮ ಯೂನಿವರ್ಸಿಟಿಗಳಲ್ಲಿ ಒಂದಾದ ಸ್ಟಾನ್‌ಫರ್ಡ್ ಮುಂತಾದ ಯೂನಿವರ್ಸಿಟಿಗಳು ಇದೇ ಮಾದರಿಯಲ್ಲಿ ನಡೆಯುತ್ತವೆ. ಯೂನಿವರ್ಸಿಟಿಗಳು ಸಂಪೂರ್ಣವಾಗಿ ಇಂಡಸ್ಟ್ರಿ ಮಾಧ್ಯಮಗಳಿಂದ ಹೂಡಿಕೆಯನ್ನು ಹೊಂದಿರುತ್ತವೆ. ಇಂಡಸ್ಟ್ರಿಗಳು ಮುಂದೆ ಬಂದು ದೊಡ್ಡಮಟ್ಟದಲ್ಲಿ ಶಿಕ್ಷಣಕ್ಕಾಗಿ ಬಂಡವಾಳ ಹೂಡಿಕೆ ಮಾಡುವುದರೊಂದಿಗೆ ಜಾಗತಿಕ ಮಟ್ಟದಲ್ಲಿ ಉತ್ತಮ ಸಂಸ್ಥೆಗಳನ್ನು ರೂಪಿಸುತ್ತಿವೆ. ಗ್ರೀನ್‌ಫೀಲ್ಡ್ ಅಡಿಯಲ್ಲಿ ಬಂದವರಿಗೆ ಇನ್ನೂ ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಅನ್ನು ನೀಡಲಾಗಿಲ್ಲ. ಅವರಿಗೆ ತಮ್ಮ ಉದ್ದೇಶದ ಕುರಿತಾಗಿ ಪತ್ರ ಬರೆಯಲಾಗಿದೆ, ನಮ್ಮ ಎಲ್ಲ ಔಪಚಾರಿಕ ನಿಯಮಾವಳಿಗಳನ್ನು ಪೂರ್ಣಗೊಳಿಸಬೇಕಾಗಿದೆ. ಮೂಲಸೌಕರ್ಯ, ಸಿಬ್ಬಂದಿವರ್ಗದ ನೇಮಕಾತಿ ಇವೆಲ್ಲವನ್ನು ಅವರು ಪೂರ್ಣಗೊಳಿಸಿದ ಬಳಿಕವೇ, ಈ ಸಂಸ್ಥೆಗಳಿಗೆ ಇನ್ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ದರ್ಜೆಯನ್ನು ನೀಡಲಾಗುವುದು. ಇಂತಹ ಯೂನಿರ್ವಸಿಟಿಯ ಸ್ವತಂತ್ರ ವಾತಾವರಣದಲ್ಲಿ, ವಿದೇಶೀ ಪರಿಣತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬಹುದು, ವಿದ್ಯಾರ್ಥಿಗಳು ವೈವಿಧ್ಯದ ವಾತಾವರಣದಲ್ಲಿ ಕಲಿಕೆಯನ್ನು ನಡೆಸಬಹುದು, ವಿವಿಧ ವಿಷಯಗಳಿಗೆ ಸಂಬಂಧಿಸಿ ಪಠ್ಯಕ್ರಮಗಳನ್ನು ಕಲಿಯಬಹುದಾಗಿದೆ.

ಸರ್ಕಾರೀ ಸಂಸ್ಥೆಗಳಿಗೆ ನಾವು ಬಂಡವಾಳ ಹೂಡಿಕೆಯನ್ನು ಮಾಡುತ್ತೇವೆ; ಖಾಸಗೀ ಸಂಸ್ಥೆಗಳಿಗೆ ಇಂಡಸ್ಟ್ರಿಗಳು ಹೂಡಿಕೆಯನ್ನು ಮಾಡುತ್ತವೆ – ಇದೇ ಇನ್ ಸ್ಟಿಟ್ಯೂಟ್ಸ್ ಆಫ್ ಎಕ್ಸಲೆನ್ಸ್.

ಪ್ರಶ್ನೆ: ಡಿಜಿಟಲ್ ಇಂಡಿಯಾ ಯೋಜನೆಯನ್ನು ಅನುಷ್ಠಾನಗೊಳಿಸಲು ನಿಮ್ಮ ಇಲಾಖೆಯು ಯಾವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ? ಗಮನಾರ್ಹ ಅಭಿವೃದ್ಧಿ ಇದೆಯೇ?

ಉತ್ತರ: ಹೌದು, ನಡೆಯುತ್ತಿದೆ. ಇದು ಮೋದಿಯವರ ನೇತೃತ್ವದ ಸರ್ಕಾರ ಮಾಡಿರುವ ಒಂದು ಕ್ರಾಂತಿ ಎಂದೇ ಹೇಳಬಹುದು. ೯ನೇ ತರಗತಿಯಿಂದ ನಮ್ಮಲ್ಲಿ ಒಟ್ಟು ೧೫ ಲಕ್ಷ ತರಗತಿ ಕೋಣೆಗಳಿವೆ. ಈ ಎಲ್ಲ ತರಗತಿ ಕೊಠಡಿಗಳಿಗೆ ಡಿಜಿಟಲ್ ಬೋರ್ಡ್ ವ್ಯವಸ್ಥೆ ಮಾಡಲಾಗುವುದು. ಸುಮಾರು ೬೦ ವ?ಗಳ ಹಿಂದೆ, ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ, ಆಪರೇ?ನ್ ಬ್ಲ್ಯಾಕ್ ಬೋರ್ಡ್ ನಡೆದಿತ್ತು. ಇಂದು ಅದು ಆಪರೇಷನ್ ಡಿಜಿಟಲ್ ಬೋರ್ಡ್ ಆಗಿದೆ. ಡಿಜಿಟಲ್ ಬೋರ್ಡ್ ಕೊಠಡಿಯ ಪೂರ್ಣ ವಾತಾವರಣವನ್ನೇ ಬದಲಿಸಲಿದೆ. ತರಗತಿಯಲ್ಲಿ ಜೀವಂತಿಕೆಯನ್ನು ಸೃಷ್ಟಿಸಲಿದೆ, ಪಠ್ಯವಿಷಯದ ಚಲನಚಿತ್ರಗಳನ್ನು ಸಹ ಮಕ್ಕಳು ವೀಕ್ಷಿಸಲಿದ್ದಾರೆ. ಇದು ಶಾಲಾಶಿಕ್ಷಣ ಕ್ಷೇತ್ರದ ಅತಿದೊಡ್ಡ  ಧನಾತ್ಮಕ ಬೆಳವಣಿಗೆಯಾಗಲಿದೆ.

ಸ್ವಯಂ (https://swayam.gov.in/) ಎನ್ನುವ ಆನ್‌ಲೈನ್ ಕಲಿಕಾ ವೇದಿಕೆಯನ್ನು ತೆರೆಯಲಾಗಿದೆ. ಇದು ಬೃಹತ್ ಆನ್‌ಲೈನ್ ಕಲಿಕಾ ಕೇಂದ್ರವಾಗಿದೆ. ೧೦೩೨ ಕೋರ್ಸ್‌ಗಳು ಈ ವೇದಿಕೆಯಲ್ಲಿ ಲಭ್ಯವಿವೆ. ೩ ತಿಂಗಳು, ೬ ತಿಂಗಳು ಹೀಗೆ ಬೇರೆಬೇರೆ ಸಮಯಾವಕಾಶದ ಕೋರ್ಸ್‌ಗಳು ಇವೆ. ೯ನೇ ತರಗತಿಯಿಂದ ಆರಂಭಿಸಿ ಉನ್ನತಶಿಕ್ಷಣ ಮಾಡುತ್ತಿರುವ ಯಾವುದೇ ವಿದ್ಯಾರ್ಥಿಯು ತನ್ನ ನೆಚ್ಚಿನ ವಿಷಯವನ್ನು ಆರಿಸಿಕೊಂಡು ಅಧ್ಯಯನವನ್ನು ಮಾಡಬಹುದು. ಪ್ರಸಕ್ತ ಶೈಕ್ಷಣಿಕ ವ?ದ ತರಗತಿಗಳು ಆರಂಭವಾಗಿವೆ. ಇದು ಒಂದು ಸಂಪೂರ್ಣ ಕಲಿಕಾ ವಿಧಾನವಾಗಿದೆ. ಪಠ್ಯವಸ್ತುಗಳು, ವಿಷಯದ ಕುರಿತಾಗಿ ಶಿಕ್ಷಣ, ಶಿಕ್ಷಕರ ಜೊತೆ ಸಂವಾದ, ಪರೀಕ್ಷೆ, ಪ್ರಮಾಣಪತ್ರ ಎಲ್ಲ ಒಂದೇ ವೇದಿಕೆಯಲ್ಲಿ ಸಿಗುತ್ತಿದೆ.

ಪ್ರಶ್ನೆ: ದೇಶದ ಜನಸಂಖ್ಯೆಗೆ ಹೋಲಿಸಿದರೆ ಪ್ರಾಥಮಿಕ ಶಿಕ್ಷಣ ನೀಡುವ ನವೋದಯ ಅಥವಾ ಕೇಂದ್ರೀಯ ವಿದ್ಯಾಲಯಗಳು ಸೇರಿದಂತೆ ಸರ್ಕಾರದ ಉನ್ನತಶಿಕ್ಷಣ ಸಂಸ್ಥೆಗಳು ಅವಶ್ಯವಿರುವಷ್ಟು  ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನೀಡಲಾಗುತ್ತಿಲ್ಲ. ಇಂತಹ ಶಾಲೆ ಹಾಗೂ ಸಂಸ್ಥೆಗಳ ಸಂಖ್ಯೆಯನ್ನು
ಹೆಚ್ಚಿಸುವ ಯೋಜನೆ ಇದೆಯೇ?

ಉತ್ತರ: ಕಳೆದ ನಾಲ್ಕು ವರ್ಷಗಳಲ್ಲಿ ೨೦೦ಕ್ಕೂ ಹೆಚ್ಚು ಯೂನಿವರ್ಸಿಟಿಗಳನ್ನು ಪ್ರೈವೇಟ್, ಸ್ಟೇಟ್  ಪಬ್ಲಿಕ್ ಸೆಕ್ಟರ್ ಸೇರಿದಂತೆ ಎಲ್ಲೆಡೆ ತೆರೆಯಲಾಗಿದೆ. ಉತ್ತಮ ಗುಣಮಟ್ಟದ ಶಿಕ್ಷಣ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಸಿಗುವುದಕ್ಕೋಸ್ಕರ ಹೊಸದಾಗಿ ೭ ಐಐಟಿ, ೭ ಐಐಎಂ, ೧೪ ಐಐಐಟಿ, ೧ ಎನ್‌ಐಟಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಗೊಂದರಂತೆ ನವೋದಯ ವಿದ್ಯಾಲಯಗಳು ಈಗಾಗಲೇ ಅಸ್ತಿತ್ವದಲ್ಲಿವೆ, ಹೊಸ ಜಿಲ್ಲೆಗಳಲ್ಲಿ ಇನ್ನೇನು ನವೋದಯ ವಿದ್ಯಾಲಯಗಳು ಆರಂಭವಾಗಲಿವೆ. ೧೦೩ ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ತೆರೆದಿದ್ದೇವೆ. ಈ ವರ್ಷದಿಂದ ಕೇಂದ್ರೀಯ ವಿದ್ಯಾಲಯಗಳು ಎರಡು ಪಾಳಿಗಳಲ್ಲಿ (ಡಬಲ್ ಶಿಫ್ಟ್) ಕಾರ್ಯನಿರ್ವಹಿಸುತ್ತಿವೆ. ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಮತ್ತು ಮಧ್ಯಾಹ್ನದಿಂದ ಸಂಜೆಯ ತನಕ – ಎರಡು ತರಗತಿಗಳನ್ನು ನಡೆಸುವ ಮೂಲಕ ಹೆಚ್ಚಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗುವ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ.

ಪ್ರಶ್ನೆ: ಕರ್ನಾಟಕದ ಕೆಎಸ್‌ಒಯು (KSOU) ಕುರಿತಾಗಿ ಯಾವ ನಿರ್ಧಾರಕ್ಕೆ ಬಂದಿದ್ದೀರಿ?

ಉತ್ತರ: ಉತ್ತಮ ಗುಣಮಟ್ಟದ ಮುಕ್ತ ದೂರಶಿಕ್ಷಣಕ್ಕೆ ಒತ್ತುನೀಡುತ್ತಿದ್ದೇವೆ. ಕೆಎಸ್‌ಒಯು ಸದ್ಯದಲ್ಲೇ ಪುನರಾರಂಭಗೊಳ್ಳಲಿದೆ. ಇದಕ್ಕೆ ನ್ಯಾಕ್ ಪರಿಶೀಲನೆಯಲ್ಲಿ ೩.೨೬ ಅಂಕವನ್ನು ಸಾಧಿಸಬೇಕು ಎನ್ನುವ ಷರತ್ತನ್ನು ಹಾಕಲಾಗಿದೆ. ಏಕೆಂದರೆ ಶಿಕ್ಷಣವನ್ನು ಕೊಡುವ ಜೊತೆಗೆ, ಗುಣಮಟ್ಟವನ್ನು ಕಾಪಾಡಿಕೊಳ್ಳುವುದೂ ಅಷ್ಟೇ ಅಗತ್ಯವಾಗಿದೆ. ಆನ್‌ಲೈನ್ ಶಿಕ್ಷಣವನ್ನು ಆರಂಭಿಸುತ್ತಿದ್ದೇವೆ. ಆನ್‌ಲೈನ್ಶಿ ಕ್ಷಣ ಉತ್ತಮ ಯೋಜನೆಯೇ ಆಗಿದೆ. ಆದರೆ ಈಗಾಗಲೆ ಇರುವ ಆನ್‌ಲೈನ್ ಶಿಕ್ಷಣ ಕೋರ್ಸ್‌ಗಳು ಯಾವುದೇ ನಿಯಮ ಮತ್ತು ನಿಬಂಧನೆಗಳನ್ನು ಪಾಲಿಸುತ್ತಿರಲಿಲ್ಲ. ಈಗ ವ್ಯವಸ್ಥಿತವಾಗಿ, ನ್ಯಾಕ್  ಮೂಲಕ ಎಲ್ಲ ನಿಯಮ ನಿಬಂಧನೆಗಳನ್ನು ಪಾಲಿಸುವುದರೊಂದಿಗೆ ಗುಣಮಟ್ಟವನ್ನು ಹೊಂದಿದ ಆನ್‌ಲೈನ್ ಶಿಕ್ಷಣಕ್ಕೆ ದಾರಿಮಾಡಿಕೊಡುತ್ತಿದ್ದೇವೆ.

ಪ್ರಶ್ನೆ: ನಿಮ್ಮ ಇಲಾಖೆಯು ತಾಂತ್ರಿಕ ಶಿಕ್ಷಣದಲ್ಲಿ ಡಿಪ್ಲೊಮಾ, ಇಂಜಿನಿಯರಿಂಗ್ ಇಂತಹ ಸಾಂಪ್ರದಾಯಿಕ ಪರಿಕಲ್ಪನೆಯನ್ನು ಮೀರಿ ಯೋಚನೆ ಮಾಡಬಲ್ಲುದೆ? ಇದರಿಂದ ಜನರು ವೃತ್ತಿಪರ ಶಿಕ್ಷಣಕ್ಕೆ ಬಂದಾಗ ಇತರ ಆಯ್ಕೆಗಳನ್ನು ಹೊಂದಬಹುದೇ?

ಉತ್ತರ: ಕುಶಲತೆ ಬಹಳ ಮುಖ್ಯ. ೮ನೇ ತರಗತಿಯಿಂದಲೇ ವೃತ್ತಿಪರತೆಯನ್ನು ಬೆಳೆಸುವ ದೃಷ್ಟಿಯಿಂದ ಕೆಲವು ಬದಲಾವಣೆಗಳನ್ನು ಶಿಕ್ಷಣಕ್ಷೇತ್ರದಲ್ಲಿ ತರುವ ಪ್ರಯತ್ನ ನಡೆಯುತ್ತಿದೆ. ಇಲ್ಲಿಯವರೆಗೆ ೮ನೇ ತರಗತಿ ಮತ್ತು ಎರಡು ವರ್ಷದ ಐಟಿಐ ತರಬೇತಿಗೆ ೧೦ನೇ ತರಗತಿಯ ದರ್ಜೆಯನ್ನು ನೀಡಲಿಲ್ಲ; ೧೦ನೇ ತರಗತಿ ಮತ್ತು ಎರಡು ವರ್ಷದ ಐಟಿಐ ತರಬೇತಿಗೆ ಪಿಯುಸಿ ದರ್ಜೆಯನ್ನು ನೀಡಲಿಲ್ಲ. ಅದಕ್ಕಾಗಿ ನಾವು ೮ನೇ ತರಗತಿಯ ನಂತರದ ಐಟಿಐ ತರಬೇತಿ ಮತ್ತು ೧೦ನೇ ತರಗತಿಯ ನಂತರದ ಐಟಿಐ ತರಬೇತಿಗೆ, ಕ್ರಮವಾಗಿ ೧೦ನೇ ತರಗತಿ ಮತ್ತು ಪಿಯುಸಿಯ ಸಮಾನ ದರ್ಜೆಯನ್ನು ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಿದ್ದೇವೆ. ಒಂದು ಭಾಷೆಯ ವಿಷಯ ಮತ್ತು ಆಯ್ಕೆಯ ವಿಷಯವನ್ನು ಸೇರಿಸಲಿದ್ದೇವೆ. ೧೦ನೇ ತರಗತಿ ಮತ್ತು ಪಿಯುಸಿ ದರ್ಜೆಗೆ ಏರುವ ಮೂಲಕ ವೃತ್ತಿಪರ ಶಿಕ್ಷಣ ತರಬೇತಿಗಳಿಗೆ ಹೆಚ್ಚಿನ ಆಕರ್ಷಣೆ ಬರಲಿದೆ.

ಕೌಶಲಾಭಿವೃದ್ಧಿಯು ಬೇರೆ ಸಚಿವಾಲಯದ ಅಧೀನದಲ್ಲಿದ್ದರೂ ನಾವು ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ. ಬಿ.ಎ., ಬಿ.ಎಸ್‌ಸಿ., ಬಿ.ಕಾಂ., ಎನ್ನುವ ಜನರಲ್ ಡಿಗ್ರಿಗಳ ಬದಲಾಗಿ ಬಿ.ಎ. ಪ್ರೊಫೆಶನಲ್,  ಬಿ.ಎಸ್‌ಸಿ. ಪ್ರೊಫೆಶನಲ್, ಬಿ.ಕಾಂ. ಪ್ರೊಫೆಶನಲ್ ಎನ್ನುವ ವೃತ್ತಿಪರ ಬದಲಾವಣೆಯನ್ನು ಮಾಡುವ ಯೋಜನೆಯಿದೆ. ೨೫೦ ಗಂಟೆಗಳ ಕೌಶಲ ತರಬೇತಿ, ಕಂಪ್ಯೂಟರ್ ತರಬೇತಿ, ವ್ಯಕ್ತಿತ್ವ ವಿಕಸನ ತರಬೇತಿ, ೫೦೦ಗಂಟೆಗಳ ಕೌಶಲ ಕೋರ್ಸ್‌ಗಳನ್ನು ಸೇರಿಸಲಿದ್ದೇವೆ. ಇದರಿಂದ ವಿದ್ಯಾರ್ಥಿಗಳ ಕೌಶಲಾಭಿವೃದ್ಧಿಯಾಗಿ ಉದ್ಯೋಗಕ್ಕೂ ನೆರವಾಗಲಿದೆ. ಉದಾಹರಣೆಗೆ, ಒಬ್ಬಾತನಿಗೆ ಛಾಯಾಚಿತ್ರಣದಲ್ಲಿ ಆಸಕ್ತಿಯಿದೆ ಎಂದಾದರೆ, ಆತನಿಗೆ ಅದೇ ಕ್ಷೇತ್ರದಲ್ಲಿ ಶಿಕ್ಷಣ ಸಿಗುವಂತೆ ಮಾಡಲಾಗುವುದು. ಆತ ಛಾಯಾಚಿತ್ರಣದಲ್ಲಿ ಬಿ.ಎ. ಪ್ರೊಫೆಶನಲ್ ಎನ್ನುವ ಅರ್ಹತೆಯನ್ನು ಪಡೆಯುತ್ತಾನೆ. ಹೀಗೆ ಎಲ್ಲರೂ ಉದ್ಯೋಗವನ್ನು ಪಡೆಯಬಹುದು. ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆಗಳು ಆಗುತ್ತಿವೆ.

ಪ್ರಶ್ನೆ: ಸದ್ಯಃ ನಿಮ್ಮ ಇಲಾಖೆಯಲ್ಲಿ ನೀವು ಎದುರಿಸಿದ ಅಥವಾ ಎದುರಿಸುತ್ತಿರುವ ಸವಾಲುಗಳು ಏನು

ಉತ್ತರ: ಪೋಷಕರ ಪೂರ್ವಗ್ರಹ ಯೋಚನೆಗಳೇ ಸ್ವಲ್ಪಮಟ್ಟಿನ ಸಮಸ್ಯೆ ಎನ್ನಬಹುದು. ಇಂಗ್ಲಿಷ್ ಮಾತ್ರವೇ ಸಮರ್ಥ ಮಾಧ್ಯಮ ಎನ್ನುವುದು ಪೋಷಕರ ಮನೋಭಾವ. ಆದರೆ ಭಾರತೀಯ ಭಾಷೆಗಳನ್ನು ಮುನ್ನೆಲೆಗೆ ತರುವುದು ನನ್ನ ಪ್ರಥಮ ಆದ್ಯತೆ. ಇದಕ್ಕಾಗಿ ಪೋ?ಕರ ಮನೋಭಾವವನ್ನು
ಬದಲಾಯಿಸುವುದಕ್ಕೋಸ್ಕರ ಹಲವು ಯೋಜನೆಗಳನ್ನು ಕೈಗೊಳ್ಳುತ್ತಿದ್ದೇವೆ.

ಪ್ರಶ್ನೆ: ನಿಮ್ಮ ಕಾರ್ಯಯೋಜನೆಗಳ ಅನುಷ್ಠಾನದ ವಿಷಯಕ್ಕೆ ಬಂದಾಗ ಪ್ರಧಾನಿ ಕಾರ್ಯಾಲಯ ಹಾಗೂ ಅಧಿಕಾರಿ ವರ್ಗಗಳ ಸ್ಪಂದನ ಹೇಗಿದೆ?

ಉತ್ತರ: ಸಂಪೂರ್ಣ ಸಹಕಾರವಿದೆ. ಶಿಕ್ಷಣದ ಬಗ್ಗೆ ನರೇಂದ್ರ ಮೋದಿ ಅವರಿಗಿರುವ ಒಲವು ಮಹತ್ತರವಾದದ್ದು. ಶಿಕ್ಷಣವನ್ನು ಅತ್ಯಂತ ಅರ್ಥಗರ್ಭಿತವಾಗಿಸಬೇಕು ಎನ್ನುವುದು ಅವರ ಮಹದಾಸೆಯಾಗಿದೆ. ಸ್ವತಂತ್ರ, ಕೈಗೆಟಕುವ, ಉತ್ತಮ ಗುಣಮಟ್ಟದ, ಉತ್ತಮ ಹೊಣೆಗಾರಿಕೆಯನ್ನು ಹೊಂದಿರುವ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದೇ ನಮ್ಮೆಲ್ಲರ ಗುರಿ. ಹೀಗಾಗಿ ಶಿಕ್ಷಣಕ್ಕಾಗಿ ಮೀಸಲಿರಿಸಿದ ಬಜೆಟ್‌ನಲ್ಲಿ ಏರಿಕೆ ಮಾಡಲಾಗಿದೆ. ನಮ್ಮ ಸಚಿವಾಲಯಕ್ಕೆ, ನಾವು ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಬಜೆಟ್ ರೂ. ೬೩ ಸಾವಿರ ಕೋಟಿ ಆಗಿತ್ತು. ಈಗ ಅದನ್ನು ರೂ. ೮೫ ಸಾವಿರ ಕೋಟಿಗೆ ಏರಿಸಲಾಗಿದೆ. ಬಜೆಟ್ ಅನ್ನು ಮೀರಿ ಈ ಕ್ಷೇತ್ರಕ್ಕೆ ಖಾಸಗೀ ವಲಯದಿಂದ ಹೂಡಿಕೆಯನ್ನು ತರುತ್ತಿದ್ದೇವೆ. ಇವೆಲ್ಲವನ್ನು ಲೆಕ್ಕ ಹಾಕಿದರೆ, ಈ ವ?ದ ಬಜೆಟ್ ೧ ಲಕ್ಷದ ೧೦ ಸಾವಿರ ಕೋಟಿ ರೂ. ಆಗಿದೆ. ಹೀಗೆ ೨೦೧೪ಕ್ಕೆ ಹೋಲಿಸಿದರೆ, ಒಟ್ಟಾರೆಯಾಗಿ ಬಜೆಟ್‌ನಲ್ಲಿ ಶೇ. ೭೦ರ? ಏರಿಕೆಯಾಗಿದೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ