ಸಂಜೀವ್ ಚತುರ್ವೇದಿ ಅವರನ್ನು ಸರ್ಕಾರಗಳು ಯಾವ ಅಧಿಕಾರದಲ್ಲಿಯೂ ಕೆಲವೇ ತಿಂಗಳಿಗಿಂತ ಹೆಚ್ಚುಕಾಲ ಇರಗೊಟ್ಟಿಲ್ಲ. ಆದರೆ ಅವರು ಮಾತ್ರ ಋಜುಮಾರ್ಗದಿಂದ ಪಕ್ಕಕ್ಕೆ ಸರಿದಿಲ್ಲ; ಒತ್ತಡ-ಬೆದರಿಕೆಗಳಿಗೆ ಸೊಪ್ಪುಹಾಕಿಯೂ ಇಲ್ಲ.
ಎಷ್ಟೇ ಪ್ರತಿಕೂಲ ಪರಿಸ್ಥಿತಿ ಇದ್ದರೂ ‘ಧೀರ’ರು ನ್ಯಾಯದ ಪಥದಿಂದ ಪಕ್ಕಕ್ಕೆ ಸರಿಯುವುದಿಲ್ಲ ಎಂಬುದೊಂದು ಪ್ರಸಿದ್ಧ ನೀತಿವಾಕ್ಯ. ಎಲ್ಲೆಡೆ ನಿಯಮೋಲ್ಲಂಘನೆಗಳೂ ಭ್ರಷ್ಟಾಚಾರವೂ ತುಂಬಿರುವ ಈಗಿನ ಸನ್ನಿವೇಶದಲ್ಲಿಯೂ ವಿರಳವಾಗಿ ಇಲ್ಲೊಬ್ಬರು ಅಲ್ಲೊಬ್ಬರು ನಿಷ್ಠಾವಂತ ಅಧಿಕಾರಿಗಳು ಇರುವುದು ಜನಸಾಮಾನ್ಯರು ರಾಜ್ಯಾಂಗವ್ಯವಸ್ಥೆಯಲ್ಲಿ ಇರಿಸಿರುವ ಭರವಸೆಯನ್ನು ಅಷ್ಟಿಷ್ಟಾದರೂ ಉಳಿಸಿದೆ. ಇಂತಹ ನಿರ್ಭೀತ ಋಜುವರ್ತನೆಯ ನಿದರ್ಶನಗಳು ಆಗೊಮ್ಮೆ ಈಗೊಮ್ಮೆ ಗೋಚರವಾಗುತ್ತವೆ.
ಅಂತರರಾಷ್ಟ್ರೀಯ ಸ್ತರದಲ್ಲಿ ಮಾನ್ಯತೆ ಪಡೆದಿರುವ ಪ್ರತಿಷ್ಠಿತ ರಾಮೊನ್ ಮ್ಯಾಗ್ಸೇಸೇ ಪ್ರಶಸ್ತಿಗೆ ಇತ್ತೀಚೆಗೆ ಭಾಜನರಾಗಿ ಭಾರತಕ್ಕೆ ಕೀರ್ತಿ ತಂದಿರುವವರು ಸಂಜೀವ್ ಚತುರ್ವೇದಿ ಎಂಬ ಐ.ಎಫ್.ಎಸ್. ಅಖಿಲ ಭಾರತ ಅರಣ್ಯಸೇವಾ ವಿಭಾಗಕ್ಕೆ ಸೇರಿದ ಉನ್ನತ ಅಧಿಕಾರಿ. ಉತ್ತರಪ್ರ್ರದೇಶ ಮೂಲದ ಅವರು ೨೦೦೨ರಲ್ಲಿ ವಿಶೇಷ ಪ್ರಶಿಕ್ಷಣ ಮುಗಿದೊಡನೆ ಹರ್ಯಾಣಾ ಸರ್ಕಾರದ ಸೇವೆಯಲ್ಲಿ ನಿಯುಕ್ತಿಗೊಂಡರು. ಸೇವೆಯಲ್ಲಿ ಸೇರಿದೊಡನೆ ಆ ರಾಜ್ಯದಲ್ಲಿ ವ್ಯಾಪಕವಾಗಿ ನಡೆದಿದ್ದ ಅನೈತಿಕ ವ್ಯವಹಾರಗಳ ಬೆನ್ನುಹತ್ತಿದರು. ಇದು ಸಹಜವಾಗಿ ಅಲ್ಲಿಯ ಮುಖ್ಯಮಂತ್ರಿ ಭೂಪೇಂದ್ರಸಿಂಗ್ ಹೂಡಾ ಮೊದಲಾದವರಿಗೆ ಇರುಸುಮುರುಸು ತಂದಿತು. ಒಂದು ರಕ್ಷಿತ ವನ್ಯಧಾಮದ ನಟ್ಟನಡುವೆ ನೀರು ಸರಬರಾಜಿನ ಕಾಲುವೆಯನ್ನು ಸರ್ಕಾರ ತೋಡಲು ಹೊರಟಿತ್ತು. ರಕ್ಷಿತ ಅರಣ್ಯಪ್ರದೇಶಗಳಲ್ಲಿ ಇಂತಹ ಯಾವುದೇ ಯೋಜನೆಗೆ ಅರಣ್ಯ ಇಲಾಖೆಯ ಪೂರ್ವಾನುಮತಿ ಕಡ್ಡಾಯವಿದೆ. ಆದರೆ ಈ ಯೋಜನೆಗೆ ಅಂತಹ ಅನುಮತಿಯನ್ನು ಪಡೆದುಕೊಂಡಿರಲಿಲ್ಲ. ಪರಿಸರಕ್ಕೆ ಹಾನಿಕರವಾದ ಈ ಯೋಜನೆಯ ಕಾಮಗಾರಿಯನ್ನು ನಿಲ್ಲಿಸುವಂತೆ ಸಂಜೀವ್ ಚತುರ್ವೇದಿ ಸಂಬಂಧಪಟ್ಟ ಸರ್ಕಾರೀ ಇಲಾಖೆಯನ್ನೂ ಕಂಟ್ರಾಕ್ಟುದಾರರನ್ನೂ ಆಗ್ರಹಿಸಿದರು. ಪರಿಣಾಮ ನಿರೀಕ್ಷಿಸಿದಂತೆಯೇ ಆಯಿತು: ಸಂಜೀವ್ ಚತುರ್ವೇದಿಯವರನ್ನು ಬೇರೆ ಖಾತೆಗೆ ವರ್ಗ ಮಾಡಿದರು! ಆದರೆ ಯೋಜನೆಯ ವಿರುದ್ಧ ಹೋರಾಟವನ್ನು ಸರ್ಕಾರೇತರ ಸಂಸ್ಥೆಯೊಂದು ಮುನ್ನಡೆಸಿತು. ಪ್ರಕರಣವು ನ್ಯಾಯಾಲಯದ ಕಟ್ಟೆಗೂ ಏರಿತು. ಆ ನಡವಳಿ ಅಜಾಗರೂಕತೆಯಿಂದಷ್ಟೆ ನಡೆದಿತ್ತೆಂದು ಸರ್ಕಾರವು ನ್ಯಾಯಾಲಯಕ್ಕೆ ಕುಂಟುಸಮಜಾಯಿಶಿ ಕೊಟ್ಟಿತು. ಪ್ರಕರಣವು ಸರ್ಮೋಚ್ಚ ನ್ಯಾಯಾಲಯಕ್ಕೂ ಹೋಯಿತು. ಸರ್ವೋಚ್ಚ ನ್ಯಾಯಾಲಯವು ಹರ್ಯಾಣಾ ರಾಜ್ಯಸರ್ಕಾರಕ್ಕೆ ಛೀಮಾರಿ ಹಾಕಿ ರೂ. ಒಂದು ಕೋಟಿ ದಂಡವನ್ನು ವಿಧಿಸಿತು.
ಇಂತಹ ಹಲವು ನಿಯಮೋಲ್ಲಂಘನ ಪ್ರಕರಣಗಳನ್ನು ಸಂಜೀವ್ ಚತುರ್ವೇದಿ ಬೆಳಕಿಗೆ ತಂದರು. ಅರಣ್ಯಖಾತೆಯ ಸಚಿವ ಕಿರಣ್ ಚೌಧರಿ ಸರ್ಕಾರದ ವೆಚ್ಚದಲ್ಲಿ ವಿದೇಶಗಳಿಂದ ದುಬಾರಿ ಗಿಡಗಳನ್ನು ತರಿಸಿ ತಮ್ಮ ಸ್ವಂತ ಸ್ಥಳದಲ್ಲಿ ನೆಡಿಸಿದ್ದುದಕ್ಕೂ ಸಂಜೀವ್ ಚತುರ್ವೇದಿ ಗಮನ ಸೆಳೆದರು. ಇನ್ನೊಂದೆಡೆ ಗಿಡಗಳನ್ನು ನೆಡದೆಯೇ ಅವುಗಳ ಸಲುವಾಗಿ ಖಜಾನೆಯಿಂದ ಹಣ ಪಡೆಯಲಾಗಿತ್ತು. ನಿಷೇಧಿತ ಅರಣ್ಯಪ್ರದೇಶಗಳಿಂದ ಪ್ರಭಾವೀ ರಾಜಕೀಯ ನಾಯಕರು ನಾಟಾ ದೋಚಿ ವ್ಯಾಪಾರ ನಡೆಸಿದ್ದುದನ್ನೂ ಬಯಲು ಮಾಡಿದರು.
ಇಂತಹ ನಿಃಸ್ಪೃಹ ಅಧಿಕಾರಿಯನ್ನು ರಾಜ್ಯಸರ್ಕಾರ ಸಹಿಸೀತೆ? ಐದು ವರ್ಷಗಳಲ್ಲಿ ಹನ್ನೆರಡು ವರ್ಗಗಳು ಆದವು. ಅಂತಿಮವಾಗಿ ರಾಜ್ಯಸರ್ಕಾರ ಸಂಜೀವ್ ಚತುರ್ವೇದಿಯವರನ್ನು ಸಸ್ಪೆಂಡ್ ಮಾಡಿತು. ಸಂಜೀವ್ ರಾಷ್ಟ್ರಪತಿಗಳ ಬಾಗಿಲನ್ನೇ ತಟ್ಟಿದಾಗ ಸಸ್ಪೆನ್ಷನ್ ರದ್ದಾಗಬೇಕಾಯಿತು. ಅವರ ವಿರುದ್ಧ ರಾಜ್ಯಸರ್ಕಾರ ರಾಷ್ಟ್ರಪತಿಗಳಿಗೆ ಬರೆದ ನಾಲ್ಕು ಆಕ್ಷೇಪಪತ್ರಗಳೂ ತಿರಸ್ಕೃತಗೊಂಡವು.
ಮಾಹಿತಿ ಹಕ್ಕು ಕಾಯಿದೆಯನ್ನೂ ಸಂಜೀವ್ ಚತುರ್ವೇದಿ ಬಳಸಿಕೊಳ್ಳಲು ಹಿಂದೆಗೆಯಲಿಲ್ಲ.
ಸಂಜೀವ್ ಚತುರ್ವೇದಿ ಅವರಿಗೆ ಸಲ್ಲಬೇಕಾಗಿದ್ದ ಪದೋನ್ನತಿಯನ್ನು ತಡೆಹಿಡಿದುದಲ್ಲದೆ ದೈನಂದಿನ ವ್ಯವಹಾರಗಳಲ್ಲಿಯೂ ಸರ್ಕಾರ ಕಿರುಕುಳ ಕೊಟ್ಟಿತು. ಅವರಿಗೆ ಕೊಲೆಯ ಬೆದರಿಕೆಗಳೂ ಬರುತ್ತಿದ್ದವು.
ರಾಜ್ಯಸರ್ಕಾರದ ಕಿರುಕುಳಗಳನ್ನು ಪ್ರಸ್ತಾವಿಸಿ ಸಂಜೀವ್ ಚತುರ್ವೇದಿ ಕೇಂದ್ರಸರ್ಕಾರಕ್ಕೆ ಮನವಿಪತ್ರ ಬರೆದರು. ಕೇಂದ್ರಸರ್ಕಾರ ೨೦೧೨ರಲ್ಲಿ ಅವರನ್ನು ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ ಸಂಸ್ಥೆಗೆ ಮುಖ್ಯ ವಿಜಿಲೆನ್ಸ್ ಅಧಿಕಾರಿಯಾಗಿ ಸ್ಥಳಾಂತರಿಸಿತು. ಅಲ್ಲಿಯೂ ಸಂಜೀವ್ ಚತುರ್ವೇದಿ ತಮ್ಮ ದಿಟ್ಟತನವನ್ನು ಮೆರೆಯದಿರಲಿಲ್ಲ. ಎರಡು ವರ್ಷಗಳಲ್ಲಿ ಸುಮಾರು ಇನ್ನೂರರಷ್ಟು ಭ್ರಷ್ಟಾಚಾರ ಪ್ರಸಂಗಗಳನ್ನು ಹೊರಹಾಕಿದರು. ಅವರನ್ನು ಆ ಅಧಿಕಾರಸ್ಥಾನದಿಂದ ತೆಗೆಯುವಂತೆ ಅಧಿಕಾರಿಗಳಿಂದಲೂ ರಾಜಕಾರಣಿಗಳಿಂದಲೂ ತೀವ್ರ ಒತ್ತಾಯ ಬಂದಿತು. ಕಳೆದ ಒಂದು ವರ್ಷದಿಂದ (ಆಗಸ್ಟ್ ೨೦೧೪) ಸಂಸ್ಥೆಯ ಉಪಕಾರ್ಯದರ್ಶಿಯಾಗಿ ಅವರು ಮುಂದುವರಿದಿದ್ದಾರೆ.
ಸಂಜೀವ್ ಚತುರ್ವೇದಿ ಅವರನ್ನು ಸರ್ಕಾರಗಳು ಯಾವ ಅಧಿಕಾರದಲ್ಲಿಯೂ ಕೆಲವೇ ತಿಂಗಳಿಗಿಂತ ಹೆಚ್ಚುಕಾಲ ಇರಗೊಟ್ಟಿಲ್ಲ. ಆದರೆ ಅವರು ಮಾತ್ರ ಋಜುಮಾರ್ಗದಿಂದ ಪಕ್ಕಕ್ಕೆ ಸರಿದಿಲ್ಲ; ಒತ್ತಡ-ಬೆದರಿಕೆಗಳಿಗೆ ಸೊಪ್ಪುಹಾಕಿಯೂ ಇಲ್ಲ.
ಬೆಂಕಿಯ ಕೆಂಡವು ಎಲ್ಲಿಟ್ಟರೂ ಉರಿಯುತ್ತಲೇ ಇರುತ್ತದೆ.
* * *
ಇನ್ನೋರ್ವ ಛಾತಿವಂತ
ಅವರು ಸಾಮಾನ್ಯ ಅಧಿಕಾರಿಯಲ್ಲ; ಇನ್ಸ್ಟೆಕ್ಟರ್-ಜನರಲ್ ಸ್ತರದ ಪೊಲೀಸ್ ಅಧಿಕಾರಿ. ಅಂತಹವರಿಗೆ ಸ್ವಯಂ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂಸಿಂಹರವರೇ ದೂರವಾಣಿ ಮಾಡಿ ಧಮಕಿ ಹಾಕಿದ್ದಾರೆ. ಆ ಐ.ಪಿ.ಎಸ್. ಅಧಿಕಾರಿ ಅಮಿತಾಭ ಠಾಕೂರರಾದರೋ ಜನಪರ ನಿಲವುಗಳಿಗಾಗಿ ಆದರಣೆ ಪಡೆದುಕೊಂಡಿರುವವರು. ಅಮಿತಾಭರ ಪತ್ನಿ ನೂತನ್ ಠಾಕೂರ್ ‘ಮಾಹಿತಿ ಹಕ್ಕು’ ಕಾಯಿದೆಯ ಅಡಿಯಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿ ಭ್ರಷ್ಟಾಚಾರ ಪ್ರಕರಣಗಳ ಬೆನ್ನುಹತ್ತಿರುವವರು. ಅಖಿಲೇಶ್ ಯಾದವ್ ಸರ್ಕಾರದಲ್ಲಿ ಗಣಿಗಾರಿಕೆ ಮಂತ್ರಿಯೂ ಮುಲಾಯಂರಿಗೆ ನಿಕಟವರ್ತಿಯೂ ಆದ ಗಾಯತ್ರೀ ಪ್ರಜಾಪತಿ ಅವರ ಕಾನೂನುಬಾಹಿರ ನಡವಳಿಗಳನ್ನು ನೂತನ್ ಅವರು ಬಯಲುಮಾಡುತ್ತ ಬಂದಿರುವುದು ಮುಲಾಯಂ ಆಕ್ರೋಶಕ್ಕೆ ಕಾರಣ. ಕಳೆದ ಮೂರು ವರ್ಷಗಳಲ್ಲಿಯೆ ಗಾಯತ್ರಿ ಅವರಿಗೆ ಮೂರುನಾಲ್ಕು ಬಡ್ತಿಗಳನ್ನು ನೀಡಲಾಗಿದ್ದುದು ಆಕಸ್ಮಿಕವಲ್ಲ. ಆರಂಭದ ಅವಧಿಯಲ್ಲಿ ಗಾಯತ್ರಿ ಅವರು ಒಂದಷ್ಟು ದಕ್ಷತೆಯನ್ನು ತೋರಿದ್ದ ಹಿನ್ನೆಲೆಯಲ್ಲಿ ೨೦೧೪ರಲ್ಲಿ ಅವರನ್ನು ಕ್ಯಾಬಿನೆಟ್ ದರ್ಜೆಯ ಸಚಿವರನ್ನಾಗಿ ನೇಮಕಗೊಳಿಸಲಾಗಿತ್ತು. ಅದಾದನಂತರ ಅವರ ಚಹರೆ ಪೂರ್ತಿ ಬದಲಾಯಿತು. ತಮ್ಮ ಅಧಿಕಾರದ ಪೂರ್ಣ ದುರ್ಲಾಭ ಪಡೆದುಕೊಳ್ಳತೊಡಗಿದರು. ಅವರ ಮತ್ತು ಅವರ ಪರಿವಾರದ ಗಳಿಕೆ ರೂ. ೯೫೦ ಕೋಟಿ ದಾಟಿದೆ. ವ್ಯಾಖ್ಯಾನದ ಅಗತ್ಯವಿಲ್ಲ; ಮಾಹಿತಿ ಹಕ್ಕು ಕಾಯಿದೆಯ ಅಡಿಯಲ್ಲಿ ಸಂಗ್ರಹಿಸಿದ ಪುರಾವೆಗಳ ಆಧಾರದ ಮೇಲೆ ನೂತನ್ ಠಾಕೂರ್ ರಾಜ್ಯ ಲೋಕಾಯುಕ್ತರಿಗೆ ದೂರು ಸಲ್ಲಿಸಿದರು. ಆದರೆ ಮುಲಾಯಂರಿಗೆ ನಿಕಟವರ್ತಿಯಾಗಿರುವ ಲೋಕಾಯುಕ್ತ ಎನ್.ಕೆ. ಮೆಹ್ರೋತ್ರ ಅವರು ಸಾಕ್ಷ್ಯಗಳನ್ನೆಲ್ಲ ಉದಾಸೀನ ಮಾಡಿ ‘ಗಾಯತ್ರಿ ಅವರಿಂದ ಯಾವುದೇ ಅಪರಾಧ ನಡೆದಿಲ್ಲ’ ಎಂದು ಘೋಷಿಸಿಬಿಟ್ಟರು. ಇದರಿಂದ ಉತ್ತೇಜಿತರಾಗಿ ಗಾಯತ್ರಿ ಪಡೆಯವರು ಅಮಿತಾಭ-ನೂತನ್ ದಂಪತಿಗಳಿಗೆ ಬಗೆಬಗೆಯ ಕಿರುಕುಳಗಳನ್ನು ಉಂಟುಮಾಡಿದರು. ಅಮಿತಾಭರ ಮೇಲೆ ಮಹಿಳಾ ಅತ್ಯಾಚಾರ ಇತ್ಯಾದಿ ಮಿಥ್ಯಾರೋಪಗಳನ್ನು ಹೊರಿಸಲಾಯಿತು; ಆದರೆ ಅದನ್ನು ಸಾಬೀತುಪಡಿಸುವುದರಲ್ಲಿ ವಿಫಲರಾದರು. ಕಳೆದ ಒಂದು ದಶಕದಲ್ಲಿ ಮುಲಾಯಂ ಪಡೆಗಳ ನ್ಯಾಯಬಾಹಿರ ವರ್ತನೆಗಳಿಗೆ ಅಮಿತಾಭ ಠಾಕೂರ್ ಸದಾ ಆತಂಕ ಒಡ್ಡುತ್ತ ಬಂದಿದ್ದಾರೆ. ಈ ಹಿಂದೆ ಮುಲಾಯಂ ಬಣದವರಿಂದ ಅಮಿತಾಭರ ಮೇಲೆ ಹಲ್ಲೆಗಳಾದದ್ದೂ ಇದೆ. ಇದಾವುದರಿಂದಲೂ ಧತಿಗೆಡದೆ ಅಮಿತಾಭ ಠಾಕೂರ್ ತಮ್ಮ ಸಮರವನ್ನು ಮುನ್ನಡೆಸಿದ್ದಾರೆ – ತಾವು ನೌಕರಿಯಿಂದ ಸಸ್ಪೆಂಡ್ ಆಗಿರುವುದನ್ನೂ ಲೆಕ್ಕಿಸದೆ.
ಈ ಪ್ರಕರಣದೊಡಗೂಡಿ ಉತ್ತರಪ್ರದೇಶ ಸರ್ಕಾರದ ಅಧಃಪಾತ, ಪೊಲೀಸ್ ಇಲಾಖೆಯೂ ಸೇರಿದಂತೆ ಉನ್ನತ ಅಧಿಕಾರಿವರ್ಗದ ಭ್ರಷ್ಟತೆ, ಕಾನೂನಿನ ಬಗೆಗೆ ಅಸಡ್ಡೆ, ಆಡಳಿತದಲ್ಲಿ ಹಾಡಹಗಲೇ ನಡೆಯುತ್ತಿರುವ ನಿಯಮೋಲ್ಲಂಘನೆ – ಇವೆಲ್ಲ ಬಯಲಾಗಿವೆ.
ಸರ್ಕಾರೀ ಅಧಿಕಾರಿಯಾಗಿದ್ದುಕೊಂಡೇ ಅಮಿತಾಭ ಠಾಕೂರ್ ಸರ್ಕಾರದ ವಿರುದ್ಧವೇ ದೂರನ್ನು ನೀಡಿರುವುದು ನಿಯಮಬದ್ಧವೇ ಎಂಬ ತಾಂತ್ರಿಕ ಅಂಶದ ಪರಾಮರ್ಶನೆಯೂ ನಡೆದಿದೆ. ಆದರೆ ಅಮಿತಾಭರ ಪರವಾಗಿ ವ್ಯಾಪಕ ಸಾರ್ವಜನಿಕ ಅಭಿಮತವಂತೂ ಹೊಮ್ಮಿದೆ.
ಆಡಳಿತದ ಭಾಗವಾಗಿರುವ ವ್ಯಕ್ತಿಯು ಸಮಾಜಹಿತದ ಕಾರ್ಯದಲ್ಲಿ ಆಸಕ್ತಿ ತಳೆಯುವುದು ಅಪರಾಧವೆ? – ಎಂಬ ಬಗೆಗೆ ಸೋಷಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ನಡೆದಿದೆ.
ಕೆಲ ಸಮಯದ ಹಿಂದೆ ದಿಟ್ಟತನಕ್ಕೂ ನಿಃಸ್ಪೃಹತೆಗೂ ಹೆಸರಾಗಿದ್ದ ಐ.ಎ.ಎಸ್. ಅಧಿಕಾರಿ ದುರ್ಗಾಶಕ್ತಿ ನಾಗಪಾಲ್ ಸರ್ಕಾರೀ ಯಂತ್ರದ ವಿರುದ್ಧ ಸೆಣಸಿದುದು ಇಡೀ ದೇಶದ ಗಮನ ಸೆಳೆದಿತ್ತು. (‘ಉತ್ಥಾನ’, ಅಕ್ಟೋಬರ್ ೨೦೧೩).
ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ವಿಷಾದನೀಯ. ಭ್ರಷ್ಟಾಚಾರವನ್ನು ನಿರೋಧಿಸಿದುದಕ್ಕಾಗಿ ಐ.ಎ.ಎಸ್ ಅಧಿಕಾರಿ ಡಾ|| ಅಶೋಕ್ ಖೇಂಕಾ ಕಳೆದ ಎರಡು ದಶಕಗಳಲ್ಲಿ ಐವತ್ತು ಬಾರಿ ಟ್ರಾನ್ಸ್ಫರ್ ಆಗಿದ್ದಾರೆ! ಅನೈತಿಕತೆಯನ್ನು ಸಹಿಸದಿರುವ ‘ಅಪರಾಧ’ಕ್ಕಾಗಿ ಹರ್ಯಾಣಾದ ಅಧಿಕಾರಿ ಚತುರ್ವೇದಿ ಈಗ ಕಂಟಕಗಳನ್ನು ಎದುರಿಸುತ್ತಿದ್ದಾರೆ.
ಇಂತಹ ನಿಷ್ಠ ಅಧಿಕಾರಿಗಳ ಪಟ್ಟಿಗೆ ಈಚಿನ ಸೇರ್ಪಡೆ ಉತ್ತರಪ್ರದೇಶದ ಪೊಲೀಸ್ ಅಧಿಕಾರಿ ಅಮಿತಾಭ ಠಾಕೂರ್.
ಇಂತಹವರ ಸಂತತಿ ಸಾವಿರವಾಗಲಿ.