ವ್ಯಾಪಾರಧರ್ಮ! ಹೌದು. ದ್ರೋಹದ ಲವಲೇಶವೂ ಇಲ್ಲದಿದ್ದಾಗ, ಪ್ರಾಮಾಣಿಕತೆಯ ಮೇರುಸ್ಥಿತಿ ಇದ್ದಾಗ ಮಾತ್ರ ವ್ಯಾಪಾರವನ್ನು ಧರ್ಮದೆತ್ತರಕ್ಕೆ ಒಯ್ಯಲು ಸಾಧ್ಯ. ವ್ಯಾಪಾರದಲ್ಲಿ ಧರ್ಮವಿದ್ದಾಗ ಅದು ಬರಿಯ ವ್ಯಾಪಾರ ಎಂದಷ್ಟೇ ಅನಿಸಿಕೊಳ್ಳದೆ ಸಮಾಜದ ಅಗತ್ಯವನ್ನು ಪೂರೈಸುವ ವ್ಯಾಪ್ತಿಯನ್ನು ಪಡೆದುಕೊಳ್ಳುತ್ತದೆ. ಹಾಗಾದಾಗ ಗಿರಾಕಿಗಳು ಸಮಾಜದೇವನ ಅವಿಭಾಜ್ಯ ಅಂಗವೆನಿಸಿಕೊಳ್ಳುತ್ತಾರೆ.
ಇಷ್ಟು ಎತ್ತರಕ್ಕೆ ತನ್ನ ವ್ಯಾಪಾರವನ್ನು ಒಯ್ಯಬಲ್ಲವ ಸ್ವತಃ ದೇವರೇ ಆಗುವ ಸಾಧ್ಯತೆಯೂ ಘಟಿಸುತ್ತದೆ. ಆತಿಥೇಯರಿಗೆ ಅತಿಥಿಯೇ ದೇವರು. ಅತಿಥಿಗೆ ಆತಿಥೇಯರೇ ದೇವರು, ಅವರು ವ್ಯಾಪಾರಸ್ಥಾನದಲ್ಲಿದ್ದ ವ್ಯಾಪಾರಿಗಳೇ ಆಗಿದ್ದರೂ.
೧
೯೯೬ ಡಿಸೆಂಬರ್ ೬ರ ಕಾರಸೇವೆಯನ್ನು ‘ಹೊಸದಿಗಂತ’ದಲ್ಲಿ ವರದಿ ಮಾಡಲೆಂದು ನಾಲ್ಕು ದಿನಗಳ ಮೊದಲೇ ಅಯೋಧ್ಯೆಗೆ ಹೋಗುವುದಾಯಿತು. ಅದಕ್ಕಾಗಿ ಮೊದಲೇ ಹೋಗಿದ್ದ ಶರತ್ಕುಮಾರರನ್ನು ಕೂಡಿಕೊಳ್ಳುವುದಾಯಿತು. ಗುಲಾಮೀ ಕಟ್ಟಡ ಬಿದ್ದ ಬಳಿಕ ಮತ್ತೂ ಎರಡು ದಿನಗಳ ಕಾಲ ಇದ್ದು ನಂತರ ಹೊರಡಬೇಕಿತ್ತು.
ಬಹುತೇಕ ಎಲ್ಲರೂ ವಾಪಸಾಗಿದ್ದರು. ಗುಲಾಮೀ ಕಟ್ಟಡ ನೆಲಸಮವಾಗುತ್ತಿದ್ದಂತೆಯೆ ಬೀದಿಬೀದಿಗಳಲ್ಲಿ ಉಚಿತವಾಗಿ ಆಹಾರವನ್ನು ಬಡಿಸುತ್ತಿದ್ದ ಅಯೋಧ್ಯಾವಾಸಿಗಳು, ಎರಡು-ಮೂರು ದಿನಗಳಲ್ಲಿ ಜನರು ಕಡಮೆಯಾದಂತೆ ಈ ವ್ಯವಸ್ಥೆಯನ್ನು ಸಮಾಪನಗೊಳಿಸಿದ್ದರು. ಪಕ್ಕದ ಹಳ್ಳಿಯ ವ್ಯಾಪಾರಿಗಳು ಇದ್ದ ಅಲ್ಪಸ್ವಲ್ಪ ಜನರಿಗೆ ಬೀದಿಬದಿಯಲ್ಲಿ ಹೊಟೇಲ್ ನಡೆಸುತ್ತಿದ್ದರು. ಇದೀಗ ಅವರೂ ಗಂಟುಮೂಟೆ ಕಟ್ಟುತ್ತಿರುವ ಸಂದರ್ಭ. ಎಲ್ಲರೂ ಅಯೋಧ್ಯೆ ಬಿಟ್ಟು ತೆರಳಲು ಪೊಲೀಸರು ತಾಕೀತು ಮಾಡುತ್ತಿದ್ದರು.
ಅಪರಾಹ್ನ ಎರಡು ಕಳೆದಿತ್ತು. ಏನೂ ತಿನ್ನದೆ ಹೊಟ್ಟೆ ತಾಳಹಾಕುತ್ತಿತ್ತು. ಗಂಟುಮೂಟೆ ಕಟ್ಟಿ ಊರಿಗೆ ಹೊರಡಲು ತಯಾರಾಗಿದ್ದ ವ್ಯಾಪಾರಿಯೊಬ್ಬರ ಬಳಿ ಆಹಾರಕ್ಕಾಗಿ ಯಾಚಿಸುವುದಾಯಿತು. ಹಸಿವಿನ ಬಾಧೆ ಚೆನ್ನಾಗಿ ಗೊತ್ತಿದ್ದವರಿರಬೇಕು. ಕೂಡಲೇ, ಕಟ್ಟಿದ್ದ ಗಂಟುಮೂಟೆಯನ್ನು ಬಿಚ್ಚಿದರು, ಒಳ್ಳೆಯ ಗಿರಾಕಿಗಳು ಬಂದರೆಂಬಂತೆ! ಅರ್ಧ-ಮುಕ್ಕಾಲು ತಾಸಿನೊಳಗೆ ಹೊಟ್ಟೆ ತುಂಬುವಷ್ಟು ರೊಟ್ಟಿ-ಪಲ್ಯವನ್ನು ಮಾಡಿಕೊಟ್ಟರು. ಅದಾದ ತಕ್ಷಣವೇ ಮತ್ತೆ ಗಂಟುಮೂಟೆ ಕಟ್ಟಿ ಹೊರಡಲು ಸಿದ್ಧರಾದರು.
ಕೈತೊಳೆದು ಎಷ್ಟಾಯಿತೆಂದು ಕೇಳಿದೆವು. ಆ ಸಂದರ್ಭದ ಹಿನ್ನೆಲೆಯಲ್ಲಿ ಅವರು ದುಪ್ಪಟ್ಟು ಬೆಲೆಯನ್ನು ಹೇಳುವುದು ಖಚಿತ ಎನ್ನುವುದು ಮನಸ್ಸಿನ ಒಂದು ಮೂಲೆಯಲ್ಲಿ ಖಾತ್ರಿಯಿತ್ತು. ಅವರ ಬಾಯಿಂದ ಎಷ್ಟು ಮೊತ್ತ ಬರಬಹುದು ಎಂದು ಲೆಕ್ಕಹಾಕುತ್ತ ಅದರ ನಿರೀಕ್ಷೆಯಲ್ಲೇ ಇರುವಾಗ ಅವರ ಬಾಯಿಯಿಂದ ಎರಡು ಪದಗಳು ಹೊರಬಂದವು: ‘ನಹೀ ಭೈಯ್ಯಾ’. ಮುಂದುವರಿದು ಹೇಳಿದ್ದಿಷ್ಟು: ‘ನಮ್ಮ ವ್ಯಾಪಾರ ಆಗಲೇ ಮುಗಿದಿದೆ. ವ್ಯಾಪಾರ ಮುಗಿಸಿ ಹೊರಡುವ ಹೊತ್ತಿಗೆ ನೀವು ಬಂದಿರಿ. ವ್ಯಾಪಾರ ಮಾಡುತ್ತಿದ್ದಾಗ ಬಂದಿದ್ದರೆ ನೀವು ಗಿರಾಕಿಗಳು. ಮುಕ್ತಾಯ ಮಾಡಿದ ನಂತರ ಬಂದ ನೀವು ನಮಗೆ ಅತಿಥಿಗಳು. ಈಗ ನಿಮ್ಮಿಂದ ಹಣ ತೆಗೆದುಕೊಂಡರೆ ರಾಮಲಲಾ ಮೆಚ್ಚಿಯಾನೇ?’
ಇದು ಅಯೋಧ್ಯೆ. ಅಷ್ಟೇ ಅಲ್ಲ, ಇದು ಭಾರತ. ಯಾರು ಗಿರಾಕಿಗಳು, ಯಾರು ಅತಿಥಿಗಳು ಎನ್ನುವುದನ್ನು ಒಬ್ಬ ಬೀದಿಬದಿಯ ವ್ಯಾಪಾರಿಯೂ ಕರಾರುವಾಕ್ಕಾಗಿ ತಿಳಿದಿರುವ, ತಿಳಿದಂತೆ ನಡೆಯುವ ಸಂಪನ್ನ ಚಿತ್ರಣ ಇಲ್ಲಿ ಕಾಣಲು ಸಾಧ್ಯ.
ಕೇಳಬಹುದು: ಎಲ್ಲರೂ ಹೀಗೇ ಇರುತ್ತಾರೆಯೇ?
ಹೀಗೆ ಇರುವವರೂ ಇರುತ್ತಾರೆ ಎಂದಲ್ಲವೆ ನೋಡಬೇಕಾದುದು. ಅಪೇಕ್ಷಿಸಬೇಕಾದುದೂ ಎಲ್ಲರೂ ಹೀಗೇ ಇರಬೇಕೆಂದೇ ಅಲ್ಲವೇ!
ಇದಕ್ಕೆ ವ್ಯತಿರಿಕ್ತವಾದ ಮುಖವೂ ಇದೆ ಎಂಬುದನ್ನು ಹೆಚ್ಚು ವಿವರಿಸಬೇಕಿಲ್ಲ. ‘ವ್ಯಾಪಾರಂ ದ್ರೋಹಚಿಂತನಮ್’ ಎಂಬ ಮಾತೇ ಇದೆಯಲ್ಲ! ಅಂಥವರನ್ನು ನೋಡಿಯೇ ಈ ಮಾತು ಹುಟ್ಟಿರಬೇಕು.
ವ್ಯಾಪಾರವನ್ನು ಜೀವಿಕೆಯ ಅನಿವಾರ್ಯ ಅಂಗವಾಗಿ ಮಾಡಿಕೊಂಡಾಗ ಮತ್ತು ಅದೇ ವೇಳೆ ಜೀವನವನ್ನು ಎತ್ತರದಲ್ಲಿಟ್ಟುಕೊಳ್ಳಬೇಕು ಎಂದು ಸಂಕಲ್ಪಿಸಿದಾಗ ಗಿರಾಕಿಗಳು ಬರಿಯ ಗಿರಾಕಿಗಳಾಗಿರದೆ ದೇವರೇ ಆಗುತ್ತಾರೆ.
ತಮ್ಮ ಜೀವಿಕೆಗಾಗಿ ದೇವರೊಂದಿಗೆ ವ್ಯಾಪಾರಧರ್ಮವನ್ನು ಅನಿವಾರ್ಯವಾಗಿ ನಡೆಸುವುದಾಗುತ್ತದೆ.
ವ್ಯಾಪಾರಧರ್ಮ! ಹೌದು. ದ್ರೋಹದ ಲವಲೇಶವೂ ಇಲ್ಲದಿದ್ದಾಗ, ಪ್ರಾಮಾಣಿಕತೆಯ ಮೇರುಸ್ಥಿತಿ ಇದ್ದಾಗ ಮಾತ್ರ ವ್ಯಾಪಾರವನ್ನು ಧರ್ಮದೆತ್ತರಕ್ಕೆ ಒಯ್ಯಲು ಸಾಧ್ಯ.
ವ್ಯಾಪಾರದಲ್ಲಿ ಧರ್ಮವಿದ್ದಾಗ ಅದು ಬರಿಯ ವ್ಯಾಪಾರ ಎಂದಷ್ಟೇ ಅನಿಸಿಕೊಳ್ಳದೆ ಸಮಾಜದ ಅಗತ್ಯವನ್ನು ಪೂರೈಸುವ ವ್ಯಾಪ್ತಿಯನ್ನು ಪಡೆದುಕೊಳ್ಳುತ್ತದೆ.
ಹಾಗಾದಾಗ ಗಿರಾಕಿಗಳು ಸಮಾಜದೇವನ ಅವಿಭಾಜ್ಯ ಅಂಗವೆನಿಸಿಕೊಳ್ಳುತ್ತಾರೆ.
ಇಷ್ಟು ಎತ್ತರಕ್ಕೆ ತನ್ನ ವ್ಯಾಪಾರವನ್ನು ಒಯ್ಯಬಲ್ಲವ ಸ್ವತಃ ದೇವರೇ ಆಗುವ ಸಾಧ್ಯತೆಯೂ ಘಟಿಸುತ್ತದೆ.
ಆತಿಥೇಯರಿಗೆ ಅತಿಥಿಯೇ ದೇವರು. ಅತಿಥಿಗೆ ಆತಿಥೇಯರೇ ದೇವರು, ಅವರು ವ್ಯಾಪಾರಸ್ಥಾನದಲ್ಲಿದ್ದ ವ್ಯಾಪಾರಿಗಳೇ ಆಗಿದ್ದರೂ.
ಬಹುಲಾಭದ ದೃಷ್ಟಿಯಿಂದ ಪ್ರಾರಂಭಿಸಿದ ತಮ್ಮ ಹೊಟೇಲಿಗೆ ‘ಆತಿಥ್ಯ’ ಎಂದು ಹೆಸರಿಡುವವರಿದ್ದಾರೆ. ಅಯೋಧ್ಯೆಯ ಬೀದಿಬದಿಯ ಹೊಟೇಲಿಗ ಇನಿತೂ ಹೆಸರಿನ ಅಪೇಕ್ಷೆಯಿಲ್ಲದೆ ನಿಜ ಆತಿಥ್ಯವನ್ನು ಗೈದುಬಿಟ್ಟಿದ್ದ.
ಅಂಥ ಆತಿಥೇಯ ಅನ್ನಬ್ರಹ್ಮನಿಗೆ ನಮೋನಮಃ.