ಆರ್ಥಿಕ ಕೇತ್ರದಲ್ಲಿ ಕಳೆದ ಒಂದು ದಶಕದಲ್ಲಿ ಭಾರತವು ವಿಶ್ವದಲ್ಲಿಯೆ ೧೦ನೇ ಸ್ಥಾನದಿಂದ ಈಗಾಗಲೆ ೫ನೇ ಸ್ಥಾನಕ್ಕೆ ತಲಪಿರುವುದೂ ಇದೀಗ ವಿಶ್ವದ ಮೂರನೇ ಸ್ಥಾನಕ್ಕೆ ಏರಲು ಪ್ರಯತ್ನಶೀಲವಾಗಿರುವುದೂ ಸುವಿದಿತ. ಸಾಮಾನ್ಯವಾಗಿ ನೂತನ ಉದ್ಯಮಸೃಷ್ಟಿ, ಸ್ಟಾರ್ಟಪ್ಗಳಿಂದ ಆಗಿರುವ ಪವಾಡ ಮೊದಲಾದ ಅಂಶಗಳನ್ನು ಮಾನದಂಡಗಳಾಗಿ ಇರಿಸಿಕೊಂಡು ಲೆಕ್ಕಹಾಕುವುದಾಗುತ್ತದೆ. ಇವೆಲ್ಲ ಗಾತ್ರ, ಸಂಖ್ಯೆ ಮೊದಲಾದವನ್ನು ಆಧರಿಸಿದ ಪರಿಗಣನೆಗಳು. ಆದರೆ ಇದರಷ್ಟೆ ಮಹತ್ತ್ವದ ಅಮೂರ್ತ ಅಂಶಗಳು ಹಲವಿವೆಯೆಂಬುದನ್ನೂ ನಾವು ಗಮನಿಸಬೇಕು. ಉದಾಹರಣೆಗೆ: ಮೂಲಸೌಕರ್ಯಗಳ ಅಭಿವೃದ್ಧಿಯಿಂದಾಗಿ ಸಾರ್ವಜನಿಕರ ಜೀವನವನ್ನು ಸುಗಮಗೊಳಿಸಿರುವುದು, ಪರಿಸರ-ರಕ್ಷಣೆಯಲ್ಲಿ ನಿಗದಿತ ಲಕ್ಷ್ಯಗಳ ಸಾಧನೆ, ವಿಶ್ವದ ಕೌಶಲದ ರಾಜಧಾನಿಯಾಗಿ ಭಾರತ ಹೊಮ್ಮುತ್ತಿರುವುದು, ಕಲೆಗಳಿಗೂ ಕ್ರೀಡೆಗಳಿಗೂ ಹೆಚ್ಚಿನ ಪ್ರೋತ್ಸಾಹ, ವಿದೇಶಗಳಿಂದ ನೂರಾರು ಪ್ರಾಚೀನ ಕಲಾಕೃತಿಗಳನ್ನು ಮರಳಿ ಪಡೆದಿರುವುದು… ಒಂದೇ ಎರಡೇ; ಇಂತಹ ಹೊರಗಣ್ಣಿಗೆ ಸ್ಫುಟಗೊಳ್ಳದ ಆದರೆ ನಿಜಕ್ಕೂ ಮಹತ್ತ್ವದವಾದ ಸಾಧನೆಗಳನ್ನು ನೋಡುವಾಗ ‘ವಿಕಸಿತ ಭಾರತ’ ಸಾಕಾರಗೊಳ್ಳುತ್ತಿದೆಯೆಂಬ ಭರವಸೆ ಎಂತಹವರಿಗೂ ಮೂಡದಿರದು.
‘ವಿಕಸಿತ ಭಾರತ’
Month : December-2024 Episode : Author : - ಸಂಪಾದಕ