ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಕವನಗಳು

ನೋವು-ನಲಿವಿನ ಪುಟಗಳು

poem1

ಅವಳವಳೆಂದು
ನರಳುತಿರಬೇಡ
ಕನಸಿಗವಳಿರೆ ಮಾತ್ರ ಭಾವ ಬಂದಿಳಿವುದೇ?

ಮನಸಿನೊಳಗಿಣುಕು,
ಸಪ್ತ ಲೋಕಕೂ ಮೀರಿ
ಸಾಹಿತ್ಯ ಸಂಗ್ರಹವಿದೆ
ಭಾವ ಖಂಡೋಲವಿದೆ

ಹುಟ್ಟು-ಸಾವಿನ ನಡುವ
ದಶಬಲದ ದಾಗೀನು,
ಮಿಡಿವ ಹೃದಯದಲಿದೆ
ಧರ್ಮ ಕರ್ಮದಲಿದೆ

ನೆಲ-ಮುಗಿಲ ಆಲಯವು
ಅಗಣಿತಗುಣದಂಬುಧಿಯ
ಅಲವಲಿಕೆಯಂಗಳಕೆ
ಸುರುವಿ ಸೆಳವಿಕ್ಕಿದೆ

ರವಿಯ ರಂಗಿನ ಬಾನು
ದಿನಕೆರಡು ಕ್ಷಣಮಾತ್ರ….
ಅಂಶುಧರ ಹೊಳಪಿನಲಿ,
ಕಣಕಣದ ಸ್ಪಂದನವಿದೆ

ಶರಧಿಯಾಳದೊಳಿಳಿದು
ಆಳವರಿಯದ ಅವಕೆ,
ಕೆರೆಯೊಡಲಿನಂಬಲಿಗೆ
ಹಸಿವು ನೀಗುವುದೇ?

ಸಂಗೀತ ಸುಧೆಯೊಳಗೆ
ಒಂದೊಂದು ಸ್ವರವಿಲ್ಲ
ಶ್ರುತಿ ಲಯ ಸಮರಸದ
ನವರಸ ಸಾರಥ್ಯವಿದೆ

ಅಕ್ಷೀಣ ಕ್ಷಾರಿಕೆಯು
ಭಾವಾಂಬುಧಿಯ ತನುವು
ಸ್ಪಂದಿಸುತ ಸ್ಫುರಿಸುವುದು
ಮನುಜ ಸ್ಮೃತಿಯೊಳಗೆ

ನೋವು ನಲಿವಿನ ಪುಟದಿ,
ಬದುಕು ಬರೆವುದು ಬಿಳಿಯ
ಹಾಳೆಗಳ ತುಂಬುವುದು
ಕಳೆದ ಘಳಿಗೆಯಲಿ!

—   ಅರುಣಾ ಭಾಗವತ

poem3

ಸ್ವಾರ್ಥ  ಪ್ರೀತಿ ಒಲ್ಲೆನು

 

ಮರದ ಮೇಲೆ ಕುಳಿತ ಗಿಳಿಯೆ

ಬಾರ ನನ್ನ ಗೂಡಿಗೆ |

ಆಯ್ದ ಸವಿಯ ಫಲವ ಕೊಡುವೆ

ನಾಗರೀಕ ನಾಡಿಗೆ ||೧||

 

ರುಚಿಗೆ ದಾಸನಾಗಲೇಕೆ

ನಮಗಿಟ್ಟುದನ್ನು ತಿನುವೆನು |

ಬಯಲ ಮರದ ಗೂಡು ಸಾಕು

ಚಳಿಗೆ ಮಳೆಗೆ ಹೆದರೆನು ||೨||

 

ಹೊಂಚುತಿರುವ ಗಿಡುಗ ಹದ್ದು

ತೆತ್ತಲೇಕೆ ಪ್ರಾಣವ |

ಅಚ್ಚೆಮಾತು ಕಲಿಸಿಕೊಡುವೆ

ಮೆಚ್ಚುವಂತೆ ಎಲ್ಲರೂ ||೩||

 

ಕನಕ ಬೇಡಿಯೊಳಗೆ ಒಡಲ

ಹೊರೆವ ದಾಸ್ಯವೊಲ್ಲೆನು |

ದಾತನಿತ್ತ ಮಾತೆ ಸಾಕು

ಸ್ವಾರ್ಥ ಪ್ರೀತಿಯೊಲ್ಲೆನು ||೪||

 

ನಕ್ಕು  ಹಗುರಾಗು

 

ಚಿಕ್ಕದಿಹುದೀ ಬಾಳು ನಕ್ಕು ಹಗುರಾಗು

ದುಃಖಿಸುತಲೇ ನೂಕಿಬಿಡಲು ಮತ್ತೆ ಮರಳುವುದೇ

 

ಗಗನ ಚುಂಬಿಯನೊತ್ತಿ ಮುರುಕು ಜೋಪಡಿ ಇಹವು

ಹಿಮ ಕವಚ ಗರ್ಭದಲಿ ಕುದಿವ ಜಲವು

ಮರಳುಗಾಡಲಿ ಚಿಲುಮೆ ಗಿರಿಯ ಕೆಳಗೆ ಪ್ರಪಾತ

ಜ್ಯೋತಿಯಡಿಯಲಿ ತಮವು ಮುಳ್ಳಿನೆಡೆ ಸುಮವು

 

ವಿಷವುಳಿಸೆ ಪ್ರಾಣವನು ಮಧು ತೆಗೆದು ಜೀವವನು

ವೈಪರೀತ್ಯದ ಬದುಕು ಹೆಣೆದುಕೊಂಡಿಹವು

ಧಗಧಗನೆ ದಿನಕರನ ಕುದಿವ ಕಿರಣವ ಪಡೆದು

ತೆಗೆದು ಬೆಂಕಿಯ ತಣಿಸಿ ಮುದವೀವ ಚಂದ್ರನೊಲು

—-  ರತ್ನಾ ಮೂರ್ತಿ

 

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ