ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಕವನಗಳು

ನದಿಯ ಆಲಾಪ   Nadiya alaapa

ಒಂದೇ ನದಿಯಲ್ಲಿ

ಎಲ್ಲರೂ

ಮುಳುಗಿ ಏಳುತ್ತಾರೆ,

ಆ ಮೇಲೆ

ಮಡಿ ಮಡಿಯೆಂದು

ದೂರ ಸರಿಯುತ್ತಾರೆ!

 

ಬೇಸಿಗೆಯಲ್ಲಿ ಒಣಗಿ

ಬೆತ್ತಲಾಯಿತು ನದಿ;

ನಾನೇ ಮೊಗೆದು

ಬರಿದಾಗಿಸಿದ್ದು ಎಂದು

ಬೀಗಿತು ಬಲೆ!

 

ಸಾಗರವನ್ನು ಸೇರಬೇಕೆಂಬುದು

ನದಿಯ ಕಾತುರ;

ನೀರಿನಲ್ಲಿ ನಿಂತು

ಪರಲೋಕಕ್ಕೆ

ತರ್ಪಣ ಮುಟ್ಟಿಸಲು

ಮನುಷ್ಯನ ಆತುರ!

 

ನದಿ

ನಾಡಿನ ಪ್ರವಾದಿ,

ಸಾಗರ

ಅದರ ಸಮಾಧಿ!

ಜೀವ ಜಲದ

ನದಿಯೊಳಗೂ

ಜೀವಗಳನ್ನು

ಚಪ್ಪರಿಸುವ

ಸುಳಿ ನಾಲಗೆಯೂ

ಇದೆ!

ಹರಿಗೋಲ ಹುಟ್ಟಲ್ಲಿ

ನದಿಯ ಮೈ ನೇವರಿಸಿದ

ತೃಪ್ತಿ ನಾವಿಕನಿಗೆ,

ಮೈ ಮೇಲೆ ಮಗು

ನಲಿದಾಡಿದ ಪುಳಕ

ಹೊತ್ತು ಸಾಗಿದ ನದಿಗೆ!

ಬಳುಕಿ ಓಡುವ

ಬೆಡಗಿನ ನದಿಯ

ಕಂಡ ಮುಗಿಲುಗಳು

ಮಿಂಚಿನ ಕಣ್‌ಹೊಡೆದವು,

ಗುಡುಗಿ ಮಳೆಯಾಗಿ

ಬಿದ್ದು ಕೂಡಿಕೊಂಡವು!

 

ನದಿ; ನಾಡಿನ ನಿಧಿ

ವಾರಿಧಿ; ಜಗದ ಶ್ರೀನಿಧಿ!

ನೀರು

ಸಿಹಿಯಾಗಿದ್ದರೆ

ಸಾಗರದ ಮೇಲೂ

ಹೊತ್ತು ಸಾಗುತ್ತಾರೆ!

 

೧೦

ಮಂಜು

ನದಿಯನ್ನು ಆವರಿಸಿ

ಮುದ್ದಿಸಿತು

ಮೋಡಗಳನ್ನು

ನಾಚಿಸುವಂತೆ;

ಆದರೇನು

ಒಂದು ಹನಿಯ

ಲಾಭವೂ ಇಲ್ಲ

ನದಿಗೆ!

೧೧

ಆಕಾಶದ ಹಾರಾಟ

ಸಾಕಾಯಿತು ಮುಗಿಲಿಗೆ,

ನೆಲದ ಓಡಾಟ

ಸಂಸಾರವಾಯಿತು ನದಿಗೆ,

ಅಲೆಗಳ ಅಲೆದಾಟ

ಕಗ್ಗಂಟಾಯಿತು ಕಡಲಿಗೆ!

 

೧೨

ಒಂದೇ ದಿನ

ಸುರಿದರು ಮಳೆ

ಅದೆಷ್ಟು ದೂರ

ಹರಿಯುತ್ತದೆ ಹೊಳೆ!

ಒಂದೇ ದಿನ

ಎದುರಾದರು ಪ್ರೇಮಿ

ಬಾಳಿನುದ್ದ

ಅನುರಾಗದ ಬೆಳೆ!

 

ಜರಗನಹಳ್ಳಿ ಶಿವಶಂಕರ್

 

ತಾಯಿThaayi-001

ಉತ್ಸಾಹದಿಂದ ಉಕ್ಕುವ ಹಾಗಿದೆ ಹಾಲು

ಒಲೆಯ ಮೇಲೆ ಕುದಿಯುತ್ತ ಕುದಿಯುತ್ತ

ಚಿಮುಕಿಸುತ್ತಿದ್ದರೂ ತಣ್ಣೀರು

ಕೆಚ್ಚಿಲಿನಿಂದ ಈ ಹಾಲು ಹರಿದು ಬರುವಾಗಲೂ

ಹೀಗೇ ಉಕ್ಕುತ್ತಿತ್ತು

ತುಂಬಿಕೊಳ್ಳುತ್ತಿದ್ದೇನೆ ತಾನೇ

(ತಂಬಿಗೆಯನ್ನಲ್ಲ)

ಕರುವಿನ ಹೊಟ್ಟೆಯನ್ನು ಎಂಬಂತೆ

 

ಈಗ ಒಲೆಯಿಂದ ಇಳಿಸಿದ ಮೇಲೂ ಮತ್ತೆ

ನಿಧಾನವಾಗಿ ಆರಿ

ಮೈಮನಸ್ಸುಗಳಲ್ಲಿ ನೀರಿನ ಬಣ್ಣ ಮತ್ತು ಗುಣ ಇಡದೆ

ನಾವು ಹುಳಿ ಹಿಂಡಿ ಮೊಸರಾಗು ಎಂದಾಗಲೂ

ತಣ್ಣಗೆ ಎನ್ನುವುದು ತುಂಬಿ ತುಳುಕಿ

ಹಸುವಿನ ಪ್ರೀತಿ

ಕೆಚ್ಚಲಿನಿಂದ ಇಳಿದ ಹಾಗೇ

ಮೊಸರಾಗಿ ಬಂತಲ್ಲ ಎನುವಂತೆ

 

ಮರುದಿನ ಗಟ್ಟಿಮೊಸರಿನ ಜೊತೆ

ಇಡ್ಲಿ ಮತ್ತು ಹಸಿಮೆಣಸಿನ ಚಟ್ನಿ ಬೆರೆಸಿ

ಇಡುವಾಗ ಕೈ ಎತ್ತಿ ಪ್ರತಿ ತುತ್ತು

ಹಸು ಇಲ್ಲ ಕಣ್ಣಲ್ಲಿ

ಇದಿರಿನ ಹೊಗೆ ಹಿಡಿದ ಗೋಡೆಯಲ್ಲಿ

ನನ್ನ ತಾಯಿ

ಮೊಸರನ್ನು ಮೀರಿ.

 

 ಡಾ. ನಾ. ಮೊಗಸಾಲೆ

Comments are closed.

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ