ಯಸ್ಯ ವಾಙ್ಮನಸೀ ಶುದ್ಧೇ ಸಮ್ಯಗ್ಗುಪ್ತೇ ಚ ಸರ್ವದಾ |
ಸ ವೈ ಸರ್ವಮವಾಪ್ನೋತಿ ವೇದಾಂತೋಪಗತಂ ಫಲಮ್ ||
– ಮನುಸ್ಮೃತಿ
“ಯಾರ ಮಾತೂ ಮನಸ್ಸೂ ಪರಿಶುದ್ಧವಾಗಿವೆಯೋ ಮತ್ತು ಸಂಪೂರ್ಣ ನಿಯಂತ್ರಣದಲ್ಲಿವೆಯೋ ಅಂಥವನು ವೇದಾಂತಶಾಸ್ತ್ರದಲ್ಲಿ ನಿರೂಪಿತವಾಗಿರುವ ಎಲ್ಲ ಫಲವನ್ನೂ ಪಡೆಯುತ್ತಾನೆ.”
ಯಾವುದೊ ಕಾರ್ಯದಿಂದ ಕ್ಲೇಶದ ಅನುಭವ ಉಂಟಾಗುವುದು ಆ ಕಾರ್ಯದ ಹಿಂದಿರುವ ಮನಸ್ಸು ಶಬಲಿತವಾಗಿದ್ದಾಗ.
ಗುರು ಗೋವಿಂದಸಿಂಹರ ಮನಸ್ಸು ವಿರಕ್ತಿಗೊಳಗಾಗಿತ್ತು. ಮಕ್ಕಳೂ ಸೇರಿದಂತೆ ತನ್ನವರೆಲ್ಲರನ್ನೂ ಕಳೆದುಕೊಂಡಿದ್ದರು. ಇನ್ನೂ ಬದುಕಿರುವುದರಲ್ಲಿ ಅರ್ಥವಿಲ್ಲವೆನಿಸತೊಡಗಿತ್ತು. ತಮ್ಮ ಉಯಿಲನ್ನು ಬರೆದರು. ಅದರಲ್ಲಿ ಒಕ್ಕಣಿಸಿದರು: “ನನ್ನವರೆಲ್ಲರ ಬಲಿದಾನವಾಯಿತು. ನನ್ನ ಅಪೇಕ್ಷೆಯೆಂದರೆ ನನ್ನ ಮರಣಾನಂತರ ನನಗೆ ಯಾವುದೇ ಸ್ಮಾರಕವನ್ನು ಮಾಡಬಾರದೆಂಬುದು. ಬಲಿದಾನಕ್ಕೆ ಪ್ರತಿಫಲ ಇರಬಾರದು. ಯಾರಾದರೂ ಶಿಷ್ಯರು ಉತ್ಸಾಹ ತಡೆಯಲಾಗದೆ ಸ್ಮಾರಕ ನಿರ್ಮಿಸಿದರೆ ಅವರ ವಂಶ ನಿರ್ವಂಶವಾಗಲಿ ಎಂದು ಶಪಿಸುತ್ತಿದ್ದೇನೆ.”
ಗೋವಿಂದಸಿಂಹರ ಒಬ್ಬ ಪ್ರಮುಖ ಶಿಷ್ಯ ರಣಜಿತ್ಸಿಂಹ. ಅವನು ಯೋಚಿಸಿದ – ‘ಇಂತಹ ದೈವಸಮಾನ ಗುರುಗಳಿಗೆ ಸ್ಮಾರಕ ನಿರ್ಮಿಸದಿರಲು ಆಗುತ್ತದೆಯೆ? ನಾನು ಮಾಡಿಯೇ ಮಾಡುತ್ತೇನೆ. ಶಾಪದಂತೆ ನನ್ನ ವಂಶ ನಿರ್ವಂಶವಾದರೆ ಆಗಲಿ.” ಹಾಗೆಯೇ ನಡೆಯಿತು. ಲಾಹೋರಿನಲ್ಲಿ ಭವ್ಯ ಸಮಾಧಿಸ್ಮಾರಕ ನಿರ್ಮಿತವಾಯಿತು.
ನಿರ್ಣಯಿಸಲಾಗದ ಪ್ರಶ್ನೆಯೆಂದರೆ – ಗುರುಗಳ ನಿರ್ಮಮತೆ ದೊಡ್ಡದೆ, ಶಿಷ್ಯನ ಸರ್ವತ್ಯಾಗ ದೊಡ್ಡದೆ? – ಈ ಎರಡರಲ್ಲಿ ಯಾವುದು ಹೆಚ್ಚು?