ತಂದೆ-ತಾಯಿಯರೇ ಶಿವ-ಪಾರ್ವತಿಯರೆಂದು ಗೌರವಿಸುತ್ತಿದ್ದ ಸುಸಂಸ್ಕೃತ ಭಾರತದಲ್ಲಿ ಇಂದು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಒಂದು ವಿಪರ್ಯಾಸ.
ಇಂದು ಕಾರಣಾಂತರಗಳಿಂದ ಮಕ್ಕಳಿಂದ ದೂರವಾದ ತಂದೆ-ತಾಯಿಯರನ್ನು ನೋಡಿಕೊಳ್ಳುವ ಹೊಸಹೊಸ ವೃದ್ಧಾಶ್ರಮಗಳು ಪ್ರತಿ ಊರಿನಲ್ಲಿ ಎಂಬಂತೆ ಹುಟ್ಟಿಕೊಳ್ಳುತ್ತಿವೆ. ಇದರಲ್ಲಿ ಮಾನವೀಯ ನೆಲೆಯಲ್ಲಿ ಹುಟ್ಟಿಕೊಳ್ಳುವ ವೃದ್ಧಾಶ್ರಮಗಳು ಅತ್ಯಂತ ವಿರಳ. ಹೆಚ್ಚಿನ ವೃದ್ಧಾಶ್ರಮಗಳು ವ್ಯಾಪಾರೀ ನೆಲೆಯಲ್ಲಿಯೇ ವ್ಯವಹಾರ ನಡೆಸುವಂತಹವು. ಈ ವೃದ್ಧಾಶ್ರಮಗಳನ್ನು ಯಾವ ದೃಷ್ಟಿಯಿಂದ ನೋಡಿದರೂ ಅವು ಸಮಾಜದ ನ್ಯೂನತೆಯ ಸೂಚಕಗಳೇ ವಿನಾ ಗರಿಮೆಯಲ್ಲ. ಹೊರನೋಟಕ್ಕೆ ಸೇವೆ ಎಂಬುದಾಗಿ ಕಂಡುಬರುವ ವೃದ್ಧಾಶ್ರಮ, ವಿಧವಾಶ್ರಮ, ಬಾಲಿಕಾಶ್ರಮ, ಅಬಲಾಶ್ರಮ ಇವೆಲ್ಲವೂ ಆರೋಗ್ಯವಂತ ಸಮಾಜದ ಲಕ್ಷಣಗಳಲ್ಲ. ಯಾಕೆಂದರೆ ವದ್ಧ ತಂದೆ-ತಾಯಿಯರನ್ನು, ವಿಧವೆಯನ್ನು, ಅಬಲೆಯನ್ನು, ಅನಾಥಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಆಯಾಯ ಕುಟುಂಬದ್ದು. ಕುಟುಂಬ ತನ್ನ ಜವಾಬ್ದಾರಿಯನ್ನು ಮರೆತಾಗ ಇಂತಹ ಏರ್ಪಾಡುಗಳು ಬೆಳೆಯುತ್ತವೆ.
ದಿನದಿಂದ ದಿನಕ್ಕೆ ಮನುಷ್ಯನು ಸಂಕುಚಿತನಾಗುತ್ತಿದ್ದಾನೆ. ಕೂಡುಕುಟುಂಬದಿಂದ ಹೊರಬಂದು ಕೇವಲ ತಾನು, ತನ್ನ ಹೆಂಡತಿ ಎಂಬ ತನ್ನದೇ ಆದ ಗೂಡನ್ನು ಕಟ್ಟಲು ಬಯಸುತ್ತಾನೆ. ಯಾರಿಗೂ ತಂದೆ-ತಾಯಿ, ಅತ್ತೆ-ಮಾವ, ಅಜ್ಜ-ಅಜ್ಜಿ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮ, ನಾದಿನಿ-ಭಾವ, ಅಣ್ಣ-ತಮ್ಮ ಯಾರ ಸಂಬಂಧವೂ ಬೇಕಾಗಿಲ್ಲ. ಕೂಡುಕುಟುಂಬ ಇಂದು ಛಿದ್ರವಾಗುತ್ತಿದೆ. ಕುಟುಂಬದ ರೋಗಿ, ಅಶಕ್ತ, ಅಸಹಾಯಕ, ಅಂಗವಿಕಲ ವ್ಯಕ್ತಿಗಳ ಜವಾಬ್ದಾರಿಯನ್ನು ಹೊರಲು ಯಾರೂ ತಯಾರಿಲ್ಲ. ಇದರ ಪರಿಣಾಮವಾಗಿಯೆ ವೃದ್ಧಾಶ್ರಮ, ವಿಧವಾಶ್ರಮಗಳು ಅನಿವಾರ್ಯವಾಗಿ ತಲೆಯೆತ್ತಿ ನಿಲ್ಲುತ್ತಿವೆ.
ಸಂಬಂಧ ಶೈಥಿಲ್ಯ
‘ನಾವಿಬ್ಬರು, ನಮಗೊಬ್ಬನೇ’ ಎಂಬ ಘೋಷಣೆ ಜನಸಂಖ್ಯಾ ನಿಯಂತ್ರಣಕ್ಕೇನೋ ಸರಿಹೊಂದುತ್ತದೆ. ಆದರೆ, ಇದು ಕೌಟುಂಬಿಕ ಜೀವನವನ್ನು ದುರ್ಬಲಗೊಳಿಸುತ್ತದೆ. ಕೂಡುಕುಟುಂಬದಲ್ಲಿಯೂ ಕೆಲವೊಂದು ನ್ಯೂನತೆಗಳಿರಬಹುದು. ಆದರೆ ಕೂಡುಕುಟುಂಬದಲ್ಲಿ ಕಾಣುವ ಭದ್ರತೆ, ಸಾಮೂಹಿಕ ಜೀವನ, ಪ್ರೀತಿ, ನೆಮ್ಮದಿ, ಪರಸ್ಪರ ಸಹಕಾರ, ಕಾಳಜಿ ಸಣ್ಣ ಕುಟುಂಬದಲ್ಲಿ ಕಂಡುಬರುವುದಿಲ್ಲ. ನಾವು ನಮ್ಮ ಒಬ್ಬನೇ ಮಗನನ್ನು ಎಂತಹ ಸೌಲಭ್ಯ, ಸೌಕರ್ಯ ಕೊಟ್ಟು ಪ್ರೀತಿಯಿಂದ ಬೆಳೆಸಿದರೂ ನಾಳೆ ಆತನಿಗೆ ಜೀವನದಲ್ಲಿ ಯಾವುದೊ ಸಮಸ್ಯೆ ಬಂದಾಗ ಅದನ್ನು ಎದುರಿಸುವ ಸಾಮರ್ಥ್ಯ ಆತನಲ್ಲಿ ಕ್ಷೀಣವಾಗಿರುತ್ತದೆ. ಚಿಕ್ಕಂದಿನಲ್ಲಿ ತನ್ನ ಭಾವನೆಗಳನ್ನು ಅಜ್ಜ-ಅಜ್ಜಿಯರಲ್ಲಿ, ಅಣ್ಣ-ತಂಗಿಯರಲ್ಲಿ ಹಂಚಿಕೊಳ್ಳಲು ಅವಕಾಶ ಇಲ್ಲದಿದ್ದಾಗ ಅತ ಸ್ವಾರ್ಥಿಯಾಗಿ ಬೆಳೆಯುವ ಸಾಧ್ಯತೆ ಇದೆ. ಸಾಮೂಹಿಕ ಜೀವನದ, ಸಹಕಾರಜೀವನದ ಸಂಸ್ಕಾರವು ಬಾಲ್ಯದಲ್ಲಿ ಸಿಗದಿದ್ದರೆ, ಆತ ಮುಂದೆ ಒಂಟಿಯಾಗಿಯೇ ಬದುಕಲು ಇಚ್ಛಿಸುತ್ತಾನೆ. ಆಗ ಸಮಾಜದ ಸಮಸ್ಯೆಗೆ ಸ್ಪಂದಿಸಬೇಕೆಂಬುದಾಗಿ ಆತನಿಗೆ ಅನಿಸುವುದಿಲ್ಲ. ಒಂಟಿಬದುಕು ಜೀವನವನ್ನು ಹೇಗೋ ಎಳೆದುಕೊಂಡು ಹೋಗಬಹುದೇ ವಿನಾ ಅದರಿಂದ ಉತ್ಸಾಹ, ಉಲ್ಲಾಸದಿಂದ ಬದುಕಲು ಸಾಧ್ಯವಿಲ್ಲ.
ವಿದ್ಯೆ ವಿನಯಕ್ಕೆ ಹೇತುವಾಗಬೇಕಾಗಿತ್ತು. ಆದರೆ ವಿದ್ಯೆಯೇ ಇವತ್ತು ಅಹಂಕಾರಕ್ಕೆ ದಾರಿಯಾಗಿದೆ. ನಮ್ಮತಂದೆ-ತಾಯಿ ನಮ್ಮಷ್ಟು ಕಲಿತಿಲ್ಲ, ನಮ್ಮಷ್ಟು ಗಳಿಸಿಲ್ಲ ಎಂಬ ಅಹಂಕಾರದಿಂದಲೇ ಎಷ್ಟೋ ಮಂದಿ ತಮ್ಮ ತಂದೆ-ತಾಯಿಯನ್ನು ನಿಕೃಷ್ಟವಾಗಿ ಕಾಣುತ್ತಾರೆ. ನಮ್ಮ ಹೆತ್ತವರು ನಮ್ಮಷ್ಟ್ಟು ಕಲಿಯದೆ ಇರಬಹುದು; ನಮ್ಮಷ್ಟು ಗಳಿಸದೆ ಇರಬಹುದು; ಆದರೆ ಹೆತ್ತ ಮಕ್ಕಳನ್ನು ಪ್ರೀತಿಸಿ, ಅವರ ಕಷ್ಟಕ್ಕೆ ಸ್ಪಂದಿಸುವ ಹೃದಯಶ್ರೀಮಂತಿಕೆ ಅವರಲ್ಲಿರುತ್ತದೆ. ಆದರೆ ವಿದ್ಯಾವಂತರೆನಿಸಿದ ನಾವು ಆರ್ಥಿಕವಾಗಿ ಶ್ರೀಮಂತರಾದರೂ, ಹೃದಯದಿಂದ ಬಡವರಾಗಿದ್ದೇವೆ. ಹತ್ತು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುವ ವಿಶಾಲ ಮನೋಭಾವನೆ ನಮ್ಮ ಹೆತ್ತವರಿಗಿದ್ದರೆ, ನಮ್ಮ ಹೆತ್ತವರನ್ನು ಪ್ರೀತಿಯಿಂದ ಆದರಿಸುವ ಹೃದಯವಂತಿಕೆಯೂ ನಮ್ಮಲ್ಲಿಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿ.
ಓರ್ವ ಸಂಶೋಧನೆಗೆಂದು ಅಮೆರಿಕಕ್ಕೆ ಹೋದ. ಅಲ್ಲಿಯೇ ನಾಲ್ಕು ವರ್ಷ ಇದ್ದ. ಅವನ ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಮಗನ ವಿದೇಶದ ಶಿಕ್ಷಣಕ್ಕಾಗಿ ಇದ್ದ ಒಂದು ಹೊಲವನ್ನು ಮಾರುವುದರೊಂದಿಗೆ ಸಾಕಷ್ಟು ಸಾಲವನ್ನೂ ಮಾಡಿಕೊಂಡಿದ್ದರು. ಐದು ವರ್ಷಗಳನಂತರ ಮೊದಲಬಾರಿಗೆ ಆತ ಭಾರತಕ್ಕೆ ಬಂದ. ಆತನ ಒಂದಿಷ್ಟು ಸ್ನೇಹಿತರು ಆತನನ್ನು ಸ್ವಾಗತಿಸಲು ವಿಮಾನನಿಲ್ದಾಣಕ್ಕೆ ಹೋದರು. ಅಲ್ಲಿ ಒಂದೆಡೆ ಆತನ ತಂದೆ ನಿಂತಿದ್ದರು. ವಯಸ್ಸಾದ ದೇಹ, ಹಳೆಯ ಧೋತರ, ಮುದ್ದೆಯಾದ ಕೋಟು, ಮಾಸಿದ ಟೋಪಿ, ಕುರುಚಲು ಗಡ್ಡ ಇವುಗಳಿಂದ ಅವರು ಇನ್ನಷ್ಟು ವಯಸ್ಸಾದಂತೆ ಕಂಡುಬರುತ್ತಿದ್ದರು. ಸ್ನೇಹಿತರು ಅವರಿಗೆ ನಮಸ್ಕಾರ ಮಾಡಿ ಒಳಗೆ ಹೋಗೋಣ ಬನ್ನಿ ಎಂದರು. “ಬೇಡಪ್ಪ, ಇಲ್ಲೇ ನಿಂತಿರುತ್ತೇನೆ. ಹ್ಯಾಗೂ ಇಲ್ಲೇ ಬರ್ತಾನಲ್ಲಾ ಎಂದರು.
“ಸರಿ” ಎಂದು ಸ್ನೇಹಿತರು ಒಳಗೆ ಹೋದರು. ಆತ ವಿಮಾನದಿಂದ ಕೆಳಗಿಳಿದು ಸೀದಾ ಸ್ನೇಹಿತರೊಂದಿಗೆ ಕಾರಿನಲ್ಲಿ ಹಳ್ಳಿ ತಲಪಿದ. ಎರಡು ಗಂಟೆಯ ನಂತರ ಆತನ ತಂದೆ ಬಿಸಿಲಿನಲ್ಲಿ ನಡೆದು ಬಂದರು. ತುಂಬಾ ಸುಸ್ತಾಗಿತ್ತು ಅವರಿಗೆ. ಸ್ನೇಹಿತರು ಅವರನ್ನು ಕೇಳಿದರು, “ಯಾಕೆ, ಮಗ ಬಂದಾಗ ನೀವು ಎಲ್ಲಿ ಮಾಯವಾಗಿಬಿಟ್ಟಿರಿ?”
ಆಗ ಅವರು ಆಡಿದ ಮಾತು ಸ್ನೇಹಿತರ ಎದೆಗೆ ನಾಟಿತು. “ಇಲ್ಲ, ನಾನು ಅವನನ್ನು ನೋಡಿದೆ. ತುಂಬಾ ತೃಪ್ತಿಯಾಯಿತು. ಅವನೂ ನನ್ನನ್ನು ನೋಡಿದ್ದ. ಅಪ್ಪ ಹಳೇ ರೀತಿಯ ಮನುಷ್ಯ. ಅವನಿಗೆ ಮುಜುಗರ ಆಗೋದಿಲ್ವೇ? ಎಲ್ಲ ಹೊಸ ಹೊಸ ಸ್ನೇಹಿತರು ಸಂಭ್ರಮದಲ್ಲಿದ್ದಾಗ ನಾನು ಯಾಕೆ ಅವನ ಮನಸ್ಸನ್ನು ಸಣ್ಣದು ಮಾಡಲಿ ಹೇಳಿ? ಹೇಗಿದ್ದರೂ ಮನೆಗೆ ಬರುತ್ತಾನಲ್ಲ, ಭೇಟಿಯಾಗುತ್ತಾನೆ ಎಂದುಕೊಂಡು ಬಸ್ಸಿನಲ್ಲಿ ಬಂದುಬಿಟ್ಟೆ” ಎಂದರು.
ಎರಡು ಪಿಹೆಚ್.ಡಿ. ಪದವಿ ಪಡೆದ ಮಗನಿಗೆ ತಂದೆಯ ಕಾಲು ಮುಟ್ಟಿ ಆಶೀರ್ವಾದ ಪಡೆಯುವ ಮನಸ್ಸು ಬರಲಿಲ್ಲ; ಹೆಚ್ಚು ಓದದ ತಂದೆಗೆ ಎಲ್ಲಿ ಮಗನಿಗೆ ಮುಜುಗರವಾಗುತ್ತದೋ ಎಂಬ ಚಿಂತೆ. ಹಾಗಾದರೆ ಯಾರು ನಿಜವಾಗಿ ಸುಸಂಸ್ಕೃತರು?
ನಂಬಿಕೆಯ ಬಲ
ಮಹಾಭಾರತದಲ್ಲಿ `ಆಕಾಶಕ್ಕಿಂತ ದೊಡ್ಡ ವಸ್ತು ಯಾವುದು?’ ಎಂಬ ಯಕ್ಷಪ್ರಶ್ನೆಗೆ ಧರ್ಮರಾಯ `ತಂದೆ’ ಎಂದು ಉತ್ತರಿಸುತ್ತಾನೆ. ಆ ಮಾತಿನಲ್ಲಿ ಎಷ್ಟೊಂದು ಸತ್ಯವಿದೆ! ಸಮಯ ಬಂದಾಗ ಅಪ್ಪನೇ ಅಮ್ಮನೂ ಆಗಬಲ್ಲ. ಏನಾದರೂ ಬೇಕಾದರೆ ಅಪ್ಪನಲ್ಲಿ ಕೇಳಿದರೆ ಕೊಡಿಸುತ್ತಾರೆ ಎಂಬ ವಿಶ್ವಾಸ ನಮಗಿರುತ್ತದೆ. ಯಾರಾದರೂ ಹೆದರಿಸಿದರೆ `ಅಪ್ಪಂಗೆ ಹೇಳ್ತೀನಿ ನೋಡು’ ಎಂದು ಎಚ್ಚರಿಸುತ್ತೇವೆ. ಮಕ್ಕಳಿಗೆ ತಂದೆಯ ಮೇಲೆ ಎಷ್ಟೊಂದು ವಿಶ್ವಾಸವಿರುತ್ತದೆ ಎಂದರೆ ಮಗುವನ್ನು ತಂದೆ ಮೇಲಕ್ಕೆಸೆದರೂ ಅದು ಕಿಲಕಿಲ ಎಂದು ನಗುತ್ತದೆ. ಯಾಕೆಂದರೆ ಎಸೆದವರು ಹಿಡಿದುಕೊಳ್ಳುವರು ಎಂಬ ನಂಬಿಕೆ ಆ ಮಗುವಿಗಿರುತ್ತದೆ. ಕೇಳಿದ್ದನ್ನೆಲ್ಲ ಕೊಡಿಸುವ ಅಪ್ಪ ಪೋಷಕ ಮಾತ್ರ ಅಲ್ಲ; ರಕ್ಷಕ ಕೂಡ ಎಂಬ ನಂಬಿಕೆ ಮಗುವಿನಲ್ಲಿ ಬಲವಾಗಿ ಬೇರೂರಿರುತ್ತದೆ.
ಆದರೆ ದುಃಖದ ಸಂಗತಿ ಎಂದರೆ ಆಕಾಶದಂತಹ ಉನ್ನತ ಸ್ಥಾನವಿರುವ ಅಪ್ಪಂದಿರಿಗೆ ಇಂದು ಹೆಚ್ಚಿನ ಮನೆಗಳಲ್ಲಿ ಸಿಗಬೇಕಾದ ಗೌರವ ಸಿಗುತ್ತಿಲ್ಲ. ಮಕ್ಕಳದ್ದು ಏನೇನೋ ಆರೋಪಗಳು, ಆಕ್ಷೇಪಗಳು. ಹೆಚ್ಚಿನವರು ವಿನಾಕಾರಣ ತಂದೆಯೊಂದಿಗೆ ಜಗಳಕ್ಕೆ ನಿಲ್ಲುತ್ತಾರೆ. `ನಮ್ಮನ್ನು ಚೆನ್ನಾಗಿ ಸಾಕಲು ನಿಮಗೆ ಸಾಮರ್ಥ್ಯವಿಲ್ಲದಿದ್ದ ಮೇಲೆ ಯಾಕೆ ಹುಟ್ಟಿಸಬೇಕಾಗಿತ್ತು’ – ಎಂಬಂಥ ಕ್ರೂರ ಪ್ರಶ್ನೆಯಿಂದಲೇ ತಂದೆಯ ಕಂಗಳಲ್ಲಿ ನೀರಿಳಿಸುತ್ತಾರೆ.
ಮಾತೃಪ್ರೇಮ
ಪ್ರೇಮದ ಪ್ರತಿರೂಪವೇ ತಾಯಿ. ತಂದೆ ಆಕಾಶವಾದರೆ, ತಾಯಿ ಭೂಮಿ. `ಕ್ಷಮಯಾ ಧರಿತ್ರೀ’ ಎಂಬ ಮಾತಿನಂತೆ ಮಕ್ಕಳ ಎಂತಹ ಘೋರ ತಪ್ಪನ್ನೂ ಆಕೆ ಕ್ಷಮಿಸುತ್ತಾಳೆ. ಸಂಸ್ಕೃತದಲ್ಲಿ ಒಂದು ಮಾತಿದೆ – `ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ’ ಎಂಬುದಾಗಿ. ಕೆಟ್ಟ ಮಗ ಹುಟ್ಟಬಹುದೇ ವಿನಾ ಕೆಟ್ಟ ತಾಯಿ ಹುಟ್ಟಿಲ್ಲ ಎಂಬುದು ಇದರರ್ಥ. ಮಾತೆಗೆ ಎಷ್ಟು ನಮಿಸಿದರೂ, ಆಶೀರ್ವಾದ ಬೇಡಿದರೂ ಅದು ಕಡಮೆಯೇ. ಆದ್ದರಿಂದ ನಮ್ಮ ಹಿರಿಯರು `ನ ಮಾತುಃ ಪರದೈವತಂ’ – ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬುದಾಗಿ ಹೇಳಿ ತಾಯಿಗೆ ದೇವರ ಸ್ಥಾನ ಕೊಟ್ಟರು.
ತನಗೆ ಹೊಟ್ಟೆಗಿಲ್ಲದಿದ್ದರೂ ಮಕ್ಕಳು ತಿನ್ನಲಿ ಎಂಬ ಹೃದಯವೇ ತಾಯಿ ಹೃದಯ. ಯಾವ ಆಪತ್ತಿನಲ್ಲೂ ತನ್ನ ಜೀವಕ್ಕಿಂತ ಮಗುವಿನ ಜೀವನವೇ ಮುಖ್ಯ ಎಂಬುದಾಗಿ ತಾಯಿ ಭಾವಿಸುತ್ತಾಳೆ; ತನ್ನ ಪ್ರಾಣವನ್ನು ಪಣಕ್ಕಿಟ್ಟಾದರೂ ಮಗುವನ್ನು ಬದುಕಿಸಲು ಆಕೆ ಪ್ರಯತ್ನಿಸುತ್ತಾಳೆ.
ಮಹಾಭಾರತದಲ್ಲಿ ಒಂದು ಪ್ರಸಂಗ ಬರುತ್ತದೆ. ದ್ರೌಪದಿಯ ಐದು ಮಂದಿ ಮಕ್ಕಳನ್ನು ಅಶ್ವತ್ಥಾಮ ಕಡಿದು ಕೊಂದಿದ್ದ. ಭೀಮಾರ್ಜುನರು ಆ ನೀಚನನ್ನು ಹಿಡಿದುತಂದು ದ್ರೌಪದಿಯ ಮುಂದೆ ಕೆಡವಿದ್ದರು. ಇಂಥವನು ಬದುಕಿ ಇರಬಾರದೆಂದು ಬೊಬ್ಬಿರಿಯುತ್ತಿದ್ದರು. ಆಗ ದ್ರೌಪದಿ ಹೇಳಿದಳು, “ಮಕ್ಕಳನ್ನು ಕಳೆದುಕೊಂಡ ತಾಯಂದಿರ ದುಃಖ ಎಂಥದ್ದೆನ್ನುವುದು ನನಗೀಗ ತಿಳಿಯುತ್ತಿದೆ. ಇವನೆಂಥ ನೀಚನೇ ಆದರೂ ಇವನನ್ನು ಕೊಂದು ಇವನ ತಾಯಿಗೆ ಮಗನನ್ನು ಕಳೆದುಕೊಂಡ ದುಃಖವನ್ನು ಉಂಟುಮಾಡುವುದು ಬೇಡ. ಈತನನ್ನು ಬಿಟ್ಟುಬಿಡಿ” ಎಂಬುದಾಗಿ ಹೇಳುತ್ತಾಳೆ. ಎಷ್ಟೋ ಬಾರಿ ಓರ್ವ ತಾಯಿಯ ಸಂಕಟ ಇನ್ನೊಬ್ಬ ತಾಯಿಗೆ ಮಾತ್ರ ಗೊತ್ತಾಗುತ್ತದೆ. ಆದರೆ ಅವರ ಮಕ್ಕಳಿಗೆ ಗೊತ್ತಾಗುವುದಿಲ್ಲ. ನಮ್ಮನ್ನು ಸದಾ ಪ್ರೀತಿಸುವ ತಾಯಿಯ ಮನಸ್ಸನ್ನು ನಾವು ಹಲವು ಬಾರಿ ಅರ್ಥಮಾಡಿಕೊಳ್ಳುವುದೇ ಇಲ್ಲ.
ಮಕ್ಕಳು ಇರಬೇಕಾದದ್ದು ತಾಯಿ-ತಂದೆಯ ಆನಂದಕ್ಕೋಸ್ಕರ. ವಾಲ್ಮೀಕಿಯು ರಾಮನನ್ನು ಕೌಸಲ್ಯಾನಂದವರ್ಧನನೆಂದೂ, ಲಕ್ಷ್ಮಣನನ್ನು ಸುಮಿತ್ರಾನಂದವರ್ಧನನೆಂದೂ, ಭರತನನ್ನು ಕೈಕೇಯ್ಯಾನಂದವರ್ಧನನೆಂದೂ ಕರೆದಿದ್ದಾರೆ.
ಇದೊಂದು ನೈಜ ಘಟನೆ
ಒಂದೂರಿನಲ್ಲಿ ಉಗ್ರಗಾಮಿಗಳು ಶಾಲೆಯಲ್ಲಿ ಬಾಂಬ್ ಸ್ಫೋಟಿಸಿದರು. ಶಾಲಾ ಕಟ್ಟಡ ಕುಸಿದು ಕೇವಲ ಕಲ್ಲು, ಮಣ್ಣು, ಕಾಂಕ್ರೀಟ್ಗಳ ಗುಡ್ಡವಾಗಿತ್ತು. ಸುತ್ತ ಸೇರಿದ್ದ ಪೋಷಕರು ಗೊಳೋ ಎಂದು ಅಳುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಒಬ್ಬ ತಂದೆ ಧಾವಿಸಿ ಬಂದ. ಅವಶೇಷಗಳ ಗುಡ್ಡವನ್ನು ನೋಡಿ ಅವನ ಎದೆ ಧಸಕ್ಕೆಂದಿತು. ಆತ, “ನನ್ನ ಮಗನಿಗೆ ಸಂಜೆ ಬಂದು ನಿನ್ನನ್ನು ನಾನೇ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದೆ. ಈಗ ಹೀಗಾಗಿದೆ!” ಎಂದು ಚೀರುತ್ತಿದ್ದ. ನೆರೆದಿದ್ದ ಜನ ಕೆಳಗೆ ಸಿಕ್ಕಿಬಿದ್ದಿರುವ ಮಕ್ಕಳಲ್ಲಿ ಯಾರೂ ಬದುಕಿ ಉಳಿದಿರುವುದಿಲ್ಲ ಎನ್ನುತ್ತಿದ್ದರು. ಆ ತಂದೆ ಮಗನ ತರಗತಿಯಿದ್ದ ಸ್ಥಳಕ್ಕೆ ಹೋಗಿ ಕಲ್ಲು-ಮಣ್ಣುಗಳ ರಾಶಿಯನ್ನು ಅಗೆಯತೊಡಗಿದ. ನೋಡಿದವರೆಲ್ಲ `ಯಾರೂ ಉಳಿದಿರುವುದಿಲ್ಲ, ನೀನೇನು ಮಾಡಿದರೂ ಪ್ರಯೋಜನವಿಲ್ಲ, ಬುಲ್ಡೋಜರ್ಗಳು ಬರುತ್ತವೆ. ಅಲ್ಲಿಯವರೆಗೆ ಕಾಯೋಣ’ ಎಂದೆಲ್ಲ ಹೇಳಿದರು. ಆದರೆ ಆತ ತನ್ನ ಕಾರ್ಯದಿಂದ ಹಿಂದೆಗೆಯಲಿಲ್ಲ. ಅಲ್ಲಿದ್ದ ಪೊಲೀಸಿನವರು `ಬಾಂಬುಗಳು ಇನ್ನೂ ಇದ್ದರೂ ಇರಬಹುದು, ಅಪಾಯವಿದೆ’ ಎಂದರು. ಆದರೂ ಆತ ವಿಚಲಿತನಾಗಲಿಲ್ಲ. ಕೊನೆಗೆ ನೆರೆದಿದ್ದ ಜನರು ಒಬ್ಬೊಬ್ಬರಾಗಿ ಅವನ ಸಹಾಯಕ್ಕೆ ಬಂದರು. ಬೆಳಗಿನ ಝಾವದವರೆಗೆ ಆ ತಂದೆ ಪುಟ್ಟಾ ಪುಟ್ಟಾ ಎಂದು ಕೂಗುತ್ತಾ ಕೆಲಸ ಮಾಡುತ್ತಿದ್ದ. ಗುಡ್ಡ ಕರಗುತ್ತಾ ಬಂತು. ಕೊನೆಗೆ ಒಳಗೊಂದು ಪೊಟರೆಯಂತಹ ಸ್ಥಳದಲ್ಲಿ ಕುಟುಕು ಜೀವವುಳಿಸಿಕೊಂಡು ಅರೆಪ್ರಜ್ಞಾವಸ್ಥೆಯಲ್ಲಿದ್ದ ಐದಾರು ಮಕ್ಕಳು ಕಂಡರು. ಅವರಲ್ಲಿ ಇಷ್ಟೆಲ್ಲಾ ಶ್ರಮವಹಿಸಿದ ಆ ತಂದೆಯ ಮಗ, ಪುಟ್ಟನೂ ಅಲ್ಲಿದ್ದ. ತಂದೆಯನ್ನು ನೋಡಿ “ನಮ್ಮಪ್ಪ ನನ್ನನ್ನು ಕರೆದುಕೊಂಡು ಹೋಗಲು ಬರುತ್ತೇನೆಂದು ಹೇಳಿದ್ದಾರೆ, ಖಂಡಿತ ಬರುತ್ತಾರೆ ಎಂದು ಇವರಿಗೆಲ್ಲ ಹೇಳುತ್ತಿದ್ದೆ. ಸಧ್ಯ ನೀವು ಬಂದಿರಲ್ಲ” ಎಂದು ಹೇಳಿ ಆ ನೋವಿನಲ್ಲೂ ನಕ್ಕ. ಆ ಹುಡುಗ ಬದುಕುಳಿದ; ತಂದೆಯ ಮಾತೂ ಉಳಿಯಿತು.
ತಾಯಿಯ ಮಡಿಲು
ಅಮೆರಿಕದ ಭೂ ಅನ್ವೇಷಕ ವಿಲಿಯಂ ಕರ್ಡಿ ಹಡ್ಸನ್ ಕೊಲ್ಲಿಯ ಸುತ್ತ ತಿರುಗಾಡಿ ಬರುತ್ತಿದ್ದಾಗ ಗಾಯಗೊಂಡು ಸುಸ್ತಾದ ಓರ್ವ ರೆಡ್-ಇಂಡಿಯನ್ ಮಹಿಳೆಯನ್ನು ಕಂಡ. ಅವಳಿಗೆ ಪ್ರಥಮಚಿಕಿತ್ಸೆ ನೀಡಿ ತಿನ್ನಲು ಕೊಟ್ಟು ವಿಚಾರಿಸಿದಾಗ ತಿಳಿದುಬಂದ ಸಂಗತಿ ಮನಕಲಕುವಂತಿತ್ತು. ಅವಳ ಕುಟುಂಬದವರು ಮತ್ತು ಬಂಧುಗಳು ಎದುರಾಳಿಗಳೊಂದಿಗೆ ಹೋರಾಡುತ್ತಾ ಬಲುದೂರ ಹೋಗಿದ್ದರು. ಈ ತಾಯಿ ಮತ್ತು ಮಗು ಹಿಂದೆ ಉಳಿದಿದ್ದರು. “ಕಳೆದ ಮೂರು ದಿನಗಳಿಂದ ನಾನು ಹಸಿದಿದ್ದೇನೆ. ಎದೆಯಲ್ಲಿ ಹಾಲು ಬತ್ತಿಹೋಗಿದ್ದು ಮಗು ಒಂದೇ ಸಮನೆ ಅಳುತ್ತಿದೆ. ಏನು ಮಾಡುವುದೆಂದು ತಿಳಿಯದೆ ನನ್ನ ಮೈಯಿಂದಲೇ ತುಂಡು ಮಾಂಸ ತೆಗೆದು ಗಾಳಕ್ಕೆ ಸಿಕ್ಕಿಸಿ ಮೀನು ಹಿಡಿಯಲು ಯೋಚಿಸಿದೆ. ರಕ್ತಸ್ರಾವದಿಂದ ನೀವು ಬರುವ ಹೊತ್ತಿಗೆ ನಿತ್ರಾಣಗೊಂಡು ಬಿದ್ದಿದ್ದೆ” ಎಂದು ಮಹಿಳೆ ತನ್ನ ಕಥೆ ಹೇಳಿಕೊಂಡಳು. ಮಗುವನ್ನು ಉಳಿಸಿಕೊಳ್ಳಲಿಕ್ಕಾಗಿ ತನ್ನ ಮಾಂಸದ ತುಣು ಕನ್ನೇ ಮೀನಿನ ಗಾಳಕ್ಕೆ ಒಡ್ಡಿದ ಆ ವಾತ್ಸಲ್ಯಮಯಿ ತಾಯಿಗೆ ಕರ್ಡಿ ಮನಸಾರೆ ವಂದಿಸಿ ನೆರವು ನೀಡಿದ.
ತಾಯಿಯ ಪ್ರೀತಿಯ ಎದುರು ಜಗತ್ತಿನ ಎಲ್ಲ ಸಂಗತಿಗಳೂ ತೃಣಸಮಾನ. ತಾಯಿಮಡಿಲೆಂಬುದು ಸ್ವರ್ಗಕ್ಕಿಂತ ಮಿಗಿಲಾದದ್ದು.
ತ್ಯಾಗಮಯಿ
ಒಬ್ಬ ಬಾಲಕ ಗೆಳೆಯರೊಂದಿಗೆ ಶಾಲೆಗೆ ಹೋಗುತ್ತಿದ್ದ. ಈ ಹುಡುಗನ ತಾಯಿ ತಾನು ಕೂಡ ಮಗನ ಜೊತೆಗೆ ಮಾತನಾಡುತ್ತಾ ಶಾಲೆಯವರೆಗೆ ಬಂದು ಆತ ಸ್ನೇಹಿತರೊಂದಿಗೆ ನಗುನಗುತ್ತಾ ಹೋಗುವುದನ್ನು ನೋಡಬೇಕೆಂಬ ಅಪೇಕ್ಷೆ ಉಳ್ಳವಳಾಗಿದ್ದಳು. ಆದರೆ ಅದೇಕೋ ಆ ಹುಡುಗನಿಗೆ ತಾಯಿ ಶಾಲೆಗೆ ಬರುವುದು ಬೇಕಿರಲಿಲ್ಲ. ಆಕೆ ತಾನು ಶಾಲೆಗೆ ಬರುತ್ತೇನೆ ಎಂದರೆ ಹುಡುಗ ಅಳುತ್ತಾ `ನೀನು ಶಾಲೆಗೆ ಬರಬೇಡ’ ಎನ್ನುತ್ತಿದ್ದ. `ಯಾಕಪ್ಪಾ ನಾನು ಶಾಲೆಗೆ ಬರುವುದು ಬೇಡ?’ ಎಂದು ಕೇಳಿದರೆ ಅದಕ್ಕೆ ಉತ್ತರವಿಲ್ಲ. ಅವನ ತಾಯಿಗೆ ಮನಸ್ಸು ತುಂಬಾ ನೊಂದುಹೋಗಿತ್ತು. ಪಾಪ! ಆಕೆ ಮಗ ಶಾಲೆಗೆ ಹೋಗಿ ಸೇರಿದ ಮೇಲೆ ತಾನು ಅಲ್ಲಿಗೆ ಹೋಗಿ ಮರದ ಮರೆಯಲ್ಲಿ ನಿಂತು ತನ್ನ ಮಗ ಆಟ ಆಡುವುದನ್ನು ನೋಡಿ ಕಣ್ಣುತುಂಬಿಕೊಳ್ಳುತ್ತಿದ್ದಳು.
ಒಂದು ದಿನ ಶಾಲೆಯ ವಾರ್ಷಿಕೋತ್ಸವ ಬಂದಿತು. ತಂದೆ-ತಾಯಂದಿರೆಲ್ಲ ಸಂತೋಷದಿಂದ ತಮ್ಮ ಮಕ್ಕಳ ಚಟುವಟಿಕೆಗಳ ಪ್ರದರ್ಶನ ನೋಡಲು ಬರುತ್ತಿದ್ದರೆ, ಈ ಹುಡುಗ ತನ್ನ ತಾಯಿಗೆ ತಾಕೀತುಮಾಡಿ ಬಂದಿದ್ದ. `ತಂದೆ ಬಂದರೆ ಬರಲಿ. ನೀನು ಮಾತ್ರ ಬರಬೇಡ.’ ಆ ತಾಯಿಯ ಹೃದಯಕ್ಕೆ ಅದೆಷ್ಟು ನೋವಾಗಿತ್ತೋ! ಆಕೆ ಅಳುವುದನ್ನು ಕಂಡು ತಂದೆ ಹೇಳಿದರು -`ಚಿಂತಿಸಬೇಡ, ನೀನು ನಿಧಾನಕ್ಕೆ ಬಾ. ಹಿಂದಿನ ಸಾಲಿನಲ್ಲಿ ಕೂತಿರು. ಅವನಿಗೆ ಗೊತ್ತಾಗುವುದಿಲ್ಲ. ನಾನು ಮುಂದಿನ ಸಾಲಿನಲ್ಲಿ ಅವನ ಪಕ್ಕದಲ್ಲೇ ಕುಳಿತಿರುತ್ತೇನೆ.’ ತಾಯಿ ಒಪ್ಪಿ ಹಾಗೆಯೇ ಮಾಡಿದಳು.
ಕಾರ್ಯಕ್ರಮ ಚೆನ್ನಾಗಿ ನಡೆಯಿತು. ಹುಡುಗನ ತಾಯಿ ತುಂಬಾ ಸಂತೋಷಪಟ್ಟಳು. ವೇದಿಕೆಯ ಮೇಲೆ ಹಾಡು ಹೇಳಲು ಹೋದ ಹುಡುಗನಿಗೆ ಮೇಲಿಂದ ತನ್ನ ತಾಯಿ ಹಿಂದೆ ಕೊನೆಯ ಸಾಲಿನಲ್ಲಿ ಕುಳಿತದ್ದು ಕಂಡಿತು. ಸಿಟ್ಟು ತಲೆಗೇರಿತು. ಹಾಡು ಮುಗಿದೊಡನೆ ದಡದಡ ಓಡಿಬಂದು ತಾಯಿ ಕುಳಿತಿದ್ದ ಸಾಲಿನ ಹಿಂದೆ ನಿಂತ. ಪಕ್ಕದಲ್ಲಿದ್ದವರು ತಾಯಿಯನ್ನು ಕೇಳುತ್ತಿದ್ದರು – `ಇದೇನು ನಿಮ್ಮ ಮುಖದ ಮೇಲೆ ಅಷ್ಟೊಂದು ಆಳವಾದ ಗಾಯವಾಗಿದೆ; ಹಣೆಯಿಂದ ಗದ್ದದವರೆಗೆ?’
ತಾಯಿ ಹೇಳಿದಳು, “ಇದು ೮-೧೦ ವರ್ಷದ ಹಿಂದೆ ಆಗಿದ್ದು. ನಮ್ಮ ಮನೆಗೆ ಬೆಂಕಿ ಬಿದ್ದಿತ್ತು. ಆಗ ನನ್ನ ಮಗ ಇನ್ನೂ ಒಂದು ವರ್ಷದ ಕೂಸು. ನೆಲದ ಮೇಲೆ ಮಲಗಿಸಿದ್ದೆ. ಮನೆಯ ಮಾಡಿಗೆ ಆಧಾರವಾದ ಕಂಬಕ್ಕೆ ಬೆಂಕಿ ಹೊತ್ತಿ ಕೆಳಗೆ ಬೀಳತೊಡಗಿತು. ಅದು ನನ್ನ ಮಗನ ಮೇಲೆಯೇ ಬೀಳುವುದಿತ್ತು. ನನಗೇನೂ ತೋಚಲಿಲ್ಲ. ಅವನನ್ನು ಎತ್ತಿಕೊಂಡು ತಿರುಗಿದೆ. ಅಷ್ಟೆ, ಆ ಕಂಬ ನನ್ನ ಮುಖದ ಮೇಲೆ ಬಿತ್ತು. ಆದರೆ ನನ್ನ ಮಗನಿಗೇನೂ ಆಗಲಿಲ್ಲ. ನನ್ನ ಪುಣ್ಯ. ನಾನು ಹೇಗಿದ್ದರೇನು? ನನ್ನ ಮಗ ಉಳಿದನಲ್ಲ” ಆಕೆಯ ಕಣ್ಣು ತುಂಬಿ ಬಂದಿತ್ತು. ಇದನ್ನು ಕೇಳಿಸಿಕೊಂಡ ಮಗನಿಗೆ ಆಘಾತ. ತಾಯಿಯ ಮುಖದ ಮೇಲಿನ ಆಳವಾದ ಅಸಹ್ಯ ಗಾಯದಿಂದಲೇ ಆತ ತಾಯಿ ಶಾಲೆಗೆ ಬರುವುದು ಬೇಡವೆಂದು ಹಟ ಮಾಡುತ್ತಿದ್ದ. ಈಗ ತನ್ನನ್ನು ಬದುಕಿಸಲು ತಾಯಿ ಮಾಡಿದ ತ್ಯಾಗ ಅವನನ್ನು ತಟ್ಟಿತು. ಆತ ಮೆಲ್ಲಗೆ ಮುಂದೆ ಬಂದು ತಾಯಿಯನ್ನು ಅಪ್ಪಿಕೊಂಡು, ಆಕೆಯ ಮುಖದ ಮೇಲಿನ ಗಾಯದ ಕಲೆಯ ಮೇಲೆ ನಿಧಾನವಾಗಿ ಕೈ ಆಡಿಸಿದ. ಆಕೆಯ ತ್ಯಾಗಕ್ಕೆ ಅಭಿಮಾನ ಪಟ್ಟ. ಆಕೆಯ ಪಕ್ಕದಲ್ಲೇ ಕುಳಿತುಕೊಂಡ. ತಾಯಿಯ ತ್ಯಾಗದ ಬಲ ಅದು.
ನಿಭಾಯಿಸುವ ಕಲೆ
ಇವತ್ತು ಮಗ ಮದುವೆ ಆದ ತಕ್ಷಣ ಬೇರೆ ಮನೆ ಮಾಡಲು ಮನಸ್ಸು ಮಾಡುತ್ತಾನೆ. ಆತನಿಗೆ ಜನ್ಮಕೊಟ್ಟ ತಾಯಿಗಿಂತ, ಕಟ್ಟಿಕೊಂಡ ಹೆಂಡತಿಯೇ ಹೆಚ್ಚಾಗುತ್ತಾಳೆ. ನನ್ನ ತಾಯಿಗೂ ನನ್ನ ಹೆಂಡತಿಗೂ ಸರಿ ಬರುವುದಿಲ್ಲ, ಅದಕ್ಕೋಸ್ಕರ ಇಬ್ಬರೂ ನೆಮ್ಮದಿಯಲ್ಲಿ ಬದುಕಬೇಕಾದರೆ ಬೇರೆ ಮನೆ ಮಾಡುವುದೇ ಉತ್ತಮ ಎಂಬುದು ಆತನ ಅಭಿಪ್ರಾಯ. ಹಲವು ಬಾರಿ ಅತ್ತೆಗೂ-ಸೊಸೆಗೂ ಹೊಂದಾಣಿಕೆ ಇರದಿರುವುದರಿಂದಲೇ ಮಗ ಹೆತ್ತವರನ್ನು ಕಡೆಗಣಿಸುತ್ತಾನೆ.
ಅತ್ತೆ ಸೊಸೆಗೆ ಮನಸ್ತಾಪ ಇದೆ ಎಂದ ಮಾತ್ರಕ್ಕೆ ತಂದೆ-ತಾಯಿಯರನ್ನು ದೂರಮಾಡುವುದು ಪರಿಹಾರವಲ್ಲ. ಇದು ನೆಗಡಿ ಆಗುತ್ತದೆ ಎಂದು ಮೂಗನ್ನೇ ಕತ್ತರಿಸಿದಂತೆ. ತಾಯಿಯನ್ನು, ಹೆಂಡತಿಯನ್ನು ನಿಭಾಯಿಸುವ ಕಲೆ ಮಗನಿಗೆ ಗೊತ್ತಾದಾಗ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ. ಈ ಸಮಸ್ಯೆಯನ್ನು ನಾವು ಸರಿಯಾಗಿ ನಿಭಾಯಿಸದೆ ಹೆತ್ತವರನ್ನು ವೃದ್ಧಾಶ್ರಮಕ್ಕೆ ಕಳುಹಿಸಿದರೆ ನಾಳೆ ನಮ್ಮ ಮಕ್ಕಳು ಮದುವೆಯಾದ ಮೇಲೆ ನಮ್ಮನ್ನು ದೂರಮಾಡಬಹುದು. ನಮ್ಮ ಮಕ್ಕಳ ಮೇಲೆ ನಮ್ಮ ವರ್ತನೆ ತುಂಬ ಪ್ರಭಾವ ಬೀರುತ್ತದೆ. ಮಕ್ಕಳನ್ನು ಸರಿಯಾಗಿ ಬೆಳೆಸಬೇಕಾದರೆ ತಂದೆ-ತಾಯಿಯರ ಪಾತ್ರದಂತೆ ಅವರ ಅಜ್ಜ-ಅಜ್ಜಿಯರ ಪಾತ್ರವೂ ಬಹಳ ಮುಖ್ಯ. ಅಜ್ಜ-ಅಜ್ಜಿಯರು ಮಕ್ಕಳಿಗೆ ಹಲವಾರು ನೀತಿಕಥೆಗಳನ್ನು ಹೇಳಿ ಅವರಲ್ಲಿ ಉತ್ತಮ ಸಂಸ್ಕಾರವನ್ನು ತುಂಬುತ್ತಾರೆ. ಆದರೆ ದುಃಖದ ಸಂಗತಿ ಎಂದರೆ ಇಂದಿನ ಹಲವಾರು ಮನೆಗಳಲ್ಲಿ ಮಕ್ಕಳಿಗೆ ಪ್ರೀತಿ ಕೊಡುವ, ಸಂಸ್ಕಾರ ಕೊಡುವ ಅಜ್ಜ-ಅಜ್ಜಿಯರೇ ಇಲ್ಲ. ಪ್ರತಿ ಮನೆಯಲ್ಲಿ ಮಕ್ಕಳೊಂದಿಗೆ ಅಜ್ಜ-ಅಜ್ಜಿ ಇದ್ದರೆ ಮಕ್ಕಳ ಭವಿಷ್ಯ ಉತ್ತಮವಾಗುವುದರಲ್ಲಿ, ಅವರ ವ್ಯಕ್ತಿತ್ವ ವಿಕಸನವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
`ತನ್ನ ತಂದೆ-ತಾಯಿಯ ಹಿತ-ಸುಖಗಳಿಗಾಗಿ ಸೇವೆ ಮಾಡುವವನು ಸಾಮಾನ್ಯನಾದ ಮಗ; ತನ್ನ ತಂದೆ-ತಾಯಿಗೆ ಕೆಟ್ಟ ಹೆಸರು ಬಾರದ ಹಾಗೆ ಬದುಕುವವನು ಉತ್ತಮನಾದ ಮಗ; ತಾನು ಏನು ಮಾಡಿದರೂ ಅದರಿಂದ ತನ್ನ ತಂದೆ-ತಾಯಿಗೆ ಒಳ್ಳೆಯ ಹೆಸರೇ ಬರುವಂತೆ ಬದುಕುವವನು ಉತ್ತಮೋತ್ತಮನಾದ ಮಗ’ ಎಂಬುದಾಗಿ ಚೀನೀ ಹೇಳಿಕೆಯೊಂದಿದೆ.
ಕುರುಡರಾದ ವೃದ್ಧ ತಂದೆ-ತಾಯಿಯನ್ನು ಹೆಗಲ ಮೇಲೆ ಹೊತ್ತು ತೀರ್ಥಯಾತ್ರೆ ಮಾಡಿಸಿದ ಶ್ರವಣಕುಮಾರನ ದೇಶ ನಮ್ಮದು. ತಂದೆಯ ಮಾತನ್ನು ಉಳಿಸಲು ೧೪ ವರ್ಷ ವನವಾಸಕ್ಕೆ ಹೋದ ರಾಮನ ನಾಡಿದು. ತನ್ನ ತಂದೆ ಯಯಾತಿಗಾಗಿ ತನ್ನ ಯೌವನವನ್ನೇ ಧಾರೆಯೆರೆದ ಪುರುವಿನ ಪುರವಿದು. ತಂದೆಗಾಗಿ ತಾನು ಸಿಂಹಾಸನವನ್ನೇ ಏರದೆ ಆಜನ್ಮಬ್ರಹ್ಮಚಾರಿಯಾಗಿ ಉಳಿದ ಭೀಷ್ಮನ ಬೀಡಿದು.
`ಮಾತಾ ಚ ಪಾರ್ವತೀದೇವೀ ಪಿತಾ ದೇವೋ ಮಹೇಶ್ವರಃ’ – ನನ್ನ ತಾಯಿ ಪಾರ್ವತೀದೇವಿಯೇ ಆಗಿದ್ದಾಳೆ. ತಂದೆ ಸಾಕ್ಷಾತ್ ಮಹೇಶ್ವರನೇ ಆಗಿದ್ದಾನೆ ಎಂದು ನಂಬುವ ಸಂಸ್ಕೃತಿ ನಮ್ಮದು. ತಂದೆ-ತಾಯಿಯರೇ ಶಿವ-ಪಾರ್ವತಿಯರೆಂದು ಗೌರವಿಸುತ್ತಿದ್ದ ಸುಸಂಸ್ಕೃತ ಭಾರತದಲ್ಲಿ ಇಂದು ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಒಂದು ವಿಪರ್ಯಾಸ. ತಂದೆ-ತಾಯಿಗೆ ಸಂತೋಷವನ್ನು ಉಂಟುಮಾಡದ, ವೃದ್ಧಾಪ್ಯದಲ್ಲಿ ಆಸರೆಯಾಗದ ಮಕ್ಕಳು ಇದ್ದರೆ ಲಾಭವೇನು?