ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಜನವರಿ 2016 > ಯುವಭಾರತ ನಿರ್ಮಾಣ ವಿಪುಲ ಅವಕಾಶಗಳು, ಸಾಧ್ಯತೆಗಳು ಮತ್ತು ಸವಾಲುಗಳು

ಯುವಭಾರತ ನಿರ್ಮಾಣ ವಿಪುಲ ಅವಕಾಶಗಳು, ಸಾಧ್ಯತೆಗಳು ಮತ್ತು ಸವಾಲುಗಳು

ಯುವಶಕ್ತಿ ಎಂದರೆ ಅದು ಸ್ವಚ್ಛಂದ ಪ್ರವಾಹ. ಯುವಶಕ್ತಿಯೆಂದರೆ ಅದು – ಪುಟಿವ ಚೈತನ್ಯ, ವೀರ್ಯವತ್ತತೆಯ ಮಹೋನ್ನತ ಸ್ಥಿತಿ. ಅದಮ್ಯ ಛಲದ ಮಹಾಬಲ. ಹುರುಪು-ಉತ್ಸಾಹದ ಮಹೋದಧಿ. ಮಹತ್ತ್ವಾಕಾಂಕ್ಷೆ ಹಾಗೂ ಸರ್ಜನಶೀಲತೆಯ ವೈಭವ. ದೃಢಮನೋಭೂಮಿಕೆ, ಭರವಸೆಯ ತಾಣ.

ಇಂದಿನ ಭಾರತ ಒಂದು ಯುವಶಕ್ತಿಸಂಪನ್ನ ರಾಷ್ಟ್ರ. ನಮ್ಮ ದೇಶದ ಒಟ್ಟಾರೆ ಜನಸಂಖ್ಯೆಯ ಶೇಕಡ ೬೫ರಷ್ಟು ಜನರ ವಯೋಮಾನ ೩೫ ಅಥವಾ ಅದಕ್ಕಿಂತಲೂ ಕಡಮೆಯಿದೆ; ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ನಮ್ಮ ಜನಸಂಖ್ಯೆಯ ೫೫% ಅಂದರೆ ೫೫,೫೦,೦೦,೦೦೦ ಜನರ ವಯಸ್ಸು ೨೫ಕ್ಕಿಂತಲೂ ಕಡಮೆ. ಮಹತ್ತರವಾದ ಈ ಯುವಶಕ್ತಿ, ತನ್ನದೇ ದೇಶದ ಪುರೋಭಿವೃದ್ಧಿಗಾಗಿ – ಸೈನ್ಯ, ಅಧ್ಯಾಪನ, ಸಂಶೋಧನೆ, ಶುದ್ಧವಿಜ್ಞಾನ, ರಾಜಕೀಯ, ಕೃಷಿ ಮುಂತಾಗಿ – ಎಲ್ಲ ರಂಗಗಳಲ್ಲೂ ಸಮನ್ವಿತವಾಗಿ ಸಕ್ರಿಯವಾಗಿ ತೊಡಗಿಕೊಳ್ಳುವಂತಾದರೆ – ಈ ೨೧ನೇ ಶತಮಾನ, ಅದು ಭಾರತದ್ದೇ ಆಗಲಾರದೇಕೆ?

ಭಾರತ ಸಮಾಜವಾದದಿಂದ ದೂರಸರಿದಮೇಲೆ, ಜಾಗತಿಕ ವಾಣಿಜ್ಯ ಮತ್ತು ಮಾಹಿತಿಕ್ರಾಂತಿಗೆ ತನ್ನನ್ನು ತಾನು ತೆರೆದುಕೊಂಡ ನಂತರದ ಮೊತ್ತಮೊದಲ ಪೀಳಿಗೆ ಈ ನಮ್ಮ ನವಯುವಕರದ್ದು. ಎಂತಹ ಅಪಾಯಗಳೂ ಸವಾಲುಗಳೂ ಎದುರಾದರೂ ಅವುಗಳನ್ನು ಸಾಹಸ ಪರಾಕ್ರಮಗಳಿಂದ ನಿರ್ಭಯವಾಗಿ ಎದುರಿಸಲು ಹಾತೊರೆಯುವವರು ಇವರು. ಸ್ವಾಮಿ ವಿವೇಕಾನಂದರು ಹೇಳುವಂತೆ, ರಾಷ್ಟ್ರದ ಪುರೋಭಿವೃದ್ಧಿಗಾಗಿ ನಮಗೀಗ ಎಲ್ಲದಕ್ಕಿಂತ ಹೆಚ್ಚು ಆವಶ್ಯಕವಾಗಿರುವುದು ಕೂಡ – `ಅದಮ್ಯ ಸಾಹಸ, ವಿಪುಲ ಧೈರ್ಯ, ಅನಂತ ಶಕ್ತಿ ಮತ್ತು ಸಂಪೂರ್ಣ ವಿಧೇಯತೆ’ಯನ್ನು ಹೊಂದಿರುವ ಇಂತಹ ಯುವಕರ ಪಡೆಯೇ. `ಯಾವಾಗ ನೂರಾರು ಜನ ಉದಾರಹೃದಯಿಗಳಾದ ಸ್ತ್ರೀ-ಪುರುಷರು ಜೀವನದ ಸುಖ-ಸಂತೋಷಗಳನ್ನು ಅನುಭವಿಸಬೇಕೆಂಬ ಆಸೆಯೆಲ್ಲವನ್ನೂ ತೊರೆದು, ಬಡತನ ಮತ್ತು ಅಜ್ಞಾನದ ಕೂಪದಲ್ಲಿ ದಿನೇ ದಿನೇ ಆಳಆಳಕ್ಕೆ ಮುಳುಗುತ್ತಿರುವ ನಮ್ಮ ನಾಡಿನ ಲಕ್ಷಾಂತರ ಜನರ ಹಿತಕ್ಕೋಸುಗ ಆತುರರಾಗಿ ಕೈಲಾದಮಟ್ಟಿಗೆ ಪರಿಶ್ರಮಿಸುವರೋ ಆಗ ಮಾತ್ರ ಭರತಖಂಡ ಮೇಲೆ ಏಳುವುದು’ – ಎಂಬ ಸ್ವಾಮಿಜೀಯವರ ಅಂದಿನ ಕರೆ ಇಂದಿಗೂ ಪ್ರಸ್ತುತವಾಗಿದೆ. ಏಕೆಂದರೆ ಒಂದು ದೇಶದ ಅಭಿವೃದ್ಧಿಯ ಎಲ್ಲ ಭರವಸೆಗಳು ಆ ದೇಶದ ಯುವಕರನ್ನು ಆಶ್ರಯಿಸಿವೆ. ಮಾತೃಭೂಮಿಯ ಉತ್ಥಾನಕ್ಕಾಗಿ ಕೆಲಸಮಾಡಬಲ್ಲ ಕಾರ್ಯಕರ್ತರು ಎದ್ದುಬರುವುದು ಇಂತಹ ಯುವಕರ ಮಧ್ಯದಿಂದಲೇ; ಮಾತ್ರವಲ್ಲ, ಎಲ್ಲ ಜವಾಬ್ದಾರಿಗಳೂ ಇರುವುದು ಅವರ ಹೆಗಲಮೇಲೆಯೇ. ಈ ನಿಟ್ಟಿನಲ್ಲಿ ಸ್ವಚ್ಛಂದವಾಗಿ ಪ್ರವಹಿಸುತ್ತಿರುವ ಯುವಶಕ್ತಿಗೊಂದು ಯೋಗ್ಯ ದಿಕ್ಕು ದೊರೆತು, ರಾಷ್ಟ್ರನಿರ್ಮಾಣಕಾರ್ಯದಲ್ಲಿ ಸದ್ವಿನಿಯೋಗವಾಗುವಂತಾಗಲು ಚಾಲನೆ ದೊರೆಯಲಿ ಎಂಬುದು ನಮ್ಮ ಸದಾಶಯ.

– ಸಂಪಾದಕ

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ