![](http://utthana.in/wp-content/uploads/2017/07/utthana_july_2017_final_Page_001.jpg)
ಭಾರತದ ನಾಗರಿಕತೆ, ಇತಿಹಾಸ, ಅದರಲ್ಲೂ ಮುಖ್ಯವಾಗಿ ಋಗ್ವೇದದಂತಹ ಲಭ್ಯ ಪ್ರಾಚೀನ ಸಾಹಿತ್ಯದ ಕಾಲವು ಯೇಸುಕ್ರಿಸ್ತನ ಜನನಕಾಲದ ಸ್ವಲ್ಪ ಆಚೀಚೆ ಇರಬಹುದೇ ಹೊರತು, ಬಹಳಷ್ಟು ಹಿಂದೆ ಹೋಗುವಂತಿಲ್ಲ ಎಂಬ ಹಟಕ್ಕೆ ಬಿದ್ದ ಪಾಶ್ಚಾತ್ಯ, ವಿಶೇಷವಾಗಿ ಇಂಗ್ಲೆಂಡ್ಮೂಲದ ಇತಿಹಾಸಕಾರರು ಎಂತಹ ಆಭಾಸವನ್ನು ಸೃಷ್ಟಿಸಿದ್ದಾರೆಂದರೆ ಕ್ರಿಸ್ತಪೂರ್ವದ ಮೌರ್ಯಸಾಮ್ರಾಜ್ಯ, ಹಾಗೆಯೆ ಅದರ ಜೊತೆಗಿದ್ದ ಚಾಣಕ್ಯನ ಕಾಲ ಮತ್ತು ಋಗ್ವೇದದ ಕಾಲ ಎಡಬಲದಲ್ಲಿ ಇರುವಂತಾಗಿದೆ. ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಕಾಣುವ ಸಂಸ್ಕೃತಿ-ನಾಗರಿಕತೆಗಳು ಎಷ್ಟು ಮುಂದುವರಿದಂಥವು ಮತ್ತು ಋಗ್ವೇದದಲ್ಲಿ ಕಾಣುವ ಜನಜೀವನ, ಅವರ ನಂಬಿಕೆಗಳು, ಆರಾಧನಾಕ್ರಮ ಮುಂತಾದವು ಎಷ್ಟೊಂದು ಪ್ರಾಚೀನ ಇರಬಹುದೆಂಬ ಕಲ್ಪನೆ ಆ ಸ್ವಯಂಮಾನ್ಯ ಇತಿಹಾಸಕಾರರಿಗೆ ಬರುವುದೇ ಇಲ್ಲ; ಇರಲಿ. ಋಗ್ವೇದ, ಇತರ ವೇದಗಳು, ಉಪನಿಷತ್ತುಗಳು, ಬ್ರಾಹ್ಮಣಗಳು ಏನನ್ನು ಹೇಳುತ್ತವೆ? ಎಂತಹ ಜೀವನವನ್ನು ಚಿತ್ರಿಸುತ್ತವೆ? ಆ ಮುಗ್ಧ ಜೀವನದಲ್ಲಿ ಗೋವಿನ ಪಾತ್ರವೇನು ಮತ್ತು ಎಷ್ಟು? – ಮುಂತಾದ ಅಂಶಗಳನ್ನು ಗೋವಧೆ ಪ್ರತಿಬಂಧಕದಂತಹ ಕಾನೂನಿನ ಪ್ರಸ್ತಾವ ಆಗಿರುವ ಈ ಸಂದರ್ಭದಲ್ಲಿ ಚರ್ಚಿಸುವುದು ಅರ್ಥಪೂರ್ಣವಾಗಬಹುದು.
ಋಕ್ಸಂಹಿತೆಯ ಒಂದು ಸೂಕ್ತ (x-೮೭-೧೬) ಹೀಗಿದೆ :
ಯಃ ಪೌರುಷೇಯೇಣ ಕ್ರವಿಷಾ ಸಮಂಕ್ತೇ
ಯೋ ಅಶ್ವ್ಯೇನ ಪಶುನಾ ಯಾತುಧಾನಃ |
ಯೋ ಅಘ್ನ್ಯಾಯಾ ಭರತಿ ಕ್ಷೀರಮಗ್ನೇ
ತೇಷಾಂ ಶೀರ್ಷಾಣಿ ಹರಸಾಪಿ ವೃಶ್ಚ ||
(ಯಾವ ರಾಕ್ಷಸನು ಪುರುಷಸಂಬಂಧಿ ಮಾಂಸದಿಂದಲೂ, ಕುದುರೆ ಮೊದಲಾದ ಪ್ರಾಣಿಗಳ
ಮಾಂಸದಿಂದಲೂ, ವಧಿಸಲ್ಪಡಬಾರದ ಗೋವಿನ ಮಾಂಸದಿಂದಲೂ ಹೊಟ್ಟೆಯನ್ನು ತುಂಬಿಸಿಕೊಳ್ಳುವನೋ, ಗೋಕ್ಷೀರವನ್ನು ಅಪಹರಿಸುವನೋ ಅಂಥವರ ತಲೆಗಳನ್ನು
ಹೇ ಅಗ್ನಿದೇವ! ನಿನ್ನ ಜ್ವಾಲೆಗಳಿಂದ ಸುಟ್ಟು ನಾಶಮಾಡು.)
![](http://utthana.in/wp-content/uploads/2017/10/u.jpg)
ಆಗಿದ್ದು, ಪ್ರಾಣಿದಯೆಯ ಹಿನ್ನೆಲೆಯಲ್ಲಿ ಇದು ಬಹುದೊಡ್ಡ ಅಧ್ಯಾತ್ಮಸತ್ಯವಾಗಿದೆ ಎನ್ನುವ ಪ್ರಸಿದ್ಧ ವಿದ್ವಾಂಸ ಪ್ರೊ| ಕೆ.ಎಸ್. ನಾರಾಯಣಾಚಾರ್ಯರು ಗೋಮಾಂಸಭಕ್ಷಣೆಗೆ ನಮ್ಮ ಧರ್ಮದಲ್ಲಿ ಅವಕಾಶ ಇದೆ ಎಂಬುದೊಂದು ದುರ್ವಾದ ಎಂದು ತಿಳಿಸುತ್ತಾರೆ. (ನೋಡಿ – ವೇದಸಂಸ್ಕೃತಿಯ
ಪರಿಚಯ – ಸಂಪುಟ ೩)
ಮುಂದುವರಿದು ಪ್ರೊ| ಆಚಾರ್ಯರು, ಜಮದಗ್ನಿ ಋಷಿಗಳ ಆದೇಶವನ್ನು ಉಲ್ಲೇಖಿಸುತ್ತಾರೆ (ಋ.ಸಂ. – viii-೧೦೧-೧೫):
ಮಾತಾ ರುದ್ರಾಣಾಂ ದುಹಿತಾ ವಸೂನಾಂ
ಸ್ವಸಾದಿತ್ಯಾನಾಮಮೃತಸ್ಯ ನಾಭಿಃ |
ಪ್ರ ನು ವೋಚಂ ಚಿಕಿತುಷೇ ಜನಾಯ
ಮಾ ಗಾಂ ಅನಾಗಾಂ ಅದಿತಿಂ ವಧಿಷ್ಟ ||
(ಏಕಾದಶ)ರುದ್ರರಿಗೆ ಮಾತೆಯೂ, (ಅಷ್ಟ)ವಸುಗಳಿಗೆ ಪುತ್ರಿಯೂ, (ದ್ವಾದಶ)ಆದಿತ್ಯರಿಗೆ ಸಹೋದರಿಯೂ, ಅಮೃತಕ್ಕೆ ಉತ್ಪತ್ತಿಸ್ಥಾನಳೂ, ರೋಗರಹಿತಳೂ, ಗೋಸ್ವರೂಪಿಣಿಯೂ ಆಗಿರುವ ತೇಜೋವತಿಯಾದ ಈ ಅದಿತಿದೇವಿಯನ್ನು ಹಿಂಸಿಸಬೇಡಿ (ವಧಿಸಬೇಡಿ) ಎಂದು ಬುದ್ಧಿವಂತರಾದ ಜನರಿಗೆ ನಾನು ಉಪದೇಶಿಸುತ್ತೇನೆ.
ಈ ಜಮದಗ್ನಿ ಮಹರ್ಷಿಗಳು ಗೋವಿಗಾಗಿ ಪ್ರಾಣವನ್ನೇ ತೆತ್ತವರು. ಹೈಹಯ ಕಾರ್ತವೀರ್ಯನಿಂದ ಗೋವಿಗೆ ಬಾಧೆ ಒದಗಿದಾಗ ಜಮದಗ್ನಿಗಳು ಆತ್ಮಾರ್ಪಣೆಗೈದರು. ಅನಂತರ ಪರಶುರಾಮನು ದುಷ್ಟರನ್ನು ಶಿಕ್ಷಿಸಿ ಗೋವನ್ನು ಉದ್ಧರಿಸಿದ. ಸಕಲ ದೇವತೆಗಳ ವಾಸಸ್ಥಾನವೇ ಗೋವು; ಅಮೃತತತ್ತ್ವವೇ ಅದರ ಹೃದಯ ಎಂಬುದು ಇಲ್ಲಿ ಹೇಳಲ್ಪಟ್ಟಿದೆ. ಮುಂದಿನ ಒಂದು ಮಂತ್ರದಲ್ಲಿ ಜಮದಗ್ನಿ ಋಷಿಗಳು ಗೋಲಕ್ಷಣಗಳನ್ನು ಇನ್ನಷ್ಟು ವಿವರಿಸಿದ್ದಾರೆ (ಋ.ಸಂ – viii-೧೦೧-೧೬):
ವಚೋವಿದಂ ವಾಚಮುದೀರಯಂತೀಂ
ವಿಶ್ವಾಭಿಃ ಧೀಭಿಃ ಉಪತಿಷ್ಠಮಾನಾಂ |
ದೇವೀಂ ದೇವೇಭ್ಯಃ ಪರ್ಯೇಯುಷೀಂ ಗಾಂ
ಅಮಾವೃಕ್ತ ಮರ್ತ್ಯೋ ದಭ್ರಚೇತಾಃ ||
(ನಮಗೆ ವಾಕ್ಕನ್ನು ಕಲಿಸಿಕೊಡುವವಳೂ, ಶ್ರೇಷ್ಠವಾದ ವಾಕ್ಕನ್ನು ಉಚ್ಚರಿಸತಕ್ಕವಳೂ, ಸಕಲ ವಾಕ್ಕುಗಳಿಂದ ಸ್ತುತಿಸಲ್ಪಡುವವಳೂ, ದೇದೀಪ್ಯಮಾನವಾಗಿ ಬೆಳಗುವವಳೂ, ದೇವಪೂಜೆಯಲ್ಲಿ ನಮಗೆ ಸಹಾಯಾರ್ಥವಾಗಿ ಬಂದಿರುವವಳೂ ಆದ ಈ ಗೋಸ್ವರೂಪಿಣೀ ದೇವಿಯನ್ನು ಅಲ್ಪಬುದ್ಧಿಯ ಮಾನವನು ಮಾತ್ರ ಪರಿತ್ಯಜಿಸುತ್ತಾನೆ.)
ಇಲ್ಲಿ ಗೋವಿಗೂ ವಾಕ್ತತ್ತ್ವಕ್ಕೂ ನಿಕಟಸಂಬಂಧವನ್ನು ಹೇಳಿದೆ. ದೇವಪೂಜೆಗೆ ಗೋವು ಸಹಕರಿಸುವಂಥದ್ದು. ಗೋವನ್ನು ಹಿಂಸಿಸುವ ಮಾತಿರಲಿ; ಸೇವೆ ಮಾಡದೇ ಅದನ್ನು
ಉಪೇಕ್ಷಿಸುವವನು ಹಾಗೂ ಗೋಸಂಬಂಧ ಇಲ್ಲದವನನ್ನು ಅಲ್ಪಬುದ್ಧಿ (ದಭ್ರಚೇತಾಃ), ದಡ್ಡ ಎಂದು ಕರೆದಿದ್ದಾರೆ. ಗೋವಿಲ್ಲದೆ ಯಜ್ಞಯಾಗಾದಿಗಳಾಗಲಿ ದೈನಂದಿನ ಜೀವನವಾಗಲಿ ನಡೆಯುವಂತಿಲ್ಲ; ಗೋವಿಲ್ಲದವನ ಮನೆ ಹಾಳು ಎನ್ನುವವರೆಗೆ ಜಮದಗ್ನಿ ಋಷಿಗಳ ಮಾತಿನ ಅರ್ಥ ಚಾಚಿಕೊಳ್ಳುತ್ತದೆ.
ನಿರುಕ್ತದಲ್ಲಿ ಗೋವು
ವೇದಾರ್ಥಸಂಬಂಧಿಯಾದ ನಿರುಕ್ತವನ್ನು ರಚಿಸಿದ ಯಾಸ್ಕರ ಪ್ರಕಾರ ಗೋನಾಮವು ಪೃಥ್ವಿಯ ಸುಪ್ರಸಿದ್ಧ ೨೧ ವೈದಿಕ ನಾಮಗಳಲ್ಲಿ ಒಂದು. ಅವರ ಪ್ರಕಾರ ಈ ಪದದ ವ್ಯಾಖ್ಯೆ ಯದ್ದೂರಂ ಗತಾ ಭವತಿ | ಯಚ್ಚಾಸ್ಯಾಂ ಭೂತಾನಿ ಗಚ್ಛಂತಿ – ಅಂದರೆ ಬಹಳ ದೂರದವರೆಗೆ ವ್ಯಾಪಿಸಿರುವುದು ಅಥವಾ ಸಕಲ ಭೂತರಾಶಿಗಳೂ ಇದರ ಮೇಲೆ ಸಂಚಾರ ಮಾಡುತ್ತವೆ ಎಂಬುದಾಗಿ. ಮುಂದೆ ಅವರೇ ಅಥಾಪಿ ಪಶೂನಾಮೇವ ಭವತಿ ಏತಸ್ಮಾದೇವ ಎಂದಿದ್ದಾರೆ; ಅಂದರೆ ಪಶುವಿಶೇಷಕ್ಕೂ ಇದೇ ಕಾರಣದಿಂದ ಗೋಶಬ್ದವು ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ನಿರುಕ್ತದಲ್ಲಿ ಯಾಸ್ಕರು ಒಂಬತ್ತು ವೇದೋಕ್ತ ಗೋನಾಮಗಳನ್ನು ಒಟ್ಟಿಗೆ ಸೇರಿಸಿದ್ದಾರೆ. ಅವುಗಳೆಂದರೆ
– ಅಘ್ನ್ಯಾ, ಉಸ್ರಾ, ಉಸ್ರಿಯಾ, ಅಹೀ, ಮಹೀ, ಅದಿತಿ, ಇಲಾ, ಜಗತೀ ಹಾಗೂ ಶಕ್ವರೀ ಎಂಬುದಾಗಿ
ಪ್ರೊ| ನಾರಾಯಣಾಚಾರ್ಯರು ವಿವರಿಸುತ್ತಾರೆ. ಅಘ್ನ್ಯಾ ಎಂದರೆ ಕೊಲ್ಲಲ್ಪಡದ ಪ್ರಾಣಿ ಅಥವಾ ದುರ್ಭಿಕ್ಷವನ್ನು ನಿವಾರಿಸುವ ಪ್ರಾಣಿ. ಉತ್ತಮವಾದ ಹಾಲು, ಬೆಣ್ಣೆ, ತುಪ್ಪ ಎಂಬ ಭೋಗಸಾಧನಗಳು ಇದರಲ್ಲಿ ಇವೆ. ಆದುದರಿಂದ ಉಸ್ರಾ (ಉತ್ಸ್ರಾ). ಮಹ್ಯತೇ ಇತಿ ಮಹೀ – ಅಂದರೆ ಸರ್ವದೇವತಾಸ್ವರೂಪಳಾಗಿ ದೇವತೆಗಳಿಂದಲೂ ಪೂಜಿಸಲ್ಪಡುವವಳು ಎಂಬುದಾಗಿ. ನ ದ್ಯತಿ ಇತಿ ಅದಿತಿಃ – ಅಂದರೆ ಕ್ಷಯರಹಿತಳು, ನಾಶರಹಿತಳು ಎಂದರ್ಥ.
ಇನ್ನು ಈಡ್ಯತೇ ಇತಿ ಇಳಾ (ಇಲಾ) – ಅಂದರೆ ಸ್ತುತಿಸಲ್ಪಡುವವಳು ಎಂದರ್ಥ. ಹಾಗೆಯೇ ಗೋಶಬ್ದಕ್ಕೆ ಪರ್ಯಾಯವಾಗಿ ಧೇನು ಎನ್ನುವ ಶಬ್ದ ಕೂಡ ಇದ್ದು, ಅದನ್ನು ಧಯತೇಸೌ ವತ್ಸೇನ ಇತಿ, ತರ್ಪಯತ್ಯಸೌ ಪಯಸಾ (ಕರುವಿನಿಂದ ಇವಳ ಹಾಲು ಹೀರಲ್ಪಡುತ್ತದೆ, ಈಕೆ ಹಾಲನ್ನು ಕೊಟ್ಟು ತೃಪ್ತಿಪಡಿಸುತ್ತಾಳೆ) ಎಂದು ಅರ್ಥೈಸಲಾಗಿದೆ.
ಇನ್ನೊಂದು ವಿಶೇಷವೆಂದರೆ ಈ ಶಬ್ದಗಳು ಪಶುವಾದ ಗೋವಿಗೂ ಅದು ಸಂಕೇತಿಸುವ ಜ್ಞಾನಗೋವಿಗೂ ಏಕಕಾಲಕೆ ಹೊಂದುತ್ತವೆ. ಇದು ಸಾಂಕೇತಿಕವಾಗಿ ವೇದವಾಕ್ಕಿಗೂ ಅನ್ವಯವಾಗುತ್ತದೆಂದು, ವಾಗೇಷಾ ಮಾಧ್ಯಮಿಕಾ ಧರ್ಮಧುಕ್ ಇತಿ ಯಾಜ್ಞಿಕಾಃ ಎಂಬುದಾಗಿ ಸ್ಪಷ್ಟವಾಗಿಯೇ ಹೇಳಿದ್ದಾರೆ. ಋಕ್ಸಂಹಿತೆಯ ಒಂದು ಮಂತ್ರ(ii೩-೧೯) ದ ಅರ್ಥ ಹೀಗಿದೆ : ಉತ್ತಮವಾದ ಹಾಲನ್ನು ಕೊಡುವ ಈ ಕಾಮಧೇನುವನ್ನು ನಾನು ಸ್ತೋತ್ರದಿಂದ ಆಹ್ವಾನಿಸುತ್ತೇನೆ.
ಉತ್ತಮವಾದ ಹಸ್ತವುಳ್ಳ ನಮ್ಮ ಅಧ್ವರ್ಯುವು ಈ ಗೋವಿನಿಂದ ಹಾಲನ್ನು ಕರೆಯುತ್ತಾನೆ. ಹೀಗೆ ಶ್ರೇಷ್ಠವಾದ ಯಜ್ಞಾರ್ಹವಾದ ಈ ಹಾಲನ್ನು ಭಗವಂತನಾದ ಸವಿತೃವು ಅನುಗ್ರಹಿಸಲಿ. ಈ ಸವಿತೃವಿನ ಪ್ರವರ್ಗ್ಯವು ಉಜ್ಜ್ವಲವಾಗಿದೆ. ಆದುದರಿಂದ ವಿಶೇಷ ರೀತಿಯಿಂದಲೇ ನಾನು ಧೇನುವನ್ನು
ಆಹ್ವಾನಿಸುತ್ತೇನೆ.
![](http://utthana.in/wp-content/uploads/2017/10/UTTHANA_COW-5.jpg)
ದೇವೀಂ ವಾಚಮಜನಯಂತ ದೇವಾಃ
ತಾಂ ವಿಶ್ವರೂಪಾಃ ಪಶವೋ ವದಂತಿ |
ಸಾ ನೋ ಮಂದ್ರೇಷಮೂರ್ಜಂ ದುಹಾನಾ
ಧೇನುರ್ವಾಗಸ್ಮಾನುಪ ಸುಷ್ಟುತೈತು ||
ಗೋಸೂಕ್ತ
ಋಗ್ವೇದದ ಗೋಸೂಕ್ತ(x೧೬೯)ದಲ್ಲಿ ನಾಲ್ಕು ಮಂತ್ರಗಳಿವೆ. ಅದಕ್ಕೆ ಗೋವುಗಳೇ ದೇವತೆಗಳು. ಆ
ಸೂಕ್ತಗಳ ಭಾವ ಅತ್ಯಂತ ಕಾವ್ಯಾತ್ಮಕ ಕೂಡ ಆಗಿರುವುದನ್ನು ಗಮನಿಸಬಹುದು:
“ವಾಯುವು ಗೋವುಗಳ ಬಳಿ ಸುಖವಾಗಿ ಬೀಸುತ್ತ ಬರಲಿ. ಗೋವುಗಳು ಪುಷ್ಟಿಕರವಾದ ಹುಲ್ಲು ಮೊದಲಾದ ಸಸ್ಯಗಳನ್ನು ಚೆನ್ನಾಗಿ ತಿನ್ನುವಂತಾಗಲಿ. ಸಮೃದ್ಧವಾದ ಮತ್ತು ಜೀವನವನ್ನು ಧನ್ಯವನ್ನಾಗಿ ಮಾಡುವ (ಜೀವಧನ್ಯಾಃ) ನೀರನ್ನು ಕುಡಿಯುವಂತಾಗಲಿ. ಹೇ ರುದ್ರದೇವ! ನಮಗೆ ಅನ್ನವನ್ನು ಒದಗಿಸುವ, (ತಮ್ಮ) ಕಾಲಮೇಲೆ ನಿಂತು ಬದುಕುವ ಈ ಗೋವುಗಳಿಗೆ ಸುಖವನ್ನೇ ಉಂಟುಮಾಡು.”
“ಯಾವ ಗೋವುಗಳು ಒಂದೇ ರೂಪವನ್ನು ಹೊಂದಿವೆಯೋ ಅಥವಾ ಸಮಾನಾಕಾರಗಳನ್ನು
ಪಡೆದಿವೆಯೋ ಇಂತಹ ಗೋವುಗಳ ಹೆಸರುಗಳನ್ನೆಲ್ಲ ಅಗ್ನಿದೇವನು ತನ್ನ ಯೋಗಬಲದಿಂದ ತಾನೊಬ್ಬನೇ ತಿಳಿಯಬಲ್ಲನು. ಅಲ್ಲದೆ ಈ ಗೋವುಗಳನ್ನು ಸೃಷ್ಟಿಸಿದವರು ಆಂಗಿರಸ ವಂಶದ ಋಷಿಗಳು. ಅವರ ತಪಸ್ಸಾಮರ್ಥ್ಯವೂ ಯಜ್ಞಾಚರಣೆಯೂ ಇವುಗಳ ಸೃಷ್ಟಿಗೆ ಸಾಧನವಾದವು.
ಇಂತಹ ಸಮಸ್ತ ಗೋವುಗಳಿಗೂ ಪರ್ಜನ್ಯ ದೇವನು ಸುಖವನ್ನು ಕೊಡಲಿ.”
“ಗೋವುಗಳು ಯಾಗಾರ್ಹರಾದ ದೇವತೆಗಳಿಗೆ ಮಾತ್ರ ತಮ್ಮ ಆತ್ಮೀಯ ಶರೀರವನ್ನೇ ಅರ್ಪಿಸುತ್ತವೆ. ಇವುಗಳ ಸಮಸ್ತ ರೂಪಗಳನ್ನು ಸೋಮದೇವನೊಬ್ಬನೇ ತಿಳಿದಿದ್ದಾನೆ. ಕ್ಷೀರಸಮೃದ್ಧವಾದ ಮತ್ತು ಸಂತಾನವನ್ನು ಹೊಂದಿದ (ಪ್ರಜಾವತೀಃ) ಈ ಗೋವುಗಳನ್ನು, ಹೇ ಇಂದ್ರದೇವ! ನೀನಾಗಿಯೇ ನಮ್ಮ ಕೊಟ್ಟಿಗೆಯಲ್ಲಿ ತಂದು ಕಟ್ಟು.”
“ಸೃಷ್ಟಿಕರ್ತನಾದ ಪರಮಾತ್ಮನು ಅವನನ್ನೇ ಸ್ತುತಿಮಾಡುವ ನನಗಾಗಿ ಈ ಗೋವುಗಳನ್ನು ಕೊಟ್ಟಿದ್ದಾನೆ. ವಿಶ್ವೇದೇವತೆಗಳು, ಪಿತೃಗಳು ಸಮ್ಮತಿಸುವಂತೆ ಮಾಡಿ ಮಂಗಳಕರವಾದ ಈ
ಗೋವುಗಳನ್ನು ತಾನಾಗಿಯೇ ನಮ್ಮ ಕೊಟ್ಟಿಗೆಯಲ್ಲಿ ತಂದು ಕಟ್ಟುವಂತಾಗಲಿ. ಈ ಗೋವು ಸಂತತಿಯಿಂದಲೇ ನಾವು ಸುಖಸಮೃದ್ಧರಾಗಿರೋಣ.
ಈ ಸೂಕ್ತಗಳ ಬಗೆಗೆ ಪ್ರೊ| ಆಚಾರ್ಯರು ಕೆಲವು ಪ್ರಶ್ನೆಗಳನ್ನೆತ್ತಿ ತಮ್ಮದಾದ ಉತ್ತರಗಳನ್ನು ನೀಡುತ್ತಾರೆ. ಇದರಲ್ಲಿ ತಿಳಿದುಬರುವ ಚರಿತ್ರೆ ಏನು? ಇವುಗಳಿಗೆ ಒಂದೇ ರೂಪವೂ ವಿವಿಧ ರೂಪಗಳೂ ಸಮಾನರೂಪವೂ ಇದೆ ಎಂಬುದನ್ನು ಒಪ್ಪಿದರೂ ಇವುಗಳ ಹೆಸರುಗಳನ್ನೆಲ್ಲ ಅಗ್ನಿದೇವನೊಬ್ಬನೇ ತಿಳಿದಿದ್ದಾನೆ ಎಂಬುದರ ಅರ್ಥವೇನು? ಗೋವುಗಳು ದೇವತೆಗಳಿಗಾಗಿ ತಮ್ಮ ಆತ್ಮೀಯ ಶರೀರ
ಸಮರ್ಪಣೆ ಮಾಡಿವೆ ಎಂದರೆ ಏನರ್ಥ? ಇದರ ಗುಟ್ಟು ಸೋಮದೇವನಿಗೇ ಏಕೆ ತಿಳಿದಿರಬೇಕು? ಸ್ತೋತ್ರ ಮಾಡುವ ಋಷಿಗಾಗಿ ಮಾತ್ರ ಭಗವಂತನಿಂದ ಗೋವುಗಳು ಕೊಡಲ್ಪಟ್ಟಿವೆ ಎಂದರೆ ಏನರ್ಥ? ವಿಶ್ವೇದೇವತೆಗಳು ಏತಕ್ಕೆ ಇದರ ರಕ್ಷಕರು? ಇಂದ್ರನೇ ಇವುಗಳನ್ನು ಋಷಿಗಳ ಕೊಟ್ಟಿಗೆಯಲ್ಲಿ ತಂದು ಕಟ್ಟಲಿ ಎಂಬ ಪ್ರಾರ್ಥನೆಗೆ ಚಾರಿತ್ರಿಕ ಅರ್ಥವೇನಾದರೂ ಇದೆಯೇ – ಎಂಬ ಪ್ರಶ್ನೆಗಳನ್ನು
ಎತ್ತುತ್ತಾರೆ.
ಅದಕ್ಕೆ ಉತ್ತರರೂಪವಾಗಿ: ಇಲ್ಲಿ ಗೋ ಎಂದರೆ ಬೆಳಕು. ಇದು ಕೇವಲ ಭೌತಿಕ ಬೆಳಕಲ್ಲ. ಋಷಿಗಳಿಗೆ
ತಮ್ಮ ಅಂತರಂಗದ ಸಾರ್ಥಕ್ಯಕ್ಕೆ ಬೇಕಾದ ಒಳಗಿನ ಬೆಳಕು ಎಂದಿದ್ದಾರೆ. ಅದರ ಪರಿಪೋಷಣೆಗಾಗಿ ಉದಿಸಿದ ಪ್ರಾರ್ಥನೆ ಇದು. ಇದಕ್ಕಾಗಿಯೇ ಈ ಬೆಳಕಿಗೂ ಅಗ್ನಿ, ಸೋಮ, ಇಂದ್ರ, ಪ್ರಜಾಪತಿ, ವಿಶ್ವೇದೇವತೆಗಳಿಗೂ ಸಂಬಂಧ ಇರುವುದಾಗಿದೆ. ಅಗ್ನಿಯು ಭೂ-ತತ್ತ್ವ ಅಭಿಮಾನಿ ದೇವತೆಯಾಗಿದ್ದು, ಮಾನವನಿಗೆ ಅತ್ಯಂತ ಸಮೀಪದಲ್ಲಿರುವ ಮೊದಲ ದೇವತೆ. ಇವನೇ ದೇವತೆಗಳ ಮುಖ ಹಾಗೂ
ಪುರೋಹಿತ. ಗೋವುಗಳಂತೆ ದಿವ್ಯಜ್ಞಾನದ ಬೆಳಕಿನ ಕಿರಣಗಳಿಗೂ ಹುಲ್ಲು, ನೀರು ಆವಶ್ಯಕ. ಪೋಷಣೆಯಿಲ್ಲದ ಜ್ಞಾನ ಸತ್ತುಹೋಗುವುದು ಸಹಜ. ಇವುಗಳ ಜೀವನವನ್ನು ಸಾರ್ಥಕಮಾಡುವ ನೀರಿಗೆ ಋಷಿಗಳು ಜೀವಧನ್ಯಾಃ ಎಂಬ ವಿಶೇಷಣವನ್ನು ಕೊಟ್ಟಿದ್ದಾರೆ. ಆಗ ಈ ಗೋವುಗಳು ತಮ್ಮ
ಕಾಲಿನ ಮೇಲೆ ಸ್ವತಂತ್ರವಾಗಿ ನಿಲ್ಲಬಲ್ಲವು.
ರುದ್ರನು ಮೃತ್ಯುದೇವತೆ. ಅವನು ಈ ಒಳಗಿನ ಬೆಳಕನ್ನು ಕೊನೆಗಾಣಿಸದಿರಲಿ ಎಂದು ಮಾಡಿರುವ ಪ್ರಾರ್ಥನೆಯು ಜ್ಞಾನದ ಅನಂತತೆಯನ್ನೂ ಸಾರ್ವಕಾಲಿಕತೆಯನ್ನೂ ಬಯಸಿ ಮಾಡಿದ ಪ್ರಾರ್ಥನೆಯೂ ಆಗುತ್ತದೆ. ಕಣ್ಣಿಗೆ ಕಾಣುವ ಗೋವುಗಳಿಗೆ ಕೆಲವೊಮ್ಮೆ ಸಮಾನರೂಪ ಆಕಾರ ಬಣ್ಣಗಳೂ ವಿವಿಧರೂಪ ಆಕಾರಗಳೂ ಇರುವಂತೆ ಸೂರ್ಯಬಲವನ್ನು ಆಶ್ರಯಿಸಿದ ಬೆಳಕಿನ ಕಿರಣಗಳಿಗೂ ಬೇರೆಬೇರೆ ಬಣ್ಣಗಳಿರುತ್ತವೆ. ಹಾಗೆಯೇ ಜ್ಞಾನಸೂರ್ಯನ ಕಿರಣಗಳಿಗೂ ಜ್ಞಾನಬಲದಿಂದಾಗಿ ಬೇರೆಬೇರೆ
ಬಣ್ಣಗಳಿರುವುದು ಸಹಜ. ಜ್ಞಾನಪ್ರಕಾರವು ಸರ್ವದಾ ಒಂದೇ ಆಗಿರುವುದಿಲ್ಲ. ಆ ರೀತಿಯಲ್ಲಿ ಇವುಗಳನ್ನೆಲ್ಲ ಅಗ್ನಿದೇವನು ತಿಳಿದಿರುವನೆಂಬುದರಲ್ಲಿ ಅರ್ಥವಿದೆ.
ತಪಸ್ಸು ಮಾಡಿದರೆ ಭೃಗುಗಳಂತೆ, ಆಂಗಿರಸರಂತೆ ತಪಸ್ಸು ಮಾಡಬೇಕೆಂದು ಹೇಳುವ ಒಂದು ವೇದವಾಕ್ಯವಿದೆ. ವೈದಿಕ ಜ್ಞಾನಸಂಪತ್ತಿನಲ್ಲಿ ಆಂಗಿರಸ ಋಷಿಗಳ ಪಾಲು, ಕೊಡುಗೆ ಬಹಳ ಇದೆ. ಆದ್ದರಿಂದ ಆಂಗಿರಸರು ತಪಸ್ಸಿನಿಂದ ಈ ಲೋಕಕ್ಕೆ ತಂದ ಗೋವುಗಳೆಂದರೆ ತಮ್ಮ ತಪಸ್ಸಿನ ಮಹಿಮೆಯಿಂದ ಸಾಕ್ಷಾತ್ಕರಿಸಿಕೊಂಡು ಈ ಲೋಕಕ್ಕೆ ಶ್ರುತಪಡಿಸಿದ ಜ್ಞಾನಸೂರ್ಯನ ಕಿರಣಗಳು ಎಂಬುದೇ ಸಮಂಜಸವಾದ ಅರ್ಥವೆಂದು ವೇದಸಂಸ್ಕೃತಿಯ ಪರಿಚಯ ಲೇಖಕರು ಹೇಳುತ್ತಾರೆ.
ವಿಷ್ಣುಸೂಕ್ತದಲ್ಲಿ ಗೋವು
ಋಗ್ವೇದದ ಪ್ರಸಿದ್ಧ ವಿಷ್ಣುಸೂಕ್ತ(i೧೫೪-೬)ದಲ್ಲಿ, ಇದರ ರೂಪಾಂತರವಾಗಿ ಕೃಷ್ಣಯಜುಸ್ಸಂಹಿತೆ(i೩೬)
ಯಲ್ಲಿ ಬಂದಿರುವ ವಿಷ್ಣು ಅನುವಾಕದಲ್ಲೂ ಪರಮಾತ್ಮನು ಬಲಿಷ್ಠವಾದ ದೊಡ್ಡ ಕೊಂಬುಗಳುಳ್ಳ ಚುರುಕು ಪಾದಗತಿಯ ಗೋವುಗಳ ಮಧ್ಯದಲ್ಲೇ ಸರ್ವದಾ ವಾಸಿಸುವುದಾಗಿ ವರ್ಣಿಸಲಾಗಿದೆ:
ಗಮಧ್ಯೇ ಗಾವೋ ಯತ್ರ ಭೂರಿಶೃಂಗಾ ಅಯಾಸಃ
ಅತ್ರಾಹ ತದುರುಗಾಯಸ್ಯ ವಿಷ್ಣೋಃ ಪರಮಂ ಪದಂ ಅವಭಾತಿ ಭೂರೇಃ|
ವಿಷ್ಣೋಃ ಕರ್ಮಾಣಿ ಪಶ್ಯತ ಯತೋ ವ್ರತಾನಿ ಪಸ್ಪಶೇ ಇಂದ್ರಸ್ಯ ಯುಜ್ಯಃ ಸಖಾ
ತದ್ವಿಷ್ಣೋಃ ಪರಮಂ ಪದಂ ಸದಾ ಪಶ್ಯಂತಿ ಸೂರಯಃ ದಿವೀವ ಚಕ್ಷುರಾತತಂ ||
(ಎಲ್ಲಿ ಬಲಿಷ್ಠವಾದ ಕೊಂಬುಗಳುಳ್ಳ ಚುರುಕಾದ ಗೋವುಗಳು ಇವೆಯೋ ಅಲ್ಲಿ, ಗೋಮಧ್ಯದಲ್ಲಿ, ಮಹಾಗತಿಯನ್ನುಳ್ಳ, ಸ್ತೋತ್ರಪ್ರಿಯನಾದ, ಮಹಾವಿಭೂತಿಯಾದ ವಿಷ್ಣುವಿನ ಪರಮಪದವು
ಪ್ರಕಾಶಿಸುತ್ತಿದೆ. ಶ್ರೀವಿಷ್ಣುವಿನ ಅದ್ಭುತವಾದ (ದಶಾವತಾರಾದಿ) ಕಾರ್ಯಗಳನ್ನು ನೋಡಿರಿ! ಇವನ (ಲೋಕಸಂರಕ್ಷಣರೂಪ) ವ್ರತಗಳು ವ್ಯಕ್ತವಾಗಿವೆ! ಇಂದ್ರನ ಸಹಜ ಸ್ನೇಹಿತನಲ್ಲವೆ?
ಇಂತಹ ವಿಷ್ಣುವಿನ ಪರಮಪದವನ್ನು ನಿತ್ಯಸೂರಿಗಳು ಸರ್ವದಾ ದ್ಯುಲೋಕದಲ್ಲಿ ವ್ಯಾಪ್ತವಾದ ಕಣ್ಣಿನಂತೆ ದರ್ಶನ ಮಾಡುತ್ತಲೇ ಇರುವರು.
ಇದು ಸಕಲ ಗೋಸಮೂಹ ಪರಿವೃತನಾದ ಗೋಪಾಲನ, ಗೋವಿಂದನ ವರ್ಣನೆ. ಸರ್ವೋಪನಿಷದೋ ಗಾವಃ ದೋಗ್ಧಾ ಗೋಪಾಲನಂದನಃ ಎನ್ನುವ ಗೀತಾಧ್ಯಾನಶ್ಲೋಕದ ಗೋಪಾಲವರ್ಣನೆಗೆ ಈ ವಿಷ್ಣುಸೂಕ್ತವೇ ಆಧಾರ. ಇಲ್ಲಿ ಜ್ಞಾನವೆಂಬ ಬೆಳಕು ಉಪನಿಷತ್ತಿನ ರೂಪದ ಗೋವುಗಳೊಡನೆ ತಾದಾತ್ಮ್ಯ ಹೊಂದಿರುವುದು ಗಮನೀಯ. ವಿಷ್ಣುಸೂಕ್ತದ ಸಂದರ್ಭದಲ್ಲಿ ಯಾಸ್ಕರು ಗೋ
ಶಬ್ದಕ್ಕೆ ಬೆಳಕು ಎಂದೇ ಅರ್ಥಮಾಡಿದ್ದಾರೆ.
ವಿಷ್ಣುಸಹಸ್ರನಾಮದಲ್ಲಿ ಗೋವಿಂದಃ ಗೋವಿದಾಂಪತಿಃ ಎನ್ನುವ ಹೆಸರುಗಳಿವೆ. ಅಲ್ಲಿ ಗೋಪತಿಃ ಎಂಬುದಕ್ಕೆ ಸಕಲ ಛಂದೋಬದ್ಧವಾದ ವೇದಭಾಷಾವೇಷವುಳ್ಳ ವಾಕ್ಕಿಗೆ ದಿಗ್ದರ್ಶನ ಮಾಡುವವನು ಎಂದು ಅರ್ಥೈಸಲಾಗಿದೆ. ಗೋಪಾಲ ತತ್ತ್ವವು ವಾಸುದೇವ ತತ್ತ್ವ(ಈಶಾವಾಸ್ಯ)ದಂತೆ ಪ್ರಾಚೀನವೂ ವೈದಿಕವೂ ಆಗಿದೆ. ಆದರೆ ಕೆಲವು ಸಂಶೋಧಕರು ಪುರಾಣಗಳಿಗೂ ವೇದಕ್ಕೂ ವಿರೋಧ ಕಲ್ಪಿಸುವುದರಲ್ಲೇ ತತ್ಪರರಾಗಿದ್ದಾರೆಂದು ಪ್ರೊ| ಕೆ.ಎಸ್. ನಾರಾಯಣಾಚಾರ್ಯರು ಆಕ್ಷೇಪಿಸುತ್ತಾರೆ. ದೇವತೆಗಳೆಂದರೆ ಲೋಕವನ್ನು ಬೆಳಗುವ ಪಾವನಶಕ್ತಿಗಳು; ವೇದಾಂತ ಅಂತರ್ಗತ ಜ್ಞಾನಗೋವುಗಳು. ಈ ದೇವತೆಗಳಿಗಾಗಿ ಮತ್ತು ಅವರ ಕ್ಷೇಮಾರ್ಥವಾಗಿ ತಮ್ಮನ್ನು ಅರ್ಪಿಸಿಕೊಂಡಿರುವುದರಲ್ಲಿ ಲೋಕಹಿತಾರ್ಥವಿರುವುದು ಸ್ಪಷ್ಟ.
ಅನೇಕ ವತ್ಸಸಮೇತವಾದ ಜ್ಞಾನಗೋವನ್ನು ತಮ್ಮ ಕೊಟ್ಟಿಗೆಯಲ್ಲಿ ಕಟ್ಟುವಂತೆ ಇಂದ್ರನಿಗೆ (ವೈದಿಕಋಷಿಗಳು) ಮಾಡಿದ ಪ್ರಾರ್ಥನೆಯು ನಿರಂತರ ಜ್ಞಾನಸಂತತಿಗಾಗಿ ಭಗವಂತನಿಗೆ ಮಾಡಿದ ಪ್ರಾರ್ಥನೆಯೇ ಸರಿ. ಅಷ್ಟೇಕೆ, ಸಮಸ್ತ ದೇವತೆಗಳೂ ಪ್ರಸ್ತುತ ಗೋಸಂರಕ್ಷಕರಾದದ್ದರಿಂದ ಮತ್ತು ಅವು ಸತ್ಪಾತ್ರನಿಗೆ ದೈವಾನುಗ್ರಹದಿಂದ ಲಭಿಸತಕ್ಕವಾದದ್ದರಿಂದ ಆ ಭಗವತ್ಕೃಪೆಗಾಗಿಯೇ ಋಕ್ಸೂಕ್ತಗಳು ಮೇಲಿಂದಮೇಲೆ ಪ್ರಾರ್ಥನೆ ಮಾಡುತ್ತವೆ. ಇದು ವೈದಿಕ ಮಹರ್ಷಿಗಳ ದಿವ್ಯಜ್ಞಾನದಾಹಕ್ಕೆ ಉಜ್ಜ್ವಲ ನಿದರ್ಶನವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಜೊತೆಗೆ ಗೋವುಗಳು ವೈದಿಕ ಋಷಿಗಳ ಭೌತಿಕ ಮತ್ತು ಆಧ್ಯಾತ್ಮಿಕ ಜೀವನಗಳೆರಡನ್ನೂ ಬೆಸೆದುಕೊಂಡಿರುವುದು ಮತ್ತೆಮತ್ತೆ ಗಮನಕ್ಕೆ ಬರುತ್ತದೆ.
ಮುಂದೆ, ಗ್ರಂಥವು (ವೇದಸಂಸ್ಕೃತಿ ಪರಿಚಯ) ಗೋವುಗಳೇ ನಡೆಸಿದವೆನ್ನುವ ಗವಾಮಯನ ಯಾಗ, ವೇದೋಕ್ತ ವಸಿಷ್ಠ-ವಿಶ್ವಾಮಿತ್ರರ ಜಗಳದಲ್ಲಿ ಶಬಲಾ ಎನ್ನುವ ಕಾಮಧೇನು ಸೇರಿಕೊಂಡಿರುವುದು, ಹಾಗೆಯೇ ಪಣಿಗಳು ಎನ್ನುವ ಜನರು (ರಾಕ್ಷಸರು?) ಗೋವುಗಳನ್ನು ಅಪಹರಿಸಿಕೊಂಡು
ಹೋಗಿ ಗುಹೆಯಲ್ಲಿ ಬಚ್ಚಿಟ್ಟದ್ದು, ಇಂದ್ರ ಸುರಮೆಯ ಮೂಲಕ ಅದನ್ನು ಪತ್ತೆಹಚ್ಚಿ ಬಿಡಿಸಿಕೊಂಡು ಬರುವುದು ಮುಂತಾದ ಕಥೆಗಳನ್ನು, ಅವುಗಳ ಹಿನ್ನೆಲೆಗಳನ್ನು ವಿವರಿಸುತ್ತದೆ.
ಗವಾಮಯನ ಯಾಗ
ಗವಾಮಯನ ಯಾಗದ ಕಥೆ ತೈತ್ತಿರೀಯ ಸಂಹಿತೆಯಲ್ಲಿ (vii೫) ಬರುವಂಥದು. ಒಂದು ಕಾಲದಲ್ಲಿ ಗೋವುಗಳಿಗೆ ಕೊಂಬುಗಳು ಇರಲಿಲ್ಲ. ಅದಕ್ಕಾಗಿ ಅವು ತಮಗೆ ಕೊಂಬುಗಳು ಬರಬೇಕೆಂಬ ಆಶೆಯಿಂದ (ಶೃಂಗಾಣಿನೋ ಜಾಯಂತಾ ಇತಿ ಕಾಮೇನ) ಈ ಸತ್ರವನ್ನು ನಡೆಸಿದವು. ಯಾಗವು ಹತ್ತು ತಿಂಗಳು ನಡೆಯುವಷ್ಟರಲ್ಲಿ ಕೆಲವು ಗೋವುಗಳಿಗೆ ಕೊಂಬುಗಳು ಹುಟ್ಟಿದವು. ಮತ್ತೆ ಕೆಲವಕ್ಕೆ ಕೊಂಬುಗಳು ಬರಲಿಲ್ಲ. ಅವು ಇನ್ನೂ ಎರಡು ತಿಂಗಳು, ಅಂದರೆ ಸಂವತ್ಸರ ಪೂರ್ತಿಯಾಗುವತನಕ ಆ ವ್ರತವನ್ನು ಪೂರ್ತಿ ನಡೆಸಿ ನಾವೂ ನಮ್ಮ ಇಷ್ಟಾರ್ಥವನ್ನು ಪಡೆದೆವು ಎಂದು ಹೇಳಿಕೊಂಡವು. ಹೀಗೆ ಕೊಂಬುಗಳನ್ನು ಪಡೆದ ಗೋವುಗಳು ಮತ್ತು ಪಡೆಯದ ಗೋವುಗಳು ಎರಡೂ ಯಜ್ಞವನ್ನು ನಿಲ್ಲಿಸಿದವು; ಇದೇ ಸಂವತ್ಸರವೆಂಬ ಗೋಸತ್ರ.
ಇದರಲ್ಲಿ ಮಾರ್ಮಿಕಾರ್ಥ ಇಲ್ಲದಿದ್ದರೆ ವೇದವು ಮುಂದಿನ ಫಲಶ್ರುತಿಯನ್ನು ಏಕೆ ಹೇಳುತ್ತದೆಂದು ವಿವರಿಸಲು ಸಾಧ್ಯವಾಗಲಾರದು ಎಂದು ಲೇಖಕರು ಹೇಳುತ್ತಾರೆ. ಏಕೆಂದರೆ ಯಾವ ವಿದ್ವಾಂಸನು ಇದನ್ನು ತಿಳಿದು ಈ ಯಾಗವನ್ನು ಆಚರಿಸುವನೋ ಅವನು ಸಮೃದ್ಧಿಯನ್ನು ಹೊಂದುವನು.
ಯಾರು ಸಂವತ್ಸರಕಾಲ ಈ ಯಾಗವನ್ನು ಆಚರಿಸುವರೋ ಅವರು ಸಮುದ್ರವನ್ನು ಈಜಿ ದಡ ಸೇರುವರು. ಯಾರು ಸಮುದ್ರದ ಆಚೆಯ ದಡವನ್ನು ಕಾಣಲಾರರೋ ಅವರು ಸಮುದ್ರವನ್ನು ಈಜಲಾರರು ಎನ್ನುವ ಮಾತುಗಳು ಅಲ್ಲಿವೆ. ಇಲ್ಲಿ ಬ್ರಹ್ಮವಾದಿಗಳು ಸಭಾಸೀನರಾಗಿ, ಮಾನವನು
ನಿರ್ಗಮಿಸುವ ದಾರಿ ಯಾವುದು? ಎಂದು ಕೇಳುತ್ತಾರೆ. ಅದಕ್ಕೆ ದೇವಯಾನದಿಂದ ಎಂದು ಉತ್ತರಿಸಲಾಗಿದೆ. ಛಂದಸ್ಸುಗಳೇ ದೇವಯಾನ. ಮೇಲೆ ಹೇಳಿದ ಯಾಗಾರ್ಥವನ್ನು ಯಾರು ತಿಳಿಯುವರೋ ಅವರು ತಮ್ಮ ಕಾಲ ಮೇಲೇ ನಡೆದು ಹೋಗುವರು ಮತ್ತು ಆ ನಡಿಗೆಯಿಂದಲೇ ಬಯಸಿದುದನ್ನು ಪಡೆಯುವರು ಎಂದು ತಿಳಿಸಲಾಗಿದೆ.
ಪ್ರಸ್ತುತ ಯಾಗಕ್ಕೆ ಮಾರ್ಮಿಕ ಅರ್ಥ ಇರುವುದನ್ನು ಗುರುತಿಸಲಾಗಿದೆ. ಕೆಲವು ಗೋವುಗಳು ಹತ್ತು ತಿಂಗಳು ಯಾಗ ಮಾಡಿ ಕೊಂಬು ಪಡೆದವೆಂದು ಇಲ್ಲಿ ಹೇಳಿದೆ. ಇಲ್ಲಿ ಕೊಂಬುಗಳೆಂದರೆ ಅವುಗಳಿಗೆ ಹೆಮ್ಮೆಯ, ಅಭಿಮಾನದ, ಬಲದ ಸಂಕೇತ. ಆ ರೀತಿಯಲ್ಲಿ ಇದು ಜ್ಞಾನವು ತಾನು ಬಲಿಷ್ಠನಾಗಲು ನಡೆಸಿದ ಯಾಗದ ಕಥೆ. ಉಳಿದೆರಡು ತಿಂಗಳು ಮಳೆಗಾಲದ ಎರಡು ತಿಂಗಳುಗಳೆಂದೂ, ಸೂರ್ಯ ಕಾಣದ ದುರ್ದಿನಗಳೆಂದೂ, ಹತ್ತು ತಿಂಗಳು ಯಾಗ ಮಾಡಿದ ಗೋವುಗಳು ಆಗ ಸುಖಸಮೃದ್ಧಿಯಿಂದ
ಇರುವವೆಂದೂ, ಆದರೆ ಆ ಎರಡು ತಿಂಗಳಲ್ಲಿ ಅವುಗಳ ಹೊಣೆಗಾರಿಕೆ ಉಳಿದೆಲ್ಲ ತಿಂಗಳಿಗಿಂತ ಹೆಚ್ಚಾಗಿರುವುದೆಂದೂ ವಿಶ್ಲೇಷಿಸಲಾಗಿದೆ. ಅದೇ ವೇಳೆ ಇನ್ನೊಂದು ವರ್ಗದ ಗೋವುಗಳು ವಿಶೇಷ ಹೊಣೆಗಾರಿಕೆ ಇಲ್ಲದೆ ಮತ್ತೊಂದು ವಿಧದ ಸುಖದಿಂದ ಇರುವವೆಂದು ವೇದ ಹೇಳುತ್ತದೆ.
ಅಂದರೆ ಸಿದ್ಧಪುರುಷನು ಈ ದುಷ್ಕಾಲ(ಎರಡು ತಿಂಗಳು) ದಲ್ಲಿ ಎಚ್ಚರ ತಪ್ಪಿ ಇರುವಂತಿಲ್ಲ.
ಕೊಂಬು ಬಾರದ ದನಗಳು ಹನ್ನೆರಡು ತಿಂಗಳು ಯಾಗ ನಡೆಸಿರುವುದರಿಂದ ಅವುಗಳಿಗೂ ಸುಖವುಂಟು. ಹಲವರು ವೇದಾಧ್ಯಯನಸಂಪನ್ನರು ಯಾವತ್ಕಾಲವೂ ವೇದವನ್ನೇ
ಅವಲಂಬಿಸಿದ್ದರೂ ಅವರಿಗೆ ಬ್ರಹ್ಮಜ್ಞಾನ ಸಿದ್ಧಿಯಾಗದೆ ಕೊಂಬಿಲ್ಲದ ಗೋವುಗಳಂತೆ ಇರುತ್ತಾರೆ. ಚತುರ್ವಿಧ ಪುರುಷಾರ್ಥಗಳಲ್ಲಿ ಇವರಿಗೆ ಧರ್ಮ ಅರ್ಥ ಕಾಮಗಳು ಪ್ರಾಪ್ತವಾಗಿ ಐಹಿಕಜೀವನದ ಸುಖವರ್ಧನೆಗೂ ಶಾಂತವಾದ ಧಾರ್ಮಿಕ ಜೀವನಕ್ಕೂ ಕಾರಣವಾಗುವುದು. ಇದನ್ನು ವೇದ
ಬಹುಮಾರ್ಮಿಕವಾಗಿ ಹೇಳಿದೆ. ಸಂವತ್ಸರವೆಂದರೆ ಆಯುಷ್ಯ ಅಥವಾ ಸಮುದ್ರ, ಅದರ ಎರಡು ದಡಗಳು ಎಂಬ ಅರ್ಥಗಳೂ ಇವೆ.
ಗೋವುಗಳು-ಪಣಿಗಳು
ಋಗ್ವೇದದಲ್ಲಿರುವ ಗೋವುಗಳಿಗೆ ಸಂಬಂಧಪಟ್ಟ ಇನ್ನೊಂದು ಕಥೆಯಲ್ಲಿ (x-೧೦೮) ಪಣಿಗಳೆಂಬ ದೈತ್ಯರು ಗೋವುಗಳನ್ನು ಅಪಹರಿಸುವ ಕಥೆಯಿದೆ; ಅಪಹರಿಸಿದ ಗೋವುಗಳನ್ನು ಅವರು ಪರ್ವತಪ್ರದೇಶದಲ್ಲಿ ಗುಹೆಗಳಲ್ಲಿ ಬಚ್ಚಿಟ್ಟರು. ಆಗ ಇಂದ್ರನು ಗೋವುಗಳನ್ನು ಹುಡುಕಲು
ಸರಮೆ ಎಂಬ ದೇವಶುನಿ(ನಾಯಿ)ಯನ್ನು ಕಳುಹಿಸಿದನು. ಆ ಹೆಣ್ಣುನಾಯಿ ಗೋವುಗಳನ್ನು ಪತ್ತೆಹಚ್ಚಿ ಇಂದ್ರನಿಗೆ ತಿಳಿಸಿ ಗೋವುಗಳ ಬಿಡುಗಡೆಗೆ ಸಹಾಯ ಮಾಡಿತು. ತನ್ಮಧ್ಯೆ ಪಣಿಗಳಿಗೂ ಸರಮೆಗೂ ನಡೆದ ಸಂವಾದ ಈ ಸೂಕ್ತದ ಪ್ರಧಾನ ವಿಷಯ. ಬಲುದೂರದ ದಾರಿಯಾಗಿದ್ದು ಸರಮೆ ಮಧ್ಯದಲ್ಲಿ ರಸಾ ಎಂಬ ನದಿಯನ್ನು ದಾಟಿಕೊಂಡು ಹೋಗಿತ್ತು. ಮಾತಿನಲ್ಲಿ ಮೊದಲಿಗೆ ಪರಸ್ಪರ ಯುದ್ಧ, ಶೌರ್ಯಪ್ರದರ್ಶನದ ಮಾತು ಬರುತ್ತದೆ. ಸರಮೆ ಇಂದ್ರನ ಪರಾಕ್ರಮವನ್ನು ಕೊಚ್ಚಿಕೊಳ್ಳುತ್ತದೆ; ಮತ್ತು ಆಂಗಿರಸರು ಬಂದು ಗೋವುಗಳನ್ನು ಬಿಡಿಸಿಕೊಂಡು ಹೋಗುತ್ತಾರೆಂದಾಗ ಪಣಿಗಳು ಮೆತ್ತಗಾಗಿ ನೀನು ನಮ್ಮೊಡನೆ ಗೋವುಗಳನ್ನು ಹಂಚಿಕೊಂಡು ಸುಖವಾಗಿ ಇದ್ದುಬಿಡು ಎಂಬ ಆಮಿಷವನ್ನೊಡ್ಡುತ್ತಾರೆ. ಸರಮೆ ಅದಕ್ಕೊಪ್ಪದೆ ದೇವತೆಗಳು ಈಗಾಗಲೆ ಈ ಪ್ರದೇಶವನ್ನು ಸುತ್ತುವರಿದಿದ್ದಾರೆ ಎನ್ನುತ್ತಾಳೆ.
ಸರಮೆ ವಿಷಯವನ್ನು ಇಂದ್ರನಿಗೆ ತಿಳಿಸಿತೆಂದೂ, ಆತ ಬಂದು ಗೋವುಗಳನ್ನು ಬಿಡಿಸಿಕೊಂಡು ಹೋದನೆಂಬುದೂ ಕಥೆಯ ಒಂದು ಆವೃತ್ತಿ.
ಇನ್ನೊಂದು ಆವೃತ್ತಿಯಲ್ಲಿ ಸರಮೆಯು ಬಚ್ಚಿಟ್ಟ ಗೋವುಗಳ ಒಂದಿಷ್ಟು ಹಾಲನ್ನು ಬಯಸಿತು. ಹಾಲು
ಕುಡಿದಾಗ ತನ್ನ ಸ್ವಭಾವಕ್ಕೂ ಚಪಲದಾಸೆಗೂ ಅನುಸಾರವಾಗಿ ಕೆಲಸವನ್ನು ಅಲ್ಲಿಗೆ ಬಿಟ್ಟು ವಾಪಸು ಹೋಗಿ ಇಂದ್ರನಿಗೆ ಸುಳ್ಳು ವರದಿ ನೀಡಿತೆಂಬ ವಿವರವಿದೆ; ಅಸುರರು ಕೊಟ್ಟ ಹಾಲು ಕುಡಿದ ಕಾರಣ ಹಾಗಾಯಿತೆಂಬುದು ವಿವರಣೆ. ಆಗ ಇಂದ್ರನು ಅಸುರರ ಪ್ರಭಾವ ತಗ್ಗಿಸಿ ಸರಮೆಯ ಬಾಯಿಂದ ನಿಜವನ್ನು ಹೊರಡಿಸಲು ಕಾಲಿನಿಂದ ಒದ್ದ. ಆಗ ಅಸುರರಿತ್ತ ಹಾಲನ್ನು ವಾಂತಿ ಮಾಡಿದ ಸರಮೆ
ಭಯಗೊಂಡು, ಗೋವು ಬಚ್ಚಿಟ್ಟ ಸ್ಥಳಕ್ಕೆ ಇಂದ್ರನನ್ನು ಕರೆದುಕೊಂಡು ಹೋಯಿತು. ಇಂದ್ರನು ಅಲ್ಲಿ ಪಣಿಗಳನ್ನು ಕೊಂದು ಗೋವುಗಳನ್ನು ಮರಳಿ ತಂದನು ಎಂಬ ವಿವರಣೆ ಬೃಹದ್ದೇವತಾದಲ್ಲಿದೆ.
ಇಲ್ಲಿ ಪಣಿಗಳು ಯಾರು ಎಂಬ ಪ್ರಶ್ನೆ ಬರುತ್ತದೆ. ಅವರು ದ್ರಾವಿಡರೋ ದಸ್ಯುಗಳೋ ಎನ್ನುವ ಪಾಶ್ವಾತ್ಯ ವಿದ್ವಾಂಸರ ವಾದವನ್ನು ತಳ್ಳಿಹಾಕುವ ಪ್ರೊ| ನಾರಾಯಣಾಚಾರ್ಯರು ಪಣಿಗಳು ಮುಖ್ಯವಾಗಿ ಇಂದ್ರನಿಗೂ, ಸೋಮ, ಅಗ್ನಿ, ಬೃಹಸ್ಪತಿ, ಆಂಗಿರಸರಿಗೂ ಶತ್ರುಗಳೆಂದೂ, ಅವರ ವಾಸಸ್ಥಾನ
ವಾಯುಮಂಡಲವೆಂದೂ ವೇದವು ಸ್ಪಷ್ಟವಾಗಿ ಹೇಳುತ್ತದೆ. ಪಣಿಗಳೆಂಬವರು ಇದ್ದದ್ದೇ ಆದರೆ ಅವರ ವಾಸಸ್ಥಾನದ ಬಗೆಗೂ ಅದೇ ವೇದವು ಕೊಡುವ ವಿವರಣೆ ಏಕೆ ಸತ್ಯವಲ್ಲ? ಮತ್ತು ಪಣಿಗಳ ಸ್ವರೂಪವಿವರಣೆಯನ್ನು ಕೊಡುವ ವೇದಪ್ರಸಂಗಗಳು ಏಕೆ ಪ್ರಮಾಣವಲ್ಲ ಎಂದು ಪ್ರಶ್ನಿಸುತ್ತಾರೆ.
ಪಣಿ ಶಬ್ದವು ಜಿಪುಣ, ಕೃಪಣ ಎಂಬ ಅರ್ಥದಲ್ಲೂ ಬಳಸಲ್ಪಟ್ಟಿದೆ. ಇವರು ಇಂದ್ರಶತ್ರುವಾದ ವಲ(ಬಲ)ನ
ಅನುಯಾಯಿಗಳೆಂದು ಹೇಳಲಾಗಿದೆ. ಗೋವೆಂದರೆ ಜ್ಞಾನ; ಪಣಿಗಳೆಂದರೆ ಜ್ಞಾನನಿರೋಧಕ ಶಕ್ತಿಗಳು. ಹೀಗೆ ಈ ವಿಷಯ ಜ್ಞಾನಾಪಹಾರಕ ಶಕ್ತಿಗಳ ಮತ್ತು ಜ್ಞಾನಸಂಪಾದಕ ಶಕ್ತಿಗಳ ಹೋರಾಟದ ಹಿನ್ನೆಲೆಯನ್ನು ತಿಳಿಸುತ್ತದೆ. ಇಲ್ಲಿನ ನಾಯಿ ದೇವಹೂತಿ. ಈ ಸಂದರ್ಭದಲ್ಲಿ ನಾಯಿಯ ಪಾತ್ರವೂ
ಮುಖ್ಯ ಎಂದು ವಿವರಿಸಲಾಗಿದೆ.
ಯಾಸ್ಕರು ಒಂದೆಡೆ ಪಣಿಯು ವರ್ತಕ. ಅವನು ಪದಾರ್ಥಗಳನ್ನು ಹಣಕ್ಕೆ ಮಾರುತ್ತಾನೆ. ತನ್ನ ಪದಾರ್ಥಕ್ಕಿಂತ ಹೆಚ್ಚಿನ ಬೆಲೆ ಬರುವುದೇ ವ್ಯವಹಾರದ ಗುರಿ ಎಂದಿದ್ದಾರೆ. ಸಾಯಣಾಚಾರ್ಯರು ಅದನ್ನು ಮುಂದುವರಿಸಿ ಪಣಿಗಳೆಂದರೆ ಕೂಡಿಟ್ಟ ಹಣ ಖರ್ಚಾಗುವುದನ್ನು ಸಹಿಸದ ವರ್ತಕಮನೋವ್ಯಾಪಾರದ ಜಿಪುಣರು, ಬುದ್ಧಿಯಿಲ್ಲದವರು, ತಿಳಿಯಲು ಅಪೇಕ್ಷೆಯಿಲ್ಲದವರು,
ಯಾಗಾದಿ ವೇದಕರ್ಮಗಳನ್ನು ಮಾಡದವರು, ನಮ್ಮ ಶತ್ರುಗಳು ಎಂದಿದ್ದಾರೆ. ಪಣಿ ಶಬ್ದವನ್ನು ಇಲ್ಲಿ
ಬಹುವಚನದಲ್ಲಿ ಉಪಯೋಗಿಸಿರುವುದು ಗಮನಾರ್ಹ. ಅಂತಹ ಪಣಿಗಳು ಈಗಲೂ ಸಮಾಜದಲ್ಲಿದ್ದಾರೆ. ಇದು ಗತಕಾಲದ ಒಂದು ಜನಾಂಗವನ್ನಷ್ಟೇ ಸೂಚಿಸುವ ಶಬ್ದವಲ್ಲ. ಎಲ್ಲೆಲ್ಲಿ ದೇವಹಿತವನ್ನು ಕೋರುವ ಗೋಸಮೂಹವು ಕಂಡುಬರುವುದೋ ಅಲ್ಲೆಲ್ಲ ಅವುಗಳನ್ನು ಅಪಹರಿಸಿ ಅವುಗಳನ್ನು ಬಚ್ಚಿಟ್ಟು ತಮ್ಮ ಕ್ರೂರವಾದ ವ್ಯಾಪಾರದೃಷ್ಟಿಯ ಜೀವನವನ್ನು ಸ್ಥಾಪಿಸುವುದು ಮತ್ತು ಲೋಕಕ್ಕಾಗಲಿ ದೇವತೆಗಳಿಗಾಗಲಿ ಉಪಯೋಗಕ್ಕೆ ಸಿಗದಂತೆ ಮಾಡುವುದು ಇವರ ಕೆಲಸ. ಇದು ಇಂದು ಕೂಡ ನಡೆಯುತ್ತಿಲ್ಲವೇ – ಎಂದು ಪ್ರೊ| ಆಚಾರ್ಯರು ಪ್ರಶ್ನಿಸುತ್ತಾರೆ. ಇಂದು ನಡೆಯುತ್ತಿರುವ ವಾಣಿಜ್ಯ ಉದ್ದೇಶಕ್ಕೆ ಗೋವುಗಳ ವಧೆ, ಅದರ ಹಿಂದಿರುವ ಕ್ರೌರ್ಯ ಇಲ್ಲಿ ನೆನಪಾಗದಿರದು.
ಸರಮೆ ಯಾರು?
ಪಣಿಗಳು ನಡೆಸಿದ ಗೋ ಅಪಹರಣದ ಸಂದರ್ಭದಲ್ಲಿ ಬರುವ ಸರಮೆಯನ್ನು ವೇದದಲ್ಲಿ ಬೇರೆ ರೀತಿ ಕಂಡದ್ದೂ ಇದೆ. ಅಲ್ಲಿ ಸಾಯಣರು ಸರಮಾ ವಾಕ್ ದೇವಶುನೀ ವಾ ಎಂದು ಅರ್ಥೈಸಿದ್ದಾರೆ. ಅಂದರೆ ದೇವಶುನಿಯಲ್ಲದೆ ವಾಕ್ ಎಂಬ ಅರ್ಥವೂ ಇದೆ. ಯಾಸ್ಕರು ನಿರುಕ್ತದಲ್ಲಿ ಶೀಘ್ರವಾಗಿ ನಡೆಯುವವಳು ಎಂಬ ಅರ್ಥವನ್ನೂ ನೀಡಿದ್ದಾರೆ. ಋಗ್ವೇದದ ಒಂದು ಮಂತ್ರ(v೪೬-೮) ದ ಅರ್ಥ ಹೀಗಿದೆ: ಸಮಸ್ತ ಆಂಗಿರಸರೂ ಪೂಜ್ಯಳಾದ ಉಷಾದೇವಿಯ ಉದಯಕಾಲದಲ್ಲಿ ಗೋವುಗಳೊಡನೆ ಕೂಡಿಕೊಂಡರು. ಆಗ ಆ ಗೋವುಗಳ ಕ್ಷೀರಪ್ರವಾಹವು ಯಜ್ಞದ ವೇದಿಕೆಯಲ್ಲಿ ಅರ್ಪಿತವಾಯಿತು. ಋತದ ದಾರಿಯಲ್ಲಿ ಸರಮೆಯು ಗೋವುಗಳನ್ನು ಕಂಡುಹಿಡಿದು ಪಡೆದಳು. ಇಲ್ಲೇ ಸಾಯಣರು ವಾಕ್ ಅಥವಾ ದಿವ್ಯಜ್ಞಾನವೆಂದು ಅರ್ಥೈಸಿದ್ದು. ಸರಮೆಯು ಋತ(ಸತ್ಯ) ದ ದಾರಿಯಲ್ಲಿ ಎಲ್ಲರಿಗಿಂತ ಮುಂದೆ ಶೀಘ್ರವಾಗಿ ನಡೆದು ಗೋವುಗಳನ್ನು ಪತ್ತೆಹಚ್ಚಿದಳೆಂದು ಸೂಚಿಸಲಾಗಿದೆ. ಹೀಗೆ ಸರಮೆ ಸತ್ಯದ ದಾರಿಯಲ್ಲಿ ವೇಗವಾಗಿ ಸಂಚರಿಸುವವಳು; ಜ್ಞಾನದ ಗೂಢಪ್ರದೇಶವನ್ನು ಅದರ ಪರಿಮಳದಿಂದಲೇ
ಪತ್ತೆಹಚ್ಚಬಲ್ಲವಳು. ಇದರ ಹಿಂದಿನ ಮಂತ್ರದಲ್ಲಿ ಸರಮೆಯು ಋತರೂಪವಾದ ಯಜ್ಞವನ್ನು ಪ್ರವೇಶಿಸಿ (ಮುನ್ನುಗ್ಗಿ) ಗೋವುಗಳನ್ನು ಕಂಡುಹಿಡಿದಳು. ಹೀಗೆ ಆಂಗಿರಸರು ತಮ್ಮ ಎಲ್ಲ ಯಜ್ಞಗಳನ್ನು ಸತ್ಯವಾಗುವಂತೆ ಮಾಡಿಕೊಂಡರು ಎಂದು ವರ್ಣಿಸುತ್ತದೆ. ಅಂದರೆ ಯಜ್ಞತತ್ತ್ವಕ್ಕೂ, ಋತಸತ್ಯಗಳ ಪ್ರಾಪ್ತಿಗೂ, ಆಂಗಿರಸರ ಜ್ಞಾನತಪಸ್ಸಿಗೂ, ಸರಮೆಗೂ ದಿವ್ಯಸಂಬಂಧವಿದೆ. ಇದು ಮುಂದುವರಿದು,
ವೇದವಾಕ್ಯಗಳಲ್ಲಿರುವ ದಿವ್ಯಾರ್ಥಗಳನ್ನು ಮಿಂಚಿನ ವೇಗದಲ್ಲಿ ನಮ್ಮ ಕಣ್ಣಿಗೆ ಗೋಚರಿಸುವಂತೆ ಪತ್ತೆಮಾಡಿ ಡಿದುಕೊಡುವ ಅದೇ ವೇದವಾಕ್ಯಾವಲಂಬಿಯಾದ ಅತೀಂದ್ರಿಯಶಕ್ತಿಗೆ ಸರಮಾ ಎಂದು ಹೆಸರು ಎಂಬಲ್ಲಿಗೆ ತಲಪುತ್ತದೆ. ಅಂದರೆ ಜ್ಞಾನವು ಪರಿಮಳವಾದರೆ ಅದನ್ನು ಪತ್ತೆ ಹಚ್ಚುವ ಅತೀಂದ್ರಿಯಶಕ್ತಿಯೇ ಸರಮೆ; ಅದನ್ನು ಶ್ವಾನದ ಘ್ರಾಣವ್ಯಾಪಾರಕ್ಕೆ ಹೋಲಿಸಲಾಗಿದೆ. ಒಟ್ಟಿನಲ್ಲಿ
ವೇದಾಕ್ಷರಗಳಲ್ಲಿ ಅಡಗಿರುವ ದಿವ್ಯಾರ್ಥವನ್ನು ವೈದಿಕನಿಗೆ ಅನುಭವದಲ್ಲಿ ಹಿಡಿದು ಪತ್ತೆ ಮಾಡಿಕೊಡುವ ವಾಕ್ಶಕ್ತಿಯೇ ಸರಮೆ.
ಋಗ್ವೇದದ ಮೂರನೇ ಮಂಡಲದ ೩೧ನೇ ಸೂಕ್ತದಲ್ಲಿ ಕೂಡ ಸರಮೆಯ ಸಹಾಯವನ್ನು ವರ್ಣಿಸಲಾಗಿದೆ. ಆಂಗಿರಸಋಷಿಗಳಿಂದ ಸ್ತುತನಾದ ಇಂದ್ರನು ಗೋವುಗಳನ್ನು ಬಚ್ಚಿಟ್ಟಿದ್ದ ಪರ್ವತದ ಬಳಿಗೆ ಬರುತ್ತಾನೆ. ಗೋವುಗಳು ಅಲ್ಲೇ ಇರುವುದನ್ನು ತಿಳಿದ ಆಂಗಿರಸರು ಮೌನವಾಗಿದ್ದರು.
ಇಂದ್ರನು ಗುಹೆಯನ್ನು ಪ್ರವೇಶಿಸುವಾಗ ಅವನ ಮುಂಭಾಗದಲ್ಲಿ ಅವನಿಗಿಂತ ಮುಂಚಿತವಾಗಿಯೇ ಸರಮೆ ಹೋಗಿ ನಿಂತಿದ್ದಳು ಮುಂತಾದ ವಿವರಗಳು ಅಲ್ಲಿವೆ.
ಆಂಗಿರಸರ ಪಾತ್ರ
ಪಣಿಗಳಿಂದ ಅಪಹೃತವಾಗಿ ಬಚ್ಚಿಡಲ್ಪಟ್ಟ ಗೋವುಗಳನ್ನು ಹುಡುಕುವುದರಲ್ಲಿ ಮತ್ತು ಇಂದ್ರನಿಗೆ ತಿಳಿಸುವುದರಲ್ಲಿ ಆಂಗಿರಸರು ಸಹಾಯಕರಾಗಿದ್ದರು. ಇಂದ್ರನಿಗೆ ತಿಳಿಯದ ಗೋವಿನ ನೆಲೆ ಅವರಿಗೆ ತಿಳಿಯಿತು. ಈ ಸಂಬಂಧವಾದ ಒಂದು ಋಗ್ವೇದದ ಮಂತ್ರದ (ix-೯-೩೯) ಅರ್ಥ ಹೀಗಿದೆ: ನಮ್ಮ ಪೂರ್ವಜರಾದ, ಪಿತೃಗಳಾದ ಆಂಗಿರಸರು ಸರ್ವಜ್ಞರೂ, ಪರಲೋಕಜ್ಞರೂ, ಅಪಹೃತಗೋವುಗಳ
ಹೆಜ್ಜೆಗುರುತು ಅರಿತವರೂ ಆಗಿದ್ದು, ಪರ್ವತದ ಮೇಲಿನಿಂದ ಗೋವುಗಳನ್ನು ಸುರಕ್ಷಿತವಾಗಿ ಕೆಳಗಿಳಿಸಿ ತಂದರು.
ಗೋವು ಎಂದರೆ ವೇದೋಕ್ತವಾದ ಅಧ್ಯಾತ್ಮವಿದ್ಯೆ ಎಂದಾಗ ಗೋವುಗಳ ಹೆಜ್ಜೆಗುರುತೆಂದರೆ ವೇದವಾಕ್ಯಗಳ, ಪದಗಳ ಮಾರ್ಮಿಕಾರ್ಥಗಳು ಎಂದಾಗುತ್ತದೆ. ಅದನ್ನು ತಿಳಿದವರು ಪದಜ್ಞರು. ಇಂತಹ ಕಾಮಧೇನುವಾದ ವೇದದ ನಾಲ್ಕು ಪಾದಗಳೇ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ.
ಇಲ್ಲಿ ಆಂಗಿರಸರು ಗೋವುಗಳನ್ನು ಪರ್ವತದಿಂದ ಇಳಿಸಿ ತಂದರು ಎಂದರೆ, ಸಾಮಾನ್ಯಪ್ರಜ್ಞೆಯುಳ್ಳವರು ಅಥವಾ ದುರುದ್ದೇಶವುಳ್ಳ ಪಣಿಯಂತಹ ಕ್ಷುದ್ರಮಾನವರ ಕೈಗೆ ಎಟುಕದಷ್ಟು ಎತ್ತರದಲ್ಲಿ ಇದ್ದದ್ದನ್ನು ಇಳಿಸಿ ತಂದರು ಎಂದು ಅರ್ಥೈಸಿಕೊಳ್ಳಬೇಕು.
ಮನುಪುತ್ರನ ವೃತ್ತಾಂತ
ಋಗ್ವೇದದ ಹತ್ತನೇ ಮಂಡಲದ ೬೩ನೇ ಸೂಕ್ತದಲ್ಲಿ ಆಂಗಿರಸರನ್ನು ಕುರಿತ ಸ್ತೋತ್ರವಿದೆ: ಹೇ ಆಂಗಿರಸರೆ, ನೀವು ನಮಗೆ ಹಿರಿಯರು. ಪಣಿಗಳಿಂದ ಗೋವುಗಳನ್ನು ಬಿಡಿಸಿ, ಅವರ ಒಡೆಯನಾದ ವಲನೆಂಬ ರಾಕ್ಷಸನನ್ನು ಕೊಂದು ಪರ್ವತ ಪ್ರದೇಶಗಳಿಂದ ಗೋವುಗಳನ್ನು ಕೆಳಗೆ ಇಳಿಸಿ ತಂದಿರಿ ಎಂದು ಅದು ಹೇಳುತ್ತದೆ. ಈ ಸ್ತುತಿಯನ್ನು ಮಾಡಿದ ಋಷಿ ನಾಭಾನೇದಿಷ್ಠ ಎನ್ನುವ ಮನುಪುತ್ರ. ಪಾಲು
ಮಾಡುವಾಗ ಆತ ಗುರುಕುಲದಲ್ಲಿದ್ದ ಕಾರಣ ಮನುಗಳು ಅವನಿಗೆ ಆಸ್ತಿ ನೀಡಿರಲಿಲ್ಲ. ಮರಳಿ ಬಂದ ಆತ ಏಕೆ ನೀಡಿಲ್ಲವೆಂದು ಕೇಳಿದಾಗ ಮನು ನಾನು ನಿನಗೆ ಆಸ್ತಿಯನ್ನು ಉಳಿಸಿ ಇಟ್ಟಿದ್ದೇನೆ. ಅದು ಆಂಗಿರಸರೆಂಬ ಋಷಿಗಳು ತಮ್ಮ ಯಜ್ಞಕ್ಕಾಗಿ ಸಂಗ್ರಹಿಸಿ ಉಳಿದಿರುವ ಗೋವುಗಳು ಎನ್ನುತ್ತಾರೆ. ಮನುಪುತ್ರ ಅ ದರಂತೆ ಹೋಗಿ ಆಂಗಿರಸರ ಯಾಗದಲ್ಲಿ ಸಹಕರಿಸಿ ಸಹಸ್ರ ಗೋವುಗಳನ್ನು ಪಡೆದು
ಹಿಂತಿರುಗುತ್ತಾನೆ. ದಾರಿಯಲ್ಲಿ ರುದ್ರನು ಅವನನ್ನು ಅಡ್ಡಗಟ್ಟಿ ಅವು ತನಗೆ ಸೇರತಕ್ಕವು ಎನ್ನುತ್ತಾನೆ. ಮನುಪುತ್ರನು ಸಂಶಯಪರಿಹಾರಕ್ಕಾಗಿ ತಂದೆಯನ್ನು ಕೇಳಿದಾಗ ಆತ ರುದ್ರನ ಮಾತು ಸರಿ ಎಂದು ಹೇಳುತ್ತಾನೆ. ಅದರಂತೆ ಗೋವುಗಳನ್ನು ರುದ್ರನಿಗೆ ಕೊಟ್ಟು ಹೊರಡುವಷ್ಟರಲ್ಲಿ ರುದ್ರನು
ಬಾಲಕನ ಸತ್ಯಕ್ಕೆ ಮೆಚ್ಚಿ ಗೋವುಗಳನ್ನು ಅವನಿಗೆ ವಾಪಸು ಕೊಡುತ್ತಾನೆ. ಅಂದರೆ ಮನುವಿನ ಪರಂಪರೆಯಲ್ಲಿ ಕೂಡ ಆಂಗಿರಸರಂತೆಯೇ ಗೋವುಗಳೇ ಪಾರಂಪರ್ಯವಾಗಿ ಆಸ್ತಿಯಾಗಿ ಕಾಪಾಡಿಕೊಂಡು ಬರಲ್ಪಟ್ಟಿವೆ ಎಂದರ್ಥ.
ಆಂಗಿರಸರು ದೇವತೆಗಳನ್ನು ಸ್ತುತಿಸಿ ಯಜ್ಞಕ್ಕಾಗಿ ಕಾಮಧೇನುವನ್ನು ಪಡೆದರೆಂದೂ ಇದರಿಂದ
ಅರ್ಯಮನೆಂಬ ಭಗವದಂಶಸಂಭೂತನಾದ ದೇವತೆ ಅವರಿಗಾಗಿ ಗೋಕ್ಷೀರವನ್ನು ತಂದುಕೊಟ್ಟನೆಂದೂ ಹೇಳು ವಿವರವನ್ನು ಋಗ್ವೇದದ ಪ್ರಥಮ ಮಂಡಲ ೧೩೯ನೇ ಸೂಕ್ತದ
ಏಳನೇ ಮಂತ್ರದ ಭಾಷ್ಯದಲ್ಲಿ ಸಾಯಣರು ಸಂಗ್ರಹಿಸಿ ಕೊಟ್ಟಿದ್ದಾರೆ. ಇಂದ್ರನೇ ಪ್ರತ್ಯಕ್ಷನಾಗಿ ಇವರಿಗಾಗಿ ಗೋಶಾಲೆಗಳ ದ್ವಾರಗಳನ್ನು ತೆರೆದನೆಂದು ಒಂದು ಮಂತ್ರ ಹೇಳಿದರೆ, ಇನ್ನೊಂದು ಋಷಿಗಳು ತಮ್ಮ ಯಾಗಬಲದಿಂದಲೇ ಕಲ್ಲುಗಳನ್ನೂ ಬೆಟ್ಟಗಳನ್ನೂ ಸೀಳಿ ಗುಹೆಗಳಲ್ಲಿ ಅಡಗಿದ್ದ ಗೋವುಗಳನ್ನು ಬಿಡಿಸಿದರು, ಮುಕ್ತವಾದ ಗೋವುಗಳು ತಮ್ಮ ಜೊತೆ ಸೇರಿದಾಗ ಗಟ್ಟಿಯಾಗಿ ವೇದಘೋಷ ಮಾಡಿದರು
ಎಂದು ವಿವರಿಸುತ್ತದೆ.
ಇದೇ ವಂಶದಲ್ಲಿ ದೇವಗುರು ಬೃಹಸ್ಪತಿ, ಜಮದಗ್ನಿ, ಶೌನಕ, ಚ್ಯವನ, ವಾಲ್ಮೀಕಿ, ಸಾಂದೀಪನಿ ಗುರುಗಳು ಮುಂತಾದವರು ಬಂದರು. ಇವರೆಲ್ಲ ತಮ್ಮ ಕಾಲದ ಪಣಿಗಳನ್ನು ನಿಗ್ರಹಿಸಿ, ಗೋವುಗಳ ಸೆರೆ ಬಿಡಿಸಿದರು ಎಂದು ತಿಳಿಸುವ ಗ್ರಂಥಕಾರ ಪ್ರೊ| ನಾರಾಯಣಾಚಾರ್ಯರು, ಚರಿತ್ರೆಯ ದೃಷ್ಟಿಯಿಂದ
ನೋಡಿದರೂ ಗೋವುಗಳಿಗೂ ಪಣಿಗಳಿಗೂ ಆಂಗಿರಸರಿಗೂ ಸಾಂಕೇತಿಕ ಮಹತ್ತ್ವ ಇದ್ದೇ ಇದೆ. ಜ್ಞಾನಾರ್ಥಿಯಾದವನ ಅಂತರಂಗಜೀವನದಲ್ಲಂತೂ ಇವರೆಲ್ಲ ನಿತ್ಯರೇ ಆಗಿದ್ದು, ಗೋವುಗಳ ಸೆರೆ ಮತ್ತು ವಿಮೋಚನೆ ನಡೆಯುತ್ತಲೇ ಇದೆ ಎಂದು ವಿಶ್ಲೇಷಿಸುತ್ತಾರೆ.
ಋಗ್ವೇದವು ಇಂದ್ರನನ್ನು ಗೋತ್ರಭಿತ್, ಗೋವಿತ್ ಎಂದು ಬಣ್ಣಿಸುತ್ತದೆ (x೧೦೩-೬,೭). ಇಲ್ಲಿ ಗೋವು ಎಂದರೆ ಜ್ಞಾನವೇ. ಗೋತ್ರಭೇದನವೆಂದರೆ ಜ್ಞಾನಭಂಡಾರವನ್ನು ಜ್ಞಾನಿಗಳಿಗೆ ತೆರೆದಿಡುವುದು. ಅದೇ ವೇದದ ಒಂದನೇ ಮಂಡಲದ ಒಂದೆಡೆ ಇಂದ್ರನು ಹೆಣ್ಣುಕುದುರೆಯನ್ನು ಗೋಮಾತೆಯಾಗಿ ಪರಿವರ್ತಿಸಿದನು ಎನ್ನುವ ವೃತ್ತಾಂತವಿದೆ. ವೇದದಲ್ಲಿ ಕುದುರೆಯು ಕ್ಷಾತ್ರಶಕ್ತಿಯ ಸಂಕೇತವಾದರೆ
ಗೋವು ಬೆಳಕಿಗೂ ಬ್ರಹ್ಮವಿದ್ಯೆಗೂ ಬ್ರಹ್ಮತೇಜಸ್ಸಿಗೂ ಸಂಕೇತ. ಹೆಣ್ಣುಕುದುರೆಯಲ್ಲಿ ಗೋಮಾತೆಯನ್ನು ಸೃಷ್ಟಿಸಿದನೆಂದರೆ ಕ್ಷತ್ರಿಯಯೋನಿಯಲ್ಲಿ ಬ್ರಹ್ಮಜ್ಞಾನಿಯನ್ನು ಹುಟ್ಟಿಸಿದನೆಂದು ಅರ್ಥೈಸಲಾಗಿದೆ. ಇಂದ್ರನು ನರೋ ಗೋಃ ಅಂದರೆ ಗೋವುಗಳ ನಾಯಕ ಎನ್ನುವ ವಿವರಣೆಯಿದೆ.
ಗೋರಥಯಾತ್ರೆ
ರಾಜನಿಗೆ ಪಟ್ಟಾಭಿಷೇಕ ಆಗುವಾಗ ಹದಿನಾರು ಗೋವುಗಳು ಎಳೆಯುವ ರಥದಲ್ಲಿ ಆಸೀನನಾಗಿ ಪುರಪ್ರದಕ್ಷಿಣೆಯನ್ನು ಮಾಡಿ ಅನಂತರ ಸಿಂಹಾಸನವನ್ನು ಏರಬೇಕೆಂಬ ಪದ್ಧತಿಯನ್ನು ಧರ್ಮರಾಯನು ಪಾಲಿಸಿದನೆನ್ನುವ ವಿವರವು ಮಹಾಭಾರತದ ಶಾಂತಿಪರ್ವದಲ್ಲಿ ಬರುತ್ತದೆ. ಆ ಎರಡು ಶ್ಲೋಕಗಳಿಗೆ
ವ್ಯಾಖ್ಯಾನ ಮಾಡಿದ ನೀಲಕಂಠದೀಕ್ಷಿತರು ಋಗ್ವೇದದ ಕೆಳಗಿನ ಮಂತ್ರವನ್ನು ಉದಾಹರಿಸಿದ್ದಾರೆ (x-೬೮-೨):
ಸಂ ಗೋಭಿರಾಂಗಿರಸೋ ನಕ್ಷಮಾಣೋ
ಭಗ ಇವೇದರ್ಯಮಣಂ ನಿನಾಯ|
ಜನೋ ಮಿತ್ರೋ ನ ದಂಪತೀ ಅನಕ್ತಿ
ಬೃಹಸ್ಪತೇ ವಾಜಯಾಶೂರಿವಾಜೌ||
(ಲೋಕದಲ್ಲಿ ಸ್ನೇಹಿತನು ತನ್ನ ಮಿತ್ರನಿಗೆ ಶ್ರೇಯಸ್ಸಾಗಲೆಂದೂ, ತಮ್ಮಲ್ಲಿ ಅನ್ಯೋನ್ಯ ಸಂಬಂಧವಾಗಲೆಂದೂ ಬಂಧುಜನರಿಂದ ಅವನಿಗೆ ಹೇಗೆ ವಿವಾಹ ಮಾಡಿಸುವರೋ ಹಾಗೆಯೇ ಪುರೋಹಿತನು ನಗರಗತವಾದ ಐಶ್ವರ್ಯಲಕ್ಷ್ಮಿಯನ್ನು ರಾಜನಿಗೆ ವಿವಾಹ ಮಾಡಿಸಿ, ಗೋರಥದಿಂದ ನಗರಪ್ರವೇಶ ಮಾಡಿಸಬೇಕೆಂದೂ ಶ್ರುತಿಯ ಆದೇಶವಿದೆ.) ಹಿಂದೆ ಆಂಗಿರಸಪುತ್ರನಾದ ಬೃಹಸ್ಪತಿಯು ಅರ್ಯಮನೆಂಬ ದೇವತೆಯನ್ನು ಹೀಗೆಯೇ ಗೋರಥದಲ್ಲಿ ಕೂಡಿಸಿ ಅವನಿಗೆ ಪಟ್ಟಾಭಿಷೇಕ ಮಾಡಿದನೆಂದೂ ಇದು ಮಿತ್ರನು ದಂಪತಿಗಳನ್ನು ಒಟ್ಟು
ಸೇರಿಸಿದಂತೆ ಎಂದೂ ಶ್ರುತಿಯ ತಾತ್ಪರ್ಯ.
ಪಂಚಗವ್ಯಗಳ ಮಹಿಮೆ
ಗೋವಿನಿಂದ ಉತ್ಪನ್ನವಾದ ವಸ್ತುಗಳೇ ಪಂಚಗವ್ಯಗಳು. ತೈತ್ತಿರೀಯಬ್ರಾಹ್ಮಣದಲ್ಲಿ (i೪೮) ಶ್ರುತಿಯು ಎಲ್ಲರನ್ನೂ ಪಾವನ ಮಾಡುವಳೆಂದೂ, ಇದನ್ನು ಅಧ್ಯಯನ ಮಾಡಿದವನಿಗೆ ಸರಸ್ವತೀಸ್ವರೂಪಿಣಿಯಾದ ಶ್ರುತಿಯು ಒಳ್ಳೆಯ ಹಾಲು ಕೊಡುವ ಧೇನುವಾಗುವಳೆಂದೂ (ಸುದುಘಾ ಹಿ
ಪಯಸ್ವತೀ) ಸಾಧಕನು ತನಗೆ ಬೇಕಾದ ಹಾಲು, ತುಪ್ಪ, ಮಧು, ಉದಕಗಳನ್ನು ಇವಳಿಂದ ಪಡೆಯಬಹುದೆಂದೂ, ಇಹಪರ ಲೋಕಗಳನ್ನು ಪಡೆಯಬಹುದೆಂದೂ ಇಂತಹ ಗೋವಿನ
ಪಾವನವಾದ ಸಹಸ್ರ ಧಾರಾ ರೂಪವಾದ ಹಾಲಿನಿಂದ ದೇವತೆಗಳೂ ತಮ್ಮನ್ನು ಪವಿತ್ರ ಮಾಡಿಕೊಳ್ಳುತ್ತಿದ್ದಾರೆಂದೂ (ಯೇನ ದೇವಾಃ ಪವಿತ್ರೇಣ ಆತ್ಮಾನಂ ಪುನತೇ ಸದಾ,
ತೇನ ಸಹಸ್ರಧಾರೇಣ) ಇಂತಹ ಕ್ಷೀರಪಾನದಿಂದ ನಾವೂ ಬ್ರಹ್ಮವಿದರಾಗೋಣ ಎಂದೂ ಪ್ರಾರ್ಥನೆಯಿದೆ.
ಶತಪಥಬ್ರಾಹ್ಮಣದಲ್ಲಿ ಮೊಸರು, ತುಪ್ಪ ಮತ್ತು ಜೇನುಗಳು ಕ್ರಮವಾಗಿ ಪೃಥ್ವಿ, ಅಂತರಿಕ್ಷ ಮತ್ತು
ದ್ಯುಲೋಕಗಳ ಸಾರಗಳೆಂದು ಹೇಳಿದೆ. ಇವು ಭೂಃ ಭುವಃ ಸುವಃ ಎಂದು ಮೂರು ವ್ಯಾಹೃತಿಗಳಿಂದ ಸಂಕೇತಿಸಲ್ಪಡುವ ಪ್ರಜ್ಞೆಯ, ಅನುಭವದ ಲೋಕತ್ರಯಗಳಾಗಿವೆ. ಹೀಗೆ ಗೋವುಗಳ ಕೊಡುಗೆಯಾದ ಗವ್ಯರೂಪವಾದ ಹವಿಸ್ಸನ್ನು ಯಜ್ಞದಲ್ಲಿ ಅರ್ಪಿಸುವ ಕಾರ್ಯ ದೇವತೆಗಳನ್ನು ಶಕ್ತಿವರ್ಧಕರನ್ನಾಗಿ ಮಾಡುವುದಲ್ಲದೆ ಲೋಕಕ್ಕೂ ಕ್ಷೇಮಕರ. ಅಲ್ಲದೆ ಲೋಕಸೃಷ್ಟಿಗೂ ಈ ಗವ್ಯಗಳೇ ಸಾಧಕ ಎಂಬ
ಅರ್ಥವನ್ನು ಶ್ರುತಿಸ್ಮೃತಿಗಳಲ್ಲಿ ಹೇರಳವಾಗಿ ವಿವರಿಸಿದೆ. ಅದಕ್ಕಾಗಿಯೇ ಅಗ್ನಿದೇವನಿಗೆ ಮಾಡುವ ಪ್ರಾರ್ಥನೆಗಳಲ್ಲಿ ಮುಖ್ಯವಾಗಿ ಹೇ ಅಗ್ನೇ, ನಾವು ಅರ್ಪಿಸಿದ ಘೃತವನ್ನು ನೀನು ಪಾನ ಮಾಡಿ, ರುಚಿಕರ ಗವ್ಯವಾದ ಮಧುವನ್ನು ಸೇವಿಸಿ ತಂದೆಯು ಮಗನನ್ನು ಕಾಪಾಡುವಂತೆ ಇವನನ್ನು (ಈ ಬ್ರಹ್ಮಚಾರಿಯನ್ನು) ರಕ್ಷಿಸು (ಘೃತಂ ಪೀತ್ವಾ ಮಧು ಚಾರು ಗವ್ಯಂ ಪಿತೇವ ಪುತ್ರಮಭಿರಕ್ಷತಾದಿಮಂ) ಎಂದು ಪ್ರಾರ್ಥಿಸಲಾಗಿದೆ.
ಋಷಿಗಳ ಹುಟ್ಟು
ತೈತ್ತಿರೀಯ ಆರಣ್ಯಕ(ii ೯)ದಲ್ಲಿ ಋಷಿಗಳು ಹೇಗೆ ಉಂಟಾದರೆಂಬ ವಿಷಯಕ್ಕೆ ಒಂದು ವಿವರಣೆ ಇದೆ.
ಹುಟ್ಟು ಸಾವಿಲ್ಲದ ಗೋವುಗಳು ತಪಸ್ಸನ್ನು ಮಾಡಿದಾಗ ಬ್ರಹ್ಮದೇವನು ಅವುಗಳಿಗೆ ಸರ್ವತೋಮುಖವಾದ ದೃಷ್ಟಿಯನ್ನು ಅನುಗ್ರಹಿಸಿದನು. ಅವೇ ಋಷಿಗಳಾದವು. ಇದೇ ಋಷಿಗಳ ಋಷಿತ್ವ ಎಂದಿದೆ. ಯಜ್ಞಕಾಮರಾದ ಮುಂದಿನ ಋಷಿಗಳು ವೇದಮಯಿಯಾದ ಈ ಗೋವನ್ನು
ಉಪಾಸನೆ ಮಾಡಿದಾಗ ಋಗ್ವೇದವನ್ನು ಅಧ್ಯಯನ ಮಾಡಿದವನು ಹಾಲಿನ ನದಿಯ ದಡದಲ್ಲಿಯೂ,
ಯಜುರ್ವೇದಾಧ್ಯಾಯಿಯು ತುಪ್ಪದ ನದಿಯ ದಡದಲ್ಲಿಯೂ, ಸಾಮವೇದಾಧ್ಯಾಯಿಯು ಸೋಮರಸಪ್ರವಾಹದ ದಡದಲ್ಲಿಯೂ, ಅಥರ್ವವೇದಾಧ್ಯಾಯಿಯು ಜೇನಿನ ನದಿಯ
ದಡದಲ್ಲಿಯೂ ಇದ್ದು ತಮ್ಮ ಪಿತೃಗಳಿಗೆ ಸ್ವಧಾಕಾರದಿಂದ ತೃಪ್ತಿಯನ್ನು ಉಂಟುಮಾಡುವರು. ತೃಪ್ತರಾದ ದೇವತೆಗಳು ಅವರಿಗೆ ಆಯುಷ್ಯ, ತೇಜಸ್ಸು, ವರ್ಚಸ್ಸು, ಐಶ್ವರ್ಯ, ಯಶಸ್ಸು, ಬ್ರಹ್ಮವರ್ಚಸ್ಸು, ಆಹಾರ ಸಮೃದ್ಧಿಗಳನ್ನು ಕೊಟ್ಟು ತೃಪ್ತಿಪಡಿಸುವರು – ಎಂದು ಹೇಳಿದೆ.
ಧರ್ಮಕ್ಕೆ ವಿರುದ್ಧವಲ್ಲದ ಅರ್ಥವು ಹಾಲಾಗಿಯೂ, ಕಾಮವು ಮೊಸರಾಗಿಯೂ, ಧರ್ಮವೇ ಬೆಣ್ಣೆಯಾಗಿಯೂ, ಮೋಕ್ಷವು ತುಪ್ಪವಾಗಿಯೂ, ಬ್ರಹ್ಮಜ್ಞಾನಕ್ಕೆ ಸಂಕೇತವಾಗಿಯೂ ವೇದಗಳಲ್ಲಿ ಹಲವೆಡೆ ಬಂದಿದೆ ಎಂದು ಉಲ್ಲೇಖಿಸುವ ಪ್ರೊ| ಕೆ.ಎಸ್. ನಾರಾಯಣಾಚಾರ್ಯರು, ಇಂತಹ ಗವ್ಯಗಳನ್ನು ಅನುಗ್ರಹಿಸುವ ಜ್ಞಾನಸ್ವರೂಪಿಣಿಯೂ, ಲೋಕಮಾತೆಯೂ, ವಾಕ್ಸ್ವರೂಪಿಣಿಯೂ ಆದ
ಕಾಮಧೇನುವು ಅನಂತಮಹಿಮಳಾದ ಅದಿತಿಯಾಗಿದ್ದು, ಅವಳಿಗೆ ಎಂದೆಂದೂ ರೋಗಸಂಬಂಧವೇ ಇಲ್ಲ; ಅವಳನ್ನು ಕೊಲ್ಲತಕ್ಕದ್ದಲ್ಲವೆಂದು ವೇದವೇ ಆದೇಶ ನೀಡಿದೆ (ಮಾ ಗಾಂ ಅನಾಗಾಂ ಅದಿತಿಂ ವಧಿಷ್ಠ) ಎಂದು ಉಲ್ಲೇಖಿಸುತ್ತಾರೆ. ಭಾರತೀಯ ಸಂಸ್ಕೃತಿಯ ಉನ್ನತಿ ಅವನತಿಗಳು ಗೋವಿನ
ಉನ್ನತಿ ಅವನತಿಗಳನ್ನು ಆಶ್ರಯಿಸಿವೆ ಎಂದೂ ಹೇಳುತ್ತಾರೆ. ಅಂತಹ ಒಂದು ಕಾಲಘಟ್ಟದಲ್ಲಿ ನಾವಿಂದು ಬಂದು ನಿಂತಿದ್ದೇವಲ್ಲವೆ?
ಲೇಖಕರು ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರು
ಅಧುನಿಕ ಯುಗದ ಜನತೆಗೆ ಗೋವಿನ ಮಹತ್ವದ ಬಗ್ಗೆ ತಿಳಿಯಲು ನಿಮ್ಮ ಪರಿಶ್ರಮ ಅಪಾರವಾದದ್ದು
ಶ್ರೀ ಪಾಂಡವಾಸ್ ಫೌಂಡೇಷನ್ ರವರ ಭಾರತೀಯ ಗೋ ಉದ್ಯಾನವನ ಮತ್ತು ಗೋ ವಿಜ್ಞಾನ ಕೇಂದ್ರ ದ ವತಿಯಿಂದ ನಿಮಗೆ ಅನಂತ ಅನಂತ ಧನ್ಯವಾದಗಳು