ಬಿಡಾರಂ ಕೃಷ್ಣಪ್ಪನವರು ಅತ್ಯುತ್ತಮ ಗಾಯಕ, ಎತ್ತರದ ಆಕರ್ಷಕ ವ್ಯಕ್ತಿತ್ವ, ಲಕ್ಷ್ಯ- ಲಕ್ಷಣಗಳಲ್ಲಿ ಸಮನಾದ ಪಾಂಡಿತ್ಯದಿಂದ, ಸ್ಫುಟವಾದ ಉಚ್ಚಾರಣೆಯಿಂದ ಅರ್ಥವನ್ನರಿತು ಹಾಡುವ ಕಾಳಜಿ ಹೊಂದಿದ್ದವರು…
೧೮೬೬ರ ಕೃಷ್ಣಜನ್ಮಾಷ್ಟಮಿಯಂದು ಜನಿಸಿದ ಕಾರಣ ತಮ್ಮ ಮಗುವಿಗೆ ’ಕೃಷ್ಣ’ ಎಂದು ಹೆಸರನ್ನಿಟ್ಟರು ವಿಶ್ವನಾಥಯ್ಯ ಮತ್ತು ಸರಸ್ವತಿಬಾಯಿ ದಂಪತಿಗಳು. ವಿಶ್ವನಾಥಯ್ಯನವರು ಉಡುಪಿಯ ಬಳಿಯಿರುವ ನಂದಳಿಕೆ ಎಂಬಲ್ಲಿ ವಾಸವಾಗಿದ್ದ ಕೊಂಕಣಿ ಮಾತೃಭಾಷೆಯನ್ನಾಡುತ್ತಿದ್ದ ಗೌಡಸಾರಸ್ವತ ಪಂಗಡಕ್ಕೆ ಸೇರಿದವರಾಗಿದ್ದರು ಹಾಗೂ ಧರ್ಮಸ್ಥಳದ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಸ್ತ್ರೀಪಾತ್ರವನ್ನು ಉತ್ತಮವಾಗಿ ನಿರ್ವಹಿಸಿ ಹೆಸರನ್ನು ಗಳಿಸಿದ್ದರು.
ಯದುವಂಶ ರಾಜರು ಕಲೆಗೆ ಪ್ರೋತ್ಸಾಹ ನೀಡುವುದರಲ್ಲಿ ಎತ್ತಿದ ಕೈ. ಮುಮ್ಮಡಿ ಕೃಷ್ಣಭೂಪಾಲರು ವಿಶ್ವನಾಥಯ್ಯನವರ ನಟನೆ ಹಾಗೂ ಗಾಯನಕ್ಕೆ ಮಾರುಹೋಗಿ ಮೈಸೂರಿಗೆ ಬಂದು ಕಾರ್ಯಕ್ರಮ ನೀಡಲು ಆಹ್ವಾನಿಸಿದರು. ಈ ದಂಪತಿಗಳು ಮೈಸೂರಿಗೆ ತಮ್ಮ ಮಕ್ಕಳಾದ ಸುಬ್ಬರಾಯಪ್ಪ ಮತ್ತು ಕೃಷ್ಣಪ್ಪನವರೊಂದಿಗೆ ಬಂದು ಬಿಡಾರ ಬಿಟ್ಟರು. ಹಾಗಾಗಿ ಮುಂದಿನ ದಿನಗಳಲ್ಲಿ ’ಬಿಡಾರಂ’ ಕೃಷ್ಣಪ್ಪ ಎಂದೇ ಪ್ರಸಿದ್ಧರಾದರು ಕೃಷ್ಣಪ್ಪನವರು. ವಿಶ್ವನಾಥಯ್ಯನವರ ಹಠಾತ್ ಮರಣದಿಂದ ಸಂಸಾರವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಸುಂದರರಾಗಿದ್ದ ಹಾಗೂ ಉತ್ತಮ ಕಂಠವನ್ನೂ ಹೊಂದಿದ್ದ ಈ ಸಹೋದರರು ಮೈಸೂರಿನಲ್ಲಿ ಲವಕುಶರಂತೆ ಬೀದಿಯಲ್ಲಿ ಉಂಛವೃತ್ತಿಯ ರೀತಿಯಲ್ಲಿ ಹಾಡುತ್ತ, ಜನಸಹಾಯ ಪಡೆದು ನಿತ್ಯಜೀವನ ನಡೆಸುವಂತಹ ಪರಿಸ್ಥಿತಿ ಉಂಟಾಯಿತು.
ಚಿಕ್ಕ ವಯಸ್ಸಿನ ಕೃಷ್ಣಪ್ಪ ಆಲಸ್ಯ ಮತ್ತು ಹುಡುಗಾಟದಿಂದ ದಿನನಿತ್ಯ ಅಣ್ಣನೊಂದಿಗೆ ಹೋಗಲು ಹಿಂಜರಿಯುತ್ತಿದ್ದ. ಒಮ್ಮೆ ಅರಮನೆಯ ಆವರಣದಲ್ಲಿರುವ ಆಂಜನೇಯನ ಮುಂದೆ ತನ್ನ ಹರಿದ ಅಂಗವಸ್ತ್ರವನ್ನು ಹರಡಿ ರಾಮ-ಆಂಜನೇಯರ ಪರವಾದ ದೇವರನಾಮಗಳನ್ನು ಸುಶ್ರಾವ್ಯವಾಗಿ, ಭಾವಪರವಶನಾಗಿ ಹಾಡುತ್ತಿದ್ದಾಗ ಆಯಾಸದಿಂದ ಬಳಲಿ ನಿದ್ರೆಗೆ ಜಾರಿದ. ಡಾ|| ನಂಜುಂಡಯ್ಯ ಎಂಬ ವೈದ್ಯರೂ, ಕೊಡುಗೈ ದಾನಿಗಳ ಈ ಹುಡುಗನನ್ನು ನೋಡಿ ತಮ್ಮ ಮನೆಗೆ ಕರೆದೊಯ್ದು ಉಪಚರಿಸಿ ಆರ್ಥಿಕ ನೆರವು ನೀಡಿದರು. ಇದಾದ ನಂತರ ಕೃ?ಪ್ಪನಿಗೆ ಈ ದೇವಸ್ಥಾನದ ಮುಂದೆ ಹಾಡುವುದು ನಿತ್ಯ ವ್ರತವೇ ಆಯಿತು.
ಕಠಿಣ ಸಾಧನೆ
ಒಮ್ಮೆ ಕರೂರು ರಾಮಸ್ವಾಮಿ ಎಂಬ ಪ್ರಸಿದ್ಧ ಗಾಯಕರಲ್ಲಿ ಸಂಗೀತಶಿಕ್ಷಣ ಕೊಡಿಸಬೇಕೆಂಬ ಹಂಬಲ ತಾಯಿ ಸರಸ್ವತಿಬಾಯಿಗೆ ಉಂಟಾಗಿ ಅವರಲ್ಲಿ ವಿಚಾರಿಸಿದಾಗ ಅದು ನಾನಾ ಕಾರಣಗಳಿಂದ ಫಲಿಸಲಿಲ್ಲ. ಆದರೆ ಮುಂದೊಂದು ದಿನ ಕೃಷ್ಣಪ್ಪನ ದೈವದತ್ತವಾದ ಸಿರಿಕಂಠಕ್ಕೆ ಮಾರುಹೋದ ಸಾಹುಕಾರ ತಿಮ್ಮಯ್ಯ ಎಂಬ ಇದೇ ವಿದ್ವಾಂಸರ ಬಳಿ ತಿಂಗಳಿಗೆ ೧೦೦ ರೂ. ವಿದ್ಯಾಶುಲ್ಕವನ್ನಿತ್ತು ಸಂಗೀತವನ್ನು ಹೇಳಿಕೊಡಲು ಕೇಳಿದಾಗ ರಾಮಸ್ವಾಮಿಗಳು ಇಲ್ಲವೆನ್ನಲಾಗಲಿಲ್ಲ!
ಗುರುಗಳಾದರೋ ದೂರ್ವಾಸಮುನಿಗಳ ಅಪರಾವತಾರ. ಶಾರೀರದೊಂದಿಗೆ ಶರೀರದ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕೆಂಬ ಅಭಿಪ್ರಾಯವುಳ್ಳವರಾಗಿದ್ದರು. ಪ್ರತಿದಿವಸ ಕಂಠದವರೆಗೆ ತಣ್ಣೀರಿನಲ್ಲಿ ದೇಹವನ್ನು ಮುಳುಗಿಸಿ ’ಅಕಾರ’ ಸಾಧನೆ ಮಾಡತಕ್ಕದ್ದು. ಪದ್ಮಾಸನದಲ್ಲಿ ಕುಳಿತು ಬೆನ್ನನ್ನು ನೇರವಾಗಿ ಇರಿಸಿ ಆರಂಭದಿಂದ ಕೊನೆಯವರೆಗೆ ಒಂದೇ ಲಯವಿರುವಂತೆ ಅಭ್ಯಾಸ ಮಾಡಬೇಕಾಗಿತ್ತು.
ಈ ಅಸುರ ಸಾಧನೆಯ ಫಲವಾಗಿ ಕೃ?ಪ್ಪನವರಿಗೆ ತ್ರಿಸ್ಥಾಯಿಗಳಲ್ಲಿ ಲೀಲಾಜಾಲವಾಗಿ ಸಂಚರಿಸಬಲ್ಲ ಬಲವಾದ ಹಾಗೂ ನಾದಮಯವಾದ ಶಾರೀರ ಸಿದ್ಧಿಸಿತ್ತು. ಮನೆಯಿಂದ ಹೊರಗಡೆ ಬರುವಾಗಲೆಲ್ಲ ಕುತ್ತಿಗೆಯನ್ನು ಉಣ್ಣೆಬಟ್ಟೆಯಿಂದ ಮುಚ್ಚಿಕೊಳ್ಳುವುದು ವಾಡಿಕೆಯಾಗಿತ್ತು ಹಾಗೂ ಹೊರಗಡೆ ಪಾನೀಯ ಅಥವಾ ಆಹಾರ ಸೇವಿಸುತ್ತಿರಲಿಲ್ಲ.
ಗಿರಿಭಟ್ಟ ತಮ್ಮಯ್ಯ, ಮೈಸೂರು ಕರಿಗಿರಿರಾವ್ ಮತ್ತು ವೀಣೆ ಶೇಷಣ್ಣನವರಲ್ಲಿಯೂ ಗಾಯನ ಅಭ್ಯಾಸವಾಯಿತು. ನಾಟಕದ ಕಂಪೆನಿಯಲ್ಲಿ ಸೂತ್ರಧಾರನಾಗಿ ನಟಿಸುತ್ತಿದ್ದಾಗ ದಿವಾನ್ ರಂಗಾಚಾರ್ಲು ಅವರ ಮೆಚ್ಚುಗೆಯ ಫಲವಾಗಿ ರೂ. 6 ಮಾಸಿಕ ಸಂಬಳ ಸಿಗುವಂತಾಗಿ, ಮುಂದೆ ಇದು ರೂ. ೩೦ಕ್ಕೆ ಏರಿಕೆಯಾಯಿತು. ಮಹಾರಾಜರೂ ಇವರನ್ನು ಆಹ್ವಾನಿಸಿ ಇವರ ಹಾಡನ್ನು ಬಹಳವಾಗಿ ಮೆಚ್ಚಿ ಆಸ್ಥಾನವಿದ್ವಾಂಸರನ್ನಾಗಿ ನೇಮಿಸಿದರು. ಕ್ರಮೇಣ ಇವರ ಗಾಯನಪ್ರತಿಭೆ ದೇಶದಲ್ಲೆಲ್ಲ ಹರಡಿದ ಪರಿಣಾಮವಾಗಿ ತಂಜಾವೂರು, ಮಧುರೈ, ದೇವಕೋಟೆ, ಮುಂಬಯಿ, ಗದ್ವಾಲ್ ಮುಂತಾದ ಸ್ಥಳಗಳಲ್ಲಿ ಹಲವಾರು ಬಾರಿ ಆಹ್ವಾನಿತರಾಗಿ ಜನಮನ್ನಣೆಗಳಿಸಿ ಮೈಸೂರಿಗೆ ಕೀರ್ತಿ ತಂದುಕೊಟ್ಟರು.
ಸಾಧನೆಗೆ ಸಂದ ಸಮ್ಮಾನ
ಆರು ಅಡಿ ಎತ್ತರ, ತುಟಿಯ ಮೇಲೆ ಕಂಗೊಳಿಸುತ್ತಿದ್ದ ದೊಡ್ಡ ಗಿರಿಜಾಮೀಸೆ, ಹೊಂಬಣ್ಣ, ನಾದಾನುಸಂಧಾನ ಫಲದಿಂದ ದೀಪ್ತಿಯುತ ಕಣ್ಣುಗಳು, ಎಲ್ಲದಕ್ಕಿಂತ ಮಿಗಿಲಾಗಿ ತಲೆಯ ಮೇಲಿನ ಮೈಸೂರಿನ ಪೇಟದಿಂದ ಆಕ?ಕವಾಗಿದ್ದ ಇವರನ್ನು ನೋಡಿದವರೆಲ್ಲ ಗೌರವಿಸುವಂತೆ ಆಗುತ್ತಿತ್ತು. ಕೃಷ್ಣಪ್ಪನವರು ಪಕ್ಕವಾದ್ಯಗಾರರನ್ನು ಅತ್ಯಂತ ಗೌರವದಿಂದ ಆದರಿಸುತ್ತಿದ್ದ ಪರಿಯೂ ಬಹಳ ಶ್ಲಾಘನೀಯವಾಗಿತ್ತು.
ಇವರ ಶಿಷ್ಯರಲ್ಲಿ ಒಬ್ಬರಾಗಿದ್ದ ಗಾನವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮನವರು ಮದ್ರಾಸಿನಲ್ಲಿ ತಮ್ಮ ನೂತನ ಮನೆಯ ಗೃಹಪ್ರವೇಶಕ್ಕೆ ಕೃಷ್ಣಪ್ಪನವರಿಂದ ಹರಿದಾಸರ ಪದಗಳನ್ನೇ ಆಧರಿಸಿದ ಕಛೇರಿ ಏರ್ಪಡಿಸಿದ್ದರು. ಅಂದು ಹಾಜರಿದ್ದ ಗಣ್ಯ ವ್ಯಕ್ತಿಗಳ ಪೈಕಿ ’ಹಿಂದೂ’ ಪತ್ರಿಕೆಯ ಕಸ್ತೂರಿರಂಗ ಅಯ್ಯಂಗಾರ್ಯರು ಕೃಷ್ಣಪ್ಪನವರ ಸಂಗೀತಕ್ಕೆ ಮಾರುಹೋಗಿ ಆ ಜೀವವೂ ಮೈಸೂರಿನ ಶ್ರೀರಾಮ ಮಂದಿರದ ಬಾಹ್ಯನೋಟ ಅವರ ಅಭಿಮಾನಿಯಾಗಿದ್ದರು. ’ಹಿಂದೂ’ ಪತ್ರಿಕೆಯಲ್ಲಿ ಕೃಷ್ಣಪ್ಪನವರ ಸಂಗೀತದ ಗುಣಗಾನ ಮಾಡಿ ಬರೆದರು. ಮುಂದೆ ಕೃಷ್ಣಪ್ಪನವರ ಆದೇಶದಂತೆ, ವಿದುಷಿ ನಾಗರತ್ನಮ್ಮನವರು ತನ್ನ ಸರ್ವಸ್ವವನ್ನು ತಿರುವಯ್ಯಾರಿನಲ್ಲಿ ಸಂತ ತ್ಯಾಗರಾಜರ ಸಮಾಧಿಗೆ ಸೂಕ್ತ ರೀತಿಯಲ್ಲಿ ಕಟ್ಟಡ ಕಲ್ಪಿಸಿ ಅಮರರಾದರು.
ದೇಶದುದ್ದಗಲಕ್ಕೆ ಸಂಚರಿಸಿ ಅನೇಕ ಅಮೂಲ್ಯ ಬಹುಮಾನಗಳನ್ನು ಗಳಿಸಿದ ಕೃಷ್ಣಪ್ಪನವರನ್ನು ಪಂಡಾರ ಸನ್ನಿಧಿಯ ಸ್ವಾಮಿಗಳು ’ಗಾಯಕ ಶಿಖಾಮಣಿ’ ಎಂಬ ಬಿರುದು ಮತ್ತು ಚಿನ್ನದ ತೋಡಾವನ್ನಿತ್ತು ಸಮ್ಮಾನಿಸಿದರು. ಸ್ವಾಮಿಗಳು ’ಮಹಾವೈದ್ಯನಾಥ ಅಯ್ಯರ್’ ಅವರಾದ ಮೇಲೆ ಕೃಷ್ಣಪ್ಪನವರ ದೇವಗಾನ ಕೇಳುತ್ತಿದ್ದೇನೆ, ಎಂದು ಪ್ರಶಂಸಿಸಿದರು. ಶಿವಗಂಗೆಯ ಮಠದ ಸ್ವಾಮಿಗಳೂ ಇವರನ್ನು ಸಮ್ಮಾನಿಸಿದರು. ಮಂತ್ರಾಲಯದ ಮಠದಿಂದ ಆಗಿನ ಕಾಲದಲ್ಲೇ ರೂ. ೨೫ ವಾರ್ಷಿಕ ಸಂಭಾವನೆ ನೀಡಲ್ಪಟ್ಟಿತ್ತು.
ಮೈಸೂರು ದೊರೆಗಳು ಕೃಷ್ಣಪ್ಪನವರಿಗೆ ’ಗಾನವಿಶಾರದ’ ಎಂಬ ಬಿರುದನ್ನಿತ್ತು ಕನಕಾಭಿಷೇಕವನ್ನು ನೆರವೇರಿಸಿದರು. ಮಹಾರಾಜರು ಇತರ ದೇಶದಿಂದ ಹಾಗೂ ಉತ್ತರಭಾರತದಿಂದ ಅನೇಕ ವಿದ್ವಾಂಸರನ್ನು ಮೈಸೂರಿಗೆ ಆಹ್ವಾನಿಸಿ ಅವರ ಸಂಗೀತವನ್ನು ನಮ್ಮ ವಿದ್ವಾಂಸರು ಮತ್ತು ರಸಿಕರು ಕೇಳಿ ಜ್ಞಾನಾರ್ಜನೆ ಮಾಡಿಕೊಳ್ಳಲು ಸದವಕಾಶ ಕಲ್ಪಿಸುತ್ತಿದ್ದರು. ಇದರ ಲಾಭವನ್ನು ಪೂರ್ಣವಾಗಿ ಪಡೆದುಕೊಂಡವರು ಬಿಡಾರಂ ಕೃಷ್ಣಪ್ಪನವರು. ಅಬ್ದುಲ್ ಕರೀಂಖಾನ್ ಅವರ ಸಂಗೀತದಿಂದ ಪ್ರಭಾವಿತರಾಗಿ ಅವರ ಸಂಗೀತದ ಮರ್ಮಗಳನ್ನು ಅರಿತು ತಮ್ಮ ಗಾಯನದಲ್ಲಿ ಅಳವಡಿಸಿಕೊಂಡು ಕೆಲವೊಮ್ಮೆ ಹಿಂದಿ ಭಜನ್ಗಳನ್ನು ತಮ್ಮ ಕಛೇರಿಯಲ್ಲಿ ಹಾಡುತ್ತಿದ್ದರು. ಹರಿದಾಸ ಪದಗಳನ್ನು ಸೊಗಸಾಗಿ ಹಾಡುತ್ತಿದ್ದರು. ಜೊತೆಗೆ ವಯೊಲಿನ್ ವಾದನದಲ್ಲೂ ಸಿದ್ಧಹಸ್ತರಾಗಿದ್ದರು.
ಅವರ ಶ್ರುತಿಶುದ್ಧತೆಗೆ ’ಶುದ್ಧ ಸ್ವರಾಚಾರ್ಯ’ ಎಂಬ ಬಿರುದನ್ನು, ಲಯದಲ್ಲಿ ಅಪ್ರತಿಮ ಪಾಂಡಿತ್ಯವನ್ನು ಹೊಂದಿದ್ದರಿಂದ ’ಲಯ ಬ್ರಹ್ಮ’ ಎಂಬ ಬಿರುದನ್ನು ಪಡೆದರು. ಅಪಸ್ವರವನ್ನಾಗಲಿ, ಅಪಲಯವನ್ನಾಗಲಿ ಸಹಿಸುತ್ತಿರಲಿಲ್ಲ. ಒಮ್ಮೆ ಶಿ? ಚೌಡಯ್ಯನವರು ನುಡಿಸುವಾಗ ಹೊರಬಂದ ಅಪಸ್ವರವನ್ನು ತಡೆಯಲಾರದೆ ಕಪಾಳಮೋಕ್ಷ ಮಾಡಿದ್ದರು. ಪಲ್ಲವಿ ಗಾಯನದಲ್ಲಿ ಪ್ರಕಾಂಡ ಪಾಂಡಿತ್ಯವಿದ್ದುದರಿಂದ ’ಪಲ್ಲವಿ ಕೃಷ್ಣಪ್ಪ’ ಎಂಬ ಬಿರುದೂ ಸಂದಿತ್ತು. ಇನ್ನು ಇವರ ಶಿ?ವರ್ಗದಲ್ಲಿ ಪ್ರಮುಖರು ಪಿಟೀಲು ಚೌಡಯ್ಯ ಹಾಗೂ ರಾಳ್ಳಪಲ್ಲಿ ಅನಂತಕೃ?ಶರ್ಮ ಈ ಈರ್ವರೂ ’ಸಂಗೀತ ಕಲಾನಿಧಿ’ ಪ್ರಶಸ್ತಿಗೆ ಭಾಜನರಾದರು.
ಶಿಷ್ಯಪರಂಪರೆ
ಚೌಡಯ್ಯನವರ ಧಾರೆಯ ಶಿಷ್ಯಪರಂಪರೆಯಲ್ಲಿ ರುದ್ರಪಟ್ನಂ ವೆಂಕಟರಾಮಶಾಸ್ತ್ರಿ, ಸೇತುರಾಮಯ್ಯ, ಕಾಟಪುತ್ತೂರು ಕೃಷ್ಣಮೂರ್ತಿ, ಪ್ರೊಫೆಸರ್ ರಾಮರತ್ನಂ, ನಂಜುಂಡಸ್ವಾಮಿ ಪ್ರಮುಖರು.
ಬಿಡಾರಂ ಕೃಷ್ಣಪ್ಪನವರ ಕೆಲವು ಶಿಷ್ಯರು
ರಾಳ್ಳಪಳ್ಳಿ ಅನಂತಕೃಷ್ಣಶರ್ಮ – ಸಂಗೀತ, ತೆಲುಗು, ಸಂಸ್ಕೃತದಲ್ಲಿ ಉದ್ದಾಮ ಪಂಡಿತರಾಗಿದ್ದವರು. ಟಿ.ಎಸ್. ತಾತಾಚಾರ್, ಎ.ವಿ. ಕೃಷ್ಣಮಾಚಾರ್ (ಪದ್ಮಚರಣ್); ಶರ್ಮರ ಪುತ್ರ ಪ್ರೊಫೆಸರ್ ಫಣಿಶಾಯಿ.
ಗಾನವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ – ಕೋಲಾರ ನಾಗರತ್ನಮ್ಮ
ಬಿ. ದೇವೇಂದ್ರಪ್ಪ – ಹನುಮಾನ್ ಉಪಾಸಕರು, ಗಾಯಕರು, ವಾಗ್ಗೇಯಕಾರರು; ವಯೊಲಿನ್, ಸಿತಾರ್, ಜಲತರಂಗ, ವೀಣೆ ಮುಂತಾದ ಅನೇಕ ವಾದ್ಯಗಳನ್ನು ಉತ್ತಮಮಟ್ಟದಲ್ಲಿ ನುಡಿಸುತ್ತಿದ್ದ ಬಹುಮುಖೀ ಪ್ರತಿಭಾವಂತರು. ಅವರು ಏಕಲವ್ಯನಂತೆ ಬಿಡಾರಂರವರನ್ನು ಆರಾಧಿಸಿ ಸಾಧನೆ ಮಾಡುತ್ತಿದ್ದರು. ಒಮ್ಮೆ ಮಹಾರಾಜರ ಮುಂದೆ ಹಾಡಿದಾಗ ಮಹಾರಾಜರು ಗುರುಗಳು ಯಾರು ಎಂದು ಕೇಳಿದರು. ಬಿಡಾರಂರವರನ್ನು ತೋರಿಸಿದಾಗ ಬಿಡಾರಂರವರು ಸಂತೋ?ದಿಂದ ಅವರಿಗೆ ವಿದ್ಯಾದಾನ ಮಾಡಲಾರಂಭಿಸಿದರಂತೆ.
ಎ.ಎಸ್. ಶಿವರುದ್ರಪ್ಪ – ಕುರುಡು ಕಲಾವಿದರಾದ ಇವರಿಗೆ ಮಹಾರಾಜರು ಪಿಟೀಲಿಗೆ ಊoಡಿಟಿ ಸೇರಿಸಿ ಬಹುಮಾನವನ್ನಾಗಿ ಕೊಟ್ಟರು.
ಎ.ಕೆ. ಸುಬ್ಬರಾವ್ – ಕೊಳಲಿನ ಬಗ್ಗೆ ಸಂಶೋಧನೆ ಮಾಡಿ ಕೊಳಲುವಾದಕರಾಗಿ ಹೆಸರುಗಳಿಸಿದ್ದರು.
ಟಿ. ಪುಟ್ಟಸ್ವಾಮಯ್ಯ – ಪಿಟೀಲು ಚೌಡಯ್ಯನವರ ಸಹೋದರರು ಹಾಗೂ ಭಾವಯುತ ಗಾಯನಕ್ಕೆ ಹೆಸರು ಪಡೆದವರು.
ಟಿ. ಲಿಂಗಪ್ಪಾಜಿ – ಸಂಗೀತಜ್ಞರು, ಆಕಾಶವಾಣಿಯಲ್ಲಿ ಉದ್ಯೋಗಸ್ಥರಾಗಿದ್ದರು.
ಟಿ. ಗುರುರಾಜಪ್ಪ – ಆಕಾಶವಾಣಿ ತಿರುಚಿನಾಪಳ್ಳಿಯಲ್ಲಿ ನಿಲಯ ಕಲಾವಿದರಾಗಿದ್ದ ಇವರು ಪಿಟೀಲು ವಿದ್ವಾಂಸರು.
ಆರ್.ಆರ್. ಕೇಶವಮೂರ್ತಿ – ಖ್ಯಾತ ’ಏಳು ತಂತಿ’ ಪಿಟೀಲು ವಿದ್ವಾಂಸರು.
ಎ. ಸುಬ್ಬರಾವ್ – ಗುರುಗಳಂತೆ ಹರಿದಾಸ ಪದಗಳನ್ನೇ ಹಾಡಿ ಕಛೇರಿ ಮಾಡಿ ಮನೆಮಾತಾದ ಗಾಯಕರು.
ಹಾರ್ಮೋನಿಯಂ ಭೀಮರಾವ್ – ಪಿಟೀಲು, ಹಾರ್ಮೋನಿಯಂ ವಾದನದಲ್ಲಿ ಅಸಾಧಾರಣ ಸಾಧನೆಗೈದವರು.
ಸಮಯಕ್ಕೆ ಬೆಲೆ
ಕೃಷ್ಣಪ್ಪನವರ ಕಛೇರಿಗಳು ಸಂಜೆ ೪ಕ್ಕೆ ಆರಂಭವಾಗಿ ರಾತ್ರಿ ೧೦ರವರೆಗೆ ನಡೆಯುತ್ತಿದ್ದು, ಸಮಯಪ್ರಜ್ಞೆಗೆ ಮತ್ತೊಂದು ಹೆಸರಾಗಿದ್ದವರು ಕೃಷ್ಣಪ್ಪನವರು. ಪಕ್ಕವಾದ್ಯಗಳು ಸಮಯಕ್ಕೆ ಸರಿಯಾಗಿ ಬಾರದಿದ್ದಾಗಲೂ, ಪಕ್ಕವಾದ್ಯಗಳಿಲ್ಲಯೆ ಕಛೇರಿ ಪ್ರಾರಂಭಿಸುತ್ತಿದ್ದರಂತೆ. ಶಿಷ್ಯರಿಗೆ ಅವರವರ ಸಾಮರ್ಥ್ಯವನ್ನು ಅರಿತುಕೊಂಡು ಗಳಿಸಿದ ಸಂಗೀತಜ್ಞಾನವನ್ನು ಆಧರಿಸಿ ತಮ್ಮದೇ ಶೈಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡುತ್ತಿದ್ದರು. ಪ್ರತಿಯೊಬ್ಬರ ಕಛೇರಿಯನ್ನು ಮುಕ್ತಮನಸ್ಸಿನಿಂದ ಕೇಳಿ, ಹೇಗೆ ಹಾಡಬೇಕು, ಹೇಗೆ ಹಾಡಬಾರದೆಂಬುದನ್ನು ತಿಳಿಯಬೇಕೆನ್ನುತ್ತಿದ್ದರು.
ಹೀಗೆ ಝೀರೋದಿಂದ ಹೀರೋ ಆದ ಕೃಷ್ಣಪ್ಪನವರ ಕೌತುಕಭರಿತವಾದ ಜೀವನ ೨೯ನೇ ಜುಲೈ ೧೯೩೧ರಲ್ಲಿ ಕೊನೆಗೊಂಡಿತು. ಅವರ ೬೫ ವರ್ಷದ ಜೀವನದ ಅಂತ್ಯವನ್ನು ಮ್ಯೂಸಿಕ್ ಅಕಾಡೆಮಿಯ ಜರ್ನಲ್ನಲ್ಲಿ ಹೀಗೆ ಕೊಂಡಾಡಿದ್ದಾರೆ:
“ಅತ್ಯುತ್ತಮ ಗಾಯಕ, ಎತ್ತರದ ಆಕರ್ಷಕ ವ್ಯಕ್ತಿತ್ವ, ಲಕ್ಷ್ಯ-ಲಕ್ಷಣಗಳಲ್ಲಿ ಸಮನಾದ ಪಾಂಡಿತ್ಯದಿಂದ, ಸ್ಫುಟವಾದ ಉಚ್ಚಾರಣೆಯಿಂದ ಅರ್ಥವನ್ನರಿತು ಹಾಡುವ ಕಾಳಜಿ ಹೊಂದಿದ್ದು, ಅಕಾಡೆಮಿಯ ದೀರ್ಘ ಸಂಪರ್ಕ ಹೊಂದಿದ್ದ ಇವರ ಅಗಲಿಕೆಯಿಂದ ಸಂಗೀತಲೋಕಕ್ಕೆ ತುಂಬಲಾರದ ನಷ್ಟವಾಗಿದೆ.”
ಇಸ್ಪೀಟು ಆಡುವುದು, ನೆಶ್ಯ ಸೇದುವುದು ಅವರಿಗೆ ಇಷ್ಟವಾದ ಅಭ್ಯಾಸಗಳು. ಜ್ಯೋತಿಷ್ಯದಲ್ಲೂ ನಂಬಿಕೆ. ಪರದೇಶಕ್ಕೆ ಹೋಗಿ ನಮ್ಮ ಸಂಗೀತದ ಹಿರಿಮೆಯನ್ನು ಸಾರುವ ಹೆಬ್ಬಯಕೆ ಇದ್ದು, ಎಲ್ಲ ಜ್ಯೋತಿಷ್ಯಗಳಲ್ಲಿ ಈ ಒಂದೇ ಪ್ರಶ್ನೆ ಕೇಳುತ್ತಿದ್ದರು. ಅದು ಕನಸಾಗಿಯೇ ಉಳಿಯಿತು. ವಾಸುದೇವಾಚಾರ್ಯರ ಮತ್ತು ಕೃಷ್ಣಪ್ಪನವರ ಮಧ್ಯೆ ವಿರಸ ತಂದೊಡ್ಡುತ್ತಿದ್ದರು ಹಲವರು ಕುಹಕಿಗಳು. ಆದರೆ ತಾವು ಹೋದಕಡೆ ಪ್ರಶಂಸೆ ಸ್ವೀಕರಿಸಿದಾಗ, “ಒಮ್ಮೆ ನಮ್ಮ ವಾಸುದೇವಾಚಾರ್ಯರ ಸಂಗೀತ ನೀವು ಕೇಳಬೇಕು” ಎಂದು ಹೇಳುತ್ತಿದ್ದರು.
ಒಮ್ಮೆ ಬೆಂಗಳೂರಿನ ರಸಿಕರೆಲ್ಲ ಸೇರಿ ’ಮಹಾ ವಿದ್ವಾನ್’ ಎಂದು ಗುರುತಿಸಿ ಸಮ್ಮಾನಿಸಿದರಂತೆ. ಈ ಸುದ್ದಿ ಮೈಸೂರು ತಲಪಿತು. ಕೃಷ್ಣಪ್ಪನವರ ಸಂಗೀತ ಮಾರ್ಗದರ್ಶಿಗಳಾದ ವೀಣೆ ಶೇಷಣ್ಣನವರು ದಕ್ಷಿಣದೇಶದ ಪ್ರಸಿದ್ಧ ಪಲ್ಲವಿ ವಿದ್ವಾಂಸನ ಎದುರು ಹಾಡಿ ಬಿರುದನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ಸವಾಲನ್ನು ಏರ್ಪಾಡು ಮಾಡಿದರು. ಪಲ್ಲವಿ ವಿದ್ವಾಂಸ ಹಾಡುವ ಪಲ್ಲವಿಯನ್ನು ಕೃಷ್ಣಪ್ಪನವರು ಆರು ಕಾಲದಲ್ಲಿ ಹಾಡಬೇಕೆಂಬುದು ಸವಾಲಾಗಿತ್ತು. ಇದಕ್ಕೆ ಕೃಷ್ಣಪ್ಪನವರು ಒಪ್ಪಿದರು, ಆದರೆ ತಾನು ಹಾಡುವ ಪಲ್ಲವಿಯನ್ನು ಪರಸ್ಥಳದ ವಿದ್ವಾಂಸರೂ ಹಾಡಬೇಕೆಂಬ ಷರತ್ತು ಒಡ್ಡಿದರು. ಕೃಷ್ಣಪ್ಪನವರು ಈ ಸವಾಲನ್ನು ಉತ್ತಮವಾಗಿ ಎದುರಿಸಿ ಅಪಾರ ಮೆಚ್ಚುಗೆಗೆ ಪಾತ್ರರಾದಾಗ, ಶೇಷಣ್ಣನವರು ಕೃಷ್ಣಪ್ಪನವರನ್ನು ಬಿಗಿದಪ್ಪಿ ಆನಂದಬಾಷ್ಪ ಸುರಿಸಿದರಂತೆ ಹಾಗೂ ಅಮೂಲ್ಯವಾದ ಬಹುಮಾನವನ್ನಿತ್ತು ಗೌರವಿಸಿದರಂತೆ.
ಶ್ರೀರಾಮನ ಸೇವೆ – ಪೂರ್ಣಾನುಗ್ರಹ
ಚಿಕ್ಕಂದಿನಲ್ಲಿ ತನ್ನ ಜೀವನದ ದಿಕ್ಕನ್ನೇ ಬದಲಿಸಿದ ಶ್ರೀರಾಮನನ್ನು ಪ್ರತಿದಿವಸ ನೆನೆದು ಶ್ರೀರಾಮನಿಗಾಗಿ ಒಂದು ಮಂದಿರ ಕಟ್ಟಬೇಕೆಂಬ ಬಹುವರ್ಷದ ಬಯಕೆಯನ್ನು ಈಡೇರಿಸಿಕೊಳ್ಳಲು ತಮ್ಮನ್ನು ಉದ್ಧರಿಸಿದ ಸಾಹುಕಾರ ತಮ್ಮಯ್ಯ, ಡಾ. ನಂಜುಂಡಯ್ಯ ಮುಂತಾದವರೊಂದಿಗೆ ಚರ್ಚಿಸಿ ಅವರಿಂದ ಉತ್ತೇಜನ ಪಡೆದು ರಾಮಮಂದಿರ ಕಟ್ಟಲು ಪ್ರಾರಂಭಿಸಿಯೇಬಿಟ್ಟರು. ಹಣ ಸಂಗ್ರಹಕ್ಕಾಗಿ ಅನೇಕ ಸ್ಥಳಗಳಿಗೆ ಅನಾರೋಗ್ಯದಿಂದ ಬಳಲುತ್ತಿದ್ದರೂ ಲೆಕ್ಕಿಸದೆ ಕಚೇರಿಗಳನ್ನು ಮಾಡಿ, ಗಳಿಸಿದ ದುಡ್ಡನ್ನು ರಾಮಮಂದಿರಕ್ಕಾಗಿ ಮೀಸಲಿಟ್ಟು, ಜೀವನದಲ್ಲಿ ತಮಗೆ ದೊರಕಿದ ಚಿನ್ನ, ಬೆಳ್ಳಿ, ಅಮೂಲ್ಯವಾದ ಬಹುಮಾನಗಳೆಲ್ಲವನ್ನು ಮಾರಿದರು. ಅದಷ್ಟೇ ಅಲ್ಲದೆ ತಮ್ಮ ಧರ್ಮಪತ್ನಿಯ ಚಿನ್ನದ ಮಾಂಗಲ್ಯವನ್ನೂ ಮಾರಿ ಬಂದ ಹಣವನ್ನೆಲ್ಲ ರಾಮಾರ್ಪಣೆ ಮಾಡಿದ ತ್ಯಾಗಮಯಿ ಕೃಷ್ಣಪ್ಪನವರು. ದಾಸರು ನುಡಿದಂತೆ ’ಕೆರೆಯ ನೀರನು ಕೆರೆಗೆ’ ಚೆಲ್ಲಿದರು. ಹಿಂದೊಮ್ಮೆ ಮದ್ರಾಸಿನಲ್ಲಿದ್ದ ಇವರ ಅಭಿಮಾನಿ ಆಳ್ವಾರ್ ಚೆಟ್ಟಿಯಾರ್ ತಮ್ಮ ಸರ್ವಸ್ವವನ್ನು ಕಳೆದುಕೊಂಡಾಗ, ಕೃಷ್ಣಪ್ಪನವರು ಅವರಿಗಾಗಿ ಕಛೇರಿಗಳನ್ನು ಮಾಡಿ ಹಣ ಸಂಗ್ರಹಿಸಿ ಕೊಟ್ಟಿದ್ದರಂತೆ. ಹಾಗಾಗಿ ರಾಮಮಂದಿರಕ್ಕಾಗಿ ಚೆಟ್ಟಿಯಾರ್ರವರು ಕಬ್ಬಿಣದ ತೊಲೆಗಳನ್ನು ಕಳುಹಿಸಿಕೊಟ್ಟರಂತೆ.
ಮೈಸೂರಿನ ನಾರಾಯಣಶಾಸ್ತ್ರಿ ಬೀದಿಯಲ್ಲಿ ಕಂಗೊಳಿಸುತ್ತಿರುವ ’ಬಿಡಾರಂ ಕೃಷ್ಣಪ್ಪ ರಾಮ ಮಂದಿರ’ವು ಸಂಗೀತ ಪ್ರಪಂಚದಲ್ಲಿನ ಅತಿ ಅಮೂಲ್ಯವಾದ ಕಟ್ಟಡ. ಈ ’ಪ್ರಸನ್ನ ಸೀತಾರಾಮ ಮಂದಿರ’ವು ತಂಜಾವೂರಿನ ಸಂಗೀತ ಮಹಲ್ನಂತೆ, ಹಂಪಿಯ ಪದ್ಮಸದನವನ್ನು ಹೋಲುತ್ತದೆ. ೪೦ x ೮೦ ಅಡಿಗಳಿರುವ ಹಜಾರವು ಮದ್ರಾಸ್ ಟೆರೇಸ್ನಿಂದ ಕೂಡಿದೆ. ದಶಾವತಾರದ ಹಾಗೂ ಇತರ ದೇವತೆಗಳಿರುವ ಆಕ?ಕವಾಗಿ ಫ್ರೇಮ್ ಆಗಿರುವ ತೈಲವರ್ಣದಿಂದ ಕಂಗೊಳಿಸುತ್ತಿರುವ ಈ ಭವನದಲ್ಲಿ ೪ ಆಕ?ಕ ನಿಲವುಗನ್ನಡಿಗಳಿವೆ. ಮುಖ್ಯವಾಗಿ ಎಲ್ಲರ ಮನಸೆಳೆಯುವ ಚಿತ್ರವೆಂದರೆ ಶ್ರೀರಾಮನು ಸೀತಾಮಾತೆಯೊಡನೆ ಕುಳಿತಿರುವುದು; ಸುತ್ತಲೂ ಭರತ, ಲಕ್ಷ್ಮಣ, ಶತ್ರುಘ್ನ ನಿಂತಿರುವುದು. ಶ್ರೀರಾಮನ ಪಾದವನ್ನು ತನ್ನ ಅಂಗೈಯಲ್ಲಿಟ್ಟುಕೊಂಡಿರುವ ಹನುಮಂತನೊಡನೆ ಇರುವ ಈ ಭವ್ಯ ಚಿತ್ರ ನೋಡಿದವರಿಗೆ ನಿಜಕ್ಕೂ ಆನಂದಬಾಷ್ಟ ಬರದಿರದು. ಈ ಚಿತ್ರದಲ್ಲಿನ ಪ್ರತಿಯೊಂದು ವ್ಯಕ್ತಿಯ ಮುಖಭಾವ ವರ್ಣನಾತೀತ, ಇದನ್ನು ಕಂಡೇ ಆನಂದಿಸಬೇಕು.
ಈ ಹಜಾರದ ಸುತ್ತಲೂ ನಾಲ್ಕು ಕೊಠಡಿಗಳಿವೆ. ಪಡಸಾಲೆಯಲ್ಲಿ ಸಿರಾಮಿಕ್ ಟೈಲ್ಸ್ ಹಾಸಲ್ಪಟ್ಟಿದೆ. ಪುರಂದರ, ತ್ಯಾಗರಾಜ, ಶ್ಯಾಮಶಾಸ್ತ್ರಿ, ದೀಕ್ಷಿತರ್, ಶಂಕರ, ರಾಮಾನುಜ, ಮಧ್ವ, ನಾಲ್ಕು ಯದುವಂಶ ರಾಜರ ಭಾವಚಿತ್ರಗಳಿವೆ. ಪಟ್ಣಂ ಸುಬ್ರಹ್ಮಣ್ಯ ಅಯ್ಯರ್, ತಂಜಾವೂರು ಮಹಾವೈದ್ಯನಾಥ ಅಯ್ಯರ್, ಪಾಲ್ಘಾಟ್ ಪರಮೇಶ್ವರ ಭಾಗವತರು, ನಾಮಕ್ಕಲ್ ನರಸಿಂಹ ಅಯ್ಯಂಗಾರ್, ಸುಬ್ಬರಾಮ ದೀಕ್ಷಿತರ್, ಕೊಯಮತ್ತೂರು ರಾಘವಯ್ಯರ್, ವೀಣೆ ಶೇಷಣ್ಣ, ಮೈಸೂರು ವಾಸುದೇವಾಚಾರ್ಯರು, ಟಿ. ಚೌಡಯ್ಯ ಹಾಗೂ ಬಿಡಾರಂ ಕೃ?ಪ್ಪ ಅವರ ಭಾವಚಿತ್ರಗಳಿವೆ. ಇದಕ್ಕೆಲ್ಲ ಮೆರಗು ನೀಡುವುದು ಎತ್ತರದ ಮೇಲ್ಛಾವಣಿಯಿಂದ ಇಳಿಬಿಟ್ಟಿರುವ ದೀಪಗಳು (Chandeliers). ೧೯೨೮ರಲ್ಲಿ ಈ ಕಟ್ಟಡದ ನಿರ್ಮಾಣ ಮುಗಿಯಿತು. ಒಂದು ನವಿರೇಳುವ ಪ್ರಸಂಗವೆಂದರೆ, ಒಮ್ಮೆ ಕೋತಿಯೊಂದು ರಾಮನ ಪಟದ ಮುಂದೆ ಬಂದು, ಓಡಿಸಲು ಎಷ್ಟು ಪ್ರಯತ್ನಪಟ್ಟರೂ ಅಲುಗಾಡದೆ ಕೂತಿತ್ತು. ಬಿಡಾರಂರವರು ರಾಮಪಟ್ಟಾಭಿಷೇಕ ಮಾಡುವ ಸಂಕಲ್ಪ ಮಾಡಿಕೊಂಡಿದ್ದು ನೆನಪಿಗೆ ಬಂದು ಚೌಡಯ್ಯನವರಿಗೆ ಪಟ್ಟಾಭಿಷೇಕ ಏರ್ಪಾಡು ಮಾಡಲು ಸೂಚಿಸಿದಾಕ್ಷಣ ಕೋತಿ ಹೊರನಡೆಯಿತಂತೆ. ಕಳೆದ ವರ್ಷವಷ್ಟೇ ಈ ಕಟ್ಟಡದ ಹಾಗೂ ತೈಲವರ್ಣದ ಚಿತ್ರಗಳ ಜೀರ್ಣೋದ್ಧಾರ ಮಾಡಿ ಅಂದಿನ ವೈಭವ ಮರುಕಳಿಸುವಂತೆ ಮಾಡಿದ ಕೀರ್ತಿ ಈಗಿನ ಕಾರ್ಯದರ್ಶಿ ಲಕ್ಷೀನಾರಾಯಣ ಮತ್ತು ತಂಡಕ್ಕೆ ಸಲ್ಲಬೇಕು.
ಈ ಭವ್ಯ ಸಭಾಂಗಣದಲ್ಲಿ ಇಂದಿಗೂ ಪ್ರತಿ ರಾಮನವಮಿ ಸಂಬಂಧವಾದ ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ. ಸಂಗೀತ ಪ್ರಸ್ತುತಪಡಿಸುವವರಿಗೆ ಶ್ರೀರಾಮನ ದರ್ಬಾರಿನಲ್ಲಿ ಹಾಡಿದ ಅನುಭವ ಖಂಡಿತ ಆಗದಿರದು. ಅಂದಿನ ದಿಗ್ಗಜರೆಲ್ಲರೂ ಇಲ್ಲಿ ಹಾಡಿ, ವಾದ್ಯ ನುಡಿಸಿ ಜನ್ಮಸಾರ್ಥಕ್ಯವನ್ನು ಕಂಡುಕೊಂಡಿದ್ದಾರೆ. ಈ ಭಾಗ್ಯ ನನಗೆ ಎರಡು ಬಾರಿ ದೊರಕಿದೆ ಎಂಬ ಹೆಮ್ಮೆ ಇದೆ.
ಹೀಗೆ ಶ್ರೀರಾಮನ ಪೂರ್ಣಾನುಗ್ರಹ ಪಡೆದ ಬಿಡಾರಂ ಕೃಷ್ಣಪ್ಪನವರು ರಾಮಭಕ್ತಾಗ್ರೇಸರಲ್ಲದೆ ಮತ್ತೇನು?