ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮಾರ್ಚ್ 2020 > ‘ವಿರೋಧಕ್ಕಾಗಿ ವಿರೋಧ’

‘ವಿರೋಧಕ್ಕಾಗಿ ವಿರೋಧ’

ಎಸ್.ಆರ್.ಆರ್.

ಸಾತ್ತ್ವಿಕ ವರ್ತನೆ ಸೌಮ್ಯವಾಗಿರುವುದರಿಂದ ಅದರಲ್ಲಿ ಆಕರ್ಷಣೆ ಕಡಮೆ; ರಾಜಸಿಕ ಸಂಚಲನಗಳಲ್ಲಿ ಹೆಚ್ಚಿನ ಉರುಬು, ಉನ್ಮಾದ, ಉರವಣೆಗಳು ಇರುತ್ತವಾದ್ದರಿಂದ ಇವುಗಳಲ್ಲಿ ಸೆಳೆತ ಹೆಚ್ಚು. ಈಗಲಾದರೋ ರಾಷ್ಟ್ರದ ಅತ್ಯುನ್ನತ ನಿರ್ಣಯಸ್ಥಾನಗಳಾದ ಸಂಸತ್ತು ಸರ್ವೋಚ್ಚ ನ್ಯಾಯಾಲಯಗಳ ತೀರ್ಪುಗಳ ವಿರುದ್ಧವೂ ವಿಕ್ಷಿಪ್ತ ವ್ಯಕ್ತಿಗಳಂತೆ ರಾಜ್ಯಸರ್ಕಾರಗಳೂ ಸೆಡವನ್ನು ತೋರುವ ಪ್ರವೃತ್ತಿ ಬೆಳೆದಿದೆ. ಇದನ್ನು ಒಂದು ಅಧೋಬಿಂದು ಎನ್ನಬೇಕಾಗಿದೆ. ವ್ಯವಸ್ಥೆಯಿಂದ ನಾವು ಒತ್ತಾಸೆಯನ್ನು ಅಪೇಕ್ಷಿಸಿದರೆ ವ್ಯವಸ್ಥೆಯನ್ನು ನಾವು ಗೌರವಿಸಲೇಬೇಕೆಂಬುದು ಅನಿವಾರ್ಯ. ಅಸಮ್ಮತಿಯ ಅಭಿವ್ಯಕ್ತಿಗೆ ಶಿಷ್ಟಮಾರ್ಗಗಳು ಲಭ್ಯವಿವೆ. ಬೀದಿಕಲಹಗಾರಿಕೆಯು ಸಂಸದೀಯ ಪ್ರಜಾಪ್ರಭುತ್ವ ಮರ್ಯಾದೆಗೆ ಹೊಂದುವ ವಿಧಾನವಲ್ಲ. ‘ವಿರೋಧಕ್ಕಾಗಿ ವಿರೋಧ’ ಎಂಬುದೇ ನಿತ್ಯದ ಸಮಾಜಸ್ಥಿತಿಯಾದಲ್ಲಿ ಅದು ಅನವಸ್ಥೆಗೂ ಅರಾಜಕತೆಗೂ ದಾರಿಮಾಡುತ್ತದೆ. ಹಾಗೆ ಆದಲ್ಲಿ ‘ವಿರೋಧಿ’ಗಳೂ ಉಳಿಯಲಾರರು. ಛಲಪ್ರೇರಿತ ದೊಂಬಿಗಾರರೂ ಪ್ರತಿಪಕ್ಷಗಳವರೂ ಹೊಣೆಗಾರಿಕೆಯಿಂದ ವರ್ತಿಸಬೇಕು.

ವಿರೋಧವನ್ನು ವ್ಯಕ್ತಪಡಿಸಬೇಕಾದಲ್ಲಿ ಅದು ಹಾರಿಕೆಯ ರೀತಿಯದಾಗದೆ ಪರಾಮರ್ಶನ ಪೂರ್ವಕವಾಗಿರಬೇಕಾಗುತ್ತದೆ. ಮುಖ್ಯವಾಗಿ ವಿರೋಧಪಕ್ಷಗಳು ತಾವೂ ರಾಜ್ಯಾಂಗದ ಭಾಗಗಳೇ ಎಂಬುದನ್ನು ಮರೆಯಬಾರದು. ಬೀದಿಗಿಳಿಯವುದು, ಕಾಯ್ದೆಪಾಲನೆಯ ನಿರಾಕರಣೆ, ಹಿಂಸಾಚಾರಗಳಿಂದ ಅರಾಜಕತೆ ಸೃಷ್ಟಿಯಾಗುತ್ತದೆ; ಪ್ರತಿಪಕ್ಷಗಳು ಜನರ ದಾರಿತಪ್ಪಿಸುವುದನ್ನು ಬಿಡಬೇಕು – ಎಂದು ಪ್ರಧಾನಿ ನರೇಂದ್ರಮೋದಿ ಅವರು ಸಂಸತ್ತಿನಲ್ಲಿ ಕಳೆದ ಫೆಬ್ರುವರಿ 6ರಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನನಿರ್ಣಯಕ್ಕೆ ಸಂಬಂಧಿಸಿದ ಚರ್ಚೆಯ ಸಂದರ್ಭದಲ್ಲಿ ಕರೆ ನೀಡಬೇಕಾಗಿ ಬಂದದ್ದು ಚಿಂತನೀಯವಾಗಿದೆ.

ಇಷ್ಟಾಗಿ ಈಗಿನ ಗುಲ್ಲುಗಳ ಮೂಲದ ತಾತ್ತ್ವಿಕತೆಯಾದರೂ ಏನು? ಒಂದು ದೇಶದ ಅಧಿಕೃತ ಪ್ರಜೆಗಳು ಯಾರೆಂಬುದೂ ಅವರಿಗೆ ಇರಬೇಕಾದ ಅರ್ಹತೆಗಳು ಏನೆಂಬುದೂ ದೇಶದ ರಾಜ್ಯಾಂಗದ ಆಧಾರತತ್ತ್ವಗಳೇ ಎಂಬುದನ್ನು ಅಲ್ಲಗಳೆದಲ್ಲಿ ರಾಜ್ಯರಚನೆ – ಸಾಂವಿಧಾನಿಕತೆಗಳನ್ನೇ ತಿರಸ್ಕರಿಸಿದಂತೆ ಆಗದೆ? ಈ ದೇಶದ ಮೂಲದವರೇ ಆಗಿದ್ದು ಇತಿಹಾಸ ಸನ್ನಿವೇಶಗಳಿಂದ ಅನ್ಯದೇಶಗಳಿಗೆ ವಲಸೆ ಹೋಗಿದ್ದವರಿಗೆ ಅವರು ಅರ್ಹರಾಗಿದ್ದಲ್ಲಿ ಅವರಿಗೆ ಸ್ವದೇಶದಲ್ಲಿ ಪ್ರಜೆಗಳ ಸ್ಥಾನವನ್ನು ಪರೀಕ್ಷಣಾನಂತರ ನೀಡಬೇಕೆಂಬುದಾಗಲಿ ಅನರ್ಹರಿಗೆ ಈ ಸ್ಥಾನ ಸಲ್ಲದೆಂಬುದಾಗಲಿ ವಿವಾದದ ವಿಷಯವಾಗಬಲ್ಲದೆಂಬುದು ಸೋಜಿಗ

ತರುತ್ತದೆ. ಈಗಿನ ಆರೂಢ ಸರ್ಕಾರದ ಬಗೆಗೆ ವಿಪಕ್ಷಗಳು ಬೆಳೆಸಿಕೊಂಡಿರುವ ಅಸಹನೆಯೂ ಅವು ಹುಟ್ಟುಹಾಕುತ್ತಿರುವ ರಂಪಾಟಗಳೂ ವಿವೇಚನಶೂನ್ಯವೆಂದು ಹೇಳದೆ ವಿಧಿಯಿಲ್ಲ.

ಗಂಭೀರ ಸಮಸ್ಯೆಗಳನ್ನು ದಶಕಗಳುದ್ದಕ್ಕೂ ಪರಿಹರಿಸದೆ ರಾಜಕೀಯಲಾಭಕ್ಕಾಗಿ ಬಳಸಿಕೊಳ್ಳುತ್ತ ಬಂದಿರುವ ದೀರ್ಘವೂ ಅಸಹ್ಯವೂ ಕಾನೂನುಬಾಹಿರವೂ ಆದ ಹಿನ್ನೆಲೆ ಕಾಂಗ್ರೆಸ್ಸಿನದು. ಈಗಲಾದರೋ ಮತದಾರರಿಂದ ತಿರಸ್ಕಾರಕ್ಕೆ ಗುರಿಯಾಗಿ ತನ್ನ ಅಸ್ತಿತ್ವವನ್ನುಳಿಸಿಕೊಳ್ಳಲು ಅದೇ ಹಳಸಲು ಮುಸ್ಲಿಂ ತುಷ್ಟೀಕರಣ ಪ್ರವೃತ್ತಿಗೆ ಜೋತುಬೀಳಲೆಳಸುತ್ತಿರುವುದು ಲಜ್ಜಾಸ್ಪದವಾಗಿದೆ. ಲಜ್ಜೆಯಂತಹ ಸಭ್ಯತೆಗಳಿಂದ ಕಾಂಗ್ರೆಸ್ ದೂರ ಸರಿದು ದೀರ್ಘಕಾಲವಾಗಿದೆ.

ಹಿಂದಿನ ಇತಿಹಾಸವನ್ನು ಸ್ಥೂಲವಾಗಿ ನೆನಪಿಸಿಕೊಂಡರೂ ಕಾಂಗ್ರೆಸ್ ಮತ್ತು ಅನ್ಯವಿಪಕ್ಷಗಳ ಈಗಿನ ಸ್ವೈರವರ್ತನೆ ಎಷ್ಟು ಹಾಸ್ಯಾಸ್ಪದವೆಂಬುದು ಮನವರಿಕೆಯಾದೀತು.

ಸಿ.ಎ.ಎ. ವಿರೋಧಿಗಳು ಇದನ್ನು ಸ್ಮರಿಸಿಕೊಳ್ಳಲಿ: ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರೇ ಆಗಿನ ಅಸ್ಸಾಮಿನ ಮೊದಲ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು – ಪಶ್ಚಿಮ ಪಾಕಿಸ್ತಾನ ಹಾಗೂ ಪೂರ್ವ ಪಾಕಿಸ್ತಾನ (ಈಗಿನ ಬಂಗ್ಲಾದೇಶ) ಭಾಗಗಳಿಂದ ಬಂದಿರುವ ಹಿಂದೂ ನಿರಾಶ್ರಿತರನ್ನೂ ಮುಸ್ಲಿಂವಲಸಿಗರನ್ನೂ ಸಮೀಕರಿಸಬಾರದು, ಅವರನ್ನು ಭಿನ್ನ ಮಾನದಂಡಗಳಿಂದಲೇ ಪರಿಶೀಲಿಸುವುದು ಆವಶ್ಯಕ – ಎಂದು. ಅದೇ ತಥ್ಯವನ್ನೇ ಅಲ್ಲವೆ ಈಗಿನ ಮೋದಿ ಸರ್ಕಾರ ಪುನರುಚ್ಚರಿಸಿರುವುದು? ಇದನ್ನು ಕಾಂಗ್ರೆಸ್ ಹಾಗೂ ಎಡಪಕ್ಷಗಳು ಈಗ ವಿರೋಧಿಸುತ್ತಿರುವುದು ಹೇಗೆ ಸಮಂಜಸವಾದೀತು?

ಕಾಶ್ಮೀರದ ವಿಶೇಷತೆಯನ್ನು ನೀರುಪಾಲು ಮಾಡಿದ್ದುದು ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ಸೇ. ಹೀಗೆ ಕಾಶ್ಮೀರೀ ಪಂಡಿತ ಸಮುದಾಯದ ಅಸಂಖ್ಯ ಜನರನ್ನು ನಿರಾಶ್ರಿತರಾಗಿಸಿ ಬೇರೆಡೆಗಳ ಶಿಬಿರಜೀವನಕ್ಕೆ ಅಟ್ಟಿದ್ದುದು ಸ್ವಯಂ ಕಾಂಗ್ರೆಸ್ಸೇ. ಅದೇ ಕಾಂಗ್ರೆಸ್ ಈಗ ನಿರಾಶ್ರಿತರ ಪುನರ್ವಸತಿಗೆ ಅಡ್ಡಗಾಲು ಹಾಕುತ್ತಿದೆ.

ಸಿ.ಎ.ಎ.ನಂತೆ ಇಂಡಿಯನ್ ಪಾಪ್ಯುಲೇಶನ್ ರಿಜಿಸ್ಟರ್ ದಾಖಲಾತಿಕ್ರಮವನ್ನೂ ಕಾಂಗ್ರೆಸ್ ವಿರೋಧಿಸುತ್ತಿದೆ. ಈ ಕಟ್ಟಳೆಯನ್ನು 2010ರಲ್ಲಿ ಜಾರಿಗೆ ತಂದಿದ್ದುದು ಕಾಂಗ್ರೆಸ್ ಸರ್ಕಾರವೇ. ಈಗ ಅದೇ ಕಾಂಗ್ರೆಸ್ ತಾನೇ ಹಿಂದೆ ಅಮಲುಗೊಳಿಸಿದ್ದ ನೀತಿಯನ್ನು ವಿರೋಧಿಸುತ್ತಿದೆ – ಬಹುಶಃ ಅದರ ಕೀರ್ತಿ ಮೋದಿ ಸರ್ಕಾರಕ್ಕೆ ಸಂದೀತೆಂಬ ಗಾಬರಿಯಿಂದ ಮತ್ತು ಈಗಿನ ಸರ್ಕಾರದ ಎಲ್ಲ ಕ್ರಮಗಳನ್ನೂ ವಿರೋಧಿಸುತ್ತಿರಬೇಕೆಂಬ ಜಾಡ್ಯದಿಂದ. ಮನವಿದಾರರ ಅರ್ಹತಾಪರೀಕ್ಷಣೆಗಾಗಿ ತಂದೆ-ತಾಯಿ, ಭಾಷೆ ಮೊದಲಾದ ವಿವರಗಳನ್ನು ಕೇಳುವುದೂ ತಪ್ಪೆನ್ನುತ್ತಿದೆ ಕಾಂಗ್ರೆಸ್. ಹೀಗೆ ಈಗ ನಡೆದಿರುವ ಯಾವ ವಿರೋಧಾವಳಿಯಲ್ಲಿಯೂ ಸತ್ತ್ವ ಕಾಣದು. ಜನ ಮರುಳೋ ಜಾತ್ರೆ ಮರುಳೋ!

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ