ಈ ಜಗತ್ತಿನಲ್ಲಿ ಯೋಗಿಗಳೂ ಸಂನ್ಯಾಸಿಗಳೂ ಒಂದೇ ಆಗಿರುವರು. ನಾಮಭೇದದಿಂದ ಬೇರೆಯಾಗಿ ತೋರಬಹುದು. ಆದರೆ ವಿಚಾರದೃಷ್ಟಿಯಿಂದ ನೋಡಿದರೆ ಅವರು ಒಂದೇ ಎಂದು ನಿಶ್ಚಿತವಾಗುವುದು. ನಾಮದಿಂದ ಬರುವ ದ್ವೈತದ ಆರೋಪವನ್ನು ಬಿಟ್ಟುಕೊಟ್ಟರೆ, ಯೋಗವೆಂಬುದೇ ಸಂನ್ಯಾಸವು. ಯಾಕೆಂದರೆ ಬ್ರಹ್ಮದೃಷ್ಟಿಯಿಂದ ನೋಡಲು, ಇವೆರಡರಲ್ಲಿ ಭೇದಕ್ಕೆ ಅವಕಾಶವಿಲ್ಲ. ಒಬ್ಬನನ್ನೇ ಬೇರೆ ಬೇರೆ ಹೆಸರುಗಳಿಂದ ಕರೆದಂತೆ, ಅಥವಾ ಎರಡು ಮಾರ್ಗಗಳಿಂದ ಒಂದೇ ಊರಿಗೆ ಹೋದಂತೆ, ಇಲ್ಲವೆ ಸ್ವಭಾವತಃ ನೀರು ಒಂದೇ ಆಗಿದ್ದು ಬೇರೆ ಬೇರೆ ಪಾತ್ರೆಗಳಲ್ಲಿ ಹಾಕಿದಾಗ ಭಿನ್ನವೆನಿಸುವಂತೆ, ಯೋಗ ಮತ್ತು ಸಂನ್ಯಾಸಗಳಲ್ಲಿ ಭಿನ್ನತ್ವವುಂಟೆಂದು ತಿಳಿ, ಅರ್ಜುನ! ಸಂನ್ಯಾಸಿಯೇ ಯೋಗಿಯೆಂದು ಜಗತ್ತಿನಲ್ಲಿ ಎಷ್ಟೋ ಶಾಸ್ತ್ರಗಳು ಏಕವಾಕ್ಯತೆಯ ಡಂಗುರವನ್ನು ಸಾರಿರುವವು. ತ್ಯಾಗಮಾಡಿದ ಸಂಕಲ್ಪವೂ ನಷ್ಟವಾದವನೇ ಯೋಗದ ಸಾರವಾದ ಬ್ರಹ್ಮವನ್ನು ಹೊಂದುವನೆಂದು ಆತನ ಅನುಭವಕ್ಕೆ ಬರುವುದು. ಸಾಧಕನು ಯಮ-ನಿಯಮ ರೂಪದ ತಳದಿಂದ ಆಸನಗಳ ಕಾಲುದಾರಿಗೆ ಬರುವನು. ಅನಂತರ ಪ್ರಾಣಾಯಾಮವೆಂಬ ಗಿರಿಮಾರ್ಗದಿಂದ ಯೋಗರೂಪ ಪರ್ವತದ ಮೇಲೆ ಬರಹತ್ತುವನು. ಅನಂತರ ಪ್ರತ್ಯಾಹಾರವೆಂಬ ಅರ್ಧ ಕತ್ತರಿಸಿದ ಕಡವಾಡಿಯು ಹತ್ತುವುದು. ಅದರ ಮೇಲಿಂದ ಹಾಯುವಾಗ, ಬುದ್ಧಿರೂಪದ ಕಾಲು ಜಾರುವವು. ಆಗ ಗುಡ್ಡದ ಅಣಿಯಿಂದ ಬಿದ್ದೇನಲ್ಲ ಎಂಬ ಅಂಜಿಕೆಯು ಹಟಯೋಗಿಗಳಿಗೂ ಕೂಡ ಉಂಟಾಗುವುದು. ಅದರಿಂದ ಅವರ ಪ್ರತಿಜ್ಞೆ ಮುರಿಯುವುದುಂಟು. ಆದಾಗ್ಯೂ ಪ್ರತ್ಯಾಹಾರದಂತಹ ನಿರಾಲಂಬ ಮಾರ್ಗದಲ್ಲಿ ಫಕ್ತ ವೈರಾಗ್ಯವೊಂದೇ ಅಭ್ಯಾಸದ ಬಲದಿಂದ ಮೆಲ್ಲಮೆಲ್ಲನೆ ಕಾಲೂರಿ ನಿಲ್ಲಲು ಸಮರ್ಥವಾಗುವುದು. ಈ ಬಗೆಯಾಗಿ ವಾಯುರೂಪ (ಪ್ರಾಣ, ಅಪಾನ) ಕುದುರೆಯನ್ನೇರಿ ಧಾರಣೆಯ ವಿಸ್ತೃತ ಮಾರ್ಗದಿಂದ ಧ್ಯಾನದ ಶಿಖರವನ್ನು ಮುಟ್ಟುವವರೆಗೆ ಅವನು ಮಾರ್ಗ ಕ್ರಮಿಸುವನು. ಅನಂತರ ಐಕ್ಯಸುಖದ ಮೂಲಕ ಸಾಧ್ಯ ಸಾಧನಗಳು ಏಕರೂಪವಾಗುವಲ್ಲಿ ಆ ಧಾರಣಾಮಾರ್ಗದ ಓಟವೂ ಪ್ರವೃತ್ತಿಯ ಹವಣಿಕೆಯೂ ಇಲ್ಲದಾಗುವುವು. ಮುಂದಿನ ಗತಿಯು ಕಟ್ಟಾಗಿ, ಹಿಂದೆ ಕ್ರಮಿಸಿದುದೆಲ್ಲವೂ ಮರೆತುಹೋಗುವುದು. ಇಂತಹ ಸಮಾನ ಭೂಮಿಕೆಯ ರೂಪದ ಸಮಾಧಿಯ ಮೇಲೆ ಅವನು ನಿಲ್ಲುವನು. ಯೋಗಾರೂಢನಾದ ಪುರುಷನು ಈ ಉಪಾಯದಿಂದ ತೀರ ಪರಿಪೂರ್ಣನಾಗುವನು. ವಿಷಯಗಳ ಬರಹೋಗುವಿಕೆಯು ಆತನ ಇಂದ್ರಿಯಗಳತ್ತ ನಡೆಯದು. ಆತ್ಮಬೋಧೆಯೆಂಬ ಶಯ್ಯಾಗಾರದಲ್ಲಿ ಅವನು ಸುಖನಿದ್ರೆಯಲ್ಲಿದ್ದಂತಿರುವನು.
ಜ್ಞಾನೇಶ್ವರೀಗೀತೆ, ಅಧ್ಯಾಯ ಆರು. ಅನುವಾದ: ಅಣ್ಣಪ್ಪ ಕೃಷ್ಣಾಜಿರಾವ ಕುಲಕರ್ಣಿ.