ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಕಥಾಸ್ಪರ್ಧೆ > ಜಂಬುಕೇಶನ ಮತಾಂತರ ಪ್ರಹಸನ

ಜಂಬುಕೇಶನ ಮತಾಂತರ ಪ್ರಹಸನ

ಸರ್ ಎಲ್ಲಕ್ಕಿಂತಲೂ ಗಟ್ಟಿ ವಿಷಯ ಅಂದ್ರ ಜಂಬುಕೇಸ ತಾತ ನಿಮ್ಮ ಧರ್ಮ ಭಾಳ ಚಂದ ಐತಲೇ ಶಂಕ್ರ ಮನುಷ್ಯತ್ವ ಅಂದ್ರ ಅಲ್ಲಿ ಅದ ನೋಡು ಎಂದು ಹೊಗುಳತಾ ಇದ್ದ ಅಂದಫಾದರ್ಗೆ ಇನ್ನೊಂದು ಕಾಫಿ ಬೇಕೆನಿಸಿತು, ಕಾಫಿ ಕುಡಿಯುತ್ತಲೇ ಜಂಬುಕೇಶನೆA ಪಾತ್ರದ ಬಗ್ಗೆ ಕೇಳಲು ಕಿವಿಯಾಗಹತ್ತಿದರು. ಫಾದರ್ ಕ್ಷಣ ಮೌನವಾದರು, ಏನು ಮಾತಾಡಬೇಕೆಂಬುವದು ತಿಳಿಯದಾಯಿತು. ಯಾವುದೋ ಸಂತಸದ ಗಳಿಗೆಯನು ಆಸ್ವಾದಿಸಲು ಕೆಲಹೊತ್ತು ಮೌನ ಬೇಕೆನಿಸಿತು, ಫಿಲಿಪ್, ನೀನೇ ಹೇಳು ಏನಾಯಿತು? ಜಂಬುಕೇಶನ ಪ್ರಸಂಗ? – ಎಂದು ಕೇಳಲು ಉತ್ಸುಕರಾದರು.

ರೆವರೆಂಡ್ ಜಾರ್ಜ ಬಿಷಪ್ ಅವರು ಬಹುಚಿಂತಾಕ್ರಾಂತರಾಗಿದ್ದರು.

ಈ ಮಯೂರಶಿಲೆ ಎಂಬ ಊರು ದಿನಾಲು ಕಬ್ಬಿಣದ ಕಡಲೆಯಾಗುತ್ತಿರುವುದು ಅವರ ಗಮನಕ್ಕೆ ಬರಹತ್ತಿತ್ತು. ‘ಅಟೆಮ್ಟ್’ ಎನ್ನುವ ಅವರ ಪಾರಿಭಾಷಿಕ ಶಬ್ದಕೋಶ ಪದೇ ಪದೇ ಬಳಕೆ ಆಗುತ್ತಿರುವುದು ಇದೇ ಊರಿನಲ್ಲಿ. ಎಷ್ಟು ಅಳು? ಸಾಕಾಗಿ ಈ ಊರಿನ ಸಹವಾಸ ಬೇಡವೇ ಬೇಡ ಎಂದು ತೀರ್ಮಾನಿಸಿದರೂ ಮರಳಿ ಯತ್ನವ ಮಾಡು ಎನ್ನುವ ಅವರ ಬಳಿಯ ಆಂತರ್ಯದ ಕೋಶ, ಅಲರಾಮ್ ಬಡಿಯುತ್ತ ಬಿಡಬೇಡ ಬಿಡಬೇಡ ಎಂದು ಹೇಳುತ್ತಲೇ ಇತ್ತು. ಅದಕ್ಕಾಗಿ ಯಾವುದನ್ನೂ ಅವರು ಅಷ್ಟು ಸರಳವಾಗಿ ಬಿಡಲು ತಯಾರಿರಲಿಲ್ಲ. ಅವರು ಛಲದಂಕಮಲ್ಲ ಎಂದೇ ಪ್ರಸಿದ್ಧಿಯಾಗಿದ್ದರೂ ಯಾಕೋ ಮಿಷನ್ ೨೦ ಪರ್ಸೆಂಟ್ ಎಂಬ ಗುರಿ ಅಷ್ಟು ಕ್ಯಾಟಲಿಸ್ಟ್ ಮಾದರಿಯಲ್ಲಿ ಆಗುತ್ತಿಲ್ಲ ಎನ್ನುವ ಅಳಲು ಅವರನ್ನು ಕಾಡುತ್ತಿತ್ತು. ಆಗಾಗ ಅವರಿಗೆ ನರಮನುಷ್ಯರಿಗೆ ಬಂದಂತೆ ಸಿಟ್ಟು ಸೆಡವು ಬಂದರೂ ಸಹ ತಟ್ಟನೆ ಮತ್ತೆ ಸಹಜ ಮನುಷ್ಯರಾಗುತ್ತಿದ್ದರು. ಆದರೂ ಪರಂಪರಾಗತವಾಗಿ ಬಂದ ಈ ಜನರ ಸಹನಗುಣ ಅವರಿಗೆ ಬೇಜಾರು ತರಿಸಿತ್ತು.

ಇಡೀ ಪ್ರಪಂಚದಲ್ಲಿ ಸಹನೆಗೆ ಮತ್ತು ಅನ್ಯಾಯವನ್ನು ಸಹಿಸಿಕೊಳ್ಳುವ ಗುಣಕ್ಕೆ ಈ ನಮ್ಮ ಮುಗ್ಧ ದಲಿತರು ಒಳ್ಳೆಯ ಉದಾಹರಣೆ. ಅವರು ಜಗತ್ತಿನ ಜನರನ್ನು ತಮ್ಮವರೆಂದು ಭಾವಿಸುತ್ತಾರೆ. ಆದರೆ ಆ ಜಗತ್ತು ಅವರನ್ನು ಗುಲಾಮರೆಂದೇ ಭಾವಿಸುತ್ತದೆ. ‘ವಿಮೋಚನೆಗೆ ಹಲವು ದಾರಿಗಳಿದ್ದರೂ ಸುಮ್ಮನೆ ಕುಳಿತಿದ್ದಾರೆ. ನಾವೇನು ಮಾಡೋಣ’ ಎಂದು ಅವರ ಆಪ್ತೆ ಮತ್ತು ಇಂಗ್ಲಿಷ್ ತಜ್ಞೆ ಸಿಸ್ಟರ್ ಜಹಾಸೇನ್ ಹತ್ತಿರ ಹೇಳುತ್ತಿದ್ದಾಗಲೇ “ಸರ್, ತಾಳ್ಮೆ ನಮ್ಮ ಅಸ್ತ್ರ. ನಾವು ಮಿಶನ್ ೨೦ ಪರ್ಸೆಂಟ್ ಗುರಿಯನ್ನು ಈ ಭಾಗದಲ್ಲಿ ಮುಟ್ಟೇ ಮುಟ್ಟುತ್ತೇವೆ. ಇಂದು ಬೌದ್ಧ ಧರ್ಮ ನಮಗೆ ದೊಡ್ಡ ಅಡ್ಡಗಾಲು. ಬಾಬಾ ಸಾಹೇಬರು ತಾವು ಬೌದ್ಧರಾಗಿ ಈ ಹಾದಿ ಹಿಡಿಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಸಂವಿಧಾನದಲ್ಲಿ ಅವರಿಗೆ ಮೀಸಲಾತಿ ಕಲ್ಪಿಸಿದ್ದಾರೆ. ಆದರೆ ದಲಿತರು ಈಗ ಅಡ್ಡದಾರಿಯಲ್ಲಿದ್ದಾರೆ – ಬೌದ್ಧರಾಗಬೇಕೋ ಕ್ರೈಸ್ತರಾಗಬೇಕೋ ಎನ್ನುವ ಸಂದಿಗ್ಧದಲ್ಲಿ ಇದ್ದಾರೆ” ಎಂದರು ಜಹಾಸೇನ್.

ಫಾದರ್ ಕೊಂಚ ಗೊಂದಲಗೊಂಡು ಮತ್ತೆ ಚಿಂತಾಕ್ರಾಂತರಾಗಿ ಬಾಗಿದ ತಲೆಯನ್ನು ಎತ್ತಿ “ನಾವು ಕನ್ವಿನ್ಸ್ ಮಾಡೋಣ” ಎಂದು ಚಂದ್ರಮ್ಮ ಎನ್ನುವ ಕುಕ್ ತಂದುಕೊಟ್ಟ ಚಹಾ ಕುಡಿಯ ಹತ್ತಿದರು. ಅವರ ತಳಮಳ ಆಗಾಧವಾದದ್ದು, ವಾಲ್ಕನಿಕ್ ಲಾವಾರಸದಂತೆ. ಇದನ್ನು ಗಮನಿಸಿದ ಸಿಸ್ಟರ್ ‘ನೀವು ತಾಳ್ಮೆಯಿಂದ ಇರಿ, ಬಹಳ ಉದ್ವೇಗಕ್ಕೊಳಗಾಗುತ್ತೀರಿ’ ಎಂದರೂ ರೆವರೆಂಡ್ ಜಾರ್ಜ್ರಿಗೆ ಸಮಾಧಾನವಿರಲಿಲ್ಲ.

“ಅಲ್ಲ ಮಾರಾಯ್ತಿ, ೧೯೬೨ರಲ್ಲಿ ಬಾಬಾಸಾಹೇಬರು ಬೌದ್ಧಧರ್ಮಕ್ಕೆ ಹೋದಾಗ ಅವರ ಹಿಂದೆ ಹೋದವರು ತುಂಬಾ ಹೆಚ್ಚು ಮಂದಿಯೇನಲ್ಲ. ಬಾಬಾಸಾಹೇಬರೆಂದರೆ ದಲಿತರಿಗೆ ವಿಮೋಚನಾ ಸೂರ್ಯ. ಅವರಿಗೆ ಸಂವಿಧಾನದ ಮೂಲಕ ಹಕ್ಕುಗಳ ಪ್ರತಿಪಾದಿಸಿಕೊಟ್ಟ ಮಹಾತ್ಮ. ಅಂತಹವರು ನಾಗಪುರದಲ್ಲಿ ಬೌದ್ಧಧರ್ಮಕ್ಕೆ ಮತಾಂತರ ಆದಾಗ ಲಕ್ಷಾಂತರ ಜನ ಅಲ್ಲಿ ನೆರೆದಿದ್ದರೂ ಅನಂತರ ಅವರ ಹಿಂದೆ ಹೋದವರು ಅಲ್ಪಪ್ರಮಾಣದ ಜನ ಮಾತ್ರ. ಅಂದರೆ ಇಲ್ಲಿಯ ದಲಿತರಿಗೆ ಸನಾತನಧರ್ಮದಲ್ಲಿ ಇದ್ದು ತುಳಿಸಿಕೊಳ್ಳುವ ಆಸೆ ಎಂದು ಹೊರಗೆ ಹೋಗಿ ಗುಲಾಬಿ ಪಕಳೆಗಳನ್ನು ಕಿತ್ತು ತಂದು ಏಸುವಿನ ಪಾದಗಳಿಗೆ ಉಗ್ಗಿದರು.”

 “ಆ ದಿನ ಈ ದಲಿತರು ಬಾಬಾಸಾಹೇಬರ ಹಿಂದೆ ಹೋಗಿದ್ದರೆ ಒಂದು ನರಪಿಳ್ಳೆಯೂ ನಮಗೆ ಸಿಗುತ್ತಿರಲಿಲ್ಲ” ಎಂದು ಸಿಸ್ಟರ್ ಜಹಾಸೇನ್ ಹೇಳಿದರೂ, ಫಾದರ್ ಅವರು ಅದನ್ನು ತಡೆದು “ಇರಲಿ, ದಲಿತರೆಲ್ಲ ಬೌದ್ಧರಾಗಿದ್ದರೆ ನಾವು ನಿಶ್ಚಿಂತರಾಗಿರುತ್ತಿದ್ದೆವು. ಅವರು ನಿತ್ಯ ನರಕದ ಕೊಂಡದಲ್ಲಿ ಒದ್ದಾಡುವುದನ್ನು ನೋಡಿ ನಮಗೂ ಕರುಳು ಕಿವಿಚಿದಂತಾಗಿದೆ. ಅದೂ ಅಲ್ಲದೆ ಈ ನರಕದ ಹೊಂಡದಲ್ಲಿ ಒದ್ದಾಡುವ ಇವರನ್ನು ವಿಮೋಚನೆ ಮಾಡುತ್ತೇನೆ ಎಂದು ನಾನು ಪ್ರಭುವಿಗೆ ಪ್ರಾಮಿಸ್ ಮಾಡಿದ್ದೇನೆ. ಆ ಪ್ರಾಮಿಸ್ ಹೇಗೆ ಉಳಿಸಿಕೊಳ್ಳಲಿ?” ಎಂದು ಮತ್ತೆ ಗಡ್ಡ ಕೆರೆಯುತ್ತ ಚಿಂತಿತರಾದರು.

ಗಾಳಿ ರಭಸವಾಗಿ ಬೀಸುತ್ತಿತ್ತು. ಆಷಾಢವಾದದ್ದರಿಂದ ಮಣ್ಣಿನ ಕಣಗಳು ಗಾಳಿಯಲ್ಲಿ ಒಂದಾಗಿದ್ದವು. ಫಾದರ್ ಅವರು ಚರ್ಚಿನ ಒಳಬಂದು ಮುಂದಿನ ರೂಮಿನ ವರಾಂಡದಲ್ಲಿರುವ ಕುರ್ಚಿಯ ಮೇಲೆ ಕುಳಿತುಕೊಂಡರು. ಸಿಸ್ಟರ್ ಜಹಾಸೇನ್ ಫಾದರರನ್ನು ಹಿಂಬಾಲಿಸಿ “ಇನ್ನೊಂದು ವಿಷಯ ಹೇಳಲೆ? ಇಲ್ಲಿಯ ದಲಿತರು ಸಂವಿಧಾನದ ಮೀಸಲಾತಿ ಬಳಸಿಕೊಂಡಿದ್ದು ಬರೀ ಶೇ. ೫ರಷ್ಟು ಮಾತ್ರ. ಇನ್ನೂ ಶೇ. ೯೫ರಷ್ಟು ದಲಿತರು ಮೀಸಲಾತಿಯಿಂದ ದೂರವಿದ್ದಾರೆ. ಮೀಸಲಾತಿ ಇಲ್ಲದೆಯೂ ಸ್ವಂತ ಬಲದ ಮೇಲೆಯೆ ಬದುಕಿದ್ದಾರೆ. ಅದಕ್ಕೆ ಯಾಕೆ ಬೇಕು ಈ ಮೀಸಲಾತಿ? ಬಹುಶಃ ಸ್ವಾಭಿಮಾನಕ್ಕೆ ಈ ಮೀಸಲಾತಿ ದೊಡ್ಡ ಅಡ್ಡಿಯೇನೋ!” ಎಂದು ಅತ್ತ ಇತ್ತ ನೋಡಿ ಯಾರೂ ಇಲ್ಲದ್ದನ್ನು ಕನ್ಫರ್ಮ್ ಮಾಡಿಕೊಂಡು ಮತ್ತೆ ಹೇಳಿದರು:

“ಮಿಶನ್ ೨೦ ಪರ್ಸೆಂಟ್‌ನಲ್ಲಿ ಲಿಂಗಾಯತರಿಂದ ಹಿಡಿದು ಹಿಂದುಳಿದ ಮುಸ್ಲಿಂ ಮತ್ತು ದಲಿತರನ್ನು ಒಳಗೊಳ್ಳುವುದು ಪ್ರಮುಖವಾಗಿದೆ. ಬರೀ ದಲಿತರನ್ನು ನಂಬಿ ಭ್ರಮನಿರಸನವಾಗಿದೆ. ನೋಡಿ, ಹಿಂದೆ ಮಂಗಳೂರಿನಲ್ಲಿ, ಗೋವಾದಲ್ಲಿ ಬ್ರಾಹ್ಮಣರು ಮತಾಂತರಗೊಂಡು ಕಿರಿಸ್ತಾನರಾದರು. ಅವರು ಅಲ್ಲಿ ಮೇಲ್ವರ್ಗದವರು ಎನ್ನುವ ನಂಬಿಕೆಗೆ ಕಾರಣರಾದರು ಮತ್ತುಕ್ರೈಸ್ತರನ್ನು ಹಾಗೆಯೇ ಗುರುತಿಸುತ್ತಾರೆ. ಆದರೆ ನಾವು ಇಲ್ಲಿ ನಂಬಿದ್ದು ಅವಲಂಬಿಸಿದ್ದು ದಲಿತರನ್ನು” ಎಂದ ತಕ್ಷಣವೇ ಫಾದರ್ ಸಿಟ್ಟಿನಿಂದಲೇ ತಡೆದು “ನಮ್ಮ ಉದ್ದೇಶ ಧರ್ಮವನ್ನು ವಿಸ್ತರಿಸುವುದು ಹಾಗೂ ಅದಕ್ಕೆ ಘನತೆ ತಂದುಕೊಡುವುದಲ್ಲ. ಕೆಳವರ್ಗದವರನ್ನು ಉದ್ಧಾರ ಮಾಡಲು ಮಾತ್ರ ನಮ್ಮ ಧರ್ಮವಿರುವುದು. ನೀವು ಬಹಳ ಗೊಂದಲದಲ್ಲಿ ಇದ್ದೀರಿ ಸಿಸ್ಟರ್” ಎಂದರು.

ಮರುಕ್ಷಣವೇ “ನಾವು ಅವರ ಬಗ್ಗೆ ಕರುಣೆ ತೋರಿಸುತ್ತೇವೆಯೋ ಅಥವಾ ನಮ್ಮ ಸಾಮ್ರಾಜ್ಯ ವಿಸ್ತರಿಸಲು ಪ್ರಯತ್ನಿಸುತ್ತೇವೆಯೋ ದೇವರೇ ಬಲ್ಲ. ನಾನೂ ಸಹ ಇದಕ್ಕೆ ಹೊರತಾಗಿಲ್ಲ, ಕ್ಷಮಿಸಿ” ಎಂದರು.

“ದಲಿತರು ಮತಾಂತರವಾಗಿದ್ದರೆ ಭಾರತದಲ್ಲಿ ಕನಿಷ್ಠ ೨೦ ಪರ್ಸೆಂಟ್ ನಮ್ಮ ಸ್ಟ್ರೆಂಗ್ತ್ ಇರತಾ ಇತ್ತು. ಅದು ಮನುಷ್ಯಜಾತಿ ‘ತಾನೊಂದೆ ವಲಂ’ ಎಂದು ಪಂಪ ಹೇಳಿದ್ದನಲ್ಲ ಹಾಗೆಯೇ ಆಗುತ್ತಿತ್ತು. ನೋಡಿ ಭಾರತ ಎಂದು ಕನ್ನಡ ಸಾಹಿತ್ಯದಲ್ಲಿ ತಾವು ಓದಿದ ‘ಕೋಟ’ನ್ನು ಉಪಯೋಗಿಸಿ ಹೇಳಿದರು. ಮತ್ತೆ ಮೆಲ್ಲನೆ “ಅದು ಆಗಲೇ ಇಲ್ಲ” ಎಂದು ತಮ್ಮ ನಿಲುವಂಗಿಗೆ ಹತ್ತಿದ ಚಹಾ ಕಲೆಯನ್ನು ಒರೆಸಿಕೊಂಡರು.

“ಫಾದರ್… ಫಾದರ್…” ಎನ್ನುವ ಕೂಗು ಹೊರಗಿನಿಂದ ಬಂದಿತು. ಮತ್ತೆ ಅದೇ ಕೂಗು ಮುಂದುವರಿದು ಫಿಲಿಪ್ ಬಂದಿದ್ದಾನೆ ಎಂದಿತು.

“ಅಯ್ಯೋ ಹಾಗೆಯೇ ಸರಳವಾಗಿ ಬರಲು ಇವರಿಗೇನು ದಾಡಿ? ಹಳ್ಳಿಯಲ್ಲಿ ಗೌಡರ ಮನೆಯ ಎದುರಿಗೆ ಹೀಗೆ ಕೂಗಿ ಕೂಗಿ ರೂಢಿ. ಆ ಯೂಸ್‌ಲೆಸ್ ಫೆಲೋಗೆ ಒಳಬರಲು ಹೇಳು” ಎಂದು ಫಾದರ್ ಆಕಾಶ ದಿಟ್ಟಿಸಿದರು.

ನಡು ಬಾಗಿ ಒಳಗೆ ಪ್ರವೇಶಿಸಿದ ಫಿಲಿಪ್‌ನನ್ನು ನೋಡಿಯೇ ಫಾದರ್‌ಗೆ ಮೈ ಉರಿದುಹೋಯಿತು.

“ಇದು ನಿಮ್ಮ ಊರಿನ ಗೌಡನ ಮನೆ ಅಲ್ಲ, ನೇರವಾಗಿ ಬರಬಹುದು. ನಿಮ್ಮ ಬುದ್ಧಿ ಎಲ್ಲಿ ಬಿಡ್ತೀರಾ. ಸಾವಿರ ಸಲ ಹೇಳಿದರೂ ಅಷ್ಟೆ” ಎಂದು ಫಾದರ್ ಜಂಕಿಸಿದರು.

ಫಿಲಿಪ್ ನಗುತ್ತಲೇ ತನಗೆ ಪೂರ್ವದಲ್ಲಿ ಕೊಟ್ಟ ಕೆಲಸದ ಬಗ್ಗೆ ಹೇಳಿದ. “ಊರಲ್ಲಿ ಎಲ್ಲರಿಗೂ ಹೇಳ್ತಾ ಇದ್ದೀನಿ, ಇನ್ನೂ ಒಂದು ತಿಂಗಳಲ್ಲಿ ೪ ಜನ ಗಟ್ಟಿಯಾಗಿ ಈ ಕಡೆ ರ‍್ತಾರೆ ನೋಡ್ತಾ ಇರಿ” ಎಂದ.

“ಅಲ್ಲಯ್ಯ ನೀನು ನಿನ್ನ ಊರಲ್ಲಿ ಶಂಕರ್ ಎಂದು ಕರೆಸಿಕೊಳ್ಳುವೆ. ಇಲ್ಲಿ ಫಿಲಿಪ್ ಆಗ್ತೀಯಾ? ನಾಚಿಕೆ ಬರಲ್ವ ಡಬಲ್ ಸ್ಟಾಂಡರ್ಡ್ಗೆ” ಎಂದರು ಬಿಷಪ್.

“ಇಲ್ಲಾ ಸಾರು. ಊರಾಗ ನನ್ನ ಮೊದಲಿನ ಹೆಸರೇ ಎಲ್ಲರಿಗೂ ಗೊತ್ತಿದೆ, ನಾನೇನು ಮಾಡ್ಲಿ” ಎಂದು ಕುರ್ಚಿಗೆ ಮೆಲ್ಲಗೆ ಆನಿಕೊಂಡು ಕುಳಿತ.

ಏನೋ ನೆನಪಾಗಿ ಬಿಷಪ್‌ರಿಗೆ ಒಮ್ಮಿಂದೊಮ್ಮೆಲೆ ಸಿಟ್ಟು ಉಕ್ಕಿಬಂತು.

“ಇರಲಿ, ಯಲ್ಲಮ್ಮಗೆ ಕುರಿ ಕೊಯ್ದು ದೇವರು ಮಾಡಿದೆ ಅಂತ ನಿನ್ನ ಬಗ್ಗೆ ಕೇಳಿದೆ.”

“ನಾನು ಮಾಡಿದ್ದಲ್ಲ; ನನ್ನ ತಮ್ಮ ಮಾಡಿದ್ದು. ಅಣ್ಣ-ತಮ್ಮ ಬೇರೆ ಬೇರೆ ಧರ್ಮದಾಗ ಇದ್ರು ಒಂದೇ ರಕ್ತನೇ ಅಲ್ಲವಾ ಸಾರು” ಅಂದ.

“ಅದು ಅಲ್ದೆ ಬೌದ್ಧ ಭಿಕ್ಕು ಬಂದಿದ್ರ‍ಂತೆ ನಿಮ್ಮ ಕೇರಿಗೆ? ನೀನೇ ಅವರಿಗೆ ಪೂಜೆ ಕೈಂಕರ್ಯ ಮಾಡಿದೆ ಅಂತ ಯಾರೋ ಹೇಳಿದರು.” ಫಿಲಿಪ್‌ಗೆ ಇರುಸುಮುರುಸಾಗಿ ಜೋರಾಗಿ ಪ್ರಶ್ನಿಸಿದ – “ಅವರನ್ನು ಮಾತಾಡಿಸಿದ್ದು ತಪ್ಪೇ?”  ಬಿಷಪ್ ಅವರೇ ಕೊಂಚ ಮೆತ್ತಗಾದರು.

“ತಪ್ಪು ಅಲ್ಲ, ಅವರಿಂದ ಕೊಂಚ ಡಿಸ್ಟೆನ್ಸ್ ಮೆಂಟೇನ್ ಮಾಡಿ, ನಾನು ಅವರ ಜೊತೆ ಮಾತಾಡಬೇಡಿ ಎಂದು ಹೇಳಲಿಲ್ಲ” ಎಂದರು. ಖಂಡಿತ ಇದರಿಂದ ಮಿಷನ್ ೨೦ ಪರ್ಸೆಂಟ್ ಹಳ್ಳ ಹಿಡಿಯಹತ್ತಿದೆ ಅಂದುಕೊAಡರು.

“ಸರ್, ಎಲ್ಲಕ್ಕಿಂತ ಗಟ್ಟಿ ವಿಷಯ ಅಂದ್ರ ಜಂಬುಕೇಸ ತಾತ ‘ನಿಮ್ಮ ಧರ್ಮ ಭಾಳ ಚಂದ ಐತಲೇ ಶಂಕ್ರ ಮನುಷ್ಯತ್ವ ಅಂದ್ರ ಅಲ್ಲಿ ಅದ ನೋಡು’ ಎಂದು ಹೊಗಳತಾ ಇದ್ದ” ಅಂದ.

ಫಾದರ್‌ಗೆ ಇನ್ನೊಂದು ಕಾಫಿ ಬೇಕೆನಿಸಿತು. ಕಾಫಿ ಕುಡಿಯುತ್ತಲೇ ಜಂಬುಕೇಶನೆಂಬ ಪಾತ್ರದ ಬಗ್ಗೆ ಕೇಳಲು ಕಿವಿಯಾಗಹತ್ತಿದರು. ಫಾದರ್ ಕ್ಷಣ ಮೌನವಾದರು. ಏನು ಮಾತಾಡಬೇಕೆಂಬುದು ತಿಳಿಯದಾಯಿತು.

ಯಾವುದೋ ಸಂತಸದ ಗಳಿಗೆಯನ್ನು ಆಸ್ವಾದಿಸಲು ಕೆಲಹೊತ್ತು ಮೌನ ಬೇಕೆನಿಸಿತು.

“ಫಿಲಿಪ್, ನೀನೇ ಹೇಳು ಏನಾಯಿತು?” ಜಂಬುಕೇಶನ ಪ್ರಸಂಗ ಏನೆಂದು ಕೇಳಲು ಉತ್ಸುಕರಾದರು.

“ಸರ್, ನಿನ್ನೆ ನಮ್ಮ ಊರಲ್ಲಿ ಕಾರ್ಯಕ್ರಮವಿತ್ತು. ಅಲ್ಲಿ ಭಾಷಣ ಮಾಡುತ್ತಿದ್ದಾಗ ಆತ ಜಗತ್ತಿನ ಶ್ರೇಷ್ಠ ಧರ್ಮ ಕ್ರಿಶ್ಚಿಯನ್ ಒಂದೇ ಎಂದು ಹೇಳಿದ”

ಎಂದು ತಲೆ ತುರಿಸಿಕೊಳ್ಳ ಹತ್ತಿದ.

ಫಾದರ್‌ಗೆ ಸಮಾಧಾನವಾಗಲಿಲ್ಲ. “ಕ್ರಿಶ್ಚಿಯನ್ ಧರ್ಮ ಒಂದೇ ಅಂತ ಹೇಳಿದ್ದನಾ ಅಥವಾ ಕ್ರಿಶ್ಚಿಯನ್ ಶ್ರೇಷ್ಠ ಧರ್ಮಗಳಲ್ಲೊಂದು ಎಂದು ಹೇಳಿದನಾ?” -ಕೇಳಿದರು.

ಇವನಿಗೆ ಇಂತಹ ಕ್ಲಿಷ್ಟಕರವಾದ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿರಲಿಲ್ಲ. ಇವನ ಸಂವಹನ ಕೌಶಲಕ್ಕೆ ಭಂಗ ತರಬಾರದು ಮತ್ತು ಇಂತಹ ಕರ್ಣಾನಂದ ಆಗುವ ವಿಷಯಗಳನ್ನು ಅವೈಡ್ ಮಾಡಬಾರದೆಂದು “ಗುಡ್, ಕಂಟಿನ್ಯೂ ಮಾಡು” ಅಂದರು.

“ಧಣಿ, ಆತನನ್ನ ನಮ್ಮ ದಾರಿಗೆ ತಂದ್ರ ಭಾಳ ಚಲೋ ಆಗ್ತಾದೆ ನೋಡ್ರಿ” ಅಂದ.

ಫಾದರ್‌ಗೆ ಜಂಬುಕೇಶನ ವಿಷಯ ತಿಳಿಯುತ್ತಿರುವುದು ಇದೇ ಮೊದಲಲ್ಲ. ಅವರ ಪ್ರಾಥಮಿಕ ಅರಿವಿನ ಪ್ರಕಾರ ಆತ ಮಾದಿಗ ಜನಾಂಗದವನಾಗಿದ್ದು, ಜಂಬುನಾಥೇಶ್ವರ ಗುಡಿಯ ಪೂಜೆಯ ಪೂಜಾರಿಯಾಗಿದ್ದ. ಸುಮಾರು ೧೫,೦೦೦ ಭಕ್ತಾದಿಗಳಿಗೆ ಗುರುವಾಗಿದ್ದ. ಸೋಮವಾರ ಈತನ ಮೈಯಲ್ಲಿ ಜಂಬುಕೇಶ್ವರ ಬಂದು ಭಕ್ತರಿಗೆ ಏನು ಬೇಕೋ ಅದನ್ನು ಕೊಡುತ್ತಲಿದ್ದ ಎಂದು ಫಿಲಿಪ್ ಜಂಬುಕೇಶನ ಬಗ್ಗೆ ಆಗಾಗ ಹೇಳುತ್ತಿದ್ದರೂ ಇದು ಆಗದ ಕೆಲಸವೆಂದು ಫಾದರ್ ಕೈಕಟ್ಟಿ ಸುಮ್ಮನಾಗಿದ್ದರು.

“ನಿಮ್ಮಲ್ಲಿ ೪೦ ಮನೆಗಳಿವೆ. ನಿನ್ನ ಬಿಟ್ಟು ಈ ಮೂವತ್ತೊಂಭತ್ತು ಮನೆಗಳು ಇಂದು ಸಹ ಆ ಊರಿನ ಮೇಲ್ವರ್ಗದವರ ಮನೆಗಳ ದಾಸರಾಗಿದ್ದಾರೆ. ಐ ಫೆಲ್ಟ್ ವೆರಿ ಬ್ಯಾಡ್, ಕ್ರಿಶ್ಚಿಯಾನಿಟಿ ನಿಮಗೆ ಎಲ್ಲ ಕೊಡುತ್ತದೆ. ನಮ್ಮವರೆಂದು ಅಪ್ಪಿಕೊಳ್ಳುತ್ತದೆ. ಆದರೂ ನೀವು ನಮ್ಮನ್ನು ಬಿಟ್ಟು ಓಡಾಡುತ್ತೀರಿ ಯೂಸ್‌ಲೆಸ್ ಪೀಪಲ್” ಎಂದರು. ಸಿಸ್ಟರ್ ಜಹಾಸೇನರವರು ಪರಂಗಿ ಹುಣಚಿಕಾಯಿ ತಂದು ಫಿಲಿಪ್ ಮತ್ತು ಬಿಷಪ್ ಮುಂದೆ ಇಟ್ಟರು. “ಓಹೋ, ಪರಂಗಿ ಹುಣಸಿಕಾಯಿ ನನ್ನ ಫೇವರೇಟ್. ಈ ಸೀಜನ್‌ನಲ್ಲಿ ನಾನು ತಿಂದಿದ್ದಿಲ್ಲ ಧನ್ಯವಾದ” ಎಂದರು ಫಾದರ್.

“ಇರಲಿ. ಜಂಬುಕೇಶ ನಮ್ಮಲ್ಲಿ ಬರುವ ಸುಳಿವು ಏನಾದರೂ ಇದೆಯೋ?” ಎಂದು ಮೆಲ್ಲಗೆ ಅಂದರು.

ಇವನು ಹೇಳಿದ “ಧರ್ಮ ಚಂದ ಇದೆ ಎಂದಿದ್ದಾನೆ ಬರುತ್ತೇನೆ ಬಿಡುತ್ತೇನೆ ಎಂದಿಲ್ಲ” -ಎಂದ.

ಮಾವಿನಮರದಲ್ಲಿ ಯಾವುದೋ ಪಕ್ಷಿ ಕೂಗುತ್ತಿತ್ತು. ಬಿಷಪ್ ತಾಳ್ಮೆ ಕಳೆದುಕೊಂಡು “ಮತ್ತೆ ಅವನು ಅಲ್ಲಿ ಬಿತ್ತೋದು ಕರ್ಮಠವೇ. ದೇವರು ಮೈಯಲ್ಲಿ ಬರುತ್ತಿದ್ದರೆ ಈ ಜಗತ್ತಿನಲ್ಲಿ ಯಾವನಿಗೂ ರೋಗರುಜಿನ ಬಡತನ ಇರುತ್ತಿರಲಿಲ್ಲ. ಎಲ್ಲ ಸುಳ್ಳು. ಅಂಥವನ ಬಗ್ಗೆ ನಿನ್ನದೇನು ವಕೀಲಿಕೆ?” ಎಂದರು.

“ನೋಡಿ ಸರ್, ಬೇಡ ಎಂದರೆ ಬೇಡ” ಎಂದು ಹಿಂಜರಿದ.

“ಇಲ್ಲ, ನಾನು ಹಾಗೆ ಹೇಳ್ತಾ ಇಲ್ಲ. ಅವನನ್ನು ಸೆಳೆಯಲು ಪ್ರಯತ್ನವಂತೂ ಮಾಡು” ಎಂದರು.

“ನಾನು ಮಾತಾಡುತ್ತೇನೆ ಸರ್. ಇನ್ನೊಂದು ವಿಷಯ. ಮೇಲಿನ ಮನೆಗೆ ಭಿಕ್ಕು ಭಾಳ ರ‍್ಲಿಕ್ಕೆ ಹತ್ತಿದ್ದಾರೆ. ಒಂದೊಂದು ಸಲ ಅಲ್ಲಿಯೇ ರ‍್ತಾರ” ಎಂದು ಹೇಳಿದ.

ಇಂತಹ ಧರ್ಮವನ್ನು ಆರಾಮವಾಗಿ ಎದುರಿಸಬಹುದು. ಆದರೆ ಬೌದ್ಧಧರ್ಮ ಮುಂದೆ ಇಟ್ಟುಕೊಂಡು ಮಿಶನ್ ೨೦ ಮಾಡುವುದು ಬಹಳ ಕಷ್ಟ ಎಂದು ಚಿಂತಿಸಿದರು.

“ಇರಲಿ. ನೀ ಯಾಕ ಬಂದಿದ್ದೀಯಾ ಅಂಥ ಗೊತ್ತಾಯ್ತು. ಸ್ವಲ್ಪ ಹಣ ಕೊಡಿ ಇವನಿಗೆ ಎಂದು ಹೇಳಿ” ಎಂದು ಒಳಗೆ ಹೋದರು.

ಫಾದರ್ ಜಂಬುಕೇಶನೆನ್ನುವ ದಲಿತ ಹಿನ್ನೆಲೆಯ ಪೂಜಾರಿಯ ವರ್ಚಸ್ಸಿನ ಬಗ್ಗೆ ಯೋಚಿಸತೊಡಗಿದರು. ಹದಿನೈದು ಸಾವಿರ ಮಾಸ್ ಭಕ್ತಾದಿಗಳನ್ನು ಹೊಂದಿದ ಜಂಬುಕೇಶನನ್ನು ಮತಾಂತರಿಸುವುದು ಸಾಧ್ಯವಾಗದ ಮಾತು. ಈತ ದಲಿತನಾದರೂ ಎಲ್ಲ ವರ್ಗದ ಜನರಿಂದ ಗೌರವಿಸಲ್ಪಡುತ್ತಾನೆ. ಹಣವಿದೆ. ಮತ್ತೆ ಯಾಕೆ ಇಲ್ಲಿಗೆ ಬರುತ್ತಾನೆ. ಈ ಫಿಲಿಪ್ ನಮ್ಮ ಕಣ್ಣಿಗೆ ಮಣ್ಣೆರಚುತ್ತಾನೆ ಎಂದು ತಿಳಿದು ಸಿಸ್ಟರ್‌ಗೆ ಜಹಾಸೇನ್ “ಡೋಂಟ್ ಎನ್‌ಕರೇಜ್ ದಟ್ ಯೂಸ್‌ಲೆಸ್ ಫೆಲೋ” ಎಂದು ಹೇಳಿದರು.

ಅಮಾವಾಸ್ಯೆ ಕಳೆದು ಮೂರು ದಿನವಾದ ಆ ರಾತ್ರಿ ಫಾದರ್‌ಗೆ ನಿದ್ರೆ ಎಂಬುದೇ ಇಲ್ಲ. ಮಿಶನ್ ಟ್ವೆಂಟಿ ಹಾಗೂ ಬೌದ್ಧಧರ್ಮ ಮತ್ತು ಜಂಬುಕೇಶನ ಬಗ್ಗೆ ಯೋಚಿಸಿ ಮನಸ್ಸು ತುಂಬಾ ಗೊಂದಲದ ಗೂಡಾಗಿತ್ತು. ಬೌದ್ಧಧರ್ಮ ಈ ಯುಗದಲ್ಲಿ ಪ್ರಬಲವಾಗಿ ಬೇರು ಬಿಡುತ್ತಿದೆ. ಅದು ನಮ್ಮ ಮೊದಲ ಶತ್ರು. ಯಾಕೆಂದರೆ ಬೌದ್ಧಧರ್ಮದ ಬಗ್ಗೆ ಮಾತಾಡಿದರೆ ನಮ್ಮವರೇ ವಿರೋಧಿಗಳಾಗುತ್ತಾರೆ. ಅದಕ್ಕಾಗಿ ಬೌದ್ಧಧರ್ಮವನ್ನು ಜಾಣತನದಿಂದಲೇ ಎದುರಿಸಬೇಕು. ಇನ್ನು ಜಂಬುಕೇಶನಂಥವರು ನಮ್ಮ ಕಡೆ ಬಂದರೆ ೧೫೦೦೦ ಜನ ಅವನ ಬೆಂಬಲಿಗರಲ್ಲಿ ೨೫೦೦ ಬಂದರೂ ಸಾಕು. ನಾವು ಮಿಶನ್ ೨೦ಗೆ ಹತ್ತಿರವಾಗುತ್ತೇವೆ – ಎಂದು ಯೋಚಿಸಿದರು.

ರಾತ್ರಿಯೆಲ್ಲ ನಿದ್ರೆಯಿಲ್ಲ. ಮುಂಜಾನೆ ಎದ್ದ ತಕ್ಷಣ ಫಿಲಿಪ್‌ನಿಗೆ ಫೋನ್ ಮಾಡಿ ನಿಮ್ಮ ಊರಿಗೆ ಬರುವೆ ಎಂದು ಹೊರಟರು.

ಅಂದು ಜಂಬುಕೇಶ ಗುಡಿಯಲ್ಲಿ ಸಾಂಪ್ರದಾಯಿಕ ಕುರ್ಚಿಯ ಮೇಲೆ ಕುಳಿತಿದ್ದ. ಇವರ ಸಮಾಜಮುಖಿ ಕಾರ್ಯವನ್ನು ನೋಡಿದ್ದನಾದರೂ ಮತ್ತು ಫಾದರ್‌ರನ್ನು ನೋಡಿದ್ದನಾದರೂ ಮಾತಾಡುವ ಅವಕಾಶ ಒದಗಿಬಂದಿರಲಿಲ್ಲ. ಅವರನ್ನು ಹಾಸಿದ ಜಮಖಾನೆಯ ಮೇಲೆ ಕೂರಲು ಹೇಳಿ ತಾನು ಕುರ್ಚಿಯ ಮೇಲೆ ಕುಳಿತ. ಫಾದರ್‌ಗೆ ಮುಜುಗರವಾದರೂ ಸಹಿಸಿಕೊಂಡರು. ಮುಂಜಾನೆ ಆದುದರಿಂದ ಕೊಂಚ ತಂಗಾಳಿ ಹೆಚ್ಚಾಗಿತ್ತು.

“ನಿಮಗೆ ಏಸುವಿನ ಶ್ರೀರಕ್ಷೆ ಇರಲಿ. ಅವನು ಕಾಪಾಡಲಿ. ಯಾಕೆಂದರೆ ನೀವು ಮೊನ್ನೆ ಕಾರ್ಯಕ್ರಮದಲ್ಲಿ ನಮ್ಮ ಕಿರಿಸ್ತಾನ್ ಧರ್ಮವನ್ನು ಹೊಗಳಿದಿರಂತೆ. ಅದಕೆ ನಾವು ಋಣಿ. ಆ ವಿಷಯ ನಮಗೆ ಫಿಲಿಪ್ ಹೇಳಿದ” ಎಂದಾಗ ಜಂಬುಕೇಶ ಕಣ್ಣು ಮುಚ್ಚಿ “ಎಲ್ಲ ಧರ್ಮಗಳ ಸಾರ ಒಂದೇ” ಎಂದು ಕಣ್ಣು ತೆಗೆದರು.

ಒಮ್ಮಿಂದೊಮ್ಮೆಲೆ ಜಂಬುನಾಥ ಸ್ವಯಂಭೂ ಲಿಂಗದ ಮೇಲೆ ಇದ್ದ ಹೂವಿನ ಹಾರವನ್ನು ತೆಗೆದು ಫಾದರ್‌ಗೆ ಹಾಕಿದರು. ಬಿಸಿ ಬಿಸಿ ಚಹಾ ಬಂದಿತು. ಇಬ್ಬರೂ ಕುಡಿದು ವರ್ತಮಾನದ ಸಾಮಾಜಿಕ, ರಾಜಕೀಯ, ಧಾರ್ಮಿಕ ವಿಷಯಗಳನ್ನು ಮಾತಾಡಿದರು. “ನಿಮ್ಮಂಥವರು ನಮ್ಮ ಜೊತೆ ಸೇರಿದರೆ ಇನ್ನೂ ಹೆಚ್ಚು ಕೆಲಸ ಮಾಡಬಹುದು ಎಂದು ನೋಡಿ ಯೋಚಿಸಿ” ಎಂದು ಹೇಳಿ ಹೊರಟುಹೋದರು.

ಜಂಬುಕೇಶನಿಗೆ ಕೆಲಸ ಮಾಡುವುದೆಂದರೆ ತಾನು ತಾನಾಗಿ ಮಾಡುವುದು, ಅವರು ಅವರಾಗಿ ಗ್ರಹಿಸುವುದು ಎಂದು ಅರ್ಥವಾಗಿ ಅನೇಕ ಅವರ ಕಲ್ಯಾಣ ಕಾರ್ಯಕ್ರಮದಲ್ಲಿ ಭಾಗವಹಿಸಿದನಾದರೂ ಅವರಿಂದ ಅಂತರವನ್ನು ಕಾಪಾಡಿಕೊಂಡಿದ್ದ.

ಬಿಷಪ್ ಅವರೇ ಹೇಳಿದರು, “ನೀವು ಗುಡಿಯ ಪೂಜಾರಿಯಾಗಿದ್ದರೂ ಇನ್ನೂ ಅಂತಹ ದೊಡ್ಡ ಮನೆಯೂ ಇಲ್ಲ. ಆರ್ಥಿಕ ಸಂಕಷ್ಟಗಳನ್ನು ನಿಮ್ಮ ಜಂಬುಲಿಂಗೇಶ ಕಳೆದಿರಲಿಕ್ಕೆ ಇಲ್ಲ. ನೀವು ಯಾಕೆ ನಮ್ಮ ಕಡೆ ಬರಬಾರದು?” ಎಂದರು. “ನಿಮಗೆ ನಿಮ್ಮ ಭಕ್ತಾದಿಗಳು ಕೊಡುವುದು ಒಂದು ರೂಪಾಯಿ, ಎರಡು ರೂಪಾಯಿ ಮಾತ್ರ. ಅದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಏನೂ ಸುಧಾರಿಸುತ್ತಿಲ್ಲ. ನಮ್ಮ ಕಡೆ ಬಂದರೆ ನಿಮಗೆ ಒಂದು ದೊಡ್ಡ ಮನೆ, ಒಂದು ಕಾರು, ೨೫ ಎಕರೆ ಭೂಮಿ ಕೊಡಿಸುವೆ.”

ಜಂಬುಕೇಶನಿಗೆ ದಿಕ್ಕೇ ತೋಚದಾಯಿತು. ಇಂತಹ ಆರ್ಥಿಕ ಸವಲತ್ತುಗಳು ಈ ಗುಡಿಯಿಂದ ತನಗೆ ಎಂದೂ ದೊರಕದು ಎಂದು ಯೋಚಿಸಿದ. ಆದರೆ ಜಾಂಬವನಿಂದ ಸ್ಥಾಪಿಸಲ್ಪಟ್ಟ ಈ ದೇವರನ್ನು ಬಿಟ್ಟು ತನ್ನ ವಂಶದ ಘನ ಮರ್ಯಾದೆಯನ್ನು ಹಾಳು ಮಾಡಲು ಸುತಾರಾಂ ಒಪ್ಪಲಿಲ್ಲ. ಆದರೂ ಮೇಲಿಂದ ಮೇಲೆ ಫಾದರ್‌ರ ಒತ್ತಡಗಳು, ಹೊಲ ಮತ್ತು ಬಂಗಲೆ ಕಾರಿನ ಆಸೆ ಆತನನ್ನು ಕಿರಿಸ್ತಾನದ ಕಡೆ ಮೃದುವಾಗಿಸ ಹತ್ತಿತ್ತು. ಇಲ್ಲಿ ಏನು ಕಡಮೆ ಇರದಿದ್ದರೂ ಅಲ್ಲಿಯ ಹೈಟೆಕ್ ವೈಭೋಗಗಳು ಅವನನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.

ಒಂದು ಸಾಂಸ್ಕೃತಿಕ ಹಿನ್ನೆಲೆ ಬಿಟ್ಟು ಹೋಗುವುದಕ್ಕೆ ಬಹಳ ದುಃಖವಾದರೂ ತನ್ನ ಅಣ್ಣನ ಮಗ ಸಾಂಬಸದಾಶಿವನನ್ನು ವಿಧ್ಯುಕ್ತವಾಗಿ ಗುಡಿಯ ಪೂಜಾರಿಯನ್ನಾಗಿ ಮಾಡಿ ತಾನು ನಿಶ್ಚಿಂತೆಯಿಂದ ಕ್ರಿಶ್ಚಿಯನ್ ಧರ್ಮಕ್ಕೆ ಪಾದಾರ್ಪಣೆ ಮಾಡಲು ತಯಾರಾದ. ಅದರ ಜೊತೆ ಕೆಲವು ಷರತ್ತುಗಳನ್ನು ವಿಧಿಸಿದ.  ಷರತ್ತುಗಳ ಪ್ರಕಾರ ಮೊದಲು, ತಾನು ಈ ಧರ್ಮವನ್ನು ಸೇರುವ ಮೊದಲು ತನ್ನ ಮನೆಯ ಕಟ್ಟಡ ಪೂರ್ಣವಾಗಬೇಕು. ಆದ ನಂತರ ಒಂದು ಶುಭ ದಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುತ್ತ ಕ್ರಿಶ್ಚಿಯನ್ ಬಂಧುಗಳು ಈತನನ್ನು ಹೊತ್ತುಕೊಂಡು ಶಿರವರದ ಚರ್ಚಿಗೆ ಕರೆತರುವುದು. ಆಮೇಲೆ ಮತಾಂತರ ಪ್ರಕ್ರಿಯೆ ಮಾಡುವುದು. ಬಿಷಪ್ ಅವರಿಗೆ ಈ ಆತನ ಬೇಡಿಕೆ ಕಬ್ಬಿಣದ ಕಡಲೆಯಾದರೂ, ಇಂತಹ ಅಪಭ್ರಂಶ ಬೇಡಿಕೆಗಳನ್ನು ಒಪ್ಪುವಷ್ಟು ಸರಳ ವ್ಯಕ್ತಿ ಅವರು ಅಲ್ಲದಿದ್ದರೂ, ಮಿಶನ್ ೨೦ ಪರ್ಸೆಂಟ್ ಸಲುವಾಗಿ ಸುಮ್ಮನೆ ಉಗುಳು ನುಂಗಿಕೊಂಡು ಒಪ್ಪಿಕೊಂಡರು.

ಛಪ್ಪನ್ನಾರು ಹಳ್ಳಿಗಳು ಜಂಬುಕೇಶ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವ ವಿಷಯ ಗೊತ್ತಾದಾಗ ಬಹಳ ತಳಮಳಗೊಂಡವು. ಆತನ ಈ ನಿರ್ಧಾರದಿಂದ ರಾಜಕೀಯ ನಾಯಕರು ಧರ್ಮದ ಮುಖಂಡರಿಂದ ಹಿಡಿದು ಹಿಂದಿನ ಮನೆ ಸೂಲಗಿತ್ತಿ ಬಸ್ಸಮ್ಮಳವರೆಗೂ ಕಳವಳಗೊಂಡರು. ಆತನ ನಿತ್ಯನಿರಂತರ ಭಕ್ತಸಮೂಹ ದಿನಾಲೂ ಆತನ ಮುಂದೆ ನಾನಾ ರೀತಿಯ ಬೇಡಿಕೆಯನ್ನು ಅರ್ಪಿಸುತ್ತಿದ್ದರು. ಅದರಲ್ಲಿ ‘ತಾತ ಮೂರು ದಿನದಿಂದ ನಮ್ಮ ಎಮ್ಮೆ ಕಾಣ್ತಾ ಇಲ್ಲ’ ಎನ್ನುವ ವಿಲಕ್ಷಣ ಬೇಡಿಕೆಗಳಿಂದ ಹಿಡಿದು ತಮಗೆ ಮಕ್ಕಳಾಗಲಿಲ್ಲ ಎನ್ನುವ ಸಹಜ ಬೇಡಿಕೆಗೂ ಪರಿಹಾರ ಒದಗಿಸಬಲ್ಲವನಾಗಿದ್ದ ಜಂಬುಕೇಶ. ಎಲ್ಲರ ಗುರುವಾಗಿ ವಿಜೃಂಭಿಸುತ್ತಿರುವಾಗಲೇ ಈ ನಿರ್ಧಾರಕ್ಕೆ ಬಂದಿದ್ದು ಸಂಕಟವಾಗಿತ್ತು. ಇನ್ನು ಕೆಲವರ ಪ್ರಕಾರ ಜಂಬುಕೇಶನಿಗೆ ಸಾಕ್ಷಾತ್ ಜಂಬುಕೇಶಲಿAಗವೇ ಕ್ರಿಶ್ಚಿಯನ್ ಧರ್ಮಕ್ಕೆ ಹೋಗಲು ಅಪ್ಪಣೆ ಕೊಟ್ಟಿದೆ ಎಂಬ ಗಾಳಿ ಸುದ್ದಿಗಳು ಹರಿದಾಡಹತ್ತಿದವು.

 ಆತನ ಒಂದನೇ ಬೇಡಿಕೆಯಂತೆ ಮನೆಯೇನೋ ಆರು ತಿಂಗಳಲ್ಲಿ ವೈಭವಯುತವಾಗಿ ಮುಗಿದು ಹೋಯಿತು. ಚೌಕಾಕಾರದ ಮನೆಗೆ ಶಿಲುಬೆಯನ್ನು ಸ್ಥಿರ ಮಾದರಿಯಲ್ಲಿ ಅಂಟಿಸಿದ ದೊಡ್ಡ ಕಟ್ಟಡ ಮಯೂರ ಶಿಲೆಯ ಹೊರವಲಯದಲ್ಲಿ ಮೈದಾಳಿ ಎದ್ದು ಕಾಣುತ್ತಿತ್ತು. ಅದಕ್ಕೆ ಸುಣ್ಣ ಬಣ್ಣ ಲೇಪಿಸಿದ್ದರಿಂದ ಅದು ಅರಮನೆಯಂತೆ ಕಂಗೊಳಿಸುತ್ತಿತ್ತು. ಆತನ ಕ್ರಿಶ್ಚಿಯಾನಿಟಿ ರಹದಾರಿಗೆ ಅಡ್ಡವಾಗಿದ್ದ ಒಂದನೇ ಬೇಡಿಕೆಯನ್ನೇನೋ ಈಡೇರಿಸಲಾಯಿತಾದರೂ, ಎರಡನೇ ಬೇಡಿಕೆ ಮಾನವನನ್ನು ಮಾನವನು ಹೊರುವ ಹೀನ ಬೇಡಿಕೆಯನ್ನು ಇಂಪ್ಲಿಮೆಂಟ್ ಮಾಡಲು ಕ್ರಿಶ್ಚಿಯನ್ ಮತಾಂತರ ಮಂಡಳಿ ಒಪ್ಪಲಿಲ್ಲ. ಆಗ ಜಂಬುಕೇಶ ತಾನು ಮತಾಂತರ ಆಗಲು ಸಾಧ್ಯವಿಲ್ಲ ಎಂದು ವರಾತ ತೆಗೆದ.

ಆದರೆ ಮಿಶನ್ ೨೦ ಪರ್ಸೆಂಟ್ ಎಂಬ ಗುರಿಯ ದಡ ಸೇರಲು ಅನಿವಾರ್ಯವಾಗಿ ಈತನನ್ನು ಹೊತ್ತುಕೊಂಡು ಹೋಗಲು ಪಡ್ಡೆಹುಡುಗರ ತಂಡವನ್ನು ನೇಮಕ ಮಾಡಲು ತೀರ್ಮಾನಿಸಲಾಯಿತು.

ಅಂದು ಮಯೂರಶಿಲೆಯಿಂದ ಶಿರವರದವರೆಗೂ ತೋರಣಗಳನ್ನು ಕಟ್ಟಲಾಗಿತ್ತು. ಮುಂಜಾನೆ ೯.೩೦ ಗಂಟೆಗೆ ಆರಂಭವಾಗುವ ಮೆರವಣಿಗೆ ಸಂಜೆ ೩ರವರೆಗೂ ನಡೆಯಿತು. ಅದರಲ್ಲಿ ಎಲ್ಲ ಜನಾಂಗ ಎಲ್ಲ ಧರ್ಮದ ಜನರು ಒಕ್ಕೊರಲಿನಿಂದ ‘ಪುರದಪುಣ್ಯಂ ಪುರುಷರೂಪಿಂದೆ ಪೋಗುತ್ತಿದೆ’ ಎಂದು ಅತ್ತು ಬೀಳ್ಕೊಟ್ಟರು.

ಜಂಬುಕೇಶ ಹುಡುಗರು ಹೊತ್ತ ಪಲ್ಲಕ್ಕಿಯಲ್ಲೇ ಜಟಿಗಿ ಹೊಡೆಯುತ್ತಿದ್ದ ಆತನ ಸ್ನಾನ ವಿಧಿಗಳನ್ನು ಪೂರೈಸಬೇಕಾದರೂ ಜಟಿಗಿ ಹೊಡೆದಿದ್ದ ಮತ್ತೆ ಚರ್ಚ್ನಲ್ಲಿ ಶಿಲುಬೆ ಹಾಕುವಾಗಲೂ ಜಟಿಗಿ ಹೊಡೆದಿದ್ದ. ದೊಡ್ಡದಾದ ಏಸುವಿನ ಭಾವಚಿತ್ರದ ಮುಂದೆ ನಾನು ಜಂಬುಕೇಶನೆಂಬ ಹುಲುಮಾನವನು ನಿನ್ನ ಕರುಣಾಕಟಾಕ್ಷದಿಂದ ಈ ಭವಬಂಧನದಿಂದ ಪಾರಾಗಿ ಬಂದು ನಿನ್ನ ಮುಖಾಂತರ ದೇವರನ್ನು ಕಾಣಲು ಉತ್ಸುಕನಾಗಿದ್ದೇನೆ, ಇನ್ನು ಮುಂದೆ ನನಗೆ ಹಿಂದಿನ ಯಾವುದೇ  ನೆನಪುಗಳು ಇಲ್ಲ. ನಿನ್ನ ಕಂದನಾಗಿ ಇರುವೆ – ಎಂದು ಅವರು ಹೇಳಿಕೊಟ್ಟಂತೆ ಹೇಳಲು ಅಸಮರ್ಥನಾದ ಆತ. ಅವರು ಹೇಳಿಕೊಡುವ ಈ ಘೋಷಗಳಿಗೆ ಆತ  ಸರಿಯಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ.

ಹೇಳು, ಧಿಮಾಕು ಬೇಡ. ಇಲ್ಲಿ ನೀನು ಯಾವ ತಾತಾನೂ ಅಲ್ಲ ಭೂತನೂ ಅಲ್ಲ – ಎಂದು ಯಾರೋ ಕೂಗಿದರು. ಜಂಬುಕೇಶನ ಕಂಗಳು ಒಮ್ಮಿಂದೊಮ್ಮೆಲೆ ಕೆಂಪಾದವು. ಕುಪ್ಪಳಿಸಿ ಕುಣಿದು ‘ನಾನು ಜಂಬುಕೇಶಲಿಂಗ ಬಂದೀನಿ, ಮಕ್ಕಳೇ. ನನ್ನ ಮತಾಂತರ ಮಾಡ್ತೀರಿ, ದೇವರನ್ನೇ ಮತಾಂತರ ಮಾಡ್ತೀರಿ!’ ಎಂದು ಅಬ್ಬರಿಸಿ ಚರ್ಚಿನ ತುಂಬಾ ಕುಣಿದಾಡಿದ. ಹಿಡಿಯಲು ಬಂದವರಿಗೆ ನಾಲ್ಕು ತದಕಿದ. ಕೊರಳಲ್ಲಿ ಕಟ್ಟಿದ ಶಿಲುಬೆಯನ್ನು ಕಿತ್ತು ಮಯೂರಶಿಲೆಯತ್ತ ಓಡಹತ್ತಿದ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ