ಮನೆಯ ಹೆಣ್ಣುಮಕ್ಕಳ ಆರೋಗ್ಯ ಹದಗೆಟ್ಟರೆ ಇಡಿಯ ಬದುಕೇ ಹಳಿತಪ್ಪಿದಂತಾಗುತ್ತದೆ. ಮೊದಲಾದರೆ ಮನೆಗಳಲ್ಲಿ ಕೂಡುಕುಟುಂಬಗಳಿದ್ದವು, ಒಬ್ಬರಲ್ಲದಿದ್ದರೆ ಮತ್ತೊಬ್ಬರು ಅಡುಗೆಮನೆಯ ಜವಾಬ್ದಾರಿ ಹೊತ್ತು ಮನೆಯ ರಥದ ಗಾಲಿಗಳು ಮುನ್ನಡೆಯುವಂತೆ ಮಾಡುತ್ತಿದ್ದರು. ಅಥವಾ ಮನೆಯಲ್ಲಿ ಇಬ್ಬರೋ ಮೂವರೋ ಮಕ್ಕಳಿದ್ದರೆ ಕೆಲಸಗಳನ್ನು ಹಂಚಿಕೊಳ್ಳುತ್ತಿದ್ದರು. ಇಂದು ಪರಿಸ್ಥಿತಿ ಬೇರೆಯೇ. ಮನೆಯಲ್ಲಿರುವ ಮಕ್ಕಳಿಗಾದರೂ ಶಾಲಾಕಾಲೇಜುಗಳ ಒತ್ತಡದ ನಡುವೆ ಮನೆಗೆಲಸಗಳಿಗೆ ಎಳೆಯುವಂತೆಯೇ ಇಲ್ಲ ಎನ್ನುವಂತಾಗಿದೆ. ಹೀಗಿರುತ್ತ ಅಮ್ಮನ ಆರೋಗ್ಯ ಕೆಟ್ಟರೆ ಅವರಾದರೂ ಏನು ಮಾಡಿಯಾರು? ಪರಿಣಾಮ – ಮನೆಯ ಯಜಮಾನನ ಮೇಲಿನ ಕೆಲಸಗಳ ಹೊರೆ ಇನ್ನಿಲ್ಲದಂತೆ ಹೆಚ್ಚುತ್ತಿದೆ.
ಯಾಕೋ ತುಂಬಾ ಸುಸ್ತು. ಹತ್ತು ಮೆಟ್ಟಿಲುಗಳನ್ನು ಹತ್ತಿ ಬರುವಷ್ಟರಲ್ಲಿ ಉಸ್ಸಪ್ಪಾ ಅನ್ನುವಂತಾಗುತ್ತದೆ. ಮೊದಲು ನಾನು ಹೀಗಿರಲಿಲ್ಲ. ಅದೆಷ್ಟು ಕೆಲಸ ಮಾಡುತ್ತಿದ್ದೆ. ಈಗ ಏನಾಗಿದೆ ಅಂತ ಗೊತ್ತಾಗುತ್ತಿಲ್ಲ. ಮನೆಮಂದಿಯಲ್ಲಿ ಹೇಳಿದರೆ ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ. ಬರ್ತಾ ಬರ್ತಾ ಸೋಮಾರಿಯಾಗ್ತಿದ್ದೀಯಾ ಅನ್ನುತ್ತಾರೆ. ಒಟ್ಟನಲ್ಲಿ ನನ್ನ ಆರೋಗ್ಯ ಯಾಕೆ ಹೀಗಾಯ್ತು ಅಂತ ಗೊತ್ತಾಗುತ್ತಿಲ್ಲ. ಥೈರಾಯಿಡ್ ಪರೀಕ್ಷೆ ಮಾಡಿಸಿದರು ವೈದ್ಯರು. ಇತರೆ ಕೆಲವು ಪರೀಕ್ಷೆಗಳನ್ನೂ ಮಾಡಿದರು. ಯಾವುದಕ್ಕೂ ಇರಲಿ ಅಂತ ಪೂರ್ಣ ಚೆಕ್ಅಪ್ ಮಾಡಿಸಿದೆ. ಏನೂ ತೊಂದರೆ ಇಲ್ಲ ಅನ್ನುತ್ತಾರೆ. ನನಗೆ ಮಾತ್ರ ಅಡುಗೆ ಮಾಡುವುದಕ್ಕೂ ಮನಸ್ಸಾಗದಷ್ಟು ಸುಸ್ತು. ನನ್ನ ಇತರ ಹವ್ಯಾಸಗಳ ಕತೆಯಂತೂ ಹೇಳಿ ಪ್ರಯೋಜನವಿಲ್ಲ. ಮನೆಯನ್ನು ಒಪ್ಪ ಓರಣವಾಗಿರಿಸಬೇಕೆಂದರೆ ಆಗುತ್ತಿಲ್ಲ. ನಾನ್ಯಾಕೆ ಹೀಗಿದ್ದೀನಿ..?’
ಸಹೋದ್ಯೋಗಿಯೊಬ್ಬರು ತಮಗಾಗುತ್ತಿರುವ ತೊಂದರೆಗಳನ್ನು ಹೇಳಿಕೊಳ್ಳುತ್ತಿದ್ದರು. ಸುತ್ತಲಿದ್ದ ಹಲವರು ತಮ್ಮದೂ ಅದೇ ಕತೆಯೆಂದರು. ‘ಕೋವಿಡ್ ಬಂದು ಹೋದಲ್ಲಿಂದ ಒಟ್ಟಾರೆಯಾಗಿ ಯಾವುದೂ ಸರಿಯಿಲ್ಲ’ ಎಂಬಲ್ಲಿಯವರೆಗೆ ಈ ಸಂಗತಿ ಬಂದು ತಲಪಿತು. ಈ ಮಾತುಕತೆಯಲ್ಲಿ ಕುತೂಹಲದಿಂದ ಭಾಗವಹಿಸುತ್ತಿರುವವರೆಲ್ಲರೂ ನಲವತ್ತರ ಆಸುಪಾಸಿನವರೇ ಎಂಬುದು ಗಮನಾರ್ಹ.
ಇನ್ನೋರ್ವ ಗೆಳತಿಯ ಸಮಸ್ಯೆ ಇನ್ನೊಂದು ಬಗೆಯದು. ಶರೀರವೆಲ್ಲ ಭಾರವೆನಿಸುವುದು. ‘ಊಟತಿಂಡಿ ಕಡಮೆಯೇ ಮಾಡುತ್ತಿದ್ದೇನೆ, ಅಂದರೂ ಶರೀರದ ತೂಕ ಏರುತ್ತಲೇ ಹೋಗುತ್ತಿದೆ. ಮನೆಗೆಲಸ ಅಷ್ಟೂ ಮಾಡಿಕೊಳ್ಳುತ್ತೇನೆ. ಅಂದರೂ ಉಳಿದವರು ನೋಡು, ಹೇಗೆ ಡುಮ್ಮಿಯಾಗುತ್ತಿದ್ದೀಯಾ.. ಸ್ವಲ್ಪ ವ್ಯಾಯಾಮ ಮಾಡು. ವಾಕಿಂಗ್ ಹೋಗು. ವಯಸ್ಸಾದವಳ ಥರ ಕಾಣ್ತಿದ್ದೀಯಾ.. ಅಂತೆಲ್ಲ ಕಮೆಂಟ್ ಮಾಡ್ತಾರೆ. ನೂರೆಂಟು ಸಲಹೆ ಕೊಡ್ತಾರೆ. ನನಗೆ ಅಂಥವರಿಂದ ದೂರವಿರುವುದೇ ಒಳ್ಳೆಯದು ಅನ್ನಿಸ್ತಿದೆ.’ ಎನ್ನುತ್ತಾರವರು.
‘ತುಂಬಾ ಮಂಡಿನೋವು. ಈಗಿನ್ನೂ ಒಂದು ವರ್ಷದ ಹಿಂದೆ ಮಹಡಿ ಮೆಟ್ಟಿಲುಗಳನ್ನು ಆರಾಮವಾಗಿ ಹತ್ತುತ್ತಿದ್ದೆ. ಎಷ್ಟು ಹೊತ್ತು ಬೇಕಾದರೂ ನಿಲ್ಲುತ್ತಿದ್ದೆ. ಈಗ್ಯಾಕೋ ಬೆಳಗ್ಗೆ ಮಕ್ಕಳಿಗೆ ತಿಂಡಿ ರೆಡಿ ಮಾಡಿ, ಬುತ್ತಿಕಟ್ಟಿ ಕೊಡುವಷ್ಟರಲ್ಲಿ ಕಾಲುನೋವು ತಡೆಯುವುದಕ್ಕಾಗುತ್ತಿಲ್ಲ. ಇದೇನು ಮೂಳೆ ಸವೆತವೇ, ಅಥವಾ ಶರೀರ ತನಗೆ ನಲವತ್ತಾಯಿತು ಎಂಬುದನ್ನು ಸೂಚಿಸುವುದೇ ಅರ್ಥವಾಗದು. ನಮ್ಮ ಹಿಂದಿನವರೆಲ್ಲ ಈ ಬಗೆಯ ಸಂಕಟಗಳನ್ನೆಲ್ಲ ದಾಟಿ ಮುಂದೆ ಬಂದರಾ ಅಂದುಕೊಂಡರೆ ಅಚ್ಚರಿಯೆನಿಸುತ್ತದೆ. ಹಿಂದಿನವರಂತೆ ಮೆನೋಪಾಸ್ಗೆ ಈಗ ಐವತ್ತೈದು ದಾಟಬೇಕಿಲ್ಲ. ಮೂವತ್ತೆಂಟು ವರ್ಷವಾಗುವಷ್ಟರಲ್ಲಿ ಮೆನೋಪಾಸ್ನ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಈ ಹೆಣ್ಣು ಜನ್ಮವೇ ಇಷ್ಟು ಅನಿಸುವುದಕ್ಕೆ ತೊಡಗಿದೆ ನನಗೆ..’ ಎಂಬುದು ಮತ್ತೋರ್ವರ ಅಳಲು.
‘ಮೊದಲೆಲ್ಲ ದಿಂಬಿಗೆ ತಲೆಯಾನಿಸಿದರೆ ಸಾಕಿತ್ತು. ಯಾರಾದರೂ ಬಂದು ಹೊಡೆದರೂ ಗೊತ್ತಾಗದಂಥ ನಿದ್ದೆ ಬರುತ್ತಿತ್ತು. ಈಗ ಹಿತವಾದ ನಿದ್ದೆಯೆಂಬುದೇ ಇಲ್ಲ. ಆಗಾಗ ಎಚ್ಚರ, ವಿಪರೀತ ಉರಿಯೆನಿಸುವ ಸೆಕೆ, ಎಲ್ಲರೂ ಬ್ಲಾಂಕೆಟ್ ಹೊದ್ದು ಮಲಗಿರುವುದು ನೋಡಿದರೆ ನನಗೆ ಅಚ್ಚರಿಯಾಗುತ್ತದೆ. ಗಂಟಲೊಣಗುವ ಬಾಯಾರಿಕೆ. ಶುಗರ್, ಬಿಪಿ ನಾರ್ಮಲ್ ಇದೆ. ಆದರೂ ಯಾಕೆ ಹೀಗೆ?’ ಎಂಬುದು ಇನ್ನೂ ಹಲವರ ಸಂಕಟ.
ನಮ್ಮ ಸುತ್ತಲೂ ಗಮನಿಸಿ ನೋಡಿದರೆ ಇಂತಹ ನೋವು-ಸಂಕಟಗಳನ್ನು ಅನುಭವಿಸುತ್ತಿರುವ ಅನೇಕ ಮಂದಿ ಕಾಣಸಿಗುತ್ತಾರೆ. ತಮಗೇನಾಗುತ್ತಿದೆ ಎಂಬುದು ತಮಗೇ ಅರ್ಥವಾಗದೆ ಹೋದಾಗ ಯಾವ ವೈದ್ಯರ ಬಳಿ ಹೋಗುವುದೋ ತಿಳಿಯುವುದಿಲ್ಲ. ನಲವತ್ತರ ಆಸುಪಾಸಿನಲ್ಲಿ ಮುಟ್ಟಿನಲ್ಲಿ ಏರುಪೇರು ಕಾಣಿಸಿಕೊಂಡಾಗ ಸ್ತ್ರೀರೋಗ ತಜ್ಞರನ್ನು ಭೇಟಿಯಾಗುವುದು ಸೂಕ್ತವೆನಿಸುತ್ತದೆ. ಇತ್ತ ಮಂಡಿನೋವು ಸಹಿಸಲಸದಳವಾದಾಗ ಮೂಳೆಕೀಲು ವೈದ್ಯರನ್ನು ಕಾಣಬೇಕೇನೋ ಅನಿಸಬಹುದು. ಇತ್ತ ಕುತ್ತಿಗೆಯ ನರ ಬಿಡದಂತೆ ಸೆಳೆತ ಶುರುವಾದಾಗ ಇದು ನರರೋಗವಿರಬಹುದೇ ಎನಿಸುತ್ತದೆ. ಬಿಡದೆ ಕಾಡುವ ತಲೆನೋವು ಭಯ ಹುಟ್ಟಿಸುತ್ತದೆ. ನಲವತ್ತರ ಆಸುಪಾಸಿನ ಹೆಂಗಳೆಯರು ದೀಪದೆದುರಿನ ಪತಂಗಗಳಂತೆ ಬಿದ್ದು ಇನ್ನಿಲ್ಲವಾಗುತ್ತಿರುವ ವರ್ತಮಾನ ಬಂದರೆ ನಮ್ಮ ಹೃದಯವೂ ಯಾವ ಕ್ಷಣದಲ್ಲಾದರೂ ಹೀಗೆಯೇ ನಿಂತುಬಿಡಬಹುದು ಎನಿಸುತ್ತದೆ. ಒಂದು ಸಮಸ್ಯೆಯಾದರೆ ಸಹಿಸಿಕೊಳ್ಳಬಹುದೇನೋ.. ಇಷ್ಟೊಂದು ಬಗೆಯದಾದಾಗ ಏನು ಮಾಡಬೇಕೆಂಬುದೇ ಅರಿವಾಗದು.
ಒಂದು ಕಡೆ ಔದ್ಯೋಗಿಕ ಬದುಕಿನ ಒತ್ತಡ, ಸಾಮಾಜಿಕ ಬದುಕಿನ ನಿರೀಕ್ಷೆಗಳು, ಜೊತೆಗೆ ಮನೆಯೊಳಗೆ ಸಹಜವಾಗಿಯೇ ಇರಬಹುದಾದ ಕೌಟುಂಬಿಕ ಒತ್ತಡಗಳು ತಮ್ಮದೇ ಆದ ರೀತಿಯಲ್ಲಿ ಎಲ್ಲ ಮನಸ್ಸುಗಳನ್ನೂ ಕಾಡುತ್ತಿವೆ. ಅದರೊಂದಿಗೆ ಸಾಮಾಜಿಕ ಜಾಲತಾಣಗಳೂ ವಿಚಿತ್ರ ಬಗೆಯಲ್ಲಿ ಬದುಕನ್ನು ಆವರಿಸಿಕೊಂಡು ಬದುಕನ್ನು ವಿಭಿನ್ನ ರೀತಿಯಲ್ಲಿ ಸೆಳೆದೊಯ್ಯುತ್ತಿವೆ. ಅಂತೂ ಮಾನಸಿಕವಾಗಿಯೂ ದೈಹಿಕವಾಗಿಯೂ ಬೇರೆಬೇರೆ ರೀತಿಯಲ್ಲಿ ಜೀವಗಳು ನಲುಗುತ್ತಿವೆ. ಸಂತೋಷವಾಗಿ, ಉಲ್ಲಸಿತವಾಗಿ ಇರಬೇಕೆಂದು ಬರಿದೇ ಅಂದುಕೊಂಡರೆ ಅಂತಿರುವುದು ಸಾಧ್ಯವೇ?
ಮನೆಯ ಹೆಣ್ಣುಮಕ್ಕಳ ಆರೋಗ್ಯ ಹದಗೆಟ್ಟರೆ ಇಡಿಯ ಬದುಕೇ ಹಳಿತಪ್ಪಿದಂತಾಗುತ್ತದೆ. ಮೊದಲಾದರೆ ಮನೆಗಳಲ್ಲಿ ಕೂಡುಕುಟುಂಬಗಳಿದ್ದವು, ಒಬ್ಬರಲ್ಲದಿದ್ದರೆ ಮತ್ತೊಬ್ಬರು ಅಡುಗೆಮನೆಯ ಜವಾಬ್ದಾರಿ ಹೊತ್ತು ಮನೆಯ ರಥದ ಗಾಲಿಗಳು ಮುನ್ನಡೆಯುವಂತೆ ಮಾಡುತ್ತಿದ್ದರು. ಅಥವಾ ಮನೆಯಲ್ಲಿ ಇಬ್ಬರೋ ಮೂವರೋ ಮಕ್ಕಳಿದ್ದರೆ ಕೆಲಸಗಳನ್ನು ಹಂಚಿಕೊಳ್ಳುತ್ತಿದ್ದರು. ಇಂದು ಪರಿಸ್ಥಿತಿ ಬೇರೆಯೇ. ಮನೆಯಲ್ಲಿರುವ ಮಕ್ಕಳಿಗಾದರೂ ಶಾಲಾ ಕಾಲೇಜುಗಳ ಒತ್ತಡದ ನಡುವೆ ಮನೆಗೆಲಸಗಳಿಗೆ ಎಳೆಯುವಂತೆಯೇ ಇಲ್ಲ ಎನ್ನುವಂತಾಗಿದೆ. ಹೀಗಿರುತ್ತ ಅಮ್ಮನ ಆರೋಗ್ಯ ಕೆಟ್ಟರೆ ಅವರಾದರೂ ಏನು ಮಾಡಿಯಾರು? ಪರಿಣಾಮ-ಮನೆಯ ಯಜಮಾನನ ಮೇಲಿನ ಕೆಲಸಗಳ ಹೊರೆ ಇನ್ನಿಲ್ಲದಂತೆ ಹೆಚ್ಚುತ್ತದೆ.
ಈ ಎಲ್ಲದರ ಹಿಂದೆ ಇರುವ ಬಹುಮುಖ್ಯ ಕಾರಣವೆಂದರೆ ನಲವತ್ತರ ಆಸುಪಾಸಿನ ಹೆಣ್ಣುಮಕ್ಕಳಲ್ಲಿ ಈಸ್ಟ್ರೋಜಿನ್ ಎಂಬ ಹಾರ್ಮೋನ್ನ ವ್ಯತ್ಯಯವಾಗುವುದು. ಮುಟ್ಟಿನಲ್ಲಿ ಏರುಪೇರು, ನಿಧಾನವಾಗಿ ಮೆನೋಪಾಸ್. ಈ ಹಂತವನ್ನು ದಾಟುವಲ್ಲಿ ಹೆಣ್ಣುಮಕ್ಕಳು ಅಕ್ಷರಶಃ ಹೈರಾಣಾಗುತ್ತಾರೆ. ಮನೆಮಂದಿ ಅವರೊಳಗಿನ ತಲ್ಲಣಗಳನ್ನು ಅರ್ಥೈಸಿಕೊಂಡು ಸ್ಪಂದಿಸಿದರೆ ಸಹಜವಾಗಿ ಬದುಕು ಮುಂದುವರಿಯುತ್ತದೆ. ಅದಲ್ಲದೆ ಹೋದರೆ ಶಾರೀರಿಕವಾಗಿ ಆಗುತ್ತಿರುವ ಸಮಸ್ಯೆಗಳಿಗಿಂತ ಮಾನಸಿಕವಾಗಿ ಬಹಳಷ್ಟು ನಲುಗಬೇಕಾಗುತ್ತದೆ. ಹೇಳಿಕೊಳ್ಳಲಾಗದ ಆತಂಕ, ಖಿನ್ನತೆ, ಸಣ್ಣಪುಟ್ಟ ವಿಷಯಕ್ಕೂ ಕಿರಿಕಿರಿ, ಅತೀವ ದುಃಖ, ಮನೆಮಂದಿ ತನ್ನನ್ನು ಗಮನಿಸುತ್ತಿಲ್ಲ ಎಂಬ ನೋವು ಎಲ್ಲವೂ ಒಟ್ಟು ಸೇರಿದಾಗ ಮನಸ್ಸಿಗಾಗುವ ಹಿಂಸೆ ಅತ್ಯಂತ ಹೀನಾಯವಾದದ್ದು. ಸಂಗಾತಿಯಾದವರು ಸರಿಯಾಗಿ ಈ ಸಂದರ್ಭವನ್ನು ಅರ್ಥ ಮಾಡಿಕೊಂಡರೆ ಮಾನಸಿಕವಾದ ಬಂಧ ಭದ್ರವಾದೀತು, ಅದಲ್ಲದೆ ಹೀಗಳೆದರೆ ಭಾವತಂತುಗಳು ಒಂದೊಂದಾಗಿ ಕಡಿದುಕೊಂಡಾವು.
ಈಸ್ಟ್ರೋಜಿನ್ ಕೊರತೆಯಿಂದ ದೈಹಿಕವಾಗಿಯೂ ಮಾನಸಿಕವಾಗಿಯೂ ಉಂಟಾಗುವ ತೊಂದರೆಗಳು ಅನೇಕ. ಒಂದೆಡೆ ನಮ್ಮ ಆಹಾರದಿಂದ ನಮ್ಮ ಶರೀರಕ್ಕೆ ಬೇಕಾದ ಸತ್ತ್ವಗಳನ್ನು, ಮುಖ್ಯವಾಗಿ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳುವಲ್ಲಿ ನಿಧಾನಗತಿಯಾಗುತ್ತದೆ. ಪರಿಣಾಮವಾಗಿ ಮೂಳೆಗಳು ದುರ್ಬಲಗೊಳ್ಳಲಾರಂಭಿಸುತ್ತವೆ. ಸಣ್ಣಗೆ ಬಿದ್ದರೂ ಮೂಳೆಮುರಿದುಕೊಳ್ಳುವ ಸ್ಥಿತಿ ಬರುವುದು ಇದೇ ಕಾರಣದಿಂದಲೇ. ಜತೆಗೆ ಏರುತ್ತಲೇಹೋಗುವ ಶರೀರದ ತೂಕ ಮಂಡಿಯ ಮೇಲೆ ಅತ್ಯಂತ ಒತ್ತಡವನ್ನು ತಂದಿಡುತ್ತದೆ. ಮಂಡಿನೋವು ಹೆಚ್ಚುತ್ತಲೇ ನಡಿಗೆಯ ರೀತಿ ಬದಲಾಗುತ್ತದೆ. ಶಿಕ್ಷಕರಾಗಿ ಕೆಲಸ ಮಾಡುವವರಿಗಂತೂ ಈ ಸಮಸ್ಯೆ ಕಟ್ಟಿಟ್ಟ ಬುತ್ತಿ. ಅತೀ ಹೆಚ್ಚು ಹೊತ್ತು ನಿಂತೇ ಇರಬೇಕಾಗುತ್ತದೆ. ಮನೆಯಲ್ಲಿಯೂ ಮನೆಗೆಲಸಗಳಿಗಾಗಿ ನಿಂತೇ ಇರುವುದು ರೂಢಿ. ಆಧುನಿಕತೆಯ ಹೆಸರಿನಲ್ಲಿ ಅಡುಗೆಮನೆಯ ಎಲ್ಲ ಕೆಲಸಗಳನ್ನೂ ನಿಂತೇ ಮಾಡುವುದು ಸುಲಭವೆಂದುಕೊಂಡೆವು. ಆದರೆ ಅದರ ಪರಿಣಾಮ ಅನುಭವಿಸಿದಾಗಷ್ಟೇ ಗೊತ್ತಾಗುವುದು. ಶರೀರಕ್ಕೆ ಬೇಕಾದ ಯಾವ ವಿಶ್ರಾಂತಿಯೂ ದೊರಕದ ಸ್ಥಿತಿಗೆ ನಮ್ಮನ್ನೇ ನಾವು ಒಡ್ಡಿಕೊಂಡಿದ್ದೇವೆ.
ಹಾಗಿದ್ದರೆ ಇವೆಲ್ಲದಕ್ಕೂ ಏನು ಪರಿಹಾರ? ಒಂದಾದ ಮೇಲೊಂದು ಬಗೆಯ ಔಷಧಿಗಳನ್ನು ಸೇವಿಸಿ ಅದರ ಅಡ್ಡಪರಿಣಾಮಗಳನ್ನು ಅನುಭವಿಸುವುದಕ್ಕಿಂತ ಸಾಧ್ಯವಾದಷ್ಟೂ ಆಹಾರದಲ್ಲಿ ನಿಯಂತ್ರಣ ಮಾಡುವ ಪ್ರಯತ್ನ ಮಾಡುವುದೊಳ್ಳೆಯದು. ಅಡುಗೆಯಲ್ಲಿ ನುಗ್ಗೆಸೊಪ್ಪು, ಕರಿಬೇವಿನ ಎಲೆ, ಅರಶಿನ ಪುಡಿಯ ಬಳಕೆಯಿರುವುದು ಹಿತ. ಮೊಸರು, ಸಕ್ಕರೆಯ ಬಳಕೆ ಕಡಮೆಯಾದರೆ ಆರೋಗ್ಯಕ್ಕೆ ಉತ್ತಮ. ಅದರೊಂದಿಗೆ ನೂರಾರು ವಿಚಾರಗಳ ಕುರಿತು ವಿನಾಕಾರಣ ಚಿಂತಿಸದೆ ಭಗವದ್ಸಂಕಲ್ಪವೆಂದು ಮುನ್ನಡೆದರೆ ಮನಸ್ಸಿನೊಂದಿಗೆ ಬದುಕೂ ತಕ್ಕಮಟ್ಟಿಗೆ ಹಗುರಾದೀತು. ಆರೋಗ್ಯಕರವಾದ ಪೌಷ್ಟಿಕಾಂಶವುಳ್ಳ ಆಹಾರ ಸೇವನೆ ಅನೇಕ ಸಮಸ್ಯೆಗಳಿಂದ ಮುಕ್ತಿ ಕೊಟ್ಟೀತು.
ಹೆಣ್ಣು ಮಕ್ಕಳು ಈ ಕುರಿತು ಕೊಂಚ ಎಚ್ಚರದಿಂದಿದ್ದು ಈ ಹಂತವನ್ನು ಮೀರುವುದಕ್ಕೆ ಮಾನಸಿಕವಾಗಿ ಸಿದ್ಧರಾಗಬೇಕು ಅಷ್ಟೇ.