ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಡಿಸೆಂಬರ್ 2017 > ಆರೋಗ್ಯಕರ ಪರಂಪರೆಗಳು ಬೆಳೆಯಲಿ

ಆರೋಗ್ಯಕರ ಪರಂಪರೆಗಳು ಬೆಳೆಯಲಿ

ಹಲವಾರು ವೈಚಿತ್ರ್ಯಗಳ ನಡುವೆ ಭಾರತದ ರಾಷ್ಟ್ರಜೀವನ ಮುಂದುವರಿದಿದೆ. ಎಲ್ಲಕ್ಕಿಂತ ದೊಡ್ಡ ವಿಪರ್ಯಾಸವೆಂದರೆ ಅತ್ಯಂತ ಉದಾರ ಪರಂಪರೆಯ ವಾರಸಿಕೆ ತನ್ನದೆಂದು ಯಥಾರ್ಥವಾಗಿಯೇ ಹೇಳಿಕೊಳ್ಳುವ ಈ ದೇಶದಲ್ಲಿ ಎಲ್ಲವನ್ನೂ ವಿವಾದವಸ್ತುವಾಗಿಸುವ ನೈಷೇಧಿಕ ಪ್ರವೃತ್ತಿ ಬೆಳೆದಿರುವುದು. ಅಧಿಕ ಜನವರ್ಗ ಯಾವುದೋ ತಥ್ಯಗಳನ್ನು ಸಹಜವಾಗಿ ಸ್ವೀಕರಿಸಿದ್ದರೂ ಎಲ್ಲದರ ಬಗೆಗೂ ತಗಾದೆಯನ್ನೆಬ್ಬಿಸದಿದ್ದರೆ ಒಂದು ವರ್ಗಕ್ಕೆ ಸಮಾಧಾನವಿಲ್ಲ. ಈ ಪ್ರವೃತ್ತಿಗೆ ಧಾರಾಳವಾಗಿ ನೀರು-ಗೊಬ್ಬರಗಳನ್ನೆರೆಯುತ್ತಿರುವವು ಮಾಧ್ಯಮಗಳು; ಏಕೆಂದರೆ ಅವುಗಳ ಪಾಲಿಗೆ ’ಕಲಹವೇ ಕಲ್ಯಾಣ’. ಇದರಿಂದಾಗಿ ಒಂದುಕಡೆ ಅಪಾರ ಶಕ್ತಿಹ್ರಾಸವಾಗುತ್ತಿದ್ದರೆ ಇನ್ನೊಂದುಕಡೆ ನಿಜವಾಗಿ ಅವಧಾನವನ್ನು ಬೇಡುವ ಮುಖ್ಯಸಂಗತಿಗಳೆಲ್ಲ ಹಿನ್ನೆಲೆಗೆ ಸರಿದುಬಿಡುತ್ತವೆ. ಸಿನೆಮಾ ಶುರುವಾಗುವುದಕ್ಕೆ ಮೊದಲು ರಾಷ್ಟ್ರಗೀತೆ ಇದ್ದು ವೀಕ್ಷಕರು ಎದ್ದುನಿಂತು ಗೌರವಸಲ್ಲಿಸುವುದು ಅಪೇಕ್ಷಣೀಯ ಎಂದು ಆರಂಭವಾದ ಪ್ರಸ್ತಾವ ಈಗ ಅದನ್ನು ಕಡ್ಡಾಯಗೊಳಿಸಬಹುದೆ, ದೇಶಭಕ್ತಿಯನ್ನು ಪ್ರಕಟಗೊಳಿಸಬೇಕಾದುದು ಅವಶ್ಯವೆ, ನಿಂತುಕೊಳ್ಳುವ ಶಕ್ತಿಯಿಲ್ಲದವರು ಏನು ಮಾಡಬೇಕು, ಆ ಅವಧಿಯಲ್ಲೆ ಸಿನೆಮಾಹಾಲನ್ನು ಪ್ರವೇಶಿಸುತ್ತಿರುವವರು ಏನು ಮಾಡಬೇಕು – ಎಂದೆಲ್ಲ ಹಾಸ್ಯಾಸ್ಪದ ಆಯಾಮಗಳನ್ನು ತಳೆದಿದೆ. ಮರುಪರಾಮರ್ಶೆ ಸರ್ವೊಚ್ಚ ನ್ಯಾಯಾಲಯದಲ್ಲಿ ೨೦೧೮ ಜನವರಿ ೯ರಂದು ನಡೆಯುವುದಿದೆ. ಸ್ವಾತಂತ್ರ್ಯಪ್ರಾಪ್ತಿಯ ಆರಂಭದ ಶಕೆಯಲ್ಲಿ ದೇಶಭಕ್ತಿಪ್ರಕಟೀಕರಣ ಅವಶ್ಯವಿದ್ದಿರಬಹುದು, ಈಗ ಇಲ್ಲ – ಎಂದೂ ಒಂದು ಮೇಧಾವಿವರ್ಗ ಅಪ್ಪಣೆಕೊಡಿಸಿದೆ. ರಾಷ್ಟ್ರಧ್ವಜಕ್ಕೂ ರಾಷ್ಟ್ರಗೀತೆಗೂ ಗೌರವಸಲ್ಲಲೇಬೇಕೆಂಬುದು ಜಗತ್ತಿನ ಶಿಷ್ಟರಾಷ್ಟ್ರಗಳಲ್ಲಿ ಸ್ವಯಂಸಿದ್ಧ ಸಂಗತಿಯೆನಿಸಿದೆ. ಕ್ರಿಕೆಟಿಗ ಗೌತಮ್ ಗಂಭೀರ್ ಕೇಳಿದ್ದಾರೆ: “ಹೋಟೆಲಿಗೆ ಹೋಗಿ ಅರ್ಧಗಂಟೆಯಾದರೂ ಕಾಯಲು ಹಿಂದೆಗೆಯದವರಿಗೆ ಸಿನೆಮಾಹಾಲ್‌ನಲ್ಲಿ ೫೨ ಸೆಕೆಂಡ್ ಕಾಯುವುದು ಕಷ್ಟವಾಗುತ್ತದೆಯೆ?”

ಯಾವುದೇ ಶಿಷ್ಟ ಆಚರಣೆಯನ್ನೂ ಕೂದಲು ಸೀಳುವಂತಹ ವಿಶ್ಲೇಷಣೆಗೂ ಟೀಕೆಗಳಿಗೂ ಒಳಪಡಿಸಬೇಕೆಂಬ ಪ್ರವೃತ್ತಿಯು ಬೌದ್ಧಿಕ ದಿವಾಳಿತನದ, ಕ್ಷುದ್ರತೆಯ ಮತ್ತು ಅವನತಿಯ ಸಂಕೇತವೆಂದು ಅಧಿಕಸಂಖ್ಯೆಯ ಸಭ್ಯವರ್ಗಕ್ಕೆ ಅನಿಸದಿರದು. ದೇಶದಲ್ಲಿ ಆರೋಗ್ಯಕರ ಪರಂಪರೆಗಳು ಬೆಳೆಯಲಿ ಎಂದು ಆಶಿಸೋಣ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ