ಮುಂಜಾನೆ ಮಡಿಯುಟ್ಟು ಜಿನಸ್ಮರಣೆ ಮಾಡಿ ಚಿಕ್ಕಬೆಟ್ಟದ ಬಂಡೆಯೊಂದರ ಮೇಲೆ ನಿಂತು ಪಕ್ಕದ ದೊಡ್ಡ ಬೆಟ್ಟದ ಕೋಡುಗಲ್ಲಿಗೆ ಬಂಗಾರದ ಬಾಣವನ್ನು ಬಿಡಬೇಕೆಂದು ಕನಸಿನ ಸೂಚನೆ. ಚಾಮುಂಡರಾಯ ಹಾಗೆಯೇ ಮಾಡಿದ. ಬಾಣ ಆ ಬಂಡೆಗೆ ತಾಕಿದೊಡನೆ ಬಾಹುಬಲಿಯ ಶ್ರೀಮುಖ ತೋರಿಕೊಂಡಿತು. ಆಮೇಲೆ ಅವರೆಲ್ಲ ಆ ದೊಡ್ಡಬೆಟ್ಟವನ್ನೇರಿ ಶಿಲ್ಪಿಗಳಿಂದ ಇಡೀ ಮೈಮಾಟವನ್ನು ಬಿಡಿಸಿದರು. ವಿಂಧ್ಯಗಿರಿಯ ಮೇಲೆ ಗೊಮ್ಮಟೇಶ್ವರನ ’ಸುಮನೋಹರ ಭಯಂಕರ’ ಮೂರ್ತಿ ಮೈದಳೆದುದು ಹೀಗೆ.

ಗೊಮ್ಮಟೇಶ್ವರನ ಅದ್ಭುತ ಶಿಲ್ಪದ ಹಿನ್ನೆಲೆಯಲ್ಲಿ ಎರಡು ಕಥೆಗಳಿವೆ – ಒಂದು ಆ ಶಿಲ್ಪಕ್ಕೆ ವಸ್ತುವಾದ ಬಾಹುಬಲಿಯದು, ಇನ್ನೊಂದು ಶಿಲ್ಪಕ್ಕೆ ಕಾರಣನಾದ ಚಾಮುಂಡರಾಯನದು (=ಚಾವುಂಡರಾಯ). ಎರಡೂ ಕಥೆಗಳಲ್ಲಿ ಮನು?ನನ್ನು ಮೇಲೆತ್ತುವ ಗುಣವಿದೆ, ಬದುಕನ್ನು ತಿದ್ದುವ ಹದವಿದೆ. ಬಾಹುಬಲಿ, ಚಾಮುಂಡರಾಯ – ಇಬ್ಬರೂ ಸಮರಶೂರರು, ದಾನವೀರರು, ಮಾನೋನ್ನತರು; ಅಂತರಂಗ ಬಹಿರಂಗ ಎರಡೂ ಹೋರಾಟಗಳಲ್ಲಿ ಪಾಲ್ಗೊಂಡವರು; ತಮ್ಮನ್ನು ತಾವೇ ಗೆದ್ದು ಎಂದೂ ಅಳಿಯದ ಮೇಲ್ಮೆಯನ್ನು ಗಳಿಸಿಕೊಂಡವರು.
ಬಾಹುಬಲಿಯನ್ನು ಲೋಕಕ್ಕೆ ಕಾಣಿಸಿಕೊಟ್ಟವನು, ಅವನ ಒಳಗಿನ ಎತ್ತರವನ್ನು ನಮ್ಮ ಕಣ್ಣೆದುರು ಮೈದುಂಬಿಸಿಕೊಟ್ಟವನು ಚಾಮುಂಡರಾಯ; ಚಾಮುಂಡರಾಯನ ಸಾಹಸವನ್ನು ಜನರ ನಡುವೆ ಎತ್ತಿನಿಲ್ಲಿಸಿದವನು ಬಾಹುಬಲಿಯೇ. ಅವರಿಬ್ಬರಲ್ಲಿ ಒಂದು ತೆರನಾದ ಅನ್ಯೋನ್ಯಾಶ್ರಯವಿದೆ. ಹಾಗೆಂದೇ ಚಾಮುಂಡರಾಯನ ಹೆಸರಾದ ’ಗೊಮ್ಮಟ’ ಬಾಹುಬಲಿಗೂ ಸಂದು, ಅವನು ಗೊಮ್ಮಟರಾಯನಾದರೆ ಇವನು ಗೊಮ್ಮಟೇಶ್ವರನಾದ. ಇಬ್ಬರೂ ಮಾನವಕಲ್ಪನೆಯ ಕೂಟವನ್ನಡರಿ ಸಿದ್ಧರೆನಿಸಿಕೊಂಡವರು.
ಕಥೆಯ ಮೂಲ
ಬಾಹುಬಲಿಯ ಕಥೆ ಜೈನ ಪುರಾಣಗಳಲ್ಲಿ ಸೇರಿ ಬಂದಿದೆ. ಕವಿಪರಮೇಷ್ಠಿಯ ’ಮಹಾಪುರಾಣ’, ಜಿನಸೇನರ ’ಪೂರ್ವಪುರಾಣ’ಗಳಲ್ಲಿ ಬಂದ ಬಗೆಯನ್ನು ಮೆಚ್ಚಿಕೊಂಡು ನಮ್ಮ ಪಂಪ ತನ್ನ ’ಆದಿಪುರಾಣ’ದಲ್ಲಿ ಈ ಕಥೆಯನ್ನು ಹೆಣೆದುಕೊಂಡ. ಕಥೆ ಪುರಾಣದ್ದು, ಒಕ್ಕಣೆಯು ಕಾವ್ಯ. ಕಥೆಯ ಮೈಕಟ್ಟಿಗೆ ಕಾವ್ಯದ ಹೊನ್ನಿನ ಕಳಶವಿಟ್ಟಿದ್ದಾನೆ ಪಂಪ. ಜಿನಸೇನರ ’ಪೂರ್ವಪುರಾಣ’ದಲ್ಲಿ ಪ್ರಸ್ತಾಪಕ್ಕೆ ಬಂದ ೫೨೫ ಬಿಲ್ಲೆತ್ತರದ ಬಾಹುಬಲಿಯ ಪುತ್ಥಳಿಯ ಸ್ಫೂರ್ತಿ ಚಾಮುಂಡರಾಯನನ್ನು ಉಜ್ಜುಗಿಸಿದುದು ಇನ್ನೊಂದು ಕಥೆ.
ಬಾಹುಬಲಿ ಆದಿ ತೀರ್ಥಂಕರ – ವೃಷಭದೇವನ ಮಗ. ವೃಷಭದೇವನು ಜಿನನಾಗುವ ಮೊದಲು ಚಕ್ರವರ್ತಿಯಾಗಿದ್ದವನು; ಮನುಷ್ಯನ ಸಂಸ್ಕೃತಿಯನ್ನೇ ಹುಟ್ಟುಹಾಕಿದವನು. ಅವನು ಮೊದಲ ಚಕ್ರವರ್ತಿ, ಮೊದಲ ಜಿನ, ಮೊದಲ ಮಾನವ. ಬಾಹುಬಲಿಯ ಕಥೆ ಅಷ್ಟೆ ಹಿಂದಕ್ಕೆ ಹೋಗುತ್ತದೆ, ಅಷ್ಟು ಎತ್ತರವನ್ನು ಏರುತ್ತದೆ! ಬಾಹುಬಲಿಯ ಅಣ್ಣ ಭರತ; ತಂದೆಯ ಪ್ರಾಪಂಚಿಕ ವೈಭವಕ್ಕೆ ಒಲಿದುಕೊಂಡವನು. ತಮ್ಮ ಬಾಹುಬಲಿ ತಂದೆಯ ವೈರಾಗ್ಯದ ಪ್ರಭಾವವನ್ನು ಮೈದುಂಬಿಸಿಕೊಂಡವನು. ವೃಷದೇವನಿಗೆ ನೂರು ಮಂದಿ ಮಕ್ಕಳು; ಜಗತ್ತಿನ ಜನರೆಲ್ಲ ಅವನ ಮಕ್ಕಳೇ ಅಲ್ಲವೆ? ವೃಷಭದೇವನು ವೈರಾಗ್ಯ ತಾಳಿದಂದು ತನ್ನ ಒಡೆತನದ ಸೀಮೆಯನ್ನೆಲ್ಲ ಎಂದರೆ ಭೂಮಂಡಲವನ್ನೆಲ್ಲ ತನ್ನ ಮಕ್ಕಳಿಗೆ ಹಂಚಿಕೊಟ್ಟ.
ಹಿರಿಯ ಮಗ ಭರತನಲ್ಲಿ ಆಸೆ ತಲೆದೋರಿ ಅವನ ಅಬ್ಬರ ಮೂಡುವವರೆಗೆ ಎಲ್ಲರೂ ನೆಮ್ಮದಿಯಿಂದಿದ್ದರು. ತಾನೊಬ್ಬನೇ ದೊರೆಯಾಗಬೇಕು, ಎಲ್ಲರ ಮೇಲೆ ತನ್ನ ಒಡೆತನವಿರಬೇಕು, ಎಲ್ಲರ ಸ್ವತ್ತೂ ತನ್ನದಾಗಬೇಕು ಎನ್ನುವ ದುರಾಸೆ ಬಲಶಾಲಿಯಾದವನ ಒಡಲಲ್ಲಿ ಮೂಡಿಕೊಂಡರೆ ತಾನೆ ನೆಮ್ಮದಿ ಕೆಡುವುದು? ಭರತನು ಬಲಶಾಲಿ; ಮೈಬಲ ಸಾಲದಂಬಂತೆ ಅವನ ಬಳಿ ಚಕ್ರರತ್ನವೆಂಬ ಅದ್ಭುತ ಶಸ್ತ್ರವೂ ಇದ್ದಿತು. ಇದು ಗಿರ್ರನೆ ತಿರುಗುತ್ತ ಎದುರು ಸಾಗುತ್ತಿದ್ದರೆ ಅದನ್ನು ಎದುರಿಸುವವರೇ ಇರಲಾರರು; ಅದರೊಡನೆ ಸೆಣಸುವ ಸಾಹಸವನ್ನು ಯಾರೂ ಮಾಡರು. ಅವನು ಹೋದೆಡೆಯಲ್ಲೆಲ್ಲ ಗೆಲವೇ!
ಮದವೇರಿದಾಗ….
ದುರಾಸೆ ಹೀಗೆ ಬಲಗೊಂಡರೆ ಬರುವುದು ಮದ; ಮದವೇರಿದರೆ ಕುರುಡು. ಏನು ಮಾಡಬೇಕು, ಏನು ಮಾಡಬಾರದು ಎನ್ನುವ ಪರಿ ಇರದು. ತನ್ನ ತಮ್ಮಂದಿರನ್ನೆಲ್ಲ ತನಗೆ ಅಡಿಯಾಳುಗಳಾಗುವಂತೆ ಆಣತಿ ಮಾಡಿದ. ಅಣ್ಣನ ಬಲಕ್ಕೆ ಅಂಜಿ ಅವರು ತಮ್ಮ ರಾಜ್ಯಗಳನ್ನೆಲ್ಲ ಬಿಟ್ಟು ತಂದೆಯ ಬಳಿ ವಿರಕ್ತನಾಗಿ ನಿಂತರು. ಒಬ್ಬ ತಮ್ಮ ಮಾತ್ರ ಅಣ್ಣನ ಆಣತಿಗೆ ಎದೆಗುಂದದೆ ಅವನನ್ನು ಸೆಣಸಲು ಸಿದ್ಧನಾದ; ಅವನು ಬಾಹುಬಲಿ.
ಭರತನಿಗೆ ಈ ಮೊದಲೇ ಬುದ್ಧಿ ಬರಬಹುದಾಗಿದ್ದಿತು. ಅವನು ಸಮುದ್ರದವರೆಗೆ ಆರೂ ಖಂಡಗಳುಳ್ಳ ಭೂಮಂಡಲವನ್ನೆಲ್ಲ ಗೆದ್ದು ತನ್ನದಾಗಿಸಿಕೊಂಡ ಮೇಲೆ, ತಾನೇ ಚಕ್ರವರ್ತಿಯೆಂಬ ಗತ್ತಿನಿಂದ ವೃಷಭಾಚಲಕ್ಕೆ ಬರುತ್ತಾನೆ. ಹಿಂದಿನ ಚಕ್ರವರ್ತಿಗಳೆಲ್ಲ ತಂತಮ್ಮ ಹೆಸರುಗಳನ್ನು ಈ ಬೆಟ್ಟದ ಮೇಲೆ ಎಲ್ಲರಿಗೂ ಕಾಣುವಂತೆ ಕಡೆಯಿಸಿದ್ದರು. ಹಿಂದೆ ’ಶತಕೋಟಿ ಕಲ್ಪ’ಗಳಲ್ಲಿ ಆಗಿಹೋದ ಚಕ್ರವರ್ತಿಗಳೆಲ್ಲರ ಹೆಸರುಗಳಿಂದ ಬೆಟ್ಟವೆಲ್ಲ ತುಂಬಿಹೋಗಿದ್ದಿತು. ಭರತನು ತನ್ನ ಹೆಸರನ್ನು ಅಲ್ಲಿ ಕಡೆಯಿಸಬೇಕೆಂದರೆ ಎಡೆಯಿಲ್ಲ! ಎಲ್ಲರೂ ಹೋದ ಹಾದಿಯನ್ನೇ ತಾನೂ ಹಿಡಿಯಬೇಕು, ಹಿಂದಿನೆಲ್ಲ ಚಕ್ರವರ್ತಿಗಳೂ ಹೇಳಹೆಸರಿಲ್ಲದೆ ಮರೆಯಾದರು, ತನ್ನ ಗತಿಯೂ ಅದೇ – ಎಂದು ಅವನು ಮನಗಂಡಿದ್ದರೆ ಒಳಿತಾಗುತ್ತಿತ್ತು. ಆದರೆ ಮದವೇರಿದಾಗ ಕಣ್ಣು ಮಂಜಾಗುತ್ತದೆ, ಹಿಂದಿನ ಚಕ್ರವರ್ತಿಗಳ ಹೆಸರುಗಳನ್ನು ಅಳಿಸಿ, ತನ್ನ ಹೆಸರನ್ನು ’ಟಂಕೋತ್ಕೀರ್ಣ’ ಮಾಡಿಸಲು ನಿಶ್ಚಯಿಸಿದ!
ಸ್ತಬ್ಧವಾದ ಚಕ್ರರತ್ನ
ಹೀಗೆ ಬುದ್ಧಿಯನ್ನು ತಂದುಕೊಳ್ಳುವ ಅವಕಾಶವನ್ನು ಭರತ ಕಳೆದುಕೊಂಡು ಬಾಹುಬಲಿಯಿಂದ ಬುದ್ಧಿ ಕಲಿಯಬೇಕಾಯಿತು. ಭೂಮಂಡಲವನ್ನೆಲ್ಲ ಗೆದ್ದು ಅಯೋಧ್ಯೆಗೆ ಹಿಂದಿರುಗಿದಾಗ ಅವನ ಚಕ್ರರತ್ನ ಹೆಬ್ಬಾಗಿಲ ಬಳಿ ನಿಂತುಬಿಟ್ಟಿತು. ಭರತನ ದಿಗ್ವಿಜಯಕ್ಕೆ ಅಡ್ಡಿಯೊಂದು ಕಾದಿದೆ ಎನ್ನುವ ಸೂಚನೆಯಿದು. ಚಕ್ರೇಶನ ದಿವ್ಯಾಸ್ತ್ರವೇ ಕುಂಠಿತವಾಯಿತೆಂದಾದರೂ ಭರತ ಆಲೋಚಿಸಿದನೆ? ಚಕ್ರ ನಿಂತಿತೆಂದು ಅಂಜಿದರೂ ಸಿಟ್ಟಿಗೆದ್ದ. ತಮ್ಮನಾದ ಬಾಹುಬಲಿ ತನಗೆ ಶರಣಾಗತನಾಗಬೇಕೆಂದು ಕರೆ ಕಳುಹಿಸಿದ. ಶರಣಾಗತನಾಗಲು ಬಾಹುಬಲಿ ಒಪ್ಪಲಿಲ್ಲ. ತನ್ನ ರಾಜ್ಯ ತಂದೆಯಿಂದ ಬಂದುದು, “ಪುರುದೇವಂ ದೇವದೇವಂ ಕುಡೆ ಪಡೆದ ನೆಲಕ್ಕಾರೊಳುಂ ಪಂಥಮುಂಟೇ?” ಭರತ ಸೊಕ್ಕಿನಿಂದ ಬಯಸಿದರೆ ಹಗರಣವೇ ನಡೆಯಲಿ, ಎಂದು ಬಾಹುಬಲಿ ಹೇಳಿಕಳುಹಿಸಿದ.
ಅಣ್ಣತಮ್ಮಂದಿರಲ್ಲಿ ಸೆಣಸಾಟ ಮೊದಲಾಯಿತು. ಸೇನೆಗಳು ಸೆಣಸಿ ಸಾಯುವುದಕ್ಕಿಂತ ಇಬ್ಬರೇ ಕಾದಾಡುವುದೊಳಿತೆಂದು ತಿಳಿದವರು ಹೇಳಿದ ಮೇಲೆ ಅವರಿಬ್ಬರಲ್ಲಿ ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧಗಳಾದವು. ಭರತ ಸೋತ. ಮಲ್ಲಯುದ್ಧದಲ್ಲಿ ಬಾಹುಬಲಿ ಭರತನನ್ನು ಮೇಲಕ್ಕೆತ್ತಿ ಹಿಡಿದ. ಕೆಳಕ್ಕೆ ಒಗೆದು ಅಪ್ಪಳಿಸಿದರೆ ಭರತನ ಕಥೆ ಮುಗಿಯುತ್ತಿತ್ತು. ಬಾಹುಬಲಿ ತನ್ನಣ್ಣನ ಬಗ್ಗೆ ಮರುಕಗೊಂಡು, ಮೆತ್ತಗೆ ಅವನನ್ನು ಕೆಳಗಿಳಿಸಿದ. ಆಗಲೂ ಭರತನಿಗೆ ಬುದ್ಧಿ ಬರಲಿಲ್ಲ. ರೊಚ್ಚಿನಿಂದ ತನ್ನ ಚಕ್ರವನ್ನೇ ಬಾಹುಬಲಿಯ ಮೇಲೆ ಎಸೆದ. ಚಕ್ರವಾದರೋ ಬಾಹುಬಲಿಯನ್ನು ಪ್ರದಕ್ಷಿಣೆಯಾಗಿ ಸುತ್ತವರಿದು ಅವನ ಬಲಭಾಗದಲ್ಲಿ ತೆಪ್ಪನೆ ನಿಂತಿತು.
ಅಡಗಿದ ಸೊಕ್ಕು
ಭರತನ ಸೊಕ್ಕು ಅಡಗಿತು. ತಮ್ಮನ ಕೈ ಎಲ್ಲದರಲ್ಲೂ ಮೇಲಾದುದನ್ನು ಕಂಡು ಅವನು ಸೊರಗಿದ. ಧರ್ಮಯುದ್ಧದ ಮೂರು ಪ್ರಕಾರಗಳಲ್ಲೂ ಸೋತ ಮೇಲೆ ತನ್ನ ಚಕ್ರರತ್ನವನ್ನು ಬಾಹುಬಲಿಯ ಮೇಲೆ ಎಸೆದುದು ತಪ್ಪೆಂದು ನೆರೆದವರೆಲ್ಲ ಸಾರಿದ ಮೇಲಂತೂ ಅವನ ಅಪಮಾನದ ಭಾರ ತಾಳಲಾರದಷ್ಟಾಯಿತು. ಕೊಬ್ಬಿನಿಂದ ತನ್ನ ಮೇಲೆರಗಿ ಬಂದ ಅಣ್ಣನನ್ನು ಹೀಗೆ ಕಡೆಗಾಣಿಸಿ, ಎರಡು ಸೇನೆಗಳೂ ನೆರೆದ ಜನರೂ ಮೇಲೆ ನಿಂತ ದೇವತೆಗಳೂ ತನ್ನ ಜಯಕಾರವನ್ನೇ ಮಾಡುತ್ತಿರುವಾಗ ಬಾಹುಬಲಿ ಹೆಮ್ಮೆಯಿಂದ ಮೈಮರೆಯಲಿಲ್ಲ. ಸಂತೋಷದಿಂದ ಕುಣಿದಾಡಲಿಲ್ಲ. ಅವನ ಮನಸ್ಸು ಮುದುಡಿಕೊಂಡಿತು. ಒಂದಿಷ್ಟು ನೆಲಕ್ಕಾಗಿ, ಒಂದು ಕ್ಷಣದ ವೈಭವಕ್ಕಾಗಿ ಅಣ್ಣ ತಮ್ಮಂದಿರು ತಮ್ಮ ಪ್ರೀತಿಯನ್ನೆಲ್ಲ ಮರೆತು ಕಾದಾಡಬೇಕೆ? ತಮ್ಮನೇ ಅಣ್ಣನನ್ನು ಬವಣೆಪಡಿಸಬೇಕಾದ ಸಂದರ್ಭ ಬರಬಹುದೆ? ಈ ರಾಜ್ಯಶ್ರೀ ’ಸೋದರರೊಳ್ ಸೋದರರಂ ಕಾದಿಸುವುದು’, ’ಉತ್ಪಾದಿಸುವುದು ಕೋಪಂ’ ಎಂದು ಬಾಹುಬಲಿ ಮರುಗಿದ. ಅಣ್ಣನಿಗೆ ಬುದ್ಧಿಯಿಲ್ಲದಿದ್ದರೇನಾಯಿತು, ತನಗಾದರೂ ಇರಬೇಡವೆ? ಅಣ್ಣನ ಮೇಲೇ ಕೈಯೆತ್ತುವುದು ತಮ್ಮನಿಗೆ ತರವೆ?
ಹೀಗೆ ಬಾಹುಬಲಿ ತನ್ನ ಗೆಲವಿನಲ್ಲಿ ಅಧರ್ಮವನ್ನು ಕಂಡುಕೊಂಡು, ತನ್ನ ನಡತೆ ದಾರಿ ತಪ್ಪಿತೆಂದು ತೀರ್ಮಾನಿಸಿ, ಅದರ ಪರಿಹಾರಕ್ಕಾಗಿ ತಪಸ್ಸು ಮಾಡಲು ನಿಶ್ಚಯಿಸಿದ.
’ಅವಧರಿಸಿದೆ ನಿನ್ನೊಳ್ ಪಿರಿ-
ದವಿನಯಮಂ ನೆಗಳ್ದ ದೋಷಮಂ ತಪದೊಳ್
ನೀಗುವೆನಣ್ಣ!’
ಎಂದು ತಮ್ಮನಿಗೆ ಹೇಳಿ ತನ್ನ ತಪ್ಪನ್ನು ಮನ್ನಿಸುವಂತೆ ಬೇಡಿಕೊಂಡ. ಮೊದಲೇ ಮೈಕಟ್ಟಿನಲ್ಲಿ ಭರತನಿಗಿಂತ ಬಾಹುಬಲಿ ಹೆಚ್ಚಿನವನು; ಅವನ ಮೈಯ ಎತ್ತರ ಎಲ್ಲರಿಗಿಂತ ಮೇಲಿನದು. ಈಗ ಅವನ ಚೇತನದ ಎತ್ತರ ಇನ್ನೂ ಮೇಲೆದ್ದು ನಿಂತಿತು! ತಾನು ತಪಸ್ಸಿಗೆ ಹೊರಡಲು ಸಿದ್ಧನಾಗಿ ರಾಜ್ಯವನ್ನೆಲ್ಲ ತನ್ನಣ್ಣನಿಗೇ ಕೊಟ್ಟು, ಅವನ ಕ್ಷಮೆಯನ್ನು ಬೇಡುತ್ತ ನಿಂತ ಭರತನಲ್ಲೂ ಮಾರ್ಪಾಟಾಗದೆ ಇರುತ್ತದೆಯೆ? ತನ್ನ ತಮ್ಮನ ಹಿರಿಮೆಯನ್ನು ಅವನು ದಿಟವಾಗಿಯೂ ಅರಿತುಕೊಂಡ ಮೇಲೆ ತನ್ನ ಕಣ್ಣೀರಿಂದ ಬಾಹುಬಲಿಯ ಪಾದಗಳನ್ನು ತೊಳೆಯಲು ತೊಡಗಿದ. ಅಣ್ಣನಿಗಿಂತ ಎತ್ತರವಾಗಿ ನಿಂತ ಬಾಹುಬಲಿ ತಾನೂ ಕಣ್ಣೀರನ್ನು ಅಣ್ಣನ ತಲೆಯ ಮೇಲೆ ಸುರಿಸಿದ; ಅದು ರಾಜ್ಯಾಭಿಷೇಕ ಮಾಡಿದಂತೆ.
’ನಿಜಪಾದಂಬುರುಹಕ್ಕೆ ಪಾದ್ಯವಿಧಿಯಿಂ ನೇತ್ರಾಂಬುವಿಂ ಮಾಡುವ ಅಗ್ರಜ, ಅತ್ಯುನ್ನತ ಮಪ್ಪ ಮಸ್ತಕದ ಮೇಗೋರಂತೆ ಪಾಯ್ವಾತ್ಮ ಬಾ?ಜಲೌಘಂಗಳಿನಿಂದು ಬಾಹುಬಲಿ ತನ್ನಿಂದಂ ನಿಧೀಶಂಗೆ ವಂಶಜ ರಾಜ್ಯಾಭಿ?ಕೋತ್ಸವಂ’ ಮಾಡುತ್ತ ಜನರಲ್ಲಿ ಈ ಬಗೆಯ ಶಂಕೆಯನ್ನು ಅಣ್ಣತಮ್ಮಂದಿರು ಮೂಡಿಸಿದರೆಂದು ಕವಿಸಮಯ.
ಜಿನನಾದ ಬಾಹುಬಲಿ
ಬಾಹುಬಲಿ ಲೌಕಿಕ ಜೀವನವನ್ನು ತೊರೆದು ತನ್ನ ತಂದೆಯ ಬಳಿ ಹೋಗಿ ಯತಿದೀಕ್ಷೆಯನ್ನು ಕೈಗೊಂಡು, ಪಾಪಗಳನ್ನು ಕಳೆದುಕೊಳ್ಳಲು ಕಾಯೋತ್ಸರ್ಗಭಂಗಿಯಲ್ಲಿ ನಿಲ್ಲುತ್ತಾನೆ. ಕಡೆಗೆ ಮಾನಕ?ಯವೂ ತೊಲಗಿ ಅವನು ನಿಂತಲ್ಲೇ ಜಿನನಾಗುತ್ತಾನೆ. ತಮ್ಮನ ಸಾಧನೆಯನ್ನು ಮೆಚ್ಚಿಕೊಂಡ ಅಣ್ಣ ಭರತ, ಪೌದನಪುರದಲ್ಲಿ ಅವನ ಪ್ರತಿಮೆಯೊಂದನ್ನು ೫೨೫ ಬಿಲ್ಲುಗಳ ಎತ್ತರವಿರುವಂತೆ ಬಂಗಾರದಲ್ಲಿ ಮಾಡಿ ನಿಲ್ಲಿಸುತ್ತಾನೆ.
ಕಾಲ ಸಾಗಿದಂತೆ ಪೌದನಪುರ ಕಾಡಾಗುತ್ತದೆ, ಬಾಹುಬಲಿಯ ಪ್ರತಿಮೆ ಕಾಡುಗಿಡಗಳ ನಡುವೆ ಮರೆಯಾಗುತ್ತದೆ. ಆದರೆ ಪ್ರತಿಮೆಯ ಪ್ರಸಿದ್ಧಿ ಮಟ್ಟಿಗೆ ಮರೆಯಾಗುವುದಿಲ್ಲ; ಶ್ರಾವಕರ ನಡುವೆ ಪ್ರತೀತಿ ಉಳಿದುಕೊಳ್ಳುತ್ತದೆ. ಇಲ್ಲಿಗೆ ಮೊದಲ ಕಥೆ ಮುಗಿಯಿತು; ಇನ್ನು ಮುಂದೆ ಎರಡನೆಯ ಕಥೆ.
ಪುರಾಣವನ್ನು ಕೇಳಿದ ಚಾಮುಂಡರಾಯನ ತಾಯಿ ಕಾಳಲಾದೇವಿ ಬಾಹುಬಲಿಯ ಆ ಪ್ರತಿಮೆಯನ್ನು ನೋಡಬೇಕೆಂದು ಬಯಸಿದಳು ಎನ್ನುವಲ್ಲಿ ಈ ಕಥೆ ಮೊದಲಾಗುತ್ತದೆ. ಎರಡಕ್ಕೂ ಕಾಲದ ಅಂತರ ಊಹೆಗೂ ನಿಲುಕುವುದಿಲ್ಲ. ಆದರೆ ಎರಡಕ್ಕೂ ಒಂದೇ ನೆಲೆಗಟ್ಟನ್ನು ಕೂಡಿಸುವುದು ಗೊಮ್ಮಟೇಶ್ವರನ ’ಶ್ರೀರೂಪ’
ಚಾಮುಂಡರಾಯ
ಮಹಾಬಲಯ್ಯನ ಮಗ ’ವೀರಮಾರ್ತಾಂಡ’, ’ರಣರಂಗಸಿಂಗ’, ’ಸಮರ ಪರಶುರಾಮ’ನೆನಿಸಿಕೊಂಡ ಚಾಮುಂಡರಾಯ ಪರಾಕ್ರಮಿ. ಗಂಗ ರಾಚಮಲ್ಲನಿಗೆ ಮಂತ್ರಿಯಾಗಿ, ದಂಡನಾಯಕನಾಗಿ ನಿಂತು ರಾಜ್ಯವನ್ನು ದಕ್ಕಿಸಿಕೊಟ್ಟವನೇ ಅವನು; ರಾಜ್ಯವನ್ನು ಬಲಪಡಿಸಿದವನೂ ಅವನೇ. ಕಾಳಗದಲ್ಲಿ ಹೇಗೆ ಕಲಿಯೋ, ರಾಜಕಾರಣದಲ್ಲಿ ಹೇಗೆ ಚತುರನೋ, ಕಾವ್ಯಶಾಸ್ತ್ರಗಳಲ್ಲೂ ಹಾಗೆಯೇ ಎತ್ತಿದಕೈ. ಅವನ ಧೈರ್ಯ, ಶೌರ್ಯ, ಸಾಹಸಗಳು ಅವನ ಒಂದು ಮುಖವಾದರೆ ವಿನಯ, ಶೀಲ, ಸಂಯಮಗಳು ಅವನ ಇನ್ನೊಂದು ಮುಖ. ಜೈನಧರ್ಮದ ಸ್ವಾರಸ್ಯವನ್ನು ಮನಸಾರೆ ಕಂಡುಕೊಂಡು ತನ್ನ ಬದುಕಿನಲ್ಲಿ ಅದನ್ನು ಆಳವಾಗಿ ಬೇರೂರಿಸಿಕೊಂಡಿದ್ದವನು ಅವನು.
ಅವನ ತಾಯಿ ಕಾಳಲಾದೇವಿ ದಿನವೂ ಜೈನಧರ್ಮದ ಕಥೆಗಳನ್ನು ಕೇಳುತ್ತಿದ್ದವಳು; ಧರ್ಮದ ದಿಟವಾದ ತಾತ್ಪರ್ಯವನ್ನು ಮನಗಂಡಿದ್ದವಳು. ಜಿನಸೇನರ ’ಪೂರ್ವಪುರಾಣ’ವನ್ನು ಕೇಳುತ್ತಿದ್ದಾಗ, ಅಲ್ಲಿ ಬರುವ ಬಾಹುಬಲಿಯ ಮೂರ್ತಿಯ ಪ್ರಸ್ತಾಪ ಆಕೆಯ ಕುತೂಹಲವನ್ನು ಕೆರಳಿಸಿತು. ಪೌದನಪುರದಲ್ಲಿ ೫೨೫ ಬಿಲ್ಲೆತ್ತರದ ಈ ಬಂಗಾರದ ಪ್ರತಿಮೆಯನ್ನು ನೋಡಿ ಬರಬೇಕೆಂಬ ಹಂಬಲ ಆಕೆಯಲ್ಲಿ ಮೂಡಿತು. ತಾಯಿಯ ಮುದ್ದಿನ ಮಗ ಚಾಮುಂಡರಾಯ ಆಕೆಯ ಬಯಕೆಯನ್ನು ಈಡೇರಿಸಬೇಕೆಂದು ಅಕೆಯನ್ನು ಕರೆದುಕೊಂಡು ಯಾತ್ರೆ ಹೊರಟ.
ಚಂದ್ರಗಿರಿಯಲ್ಲಿ
ಶ್ರವಣಬೆಳಗೊಳದ ಚಂದ್ರಗಿರಿಯ ಮೇಲೆ ಯಾತ್ರಿಕರ ತಂಡ ತಂಗಿದ್ದಾಗ, ಚಾಮುಂಡರಾಯನಿಗೊಂದು ಕನಸು ಬಿದ್ದಿತು. ಪಕ್ಕದ ವಿಂಧ್ಯಗಿರಿಯ ಮೇಲೆ ಮುಗಿಲೆತ್ತರ ಮೈಚಾಚಿ ನಿಂತ ಬೋರುಬಂಡೆಯಲ್ಲಿ ಬಾಹುಬಲಿಯ ಮೂರ್ತಿ ಅಡಗಿದೆಯೆಂದು ಕನಸಿನ ತಾತ್ಪರ್ಯ; ತಾಯಿ ಕಾಳಲಾದೇವಿಗೂ ಅದೇ ಕನಸು. ಮರುದಿನ ಮುಂಜಾನೆ ಮಡಿಯುಟ್ಟು ಜಿನಸ್ಮರಣೆ ಮಾಡಿ ಚಿಕ್ಕಬೆಟ್ಟದ ಬಂಡೆಯೊಂದರ ಮೇಲೆ ನಿಂತು ಪಕ್ಕದ ದೊಡ್ಡ ಬೆಟ್ಟದ ಕೋಡುಗಲ್ಲಿಗೆ ಬಂಗಾರದ ಬಾಣವನ್ನು ಬಿಡಬೇಕೆಂದು ಕನಸಿನ ಸೂಚನೆ. ಚಾಮುಂಡರಾಯ ಹಾಗೆಯೇ ಮಾಡಿದ. ಬಾಣ ಆ ಬಂಡೆಗೆ ತಾಕಿದೊಡನೆ ಬಾಹುಬಲಿಯ ಶ್ರೀಮುಖ ತೋರಿಕೊಂಡಿತು. ಆಮೇಲೆ ಅವರೆಲ್ಲ ಆ ದೊಡ್ಡಬೆಟ್ಟವನ್ನೇರಿ ಶಿಲ್ಪಿಗಳಿಂದ ಇಡೀ ಮೈಮಾಟವನ್ನು ಬಿಡಿಸಿದರು. ವಿಂಧ್ಯಗಿರಿಯ ಮೇಲೆ ಗೊಮ್ಮಟೇಶ್ವರನ ’ಸುಮನೋಹರ ಭಯಂಕರ’ ಮೂರ್ತಿ ಮೈದಳೆದುದು ಹೀಗೆ.
ಕಥೆ ಇಷ್ಟಕ್ಕೆ ನಿಲ್ಲುವುದಿಲ್ಲ. ಪಂಚಬಾಣ ಕವಿಯ ’ಭುಜಬಲಿಚರಿತೆ’ಯಲ್ಲಿ ಮುಂದುವರಿಯುತ್ತದೆ. ಮೂರ್ತಿ ಮೈದಳೆದ ಮೇಲೆ ಅದನ್ನು ವಿಧಿಯಂತೆ ಪ್ರತಿಷ್ಠೆ ಮಾಡಬೇಕಲ್ಲವೆ? ಪ್ರತಿಷ್ಠಯ ಅಂಗವಾಗಿ ಅಭಿಷೇಕ ನಡೆಯಬೇಕು. ಅರವತ್ತು ಅಡಿ ಎತ್ತರಕ್ಕೆ ನಿಂತ ಮೂರ್ತಿಗೆ ಅಭಿಷೇಕ ಮಾಡುವುದು ಸುಲಭವೆ? ಆದರೆ ಚಾಮುಡರಾಯನಂಥ ಪ್ರಭಾವಶಾಲಿಯಾದವನಿಗೆ ಅಡ್ಡಿಯೇನು? ಅಭೀಷೇಕಕ್ಕೆ ಎಲ್ಲವೂ ಅಣಿಯಾಯಿತು; ಸಾವಿರಾರು ಕೊಡಗಳ ಹಾಲೂ ಬಂದಿತು. ಚಾಮುಂಡರಾಯನ ಆಣತಿಯಂತೆ ಅವನ ಸೇವೆಯ ಹಾಲನ್ನು ಪುರೋಹಿತರು ಮೂರ್ತಿಯ ತಲೆಯ ಮೇಲೆ ಸುರಿದರು. ಅನಂತರ ನೂರಾರು ಕೊಡಗಳ ಹಾಲನ್ನು ತಲೆಯ ಮೇಲೆ ಸುರಿದರು. ಆದರೆ ಇಷ್ಟೆಲ್ಲ ಹಾಲು ಮೈಮೇಲೆ ಹರಿದು ಕೆಳಗಿಳಿದರೂ ಒಂದು ತೊಟ್ಟೂ ಹಾಲು ಮೂರ್ತಿಯ ಪಾದಗಳನ್ನು ಮುಟ್ಟಲಿಲ್ಲ. ಪಾದಾಭಿಷೇಕವಾಗದೆ ಅಭಿಷೇಕದ ಕೆಲಸ ಮುಗಿಯವಂತಿಲ್ಲ!
ಗುಳ್ಳಕಾಯಜ್ಜಿ
ಎಷ್ಟು ಕೊಡಗಳ ಹಾಲನ್ನು ಸುರಿಸಿದಾಗಲೂ ಇದೇ ಕಥೆಯಾಯಿತು. ನೆರೆದವರು ಅವಾಕ್ಕಾದರು; ಚಾಮುಂಡರಾಯನಿಗೆ ಚಿಂತೆಯಾಯಿತು. ಬೆಟ್ಟದ ಮೇಲೆ ಒಂದಿಷ್ಟು ಎಡೆಬಿಡದಂತೆ ನೆರೆದಿದ್ದ ಜನಜಂಗುಳಿಯಲ್ಲಿ ಹಣ್ಣು ಹಣ್ಣುಮುದುಕಿಯೊಬ್ಬಳು; ದೇವರ ಅಭಿಷೇಕಕ್ಕೆ ತನ್ನ ಸೇವೆಯೂ ಇರಲೆಂದು ಗುಳ್ಳಕಾಯೊಂದರಲ್ಲಿ ಸ್ವಲ್ಪ ಹಾಲನ್ನು ತಂದು ತನ್ನ ಕೈಯಲ್ಲಿ ಹಿಡಿದು ನಿಂತಿದ್ದಳು. ಅವಳನ್ನು ಕೇಳುವವರು ಯಾರು? ’ಈ ಹಾಲನ್ನು ದೇವರ ಮೇಲೆ ಸುರಿಯಿರಿ’ ಎಂದು ಆಕೆ ಎಷ್ಟು ಅಂಗಲಾಚಿ ಕೇಳಿಕೊಂಡರೂ ಯಾರೂ ಕಿವಿಗೊಡಲಿಲ್ಲ. ಕಡೆಗೆ ಈ ಸುದ್ದಿ ಚಾಮುಂಡರಾಯನನ್ನು ಮುಟ್ಟಿತು.
ಆಗ ಅವನು ಆ ಮುದುಕಿಯನ್ನು ಕರೆಸಿ ಅವಳ ಕೈಯಲ್ಲಿದ್ದ ಹಾಲು ತುಂಬಿದ ಗುಳ್ಳ ಕಾಯಿಯನ್ನು ಪುರೋಹಿತರ ಮೂಲಕ ಅಟ್ಟಣಿಗೆಯ ಮೇಲೆ ಕಳುಹಿಸಿ ಅಷ್ಟೂ ಹಾಲನ್ನೂ ಮೂರ್ತಿಯ ತಲೆಯ ಮೇಲೆ ಸುರಿಸಿದ. ಒಡನೆಯೇ ಆ ಹಾಲುಹನಿ ’ಅತಿತುಂಗಾಕೃತಿಯ’ ಗೊಮ್ಮಟನಜಿನನ ಮೈಮೇಲೆಲ್ಲ ಹರಿದು ಅವನ ಪಾದಗಳನ್ನೆಲ್ಲ ತೊಳೆದುಬಿಟ್ಟಿತು.
ಅನುಪಮರೂಪನೇ ಸ್ಮರನುದಗ್ರನೆ ನಿರ್ಜಿತಚಕ್ರಿ ಮತ್ತುದಾ-
ರನೆ ನೆರೆಗೆಲ್ದುಮಿತ್ತನಖಿಲೋರ್ವಿಯನತ್ಯಭಿಮಾನಿಯೇ ತಪಃ-
ಸ್ಥನುಮೆರಡಂಘ್ರಿಯಿತ್ತೆಳೆಯೊಳಿರ್ದಪುದೆಂಬನನೂನಬೋಧನೇ
ವಿನಿಹಿತಕರ್ಮಬಂಧನನೆ ಬಾಹುಬಲೀಶನಿದೇನುದಾತ್ತನೋ |
– ಬೊಪ್ಪಣಕವಿ
ಈ ಗುಳ್ಳಕಾಯಜ್ಜಿ ಯಾರು?
ಚಾಮುಂಡರಾಯನ ತಾಯಿ ಕಾಳಲಾದೇವಿಯ ಇ?ದೈವ ನೇಮಿನಾಥ ತೀರ್ಥಂಕರ; ದಿನವೂ ಆಕೆ ಪೂಜಿಸುತ್ತಿದ್ದುದು ಈ ದೈವವನ್ನೇ. ಈ ಜಿನನ ಯಕ್ಷಿಣಿ ಕೂ?ಂಡಿನೀದೇವಿ. ಆಕೆಯೇ ಗುಳ್ಳಕಾಯಜ್ಜಿಯಂತೆ ಬಂದುದು ಎಂದು ಕಥೆ. ಚಾಮುಂಡರಾಯನು ಅರವತ್ತು ಅಡಿ ಎತ್ತರದ ಅದ್ಭುತ ಶಿಲ್ಪವನ್ನು ಕಡೆಯಿಸಿದನೆಂದು ಮಾನೋನ್ನತನಾಗಿದ್ದನಂತೆ; ತನ್ನ ಸಾಹಸಕ್ಕೆ ತಾನೇ ಬೆರಗಾಗಿ ಹೆಮ್ಮೆಯನ್ನು ತಂದುಕೊಂಡಿದ್ದನಂತೆ; ಈ ಗರ್ವವನ್ನು ತೊಲಗಿಸಲು ಗುಳ್ಳಕಾಯಜ್ಜಿ ಕಾರಣಳಾದಳು, ಎಂದು ಕಥೆಯ ತಾತ್ಪರ್ಯ.
ಚಾಮುಂಡರಾಯನ ಗರ್ವ ಕರಗಿ ನೀರಾಗಿ ಅವನು ಆ ಮುದುಕಿಯ ಪಾದಗಳಿಗೆರಗಿ, ಮಸ್ತಕಾಭೀ?ಕದ ಕೆಲಸ ಮುಗಿಯಲು ನೆರವಾದಳೆಂದು ಕೃತಜ್ಞತೆ ತಾಳಿ ಆಕೆಯ ಪ್ರತಿಮೆಯನ್ನು ಗೊಮ್ಮಟಜಿನನ ಮೂರ್ತಿಯ ಬಳಿಯೇ ನಿಲ್ಲಿಸಿದನು. ಅಲ್ಲಿ ಎಲ್ಲಿಯೂ ಚಾಮುಂಡರಾಯನ ಪ್ರತಿಮೆಯನ್ನು ಕಾಣಲಾರೆವು. ಆ ಗುಳ್ಳಕಾಯಜ್ಜಿಯನ್ನು ಕಾಣದೆ ’ಕ್ಷಿತಿಸಂಪೂಜ್ಯ’ನಾದ ಗೊಮ್ಮಟೇಶ್ವರನನ್ನು ಕಾಣುವಂತಿಲ್ಲ
(’ಉತ್ಥಾನ’, ಫೆಬ್ರುವರಿ ೨೦೦೬ರಲ್ಲಿ ಪ್ರಕಟಿತ)