ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಮೇ 2020 > ದೀಪ್ತಿ

ದೀಪ್ತಿ

ಮಣಿನಾ ವಲಯಂ ವಲಯೇನ ಮಣಿರ್ಮಣಿನಾ ವಲಯೇನ ವಿಭಾತಿ ಕರಃ |

ಕವಿನಾ ವಿಭುರ್ವಿಭುನಾ ಕವಿಃ ಕವಿನಾ ವಿಭುನಾ ವಿಭಾತಿ ಸಭಾ |

ಶಶಿನಾ ನಿಶಾ ನಿಶಯಾ ಶಶೀ ಶಶಿನಾ ನಿಶಯಾ ವಿಭಾತಿ ನಭಃ |

ಪಯಸಾ ಕಮಲಂ ಕಮಲೇನ ಪಯಃ ಪಯಸಾ ಕಮಲೇನ ವಿಭಾತಿ ಸರಃ ||

ಸುಭಾಷಿತರತ್ನ-ಭಾಂಡಾಗಾರ

“ಥಳಥಳಿಸುವ ಮುತ್ತು-ಹವಳಗಳಿಂದ ಬಳೆಯ ಶೋಭೆ ಹೆಚ್ಚುತ್ತದೆ; ಹಾಗೆಯೇ ಬಳೆಯ ವಿನ್ಯಾಸದಿಂದಾಗಿ ಮುತ್ತು-ಹವಳಗಳಿಗೂ ಹೆಚ್ಚಿನ ಶೋಭೆ ಬರುತ್ತದೆ. ಮುತ್ತು-ಹವಳ, ಬಳೆ – ಈ ಎರಡರ ಸಂಯೋಗದಿಂದ ಕೈಯ ಆಕರ್ಷಣೆ ದ್ವಿಗುಣವಾಗುತ್ತದೆ. ಕವಿಯಿಂದ ರಾಜನಿಗೂ ರಾಜನಿಂದ ಕವಿಗೂ ಶೋಭೆ. ಅಂತಹ ಕವಿ-ರಾಜರಿಂದ ಸಭೆಗೆ ಶೋಭೆ. ಚಂದ್ರನಿಂದ ರಾತ್ರಿಗೂ ರಾತ್ರಿಯಿಂದ ಚಂದ್ರನಿಗೂ ಶೋಭೆ. ಚಂದ್ರ, ರಾತ್ರಿ – ಇವೆರಡರ ಸಂಯೋಗದಿಂದ ಆಕಾಶಕ್ಕೆ ಹೆಚ್ಚಿನ ಶೋಭೆ. ನೀರಿನ ಆವರಣದಿಂದ ಕಮಲದ ಸೌಂದರ್ಯ ಹೆಚ್ಚುತ್ತದೆ, ಮತ್ತು ಕಮಲದ ಇರುವಿಕೆಯಿಂದಾಗಿ ಸುತ್ತಲ ನೀರಿಗೇ ಶೋಭೆ ಬರುತ್ತದೆ. ನೀರು, ನಡುವಣ ಕಮಲ – ಇವೆರಡರ ಸಾಹಚರ್ಯದಿಂದ ಸರೋವರಕ್ಕೇ ಅತಿಶಯ ಶೋಭೆ ಬರುತ್ತದೆ.”

ಸುಸಂಘಟನೆಯಿಂದಾಗಿ ಎರಡು ಅಂಗಗಳು ಒಂದರ ಚೆಲುವನ್ನು ಇನ್ನೊಂದು ಹೆಚ್ಚಿಸುವುದು ಮಾತ್ರವಲ್ಲದೆ ಅವೆರಡೂ ತಮ್ಮ ಸಮಾನ ಅಧಿಷ್ಠಾನವನ್ನೂ ಮನೋಹರವಾಗಿಸುತ್ತವೆ. ಇದಕ್ಕೆ ನಿದರ್ಶನಗಳ ಕೊರತೆಯಿಲ್ಲ.

ಮರವೂ ಬಳ್ಳಿಯೂ ಒಂದು ಇನ್ನೊಂದರ ಶೋಭೆಯನ್ನು ಹೆಚ್ಚಿಸುವುದರಲ್ಲಿಯೇ ತನ್ನ ತನ್ನ ಸಾರ್ಥಕತೆಯನ್ನು ಕಂಡುಕೊಳ್ಳುತ್ತವೆ – ಎಂಬುದೊಂದು ಸುಂದರವಾದ ಕಲ್ಪನೆ. ಕಣ್ಣಿಗೆ ಕಾಣುವುದಕ್ಕಿಂತ ಅದರ ಹಿಂದಿನ ಅಮೂರ್ತ ತತ್ತ್ವವು ಹೆಚ್ಚು ಮನನಾರ್ಹವಿರುತ್ತದೆಂಬ ಧ್ವನಿತಾರ್ಥವೂ ಇಲ್ಲಿ ಅಡಗಿದೆ. ಇದೇ ಆಶಯದ ಜಾನಪದೀಯ ಪ್ರಸಂಗಗಳಲ್ಲೊಂದು ಹೀಗಿದೆ.

ವನವಾಸದಲ್ಲಿ ರಾಮ ಸೀತೆ ಲಕ್ಷ್ಮಣರು ಚಿತ್ರಕೂಟದಲ್ಲಿ ತಂಗಿದ್ದಾಗಿನ ಪ್ರಸಂಗ. ಲಕ್ಷ್ಮಣನು ಕಂದಮೂಲ ಫಲಪುಷ್ಪಾದಿಗಳನ್ನು ಸಂಗ್ರಹಿಸಿ ತರುವುದಕ್ಕಾಗಿ ತೆರಳಿದ್ದಾನೆ. ರಾಮ ಸೀತೆಯರು ವಿಶಾಲ ವೃಕ್ಷವೊಂದರ ಛಾಯೆಯಲ್ಲಿ ವಿಶ್ರಮಿಸಿದ್ದಾರೆ. ಮರದ ಕಾಂಡವನ್ನು ಸುಂದರ ಬಳ್ಳಿಯೊಂದು ಸುತ್ತುವರಿದಿದೆ. ಸೀತೆ ಹೇಳುತ್ತಾಳೆ: “ಈ ಬಳ್ಳಿ ಅದೆಷ್ಟು ಭಾಗ್ಯಶಾಲಿ! ಅದೆಂತಹ ದೊಡ್ಡ ಮರದ ಆಸರೆ ಇದಕ್ಕೆ ದೊರೆತಿದೆ!” ರಾಮನು ಉತ್ತರಿಸುತ್ತಾನೆ: “ಇಲ್ಲ ಸೀತೆ. ಇಂತಹ ಮನೋಹರವಾದ ಬಳ್ಳಿ ತನ್ನನ್ನು ಸುತ್ತುವರಿದಿರುವುದರಿಂದ  ಮರವೇ ಹೆಚ್ಚು ಭಾಗ್ಯಶಾಲಿ.” ಇದು ಪರೋಕ್ಷವಾಗಿ ರಾಮನ ಬಗೆಗೆ ಸೀತೆಯೂ ಸೀತೆಯ ಬಗೆಗೆ ರಾಮನೂ ತಳೆದಿದ್ದ ಭಾವನೆಯ ಸಾಂಕೇತಿಕ ಪ್ರಕಟೀಕರಣವೆಂದು ವಿವರಿಸುವ ಆವಶ್ಯಕತೆಯಿಲ್ಲ. ಈ ಮಾತುಕತೆ ನಡೆದಿದ್ದಾಗ ಲಕ್ಷ್ಮಣ ಹಿಂದಿರುಗುತ್ತಾನೆ. ನ್ಯಾಯವನ್ನು ನಿರ್ಣಯಿಸಿ ಹೇಳುವಂತೆ ಲಕ್ಷ್ಮಣನನ್ನು ಕೇಳುತ್ತಾರೆ. “ನ್ಯಾಯನಿರ್ಣಯದಂತಹ ಕಷ್ಟದ ಕೆಲಸವನ್ನು ದಯವಿಟ್ಟು ನನ್ನ ಹೆಗಲಿಗೆ ಕಟ್ಟಬೇಡಿರಿ. ಆದರೆ ನೀವು ಒತ್ತಾಯಿಸುತ್ತಿರುವುದರಿಂದ ಇಷ್ಟು ಹೇಳಬಲ್ಲೆ: ಭಾಗ್ಯಶಾಲಿಯು ಮರವೂ ಅಲ್ಲ, ಬಳ್ಳಿಯೂ ಅಲ್ಲ. ನಿಜವಾದ ಭಾಗ್ಯಶಾಲಿಯೆಂದರೆ ವಿಶಾಲವಾದ ಕಾಂಡ-ಬಳ್ಳಿಗಳಿಂದ ಕೂಡಿದ ಈ ಮರದ ನೆರಳಿನಿಂದ ಉಪಕೃತನಾಗಿರುವ ನಾನೇ ಹೆಚ್ಚು ಭಾಗ್ಯಶಾಲಿ!”

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ