ಹತ್ತಿರ ಹತ್ತಿರ ಇನ್ನೂರು ವರ್ಷಗಳಿಂದ ದೇಶದಲ್ಲಿ ಜಾರಿಯಲ್ಲಿರುವ ಶಿಕ್ಷಣವ್ಯವಸ್ಥೆಯ ಅಸಮರ್ಪಕತೆ ಬಹಳ ಹಿಂದಿನಿಂದಲೇ ಚಿಂತಕರ ಹಾಗೂ ಸರ್ಕಾರಗಳ ಗಮನಕ್ಕೆ ಬಂದಿದೆ. ಈ ಹಿಂದೆ ಹಲವು ಸುಧಾರಣ ಪ್ರಯತ್ನಗಳು ನಡೆದಿದ್ದುದೂ ಇದೆ. ಪ್ರಮುಖವಾಗಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲಿ (೧೯೬೮) ಸಿದ್ಧಗೊಂಡು ಒಂದಷ್ಟುಮಟ್ಟಿಗೆ ಕಾರ್ಯಗತವೂ ಆದ ಕೊಠಾರಿ ಸಮಿತಿಯ ಶಿಫಾರಸುಗಳನ್ನು (ಕಡ್ಡಾಯ ಪ್ರಾಥಮಿಕ ಶಿಕ್ಷಣ ಇತ್ಯಾದಿ) ಒಂದು ಮೈಲಿಗಲ್ಲೆಂದು ಭಾವಿಸಬಹುದು. ಅನಂತರ ರಾಜೀವಗಾಂಧಿ ಪ್ರಧಾನಿಯಾಗಿದ್ದಾಗ (೧೯೮೬) ರಚಿತಗೊಂಡ ಆಯೋಗದ ವರದಿಯಲ್ಲಿ ಸಮಾನಾವಕಾಶ ಮೊದಲಾದ ಅಂಶಗಳು ಪ್ರಾಧಾನ್ಯ ಪಡೆದಿದ್ದವು. ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಕಳೆದ ವರ್ಷ (೨೦೨೦) ಘೋಷಿತವಾಗಿರುವ ಹೊಸ ಶಿಕ್ಷಣನೀತಿ ಸಮಸಾಮಯಿಕ ಆದ್ಯತೆಗಳಿಗೆ ಸ್ಪಂದಿಸುವ ಜಾಡಿನದಾಗಿದ್ದು ತಜ್ಞರಲ್ಲಿ ಭರವಸೆ ಮೂಡಿಸಿದೆ. ಕೌಶಲಗಳಿಗೆ ಪ್ರೋತ್ಸಾಹ, ತಂತ್ರಜ್ಞಾನದ ಬಳಕೆ ಮೊದಲಾದ ಅಂಶಗಳು ಪುರೋಗಾಮಿಯಾಗಿವೆ ಮತ್ತು ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗಿನ ವ್ಯಾಪ್ತಿಯನ್ನು ಹೊಂದಿವೆ. ಹಿಂದಿನ ದಶಕಗಳಲ್ಲಿ ಮಸಕುಗೊಂಡಿದ್ದ ಏಕಕಾಲಕ್ಕೆ ವಿವಿಧಾಂಗಸ್ಪರ್ಶಿಯಾದ ಅಧ್ಯಯನಕ್ಕೆ ಮಹತ್ತ್ವ ನೀಡಿರುವುದು ಹೊಸ ಶಿಕ್ಷಣನೀತಿಯ ಎದ್ದುಕಾಣುವ ವೈಶಿಷ್ಟ್ಯವಾಗಿದೆ. ಆಸಕ್ತಿಗನುಗುಣವಾದ ವಿಷಯದ ಆಯ್ಕೆಗೆ ಅವಕಾಶ ಕಲ್ಪಿಸಲಾಗಿರುವುದು ಇನ್ನೊಂದು ಪ್ರಗತಿಪರ ಹೆಜ್ಜೆಯಾಗಿದೆ. ದೇಶದ ಹಲವಾರೆಡೆಗಳಲ್ಲಿ ಮತ್ತು ಕರ್ನಾಟಕದಲ್ಲಿಯೂ ಹತ್ತಾರು ವಿಶ್ವವಿದ್ಯಾಲಯಗಳು ಹೊಸ ಶಿಕ್ಷಣನೀತಿಯ ಪ್ರಾಕಾರವನ್ನು ಅಳವಡಿಸಿಕೊಳ್ಳಲು ಉತ್ಸಾಹದಿಂದ ಮುಂದಾಗಿರುವುದು ಆಶಾದಾಯಕವಾಗಿದೆ. ಈ ಐತಿಹಾಸಿಕ ಕ್ರಮವು ಬದ್ಧತೆಯಿಂದ ಅನುಷ್ಠಾನಗೊಳ್ಳುವುದು ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯವಶ್ಯವಾಗಿದೆ.
ಹೊಸ ಶಿಕ್ಷಣನೀತಿ
Month : October-2021 Episode : Author :