ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಎಪ್ರಿಲ್ 2017 > ಯಾರ ಗೆಲವು, ಯಾರ ಸೋಲು?

ಯಾರ ಗೆಲವು, ಯಾರ ಸೋಲು?

ವ್ಯಾವಹಾರಿಕ ಜಗತ್ತಿನಲ್ಲಿ ದಂಡನೆಯ ಭೀತಿ ಮಾತ್ರ ಸಮಾಜಸ್ವಾಸ್ಥ್ಯಕ್ಕೆ
ಪೋಷಕವಾಗಬಲ್ಲದು ಎಂಬುದು ಕಡೆಗಣಿಸಲಾಗದ ತಥ್ಯ.

 

 

ತಮಿಳುನಾಡಿನ ಈಚಿನ ವಿದ್ಯಮಾನವನ್ನು ಒಂದು ಬಣದ ವಿಜಯವೆನ್ನುವುದಕ್ಕಿಂತ ಪ್ರಜಾಪ್ರಭುತ್ವಪದ್ಧತಿಯ ಪರಾಭವವೆಂದು ವರ್ಣಿಸುವುದೇ ಸೂಕ್ತವಾದೀತೆನಿಸುತ್ತದೆ. ಭ್ರಷ್ಟಾಚಾರಕ್ಕಾಗಿ ಕಾರಾಗೃಹ ಸೇರಿರುವ ಶಶಿಕಲಾ ತಮ್ಮ ಅನುಯಾಯಿ ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಮತದಾನದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ನಡೆದ
ದುರ್ವರ್ತನಸರಣಿಯು ಅಧಿಕಾರಾಕಾಂಕ್ಷೆ ಎಷ್ಟು ನೀಚ ಸ್ಥಿತಿಗೆ ತಲಪಬಹುದೆಂಬುದನ್ನು ಪುರಾವೆಗೊಳಿಸಿದೆ. ಸಭಾಧ್ಯಕ್ಷರ ಮೇಲೆಯೇ ದಾಳಿ ನಡೆಸಲೂ ಸದಸ್ಯರು ಹಿಂದೆಗೆಯಲಿಲ್ಲ. ಶಶಿಕಲಾ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯ ದೃಢೀಕರಿಸಿದ್ದರೂ ಜನಾಭಿಪ್ರಾಯವನ್ನಾಗಲಿ ಔಚಿತ್ಯವನ್ನಾಗಲಿ ಲೆಕ್ಕಿಸದೆ ಶಶಿಕಲಾ ಬಣ ಎ.ಐ.ಎ.ಡಿ.ಎಂ.ಕೆ. ಪಕ್ಷವನ್ನು ಸ್ವಾಧೀನಪಡಿಸಿಕೊಂಡಿದೆ.
ಜಯಲಲಿತಾರವರ ಅವ್ಯವಹಾರಗಳಿಗೆ ಹೋಲಿಸಿದರೆ ಕ್ಷುದ್ರ ಪ್ರಮಾಣದ್ದೆನ್ನಬಹುದಾದ ಸೀಮೋಲ್ಲಂಘನೆಗಳಿಗಾಗಿ ೧೯೫೬ರಲ್ಲಿ ಕೇಂದ್ರಮಂತ್ರಿ ಟಿ.ಟಿ. ಕೃಷ್ಣಮಾಚಾರಿ ಸ್ಥಾನಚ್ಯುತರಾಗಿದ್ದರು, ೧೯೮೨ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಅಂಟುಲೇ ರಾಜಕೀಯ ಅಸ್ಪೃಶ್ಯತೆಗೆ ಗುರಿಯಾಗಿದ್ದರು. ಅಕ್ರಮವಾಗಿ ಗಳಿಸಿದ ಸಾವಿರಾರು ಕೋಟಿ ಹಣವನ್ನಾಗಲಿ ಲೆಕ್ಕವಿಲ್ಲದ ವಜ್ರವೈಡೂರ್ಯಗಳನ್ನಾಗಲಿ ಜಯಲಲಿತಾ ಎಂದೂ ಅನುಭವಿಸಲಿಲ್ಲ; ವಯಸ್ಸು ಎಪ್ಪತ್ತು ದಾಟಿ ಅನಾರೋಗ್ಯ ಪೀಡಿತರೂ ಆಗಿರುವ ಶಶಿಕಲಾ ಪಾಡಾದರೂ ಅಷ್ಟೇ. ಹೀಗಿದ್ದರೂ ಅಪಮಾರ್ಗಗಳಿಂದ ದೂರ ಸರಿಯಬೇಕೆನಿಸದ ಮನಃಸ್ಥಿತಿಯನ್ನು ವಿಧಿವಿಲಾಸವೆನ್ನಬೇಕು. ಕಿಮಾಶ್ಚರ್ಯಮತಃ ಪರಮ್! ಇಬ್ಬರು ಮಹಿಳಾಮಣಿಯರಿಗೂ ವಾರಸುದಾರರೂ ಯಾರೂ ಇಲ್ಲ. ಈ ಅಧಿಕಾರದಾಹವನ್ನು ವ್ಯಸನವೆನ್ನಬೇಕೆ,
ಮನೋರೋಗವೆನ್ನಬೇಕೆ? ಇವರ ಚಾರಿತ್ರ ತಿಳಿದೂ ಇಂತಹ ಜನನಾಯಕ-ನಾಯಿಕೆಯರನ್ನು ಆರಾಧಿಸುವ ಗಣನೀಯ ವರ್ಗ ಇರುವುದಕ್ಕೆ ಏನೆನ್ನಬೇಕು? ಪಂದ್ಯದಲ್ಲಿ ತಿರಸ್ಕೃತರಾದ ಪನ್ನೀರ್‌ಸೆಲ್ವಂರಂತೂ ಅಮ್ಮನ ಪೂಜಕರೇ. ಎಂದರೆ ಅಮ್ಮನ ಭ್ರಷ್ಟಾಚಾರಸರಣಿಯನ್ನು ಸರ್ವೋಚ್ಚ
ನ್ಯಾಯಾಲಯವೇ ದೃಢೀಕರಿಸಿರುವುದೂ ಜನರ ದೃಷ್ಟಿಯಲ್ಲಿ ಉಪೇಕ್ಷಣೀಯವೆಂದಂತಾಗಿದೆ. ಅನ್ಯ ರಾಜ್ಯಗಳಲ್ಲಿಯೂ ಇಂಥದೇ ವೈಚಿತ್ರ್ಯ ಕಾಣುತ್ತಿದ್ದು ಸಭ್ಯರು ತಲೆತಗ್ಗಿಸುವಂತಾಗಿದೆ. ಬೇಯ್ಲ್ ಮೇಲೆ ಹೊರಬಂದ ನಾಯಕರಿಗೆ ಸ್ವಾಗತ- ಅಭಿನಂದನೆ-ಮೆರವಣಿಗೆ ಸಮಾರಂಭಗಳಾಗುತ್ತಿವೆ. ಅತಿ ಹೇಯ ರೂಪದ ಭ್ರಷ್ಟಾಚಾರಕ್ಕಾಗಿ ಈಗ್ಗೆ ನಾಲ್ಕು ವರ್ಷದ ಹಿಂದೆ ದಂಡನೆಗೊಳಗಾಗಿದ್ದ ಲಾಲೂಪ್ರಸಾದರ
ಅಟಾಟೋಪವೇನೂ ಕಡಮೆಯಾಗಿಲ್ಲವಲ್ಲ! ಅವರ ಪಕ್ಷದ ಅಭ್ಯರ್ಥಿಗಳೇ ಅಧಿಕಸಂಖ್ಯೆಯಲ್ಲಿ ಆಯ್ಕೆಯೂ
ಆಗಿದ್ದಾರೆ. ಜೈಲುಶಿಕ್ಷೆ ಘೋಷಿತವಾದ ಮೇಲೂ ಶಶಿಕಲಾ ಅಮ್ಮನ ಸಮಾಧಿಯ ಎದುರು ಏನೇನೋ ಪ್ರತಿಜ್ಞೆಗಳ ಅಪಲಾಪಗಳನ್ನು ಸುರಿಯುವುದನ್ನು ಜನತೆ ನೋಡಿತು.
ನ್ಯಾಯಾಲಯಗಳ ನಿರ್ಣಯಗಳೆಲ್ಲ ಕೇವಲ ತಾತ್ಕಾಲಿಕ ಇರುಸುಮುರುಸುಗಳೆಂಬಂತೆಯೇ ಸಾರ್ವಜನಿಕ ಜೀವನ ಯಥಾಪೂರ್ವ ಮುಂದೆಸಾಗುತ್ತಿದೆ. ನನಗೆ ಮುಖ್ಯಮಂತ್ರಿ ಪದವಿಯನ್ನು ತಪ್ಪಿಸಿದವರನ್ನು ಮುಗಿಸುತ್ತೇನೆ ಎಂಬಂತಹ ಮುಕ್ತಕಗಳೂ ರಾಜಾರೋಷವಾಗಿ ಮೆರೆಯುವುದನ್ನೂ
ಅಧಿಕಾರ ಚಲಾಯಿಸುವುದನ್ನೂ ಭಾರತದಲ್ಲಿ ಮಾತ್ರ ಕಾಣಬಹುದೇನೊ. ಭ್ರಷ್ಟಾಚಾರವು ಜಗದ್‌ವ್ಯಾಪಿ ಎಂದು ಒಮ್ಮೆ ಇಂದಿರಾಗಾಂಧಿ ವ್ಯಂಗ್ಯವಾಗಿ ಹೇಳಿದ್ದುದು ಈಗ ರಾಜ್ಯಶಾಸ್ತ್ರ ಸಿದ್ಧಾಂತವೇ ಆಗಿದೆಯೆನಿಸುತ್ತದೆ. ಯಾವ ಅಪರಾಧಗಳಿಗಾಗಿ ಸುಖರಾಂ, ಹರಿಯಾಣದ ಓಂಪ್ರಕಾಶ್ ಚೌತಾಲಾ, ಜಾರ್ಖಂಡದ ಮಧು ಕೋಡಾ, ಅರುಣಾಚಲ ಪ್ರದೇಶದ ಪ್ರೇಂಖಂಡುತುಂಗನ್ ಮೊದಲಾದವರು
ದಂಡಿಸಲ್ಪಟ್ಟರೋ ಅಂತಹ ಪ್ರಸಂಗಗಳು ಇತ್ತೀಚೆಗೂ ನಡೆದಿವೆ. ಇದರ ತಾತ್ಪರ್ಯ – ದಂಡನೆಯೆಂಬುದು ಒಂದು ವ್ಯಾವಹಾರಿಕ ಪ್ರಕ್ರಿಯೆಯೇ ಹೊರತು ಹೇಸಿಗೆಪಡಬೇಕಾದುದೇನಲ್ಲವೆಂಬ ಮಾನಸಿಕತೆ ಹರಡಿದೆ.
ಋಜುತೆ-ಪಾರಿಶುದ್ಧ್ಯಗಳು ಬರುಬರುತ್ತ ಕೇವಲ ತಾಂತ್ರಿಕತೆಗಳು, ನಿಭಾಯಿಸಬೇಕಾದಂತಹವು ಎನಿಸುತ್ತಿದೆ.  ವ್ಯಾವಹಾರಿಕ ಜಗತ್ತಿನಲ್ಲಿ ದಂಡನೆಯ ಭೀತಿ ಮಾತ್ರ ಸಮಾಜಸ್ವಾಸ್ಥ್ಯಕ್ಕೆ ಪೋಷಕವಾಗಬಲ್ಲದು ಎಂಬುದು ಕಡೆಗಣಿಸಲಾಗದ ತಥ್ಯ. ದಂಡಸ್ಯ ಹಿ ಭಯಾತ್ ಸರ್ವಂ
ಜಗದ್ಭೋಗಾಯ ಕಲ್ಪತೇ – ದುಷ್ಟರಿಗೆ ದಂಡಭಯ ಇದ್ದರೆ ಮಾತ್ರ ಉಳಿದ ಸಾಮಾನ್ಯರು ನೆಮ್ಮದಿಯಿಂದ ಇದ್ದಾರು (ಮನುಸ್ಮೃತಿ).

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ