
ಅಭಿನವಪರಮೇಶ್ವರಪ್ರಸಾದಾತ್
ಸ್ವಹೃದಯಸನ್ನಿಹಿತಾತ್ಮದೇವತಾನಾಮ್ ||
“ಅಭಿನವಗುಪ್ತರೆಂಬ ಪರಶಿವನ ಅನುಗ್ರಹದಿಂದ, ನಮ್ಮ ಒಡಲೊಳಗೇ ಇರುವ ಆತ್ಮವೇ ಶಿವನೆಂದು ಮನವರಿಕೆಯಾಯಿತು” – ಎಂದಿದ್ದಾನೆ ಅಭಿನವಗುಪ್ತರ ಶಿಷ್ಯ ಮಧುರಾಜ.
ಕಾಶ್ಮೀರ-ಶೈವ ದರ್ಶನದ ಆನುಪೂರ್ವಿಯನ್ನು ಗುರುತಿಸುವುದಾದರೆ: ಕಲಿಯುಗದಲ್ಲಿ ಆಗಮತಜ್ಞರ ಕೊರತೆಯಿಂದಾಗಿ ಶೈವದರ್ಶನವು ಲುಪ್ತವಾಗುವ ಸ್ಥಿತಿಯಲ್ಲಿದ್ದುದನ್ನು ಗಮನಿಸಿ ಅಧಿಕೃತ ಶೈವದರ್ಶನವನ್ನು ಪ್ರಸಾರ ಮಾಡಲು ಪರಶಿವನು ದುರ್ವಾಸ ಋಷಿಗಳನ್ನು ನಿಯೋಜಿಸಿದನಂತೆ. ಅವರು ಯೋಗಬಲದಿಂದ ಮೂವರು ಮಾನಸಪುತ್ರರನ್ನು ಪಡೆದು ಅವರಲ್ಲಿ ತ್ರ್ಯಂಬಕರಿಗೆ ’ಅಭೇದ’ವನ್ನೂ ಅಮರ್ದಕರಿಗೆ ’ಭೇದಾಭೇದ’ವನ್ನೂ ಶ್ರೀನಾಥರಿಗೆ ’ಭೇದ’ವನ್ನೂ ಬೋಧಿಸಿದರು. ಸ್ವಯಂ ಶ್ರೀಕೃಷ್ಣನೇ ದುರ್ವಾಸರಿಂದ ಅದ್ವೈತದರ್ಶನವನ್ನೂ ಉಪಮನ್ಯುವಿನಿಂದ ಶೈವಾಗಮಗಳನ್ನೂ ಕಲಿತನೆಂಬ ಉಲ್ಲೇಖವು ಹರಿವಂಶಪುರಾಣದಲ್ಲಿ ಇದೆ. ಈ ಹಿನ್ನೆಲೆಯಲ್ಲಿಯೆ ಅಭಿನವಗುಪ್ತಾದಿ ಶೈವಾಚಾರ್ಯರುಗಳು ಶ್ರೀಕೃಷ್ಣನಿಗೆ ಅವರ ಗುರುಪಂಕ್ತಿಯಲ್ಲಿ ಉಚ್ಚ ಸ್ಥಾನವನ್ನು ನೀಡಿರುವುದು.
ದಾರ್ಶನಿಕವಾಗಿ ಕಾಶ್ಮೀರ-ಶೈವವು ೯೨ ಆಗಮಗಳು, ೬೪ ಭೈರವಶಾಸ್ತ್ರಗಳು, ೧೮ ರುದ್ರಶಾಸ್ತ್ರಗಳು, ೧೦ ಶಿವಸೂತ್ರಗಳು – ಇವುಗಳ ಆಧಾರದ ಮೇಲೆ ವಿಸ್ತರಿಸಲ್ಪಟ್ಟಿದೆ.
ಪ್ರತ್ಯಭಿಜ್ಞಾದರ್ಶನವು ಕಲಿಯುಗಾದಿಯಲ್ಲಿಯೆ ಇದ್ದುದಾದರೂ ಕಾಲಕ್ರಮದಲ್ಲಿ ಅದು ಮಸುಕಾಗಿ ಕ್ರಿ.ಶ. ೮ನೇ ಶತಾಬ್ದದಿಂದಾಚೆಗೆ ಸೋಮಾನಂದ, ಉತ್ಪಲದೇವ, ಲಕ್ಷ್ಮಣಗುಪ್ತ -ಇವರಿಂದ ಪುನರುಜ್ಜೀವಿತವಾಯಿತು. ಲಕ್ಷ್ಮಣಗುಪ್ತರ ಶಿಷ್ಯರೇ ಅಭಿನವಗುಪ್ತರು. ಶೈವ ದರ್ಶನದ್ದೇ ಇನ್ನೊಂದು ಕವಲು ’ಕೌಲಮತ’. ಇದರ ಬೋಧೆಯನ್ನು ಅಭಿನವಗುಪ್ತರು ಪಡೆದದ್ದು ಶಂಭುನಾಥರಿಂದ.
ಮೇಲಿನೆರಡಲ್ಲದೆ ಕುಂಡಲಿನೀ-ಉತ್ತೇಜನ- ಪ್ರಧಾನವಾದ ’ಕ್ರಮ’ ಎಂಬ ಪ್ರಸ್ಥಾನವೂ ಇದ್ದಿತು.
ಶೈವದರ್ಶನಾಂತರ್ಗತವಾದ ನಾಲ್ಕನೇ ಪ್ರಸ್ಥಾನವೇ ’ಸ್ಪಂದ’. ಇದನ್ನು ಆವಿ?ರಿಸಿದವನು ವಸುಗುಪ್ತ. ’ಸ್ಪಂದಕಾರಿಕಾ’, ’ಶಿವಸೂತ್ರ’ – ಎರಡೂ ವಸುಗುಪ್ತಪ್ರಣೀತ.
‘ಪ್ರತ್ಯಭಿಜ್ಞಾ’
ತಂತ್ರಶಾಸ್ತ್ರ, ಆಗಮಶಾಸ್ತ್ರ, ವೇದಾಂತದರ್ಶನ, ಯೋಗದರ್ಶನ – ಇವೆಲ್ಲವನ್ನೂ ಸಮನ್ವಯಗೊಳಿಸಿ ಅಭಿನವಗುಪ್ತರು ಪ್ರತ್ಯಭಿಜ್ಞಾದರ್ಶನವನ್ನು ರೂಪಿಸಿದರು. ಭರತಮುನಿಯ ನಾಟ್ಯಶಾಸ್ತ್ರದಲ್ಲಿಯೂ ಆನಂದವರ್ಧನನ ಧ್ವನ್ಯಾಲೋಕದಲ್ಲಿಯೂ ನಿಕ್ಷಿಪ್ತವಾಗಿದ್ದ ರಸಸಿದ್ಧಾಂತವನ್ನು ಪರಿಸ್ಫುಟಗೊಳಿಸಿದಂತೆಯೆ ಅಭಿನವಗುಪ್ತರು ವಸುಗುಪ್ತನ ಸ್ಪಂದಕಾರಿಕಾ ಮೊದಲಾದ ಕೃತಿಗಳಲ್ಲಿ ನಿಹಿತವಾಗಿದ್ದ ಆಗಮಶಾಸ್ತ್ರವನ್ನು ಮಥಿಸಿ ಪ್ರಕಾಶಗೊಳಿಸಿದರು. ಪ್ರಮುಖವಾಗಿ ’ಸ್ಪಂದ’ ಮತ್ತು ’ಪ್ರತ್ಯಭಿಜ್ಞಾ’ – ಈ ಆಧಾರಸ್ತಂಭಗಳ ಮೇಲೆ ತಮ್ಮ ದರ್ಶನವನ್ನು ಅವರು ನೆಲೆಗೊಳಿಸಿದ್ದಾರೆ. ’ಸ್ಪಂದ’ ಎಂದರೆ ಗತಿಶೀಲತೆ: ಮಹಾದೇವನ ಚೈತನ್ಯಸ್ರೋತವು ಭೌತಜಗತ್ತಿನ ರೂಪದಲ್ಲಿ ವ್ಯಕ್ತವಾಗುವುದು. ’ಪ್ರತ್ಯಭಿಜ್ಞಾ’ ಎಂದರೆ ವಿಸ್ಮರಣೆಯ ಆವರಣದಿಂದ ಮುಕ್ತಗೊಂಡು ಸ್ವಸ್ವರೂಪಕ್ಕೆ ಅಭಿಮುಖರಾಗುವುದು; ’ಶಿವೋsಹಂ’ ಎಂಬ ಅನುಭೂತಿಯನ್ನು ಪ್ರತೀತಗೊಳಿಸಿಕೊಳ್ಳುವುದು. ಈ ಕೇಂದ್ರಪ್ರಕ್ರಿಯೆಯ ಕಾರಣದಿಂದಲೇ ಅಭಿನವಗುಪ್ತರು ಸ್ಫುಟಗೊಳಿಸಿರುವ ಸಾಧನಮಾರ್ಗವು ’ಪ್ರತ್ಯಭಿಜ್ಞಾದರ್ಶನ’ ಎನಿಸಿರುವುದು.
ಲಬ್ಧ ವಾಙ್ಮಯವನ್ನು ಮಥನ ಮಾಡಿ ಕಾವ್ಯಶಾಸ್ತ್ರದ ಮತ್ತು ಶೈವದರ್ಶನದ ಬೇರುಗಳ ಜಾಲವನ್ನು ಅಭಿನವಗುಪ್ತರು ಉತ್ಖನನ ಮಾಡಿದ್ದಾರೆ ಎಂದರೆ ಅತ್ಯುಕ್ತಿಯಲ್ಲ.
ಅಭಿನವಗುಪ್ತಸ್ಯ ಕೃತಿಃ ಸೇಯಂ ಯಸ್ಯೋದಿತಾ ಗುರುಭಿರಾಖ್ಯಾ |
ತ್ರಿನಯನಚರಣಸರೋರುಹ-ಚಿಂತನ-ಲಬ್ಧ ಪ್ರಸಿದ್ಧಿರಿತಿ ||
(ತಂತ್ರಾಲೋಕ)
ಪ್ರಮುಖ ಅಂಶಗಳಲ್ಲಿ ಕಾಶ್ಮೀರ-ಶೈವ ಸಿದ್ಧಾಂತಕ್ಕೂ ಅದ್ವೈತವೇದಾಂತಕ್ಕೂ ಹೆಚ್ಚಿನ ಭಿನ್ನತೆ ಇದೆಯೆನಿಸುವುದಿಲ್ಲ. ಆದರೂ ಕೆಲವು ವಿವರಾಂಶಗಳಲ್ಲಿ ಭೇದವುಂಟು. ಉದಾಹರಣೆಗೆ: ವೇದಾಂತದಲ್ಲಿ ನಿಷ್ಕಾಮಕರ್ಮವು ಯೋಗವೆನಿಸಿದ್ದರೆ ಕಾಶ್ಮೀರ-ಶೈವ ಸಿದ್ಧಾಂತದಲ್ಲಿ ಲೌಕಿಕ ಕಲಾಪಗಳು (ಎಂದರೆ ಕಾರ್ಯ ಅಥವಾ ಕರ್ಮ) ಮುಗಿದ ಮೇಲೆ ಮಾತ್ರ ಉಪಕ್ರಮಗೊಳ್ಳುವ ಏಕಾಗ್ರತೆಯು ಯೋಗವೆನಿಸುತ್ತದೆ. ವೇದಾಂತದಲ್ಲಿ ಪ್ರತಿಪಾದಿತವಾಗಿರುವಂತೆ ಜೀವವು ಪರಬ್ರಹ್ಮದ ಬಿಂಬಸದೃಶ ಅಭಿವ್ಯಕ್ತಿ ಎಂಬುದನ್ನು ಕಾಶ್ಮೀರ-ಶೈವವು ಒಪ್ಪುವುದಿಲ್ಲ – ಜೀವವು ’ಮಲಯುಕ್ತ’ವಾಗಿರುವುದರಿಂದ. ಜೀವವು ಸ್ವಾತಂತ್ರ್ಯಸ್ಥಿತಿಯಲ್ಲಿ ಬಿಂಬಿತವಾಗುವುದೇ ಪರಶಿವತತ್ತ್ವ. ಶಿವನ ’ಸ್ವಾತಂತ್ರ್ಯಶಕ್ತಿ’ ಎಂಬ ಕಲ್ಪನೆಯು ಕಾಶ್ಮೀರ-ಶೈವಕ್ಕೇ ವಿಶಿ?ವಾದುದು. ಇನ್ನು ಕಾಶ್ಮೀರ-ಶೈವದ ಅಂಗವಾದ ಕುಂಡಲಿನೀಯೋಗ ಮೊದಲಾದ ತಾಂತ್ರಿಕತೆಗಳಂತೂ ವೇದಾಂತದರ್ಶನಕ್ಕೆ ಹೊರತಾದವೇ. ಈ ತಾಂತ್ರಿಕತೆಗಳು ಸಾಧನೆಯ ಕೆಳಗಿನ ಸ್ತರದವು ಎಂದೂ ವೇದಾಂತದ ನಿರ್ಣಯವಿದೆ.
ಪೃಥ್ವೀತತ್ತ್ವದಿಂದ ಶಿವತತ್ತ್ವದವರೆಗೆ ೩೬ ತತ್ತ್ವಗಳನ್ನು ಸೋಪಾನಕ್ರಮದಲ್ಲಿ ಶೈವದರ್ಶನವು ಗುರುತಿಸಿದೆ.
ಜೀವದಲ್ಲಿ ಸ್ಥೂಲ, ಸೂಕ್ಷ್ಮ ಮತ್ತು ಪರಾ ಎಂಬ ಮೂರು ಮಲಗಳು ನೆಲೆಗೊಂಡಿರುತ್ತವೆಂದೂ ಇವುಗಳನ್ನು ನಿವಾರಿಸಿಕೊಳ್ಳುವುದೇ ಸ್ವಸ್ವರೂಪಸಾಕ್ಷಾತ್ಕರಣಕ್ಕೆ ದಾರಿಯೆಂದೂ ಪ್ರತಿಪಾದಿಸಿದೆ, ಕಾಶ್ಮೀರ-ಶೈವ ಪ್ರಸ್ಥಾನ. ಈ ಹಿನ್ನೆಲೆಯಲ್ಲಿಯೆ ’ನೈರ್ಮಲ್ಯ’ ಎಂಬ ಶಬ್ದವನ್ನು ಅಭಿನವಗುಪ್ತರು ಪಾರಿಭಾಷಿಕಗೊಳಿಸಿರುವುದು.
ವೈದಿಕಮಾರ್ಗ, ಶಾಕ್ತತಂತ್ರ ಇತ್ಯಾದಿಯಾಗಿ ಪರಂಪರೆಯನ್ನು ವಿಂಗಡಿಸಿರುವುದು ಬಹುಮಟ್ಟಿಗೆ ವಿಷಯಸಂವಹನ ಸೌಕರ್ಯದ ಹಿನ್ನೆಲೆಯದು, ಅಧಿಕಾರಿಭೇದಕ್ಕೆ ಅನುಗುಣವಾದುದು – ಎಂಬುದನ್ನು ನಿರಾಕರಿಸುವುದು ಕ್ಲೇಶಕರ. ಏಕೆಂದರೆ ಈ ಮತ್ತು ಇತರ ಧಾರೆಗಳನ್ನು ಗೆರೆ ಹಾಕಿದಂತೆ ಬೇರ್ಪಡಿಸಬರುವುದಿಲ್ಲ. ಒಂದರ ಅಂಶಗಳು ಇನ್ನೊಂದರಲ್ಲಿ ಧಾರಾಳವಾಗಿಯೇ ಗೋಚರಿಸುತ್ತವೆ. ಅನಂತರದ ಕಾಲದಲ್ಲಿ ತಂತ್ರಮಾರ್ಗದ ಮುಖ್ಯ ಅಂಗಗಳೆನಿಸಿದ ’ಷಟ್ಕರ್ಮ’ ಮೊದಲಾದವೂ ಬೀಜರೂಪದಲ್ಲಿ ವೇದವಾಙ್ಮಯದಲ್ಲಿ ಇದ್ದುಕೊಂಡವೇ. ಎಲ್ಲ ಜ್ಞಾನಾಂಗಗಳಲ್ಲಿಯೂ ಇದ್ದಂತೆ ತಂತ್ರಶಾಸ್ತ್ರದಲ್ಲಿಯೂ ಕ್ರಮೇಣ ಹೆಚ್ಚುಹೆಚ್ಚು ಪರಿಷ್ಕರಣಗಳು ಸೇರುತ್ತಹೋದವು. ಸ್ಥೂಲವಾಗಿ ಉತ್ತರಭಾರತದಲ್ಲಿ ಪ್ರಚಲಿತಗೊಂಡ ಸಾಧನಮಾರ್ಗಪರಿಷ್ಕರಣಗಳು ತಂತ್ರಶಾಸ್ತ್ರವೆಂದೂ ದಕ್ಷಿಣಭಾರತದಲ್ಲಿ ವಿಕಾಸಗೊಂಡ ಸಾಧನವಿನ್ಯಾಸಗಳು ಆಗಮಶಾಸ್ತ್ರವೆಂದೂ ಹೆಸರಾಯಿತೆಂಬ ಪರಾಮರ್ಶನೆಯೂ ಇದೆ.
‘ಆಗಮ’, ’ತಂತ್ರ’ – ಇವು ಪರ್ಯಾಯವಾಚಿ ಶಬ್ದಗಳೆಂದೇ ವಜ್ರವಲ್ಲಭ ದ್ವಿವೇದಿ ಮೊದಲಾದ ವಿದ್ವಾಂಸರ ಅಭಿಮತವಿದೆ.
ಕಾಲಕ್ರಮದಲ್ಲಿ ಸಾಮಾಜಿಕ ಸನ್ನಿವೇಶವನ್ನು ಅಧಿಕರಿಸಿ ವೇದಗಳು ತ್ರೈವರ್ಣಿಕರಿಗಾಗಿ, ಆಗಮಗಳು ಸರ್ವವರ್ಣಗಳಿಗಾಗಿ – ಎಂಬ ಭೇದಕಲ್ಪನೆ ಮೂಡಿದಂತಿದೆ.
‘ತ್ರಿಕ’ ದರ್ಶನ
ಭೇದ, ಅಭೇದ, ಭೇದಾಭೇದ – ಈ ’ತ್ರಿಕ’ ದರ್ಶನ ಹದಿನೈದು ಪೀಳಿಗೆಗಳುದ್ದಕ್ಕೂ ಹರಿದುಬಂದ ತರುವಾಯ ’ಸ್ಪಂದಶಾಸ್ತ್ರ’ವನ್ನು ಸೂತ್ರಿತಗೊಳಿಸಿದವನು ವಸುಗುಪ್ತ. ’ಅಭೇದ’ ಎಂದರೆ ಈಶ್ವರಾದ್ವಯ. ಅದನ್ನು ವಿಸ್ತರಿಸಿ ಖಚಿತಗೊಳಿಸಿದವರು ಅಭಿನವಗುಪ್ತರು. ಹೀಗೆ ನೂರಾರು ವರ್ಷಗಳ ಶಾಸ್ತ್ರೀಯಾವಿಷ್ಕರಣಗಳ ಮತ್ತು ಆಂತರಂಗಿಕ ಸಾಧನವಿನ್ಯಾಸಗಳ ಫಲರೂಪವನ್ನು ಅಭಿನವಗುಪ್ತರಚಿತ ಗ್ರಂಥರಾಶಿಯಲ್ಲಿ ಕಾಣಬಹುದು. ಈ ಕಾರಣದಿಂದಲೇ ನಮ್ಮ ದಾರ್ಶನಿಕ ಇತಿಹಾಸದಲ್ಲಿ ಅಭಿನವಗುಪ್ತರಿಗೆ ಮಹತ್ತ್ವದ ಸ್ಥಾನ ಏರ್ಪಟ್ಟಿರುವುದು.
ಪೂರ್ಣತತ್ತ್ವವೆಂದರೆ ಪರಶಿವನು ಮಾತ್ರ – ಎಂಬುದು ಅಭಿನವಗುಪ್ತರ ಆಧಾರಭೂಮಿಕೆ. ಶಿವ ಮತ್ತು ಶಕ್ತಿ ಎಂದು ಪರಿಭಾಷಿತಗೊಂಡಿರುವವೂ ಪರಶಿವನ ಅಭಿವ್ಯಕ್ತಿಯಷ್ಟೆ. ಸಹಜವಾಗಿ ಪ್ರತ್ಯಭಿಜ್ಞಾ ಎಂಬುದೊಂದು ಪ್ರತ್ಯೇಕ ದರ್ಶನವೆಂಬಂತೆ ಪ್ರಚಲನೆ ಪಡೆದಿದ್ದರೂ ಅಂತಿಮಸ್ತರದಲ್ಲಿ ’ಅಹಂ ಬ್ರಹ್ಮಾಸ್ಮಿ’ ಎಂಬ ವೇದಾಂತಸ್ಥಿತಿಗೂ ’ಶಿವೋsಹಂ’ ಎಂಬ ಪ್ರತ್ಯಭಿಜ್ಞಾದರ್ಶನಕ್ಕೂ ನಡುವೆ ಭಿನ್ನತೆ ಇದೆಯೆನಿಸುವುದಿಲ್ಲ. ಯಾವುದು ವೇದಾಂತದರ್ಶನದಲ್ಲಿ ’ಮಾಯಾ’ ಎನಿಸಿದೆಯೋ ಅದು ಪ್ರತ್ಯಭಿಜ್ಞಾದರ್ಶನದಲ್ಲಿ ಶಿವನದೇ ಶಕ್ತಿವಿಶೇಷವಾಗಿದೆ.
’ತ್ರಿಕ’ ಎಂಬ ತತ್ತ್ವವನ್ನು ಸ್ಪಷ್ಟೀಕರಣಕ್ಕಾಗಿ ಹಲವು ಬೇರೆಬೇರೆ ರೀತಿಗಳಲ್ಲಿ ನಿರ್ವಚನ ಮಾಡಲಾಗಿದೆ. ನಿದರ್ಶನಕ್ಕೆ: ಜಗತ್ತಿನ ಎಲ್ಲ ಕಲಾಪಗಳನ್ನು ಅಪರಾ, ಪರಾಪರಾ ಮತ್ತು ಪರಾ ಎಂದು ಸೋಪಾನಕ್ರಮದಲ್ಲಿ ವಿಂಗಡಿಸಲಾಗಿದೆ. ಭೌತದಿಂದ ಆಧ್ಯಾತ್ಮಿಕದವರೆಗಿನ ಎಲ್ಲ ಚಟುವಟಿಕೆಗಳೂ ಈ ಮೂರು ವಿಭಾಗಗಳಲ್ಲಿ ಅಂತರ್ಗತವಾಗುತ್ತವೆ.
ಇಚ್ಛಾ, ಜ್ಞಾನ, ಕ್ರಿಯೆಗಳೊಡನೆ ಚಿತ್ ಮತ್ತು ಆನಂದ – ಇವನ್ನೂ ಸೇರಿಸಿ ಶಿವನನ್ನು ಪಂಚಶಕ್ತ್ಯಾತ್ಮಕನೆಂದು ವರ್ಣಿಸಿ, ಈ ಶಕ್ತಿಪಂಚಕವು ಅನುಕ್ರಮವಾಗಿ ಸೃಷ್ಟಿ, ಸ್ಥಿತಿ, ಸಂಹಾರ, ತಿರೋಧಾನ, ಅನುಗ್ರಹ – ಎಂಬ ಕಾರ್ಯಗಳ ಮೂಲಕ ವ್ಯಕ್ತವಾಗುತ್ತದೆ – ಎಂದು ನಿರೂಪಿತವಾಗಿದೆ.
ಪರಾ, ಅಪರಾ, ಪರಾಪರ; ನರ (ಜೀವ), ಶಕ್ತಿ, ಶಿವ; ಇಚ್ಛಾ, ಜ್ಞಾನ, ಕ್ರಿಯಾ; – ಎಂದೆಲ್ಲ ಬಗೆಬಗೆಯಾಗಿ ’ತ್ರಿಕ’ವನ್ನು ನಿರೂಪಿಸಲಾಗಿದೆ. ಸೃಷ್ಟಿ, ಸ್ಥಿತಿ, ಸಂಹಾರ, ವಿಲಯ ಮತ್ತು ಅನುಗ್ರಹ – ಈ ಕಾರ್ಯಪಂಚಕಕ್ಕೆ ಸಮುದ್ರದಿಂದ ಹೊಮ್ಮುವ ಅಲೆ, ನೊರೆ, ನೀರ್ಗುಳ್ಳೆ ಮೊದಲಾದವುಗಳ ಉಪಮಾನವನ್ನು ಕೊಡಲಾಗಿದೆ.
ಪರಿಭಾಷೆ
ಯಾವುದೇ ಒಂದು ದರ್ಶನಕ್ಕೆ ವಿಶಿಷತೆಯನ್ನು ಅಥವಾ ಪ್ರತ್ಯೇಕತೆಯನ್ನು ಏರ್ಪಡಿಸ ಹೊರಟರೆ ಕ್ರಮೇಣ ಅದರದೇ ಆದ ಪರಿಭಾಷೆ ಉತ್ಪನ್ನವಾಗುವುದು ಸಹಜ. ಶಾಸ್ತ್ರೀಯ ಪ್ರಕ್ರಿಯೆಯ ರೀತಿಯೇ ಹೀಗೆ. ಅದರಂತೆ ಅಭಿನವಗುಪ್ತರಿಂದ ಸ್ಫುಟೀಕೃತವಾದ ಪ್ರತ್ಯಭಿಜ್ಞಾದರ್ಶನದಲ್ಲಿಯೂ ವಿಶೇಷ ಪರಿಭಾಷೆಯೊಂದು ರಚನೆಗೊಂಡಿದೆ. ಸ್ವರೂಪದರ್ಶನದ ಮೂಲಕ ಮೋಕ್ಷಪ್ರಾಪ್ತಿಯನ್ನು ಸಾಧಿಸಿಕೊಳ್ಳುವ ಕ್ರಮವನ್ನು ’ಶಾಂಭವ’ ಮಾರ್ಗ ಎಂದೂ ಇದು ಎಲ್ಲಕ್ಕಿಂತ ಉತ್ಕೃಷ್ಟ ಮಾರ್ಗವೆಂದೂ ಪ್ರತಿಪಾದನೆ ಇದೆ. ಕೇವಲ ಪ್ರಕಾಶರೂಪನಾದ ಶಿವನಲ್ಲಿ ವಿಶ್ವಸೃಷ್ಟಿಯ ಇಚ್ಛೆ ತೋರುವ ಶಕ್ತಿಯನ್ನು ’ಚಿತಿ’ ಎಂದು ನಿರ್ದೇಶಿಸಲಾಗಿದೆ; ಮತ್ತು ಸೃಷ್ಟಿಗೊಂಡ ಜಗತ್ತೂ ಪ್ರಕಾಶಯುಕ್ತವೇ ಆಗಿರುತ್ತದೆ. ಸೃಷ್ಟಿಯ ಸಂಕಲ್ಪ ಮೂಡಿದ ಮೇಲೆ ವಿಶ್ವವನ್ನು ವಿನ್ಯಾಸಗೊಳಿಸುವ ತತ್ತ್ವಗಳನ್ನು ೩೬ ಎಂದು ವಿಭಜಿಸಲಾಗಿದೆ. (ಇವುಗಳಲ್ಲಿ ಸಾಂಖ್ಯದರ್ಶನಾನುಗುಣವಾದ ಮಹತ್ ಮೊದಲಾದವೂ ಸೇರಿವೆ.) ಪ್ರತ್ಯಭಿಜ್ಞಾದರ್ಶನದಂತೆ ಪರಮೇಶ್ವರನಲ್ಲಿ ಐದು ವಿಶೇ? ಶಕ್ತಿಗಳು ಇರುತ್ತವೆ – ಚಿತ್, ಆನಂದ, ಇಚ್ಛೆ, ಜ್ಞಾನ ಮತ್ತು ಕ್ರಿಯೆ. ಅಮೂರ್ತ ಶಿವಶಕ್ತಿಯು ನಾದರೂಪದಲ್ಲಿ ವ್ಯಕ್ತಗೊಂಡಾಗ ಅವನು ’ಸದಾಶಿವ’ನೆನಿಸುತ್ತಾನೆ; ಜ್ಞಾನಶಕ್ತಿಯು ಪ್ರಾಧಾನ್ಯ ಪಡೆದಾಗ ’ಈಶ್ವರ’ನೆನಿಸುತ್ತಾನೆ. ಯಾವುದರ ಮೂಲಕ ಈಶ್ವರಜ್ಞಾನದ ಪ್ರಾಪ್ತಿ ಆಗುತ್ತದೋ ಅದೇ ’ಸದ್ವಿದ್ಯೆ’ ಎನಿಸುತ್ತದೆ. ಮೇಲಣ ಐದು ಪ್ರಕ್ರಿಯೆಗಳು ಅನುಕ್ರಮವಾಗಿ ಶಾಂಭವ, ಶಕ್ತಿಜ, ಮಂತ್ರಮಹೇಶ, ಮಂತ್ರನಾಯಕ ಮತ್ತು ಮಂತ್ರ – ಎಂದು ತಂತ್ರಾಲೋಕದಲ್ಲಿ ವಿವರಣೆ ಇದೆ. ತತ್ತ್ವಶಾಸ್ತ್ರದಲ್ಲಿ ರೂಢವಾಗಿರುವ ’ಪ್ರತ್ಯಭಿಜ್ಞಾ’ ಎಂಬ ಶಬ್ದವೂ ವಿಶಾಲ ತಾತ್ತ್ವಿಕ ನೆಲೆಗಟ್ಟಿನಲ್ಲಿ, ಸ್ವಚ್ಛಂದತಂತ್ರಾದಿ ವಿಶೇ?ತೆಗಳನ್ನು ಲಕ್ಷಿಸಿದ ಪಾರಿಭಾಷಿಕ ನೆಲೆಯಲ್ಲಿ ಹೀಗೆ ಪ್ರಯುಕ್ತವಾಗಿದೆ.
ಪರಿಚಿತವಿರುವ ಶಬ್ದಗಳೇ ಪ್ರತ್ಯಭಿಜ್ಞಾದರ್ಶನದಲ್ಲಿ ವಿಶೇಷ ಪಾರಿಭಾಷಿಕ ಅರ್ಥದಲ್ಲಿ ಬಳಕೆಗೊಂಡಿವೆ. ಉದಾಹರಣೆಗೆ: ’ಸ್ಪಂದ’ ಎಂಬುದು ಚಲನೆಯಲ್ಲದ ಚಲನೆ. ಹೀಗೆಂದರೆ ನಿಶ್ಚಲವಾದುದರಲ್ಲಿಯೆ ಚಲನಸಾಧ್ಯತೆ ನಿಕ್ಷಿಪ್ತವಾಗಿದೆ ಎಂಬ ಅರಿವನ್ನು ಮೂಡಿಸುವುದೇ ’ಸ್ಪಂದ’.
ಕೆಲವು ಅನ್ಯ ಶಬ್ದಗಳಿಗೂ ವಿಶೇಷ ಅರ್ಥವಿಸ್ತಾರಗಳನ್ನು ಕಲ್ಪಿಸಲಾಗಿದೆ: ’ಮಾಯಾ’ ಎಂದರೆ ಯಾವುದರಿಂದ ಭೇದವು ಉತ್ಪನ್ನವಾಗುತ್ತದೋ ಅದು.
‘ಅದ್ವಯ’ ಎಂಬುದನ್ನೂ ಪೂರ್ಣತೆ ಅಥವಾ ಸಮಸ್ತತೆ ಎಂಬ ಅರ್ಥದಲ್ಲಿ ಅಭಿನವಗುಪ್ತರು ಬಳಸಿದ್ದಾರೆ.
‘ಅನುತ್ತರ’ ಸ್ಥಿತಿ
ಪ್ರಪಂಚದ ’ಭೇದ’ಗಳೆಲ್ಲ ನಿರಸನಗೊಂಡು (ಪಂಚಭೂತಗಳನ್ನೂ ಮೀರಿ) ಏಕತ್ವದ ಅನುಭವವಾಗುವುದೇ ’ಅನುತ್ತರ’ವೆಂಬ ಪರಾಕಾ?ಸ್ಥಿತಿ. (ಅನುತ್ತರವೆಂದರೆ ಯಾವುದಕ್ಕಿಂತ ಮೇಲಿನದು ಬೇರಾವುದೂ ಇಲ್ಲವೋ ಅದು.) ರಸಾನುಭವವಾದರೂ ಅಂತಹ ಪರಿಣತಸ್ಥಿತಿಯೇ.
ಯದುನ್ಮೀಲನಶಕ್ತ್ಯೈವ ವಿಶ್ವಮುನ್ಮೀಲತಿ ಕ್ಷಣಾತ್ |
ಸ್ವಾತ್ಮಾಯತನವಿಶ್ರಾನ್ತಾಂ ತಾಂ ವಂದೇ ಪ್ರತಿಭಾಂ ಶಿವಾಮ್ ||
ಎಂಬ ಧ್ವನ್ಯಾಲೋಕಲೋಚನೋಕ್ತಿಯಲ್ಲಿ ಈ ಸಮಾವೇಶವನ್ನು ಕಾಣುತ್ತೇವೆ.
ಈ ದರ್ಶನದ ಕೇಂದ್ರತತ್ತ್ವವೆಂದರೆ ಭಗವತ್ಸಾಕ್ಷಾತ್ಕಾರಸ್ಥಿತಿಯಲ್ಲಿ ಹೊಸದಾದುದೇನೂ ಮೂಡುವುದಿಲ್ಲ; ಯೋಗಸಾಧಕನು ತನಗೆ ಹಿಂದಿನಿಂದ ಪರಿಚಿತವೇ ಆಗಿದ್ದುದನ್ನು ಅನುಭವಕ್ಕೆ ತಂದುಕೊಳ್ಳುತ್ತಾನಷ್ಟೆ. ಈ ಅನುಭವವೇ ಪ್ರತ್ಯಭಿಜ್ಞಾ ಎನಿಸಿರುವುದು.
ಪಂಚಭೂತಗಳನ್ನು ಮೀರಿರುವುದು ಎಂಬುದು ವಿರೋಧಾಭಾಸವಾಗದೆ? – ಎಂದರೆ, ಆ ಪ್ರಕ್ರಿಯೆಯ ಉಪಪತ್ತಿ ಹೀಗಿದೆ : ಜೀವನು ನಿರಾಕಾರಸ್ಥಿತಿಯಲ್ಲಿ ನೆಲಸಿರುವನೆಂದಾದರೆ ಅಲ್ಲಿ ’ಆಕಾಶ’ ಇರಲಾರದು. ಅಂತೆಯೇ ಜೀವನಿಗೆ ಮಾಡಲೇಬೇಕಾದುದೆಂಬ ಕಾರ್ಯವೇ ಇರದಿದ್ದಾಗ ಅಲ್ಲಿ ’ಕಾಲ’ಕ್ಕೆ ಅಸ್ತಿತ್ವವಿರದು.
ಸ್ವಸ್ವರೂಪದ ಸಾಕ್ಷಾತ್ಕರಣ (ಪ್ರತ್ಯಭಿಜ್ಞಾ) ಆದ ಕ್ಷಣದಲ್ಲಿಯೆ ಜೀವವು ದೈವತ್ವಕ್ಕೆ ಏರುತ್ತದೆ, ಮತ್ತು ತಾನು ಮೂಲತಃ ದೈವವೇ ಎಂಬ ನಿಶ್ಚಯ ಉಂಟಾಗುತ್ತದೆ. ಇದಾದರೋ ಒಂದು ಅಪರೋಕ್ಷ ಅನುಭೂತಿ. ಗುರುವಾದವನು ಮಾಡುವ ಉಪಕಾರವೆಂದರೆ ಸಾಧಕನಿಗೆ ’ನೀನು ಯಾರಿಗಾಗಿ ಹುಡುಕಾಟ ನಡೆಸಿರುವೆಯೋ ಅದು ನೀನೇ ಆಗಿರುವೆ’ ಎಂದು ಮನವರಿಕೆ ಮಾಡಿಸುವುದು.
ಶಾಂಕರವೇದಾಂತದಲ್ಲಿಯೇ ಪರಬ್ರಹ್ಮತತ್ತ್ವವು ಸ್ಥಾಪಿತವಾಗಿದ್ದಾಗ ಶಿವ ಎಂದು ಅಭಿಹಿತವಾದ ಇನ್ನೊಂದು ಪರಮತತ್ತ್ವವನ್ನು ಅಭಿನವಗುಪ್ತರು ಏಕೆ ಸಂಭಾವಿಸಿದರು – ಮೊದಲಾದ ಸೂಕ್ಷ್ಮ ವಿವರಗಳ ಬಗೆಗೆ ಹೆಚ್ಚಿನ ಸಂಶೋಧನೆಗೆ ಅವಕಾಶವಿದೆ.
ಅಭಿನವಗುಪ್ತರ ಕೆಲವು ಪ್ರಮುಖ ಉಪಲಬ್ಧಕೃತಿಗಳು
- ಪ್ರತ್ಯಭಿಜ್ಞಾ ದರ್ಶನವನ್ನು ಕುರಿತವು:
ಅ) ತಂತ್ರಾಲೋಕ (೮ ಸಂಪುಟಗಳಲ್ಲಿ ಪ್ರಕಟಿತ; ರಾಜಾನಕ ಜಯರಥನ ’ತಂತ್ರಾಲೋಕವಿವೇಕ’ ಎಂಬ ವ್ಯಾಖ್ಯಾನ ಇದೆ.)
ಆ) ಮಾಲಿನೀವಿಜಯವಾರ್ತಿಕ (’ಮಾಲಿನೀವಿಜಯೋತ್ತರತಂತ್ರ’ ಗ್ರಂಥದ ಮೇಲಿನ ವ್ಯಾಖ್ಯಾನ)
ಇ) ತಂತ್ರಸಾರ (೨ ಸಂಪುಟಗಳಲ್ಲಿ ಪ್ರಕಟಿತ)
ಈ) ತಂತ್ರವಟಧಾನಿಕಾ
ಉ) ಈಶ್ವರಪ್ರತ್ಯಭಿಜ್ಞಾವಿಮರ್ಶಿನೀ (ಉತ್ಪಲದೇವನ ಕಾರಿಕೆಗಳ ಮೇಲಿನ ವ್ಯಾಖ್ಯಾನ)
ಊ)) ಈಶ್ವರಪ್ರತ್ಯಭಿಜ್ಞಾವಿವೃತಿವಿಮರ್ಶಿನೀ (೩ ಸಂಪುಟಗಳಲ್ಲಿ ಪ್ರಕಟಿತ; ಉತ್ಪಲದೇವನ ’ವಿವೃತಿ’ಯ ಮೇಲಿನ ವ್ಯಾಖ್ಯಾನ)
ಋ) ಪರಾತ್ರೀಶಿಕಾವಿವರಣ (’ಕೌಲ’ಪ್ರಸ್ಥಾನದ ವಿವರಣೆ)
ಎ) ಪರಮಾರ್ಥಸಾರ
ಏ) ಪರ್ಯಂತಪಂಚಾಶಿಕಾ (ಡಾ|| ವಿ. ರಾಘವನ್ ಅವರಿಂದ ಸಂಪಾದಿತ)
ಐ) ಭಗವದ್ಗೀತಾರ್ಥಸಂಗ್ರಹ
II. ಸಾಹಿತ್ಯವನ್ನು ಕುರಿತವು:
ಅ) ಅಭಿನವಭಾರತೀ (ನಾಟ್ಯಶಾಸ್ತ್ರ ವಿವೃತಿ) (೪ ಸಂಪುಟಗಳಲ್ಲಿ ಪ್ರಕಟಿತ; ಭರತನ ನಾಟ್ಯಶಾಸ್ತ್ರದ ಮೇಲಿನ ವಿವರಣಗ್ರಂಥ)
ಆ) ಧ್ವನ್ಯಾಲೋಕಲೋಚನ (ಆನಂದವರ್ಧನನ ’ಧ್ವನ್ಯಾಲೋಕ’ದ ಮೇಲಿನ ವ್ಯಾಖ್ಯಾನ) (ಉತ್ತುಂಗೋದಯನ ’ಕೌಮುದೀ’ ಮತ್ತು ಎಸ್. ಕುಪ್ಪುಸ್ವಾಮಿಶಾಸ್ತ್ರಿಗಳ ಇ) ’ಉಪಲೋಚನ’ ಎಂಬ ಉಪವ್ಯಾಖ್ಯಾನಗಳು ಇವೆ. ಕನ್ನಡದಲ್ಲಿ ಡಾ|| ಕೆ. ಕೃಷ್ಣಮೂರ್ತಿಗಳ ’ಲೋಚನಸಾರ’ ಲಭ್ಯವಿದೆ)
ಈ) ಘಟಕರ್ಪರಕುಲಕವೃತಿ
ಕಾವ್ಯ ಮತ್ತು ಪ್ರತ್ಯಭಿಜ್ಞೆ
ಶಿವತತ್ತ್ವಕ್ಕೆ ’ಪ್ರಕಾಶ’ ಮತ್ತು ’ವಿಮರ್ಶ’ ಎಂಬ ಎರಡು ಆಯಾಮಗಳಿವೆ. ’ಪ್ರಕಾಶ’ವು ಸ್ವಸ್ವರೂಪ; ’ವಿಮರ್ಶ’ ಎಂಬುದು ನಿರಂತರ ಸೃಷ್ಟಿ, ಸ್ಥಿತಿ, ಸಂಹಾರ, ವಿಲಯ (ಅಥವಾ ತಿರೋಧಾನ) ಮತ್ತು ಅನುಗ್ರಹ – ಎಂಬ ಐದು ಕಾರ್ಯವಿಶೇಷಗಳಲ್ಲಿ ಅಭಿವ್ಯಕ್ತಗೊಳ್ಳುತ್ತದೆ.
ಅಭಿನವಗುಪ್ತರ ದೃಷ್ಟಿಯಲ್ಲಿ ಕಾವ್ಯದ ಮತ್ತು ಕಲೆಯ ಅನುಸಂಧಾನವು ಪ್ರತ್ಯಭಿಜ್ಞೆಯ ಸಾಕ್ಷಾತ್ಕರಣಕ್ಕೆ ಸಾಧನವೇ ಆಗಿದೆ. ಕಾವ್ಯದ ಸಂದರ್ಭದಲ್ಲಿ ಯಾರು ಸಹೃದಯನೆನಿಸಿದ್ದಾನೋ ಅವನೇ ಪ್ರತ್ಯಭಿಜ್ಞೆಯ ಸಂದರ್ಭದಲ್ಲಿ ಸಾಧಕನೆನಿಸುತ್ತಾನೆ. ಈ ವಿಕಸನಪ್ರಕ್ರಿಯೆಯನ್ನು ಸಂವಿತ್, ವಿಶ್ರಾಂತಿ, ಪರಮಾನಂದ, ಪರಮಭೋಗ, ವಿಮರ್ಶ, ಸ್ವರೂಪ, ಪ್ರತ್ಯಭಿಜ್ಞೆ – ಎಂದು ಸೋಪಾನಕ್ರಮದಲ್ಲಿ ವ್ಯಾಖ್ಯೆ ಮಾಡಿದ್ದಾರೆ. ಈ ಸಿದ್ಧಾಂತವಾದರೋ ಬೀಜರೂಪದಲ್ಲಿ ತಂತ್ರಾಲೋಕ ಗ್ರಂಥದಲ್ಲಿಯೆ ಲಬ್ಧವಿದೆ. ಪ್ರತಿಭೋನ್ಮೀಲನದ ಬಿಂಬ-ಪ್ರತಿಬಿಂಬ ವಿನ್ಯಾಸವನ್ನು ತಂತ್ರಾಲೋಕದ ಮೂರನೇ ಆಹ್ನಿಕದಲ್ಲಿ ಹೀಗೆ ಲಕ್ಷಣೀಕರಿಸಿದ್ದಾರೆ:
ನಿರ್ಮಲೇ ಮುಕುರೇ ಯದ್ವದ್ ವಿಭಾನ್ತಿ ಭೂಮಿಜಲಾದಯಃ |
ಅಮಿಶ್ರಾತ್ಸದ್ವದೇಕಸ್ಮಿಂಶ್ಚಿನ್ನಾಥೇ ಮಿಶ್ರವೃತ್ತಯಃ ||
ಎಂದರೆ, ಶುಭ್ರವಾದ ಕನ್ನಡಿಯಲ್ಲಿ ಹೇಗೆ ಭೂಮಿ, ಜಲ ಮೊದಲಾದವು ಬೇರೆಬೇರೆಯಾಗಿ ಭಾಸವಾಗುತ್ತವೋ ಅದೇ ಪ್ರಕಾರದಲ್ಲಿ ಏಕೈಕ ಪ್ರಕಾಶರೂಪನಾದ ಪರಮೇಶ್ವರನಲ್ಲಿ ಸಮಸ್ತ ವಿಶ್ವವ್ಯವಹಾರವೂ ಅಮಿಶ್ರಿತ ರೂಪದಲ್ಲಿ ಪ್ರತಿಫಲಿತವಾಗಿದೆ. ಅದಕ್ಕೆ ಸಂವಾದಿಯೆಂಬಂತೆ ಸಹೃದಯನ ವಿಶದೀಭೂತ ಮನೋಮುಕುರದಲ್ಲಿ ಕಾವ್ಯಾರ್ಥಾದಿಗಳು ಸ್ಫುಟವಾಗಿ ಭಾಸಿತವಾಗುತ್ತವೆ:
ಸದೃಶೇ ಭಾತಿ ನಯನದರ್ಪಣಾಂಬರವಾರಿ? |
ತಥಾ ಹಿ ನಿರ್ಮಲೇ ರೂಪೇ ರೂಪಮೇವಾವಭಾಸತೇ ||
ಎಂದರೆ ಕನ್ನಡಿ, ನೀರು ಮೊದಲಾದವುಗಳಲ್ಲಿ ಹೇಗೆ ಅವುಗಳ ಸ್ವಚ್ಛತೆಯ ಗುಣದಿಂದಾಗಿಯೆ ಪ್ರತಿಫಲನ ಏರ್ಪಡುತ್ತದೋ ಹಾಗೆಯೇ ಕಲಾ-ಕಾವ್ಯ ಸಂದರ್ಭದಲ್ಲಿಯ ಪ್ರತಿ-ಭಾಸವು ನಡೆಯುತ್ತದೆ.
ವಸ್ತು ಮತ್ತು ಸ್ಪಂದನದ ನೈರಂತರ್ಯವೇ ಇಲ್ಲಿಯ ಮೂಲತತ್ತ್ವ. ಇದೇ ತತ್ತ್ವದ ಪರಿಣಾಮೋನ್ನತಿಯನ್ನು ಹೀಗೆ ವಿವರಿಸಿದ್ದಾರೆ:
ಸ್ವಸ್ಮಿನ್ ಅಭೇದಾದ್ ಭಿನ್ನಸ್ಯ ದರ್ಶನಕ್ಷಮತೈವ ಯಾ |
ಅವ್ಯಕ್ತಸ್ವಪ್ರಕಾಶಸ್ಯ ನೈರ್ಮಲ್ಯಂ ತದುದೀರಿತಮ್ ||
ಎಂದರೆ, ಸ್ವಾತ್ಮದ ಅಭೇದಸ್ವರೂಪದಲ್ಲಿಯೆ ಭಿನ್ನತೆಯ ದರ್ಶನದ ಕ್ಷಮತೆಯೂ ಅಡಗಿರುವಂತೆ, ಪ್ರಕಾಶಪೂರ್ಣ ಅಭಿವ್ಯಕ್ತಿಗೆ ಕಾರಣವಾದುದೇ ’ನೈರ್ಮಲ್ಯ’ ಎನಿಸುತ್ತದೆ.
ತಾತ್ಪರ್ಯವೆಂದರೆ ಕನ್ನಡಿಯಲ್ಲಿ ನೈರ್ಮಲ್ಯ ಇರುವ ಕಾರಣದಿಂದಲೇ ಪ್ರತಿಫಲನಸಾಮರ್ಥ್ಯ ಏರ್ಪಟ್ಟಿರುವುದು.
ಸಾಧನೆಯ ವಿಷಯಕ್ಕೆ ಬಂದರೆ ಲಕ್ಷ್ಯವನ್ನು ಸೇರಲು ಹಲವು ಮಾರ್ಗಗಳು ಇರಬಹುದೆಂಬುದೂ ಸ್ವೇತರಮಾರ್ಗಗಳನ್ನು ಖಂಡಿಸಲು ಹೋಗಬಾರದೆಂಬುದೂ ಅಭಿನವಗುಪ್ತರ ಉದಾರ ನಿಲವು:
ಉಪಾಯೇ ನಾಗ್ರಹಃ ಕಾರ್ಯಃ ||
(ಪರ್ಯಂತಪಂಚಾಶಿಕಾ)
ಅನುಸಂಧಾನದ ಮಹತಿ
ಅಭಿನವಗುಪ್ತರ ಚಿಂತನಧಾರೆಯ ಒಂದು ಪ್ರಮುಖ ಲಕ್ಷಣವೆಂದರೆ ಪರಂಪರೆಯಿಂದ ಭಿನ್ನವಾದ ಏನನ್ನೋ ಹೇಳಬೇಕೆಂಬುದಕ್ಕಿಂತ ಮಿಗಿಲಾಗಿ ತಮಗೆ ಹಿಂದೆ ಏನು ಶಾಸ್ತ್ರಜಿಜ್ಞಾಸೆ ನಡೆದಿತ್ತೋ ಅದನ್ನು ಸಮಕಾಲೀನರಿಗೆ ಪರಿಚಯಿಸಿ ಜಿಜ್ಞಾಸೆಯ ಮುಂದುವರಿಕೆಗೆ ಪರಿಕರಗಳನ್ನು ಒದಗಿಸುವುದು. ಈ ಭವಿಷ್ಯದ್ ದೃಷ್ಟಿಯೂ ಅವರ ಸ್ವೋಪಜ್ಞ ಚಿಂತನರಾಶಿಯಷ್ಟೆ ಮಹತ್ತ್ವದ್ದು. ಅವರ ಬೌದ್ಧಿಕ ವಾರಸಿಕೆ ಸಾವಿರ ವ?ಗಳ ತರುವಾಯವೂ ಸಂಗತವೆನಿಸಿರುವುದು ಈ ಭೂಮಿಕೆಯಿಂದ.
ಗ್ರಹಿಸಬೇಕಾಗಿರುವ ಎರಡನೆಯ ವೈಶಿಷ್ಟ್ಯವೆಂದರೆ ವೈದಿಕಯುಗದಿಂದ ನೆಲೆಗೊಂಡಿದ್ದ ಅಧ್ಯವಸಾಯಾತ್ಮಕ, ಅನುಸಂಧಾನಾತ್ಮಕ – ಈ ಎರಡು ಪ್ರಸ್ಥಾನಗಳಲ್ಲಿ ಅವರು ಎರಡನೆಯದಕ್ಕೆ ಪ್ರಾಧಾನ್ಯ ನೀಡಿದುದು. ಅಧ್ಯವಸಾಯಾತ್ಮಕ (ಎಂದರೆ ವಿಶ್ಲೇ?ಣಾತ್ಮಕ) ಆಯಾಮವೇ ಪ್ರಾಥಮ್ಯವನ್ನು ಪಡೆದುಕೊಂಡರೆ ಅದು ಮೌಲ್ಯಹ್ರಾಸದಲ್ಲಿ ಪರ್ಯವಸಾನಗೊಳ್ಳುವ ಸಂಭವವಿರುತ್ತದೆಂಬುದು ಲೋಕಾನುಭವ. ಇದನ್ನು ಗಮನಿಸಿದಾಗ ಅಭಿನವಗುಪ್ತರು ತಳೆದ ದೃಷ್ಟಿಯು ತುಂಬಾ ಮಹತ್ತ್ವದ್ದೆನಿಸುತ್ತದೆ. ಪೃಥಕ್ಕರಣಕ್ಕಿಂತ ಸಮನ್ವಯ ಮತ್ತು ಮೌಲ್ಯಪರತೆಗಳೇ ಜೀವನವನ್ನು ಹೆಚ್ಚು ಅರ್ಥಪೂರ್ಣಗೊಳಿಸುವುದು. ಈ ನಿಲವನ್ನು ಮಾನ್ಯಮಾಡಿದರೆ ಹಲವು ವೈರುಧ್ಯಗಳೂ ತಾರತಮ್ಯಗಳೂ ಕೂಡಾ ನಿವಾರಣೆಯಾದಾವು. ತಾರತಮ್ಯಾನುಸರಣೆಯು ದೈವದ್ರೋಹವೆಂದೇ ಅಭಿನವಗುಪ್ತರು ಘೋಷಿಸಿದ್ದಾರೆ. ಕಲೆ ಮತ್ತು ಅಧ್ಯಾತ್ಮಾನುಸಂಧಾನ ಕ್ಷೇತ್ರಗಳಲ್ಲಿ ಅಭಿನವಗುಪ್ತರು ಸಾಧಾರಣೀಕರಣಕ್ಕಾಗಿ ಪ್ರಯಾಸ ನಡೆಸಿದುದೂ ಇದೇ ಕಾರಣಕ್ಕಾಗಿ.
ಉಜ್ಜ್ವಲ ವಾರಸಿಕೆ
ವಿಶಾಲ ದರ್ಶನಪ್ರಪಂಚವನ್ನು ಅಭಿನವಗುಪ್ತರು ಊರ್ಜಿತಗೊಳಿಸಿದಂತೆಯೇ ಅವರ ಉಜ್ಜ್ವಲ ವಾರಸಿಕೆಯು ಕ್ಷೇಮರಾಜ, ಕ್ಷೇಮೇಂದ್ರ ಮೊದಲಾದವರ ಮೂಲಕ ಪ್ರಜ್ವಲವಾಗಿ ಮುಂದುವರಿಯಿತು, ಇಡೀ ಭಾರತದಲ್ಲಿ ವ್ಯಾಪಿಸಿತು – ಆಸಿಂಧುಸಿಂಧುಪರ್ಯಂತ.
ಜಯರಥ, ಕ್ಷೇಮರಾಜ, ಮಧುರಾಜ ಮೊದಲಾದ ಹಲವಾರು ನೇರ ಶಿಷ್ಯರ ಮೂಲಕವೂ ಅಭಿನವಗುಪ್ತರ ಚಿಂತನಪರಂಪರೆ ಮುಂದುವರಿದದ್ದು ಒಂದು ಮುದಾವಹ ಸಂಗತಿ.
ತಮ್ಮ ಜೀವಿತಕಾರ್ಯ ಮುಗಿದಿದೆ ಎನಿಸಿದಾಗ ಅಭಿನವಗುಪ್ತರು ಶಿಷ್ಯಸಮೇತರಾಗಿ ಕಾಶ್ಮೀರದ ಬಡಗಾಂವ ಜಿಲ್ಲೆಯಲ್ಲಿರುವ ಗುಹೆಯನ್ನು ಪ್ರವೇಶಿಸಿ ಶಿವಸಾನ್ನಿಧ್ಯ ಪಡೆದರೆಂದು ಪ್ರತೀತಿ ಇದೆ.
ಅವಸಾನಕಾಲದಲ್ಲಿ ಅಭಿನವಗುಪ್ತರು ಭೈರವಗುಹಾಪ್ರವೇಶ ಮಾಡಿ ಭೈರವನಲ್ಲಿ ಲೀನರಾದರೆಂಬ ಪಾರಂಪರಿಕ ಹೇಳಿಕೆಯನ್ನು ಯಥಾರ್ಥವಾಗಿಯಾದರೂ ಗ್ರಹಿಸಬಹುದು, ಅಥವಾ ಜೀವನ್ಮುಕ್ತರಾದರೆಂದಾದರೂ ಅರ್ಥೈಸಿಕೊಳ್ಳಬಹುದು.
ದುರ್ಭಾಗ್ಯದ ವಿಷಯವೆಂದರೆ ಒಂದೊಮ್ಮೆ ಇಡೀ ಭಾರತದಲ್ಲಿಯೆ ಪ್ರಮುಖ ವಿದ್ಯಾಕೇಂದ್ರವಾಗಿದ್ದು ಎಲ್ಲ ಜ್ಞಾನಾಂಗಗಳಲ್ಲಿಯೂ ಅಗ್ರಪಂಕ್ತಿಯವೆನಿಸಿರುವ ಅದ್ಭುತ ಕೃತಿಗಳಿಗೆ ಜನ್ಮಸ್ಥಾನವಾಗಿದ್ದ ಕಾಶ್ಮೀರ ರಾಜ್ಯವು ಈಗ ಗೊಂದಲದ ಬೀಡಾಗಿದೆ; ಸಾರಸ್ವತಕಾರ್ಯಕ್ಕೆ ಪೋಷಕವಾದ ಪರಿಸರ ಅಲ್ಲಿ ಉಳಿದಿಲ್ಲ. ಕಾಶ್ಮೀರವು ಭಾರತದ ಭಾಗವಾಗಿ ಉಳಿದೀತೆ ಎಂಬುದನ್ನೇ ಸಂದೇಹಿಸಬೇಕಾದ ವಾತಾವರಣ ಅಲ್ಲಿ ಇದೆ. ಶಾರದಾದೇವಿಗೆ ’ಕಾಶ್ಮೀರಪುರವಾಸಿನಿ’ಯಾಗಿ ಉಳಿಯುವುದು ದುಷ್ಕರವಾಗುತ್ತಿದೆ.
ಅಭಿನವಗುಪ್ತರು ನಮ್ಮ ನಾಡಿಗೆ ನೀಡಿದ ದರ್ಶನವನ್ನು ’ಪ್ರತ್ಯಭಿಜ್ಞಾ’ ಎಂದು ಕರೆದಿದ್ದಾರೆ. ’ಅಭಿಜ್ಞಾನ’ವೆಂದರೆ ಮರೆತುಹೋಗಿರುವ ಮುಖ್ಯ ಸಂಗತಿಯ ಪುನಃಸ್ಮರಣೆ. ಈಚಿನ ಕಾಲದಲ್ಲಿ ಆಪಾತರಮಣೀಯವೂ ತರ್ಕಹೀನವೂ ಆದ ಧೋರಣೆಗಳು ವ್ಯಾಪಕವಾಗಿ ಪ್ರಚಲನೆಗೊಂಡಿರುವ ಕಾರಣದಿಂದ ಸನಾತನಧರ್ಮಪ್ರಜ್ಞೆಯೂ ಋಜುವಾದ ಪಾಂಡಿತ್ಯವೂ ಆಘಾತಗಳಿಗೆ ಒಳಗಾಗಿವೆ. ನೈಜ ಮೌಲ್ಯಗಳು ದೃಢವಾಗಿ ಪುನಃಸ್ಥಾಪನೆಗೊಳ್ಳಬೇಕಾಗಿದೆ. ಈ ಉದ್ಯಮಕ್ಕೆ ಆಚಾರ್ಯ ಅಭಿನವಗುಪ್ತರ ಸಹಸ್ರಾಬ್ದದ ಆಚರಣೆಯು ಉತ್ತೇಜಕವಾಗಲಿ ಎಂದು ಹಾರೈಸೋಣ. ಈಗಲಾದರೋ ಅಭಿನವಗುಪ್ತರಂತಹ ದಿಗಂತವ್ಯಾಪಿ ಮೇಧಾವಿಯ ಪರಿಚಯವು ಅಲಂಕಾರಶಾಸ್ತ್ರ ಮತ್ತು ಕಾಶ್ಮೀರ-ಶೈವ ದರ್ಶನ ಕ್ಷೇತ್ರಗಳ ಹಲವರಿಗಷ್ಟೆ ಸೀಮಿತವಾಗಿರುವಂತಿದೆ. ಸಹಸ್ರಾಬ್ದ ಆಚರಣೆಯ ವ್ಯಾಜದಲ್ಲಾದರೂ ಅಭಿನವಗುಪ್ತರ ಗಹನವೂ ಬಹುಮುಖವೂ ಆದ ಸಾಧನೆಯ ಪರಿಚಯ ಹೆಚ್ಚಿನವರಿಗೆ ಆಗಲಿ ಎಂದು ಆಶಿಸಬೇಕಾಗಿದೆ.
ಅಭಿನವಗುಪ್ತರ ಚಿಂತನೆಯಲ್ಲಿ ಪ್ರಖರತೆಯೂ ಪೂರ್ಣತೆಯೂ ಇದೆ. ಏನೇನೋ ಚಿಂತನೆಯ ಗೊಂದಲಗಳು ತುಂಬಿರುವ ೨೧ನೇ ಶತಮಾನದ ಪರಿಸರದಲ್ಲಿ ಅಭಿನವಗುಪ್ತರು ನೀಡಿರುವ ಸಮನ್ವಯಾಧಾರಿತ ಪರಿಸ್ಫುಟತೆಯು ಅತ್ಯಂತ ಉಪಾದೇಯವೆನಿಸುತ್ತದೆ. ಸಹಸ್ರಾಬ್ದದ ನಿಮಿತ್ತದಲ್ಲಿಯಾದರೂ ಅಭಿನವಗುಪ್ತಪ್ರಣೀತ ವಾಙ್ಮಯರಾಶಿಯು ಹೆಚ್ಚಿನ ಅಧ್ಯಯನವನ್ನು ಆಕರ್ಷಿಸಲಿ ಎಂದು ಹಾರೈಸೋಣ.
(ಮುಗಿಯಿತು.)
ಸಹಸ್ರಾಬ್ದ ಲೇಖನ- 1ನ್ನು ಇಲ್ಲಿ ಓದಬಹುದು
