ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ದೀಪ್ತಿ

ಉಪಕಾರಃ ಪರೋ ಧರ್ಮಃ ಪರಾರ್ಥಂ ಕರ್ಮ ನೈಪುಣಂ |

ಪಾತ್ರೇ ದಾನಂ ಪರಃ ಕಾಮಃ ಪರೋ ಮೋಕ್ಷೋ ವಿತೃಷ್ಣತಾ ||

ಸುಭಾಷಿತರತ್ನಭಾಂಡಾಗಾರ

“ಪರರಿಗೆ ಉಪಕಾರ ಮಾಡುವುದು ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಧರ್ಮ. ಅವಕಾಶ ಕಲ್ಪಿಸಿಕೊಂಡು ಇತರರಿಗಾಗಿ ಹಿತಕರ ಕೆಲಸಗಳನ್ನು ಮಾಡುವುದೇ ಕಾರ್ಯನೈಪುಣ್ಯ. ನೆರವಿನ ಆವಶ್ಯಕತೆ ಇರುವ ಸತ್ಪಾತ್ರರಿಗೆ ದಾನಮಾಡಲು ಉಜ್ಜುಗಿಸುವುದೇ ಶ್ರೇಷ್ಠವಾದ ಸಂಕಲ್ಪ. ಸ್ವಾರ್ಥದ ಆಸೆ ಇಲ್ಲದಿರುವುದೇ ನಿಜವಾದ ಮೋಕ್ಷ.”

ಹೊರಗಿನ ಪರಿಮಿತಿಗಳನ್ನು ಗಣಿಸಿ ಪರೋಪಕಾರ ಸಂದರ್ಭಗಳಿAದ ವಿಮುಖರಾಗುವ ಪ್ರವೃತ್ತಿಯನ್ನು ಲೋಕದಲ್ಲಿ ಧಾರಾಳವಾಗಿಯೆ ಕಾಣುತ್ತೇವೆ. ಆದರೆ ಸಂಕಲ್ಪದಾರ್ಢ್ಯವಿರುವವರು ಕ್ಲೇಶಪಟ್ಟಾದರೂ ಇತರರ ನೆರವಿಗೆ ಮುಂದಾಗುತ್ತಾರೆ.

ಈಗ್ಗೆ ಆರು ವರ್ಷಗಳ ಹಿಂದೆ ನಮ್ಮನ್ನಗಲಿದ (೨೦೧೫) ಎಚ್.ಎಲ್. ನಾಗೇಗೌಡರು ಅಮಲ್ದಾರರಾಗಿ, ಜಿಲ್ಲಾಧಿಕಾರಿಯಾಗಿ, ಲೇಬರ್ ಕಮಿಶನರ್ ಆಗಿ – ಹೀಗೆ ಸರ್ಕಾರೀ ಸೇವೆಯಲ್ಲಿ ಹಲವಾರು ಉನ್ನತ ಹುದ್ದೆಗಳನ್ನು ನಿರ್ವಹಿಸಿದವರು. ತಾವು ಇದ್ದ ಎಲ್ಲ ಅಧಿಕಾರಸ್ಥಾನಗಳಲ್ಲಿಯೂ ದಕ್ಷರೆಂದೂ ಜನಾನುರಾಗಿಯೆಂದೂ ಹೆಸರು ಮಾಡಿದವರು. ಅಧಿಕಾರವಿರುವುದು ಜನಹಿತಸಾಧನೆಗಾಗಿಯೆ ಎಂದು ನಂಬಿ ನಡೆದವರು. ಅವರ ಕಾರ್ಯರೀತಿಯನ್ನು ನಿದರ್ಶನಪಡಿಸಿದ ಹಲವು ಪ್ರಸಂಗಗಳಲ್ಲಿ ಒಂದು ಇದು.

ಹರಿಹರ ಭಾಗದಲ್ಲಿ ಅವರು ಅಮಲ್ದಾರರಾಗಿದ್ದಾಗಿನ ಘಟನೆ. ಸಂಕಲಿಪುರ ಎಂಬ ಎಪ್ಪತ್ತು ಕುಟುಂಬಗಳಿದ್ದ ಗ್ರಾಮ ಬೆಂಕಿಗೆ ಆಹುತಿಯಾಗಿ ಊರವರೆಲ್ಲ ಬೀದಿಪಾಲಾಗಿದ್ದರು. ಸುದ್ದಿ ತಿಳಿದೊಡನೆ ನಾಗೇಗೌಡರು ಅಲ್ಲಿಗೆ ಧಾವಿಸಲು ಸಜ್ಜಾದರು. ಆದರೆ ಆ ಕಡೆಗಿದ್ದ ಒಂದೇ ಬಸ್ ಹೋಗಿಯಾಗಿತ್ತು. ನಾಗೇಗೌಡರು ಕ್ಷಣವೂ ವ್ಯರ್ಥ ಮಾಡದೆ ಸೈಕಲ್ ಏರಿ ಹೋಗಿ ಪರಿಸ್ಥಿತಿಯನ್ನು ಕಣ್ಣಾರೆ ನೋಡಿದರು. ಜನರು ಎಲ್ಲವನ್ನೂ ಕಳೆದುಕೊಂಡಿದ್ದರು. ಜಾನುವಾರುಗಳೂ ಸತ್ತಿದ್ದವು. ಆ ದಿನಗಳಲ್ಲಿ ಜನರಿಗೆ ಪರಿಹಾರ ದೊರೆಯುತ್ತಿದ್ದುದು ಹತ್ತಿಪ್ಪತ್ತು ರೂಪಾಯಿ. ಅದಕ್ಕೂ ಸಾಹಸಪಡಬೇಕಾಗಿತ್ತು. ನಾಗೇಗೌಡರು ಜನರಿಗೆ ಸಾಂತ್ವನ ಹೇಳಿ ಕೇಂದ್ರಕ್ಕೆ ಹಿಂದಿರುಗಿದವರೇ ದಾವಣಗೆರೆ-ಹರಿಹರದ ವರ್ತಕರನ್ನು ಸೇರಿಸಿ ನೆರವಿಗಾಗಿ ಮನವಿ ಮಾಡಿದರು. ಎಲ್ಲರೂ ಮುಕ್ತಹಸ್ತರಾಗಿ ದಾನ ನೀಡಿದರು. ನಾಗೇಗೌಡರು ಹಲವು ಟ್ರಕ್ಕುಗಳಷ್ಟು ಬೊಂಬು-ಗಳುಗಳು, ಜಿಂಕ್‌ಶೀಟುಗಳು, ಹಲವು ದಿನಗಳಿಗೆ ಊರವರಿಗೆಲ್ಲ ಬೇಕಾಗುವಷ್ಟು ಆಹಾರಸಾಮಗ್ರಿಗಳು, ಬಟ್ಟೆಬರೆ ಇವನ್ನೆಲ್ಲ ಒಟ್ಟುಮಾಡಿ ವರ್ತಕರನ್ನೂ ಜೊತೆ ಮಾಡಿಕೊಂಡು ಹಳ್ಳಿಗೆ ಹೋಗಿ ವರ್ತಕರ ಕೈಗಳಿಂದಲೇ ಊರವರಿಗೆ ಹಂಚಿಸಿದರು. ಒಬ್ಬ ಅಧಿಕಾರಿಯ ಮಾನವೀಯ ಸ್ಪಂದನ, ಹೃದಯವಂತಿಕೆ, ಸಮಯಪ್ರಜ್ಞೆ ಹೀಗೆ ಸಂತ್ರಸ್ತ ಗ್ರಾಮವೊಂದರ ಕ್ಷಿಪ್ರ ಪುನರ್ವಸತಿಗೆ ಕಾರಣವಾಯಿತು.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ