ಶ್ರಾದ್ಧಕ್ಕೇ ಆದರೂ ತೀರಾ ಅನಿವಾರ್ಯವಾಗಿ ಬರಲೇಬೇಕಾದವರು ಆಯಾ ದಿನಕ್ಕೆ ಬಂದುಹೋದರೆ ಹೆಚ್ಚು. ಇಲ್ಲದಿದ್ದರೆ ತಾವಿದ್ದಲ್ಲಿಂದಲೇ ತಿಲೋದಕ ಬಿಡುವ ಹೊತ್ತಿಗೆ ವಿಡಿಯೋಕಾಲ್ ಮಾಡಿದರೂ ಆಯಿತು ಎನ್ನುವವರೂ ಇಲ್ಲದಿಲ್ಲ! ನಮ್ಮ ಬದುಕು ಎತ್ತೆತ್ತಲೋ ಓಡುತ್ತಿರುವುದಕ್ಕೆ ಮತ್ತೆ ಮಮತೆಯ ಬೇಡಿ ಬಿಗಿದು ಕಟ್ಟಿಹಾಕಿಕೊಳ್ಳದಿದ್ದರೆ ಮುಂದಕ್ಕೆ ಉಳಿಯುವುದೇನು? ಎಲ್ಲರೂ ಒಂದೊಂದು ದ್ವೀಪವಾಗಿ ಬದಲಾಗುತ್ತಿದ್ದೇವೆಯೇ? ಸಂಬಂಧಗಳನ್ನು ನವೀಕರಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆಯೇ? ಯೋಚಿಸಬೇಕಿದೆ. ನಾವು ಬಹಳ ಚಿಕ್ಕವರಿದ್ದಾಗಿನ ಒಂದು ನೆನಪು. ಅಮ್ಮ ಬಾವಿಯಿಂದ ನೀರು ಸೇದಿ ಬಟ್ಟೆಯೊಗೆಯುತ್ತಿದ್ದರು. ಹಾಸಿಗೆ ಹಿಡಿದಿದ್ದ ಅಜ್ಜ ಅವರಷ್ಟಕ್ಕೆ ಮಲಗಿದ್ದರು. ಅಪ್ಪ […]











